Aug 2, 2015

ಯಾಕೂಬನ ಸಾವು ಮತ್ತು ನೇಣಿಗೆ ಬಿದ್ದ ಸಮಾಜದ ಮನಸ್ಥಿತಿ.

yakub memon funeral
Ashok K R
ಆತನ ಶವವನ್ನು ನಾಗಪುರದಿಂದ ಮುಂಬಯಿಗೆ ತಂದಾಗ ಶವವನ್ನು ‘ವೀಕ್ಷಿಸಲು’ ಸಾವಿರಾರು ಜನರು (ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ ಹದಿನೈದು ಸಾವಿರದಷ್ಟು ಜನರು) ನೆರೆದಿದ್ದರು. ನೆರೆದವರಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮುಸ್ಲಿಮರು. ಸತ್ತವನು ಯಾರೋ ಪುಣ್ಯಾತ್ಮ ಮುಸ್ಲಿಂ ಜನಾಂಗದ ಜನರ ಓದಿಗೆ, ಬರಹಕ್ಕೆ, ಜೀವನಕ್ಕೆ ಹೊಡೆದಾಡಿದ ಮಹಾನುಭಾವ ಎಂದುಕೊಂಡಿರಾದರೆ ಅದು ಖಂಡಿತವಾಗಿಯೂ ತಪ್ಪು! ಸತ್ತ ವ್ಯಕ್ತಿ ಮುಂಬಿಯಯಲ್ಲಿ 1993ರಲ್ಲಿ ನಡೆದ ಪೈಶಾಚಿಕ ಸರಣಿ ಬಾಂಬ್ ಸ್ಪೋಟಕ್ಕೆ ಸಹಾಯ ಮಾಡಿದವನು ಎಂಬ ಆರೋಪ ಹೊತ್ತಾತ. ಯಾಕೂಬ್ ಮೆಮೊನ್ ಎಂಬ ವ್ಯಕ್ತಿಗೆ ಇಪ್ಪತ್ತಮೂರು ವರುಷಗಳ ವಿಚಾರಣೆಯ ನಂತರ, ಭಾರತದ ಕಾನೂನಿನ ಎಲ್ಲಾ ಹಂತಗಳನ್ನೂ ದಾಟಿದ ನಂತರ ಜುಲೈ ಮೂವತ್ತರಂದು ಗಲ್ಲಿಗೇರಿಸಲಾಯಿತು. ಆತನ ವಿರುದ್ಧದ ಅಪರಾಧಗಳು ಅದೇ ಬಾಂಬ್ ಸ್ಪೋಟದ ರುವಾರಿಗಳಾದ, ನಂತರದಲ್ಲಿ ತಲೆಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ ಮತ್ತು ಯಾಕೂಬನ ಸಹೋದರ ಟೈಗರ್ ಮೆಮೊನ್ ನಷ್ಟು ಇರಲಿಲ್ಲ; ಆದರೆ ಇನ್ನೂರಕ್ಕೂ ಅಧಿಕ ಜನರು ಸಾಯುವುದರಲ್ಲಿ ಯಾಕೂಬ್ ಮೆಮನ್ನಿನ ಪಾತ್ರವನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಬಾಂಬ್ ಸ್ಪೋಟದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗಿದ್ದ ಬಹುತೇಕರು ಯಾಕೂಬ್ ಮೆಮೊನ್ನಿನ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಸರಣಿ ಸ್ಪೋಟದ ಪ್ರಮುಖ ರುವಾರಿ ಟೈಗರ್ ಮೆಮೊನನಿಗೆ ಹಣ ನೀಡಿದ ಆರೋಪ, ಇಂತಹುದೊಂದು ದುಷ್ಕೃತ್ಯವನ್ನೆಸಗಲು ತರಬೇತಿ ಪಡೆದುಕೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ತೆರಳಿದ ಹದಿನೈದು ಯುವಕರ ತಂಡಕ್ಕೆ ಹಣಕಾಸು ನೆರವು ನೀಡಿದ ಆರೋಪ, ಸ್ಪೋಟಕಗಳನ್ನು ಸಂಗ್ರಹಿಸಿಟ್ಟ ಆರೋಪಗಳೆಲ್ಲವೂ ಯಾಕೂಬ್ ಮೆಮೊನ್ ನ ಮೇಲಿದ್ದವು.
yakub memon
ಯಾಕೂಬ್ ಮೆಮೊನ್
ನ್ಯಾಯಾಲಯ ಕಾರ್ಯನಿರ್ವಹಿಸುವುದೇ ಸಾಕ್ಷ್ಯಾಧಾರಗಳ ಆಧಾರದಿಂದ, ಆ ಸಾಕ್ಷ್ಯಾಧಾರಕ್ಕನುಗುಣವಾಗಿ ಯಾಕೂಬ್ ಮೆಮನ್ನಿಗೆ ಭಾರತದ ಕಾನೂನಿನಲ್ಲಿರುವ ಅತ್ಯುಗ್ರ ಶಿಕ್ಷೆಯಾದ ಮರಣದಂಡನೆಯನ್ನು ವಿಧಿಸಿತು. ಇವತ್ತು ಮರಣದಂಡನೆ ವಿಧಿಸಿ ನಾಳೆ ನೇಣಿಗಾಕುವ ದಿಡೀರ್ ನ್ಯಾಯ ಭಾರತದಲ್ಲಿಲ್ಲ, ಇರಲೂಬಾರದು. ಉನ್ನತ ಕೋರ್ಟುಗಳು, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟಿನವರೆಗೆ ಯಾಕೂಬ್ ಮೆಮೊನ್ ಪರವಾಗಿ ವಕೀಲರು ದಾವೆ ಹೂಡಿದರು, ಎಲ್ಲೆಡೆಯೂ ದಾವೆಗೆ ಸೋಲಾಯಿತು; ಅರ್ಥಾತ್ ಸಾಕ್ಷ್ಯಾಧಾರಗಳು ಯಾಕೂಬನ ವಿರುದ್ಧವಾಗಿದ್ದವು. ನ್ಯಾಯಾಲಯದಲ್ಲೂ ತಪ್ಪುಗಳಾಗುತ್ತಾವಾದರೂ ನಮಗೆ ಅಪ್ರಿಯವೆನ್ನಿಸಿದ ತೀರ್ಪುಗಳು ಬಂದಾಗ ಸಾರಾಸಗಟಾಗಿ ನ್ಯಾಯಾಲಯವನ್ನು ಟೀಕಿಸುವುದು ವಿವೇಚನೆಯಲ್ಲ. ಈ ಪ್ರಕರಣದಲ್ಲಿರುವ ಅನೇಕ ಚರ್ಚಾಸ್ಪದ ವಿಷಯಗಳ ನಡುವೆ ಗಮನಿಸಲೇಬೇಕಾದ ವಿಷಯವೆಂದರೆ ಯಾಕೂಬನ ಶವಸಂಸ್ಕಾರದ ಸಮಯದಲ್ಲಿ ಸಹಸ್ರ ಜನರು ಹಾಜರಿದ್ದುದು. ಒಂದು ಮೂಲಭೂತವಾದಿ ಕೃತ್ಯಕ್ಕೆ ನೈತಿಕ ಬೆಂಬಲ ಕೊಡುವಂತಹ ಮನಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು.

ಕಾಕತಾಳೀಯವೆಂಬಂತೆ ಕಳೆದ ವಾರವಷ್ಟೇ ‘ನಡುರಾತ್ರಿಯಲ್ಲಿ ಸ್ವಾತಂತ್ರ್ಯ’ ಪುಸ್ತಕ ಓದಿ ಮುಗಿಸಿದ್ದೆ. ನಮ್ಮ ಭವ್ಯ ಭಾರತ ದೇಶದ ಬಗ್ಗೆ ಹೊಗಳಿಕೊಳ್ಳುವಾಗ ನಾವು ಶಾಂತಿ ಪ್ರಿಯರು, ಯಾವೊಂದು ದೇಶದ ಮೇಲೂ ದಂಡೆತ್ತಿ ಹೋದವರಲ್ಲ ಎನ್ನುವ ಸಾಲುಗಳನ್ನು ಸಾಮಾನ್ಯವಾಗಿ ಹೇಳುತ್ತಿರುತ್ತೇವೆ - ಕೇಳುತ್ತಿರುತ್ತೇವೆ. ಭಾರತದ ಸ್ವಾತಂತ್ರ್ಯ ಮತ್ತು ದೇಶವಿಭಜನೆಯ ಹಿಂಚುಮುಂಚಿನಲ್ಲಿ ನಡೆದ ಭೀಕರ ಹಿಂಸಾಕೃತ್ಯಗಳ ವಿವರಗಳನ್ನು ಓದುವಾಗ ಈ ಹಿಂದೂ – ಇಸ್ಲಾಂ – ಸಿಖ್ಖರ ‘ಶಾಂತಿ’ ಹೇಗಿತ್ತೆನ್ನುವುದು ತಿಳಿದು ಬಿಡುತ್ತದೆ. ಇವತ್ತಿನ ಭಾರತ ಮತ್ತು ಪಾಕಿಸ್ತಾನ ಹುಟ್ಟಿದ್ದೇ ಹಿಂಸೆಯ ಕೂಪದಿಂದ ಎಂಬ ಅಂಶ ಇವತ್ತಿನ ಮೂಲಭೂತವಾದಿ ಮನಸ್ಥಿತಿಯ ಹೆಚ್ಚಳಕ್ಕೆ ಇರುವ ಹತ್ತಲವು ಕಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾ? ವಿಭಜನೆಯ ಸಮಯದಲ್ಲಿ ಅಮಾಯಕರನ್ನು ಹತ್ಯೆ ಮಾಡಿದವರಿಗೆ, ಅತ್ಯಾಚಾರವೆಸಗಿದವರಿಗೆ, ಲೂಟಿ ಮಾಡಿದವರಿಗೆ ಭಾರತ ಅಥವಾ ಪಾಕಿಸ್ತಾನ ಸರಕಾರಗಳು ಶಿಕ್ಷೆ ವಿಧಿಸಿದ ಕುರಿತಾಗಿ ಯಾವುದಾದರೂ ದಾಖಲೆ – ಬರಹಗಳಿವೆಯಾ? ನನ್ನ ಓದಿನ ಪರಿಮಿತಿಯಲ್ಲಂತೂ ಅಂತಹದ್ದು ನಡೆದಿರುವ ಸೂಚನೆ ಸಿಕ್ಕಿಲ್ಲ. ಅಲ್ಲಿಗೆ ಎರಡು ದೇಶಗಳ ಜನ್ಮದೊಡನೆಯೇ ‘ಗಲಭೆ’ಗಳಲ್ಲಿ ನಡೆಸುವ ಹತ್ಯಾಕಾಂಡಕ್ಕೆ, ಅನಾಚಾರಕ್ಕೆ ಶಿಕ್ಷೆ ಕೊಡುವುದು ಕಷ್ಟ ಎಂಬ ಬಹುದೊಡ್ಡ ತಪ್ಪು ಸಂದೇಶವೊಂದು ಸೃಷ್ಟಿಯಾಗಿ ಹೋಯಿತು. 

gandhi and godhse
ಗಾಂಧಿ ಮತ್ತು ಗೋಡ್ಸೆ
ಬಿಡಿ, ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆಲ್ಲ ಕುತಂತ್ರಿ ಬ್ರಿಟೀಷರೇ ಕಾರಣ ಎಂದು ನೆಪ ಹೇಳಿಬಿಡಬಹುದು. ವಿಭಜನೆಯ ನಂತರ ನಡೆದ ಹಿಂಸಾಚಾರಗಳತ್ತ ಗಮನಹರಿಸೋಣ. ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಮೊದಲ ಹಿಂಸಾಚಾರ ಅಹಿಂಸಾ ತತ್ವ ಭೋದಿಸಿದ ಗಾಂಧೀಜಿಯೊಂದಿಗೆ ತಳುಕುಹಾಕಿಕೊಂಡಿದೆ! ವೈರುಧ್ಯಗಳು ಹೇಗಿರುತ್ತವೆ ನೋಡಿ, ಜೀವನವಿಡೀ ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿಯ ಹತ್ಯೆ ಹಿಂಸಾ ಮಾರ್ಗದಲ್ಲಾಗುತ್ತದೆ. ನಾಥೂರಾಮ್ ಗೋಡ್ಸೆ ಎಂಬ ಹಿಂದೂ ಉಗ್ರವಾದಿ ಸಾರ್ವಜನಿಕವಾಗಿ ಗಾಂಧೀಜಿಯನ್ನು ಗುಂಡಿಟ್ಟು ಕೊಲ್ಲುತ್ತಾನೆ. ಬಹುಶಃ ಗಾಂಧೀಜಿ ಕೂಡ ನಾಥೂರಾಮ್ ಗೋಡ್ಸೆಗೆ ನೇಣಾಗುವುದನ್ನು ಒಪ್ಪುತ್ತಿರಲಿಲ್ಲವೇನೋ, ನೇಣಿಗಾಕುವುದು ಸರಕಾರಿ ಹಿಂಸೆ ಎಂಬ ಕಾರಣಕ್ಕೆ. ಗಾಂಧಿ ಹತ್ಯೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರು ಚಿತ್ಪಾವನ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು, ಗಾಂಧಿ ಹತ್ಯೆಯ ನಂತರ ದೇಶದ ವಿವಿದೆಡೆ ಚಿತ್ಪಾವನ ಬ್ರಾಹ್ಮಣರ ಮನೆಗಳ ಮೇಲೆ ದಾಳಿಗಳು ನಡೆದವು. ಅಹಿಂಸೆ ಭೋದಿಸಿದ ವ್ಯಕ್ತಿಯ ಸಾವಿನಿಂದ ಹಿಂಸೆ ಪ್ರಾರಂಭವಾಯಿತು! ಯಾರೋ ಒಬ್ಬ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಗುರಿ ಮಾಡಿಕೊಂಡು ನಡೆಸಿದ ದುಷ್ಕ್ರತ್ಯ ಎಷ್ಟರಮಟ್ಟಿಗೆ ಸರಿ? ಸಾಮೂಹಿಕ ದಾಳಿ ನಡೆಸಿದವರ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷೆ ನೀಡಲಾಯಿತಾ? 

1984 sikh riots
1984ರ ಸಿಖ್ ಹತ್ಯಾಕಾಂಡ
ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ದಾಂಧಲೆ ನಡೆದದ್ದು ಇಂದಿರಾ ಗಾಂಧಿ ಹತ್ಯೆಯಾದ ನಂತರ. 1984ರಲ್ಲಿ ಇಂದಿರಾ ಗಾಂಧಿಯನ್ನು ಆಕೆಯ ಸಿಖ್ ಅಂಗರಕ್ಷಕರು ಹತ್ಯೆ ಮಾಡಿಬಿಡುತ್ತಾರೆ. ಇಂದಿರಾ ಬೆಂಬಲಿಗರಿಗೆ, ಕಾಂಗ್ರೆಸ್ಸರಿಗೆ ತಮ್ಮ ನಾಯಕಿಯನ್ನು ತಾವೆಷ್ಟು ಆರಾಧಿಸುತ್ತಿದ್ದೆವು ಎಂದು ತೋರ್ಪಡಿಸುವ ಹಪಾಹಪಿ. ಅದಕ್ಕೆ ಬಲಿಯಾಗಿದ್ದು ಮಾತ್ರ ಅಮಾಯಕ ಸಿಖ್ಖರು. ‘ಒಂದು ದೊಡ್ಡ ಆಲದ ಮರ ಬಿದ್ದಾಗ ಇಂತವೆಲ್ಲ ಸಹಜ’ ಎಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದು ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿ. ಹತ್ತಾರು ತನಿಖೆಗಳು, ವಿಚಾರಣೆ ಆಯೋಗಗಳ ಪ್ರಹಸನಗಳೆಲ್ಲ ಮುಗಿದವಾದರೂ ಸಿಖ್ಖರನ್ನು ಮುಗಿಸಿಬಿಡಲು ನೇತೃತ್ವ ವಹಿಸಿದ ಕಾಂಗ್ರೆಸ್ ನಾಯಕರಾರಿಗೂ ಶಿಕ್ಷೆಯಾಗಲಿಲ್ಲ. ಸಾಕ್ಷ್ಯಾಧಾರದ ಕೊರತೆಯಿಂದಾಗಿ.

1992ರ ಡಿಸೆಂಬರ್ ತಿಂಗಳಿನಲ್ಲಿ ಭಾರತ ಮತ್ತೊಂದು ಸುತ್ತಿನ ಸಾಮೂಹಿಕ ಹಿಂಸೆಗೆ ಮೂಕಸಾಕ್ಷಿಯಾಯಿತು. ಹಿಂದೂ ಭಾವನೆಗಳನ್ನು ಉದ್ರೇಕಗೊಳಿಸುತ್ತ, ಹಿಂದೂಗಳ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎನ್ನುತ್ತಾ ರಥಯಾತ್ರೆ ಪ್ರಾರಂಭಿಸಿದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆಯ ಮುಂದಾಳತ್ವ ವಹಿಸಿದ್ದರು. ರಥಯಾತ್ರೆ ನಡೆದ ವಿಷಯವನ್ನು ಜನರು ಮರೆತು ಬಿಡಬಾರದು ಎಂಬ ಕಾರಣಕ್ಕೆ ಒಂದು ದೊಡ್ಡ ಕ್ಲೈಮಾಕ್ಸ್ ಸಿದ್ಧಪಡಿಸಿದ್ದರು. ಅದು ಬಾಬರಿ ಮಸೀದಿಯ ಧ್ವಂಸ ಮತ್ತಾ ಜಾಗದಲ್ಲಿ ರಾಮಮಂದಿರ ನಿರ್ಮಿಸುವ ಪ್ರಮಾಣ. ಬಾಬರಿ ಮಸೀದಿಯ ಧ್ವಂಸದೊಂದಿಗೇ ದೇಶಾದ್ಯಂತ ಮುಸ್ಲಿಮರ ಮೇಲೆ ಹಲ್ಲೆಗಳು ಪ್ರಾರಂಭವಾದವು. ಬಾಬರನಿಗೂ ಬಾಬರಿ ಮಸೀದಿಗೂ ಸಂಬಂಧವೇ ಇರದ ಸಾವಿರಾರು ಮುಸ್ಲಿಮರು ಹತ್ಯೆಗೊಳಗಾದರು. ಈ ಘಟನೆಗಳಿಗೆಲ್ಲ ಕಾರಣಕರ್ತರಾದ ಬಿಜೆಪಿಯ ನಾಯಕರುಗಳಿಗೆ ಶಿಕ್ಷೆಯಾಯಿತಾ? ಅವರೆಲ್ಲರೂ ಆರಾಮವಾಗಿ ಓಡಾಡಿಕೊಂಡೇ ಇದ್ದಾರೆ.

2002 gujrat riots
2002ರ ಗುಜರಾಜ್ ಹತ್ಯಾಕಾಂಡ
ಇನ್ನು ತೀರ ಇತ್ತೀಚೆಗೆ ನಡೆದಿದ್ದು 2002ರ ಗುಜರಾತ್ ಹತ್ಯಾಕಾಂಡ. ಗೋದ್ರದ ರೈಲಿನಲ್ಲಿ ನಡೆದ ಹಿಂದೂ ಸನ್ಯಾಸಿಗಳ ಹತ್ಯೆಗೆ ಪ್ರತೀಕಾರವಾಗಿ ಇಡೀ ಗುಜರಾತಿನಲ್ಲಿ ಮುಸ್ಲಿಮರನ್ನು ಹತ್ಯೆ ಮಾಡಲಾಗುತ್ತದೆ. ಇಲ್ಲಿನ ಆರೋಪಿಗಳಿಗೆ ಶಿಕ್ಷೆಯಾಯಿತಾ? ಇನ್ನೂ ಅನೇಕವು ವಿಚಾರಣೆಯಲ್ಲಿವೆ, ಕೆಲವೊಂದರಲ್ಲಿ ಜೀವಾವಧಿ ಶಿಕ್ಷೆಯಾಗಿದೆ ಕೆಳ ಹಂತದ ನ್ಯಾಯಾಲಯದಲ್ಲಿ; ಆ ಶಿಕ್ಷೆಯಾದವರೂ ಕೂಡ ಜಾಮೀನಿನ ಮೇಲೆ ತಿರುಗಾಡಿಕೊಂಡಿದ್ದಾರೆ!

ಈ ಘಟನೆಗಳನ್ನೆಲ್ಲಾ ಏನನ್ನು ಸೂಚಿಸುತ್ತವೆ? ನಿಮಗೆ ಒಂದು ಸಮುದಾಯದ ಮೇಲೆ ಕೋಪವಿದ್ದರೆ ದ್ವೇಷವಿದ್ದರೆ ಅದನ್ನು ಸಾಮೂಹಿಕವಾಗಿ ತೀರಿಸಿಕೊಳ್ಳಿ, ವೈಯಕ್ತಿಕವಾಗಲ್ಲ. ಸಾಮೂಹಿಕ ಅಪರಾಧದಲ್ಲಿ ತಪ್ಪಿಸಕೊಳ್ಳುವುದು ಸುಲಭ. ಅದರಲ್ಲೂ ನೀವು ಬಹುಸಂಖ್ಯಾತರಾಗಿದ್ದು ನೀವು ಹತ್ಯೆ ಮಾಡಿದವರು ಅಲ್ಪಸಂಖ್ಯಾತರಾಗಿದ್ದರೆ ತಪ್ಪಿಸಿಕೊಳ್ಳುವುದು ಮತ್ತೂ ಸುಲಭ. ಭಾರತದ ಪ್ರಮುಖ ಸಾಮೂಹಿಕ ಹತ್ಯಾಕಾಂಡವನ್ನು ಗಮನಿಸಿ ನೋಡಿ, ಸಿಖ್, ಮುಸ್ಲಿಂ ಸಮುದಾಯ ಹೆಚ್ಚು ಹಾನಿ ಅನುಭವಿಸಿದೆ. ಹಾನಿ ಮಾಡಿದ್ದು ಹಿಂದೂ ಸಮುದಾಯ. ಆ ಪ್ರಕರಣಗಳಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭಾಗಿಯಾದವರೆಲ್ಲಾ ನಂತರದ ದಿನಗಳಲ್ಲಿ ಏನಾದರು ಎಂಬುದನ್ನು ಗಮನಿಸಿದರೆ ಇಡೀ ಸಮಾಜದ ಮನಸ್ಥಿತಿಯ ಬಗ್ಗೆಯೇ ಮರುಕವುಂಟಾಗುತ್ತದೆ. ದೊಡ್ಡಾಲದ ಮರ ಬಿದ್ದಾಗ ಇಂತವೆಲ್ಲ ಸಹಜ ಎಂದು ಸಿಖ್ಖರ ಜೀವವನ್ನು ತುಚ್ಛವಾಗಿ ಕಂಡ ರಾಜೀವ್ ಗಾಂಧಿ ಅನುಕಂಪದ ಆಧಾರದಲ್ಲಿ ಅತಿ ಹೆಚ್ಚು ಸೀಟುಗಳನ್ನು ಪಡೆದ ಕಾಂಗ್ರೆಸ್ಸಿನ ಮೂಲಕ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್ಸಿನ ಬಕೆಟ್ ರಾಜಕೀಯದ ಕಾರಣದಿಂದಾಗಿ ದೇಶದೆಲ್ಲೆಡೆ ರಾಜೀವ್ ಗಾಂಧಿ ಹೆಸರು ಇವತ್ತಿಗೂ ರಾರಾಜಿಸುತ್ತಿದೆ. ಇನ್ನು 1992ರ ಗಲಭೆಗೆ ಕಾರಣಕರ್ತರಾದ ಬಿಜೆಪಿಯವರು ಲೋಕಸಭೆಯಲ್ಲಿ ಮತ್ತು ಅನೇಕ ರಾಜ್ಯಗಳಲ್ಲಿ ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಬಿಜೆಪಿಯ ಭಾಗವೇ ಆಗಿದ್ದ, ಬಿಜೆಪಿಯ ನಾಯಕನಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗುತ್ತಾರೆ. ನಂತರದ ದಿನಗಳಲ್ಲಿ ಅವರು ಮುತ್ಸದ್ಧಿ ನಾಯಕನಾಗಿ, ಅಜಾತ ಶತ್ರುವಾಗಿ ಬಿಂಬಿತವಾಗುತ್ತಾರೆ. ರಾಜೀವ್ ಗಾಂಧಿಗೆ ಸಿಕ್ಕ ಭಾರತ ರತ್ನ ಅಟಲ್ ಗೂ ಸಿಗುತ್ತದೆ! ಈಗ ಕೇಂದ್ರದಲ್ಲಿರುವುದು ಬಿಜೆಪಿ ಸರಕಾರವಾದ್ದರಿಂದ ಯೋಜನೆಗಳಿಗೆ ಅಟಲ್ ಹೆಸರು ಇಡುವ ಪರಿಪಾಟ ಪ್ರಾರಂಭವಾಗಿದೆ! ಇನ್ನು ರಥಯಾತ್ರೆಯ ನಾಯಕರಾಗಿದ್ದ ಅಡ್ವಾಣಿ ಉಪಪ್ರಧಾನಿಯಾಗುತ್ತಾರೆ. ಈಗ ಸದ್ಯಕ್ಕೆ ಅವರು ಮುತ್ಸದ್ಧಿ ನಾಯಕರಾಗಿದ್ದಾರೆ, ಅಜಾತ ಶತ್ರುವಾಗಿ ‘ಭಾರತ ರತ್ನ’ ಪಡೆದರೆ ಅಚ್ಚರಿಪಡಬೇಕಾಗಿಲ್ಲ. ಮುರಳಿ ಮನೋಹರ ಜೋಶಿ, ಉಮಾಭಾರತಿಯಂತಹ ನಾಯಕರೆಲ್ಲ ಅನೇಕ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇನ್ನು ಗುಜರಾತಿನ ಹತ್ಯಾಕಾಂಡಕ್ಕೆ ಪ್ರೇರಣೆ ನೀಡಿದವರು ಎಂದು ಆರೋಪಿಸಲಾದ (ನ್ಯಾಯಾಲಯದಲ್ಲೇನೂ ಸಾಬೀತಾಗಿಲ್ಲ) ನರೇಂದ್ರ ಮೋದಿ ಒಂದಾದ ಮೇಲೊಂದರಂತೆ ಚುನಾವಣೆಗಳನ್ನು ಗೆಲ್ಲುತ್ತಾರೆ. ಗುಜರಾತ್ ಹತ್ಯಾಕಾಂಡ ನಡೆದು ಹನ್ನೆರಡು ವರುಷಗಳ ನಂತರ ಪ್ರಧಾನಿಯಾಗುತ್ತಾರೆ. ಭಾರತ ಕಂಡ ಶಕ್ತಿಶಾಲಿ ಪ್ರಧಾನಿ ಎಂದು ಸದ್ಯಕ್ಕೆ ಹೇಳಲಾಗುತ್ತದೆ, ಇನ್ಯಾವ ಗುಣವಿಶೇಷಣಗಳು ಸೇರಿಕೊಳ್ಳುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು!

ಸಾಮೂಹಿಕ ಹತ್ಯಾಕಾಂಡಕ್ಕೆ ಪ್ರತಿಕ್ರಿಯಿಸುವ ನಮ್ಮ ಸಮಾಜದ ಮನಸ್ಥಿತಿಯ ಇತಿಹಾಸವನ್ನು ಸ್ವಲ್ಪ ನೋಡಿದ್ದಾಯಿತು. ಇನ್ನು ಮತ್ತೆ ಯಾಕೂಬ್ ಮೆಮೊನ್ ಶವಸಂಸ್ಕಾರದಲ್ಲಿ ಸೇರಿದ್ದ ಅಪಾರ ಜನಸಂಖ್ಯೆಯ ಮನಸ್ಥಿತಿ ಏನಿರಬಹುದು ಎಂದು ಯೋಚಿಸಿದಾಗ ತಟ್ಟನೆ ನೆನಪಾಗಿದ್ದು ನಾಥೂರಾಮ್ ಗೋಡ್ಸೆ. ಗಾಂಧಿಯನ್ನು ಹತ್ಯೆ ಮಾಡಿದ ಕಾರಣಕ್ಕೆ ಆತನನ್ನು ಆರಾಧಿಸುವ ಮನಸ್ಥಿತಿಗಳು ಮುಂಚಿನಿಂದಲೂ ಇದ್ದವು. ಕಾರಣ? ಗೋಡ್ಸೆ ಹಿಂದೂವಾದಿ, ಹಿಂದೂಗಳಿಗೆ ‘ದ್ರೋಹ’ ಮಾಡಿದ ಗಾಂಧೀಜಿಯನ್ನು ಕೊಂದದ್ದಕ್ಕಾಗಿ ಗೋಡ್ಸೆ ಹೀರೋ! ಮುಂಚೆ ಕದ್ದು ಮುಚ್ಚಿ ಆರಾಧಿಸುತ್ತಿದ್ದವರು ಈಗ ಬಹಿರಂಗವಾಗಿಯೇ ಗೋಡ್ಸೆಯನ್ನು ಆರಾಧಿಸುತ್ತಿದ್ದಾರೆ. ಗೋಡ್ಸೆ ಹೆಸರಿನಲ್ಲಿ ದೇವಸ್ಥಾನ ಕಟ್ಟಿಸುತ್ತೇವೆ, ರಸ್ತೆಗೆ ಹೆಸರಿಡುತ್ತೇವೆ ಎನ್ನುವವರ ಸಂಖೈ ದಿನೇ ದಿನೇ ಹೆಚ್ಚುತ್ತಿದೆ. ಗೋಡ್ಸೆ ನಂಬಿದ ಸಿದ್ಧಾಂತಗಳಿಂದಲೇ ಬೆಳೆದು ಬಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಈ ಗೋಡ್ಸಾರಾಧನೆಗೂ ಸಂಬಂಧವಿಲ್ಲ ಎಂದರೆ ನಂಬಲಾದೀತೆ? ಗೋಡ್ಸೆ ಆರಾಧಕರಿಗೆ ಇರುವ ಒಂದು ಅನುಕೂಲವೆಂದರೆ ಅವರ್ಯಾರನ್ನೂ ಸಮಾಜ ರಾಷ್ಟ್ರದ್ರೋಹಿ ಉಗ್ರಗಾಮಿ ಭಯೋತ್ಪಾದಕ ಎಂಬ ವಿಶೇಷಣಗಳಿಂದ ಗುರುತಿಸುವುದಿಲ್ಲ. ಕಾರಣ ಈ ಆರಾಧಕರು ಹಿಂದೂಗಳು. ಹಿಂದೂ ಆಗಿ ಹುಟ್ಟಿದವನು ಆ ಕಾರಣಕ್ಕಾಗಿಯೇ ರಾಷ್ಟ್ರಪ್ರೇಮಿಯಾಗಿಬಿಡುತ್ತಾನೆ! ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂಬ ಅಘೋಷಿತ ಕಾನೂನೊಂದು ನಮ್ಮಲ್ಲಿ ಜಾರಿಯಲ್ಲಿದೆ! ರಾಷ್ಟ್ರಪ್ರೇಮವನ್ನು ಸಾಬೀತುಪಡಿಸುವ ಕರ್ಮವೆಲ್ಲ ಮುಸ್ಲಿಮರಿಗೆ, ಸಿಖ್ಖರಿಗೆ, ಕ್ರಿಶ್ಚಿಯನ್ನರಿಗೆ ಸೀಮಿತ. ಇನ್ನು ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಎಲ್.ಟಿ.ಟಿ.ಐ ಉಗ್ರರಿಗೆ ತಮಿಳುನಾಡಿನಲ್ಲಿ ಸಿಗುವ ಬೆಂಬಲ ಕೂಡ ಆಘಾತ ಮೂಡಿಸುತ್ತದೆ. ಎಲ್.ಟಿ.ಟಿ.ಐ ಹೋರಾಟಕ್ಕೆ ಅನೇಕಾನೇಕ ಕಾರಣಗಳಿರಬಹುದು ಆದರೆ ಆ ಕಾರಣಗಳ್ಯಾವುವೂ ರಾಜೀವ್ ಗಾಂಧಿಯ ಹತ್ಯೆಯನ್ನು ಸಮರ್ಥಿಸುವಂತೆ ಮಾಡಬಾರದು. ಗೋಡ್ಸೆಯ ವಿಚಾರದಲ್ಲಿ ಯಾಕೂಬ್ ನ ವಿಚಾರದಲ್ಲಿ ಧರ್ಮ ಅಮಲೇರಿಸಿದರೆ, ಎಲ್.ಟಿ.ಟಿ.ಐ ವಿಷಯದಲ್ಲಿ ಪ್ರದೇಶಾಭಿಮಾನ, ಭಾಷಾಭಿಮಾನ ಹಂತಕರನ್ನು ಬೆಂಬಲಿಸುವಂತಹ, ಆರಾಧಿಸುವಂತಹ ವಾತಾವರಣವನ್ನು ಸೃಷ್ಟಿಸಿತು. ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ನೀಡಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯಗಳಾಗುತ್ತವೆಂದರೆ ನಮ್ಮ ಜನರ ಹಂತಕ ಪ್ರೇಮತನ ಯಾವ ಮಟ್ಟಿಗಿರಬೇಕು ನೀವೇ ಲೆಕ್ಕಹಾಕಿ. ಹಂತಕರನ್ನು ಆರಾಧಿಸುವ ಗುಣ ದೇಶಾದ್ಯಂತ ಹರಡಿರುವಾಗ ಯಾಕೂಬನ ಶವಸಂಸ್ಕಾರದಲ್ಲಿ ಮುಸ್ಲಿಮರು ಭಾಗವಹಿಸಿದ್ದು ಅಚ್ಚರಿ ಮೂಡಿಸದೇ ಹೋಗುವ ಕೆಟ್ಟ ಮನಸ್ಥಿತಿಗೆ ದೂಡುತ್ತದೆ.
bal thackeray funeral
ಬಾಳಾ ಠಾಕ್ರೆ ಸತ್ತಾಗ ಸೇರಿದ ಜನತೆ
1992ರಲ್ಲಿ ನಡೆದ ಮುಸ್ಲಿಂ ಹತ್ಯೆಗಳಿಗೆ ಪ್ರತೀಕಾರದ ಹೆಸರಿನಲ್ಲಿ 1993ರಲ್ಲಿ ಮುಂಬಯಿಯಲ್ಲಿ ಸರಣಿ ಸ್ಪೋಟ ನಡೆಸಲು ನೆರವಾಗಿ ಅನೇಕ ಅಮಾಯಕರನ್ನು ಹತ್ಯೆ ಮಾಡಿದ ಯಾಕೂಬ್ ಮುಸ್ಲಿಮರಿಗೆ ಶಕ್ತಿಯ ಸಂಕೇತವಾಗಿ ಕಂಡುಬಿಡುತ್ತಾನಾ? ನಮ್ಮ ಮೇಲೆ ನಡೆದ ಅನ್ಯಾಯಕ್ಕೆ ಪ್ರತಿಯಾಗಿ ಅನ್ಯಾಯ ಮಾಡಿ ನ್ಯಾಯ ಕೊಡಿಸಿದವನಂತೆ ಕಂಡುಬಿಡುತ್ತಾನಾ? ಇಂತಹ ಅಪಾಯಕಾರಿ ಪ್ರಶ್ನೆಗಳಿಗೆ ಉತ್ತರ ಹೌದೆಂದು ಆಗಿಬಿಟ್ಟಿರುವುದೇ ನಮ್ಮ ಸಮಾಜದ ದುರಂತ. ಇಲ್ಲಿ ಭಾಗವಹಿಸಿದ್ದವರು ಮುಸ್ಲಿಮರಾದ್ದರಿಂದ ದೇಶದ್ರೋಹಿಗಳಂತೆ, ಉಗ್ರಗಾಮಿಗಳಂತೆ ಗೋಚರಿಸುತ್ತಾರಷ್ಟೇ. ಶ್ರೀಕೃಷ್ಣ ವರದಿಯಲ್ಲಿ ಅಪರಾಧಿಯಾಗಿ ಗುರುತಿಸಲ್ಪಟ್ಟ ಬಾಳ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು, ಠಾಕ್ರೆಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರಲಿಲ್ಲ, ಹಾಗಾಗಿ ದ್ವೇಷವನ್ನೇ ಬಿತ್ತಿದ ಠಾಕ್ರೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಹಿಂದೂಗಳು ದೇಶಪ್ರೇಮಿಗಳಾಗಿ ಗುರುತಿಸಲ್ಪಡುತ್ತಾರೆಯೇ ಹೊರತು ದೇಶದ್ರೋಹಿಗಳಾಗಿ ಅಲ್ಲ!

ಇದನ್ನೂ ಓದಿ: ಸತ್ತ ನಂತರ ಒಳ್ಳೆಯವರಾಗಿಬಿಡುವ ಪರಿಗೆ ಅಚ್ಚರಿಗೊಳ್ಳುತ್ತಾ

ಯಾಕೂಬನ ವಿಚಾರಣೆ ಸರಿಯಾಗಿ ನಡೆಯಲಿಲ್ಲ ಎಂದು ಈಗ ಹೇಳಿದರೆ ಅದಕ್ಯಾವ ಅರ್ಥವೂ ಇರುವುದಿಲ್ಲ. ನ್ಯಾಯಲಯಗಳು ಸಾಕ್ಷ್ಯಾಧಾರಗಳ ಮೇಲೆ ಕಾರ್ಯನಿರ್ವಹಿಸುತ್ತವೆ, ಆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕಾದ ಪೋಲೀಸರು ಧರ್ಮದಾಟಕ್ಕೆ, ರಾಜಕೀಯಕ್ಕೆ ಒಳಪಟ್ಟಿರುತ್ತಾರೆ ಎನ್ನುವುದು ಸುಳ್ಳಲ್ಲ. ಮುಸ್ಲಿಂ ಉಗ್ರರ ವಿಷಯವಾಗಿ ತೋರುವ ಉತ್ಸಾಹ ಹಿಂದೂ ಉಗ್ರರ ಬಗ್ಗೆ ತೋರಿಸುವುದಿಲ್ಲ ಎನ್ನುವುದು ಸತ್ಯ. ಯಾಕೂಬ್ ಗಲ್ಲಿಗೇರಿದ ದಿನವೇ ಗುಜರಾತ್ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ ಸಚಿವೆ ಮಾಯಾ ಕೊಡ್ನಾನಿ ಮತ್ತು ಬಾಬು ಭಜರಂಗಿ ಜಾಮೀನಿನ ಮೇಲೆ ಹೊರಬರುತ್ತಾರೆ. ಬಾಬು ಭಜರಂಗಿ ತೆಹೆಲ್ಕಾ ಸಂಸ್ಥೆಯ ಕಳ್ಳ ಕ್ಯಾಮೆರಾಗಳ ಮುಂದೆಯೇ ಹತ್ಯಾಕಾಂಡ ನಡೆಸಿದ್ದನ್ನು ಒಪ್ಪಿಕೊಂಡಿದ್ದ. ಆತನಿಗೆ ಸಿಕ್ಕಿದ್ದು ಜೀವಾವಧಿ ಶಿಕ್ಷೆಯೇ ಹೊರತು ಮರಣದಂಡನೆಯಲ್ಲ. ಸರಕಾರೀ ಯಂತ್ರ ಅಪರಾಧಿಗಳ ಪರ ವಹಿಸಿದರೆ ನ್ಯಾಯದಾನದಲ್ಲಿ ಏರುಪೇರಾಗುತ್ತವೆ ಎನ್ನುವುದಕ್ಕೆ ಉದಾಹರಣೆಯಾಗಿ ಮಲೇಗಾಂವ್, ಅಜ್ಮೀರದಲ್ಲಿ ಬಾಂಬ್ ಸ್ಪೋಟಿಸಿದ ಹಿಂದೂ ಉಗ್ರರಿದ್ದಾರೆ. ‘ನೋಡಿ ನೋಡಿ ಹಿಂದೂ ಉಗ್ರರಿಗೆ ಶಿಕ್ಷೆಯೇ ಆಗಿಲ್ಲ. ಯಾಕೂಬನಿಗೆ ಯಾಕೆ ಶಿಕ್ಷೆಯಾಗಬೇಕು?’ ಎಂಬ ಪ್ರಶ್ನೆ ಕೇಳುವುದು ಕೂಡ ಮೂರ್ಖತನ. ಯಾಕೂಬ್ ಅಪರಾಧಿ, ಅವನಿಗೆ ಶಿಕ್ಷೆಯಾಗಲಿ; ಉಳಿದ ಅಪರಾಧಿಗಳಿಗೂ ಶಿಕ್ಷೆಯಾಗಲಿ ಎನ್ನುವುದು ನ್ಯಾಯಪರ. ಆ ರೀತಿ ಆಗುತ್ತಿಲ್ಲ ಎನ್ನುವುದು ಸತ್ಯವೇ ಆದರೂ ಒಬ್ಬ ಅಪರಾಧಿಗೆ ಶಿಕ್ಷೆಯಾಗದ ಕಾರಣಕ್ಕೆ ಮತ್ತೊಬ್ಬನ ಅಪರಾಧವನ್ನು ಸಮರ್ಥಿಸುವುದು ಸಲ್ಲದು.

ಈ ಗೋಡ್ಸೆ, ಅಫ್ಜಲ್, ಯಾಕೂಬ್, ಸಾಧ್ವಿ ಪ್ರಜ್ಞಾ, ಲೆ. ಶ್ರೀಕಾಂತ್ ಕುಲಕರ್ಣಿಯಷ್ಟೇ ಅಪಾಯಕಾರಿಯಾದ ಜನರೆಂದರೆ ಇಂತಹ ಅಪರಾಧಿಗಳಲ್ಲಿ ಕೆಲವರನ್ನು ಬೆಂಬಲಿಸಿ ಕೆಲವರನ್ನು ವಿರೋಧಿಸಿ ಅತ್ಯುಗ್ರ ರೀತಿಯಲ್ಲಿ ಪ್ರಚಾರ ಕೊಡುವ ನೆಟ್ಟಿಗರು. ಸುಮ್ಮನೆ ಗಮನಿಸುತ್ತಾ ಹೋದರೆ ಯಾಕೂಬನನ್ನು ವಿರೋಧಿಸುವವರು, ಅವನ ಅಂತ್ಯಸಂಸ್ಕಾರದಲ್ಲಿ ಭಾಗಿಯಾದವರ ಫೋಟೋಗಳನ್ನು ಹಂಚಿಕೊಂಡು shame on them ಎಂದು ಅಬ್ಬರಿಸಿದವರು ಅಪ್ಪಟ ದೇಶಪ್ರೇಮಿಗಳಂತೆ ಪೋಸು ಕೊಡುತ್ತಾರೆ, ಅವರ ಹಿಂದಿನ ಪೋಸ್ಟುಗಳನ್ನು ನೋಡಿದರೆ ಗೋಡ್ಸೆ, ಸಾಧ್ವಿಯನ್ನು ಸಮರ್ಥಿಸಿಕೊಂಡಿರುತ್ತಾರೆ! ಇನ್ನು ಸಾಧ್ವಿಯಂತವರಿಗೆ ಶಿಕ್ಷೆಯಾಗಲೇಬೇಕು ಎಂದು ನ್ಯಾಯಪರವಾಗಿ ಕೂಗುತ್ತಿದ್ದವರು ಇದ್ದಕ್ಕಿದ್ದಂತೆ ಯಾಕೂಬನ ಪರವಾಗಿ ಮಾತನಾಡಿಬಿಡುತ್ತಾರೆ! ಗೋಡ್ಸೆ ಯಾಕೂಬನಂತಹ ಅಪರಾಧಿಗಳು ಹುಟ್ಟುವುದಕ್ಕೆ ಇಂತಹ ಎರಡಲಗಿನ ನಾಲಗೆಯ ಜನರೂ ಕಾರಣ ಎಂಬುದನ್ನು ಮರೆಯಬಾರದು.

ಇನ್ನು ಮರಣದಂಡನೆ ಎಷ್ಟರಮಟ್ಟಿಗೆ ಸರಿ ಎಂಬ ಚರ್ಚೆ ಒಂದು ಮರಣದಂಡನೆ ಜಾರಿಯಾದಾಗಲೆಲ್ಲ ಹುಟ್ಟುತ್ತದೆ. ಕಸಬ್ ನನ್ನು ನೇಣಿಗೇರಿಸಿದಾಗ ಮರಣದಂಡನೆಯೆಂಬ ಶಿಕ್ಷೆಯಿಂದ ಅಪರಾಧಗಳು ಕಡಿಮೆಯಾಗುತ್ತದೆಯಾ ಎಂದು ಬರೆದಿದ್ದ ನೆನಪು. ಅದು ಬರೆದು ಮುಗಿಸುತ್ತಿದ್ದಂತೆ ಆ ರೀತಿಯ ದಿಢೀರ್ ಬರವಣಿಗೆಯ ನಿರರ್ಥಕತೆಯ ಅರಿವಾಗಿತ್ತು. ಮರಣದಂಡನೆ ಜಾರಿಯಾಗುವಾಗ ಅದರ ಅನುಪಯೋಗದ ಬಗ್ಗೆ ಚರ್ಚೆ ಮಾಡಿ ನಂತರ ಮತ್ತೆ ಮರೆತುಬಿಡುವುದು ಯಾವ ಸಂಭ್ರಮಕ್ಕೆ? ಮರಣದಂಡನೆ ಬಗ್ಗೆ ಚರ್ಚೆಯಾಗಬೇಕಾಗಿರುವುದು ಯಾವ ಮರಣದಂಡನೆಯೂ ನಡೆಯದ ಸಂದರ್ಭದಲ್ಲಿ ಈಗಲ್ಲ ಅಲ್ಲವೇ?

ಕೊಂಚ ದೀರ್ಘವಾಗಿರುವ ಲೇಖನವನ್ನು ಕೊನೆಯವರೆಗೂ ಓದಿರುವಿರಾದರೆ ಧನ್ಯವಾದ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.

1 comment:

  1. I am not totally opposed to imposing death penalty. 'Rarest of rare case' doctrine imposed by the SC should exist. There should be a vent to the society's anger about a heinous incident like nithari killings or delhi gang rape or attack on parliament.

    What instead should be our demand is to reform the judicial process. More than 3 lakh persons in the prisons are under trial. That means only one among 3 inmates is sentenced by the court. The rest are in Thrishanku

    This is a greater human rights violation than death penalty.

    It has been ten years since Code of criminal procedure section 436 A has been amended and no further action has been taken. For each day that passes when countless persons languish inside prisons ,the dirt on the blot gets thicker on our country's reputation

    it is definitely sad to send a person to the gallows though

    Situation is quite alarming. Especially when ISIS is in our door step. Incidents like these will be misused by them and other people like Owaisi.

    Onus lies on all of us. Political class and general public should be more mature. Biggest responsibility lies with the parents teachers friends spouse and siblings . We cannot afford to lose another chartered accountant or another software engineer to this extremism.


    ReplyDelete