Apr 13, 2009

ನೆರಳು.

ಇಲ್ಲ, ಸರಿಯಾಗಿ ಇಂಥದೇ ದಿನದಿಂದ ಈ ತೊಂದರೆ ಆರಂಭವಾಗಿತ್ತು ಎಂದ್ಹೇಳಲು ಕಷ್ಟವಾಗಿತ್ತು ರಾಜೀವನಿಗೆ. ಮೊದಲು ಅನುಭವಕ್ಕೆ ಬಂದಿದ್ದು ಇತ್ತೀಚಿಗೆ ಮೈಸೂರಿನಿಂದ ಬೆಂಗಳೂರಿಗೆ ಹೋಗುವಾಗ. ಶ್ರೀರಂಗಪಟ್ಟಣ ದಾಟಿ ಹತ್ತು ನಿಮಿಷವಾಗಿದ್ದಾಗ ಕಾರು ಕೆಟ್ಟು ನಿಂತಿತ್ತು. ಈ ಬಾರಿ ಯಾಕೋ ಪ್ರಚಂಡ ಬಿಸಿಲು. ಕಾರಿನ ಎ.ಸಿಯೂಬಂದಾಗಿತ್ತು. 'ಅಲ್ಲೇ ಮರದ ನೆರಳಲ್ಲಿ ನಿಂತಿರಿ ಸರ್. ಏನಾಗಿದೆ ನೋಡ್ತೀನಿ' ಎಂದ ಡ್ರೈವರ್. ಸರಿ ಎಂದುಕೊಂಡು ಮರದ ಬಳಿ ಬಂದ. ಘಂಟೆ ಎರಡಾಗಿತ್ತು. ಸೂರ್ಯ ಪ್ರಖರವಾಗಿದ್ದ. ಮರದ ನೆರಳು ಕಾಣಲಿಲ್ಲ!!. ತಲೆಯೆತ್ತಿ ನೋಡಿದ. ಸೂರ್ಯ ನಕ್ಕಂತಾಯಿತು. ರಾತ್ರಿ ಕುಡಿದಿದ್ದು ಜಾಸ್ತಿಯಾಯಿತೇನೋ ಎಂದುಕೊಂಡು ನಗು ಬಂತು. ಗಾಬರಿಯಾಗಿದ್ದು ತನ್ನ ನೆರಳು ಕಾಣದಿದ್ದಾಗ!

ಅಂದಿನಿಂದ ರಾಜೀವ ಹುಡುಕುತ್ತಲೇ ಇದ್ದಾನೆ. ನೆರಳೇ ಕಾಣಸಿಗುತ್ತಿಲ್ಲ. ದೂರದಲ್ಲೆಲ್ಲೋ ಜನ ಮರದ ಕೆಳಗೆ ನಿಂತಿದ್ದರೆ ಆಸೆಗಣ್ಣುಗಳಿಂದ ಹತ್ತಿರ ಹೋಗುತ್ತಾನೆ ,ನೆರಳಿನ ಗುರುತಿಲ್ಲ. ಯಾರೊಡನೆ ಹೇಳಿಕೊಳ್ಳುವುದೆಂದು ತಿಳಿಯಲಿಲ್ಲ. ತಿಂಗಳ ಹಿಂದೆ ಹೆಂಡತಿಯೊಡನೆ ಜಗಳವಾಡಿದ್ದ. ಮಾತಿನ ನಡುವೆ 'ನನ್ನ ನೆರಳನ್ನೇ ನಂಬೋದಿಲ್ಲ ನಾನು, ಇನ್ನು ನಿನ್ನನ್ನು ನಂಬ್ತೀನಾ?' ಎಂದಿದ್ದ. ಕೋಪಗೊಂಡು ತವರಿಗೆ ಹೋದವಳು ಇನ್ನು ತಿರುಗಿ ಬಂದಿಲ್ಲ. ಸೈಕಿಯಾಟ್ರಿಸ್ಟನಾದರೂ ನೋಡೋಣವೆನ್ದುಕೊನ್ಡ, ಭಯವಾಯಿತು. ಕಾಲೇಜಿನ ದಿನಗಳಲ್ಲಿ ಓದಿದ್ದ ಜೋಗಿಯ ಕಥೆ ನೆನಪಾಯಿತು. ಅ ಕಥೆಯಲ್ಲಿ ಪಾತ್ರವಾಗಿದ್ದ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣುವುದಿಲ್ಲ. ಅದು ಸಾವಿನ ಮುನ್ಸೂಚನೆಯಾಗಿತ್ತು ಅದರಲ್ಲಿ. ನನಗೂ.....ತಲೆ ಕೊಡವಿದ.

ರಾತ್ರಿ ಸರಿಯಾಗಿ ನಿದ್ರೆಯಾಗಿರಲಿಲ್ಲ. ಡ್ರೈವರ್ ರಜೆಯಿದ್ದ ಕಾರಣ ಕಾರನ್ನು ತೆಗೆದುಕೊಂಡು ಜೆ.ಎಸ್.ಎಸ್. ಕಾಲೇಜಿನ ಹಿಂದಿನ ರಸ್ತೆಯಲ್ಲಿ ಸಯ್ಯಾಜಿರಾವ್ ರಸ್ತೆಯೆಡೆಗೆ ಹೊರಟಿದ್ದ. ಬಲಭಾಗದಲ್ಲಿದ್ದ ಮಸಣದಲ್ಲಿ ಮರದ ಬುಡದಲ್ಲಿ ಮೈಚಾಚಿ ಮಲಗಿತ್ತು ನೆರಳು. ಖುಷಿ ತಡೆಯಲಾಗದೆ ಕಿಟಕಿಯ ಗಾಜಿಳಿಸಿ ಕತ್ತು ಹೊರಹಾಕಿದ; ಸ್ಟೀರಿಂಗ ಕೈ ತಪ್ಪಿತು.....ಎದುರಿಗೆ ದೊಡ್ಡ ಲಾರಿ.......

- ಅಶೋಕ್.

No comments:

Post a Comment