ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ.
ಸದ್ಯಕ್ಕೆ ತಮಿಳುನಾಡಿನಲ್ಲಿ ಕಾವೇರಿ ನೀರಿಗಿಂತ ಹೆಚ್ಚು ಹಾಹಾಕಾರ ಉಂಟು ಮಾಡುತ್ತಿರುವ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಎ.ಐ.ಎ.ಡಿ.ಎಂ.ಕೆ ಪಕ್ಷದ ಸರ್ವೋಚ್ಚ ನಾಯಕಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಮತ್ತು ಆಡಳಿತದಲ್ಲಿ ಆವರಿಸಿರುವ ಶೂನ್ಯತೆಯು ಪ್ರಾದೇಶಿಕ ಪಕ್ಷಗಳ ಇತಿಮಿತಿಯ ಬಗ್ಗೆ ಮತ್ತು ಆಗಬಹುದಾದ ಅಪಾಯಗಳ ಬಗ್ಗೆ ನಮಗೆ ಸ್ಪಷ್ಟವಾದ ನಿದರ್ಶನವಾಗುವಂತಿದೆ. ರಾಜ್ಯವೊಂದಕ್ಕೆ ಇಂಡಿಯಾದ ಒಕ್ಕೂಟ ವ್ಯವಸ್ಥೆಯಿಂದ ಅನ್ಯಾಯವಾದಾಗೆಲ್ಲ ನಾವು ಪ್ರಾದೇಶಿಕ ಪಕ್ಷಗಳ ಅನಿವಾರ್ಯತೆ ಕುರಿತು ಮಾತಾಡುವುದು, ತದನಂತರದಲ್ಲಿ ಮೌನವಾಗಿಬಿಡುವುದು ಮಾಮೂಲಿಯಾಗಿದೆ. ಸ್ವತ: ನಾನೇ ಬಹಳಷ್ಟು ಲೇಖನಗಳಲ್ಲಿ ಪ್ರಾದೇಶಿಕ ಪಕ್ಷಗಳ ಅಗತ್ಯದ ಬಗ್ಗೆ ಮತ್ತು ಅದರಿಂದಾಗಬಹುದಾದ ಅನುಕೂಲಗಳ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಆದರೆ ಪ್ರಾದೇಶಿಕ ಪಕ್ಷಗಳ ಇನ್ನೊಂದು ಮುಖದ ಬಗ್ಗೆಯೂ ಅಂದರೆ ಅವುಗಳ ಋಣಾತ್ಮಕ ಗುಣಗಳ ಬಗ್ಗೆಯೂ ಬರೆಯುವುದು ಅಗತ್ಯವೆಂಬ ಬಾವನೆಯಿಂದ ಇದನ್ನು ಬರೆಯುತ್ತಿರುವೆ.



