Jul 26, 2018

ಶಿಷ್ಟಾಚಾರದ ರಾಜಕಾರಣವನ್ನು ಮೀರಿದ ಒಂದು ಅಪ್ಪುಗೆ!

ಕು.ಸ.ಮಧುಸೂದನರಂಗೇನಹಳ್ಳಿ
ಬಹುಶ: ಅದೊಂದು ಸಣ್ಣ ತಪ್ಪನ್ನು ರಾಹುಲರು ಮಾಡದೇ ಹೋಗಿದ್ದರೆ ಮೊನ್ನೆಯ ವಿಸ್ವಾಸ ಮತ ಯಾಚನೆಯ ದಿನದಂದು ರಾಹುಲ್ ಗಾಂದಿಯವರು ನಡೆದುಕೊಂಡ ರೀತಿ ಮತ್ತು ಮಾಡಿದ ಬಾಷಣ ಬಹುಕಾಲ ಇಂಡಿಯಾ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಿತ್ತು.

ವಿಶ್ವಾಸಮತದ ಪರವಾಗಿ ಸುದೀರ್ಘವಾಗಿ ವಸ್ತುನಿಷ್ಠವಾಗಿ(ಬಹುಶ: ಪ್ರಾನ್ಸ್ ಸರಕಾರದ ಹೇಳಿಕೆಯ ಉಲ್ಲೇಖವೊಂದನ್ನು ಹೊರತು ಪಡಿಸಿ) ಯಾವ ಹಿಂಜರಿಕೆಯೂ ಇರದಂತೆ ಮಾತಾಡಿದ ರಾಹುಲರ ಸರಕಾರದ ವಿರುದ್ದದ ಟೀಕೆಗಳಿಗೆ ಅಷ್ಟೇ ವಸ್ತುನಿಷ್ಠವಾಗಿ ಉತ್ತರ ಕೊಡುವುದು ಕಷ್ಟವಾಗುತ್ತಿತ್ತು. ಅದರೆ ತಮ್ಮ ಮಾತು ಮುಗಿಸಿದಾಕ್ಷಣ ಅವರು ನೇರವಾಗಿ ಪ್ರದಾನ ಮಂತ್ರಿಗಳ ಆಸನದ ಬಳಿ ಹೋಗಿ ಪ್ರದಾನಿಯವರನ್ನು ಅಪ್ಪಿಕೊಂಡಿದ್ದು ಸದನವನ್ನಿರಲಿ ಸ್ವತ: ಪ್ರದಾನಿಯವರಿಗೆ ವಿಸ್ಮಯವನ್ನುಂಟು ಮಾಡಿದ್ದು ನಿಜ. ಅಲ್ಲಿಯವರೆಗು ಎಲ್ಲವೂ ಚೆನ್ನಾಗಿಯೇ ಇತ್ತು. ಅದರೆ ಪ್ರದಾನಿಯವರ ಅಪ್ಪುಗೆಯ ನಂತರ ತಮ್ಮ ಸ್ಥಾನಕ್ಕೆ ಮರಳಿದ ರಾಹುಲ್ ಕ್ಯಾಮೆರಾಗಳಿವೆಯೆಂಬುದನ್ನು ಮರೆತವರಂತೆ ತಮ್ಮ ಗೆಳೆಯ ಸಹ ಸಂಸದನತ್ತ ತಿರುಗಿ ಎಡಗಣ್ಣು ಮಿಟುಕಿಸಿದ್ದು ಅಲ್ಲಿಯವರೆಗಿನ ರಾಹುಲರ ವರ್ತನೆಯ ಗಾಂಭೀರ್ಯತೆಯನ್ನು ಮರೆಸಿಬಿಟ್ಟಿತು. ಅವರು ಸಹಜವಾಗಿಯೇ ಕಣ್ಣು ಮಿಟುಕಿಸಿದ್ದರೂ ನೇರ ಪ್ರಸಾರ ನೋಡುತ್ತಿದ್ದ ಜನರಿಗೆ ರಾಹುಲ್ ಪ್ರದಾನಿಯವರನ್ನು ತಬ್ಬಿಕೊಂಡಿದ್ದೇ ಒಂದು ನಾಟಕವೇನೊ ಎನ್ನುವಂತಹ ತಪ್ಪು ಸಂದೇಶ ನೀಡಿಬಿಟ್ಟಿತು. ಮೊದಲೇ ರಾಹುಲರನ್ನು ಸಮಯ ಬಂದಾಗಲೆಲ್ಲ ನೆಗೆಟಿವ್ ಶೇಡ್ ನಲ್ಲಿಯೇ ತೋರಿಸುವ ಪಟ್ಟಭದ್ರ ವಿದ್ಯುನ್ಮಾನ ಮಾಧ್ಯಮಗಳು ಸಹ ಅದನ್ನೆ ಹೈಲೈಟ್ ಮಾಡುತ್ತ ರಾಹುಲರ ಗಂಬೀರವಾದ ಬಾಷಣ ಮತ್ತು ಅಪ್ಪುಗೆಯ ಹಿಂದಿದ್ದ ಮಹತ್ವವನ್ನು ಮತ್ತು ನೈಜತೆಯನ್ನು ಮರೆಮಾಚಿ ಬಿಟ್ಟವು.

ಮೊದಲಿಗೆ ರಾಹುಲರ ಬಾಷಣವನ್ನೊಮ್ಮೆ ನೋಡೋಣ. ‍ರಾಫೆಲ್ ವಿಮಾನ ಖರೀಧಿಯಲ್ಲಿನ ಒಂದು ತಪ್ಪು ಮಾಹಿತಿಯ ಹೊರತಾಗಿ ಸರಕಾರಕ್ಕೆ ಅವರು ಕೇಳಿದ ಬಹುತೇಕ ಪ್ರಶ್ನೆಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದವು. ೨೦೧೪ರ ಲೋಕಸಭಾ ಚುನಾವಣೆಗು ಮುಂಚೆ ಪ್ರದಾನಿಯವರು ನೀಡಿದ್ದ ಪ್ರತಿಯೊಬ್ಬರ ಖಾತೆಗು ಹದಿನೈದು ಲಕ್ಷ ಹಣ ಹಾಕುವ ಭರವಸೆ ಇವತ್ತಿಗೂಈಡೇರಿಲ್ಲ. ಇದಕ್ಕೆ ಸರಕಾರ ಉತ್ತರಿಸಲೇ ಬೇಕಿತ್ತು. ಇನ್ನು ನೋಟ್ ಬ್ಯಾನ್ ನಂತರ ಈ ದೇಶದ ಸಾಮಾನ್ಯ ಜನತೆ ಅನುಭವಿಸಿದ ಸಂಕಷ್ಟಗಳ ಬಗ್ಗೆ ಅವರು ಸತ್ಯವನ್ನೆ ಹೇಳಿದ್ದರು. ಅದೇ ರೀತಿ ಜಿ.ಎಸ್.ಟಿ. ಕಾಯಿದೆಯನ್ನು ಅವಸರಸರವಾಗಿ ಅವೈಜ್ಞಾನಿಕವಾಗಿ ಜಾರಿಗೊಳಿಸಿ ದೇಶದ ಅರ್ಥ ವ್ಯವಸ್ಥೆ ಕುಸಿಯುವಂತೆ ಮಾಡಿದ್ದಕ್ಕೂ ಸರಕಾರವೇ ನೇರ ಹೊಣೆಯಾಗಿತ್ತು. ದೇಶದಲ್ಲಿ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಲ್ಲೆ ದೌರ್ಜನ್ಯಗಳ ಬಗ್ಗೆ ಸರಕಾರವೇ ಹೊಣೆಯಾಗಿತ್ತು. ದೇಶದ ರೈತ ಸಮುದಾಯದ ಸರಣಿ ಆತ್ಮಹತ್ಯೆಯನ್ನು ತಡೆಗಟ್ಟಲು ಮತ್ತು ರೈತರ ಸಾಲಮನ್ನಾ ಮಾಡಲು ವಿಫಲವಾದ ಕೇಂದ್ರ ಸರಕಾರದ ಬಗ್ಗೆ ಅವರು ಸರಿಯಾದ ಮಾತುಗಳಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದರು.

ಬಹುಶ: ತಮ್ಮ ರಾಜಕೀಯ ಬದುಕಿನಲ್ಲಿ ಮೊಟ್ಟ ಮೊದಲಬಾರಿಗೆ ರಾಹುಲ್ ಗಾಂದಿಯವರು ಇಷ್ಟೊಂದು ದೀರ್ಘಾವದಿಯ ಮೌಲ್ಯಯುತ ಬಾಷಣ ಮಾಡಿದ್ದರು. ಜೊತೆಗೆ ಅಂದಿನ ಅವರ ಬಾಷಣದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಆತ್ಮವಿಶ್ವಾಸ, ಆಕ್ರಮಣಕಾರಿ ಮನೋಬಾವ ಎದ್ದು ಕಾಣುತ್ತಿತ್ತು.

ಪ್ರದಾನಮಂತ್ರಿಯನ್ನು ಅಪ್ಪಿಕೊಂಡಿದ್ದರ ಬಗೆಗಿನ ಟೀಕೆಗಳನ್ನು ಸ್ವಲ್ಪ ನೋಡೋಣ. ಹಲವರ ಪ್ರಕಾರ ಸದನದಲ್ಲಿ ಪ್ರದಾನಮಂತ್ರಿಯ ಸ್ಥಾನದಲ್ಲಿ ಮೋದಿಯವರು ಕೂತಿದ್ದಾಗ ರಾಹುಲರು ಅ ರೀತಿ ಅಪ್ಪಿಕೊಂಡಿದ್ದು ಸದನದ ಶಿಷ್ಟಾಚಾರವನ್ನು ಉಲ್ಲಂಗಿಸಿದಂತಾಗಿದೆ ಮತ್ತು ಪ್ರದಾನಿ ಸ್ಥಾನದ ಗೌರವವಕ್ಕೆ ಚ್ಯುತಿ ತರುವ ಕ್ರಿಯೆ ಎನ್ನಲಾಗುತ್ತಿದೆ, ಇರಬಹುದು! ಸದನದ ಶಿಷ್ಟಾಚಾರ ಉಲ್ಲಂಘನೆಯ ಬಗ್ಗೆ ನೋಡುವುದಾದರೆ, ನಮ್ಮ ಪ್ರಜಾಪ್ರಭುತ್ವವನ್ನು ಆರೋಗ್ಯವಾಗಿಡಲು ಶಿಷ್ಟಾಚಾರಗಳೇ ಸಾಕಾಗುವುದಿಲ್ಲ. ಬದಲಿಗೆ ಕೆಲವೊಮ್ಮೆ ಕ್ಷುಲ್ಲಕ ರಾಜಕಾರಣದ ವೈರತ್ವವನ್ನೂ ಮರೆತು ಇಂತಹ ಅಪರೂಪದ ಮಾನವೀಯ ಸ್ಪಂದನೆಗಳು ಸಹ ಬೇಕಾಗುತ್ತವೆಯೆಂಬುದನ್ನು ನಮ್ಮ ಮಾಧ್ಯಮದ ಮಿತ್ರರಾಗಲಿ ಆಡಳಿತ ಪಕ್ಷದ ಸದಸ್ಯರುಗಳಾಗಲಿ ಅರ್ಥ ಮಾಡಿಕೊಳ್ಳಲೇ ಇಲ್ಲ ಎನ್ನುವುದೇ ವಿಷಾದನೀಯ.

ರಾಹುಲ್ ಗಾಂದಿಯವರ ಪ್ರತಿ ರಾಜಕೀಯ ನಡೆಯನ್ನೂ, ಪ್ರತಿ ಮಾತನ್ನೂ ಲೇವಡಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಬಾಜಪದವರ ತಂತ್ರ ಇದೇನು ಮೊದಲಲ್ಲ. ಈ ಹಿಂದೆಯೂ ಪದೇ ಪದೇ ಮೋದಿಯವರು ರಾಹುಲರನ್ನು ಷಹಜಾದೇ(ರಾಜಕುಮಾರ) ಎಂದು ಅಣಕಿಸುತ್ತಲೇ ಮಾತಾಡುತ್ತಿದ್ದರು. ಜೊತೆಗೆ ರಾಹುಲರ ಬಾಷಣಗಳನ್ನು ತಮ್ಮ ಸಾರ್ವಜನಿಕ ಬಾಷಣಗಳಲ್ಲಿ ಅನುಕರಿಸಿ ಅಣಕಮಾಡುತ್ತ ಅವರ ಆತ್ಮವಿಶ್ವಾಸ ಉಡುಗುವಂತೆ ಮಾಡುತ್ತಲೇ ಬಂದಿದ್ದಾರೆ. ಬಾಜಪದ ಮಾಧ್ಯಮ ಸೆಲ್ಲಿನವರಂತು ರಾಹುಲರನ್ನು ಪಪ್ಪು ಎನ್ನುತ್ತ ಅವರ ಬಗ್ಗೆ ಹಲವು ನೂರು ಜೋಕುಗಳನ್ನು ಹರಿಯ ಬಿಟ್ಟಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಅದ್ಯಕ್ಷರಾದ ನಂತರವೂ ರಾಹುಲರ ಅನನುಭವಿತನವನ್ನು ಅಪಹಾಸ್ಯ ಮಾಡುತ್ತ ಬಂದಿರುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. 

ಆದರೆ ಈ ಬಾರಿ ತಮ್ಮ ಕಣ್ಣು ಹೊಡೆಯುವ ಕ್ರಿಯೆ ಮೂಲಕ ತಮ್ಮ ವಿರೋಧಿಗಳಿಗೆ ತಮ್ಮನ್ನು ಅಪಹಾಸ್ಯ ಮಾಡುವ ಆಯುಧವೊಂದನ್ನು ಸ್ವತ: ಅವರೇನೀಡಿದ್ದು ಮಾತ್ರ ವಿಷಾದನೀಯ!

No comments:

Post a Comment