Jun 23, 2016

ಮೂವರು ನಾಯಕರು ಮೂರು ದಾರಿಗಳು....

ಕು.ಸ.ಮಧುಸೂದನ ನಾಯರ್
23/06/2017
ಒಂದು ರಾಜ್ಯದ ವಿದಾನಸಬಾ ಚುನಾವಣೆಯನ್ನು ಗೆಲ್ಲಲು ರಾಜಕೀಯ ಪಕ್ಷವೊಂದು ತನ್ನ ಸಿದ್ದಾಂತಗಳ ಪರಿಧಿಯಲ್ಲಿ ತಂತ್ರಗಳನ್ನು ಹೆಣೆಯುವುದು ಸಹಜ ಕ್ರಿಯೆ. ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಒಲಿಸಿಕೊಳ್ಳಲು ಅಂತಹ ಕಸರತ್ತುಗಳನ್ನು ಮಾಡುವುದು ಅನಿವಾರ್ಯವೂ ಹೌದು. ಆದರೆ ತಂತ್ರಗಾರಿಕೆಯೇ ರಾಜಕಾರಣವಾಗಿಬಿಟ್ಟರೆ ಅದು ಅಪಾಯಕಾರಿಯೂ ಆಗಿಬಿಡುವುದುಂಟು. ಯಾಕೆಂದರೆ ವಾಸ್ತವದ ರಾಜಕಾರಣ ಯಾವುದು, ಚುನಾವಣಾ ತಂತ್ರಗಾರಿಕೆ ಯಾವುದು ಎನ್ನುವ ಗೊಂದಲದಲ್ಲಿ ಬೀಳುವ ಮತದಾರ ರಾಜಕೀಯದ ತಂತ್ರಗಾರಿಕೆಯೇ ನಿಜವಾದ ರಾಜನೀತಿಯೆಂದು ಭ್ರಮಿಸುತ್ತಾನೆ. ಇವತ್ತು ಕಾಂಗ್ರೆಸ್ಸಾಗಲಿ, ಬಾಜಪವಾಗಲಿ ಇಂತಹ ತಂತ್ರಗಾರಿಗಳನ್ನು ನಂಬಿಯೇ ರಾಜಕಾರಣ ಮಾಡುತ್ತಿವೆ. ಈ ಮಾತನ್ನು ನಾನೀಗ ಹೇಳಲು ಕಾರಣ ಉತ್ತರಪ್ರದೇಶದ ಮುಂದಿನ ವಿದಾನಸಭಾ ಚುನಾವಣೆಗಳನ್ನು ಗೆಲ್ಲಲು ಬಾಜಪ ಈಗಿನಿಂದಲೆ ಕಸರತ್ತು ಆರಂಬಿಸಿದೆ. ಈಗ ಅದು ಇನ್ನೂ ಮುಂದೆ ಹೋಗಿ, ತನ್ನ ಮೂರು ಮುಖ್ಯ ನಾಯಕರನ್ನು ಮೂರು ರೀತಿಯಲ್ಲಿ ಬಳಸಿಕೊಳ್ಳಲು ತೀರ್ಮಾನಿಸಿ ಅದರಂತೆ ಚುನಾವಣಾ ಸಿದ್ದತೆ ನಡೆಸುತ್ತಿದೆ.

ಈ ತಂತ್ರಗಾರಿಕೆಯಲ್ಲಿ ಬಹುಮುಖ್ಯವಾದ ಮೂರು ಪಾತ್ರ ವಹಿಸಲಿರುವ ನಾಯಕರುಗಳೆಂದರೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ಕೇಂದ್ರ ಗೃಹಸಚಿವರಾದ ಶ್ರೀ ರಾಜನಾಥ್ ಸಿಂಗ್, ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾ ಅವರುಗಳಾಗಿದ್ದಾರೆ. ಈಗಾಗಲೆ ರಾಜಕೀಯ ರ್ಯಾಲಿಗಳ ಮೂಲಕ ಪ್ರಚಾರ ಸಭೆಗಳನ್ನು ನಡೆಸುತ್ತಿರುವ ಬಾಜಪ ಆ ಸಭೆಗಳಲ್ಲಿ ಈ ಮೂವರಲ್ಲಿ ಯಾರು ಯಾವ ವಿಷಯವನ್ನು ಮಾತನಾಡಬೇಕೆಂಬುದನ್ನು ನಿರ್ದರಿಸಿ ತನ್ಮೂಲಕ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಹೀಗೆ ಮಾತನಾಡುವ ವಿಷಯಗಳನ್ನು ಹಂಚಿಕೊಂಡಿರುವ ಈ ನಾಯಕತ್ರಯರುಗಳು ಉತ್ತರ ಪ್ರದೆಶದ ಜನರ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರುಗಳಿಗೆ ನಿಗದಿ ಮಾಡಲ್ಪಟ್ಟಿರುವ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ:

ಮೊದಲನೆಯದಾಗಿ, ಶ್ರೀ ನರೇಂದ್ರ ಮೋದಿಯವರ ಮಾತುಗಳು ಕೇವಲ ಅಭಿವೃದ್ದಿಯ ಕುರಿತಾಗಿ ಮಾತ್ರವಿರುತ್ತವೆ. ರಾಷ್ಟ್ರದ ಆರ್ಥಿಕ ಪ್ರಗತಿ, ಕೈಗಾರಿಕೆಗಳ ಸಬಲೀಕರಣ, ವಿದೇಶಿ ಬಂಡವಾಳ ತರುವ ಬಗ್ಗೆ ಮತ್ತು ಜನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತ್ರ ತಮ್ಮ ಬಾಷಣವನ್ನು ಸೀಮಿತಗೊಳಿಸಿಕೊಳ್ಳುವ ಮೋದಿಯವರು ಇವುಗಳ ಜೊತೆಗೆ ಆಗಾಗ ವಿದೇಶದಲ್ಲಿರುವ ಕಪ್ಪು ಹಣವನ್ನು ಇಂಡಿಯಾಗೆ ತರುವಲ್ಲಿ ತಾವು ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಮಜಾಯಿಷಿ ನೀಡುತ್ತಾ, ಜನರನ್ನು ಮರುಳುಗೊಳಿಸುವಂತಹ ಬಾಷಣಗಳನ್ನು ಮಾಡುತ್ತಾರೆ. ಅಲ್ಲಿಗೆ ಮೋದಿಯವರ ವ್ಯಕ್ತಿತ್ವಕ್ಕೆ ಹಿಂದುತ್ವದ ಪರವಾದ ಮನುಷ್ಯನೆಂಬ ಹಣೆಪಟ್ಟಿ ಬೀಳದಂತೆ ನೋಡಿಕೊಳ್ಳುವ ಕೆಲಸವಾಗುತ್ತದೆ. ಜನರು ನಮ್ಮ ಪ್ರದಾನಿಯವರು ಕೇವಲ ಜನರ ಜೀವನಮಟ್ಟ ಸುಧಾರಣೆಯ ಬಗ್ಗೆ ಮತ್ತು ದೇಶದ ಪ್ರಗತಿಯ ಬಗ್ಗೆ ಮಾತ್ರ ಯೋಚಿಸುವ ವ್ಯಕ್ತಿಯೆಂದು ಪರಿಗಣಿಸುವಂತೆ ಮಾಡುವ ಒಂದು ತಂತ್ರಗಾರಿಕೆ ಇದಾಗಿದೆ. ಮೋದಿ ಅಪ್ಪಿ ತಪ್ಪಿಯೂ ಆಯೋದ್ಯೆಯ ವಿವಾದದ ಬಗ್ಗೆಯಾಗಲಿ ಹೆಚ್ಚುತ್ತಿರುವ ದಲಿತ ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳ ಬಗ್ಗೆಯಾಗಲಿ, ಇತ್ತೀಚೆಗೆ ವಿಷಾದನೀಯ ಘಟನೆಗಳು ನಡೆದ ಹೈದರಾಬಾದ್ ಮತ್ತು ಜವಹರಲಾಲ್ ನೆಹರು ವಿಶ್ವ ವಿದ್ಯಾನಿಲಯಗಳ ಘಟನೆಗಳ ಬಗ್ಗೆಯಾಗಲಿ ಸೊಲ್ಲೆತ್ತುವುದಿಲ್ಲ. ಅವರದೇನಿದ್ದರು ಅಭಿವೃದ್ದಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ವಿದೇಶಿ ರಾಷ್ಟ್ರಗಳೊಂದಿಗಿನ ಸಂಬಂದ ಸುಧಾರಣೆಯ ದೊಡ್ಡ ದೊಡ್ಡ ಮಾತುಗಳು ಮಾತ್ರ. ಅಲ್ಲಿಗೆ ಬಾಜಪದ ಸಾಂಸ್ಕೃತಿಕ ರಾಜಕಾರಣವಾಗಲಿ, ಪಕ್ಷದ ಎರಡನೇ ಸಾಲಿನ ನಾಯಕರುಗಳು ನೀಡುವ ಮತಾಂಧತೆಯ ಹೇಳಿಕೆಗಳಾಗಲಿ ಮೋದಿಯವರದಲ್ಲ ಮತ್ತು ಅವುಗಳ ಹೊಣೆಗಾರಿಕೆಯೂ ಅವರದಲ್ಲವೆಂಬ ಸಂದೇಶವನ್ನು ಜನತೆಗೆ ನೀಡುವ ಬಾಜಪದ ಉದ್ದೇಶ ಸಫಲವಾಗುತ್ತದೆ.

ಇನ್ನು ಪಕ್ಷದ ರಾಷ್ಟ್ರಾದ್ಯಕ್ಷರಾದ ಶ್ರೀ ಅಮಿತ್ ಷಾರವರು ತಮ್ಮ ಬಾಷಣದ ಉದ್ದಕ್ಕೂ ಖೈರಾನದಲ್ಲಿನ ಹಿಂದೂ ಕುಟುಂಬಗಳ ವಾಪಸಾತಿ ಬಗ್ಗೆ, ಅಲ್ಪಸಂಖ್ಯಾತರಿಂದ ಬಹುಸಂಖ್ಯಾತ ಹಿಂದುಗಳಿಗಿರುವ ಆತಂಕಗಳ ಬಗ್ಗೆ ಘಂಟಾಘೋಷವಾಗಿ ಮಾತನಾಡುತ್ತಾರೆ. ಜೊತೆಗೆ ಈಗಿರುವ ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷವು ಮುಸ್ಲಿಮರನ್ನು ಓಲೈಸುವ ಕೆಲಸದಲ್ಲಿ ತೊಡಗಿದೆಯೆಂದೂ ಕಾಂಗ್ರೆಸ್ ಕೂಡ ಅದನ್ನು ಸಮರ್ಥಿಸುವ ಹಾದಿಯಲ್ಲಿ ಕೆಲಸ ಮಾಡುತ್ತಿದೆಯೆಂಬ ಅರ್ಥದಲ್ಲಿ ಮಾತಾಡುತ್ತ ಜನರ ಬಾವನೆಗಳನ್ನು ಬಡಿದೆಬ್ಬಿಸುವ ಬಾಷಣ ಮಾಡುತ್ತಾರೆ. ಜೊತೆಗೆ ಸಂಘ ಪರಿವಾರದ ಮುಖವಾಣಿಯಂತೆ, ವಿಶ್ವ ಹಿಂದೂಪರಿಷತ್ತಿನ ದ್ವನಿಯಲ್ಲಿ ಮಾತಾಡುತ್ತಾರೆ. ಅಲ್ಲಿಗೆ ಜನರ ಬಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸಿ ಅವನ್ನು ಹಿಂದೂ ಸಮುದಾಯಕ್ಕೆ ತಲುಪಿಸುವ ಬಾಜಪದ ಎರಡನೇ ಗುರಿಯೂ ಸಫಲವಾದಂತಾಗುತ್ತದೆ.

ಉಳಿದಂತೆ ಬಾಜಪದ ಮಾಜಿ ಅದ್ಯಕ್ಷರೂ, ಕೇಂದ್ರದ ಹಾಲಿ ಗೃಹ ಸಚಿವರೂ ಆಗಿರುವ ಶ್ರೀ ರಾಜನಾಥ್ ಸಿಂಗ್ ಅವರು ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಬಾಷಣ ಮಾಡುತ್ತಾರೆ. ಅವರ ಪ್ರಕಾರ ಸಮಾಜವಾದಿ ಪಕ್ಷದ ಮುಖ್ಯಮಂತ್ರಿಯಾದ ಶ್ರೀ ಅಖಿಲೇಶ್ ಯಾದವರು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಮತ್ತು ಜನತೆ ಇದರಿಂದ ಬೇಸತ್ತಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಮುಜಾಫರ್ ನಗರದ ಕೋಮುಗಲಭೆಗಳನ್ನು ಮತ್ತು ಇತ್ತೀಚೆಗೆ ನಡೆದ ಮಥುರಾ ಹಿಂಸಾಚಾರವನ್ನು ಉಲ್ಲೇಖಿಸುತ್ತಾರೆ. ಉತ್ತರ ಪ್ರದೇಶವು ಜಂಗಲ್ ರಾಜ್ಯವಾಗುತ್ತಿದೆಯೆಂದು ಜನರಲ್ಲಿ ಸರಕಾರದ ಉದ್ದೇಶಗಳ ಬಗ್ಗೆ ಅನುಮಾನ ಹುಟ್ಟಿಸುವ ಮಾತಾಡುತ್ತಿದ್ದಾರೆ. 

ಕಳೆದ ವಾರ ಅಹಮದಾಬಾದಿನಲ್ಲಿ ನಡೆದ ಬೃಹತ್ ರ್ಯಾಲಿಯೊಂದರಲ್ಲಿ ಈ ಮೂವರು ಸಹ ಇಂತಹುದೇ ಬಾಷಣ ಮಾಡಿದ್ದು, ಈ ವರ್ಷದ ಕೊನೆಯ ವೇಳೆಗೆ ಉತ್ತರ ಪ್ರದೇಶದಾದ್ಯಂತ ಇನ್ನೂ ಇಪ್ಪತ್ತು ರ್ಯಾಲಿಗಳನ್ನು ಆಯೋಜಿಸುವ ಯೋಜನೆಯನ್ನು ಬಾಜಪ ಹೊಂದಿದೆಯೆಂದು ಅದರ ವಕ್ತಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬಾಜಪ ಇವತ್ತಿನವರೆಗು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಿಲ್ಲ. ಬಾಜಪದ ಒಂದು ವರ್ಗ ರಾಜನಾಥ್ ಸಿಂಗ್ ಅವರೇ ಸೂಕ್ತವೆಂದು ಹೇಳುತ್ತಾ ಬಂದಿದ್ದರೂ ಸ್ವತ: ರಾಜನಾಥ್ ಅದನ್ನು ನಿರಾಕರಿಸಿ ತಮಗೆ ರಾಜ್ಯದ ಮುಖ್ಯಮಂತ್ರಿಯ ಪಟ್ಟ ಇಷ್ಟವಿಲ್ಲವೆಂದು ಹೇಳಿಕೊಂಡಿದ್ದಾರೆ. ಇನ್ನುಪಕ್ಷದ ಇನ್ನೊಂದುವರ್ಗ ಯುವನಾಯಕ ವರುಣ್ ಗಾಂದಿಯವರನ್ನು ಮುಖ್ಯಮಂತ್ರಿ ಗಾದಿಗೆ ಹೆಸರಿಸುವಂತೆ ಒತ್ತಡ ಹೇರುತ್ತಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದರು ಬಾಜಪ ಯಾವ ನಿರ್ದಾರವನ್ನೂ ಪ್ರಕಟಿಸಿಲ್ಲ.

ಬಹುಶ: ಈ ವಿಚಾರದಲ್ಲಿ ಮಾಯಾವತಿಯವರ ಬಹುಜನ ಪಕ್ಷದ ಮುಂದಿನ ನಡೆಯನ್ನು ಬಾಜಪ ಕಾದು ನೋಡುತ್ತಿದೆ. ಯಾಕೆಂದರೆ ಇವತ್ತಿನವರೆಗು ಮಾಯಾವತಿಯವರು ಮುಂದಿನ ಚುನಾವಣೆಯ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸದ್ಯದ ಪರಿಸ್ಥಿತಿಯಲ್ಲ್ಲಿ ಮಾಯಾವತಿಯವರು ದಲಿತ ಮತ್ತು ಮುಸ್ಲಿಂ ಮತ ಬ್ಯಾಂಕಿನ ಮೇಲೆ ಹಿಡಿತ ಹೊಂದಿರುವಂತೆ ಕಂಡುಬರುತ್ತಿದ್ದು ಕಾಂಗ್ರೆಸ್ ಜೊತೆ ಅದು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸಾದ್ಯತೆಗಳು ಗೋಚರಿಸುತ್ತಿವೆ. ಈ ದೃಷ್ಠಿಯಿಂದಲೇ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ವಿರುದ್ದ ಹರಿಹಾಯುತ್ತಿರುವ ಬಾಜಪ ಬಹುಜನ ಪಕ್ಷದ ಬಗ್ಗೆ ಚಕಾರವೆತ್ತುತ್ತಿಲ್ಲ. ತನ್ನ ವಿರುದ್ದವಿರುವ ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ದಿಸಿದರೆ ಆಗುವ ಅನುಕೂಲವನ್ನು ಮನಗಂಡಿರುವ ಬಾಜಪ ಆ ದಿಸೆಯಲ್ಲಿ ಕೆಲಸ ಮಾಡುತ್ತಿದೆ. ಸದ್ಯದ ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿಯೇ ಇದೆ. ಆದರೆ ಮಾಯಾವತಿಯವರ ಕಾರ್ಯವೈಖರಿಯೇ ಹಾಗೆ. ಅವರು ಬಾಯಿ ಬಿಟ್ಟು ಹೇಳದೆ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಸದ್ದಿರದೆ ಮಾಡುತ್ತಿದ್ದಾರೆ. ಇದನ್ನು ಅರಿತಿರುವ ಬಾಜಪ ಮಾಯಾವತಿಯವರ ಕಾರ್ಯಾಚರಣೆ ಬಹಿರಂಗವಾಗುವ ಸಂದರ್ಭಕ್ಕಾಗಿ ಕಾಯುತ್ತಿದೆ.

ಒಟ್ಟಿನಲ್ಲಿ ಬಾಜಪ 1999ರಲ್ಲಿ ಮಾಜಿ ಪ್ರದಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರಿಗೆ ತೊಡಿಸಿದ ಜಾತ್ಯಾತೀತ ಮುಖವಾಡವನ್ನು ಮೋದಿಯವರಿಗೆ ತೊಡಿಸಿ ಉತ್ತರ ಪ್ರದೇಶದ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ.

No comments:

Post a Comment