Nov 22, 2015

ತುಂಬೆ ಗಿಡದ ಕನಸ ಕಾಣುತ್ತ..........

ಕು.ಸ.ಮಧುಸೂದನ್‍ ರಂಗೇನಹಳ್ಳಿದಶದಿಕ್ಕುಗಳಲ್ಲಿಯೂ
ದಂಡುಗಟ್ಟಿದ ಮೋಡಗಳ
ಮರೆಯೊಳಗವಿತ ಸೂರ್ಯನ
ಕಂಡು ನಾಚಿದ
ಪೂರ್ವ ಪಶ್ಚಿಮ
ಉತ್ತರ ದಕ್ಷಿಣಗಳೆಲ್ಲ
ಅಡ್ಡಾದಿಡ್ಡಿಯಾಗಿ
ಜಾಗ ಬದಲಿಸಿ ದೆಸೆ ಬದಲಿಸುವವರ ನಾಲಿಗೆಗಳ
ಕತ್ತರಿಸಿದವು
ಹಿಮಚ್ಛಾದಿತ ಕಾಶ್ಮೀರದ ಕಣಿವೆಗಳಲ್ಲಿ ಚೆಲ್ಲಿದ ರಕ್ತ
ಕಲೆಗಳನೊರೆಸಲು ಸಮವಸ್ತ್ರದಾರಿಗಳು
ಕೋವಿ ಹಿಡಿದು ಅಡ್ಡಾಡಿದರು
ಜಾರ್ಖಂಡಿನ ಕಾಡಿನೊಳಗಿನ ಕಚ್ಚಾ ದಾರಿಯಲಿ
ನೆಲಬಾಂಬನಿಟ್ಟು ಸ್ಪೋಟಿಸಿದ ನಕ್ಸಲರ ಕಣ್ಣುಗಳಲ್ಲಿ
ದಿಗ್ವಿಜಯದ ಉನ್ಮಾದ
ಸತ್ತ ಪೋಲಿಸರ ಮನೆಯೊಳಗೆ
ಹಚ್ಚಿಟ್ಟ ದೀಪ ಆರಿ ಸುಟ್ಟ ಬತ್ತಿಯ ಕಮಟು ವಾಸನೆಯ ನಡುವೆ
ಸೂತಕದ ಛಾಯೆ
ಸಿಕ್ಕ ಪರಿಹಾರವನು ಹಂಚಿಕೊಳ್ಳುವ ವ್ಯಾಜ್ಯಕೆ
ಸಾಲು ನಿಂತ ವಕೀಲರುಗಳ ದಂಡು
ಸಿರಿಯಾದ ಬಂಡುಕೋರರ ಬಂದೂಕುಗಳಿಗೆ ಎದೆಯೊಡ್ಡಿ
ಸತ್ತವರ ನೆತ್ತರು ಸೇರಿದ ಸಾಗರದಾಳದೊಳಗೆ ಉಕ್ಕುವ
ತೈಲ ಸಂಪತ್ತನ್ನು ದೋಚಲು ನಿಂತ ಆಧುನಿಕ ಕಡಲ್ಗಳ್ಳರ ಸಾಲಲ್ಲಿ ಪಶ್ಚಿಮದ ದೊಡ್ಡಣ್ಣನ
ಆಜ್ಞೆಯ ಪಾಲಿಸಲು ಕಾದು ಕೂತ ನಮ್ಮ ನೆಲದ ನೆಂಟರು
ತೆರೆಗಳಬ್ಬರಕ್ಕೆ ದಡಕೆ ತೇಲಿಬಂದ ಅಯ್ಲಾನನ ಹೆಣದ
ಪೋಟೊಶಾಪ್ ಚಿತ್ರದಡಿಯಲಿ ಕವಿಗಳು ಬರೆದ ನೂರಾರು ಕವಿತೆಗಳು
ಮೆಚ್ಚುಗೆ ಪಡೆದು
ಧನ್ಯವಾದವು!
ಜಗದಷ್ಟೂ ಘನಘೋರ ಪಾತಕಗಳಿಗೆ
ಬಲಿಪಶುವಾಗಿ ನಿಂತ ನನ್ನ
ಕಾಲುಗಳು ನಡೆದವು ಊರ ಹೊರಗಿನ ಕಲ್ಲು ಮಾರಮ್ಮನ ಗುಡಿಯಂಗಳಕೆ
ಬಿದ್ದು ಬೊಕ್ಕಬೋರಲು
ಬೇಡಿಕೊಂಡೆ
ಕೊಡೆನಗೆ ಅವ್ವ ಒಂದಿಷ್ಟಾದರು ತಾವ ನಿನ್ನ ಮಡಿಲೊಳಗೆ
ಹಾಗೇನೆ ಕೇಳಿಸು ಹೆತ್ತವಳು ಹಾಡುತಿದ್ದ ಹಳೆಯ ಜೋಗುಳವನ್ನ
ತಟ್ಟು ನೆತ್ತಿಯ ಮೇಲೆ ಸದ್ದಾಗದಂತೆ
ಕಣ್ಮುಚ್ಚಿ ಮಲಗಿ ಬಿಡುತ್ತೇನೆ
ಒಂದು ಯುಗದ ಕಾಲ ಜಗದರಿವಿರದ ಹಾಗೆ
ಪಾಪಿಗಳ ಅಂತ್ಯವಾಗಿ
ಪಾಪಗಳು ಇಲ್ಲವಾಗಿ
ಕತ್ತರಿಸಿ ಬಿಸಾಕಿದ ಕಣಗಿಲೆ ಗಿಡಗಳ ಜಾಗದೊಳು
ಮುಕ್ಕಣ್ಣನಿಗೆ ಪ್ರಿಯವಾದ ತುಂಬೆ ಹೂವಿನ
ಗಿಡ ಚಿಗುರೊಡೆಯುವವರೆಗೂ!

No comments:

Post a Comment