Jul 12, 2012

ಆಡಾಡತ ಆಯುಷ್ಯ ನೋಡನೋಡತ ದಿನಮಾನ....


ಡಾ.ಅಶೋಕ್. ಕೆ. ಆರ್.
ಪಿ.ಯು.ಸಿಯಲ್ಲಿ ‘ಯಯಾತಿ’ ನಾಟಕ ಪಠ್ಯವಾಗಿತ್ತು. ಯಯಾತಿ ನಾಟಕ ನಮ್ಮನ್ನು ಪುಳಕಿಗೊಳಿಸಿದ್ದಕ್ಕೆ ಕಾರಣ ಗಿರೀಶ್ ಕಾರ್ನಾಡರೋ ಅಥವಾ ನಮಗೆ ಆ ಪಾಠ ಮಾಡಿದ ಮೇಷ್ಟರೋ [ಅವರ ಹೆಸರು ನೆನಪಾಗಲೊಲ್ಲದು] ಕಾರಣರೋ ಕರಾರುವಕ್ಕಾಗಿ ಹೇಳುವುದು ಕಷ್ಟ. ನಂತರ ಕನ್ನಡದ ಪ್ರಮುಖ ಕಥೆ ಕಾದಂಬರಿಗಳನ್ನು ಓದಲಾರಂಭಿಸಿದೆನಾದರೂ ನಾಟಕಗಳ ಕಡೆಗೆ ಹೆಚ್ಚು ಗಮನಕೊಟ್ಟಿರಲಿಲ್ಲ. ಗೆಳೆಯೊಬ್ಬನಿಂದ ಎರವಲು ಪಡೆದು ಓದಿದ ಟಿ.ಪಿ.ಕೈಲಾಸಂರ ನಾಟಕಗಳು ಅವುಗಳಲ್ಲಿನ ವಿಡಂಬನಾತ್ಮಕ ದೃಷ್ಟಿಕೋನದಿಂದ ಆಕರ್ಷಿಸಿದವು. ಮೈಸೂರಿನಲ್ಲಿ ದಸರಾ ಸಮಯದಲ್ಲಿ ನಾಟಕಗಳನ್ನು ನೋಡಿ ಮತ್ತಷ್ಟು ಆಕರ್ಷಣೆ ಹೆಚ್ಚಿತಾದರೂ ನಾಟಕದ ಪುಸ್ತಕ ‘ಕಾಸು’ ಕೊಟ್ಟು ಕೊಂಡುಕೊಳ್ಳುವಷ್ಟು ಯೋಗ್ಯವಲ್ಲ ಎಂಬ ಅಪನಂಬುಗೆಯಲ್ಲೇ ಇದ್ದೆ. ಆ ಅಪನಂಬುಗೆ ನಿಧಾನವಾಗಿ ಕ್ಷೀಣಿಸಿ ಶೇಕ್ಸ್ ಪಿಯರ್ ನ ಪುಸ್ತಕಗಳನ್ನು ಕೊಂಡೆನಾದರೂ ಓದಿ ಮುಗಿಸಿದ್ದು ಕಿಂಗ್ ಲಿಯರ್ ನಾಟಕವನ್ನು ಮಾತ್ರ!

          ಬೆಂಗಳೂರಿನಲ್ಲಿ ‘night life’ ಇರಲೇಬೇಕು ಎಂದು ಪ್ರತಿಭಟನೆ ಮಾಡಿದವರು ಜೊತೆ ಗಿರೀಶ್ ಕಾರ್ನಾಡರೂ ಪಾಲ್ಗೊಂಡಿದ್ದಾಗ ಇಂಥ ವ್ಯಕ್ತಿಗೂ ಜ್ಞಾನಪೀಠ ಕೊಟ್ಟುಬಿಟ್ಟಿದ್ದಾರಲ್ಲ ಎಂದು ಹಳಹಳಿಸಿದ್ದೆ. ಹಳಹಳಿಕೆ ಸಂಪೂರ್ಣವಾಗಿ ಮಾಯವಾಗಿದ್ದು ನನ್ನ ವಿದ್ಯಾರ್ಥಿನಿಯೊಬ್ಬಳು ಉಡುಗೊರೆಯಾಗಿ ಕೊಟ್ಟ “Collected Plays volume one” ಪುಸ್ತಕದಿಂದ. ಕಾರ್ನಾಡರೇ ಆಂಗ್ಲಭಾಷೆಯಲ್ಲಿ ಬರೆದಿರುವ ನಾಲ್ಕು ನಾಟಕಗಳ ಪುಸ್ತಕ ಸಂಪುಟವಿದು. ತುಘಲಕ್, ಹಯವದನ, ನಾಗಮಂಡಲ ಮತ್ತು ಬಲಿ. ಪ್ರತಿಯೊಂದು ನಾಟಕವೂ ಶ್ರೇಷ್ಠ. ನಾಟಕಗಳಲ್ಲಿಯೂ ಮನಸ್ಸಿನಂತರಾಳದ ತುಮುಲ, ದುಗುಡ, ಸಂತಸ, ದುರ್ಯೋಚನೆಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬರೆಯುವುದು ಸಾಧ್ಯವೆಂದು ತಿಳಿದಿದ್ದೇ ಗಿರೀಶ್ ಕಾರ್ನಾಡರನ್ನು ಸ್ವಲ್ಪ ಮಟ್ಟಿಗೆ ಓದಿಕೊಂಡ ಮೇಲೆ. ತುಘಲಕ್ ನಾಟಕವನ್ನೊರತುಪಡಿಸಿದರೆ ಉಳಿದ ಮೂರು ನಾಟಕಗಳಲ್ಲಿ ಸಮಾಜದ ದೃಷ್ಟಿಯಲ್ಲಿ ಅನೈತಿಕವೆಂದೆನ್ನಿಸಿಕೊಳ್ಳುವ ಸಂಬಂಧಗಳಿವೆ. ಇದು ಸರಿ ಇದು ತಪ್ಪು ಎಂದು ತೀರ್ಪು ಕೊಡುವ ಗೋಜಿಗೆ ಹೋಗದೆ ಮನದ ವಿಚಾರ ವಿಶದಪಡಿಸುವುದರಲ್ಲಿ ನಾಟಕಗಳು ಸಫಲವಾಗುತ್ತವೆ.

          ನಾಟಕಗಳನ್ನು ಓದಿ ಮುಗಿಸುತ್ತಿದ್ದಂತೆ ಕಾರ್ನಾಡರ ಮತ್ತಷ್ಟು ಪುಸ್ತಕಗಳನ್ನು ಓದಬೇಕೆಂಬ ಹಪಾಹಪಿ ಶುರುವಾಯಿತು. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಗಿರೀಶ್ ಕಾರ್ನಾಡರ ‘ಆಡಾಡತ ಆಯುಷ್ಯ’ದ ಕೆಲಪುಟಗಳು ಪ್ರಕಟವಾಗಿದ್ದವು. ಅವು ಮೂಡಿಸಿದ ಆಸಕ್ತಿಯಿಂದಾಗಿ ‘ಆಡಾಡತ ಆಯುಷ್ಯ’ ಖರೀದಿಸಿ ಓದಿ ಮುಗಿಸಿದ ಮೇಲೆ ಕಾಲ್ಪನಿಕತೆಗಿಂತ ವಾಸ್ತವವೇ ಹೆಚ್ಚು ತಿರುವುಗಳಿಂದ ಕೂಡಿರುತ್ತದೆ ಎಂಬ ಸತ್ಯ ಮತ್ತೊಮ್ಮೆ ಮನಸ್ಸಿಗೆ ವೇದ್ಯವಾಯಿತು. ಕಾರ್ನಾಡರೇ ಹೇಳಿರುವಂತೆ ಇದು ‘ಆತ್ಮಕಥೆಯಲ್ಲ’ “ಆತ್ಮ – ಕತೆಗಳು”. ಕತೆಗಳ ಗುಚ್ಛ. ತನ್ನದೇ ಜೀವನದ ಬಗ್ಗೆ ಬರೆದುಕೊಳ್ಳುವಾಗ ಆತ್ಮರತಿ, ಆತ್ಮಾವಹೇಳನಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಅಂತಹ ಅಪಾಯಗಳಿಂದ ಪಾರಾಗಿರುವ ಕಾರ್ನಾಡರು ಮೂರನೆ ವ್ಯಕ್ತಿಯ ಕತೆಯನ್ನು ನಿರ್ಭಾವುಕವಾಗಿ ಬರೆಯುವಂತೆ ತಮ್ಮ ಜೀವನದ ಬಗ್ಗೆ ಬರೆದುಕೊಂಡಿದ್ದಾರೆ. ತಂದೆ ತಾಯಿಯ ‘ವಿಚಿತ್ರ’ ಸಂಬಂಧದಿಂದ ಪ್ರಾರಂಭವಾಗುವ ಪುಸ್ತಕ ಕಾರ್ನಾಡರ ಮದುವೆಯೊಂದಿಗೆ ಪೂರ್ಣವಾಗುತ್ತದೆ. ಕಾರ್ನಾಡರ ವಿದೇಶಿ ಪ್ರೇಯಸಿಯರು, ‘ಅನೈತಿಕ’ ಸಂಬಂಧಗಳು ಪುಸ್ತಕದ ಮೊದಲ ಓದಿನಲ್ಲಿ ನಮ್ಮನ್ನು ರೋಮಾಂಚಿತಗೊಳಿಸಿ ಆಕರ್ಷಿಸುವುದಾದರೂ ಪುಸ್ತಕದ ವ್ಯಾಪ್ತಿ ಅವುಗಳಿಗಿಂತ ವಿಸ್ತಾರವಾದುದು. ನಾಟಕ, ಸಿನಿಮಾ, ಪುಸ್ತಕಗಳು ಒಂದಿಡೀ ತಲೆಮಾರನ್ನು ಯಾವ ರೀತಿಯಾಗಿ ಪ್ರೇರೇಪಿಸಿ ರೂಪಿಸಿತು ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ.

ಪುಸ್ತಕದ ಒಂದು ಚಿಕ್ಕ ಪಾಠ –
          
 ಆ ತಲೆಮಾರಿನ ವಿದ್ಯಾರ್ಥಿಗಳಲ್ಲಿ ಅಸ್ತಿತ್ವವಾದ [Existentialism] ತುಂಬ ಲೋಕಪ್ರಿಯವಾದ ತತ್ವಪ್ರಣಾಲಿಯಾಗಿತ್ತು. ಅದು ಸಾರ್ತ್ರ, ಕಾಮ್ಯೂ ಮೊದಲಾದ ಫ್ರೆಂಚ್ ಲೇಖಕರ ಪ್ರಭಾವದಿಂದಾಗಿ ಅಂತರರಾಷ್ಟ್ರೀಯ ಚರ್ಚೆಯ ವಿಷಯವಾಗಿತ್ತು. ಅಸ್ತಿತ್ವವಾದದ ಮುಖ್ಯ ಆಕರ್ಷಣೆ, ನನ್ನ ಮಟ್ಟಿಗಂತೂ, ಅದರ ನಾಟಕೀಯತೆಯಲ್ಲಿತ್ತು. ಸಾರ್ತ್ರನ ವಿಶಿಷ್ಟ ಪ್ರಸ್ಥಾನವೇ ಆಗ ಅಸ್ತಿತ್ವವಾದದ ಹೆಸರಿನಲ್ಲಿ ಲೋಕಪ್ರಿಯವಾಗಿದ್ದರೂ ನಾಟಕಕಾರನಾಗಿ ಅವನಷ್ಟೇ ಆಲ್ಬೆರ್ತ್ ಕಾಮ್ಯೂ ಕೂಡ ಪ್ರಭಾವ ಬೀರುತ್ತಿದ್ದ. ನಾನು ‘ತುಘಲಕ್’ ಬರೆಯುವಾಗ ಕಣ್ಣೆದುರಿಗಿಟ್ಟಿಕೊಂಡ ನಾಟಕಗಳಲ್ಲಿ ಅವನ ‘ಕ್ಯಾಲಿಗ್ಯೂಲಾ’ ಕೂಡಾ ಒಂದಾಗಿತ್ತು. ಮೊನ್ನೆ ಆ ನಾಟಕವನ್ನು ಮತ್ತೆ ಓದಲೆತ್ನಿಸಿದಾಗ ಇಷ್ಟು ಯಾಂತ್ರಿಕವಾದ, ಕೃತ್ರಿಮ ನಾಟಕ ನನ್ನನ್ನು ಅಷ್ಟು ಆಕರ್ಷಿಸಿದ್ದಾದರೂ ಹೇಗೆ ಎಂದು ಆಶ್ಚರ್ಯವಾಯಿತು. ನಾನು ಅಭ್ಯಾಸ ಮಾಡುತ್ತಿದ್ದ ಆಕ್ಸಫರ್ಡ್ ತತ್ವಶಾಸ್ತ್ರ ‘ಭಾಷಿಕ ವಿಶ್ಲೇಷಣೆ’ (Linguistic analysis)ದಲ್ಲಿ ಸಿಲುಕಿಕೊಂಡು ಅದರಾಚೆಗೆ ನೋಡುವ ಶಕ್ತಿಯನ್ನೇ ಕಳೆದುಕೊಂಡಿತ್ತು. ಮಾನವ ಎದುರಿಸಬೇಕಾದ ದಾರ್ಶನಿಕ ಸಮಸ್ಯೆಗಳನ್ನೆಲ್ಲ ಭಾಷೆಯ ಕೂಲಂಕಷವಾದ ವಿವರಣೆಯಿಂದ ಬಿಡಿಸಬಹುದು ಎಂದು ಸಾರುವ ಈ ಪ್ರಣಾಲಿಗೆ ಅಸ್ತಿತ್ವವಾದ ವಿರುದ್ಧವಾಗಿದ್ದು, ಅದು ಮನುಷ್ಯನ ಅಸ್ತಿತ್ವ, ಈ ವಿಶ್ವದಲ್ಲಿ ಅವನ ಸ್ಥಾನಮಾನ – ಭವಿತವ್ಯ, ಅದಕ್ಕೂ ವಿಶೇಷವಾಗಿ ಮಾನವನಿಗೂ ದೇವರಿಗೂ ಇರುವ ಸಂಬಂಧ ಇವುಗಳನ್ನು ಕುರಿತು ಧೈರ್ಯವಾಗಿ ನಡಿಸುವ ಚರ್ಚೆ ತುಂಬ ಕ್ರಿಯಾಶೀಲವಾಗಿತ್ತು. ತನ್ನ ಅಸ್ತಿತ್ವದ ಅಸಂಬದ್ಧತೆಯನ್ನು ಎದುರಿಸಿ, ತಾನು ಏನಾಗಬೇಕು ಎಂದು ನಿರ್ಧರಿಸಿ ಹಾಗೆ ತನ್ನನ್ನು ರೂಪಿಸಿಕೊಳ್ಳುವ ಆಯ್ಕೆ ಹಾಗೂ ಶಕ್ತಿ ಮನುಷ್ಯನಲ್ಲಿದೆ ಎಂದು ಸಾರುವ ಈ ಪ್ರಣಾಲಿಗೆ ಒಂದು ನೈತಿಕ ಆಯಾಮವೂ ಇತ್ತು”

          ಆಡಾಡತ ಆಯುಷ್ಯದ ಮುಂದುವರೆದ ಭಾಗವಾಗಿ ‘ನೋಡನೋಡತ ದಿನಮಾನ’ ಬರೆಯುವುದು ಗಿರೀಶರ 
ಇಂಗಿತ. ಅದು ಬೇಗ ನೆರವೇರಲಿ.


No comments:

Post a Comment