Apr 28, 2017

ಮುಸ್ಲಿಂ ಯುವ ಸಮಾವೇಶ

ಅನುಮಾನಿತ, ಅವಮಾನಿತ ಸಮುದಾಯದ ನೋವು ನಲಿವುಗಳ ಕುರಿತು ಚರ್ಚೆ, ಸಂವಾದ

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಹದಿನೈದರಷ್ಟಿರುವ ಮುಸ್ಲಿಂ ಸಮುದಾಯ ಇಂದು ಬಹುದೊಡ್ಡ ಬಿಕ್ಕಟ್ಟಿಗೆ, ಸಂಕಟಕ್ಕೆ ಗುರಿಯಾಗಿದೆ. ಸಮುದಾಯದ ಒಳಗೆ, ಹೊರಗೆ ಎರಡೂ ಕಡೆಗಳಲ್ಲಿ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಆರ್ಥಿಕ ಸ್ಥಿತಿಗತಿಗಳಲ್ಲಿ ಮುಸ್ಲಿಮರು ದಲಿತ ಸಮುದಾಯ ಕ್ಕಿಂತಲೂ ಹಿಂದುಳಿದಿದ್ದಾರೆ ಎಂದು ಜಸ್ಟಿಸ್ ಸಾಚಾರ್ ಸಮಿತಿ ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ. 

ಸಾಮಾಜಿಕ ತಾರತಮ್ಯದಿಂದ ನರಳುತ್ತಿರುವ ಮುಸ್ಲಿಮರು ಸರಕಾರಗಳ ಅನಾದರಕ್ಕೆ ಗುರಿಯಾಗಿದ್ದಾರೆ. ಮುಸ್ಲಿಮರು ವಾಸಿಸುವ ಬಹುತೇಕ ಪ್ರದೇಶಗಳು ಕೊಳಗೇರಿಯಂತಾಗಿದೆ. ಸ್ಥಳೀಯ ಆಡಳಿತಗಳು ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ದಿವ್ಯ ನಿರ್ಲಕ್ಷ್ಯ ತೋರಿಸುವುದು ದೇಶದೆಲ್ಲೆಡೆ ಕಣ್ಣಿಗೆ ರಾಚುತ್ತದೆ. ಕೇಂದ್ರ ರಾಜ್ಯ ಸರಕಾರಗಳ ಬಜೆಟ್‍ಗಳಲ್ಲಿ ಮುಸ್ಲಿಮರನ್ನು ನಿರ್ಲಕ್ಷಿಸಲಾಗುತ್ತಿದೆ.
ಒಂದೆಡೆ ವ್ಯವಸ್ಥೆಯ ನಿರ್ಲಕ್ಷ್ಯಕ್ಕೊಳಗಾಗಿ ಹಸಿವು, ಬಡತನದಿಂದ ನರಳುತ್ತಿರುವ ಮುಸ್ಲಿಮರು ಇನ್ನೊಂದೆಡೆ ಹೆಚ್ಚುತ್ತಿರುವ ಕೋಮುವಾದದ ಬಲಿಪಶುಗಳಾಗಿದ್ದಾರೆ. 

ಕಳೆದ ಮೂರುದಶಕಗಳಲ್ಲಿ ಇಂಡಿಯಾದ ರಾಜಕಾರಣದ ಬಹುಮುಖ್ಯ ಸಿದ್ಧಾಂತವೇ ಆಗಿ ಹೋಗಿರುವ ಕೋಮುವಾದ ಮುಸ್ಲಿಮರನ್ನೇ ಗುರಿಯಾಗಿಸಿದೆ. ಬಾಬ್ರಿ ಮಸೀದಿ ವಿವಾದದಿಂದ ಆರಂಭಗೊಂಡ ಕೋಮುವಾದದ ಜೈತ್ರ ಯಾತ್ರೆ ಇಂದು ಅದರ ಅತ್ಯುನ್ನತ ಘಟ್ಟವನ್ನು ತಲುಪಿದೆ. ಕರ್ನಾಟಕ ರಾಜ್ಯದಲ್ಲೇ ಹುಬ್ಬಳ್ಳಿ ಈದ್ಗಾ, ಬಾಬಾಬುಡನ್ ಗಿರಿ, ಗೋಹತ್ಯೆ, ಲವ್‍ಜಿಹಾದ್ ಮೊದಲಾದ ವಿಷಯಗಳನ್ನು ಎತ್ತಿಕೊಂಡು ಮುಸ್ಲಿಮರನ್ನು ಗುರಿಯಾಗಿಸಿದ ಕೋಮುಶಕ್ತಿಗಳು ಮುಸ್ಲಿಮರನ್ನು ಎರಡನೇ ದರ್ಜೆಯ ಮಟ್ಟಕ್ಕೆ ಇಳಿಸಲು ನೋಡುತ್ತಿವೆ. ನಿರಂತರ ದಾಳಿ, ಅಪಪ್ರಚಾರದಿಂದ ಕುಗ್ಗಿಹೋಗಿರುವ ಸಮುದಾಯ ಒಂದೆಡೆ ಭಯ, ಇನ್ನೊಂದೆಡೆ ಅವಮಾನಗಳಿಂದ ಕುಗ್ಗಿ ತನ್ನ ಹಕ್ಕುಗಳ ಬಗ್ಗೆ ಧ್ವನಿ ಎತ್ತುವುದನ್ನು ಮರೆತುಬಿಟ್ಟಿದೆ. ಕೋಮುವಾದದ ದಾಳಿಗಳಿಂದ ರಕ್ಷಣೆ, ಪೊಲೀಸರ ಮತ್ತು ಸಮಾಜದ ಅನುಮಾನದ ನೋಟದಿಂದ ಬಿಡುಗಡೆಯನ್ನಷ್ಟೇ ಸರಕಾರಗಳಿಂದ ನಿರೀಕ್ಷಿಸುವಷ್ಟರ ಮಟ್ಟಿಗೆ ಸಮುದಾಯದ ಧ್ವನಿ ಉಡುಗಿಹೋಗಿದೆ. 

ಇಂತಹ ಅಸುರಕ್ಷಿತ ಸಂದರ್ಭದ ಉಪ ಉತ್ಪನ್ನ ಎಂಬಂತೆ ಮುಸ್ಲಿಮ್ ಯುವಜನರ ಹತಾಶೆಯನ್ನು ದುರ್ಬಳಕೆ ಮಾಡುವ ತೀವ್ರವಾದಿಗಳ ಜಾಲಕ್ಕೆ ಸಿಲುಕಿದ ಬೆರಳೆಣಿಕೆಯ ಯುವಜನರನ್ನೇ ಮುಂದಿಟ್ಟು ಹಲವಾರು ಅಮಾಯಕ ಯುವಜನರನ್ನು ಭಯೋತ್ಪಾದನೆಯ ಹೆಸರಲ್ಲಿ ಬಂಧಿಸಿ ವಿಚಾರಣೆಯಿಲ್ಲದೆ ವರ್ಷಗಟ್ಟಲೆ ಜೈಲಿನಲ್ಲಿ ಕೂಡಿ ಹಾಕಲಾಗುತ್ತಿದೆ.
ಇದೆಲ್ಲದರಿಂದ ಮುಸ್ಲಿಂ ಸಮುದಾಯದ ಸ್ಥಿತಿ ಗಂಭೀರ ಬಿಕ್ಕಟ್ಟಿಗೆ ಸಿಲುಕಿದೆ. ದೇಶದ ರಾಜಕೀಯ, ಸಾಮಾಜಿಕ ಸಂದರ್ಭದ ಈ ಎಲ್ಲಾ ಬೆಳವಣಿಗೆಗಳು ಬಲಿಪಶು ಸಮುದಾಯವಾದ ಮುಸ್ಲಿಮರನ್ನು ಅವಮಾನಿತ, ಅನುಮಾನಿತ ಸಮುದಾಯವಾಗಿ ನಿರೂಪಿಸಿದೆ.

ಇಂಥ ವಿಷಮ ಸ್ಥಿತಿಯಲ್ಲಿ ಸಮುದಾಯದ ಸವಾಲುಗಳ ಮೇಲೆ ಬೆಳಕು ಚೆಲ್ಲಬೇಕು; ನೋವು ನಲಿವುಗಳ ವಾಸ್ತವಗಳನ್ನು ಸಮಾಜದ ಮುಂದಿಡಬೇಕು; ಸಮುದಾಯದ ಬಗೆಗಿನ ಪೂರ್ವಾಗ್ರಹಗಳನ್ನು ಸಂಶಯಗಳನ್ನು ದೂರೀಕರಿಸಲು ಯತ್ನಿಸಬೇಕು; ಮುಸ್ಲಿಂ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ, ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮ ನ್ಯಾಯಯುತ ಪಾಲನ್ನು ಪಡೆಯುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ನಡೆಯಬೇಕು - ಎಂಬ ಆಶಯದೊಂದಿಗೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್‍ಐ ಎರಡು ದಿನಗಳ 'ಮುಸ್ಲಿಂ ಯುವ ಸಮಾವೇಶ’ ಹಮ್ಮಿಕೊಂಡಿದೆ.

ರಾಜ್ಯದ ಮುಸ್ಲಿಂ ಸಮುದಾಯ ಹಾಗೂ ಇತರೆ ಬರಹಗಾರರು, ಚಿಂತಕರು, ಸಾಹಿತಿಗಳು ಎರಡು ದಿನಗಳ ಕಾಲ ನಡೆಯುವ ಯುವ ಸಮಾವೇಶದಲ್ಲಿ ಸಮುದಾಯದ ನಿಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದ್ದಾರೆ, ವಿಚಾರ ಮಂಡಿಸಲಿದ್ದಾರೆ. 

ಮುಸ್ಲಿಂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಸಮುದಾಯ ನಡೆಸಬೇಕಾದ ಹೋರಾಟಗಳ ದಿಕ್ಕು ದೆಸೆ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

ದಿನಾಂಕ : ಮೇ 14, 15 
ಸ್ಥಳ: ಶಾಂತಿ ನಿಲಯ ಬಲ್ಮಠ, ಮಂಗಳೂರು

No comments:

Post a Comment