Jan 12, 2017

ಹತ್ತಿರವಾಗುತ್ತಿರುವ ನಿತೀಶ್ ಕುಮಾರ್ ಮತ್ತು ನರೇಂದ್ರಮೋದಿ: ರಾಜಕೀಯ ಮಾಗುವಿಕೆಯೊ? ಅವಕಾಶವಾದಿತನವೊ?

ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ (ಸಾಂದರ್ಭಿಕ ಚಿತ್ರ)
ಕು.ಸ.ಮಧುಸೂದನ ರಂಗೇನಹಳ್ಳಿ
ಬಹುಶ: ಶಕ್ತಿರಾಜಕಾರಣದಲ್ಲಿ ಅಧಿಕಾರದ ಕುರ್ಚಿಗೆ ಮಾತ್ರ ಅಂತಹ ಅದ್ಬುತ ಶಕ್ತಿ ಇರುವಂತೆ ಕಾಣುತ್ತದೆ. ವಿರೋಧಪಕ್ಷದಲ್ಲಿದ್ದಾಗ ಬೆಂಕಿ ಉಗುಳುತ್ತಿದ್ದ ನಾಯಕರು ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಪಡೆದ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ನಿರಂತರವಾಗಿ ಅದು ತಮ್ಮ ಕೈತಪ್ಪಿ ಹೋಗದಂತೆ ನೋಡಿಕೊಳ್ಳಲು ರಾಜಕೀಯವಾಗಿ ರಾಜಿಯಾಗುತ್ತ ಹೋಗುತ್ತಾನೆ. ಅದನ್ನು ರಾಜಕೀಯ ಪಂಡಿತರು ರಾಜಕಾರಣಿಯೊಬ್ಬನ ವ್ಯಕ್ತಿತ್ವದ ಮಾಗುವಿಕೆ ಎನ್ನುತ್ತಾರೆ. ಆದರೆ ಸಾಮಾನ್ಯರ ಮಟ್ಟಿಗೆ ಅದು ಅವಕಾಶವಾದಿತನ ಮಾತ್ರ. ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವೇ ಅಂತಿಮವಾದ ಗುರಿಯಾಗಿರುವುದರಿಂದ ಇಂತಹ ಮಾಗುವಿಕೆಗಳಿಗೆ ಅಚ್ಚರಿ ಪಡುವಂತದ್ದೇನಿಲ್ಲ. ರಾಜಕೀಯದಲ್ಲಿ ಇವತ್ತಿನ ಮಿತ್ರರುಗಳು ನಾಳಿನ ಶತ್ರುಗಳಾಗುವಂತೆ, ಇವತ್ತಿನ ಶತ್ರುಗಳೂ ನಾಳೆ ಮಿತ್ರರುಗಳಾಗಬಹುದಾದ ಸಾಧ್ಯತೆಯೂ ಇದೆ. ಇಂಡಿಯಾದ ರಾಜಕಾರಣದ ವೈಶಿಷ್ಟ್ಯತೆ ಇರುವುದೆ ಇಂತಹ ಅಸಾದ್ಯಗಳನ್ನು ಸಾದ್ಯವಾಗಿಸುವಲ್ಲಿ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮತ್ತು ಬಿಹಾರದ ಮುಖ್ಯಮಂತ್ರಿಗಳೂ ಆದ ಶ್ರೀ ನಿತೀಶ್ ಕುಮಾರ್ ಅವರು. ಕೆಲವೇ ತಿಂಗಳುಗಳ ಹಿಂದೆ ಹಾವು ಮುಂಗುಸಿಗಳಂತೆ ಇದ್ದ ಮೋದಿಯವರು ಮತ್ತು ನಿತೀಶ್ ಅವರು ಇದೀಗ ತಮ್ಮ ವೈಮನಸ್ಸುಗಳನ್ನು ಮರೆತು ಬಿಟ್ಟವರಂತೆ ಪರಸ್ಪರರನ್ನು ಹೊಗಳುತ್ತ ತಮ್ಮ ರಾಜಕೀಯದ ದಾಳಗಳನ್ನು ಉರುಳಿಸುತ್ತಿದ್ದಾರೆ.
ನಿಮಗೆ ನೆನಪಿರಬಹುದು, 2010 ರ ಬಿಹಾರದ ವಿದಾನಸಭಾ ಚುನಾವಣೆಯ ವೇಳೆ ಬಾಜಪ ಮತ್ತು ಸಂಯುಕ್ತಜನತಾದಳಮೈತ್ರಿ ಪಕ್ಷಗಳಾಗಿದ್ದು ಅಂದಿನ ಚುನಾವಣಾ ಪ್ರಚಾರಕ್ಕೆ ಬಾಜಪದ ನಾಯಕರಾಗಿದ್ದ ಮತ್ತು ಅಂದಿನ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಯವರು ಬಿಹಾರಕ್ಕೆ ಕಾಲಿಡಬಾರದೆಂಬ ಷರತ್ತನ್ನು ನಿತೀಶ್ ಬಾಜಪಕ್ಕೆ ವಿದಿಸಿದ್ದರು. ಹೀಗೆ ಷರತ್ತು ವಿಧಿಸುವಾಗ ನಿತೀಶ್ ಅವರ ಮನಸಲ್ಲಿ ಇದ್ದುದು ಗುಜರಾತಿನ ಕೋಮುಗಲಭೆಗಳು ಮತ್ತು ಅದರಿಂದ ಕಳಂಕಿತರಾಗಿದ್ದ ಮೋದಿಯವರು. ಮೋದಿಯವರನ್ನು ವಿರೋಧಿಸುವುದರಿಂದ ಜಾತ್ಯಾತೀತ ಹಣೆಪಟ್ಟಿ ತಮಗೆ ಅಂಟಿಕೊಳ್ಳಬಹುದು ಮತ್ತು ಅದರಿಂದ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಬಾವನೆ ಮಾತ್ರ. ಒಂದು ಹಂತದಲ್ಲಿ ಅವರ ಆ ಆಲೋಚನೆ ಯಶಸ್ವಿಯೂ ಆಯಿತು. ಆ ಚುನಾವಣಾ ಪ್ರಚಾರಕ್ಕೆ ಮೋದಿಯವರು ಬಿಹಾರದತ್ತ ಸುಳಿಯಲಿಲ್ಲ. ಆದರೂ ನಿತೀಶರ ಸಂಯುಕ್ತ ಜನತಾದಳ ಮತ್ತು ಬಾಜಪದ ಮೈತ್ರಿಕೂಟ ಬಹುಮತ ಪಡೆಯಲು ಯಶಸ್ವಿಯಾಯಿತು. ಅಷ್ಟಲ್ಲದೆ 2008ರ ಬಿಹಾರದ ಪ್ರವಾಹ ಪೀಡಿತರ ಪರಿಹಾರ ನಿಧಿಗೆ ಗುಜರಾತ್ ಸರಕಾರ ನೀಡಿದ್ದ ದೇಣಿಗೆಯನ್ನು ನಿತೀಶ್ ಮುಲಾಜಿಲ್ಲದೆ ಹಿಂದಿರುಗಿಸಿದ್ದರು. ನಿಚ್ಚಳ ಬಹುಮತ. ತದನಂತರವೂ ನಿತೀಶ್ ಮೋದಿಯವರನ್ನು ಸತತವಾಗಿ ಟೀಕೆಗೊಳಪಡಿಸುತ್ತಲೇ ಬಂದಿದ್ದರು. 

ನಂತರ ಎನ್.ಡಿ.ಎ. ನರೇಂದ್ರಮೋದಿಯವರನ್ನು ತನ್ನ ಮುಂದಿನ ಪ್ರದಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಇದೇ ನಿತೀಶ್ ಜಾತ್ಯಾತೀತ ಶಕ್ತಿಗಳ ಮೈತ್ರಿಯ ಬಗ್ಗೆ ಮಾತಾಡುತ್ತ ಮೋದಿಯವರನ್ನು ವಿರೋಧಿಸಿದ್ದರು. ತದನಂತರ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಬಾಜಪ ಮೈತ್ರಿಕೂಟ ನರೇಂದ್ರಮೋದಿಯವರನ್ನು ಪ್ರದಾನಿಯನ್ನಾಗಿ ಮಾಡಿತ್ತು. ಈ ವೇಳೆಗಾಗಲೆ ಬಿರುಕು ಬಿಟ್ಟ ಜನತಾದಳ ಮತ್ತು ಬಾಜಪದ ಮೈತ್ರಿಕೂಟ ಬಿಹಾರದಲ್ಲಿ ತಿಂಗಳುಗಳ ಕಾಲ ರಾಜಕೀಯ ಅನಿಶ್ಚಯತೆಯನ್ನು ಉಂಟು ಮಾಡಿತ್ತು. ನಂತರ ನಡೆದ 2015ರ ವಿದಾನಸಭಾ ಚುನಾವಣೆಯಲ್ಲಿ ನಿತೀಶರ ಸಂಯುಕ್ತ ಜನತಾದಳ, ಲಾಲೂಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೇಸ್ ಒಟ್ಟಾಗಿ ಸೇರಿಕೊಂಡು ಮಹಾಮಮೈತ್ರಿ ಒಂದನ್ನು ರಚಿಸಿಕೊಂಡು ಚುನಾವಣೆ ಎದುರಿಸಿದ್ದವು. ಆಗ ಬಿಹಾರದಲ್ಲಿ ಬಾಜಪ ಹೀನಾಯವಾಗಿ ಸೋಲನ್ನಪ್ಪಿಕೊಳ್ಳಬೇಕಾಯಿತು. ಅದುವರೆಗು ಬಿಹಾರಕ್ಕೆ ಸೀಮಿತವಾಗಿದ್ದ ನಿತೀಶರ ಹೆಸರು ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡತೊಡಗಿತ್ತು. ಬಾಜಪವನ್ನು ಎದುರಿಸಲು ಕಾಂಗ್ರೇಸ್ ಸೇರಿದಂತೆ ಉಳಿದೆಲ್ಲ ವಿರೋಧಪಕ್ಷಗಳು ಮಹಾಮೈತ್ರಿಯೊಮದನ್ನು ಮಾಡಿಕೊಂಡು ನಿತೀಶರನ್ನು ಅದರ ನಾಯಕರನ್ನಾಗಿ ಬಿಮಬಿಸಬೇಕೆಂಬ ಕೂಗು ಎಲ್ಲಕಡೆಗಳಿಂದಲೂ ಕೇಳಿ ಬರತೊಡಗಿತ್ತು. ಇಂತಹದೊಂದು ಮೈತ್ರಿಕೂಟ ಸಾದ್ಯವಾಗುವುದೇ ಆದಲ್ಲಿ ಅದನ್ನು ಮುನ್ನಡೆಸಲು ನಿತೀಶ್ ಕುಮಾರ್ ಅವರೇ ಸರಿಯಾದ ವ್ಯಕ್ತಿ ಎಂಬುದನ್ನು ಈ ಲೇಖಕನೂ ಹಿಮದಿನ ಲೇಖನಗಳಲ್ಲಿ ಬರೆದದ್ದು ಉಂಟು. ನಿತೀಶರೂ ಇದಕ್ಕೆ ಪೂರಕ ಎಂಬಂತೆ ನರೇಂದ್ರ ಮೋದಿಯವರ ಕೇಂದ್ರ ಸರಕಾರವನ್ನು ಕಟುವಾಗಿ ಟೀಕಿಸಿ ಸುದ್ದಿಯಾಗುತ್ತಲೆ ಹೋದರು. ಕಳೆದ ಎರಡೂವರೆ ವರ್ಷಗಳಲ್ಲಿ ಸಮಯ ಸಿಕ್ಕಾಗಲೆಲ್ಲ ಮೋದಿಯವರು ನಿತೀಶ್ ಅವರನ್ನು, ನಿತೀಶ್ ಮೋದಿಯವರನ್ನು ವಿರೋಧಿಸುವ ಯಾವ ಅವಕಾಶವನ್ನೂ ಕಳೆದುಕೊಳ್ಳಲಿಲ್ಲ.

ಆದರೆ ಕಳೆದ ಎಂಟು ತಿಂಗಳಿನಲ್ಲಿ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಬದಲಾದಂತೆ ಕಾಣುತ್ತಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಪಾಟ್ನಾದ ಉಚ್ಚ ನ್ಯಾಯಾಲಯದ ಸಮಾರಂಭ ಒಂದಕ್ಕೆ ಬಂದಿದ್ದ ಮೋದಿಯವರು ಸರಕಾರಿ ಶಿಷ್ಟಾಚಾರಗಳನ್ನು ಬದಿಗೆ ತಳ್ಳಿ ನಿತೀಶರಿದ್ದ ಕಡೆ ಹೋಗಿ ಅವರನ್ನು ಮಾತಾಡಿಸಿದ್ದರು. ಇದಕ್ಕೆ ಪೂರಕವಾಗಿ ನಿತೀಶ್ ಅವರು ಅದುವರೆಗು ಬಿಹಾರಕ್ಕೆ ಕೇಳುತ್ತಿದ್ದ ವಿಶೇಷ ಅನುದಾನದ ಬಗ್ಗೆ ಮಾತಾಡದೆ ಮೌನವಾಗಿ ಉಳಿದಿದ್ದರು. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಅಲ್ಲಿಯವರೆಗು ಕೇಂದ್ರ ಸರಕಾರ ಬಿಹಾರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆಯೆಂದು ಮೋದಿಯವರನ್ನು ಟೀಕಿಸುತ್ತಿದ್ದವರು ಆ ಸಭೆಯಲ್ಲಿ ಅದರ ಬಗ್ಗೆ ಮಾತಾಡದೆ ಮೌನವಾಗಿ ಉಳಿದಿದ್ದು ರಾಷ್ಟ್ರ ರಾಜಕೀಯದಲ್ಲಿ ಮಹತ್ತರ ಸುದ್ದಿಯಾಗಿತ್ತು. ಯಾಕೆಂದರೆ 2015ರ ಚುನಾವಣೆಯ ವೇಳೆಯಲ್ಲಿ ನಿತೀಶರು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಇದೇ ಇದೇ ವಿಶೇಷ ಪ್ಯಾಕೇಜನ್ನು ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸಿದ್ದರು. ಮೋದಿ ಮತ್ತು ನಿತೀಶರ ನಡುವಿನ ಜಟಾಪಟಿಯ ವೇಗ ಕಡಿಮೆಯಾಗುತ್ತಿದೆ ಎಂಬುದಕ್ಕೆ ಅದು ಸಾಕ್ಷಿಯಾಗಿತ್ತು. ಇಷ್ಟಲ್ಲದೆ ಮೋದಿಯವರ ಆಡಳಿತವನ್ನು ನಿತೀಶ್ ಸೂಕ್ಷ್ಮವಾಗಿ ಹೊಗಳಿದ್ದರು.

ಈ ನಡುವೆ ನವೆಂಬರ್ ಎಂಟರಂದು ಪ್ರದಾನಿಯವರು ನೋಟ್ ಬ್ಯಾನ್ ಘೋಷಿಸಿದ ಕೂಡಲೆ ಅದನ್ನು ವಿರೋಧಿಸಿದ ವಿರೋಧಪಕ್ಷಗಳಿಗೆ ಅಚ್ಚರಿಯಾಗುವಂತೆ ನಿತೀಶ್ ಕುಮಾರ್ ಸದರಿ ನಿರ್ದಾರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದರು. ಅಷ್ಟಲ್ಲದೆ ನಂತರ ದೆಹಲಿಯ ಸಂಸತ್ತಿನ ಒಳಗೆ ಮತ್ತು ಹೊರಗೆ ನೋಟು ಬ್ಯಾನ್ ವಿರೋಧಿಸಿ ವಿರೋಧಪಕ್ಷಗಳು ನಡೆಸಿದ ಯಾವ ಪ್ರತಿಭಟನೆಯಲ್ಲು ಸಂಯುಕ್ತಜನತಾದಳ ಬಾಗವಹಿಸದೆ ದೂರ ಉಳಿದು ವಿರೋಧಪಕ್ಷಗಳ ಒಳಗಿನ ತಳಮಳಕ್ಕೆ ಕಾರಣರಾದರು. ಕಳೆದ ವಾರವಷ್ಟೆ ಪಟ್ನಾದಲ್ಲ್ಲಿ ನಡೆದ ಗುರುಗೋವಿಂದ್ ಸಿಂಗ್ ಅವರ350ನೆ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಬಾಗವಹಿಸಿದ ಮೋದಿ ಮತ್ತು ನಿತೀಶ್ ಆತ್ಮೀಯ ಸ್ನೇಹಿತರಂತೆ ಪಿಸುಗುಟ್ಟುತ್ತ ಮಾತನಾಡುತ್ತಿದ್ದುದು ಆಡಳಿತ ಮತ್ತು ವಿರೋಧಪಕ್ಷಗಳಲ್ಲಿಯೂ ಸಂಚಲನ ಉಂಟು ಮಾಡಿತ್ತು. ಈ ಸಮಯದಲ್ಲಿ ಮಾತಾಡಿದ ನಿತೀಶ್ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಶಸ್ದವಿಯಾಗಿ ಜಾರಿಗೆ ತಂದಿದ್ದ ಪಾನನಿಷೇಧವನ್ನು ಮನಸಾರೆ ಹೊಗಳಿ, ತಾವು ಬಿಹಾರದಲ್ಲಿ ಪಾನನಿಷೇಧವನ್ನು ಜಾರಿಗೆ ತರುವಲ್ಲಿ ಮೋದಿಯವರೆ ಸ್ಪೂರ್ತಿ ಎನ್ನುವಂತಹ ಮಾತನ್ನಾಡಿದ್ದರು. ಮೋದಿಯವರ ಈ ನಡೆ ಇಡಿ ರಾಷ್ಟ್ರಕ್ಕೆ ಮಾದರಿಯಾಗಬೇಕೆಂದು ಸಹ ಕರೆಕೊಟ್ಟರು. ನಂತರ ಮಾತನಾಡಿದ ಮೋದಿಯವರು ಸಹ ನಿತೀಶ್ ಅವರ ಕಾರ್ಯಕ್ರಮಗಳನ್ನು ಮೆಚ್ಚುತ್ತ ಹಿಂದುಳಿದ ವರ್ಗಗಳ ಅವರ ಕಾಳಜಿಯನ್ನು ಕೊಂಡಾಡಿ ಈ ವಿಚಾರದಲ್ಲಿ ಬಿಹಾರದ ಜನತೆ ನಿತೀಶರನ್ನು ಬೆಂಬಲಿಸಬೇಕೆಂದು ಹೇಳಿದ್ದರು. ಈ ಬೆಳವಣಿಗೆಗಳಿಂದ ವಿರೋಧ ಪಕ್ಷಗಳು ಸಹಜವಾಗಿಯೇ ಗೊಂದಲಕ್ಕೆ ಈಡಾಗಿದ್ದಾರೆ.

ನಿತೀಶರ ಈ ಬದಲಾವಣೆಗೆ ಮೂಲಕಾರಣ ಮೈತ್ರಿಕೂಟದ ಅವರ ಸರಕಾರದ ಪಾಲುದಾರ ಪಕ್ಷಗಳು. ನಿತೀಶರ ಸರಕಾರದಲ್ಲಿ ಮಂತ್ರಿಗಳಾಗಿರುವ ಲಲ್ಲೂ ಪ್ರಸಾದ್ ಅವರ ಪುತ್ರರುಗಳು ಸರಕಾರದ ಪ್ರತಿ ವಿಚಾರದಲ್ಲಿಯು ಮೂಗು ತೋರಿಸುತ್ತ ನಿತೀಶರ ಆತಂಕಕ್ಕೆ ಕಾರಣವಾಗುತ್ತಿದ್ದಾರೆ. ಜೊತೆಗೆ ಲಲ್ಲೂ ಪ್ರಸಾದ್ ಯಾದವರನ್ನು ಸಮಾದಾನ ಪಡಿಸಲು ನಿತೀಶರು ಕೆಲವು ಅಪ್ರಿಯ ನಿರ್ಣಯಗಳನ್ನೂ ತೆಗೆದುಕೊಳ್ಳುವ ಅನಿವಾರ್ಯತೆಯು ಬಂದಿದೆ. ರಾಷ್ಟ್ರೀಯ ಜನತಾದಳದ ನಾಯಕರು ಮತ್ತು ಕಾರ್ಯಕರ್ತರುಗಳ ಅಕ್ರಮ ಚಟುವಟಿಕೆಗಳು ಮತ್ತು ಅವರ ವಿರುದ್ದ ಆಪಾದನೆಗಳಿಗೆ ನಿತೀಶರೆ ಉತ್ತರ ಕೊಡಬೇಕಾಗಿದ್ದು, ಕ್ರಮೇಣ ಇದು ಬಿಹಾರದ ಜನತೆಯಲ್ಲಿ ನಿತೀಶರ ಮೇಲಿರಬಹುದಾದ ವಿಶ್ವಾಸವನ್ನು ಕಡಿಮೆಗೊಳಿಸಬಹುದೆಂಬ ಭಯ ನಿತೀಶರಿಗಿದೆ. ಅದೂ ಅಲ್ಲದೆ ಮುಂದಿನ ಚುನಾವಣೆಯ ಹೊತ್ತಿಗೆ ಇದೇ ಮೈತ್ರಿಕೂಟವನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವುದು ಕಷ್ಟವೆಂಬುದು ನಿತೀಶರಿಗೆ ಅರ್ಥವಾಗಿದೆ. ಹೀಗಾಗಿ ಅವರು ತಮ್ಮದೇ ಆದ ಹೊಸದೊಂದು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಹೀಗಾಗಿಯೇ ಅವರು ಈ ವರ್ಷ ನಡೆಯಲಿರುವ ಪಂಚ ರಾಜ್ಯ ಚುನಾವಣೆಗಳ ಬಗ್ಗೆ ವಿರೋಧಪಕ್ಷಗಳ ಜೊತೆ ಯಾವುದೆ ಗಂಬೀರ ಮಾತುಕತೆ ನಡೆಸುತ್ತಿಲ್ಲ. ಬಿಹಾರಿ ವಲಸಿಗರು ಹೆಚ್ಚಿರುವ ಪಂಜಾಬಿನ ಕಡೆಗು ಅವರು ಗಮನ ಹರಿಸುತ್ತಿಲ್ಲ. ಮುಂದಿನ ಚುನಾವಣೆ ವೇಳೆಗೆ ತಮಗೆ ಈಗಿರುವ ಮತಬ್ಯಾಂಕಿನ ಜೊತೆಗೆ ಹೊಸದೊಂದು ನವಸಾಕ್ಷರಸ್ಥರ ಮತಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ದಿಕ್ಕಿನಲ್ಲಿ ನಿತೀಶ್ ಯೋಚಿಸುತ್ತಿದ್ದಾರೆ. ಹೀಗಾಗಿಯೇ ಪಕ್ಕದ ಉತ್ತರಪ್ರದೇಶದ ಚುನಾವಣೆಗಳ ಕುರಿತಂತೆಯೂ ಅವರು ತೀರಾ ಆಸಕ್ತಿಯನ್ನೇನು ತೋರಿಸುತ್ತಿಲ್ಲ. ಅದೇ ರೀತಿ ಮೋದಿಯವರಿಗು 2019ರ ವೇಳೆಗೆ ತಮಗಿರುವ ಬೆಂಬಲವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಇಚ್ಚೆಯಿದ್ದಂತೆ ನಿತೀಶರಂತಹ ಜನಪರವಾದ, ಜನಪ್ರಿಯ ಮುಖ್ಯಮಂತ್ರಿಯ ಬೆಂಬಲವನ್ನು ಗಳಿಸಿಕೊಂಡಲ್ಲಿ ಬಿಹಾರವನ್ನು ಗೆಲ್ಲುವುದರ ಜೊತೆಗೆ ಇತರೇ ಸಣ್ಣಪುಟ್ಟ ರಾಜ್ಯಗಳನ್ನೂ ವಶಪಡಿಸಿಕೊಂಡು ಕಾಂಗ್ರೇಸ್ಸಿನ ಪುನಶ್ಚೇತನದ ಆಸೆಗೆ ತಣ್ಣೀರೆರಚಲು ಮೋದಿಯವರು ಬಯಸುತ್ತಿದ್ದಾರೆ. ಹೀಗಾಗಿಯೇ ಅವರು ದೇಶದ ಕಾಂಗ್ರೇಸ್ಸೇತರ ಮುಖ್ಯಮಂತ್ರಿಗಳನ್ನು ಓಲೈಸುವತ್ತ ಹೆಜ್ಜೆ ಇಡುತ್ತಿದ್ದಾರೆ. ಈ ನಿಟ್ಟಿನಲ್ಲಿ ತಮಿಳುನಾಡು, ಒರಿಸ್ಸಾ, ಮತ್ತು ಈಶಾನ್ಯಭಾಗದ ಪುಟ್ಟ ರಾಜ್ಯಗಳಲ್ಲಿ ಹೆಚ್ಚಿನ ಬೆಂಬಲ ಗಳಿಸಲು ಪ್ರಯತ್ನ ನಡೆಸಿದ್ದಾರೆ. ಇಈಗ ಕೋಮುವಾದದ ವಿರೋಧಿ ನೀತಿಯೊಂದನ್ನೇ ಇಟ್ಟುಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸಿ ಗೆಲ್ಲುವುದು ಕಷ್ಟವೆಂಬುದು ನಿತೀಶರಿಗೆ ಮನವರಿಕೆಯಾಗಿರುವಂತೆ, ತಮ್ಮ ಮತಾಂಧ ಮತ್ತು ಅಭಿವೃದ್ದಿಯ ಹಳೆಯ ಘೋಷಣೆಗಳನ್ನು ಹೊತ್ತು 2019ಕ್ಕೆ ಮತ್ತೆ ಅಧಿಕಾರ ಹಿಡಿಯುವುದು ಕಷ್ಟಸಾದ್ಯವೆಂದು ಮೋದಿಯವರಿಗು ಅನಿಸಿದಂತಿದೆ. ಬಾಜಪದ ಸಾಂಪ್ರದಾಯಿಕ ಮತಬ್ಯಾಂಕಿನ ಬಲ ಒಂದರಿಂದಲೇ ಗೆಲುವು ಅಸಾದ್ಯವೆಂಬುದೂ ಅವರಿಗೆ ಅರಿವಾದಂತಿದೆ. 

ಭವಿಷ್ಯದ ರಾಜಕೀಯ ಚದುರಂಗದಾಟದ ನಡೆಗಳನ್ನು ಮೊದಲಿಗೇ ಊಹಿಸಿ, ಇಬ್ಬರೂ ನಾಯಕರುಗಳು ತಮ್ಮ ಕಾಯಿಗಳನ್ನು ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ಪೂರಕವಾಗಿ ಕೆಲಸ ಮಾಡಲು ಇಬ್ಬರೂ ನಾಯಕರುಗಳು ನಿರ್ದರಿಸಿದಂತಿದೆ. ಹೀಗಾಗಿ ಸದ್ಯಕ್ಕೆ ಬಾಜಪೇತರ ವಿರೋಧ ಪಕ್ಷಗಳ ಮೈತ್ರಿಕೂಟದ ರಚನೆ ಎನ್ನುವುಸು ದೂರದ ಮಾತಾಗುವಂತೆ ಕಾಣುತ್ತಿದೆ. 

No comments:

Post a Comment