Jan 6, 2017

ಮುಂದಿನ ವಿದಾನಸಭಾ ಚುನಾವಣೆಯ ಹೊತ್ತಿಗೆ ಧೃವೀಕರಣಗೊಳ್ಳಲಿರುವ ಮೇಲ್ವರ್ಗಗಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ವಿಷಯವಾಗಿ ನಾವೀಗ ಮಾತಾಡುವುದು ತೀರಾ ಅವಸರದ ವಿಚಾರವೆನಿಸಿದರು, ಇನ್ನು ಹದಿನೈದು ತಿಂಗಳಲ್ಲಿ ಬರಲಿರುವ ರಾಜ್ಯ ವಿದಾನಸಭಾ ಚುನಾವಣೆಗಳ ಹೊತ್ತಿಗೆ ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗಬಹುದಾದ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ ಇದನ್ನು ಬರೆಯಲೆಬೇಕಾಗಿದೆ.

ಕಳೆದ ಐದು ವರ್ಷಗಳಿಂದ ಅಂದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕ್ಷಣದಿಂದಲೇ ಹುಟ್ಟಿಕೊಂಡ ಅಹಿಂದಕ್ಕೆ ಪರ್ಯಾಯವಾದ ಒಂದು ರಾಜಕಾರಣ ಯಾವುದೇ ಗೊತ್ತು ಗುರಿಯಿಲ್ಲದೆ ನಡೆಯುತ್ತ ಬಂದಿದ್ದು, ಇದುವರೆಗೂ ಒಂದು ಪ್ರಬಲ ಪರ್ಯಾಯವಾಗಿ ಬೆಳೆದಿರಲಿಲ್ಲ. ಆದರೆ ವಿದಾನಸಭಾ ಚುನಾವಣೆಗಳು ಹತ್ತಿರವಾಗತೊಡಗಿದಂತೆ ಅಹಿಂದವನ್ನು ವಿರೋಧಿಸುವ ರಾಜಕೀಯ ಶಕ್ತಿಗಳಿಗೆ ತಾವು ಒಂದಾಗಿ ರಾಜಕೀಯ ಮಾಡುವ ಅನಿವಾರ್ಯತೆ ಎದುರಾಗಿದ್ದು, ಆ ನಿಟ್ಟಿನಲ್ಲಿ ಆ ಶಕ್ತಿಗಳು ಕೆಲಸ ಮಾಡತೊಡಗಿವೆ. ಇದು ಕರ್ನಾಟಕದ ಮಟ್ಟಿಗೆ ಹೊಸ ಬೆಳವಣಿಗೆ ಏನಲ್ಲ.ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿಗಳಾಗಿದ್ದ ಶ್ರೀದೇವರಾಜ್ ಅರಸುರವರು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳು ತಮ್ಮ ಆರ್ಥಿಕ, ಸಾಮಾಜಿಕ, ರಾಜಕೀಯಹಿತಾಸಕ್ತಿಗಳಿಗೆ ಮಾರಕವಾಗಿ ಪರಿಣಮಿಸಿದಾಗ ರಾಜ್ಯದ ಮೇಲ್ವರ್ಗಗಳು ಜನತಾ ಪರಿವಾರದ ರೂಪದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾದ ಒಂದು ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಕಾರಣವಾಗಿದ್ದವು. ಅರಸರು ತಂದಂತಹ ತಳಸ್ತರದ ಜನತೆಯ ಪರವಾದ ಹಲವಾರು ಯೋಜನೆಗಳು ತಲೆತಲಾಂತರದಿಂದ ರಾಜ್ಯದ ಬಹುತೇಕ ಭೂಮಿಯನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡಿದ್ದ ಮೇಲ್ಜಾತಿಗಳ ಕೆಂಗಣ್ಣಿಗೆ ಗುರಿಯಾಯಿತು. ಉಳುವವನೇ ಒಡೆಯಾ ಎಂಬಂತಹ ಕಾನೂನುಗಳು ಮೇಲ್ಜಾತಿಗಳ ಜಮೀನ್ದಾರಿಕೆಯನ್ನು ಇಲ್ಲವಾಗಿಸಿತು. ದಲಿತರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಕಲ್ಪಿಸಲಾದ ಮೀಸಲಾತಿಯಿಂದಾಗಿಸಹಜವಾಗಿ ಮೇಲ್ಜಾತಿಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಸರಕಾರಿ ನೌಕರಿಗಳು ಕೆಳಸ್ತರದ ಜನರ ಪಾಲಾಗತೊಡಗಿದವು. ಇದರ ಜೊತೆಗೆ ರಾಜ್ಯದ ರಾಜಕಾರಣವನ್ನು ತಮ್ಮಿಚ್ಚೆಗೆ ತಕ್ಕಂತೆ ನಡೆಸುತ್ತಿದ್ದ ಮೇಲ್ವರ್ಗಗಳು ತಳಜಾತಿಗಳ ಜೊತೆ ಆ ಅಧಿಕಾರವನ್ನು ಹಂಚಿಕೊಳ್ಳಬೇಕಾದ ಸನ್ನಿವೇಶ ಸೃಷ್ಠಿಯಾಯಿತು. 1980ರ ವೇಳೆಗೆ ಇಂತಹ ಬೆಳವಣಿಗೆಗಳಿಂದ ಆತಂಕಕ್ಕೆ ಈಡಾದ ಮೇಲ್ವರ್ಗಗಳು ಪಯರ್ಾಯ ರಾಜಕೀಯ ಶಕ್ತಿಯೊಂದನ್ನು ಸೃಷ್ಠಿಸಿಕೊಂಡು ಅಧಿಕಾರವನ್ನು ಹಿಡಿಯದೆ ಹೋದರೆ ತಮಗೆ ಉಳಿಗಾಲ ಇಲ್ಲವೆಂಬ ನಿರ್ದಾರಕ್ಕೆ ಬಂದಿದ್ದವು.

ಇದೇ ಸಮಯದಲ್ಲಿ ಅರಸುರವರ ನಂತರ ಅಧಿಕಾರಕ್ಕೆ ಬಂದಿದ್ದ ಗುಂಡೂರಾಯರ ಬೇಜವಾಬ್ದಾರಿ ಆಳ್ವಿಕೆ ಸಮಾಜದ ಎಲ್ಲ ಸ್ಥರಗಳ ಜನತೆಯಲ್ಲು ನಿರಾಸೆಯನ್ನು ಉಂಟು ಮಾಡಿತ್ತು. ತಮಗೆ ಮುಖ್ಯಮಂತ್ರಿ ಕುರ್ಚಿ ದೊರೆಯಲಿಲ್ಲವೆಂಬ ಏಕೈಕ ಕಾರಣದಿಂದಾಗಿ ಕ್ರಾಂತಿರಂಗವನ್ನು ಕಟ್ಟಿದ್ದ ಬಂಗಾರಪ್ಪನವರಿಗೂ ಕಾಂಗ್ರೆಸ್ಸನ್ನು ಸೋಲಿಸಿ ತಮ್ಮ ಬಲವನ್ನು ತೋರಿಸಬೇಕೆಂಬ ಹಟವಿತ್ತು. ಈ ಅವಧಿಯಲ್ಲಿ ಭುಗಿಲೆದ್ದ ರೈತ ಚಳುವಳಿ,ದಲಿತ ಚಳುವಳಿ ಮತ್ತು ಗೋಕಾಕ್ ಚಳುವಳಿಗಳು ಕಾಂಗ್ರೆಸ್ ಸರಕಾರದ ವಿರುದ್ದ ಜನಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾದವು. ಕಾಂಗ್ರೆಸ್ ಸರಕಾರದ ಅಹಿಂದ ಪರವಾದ ಆಡಳಿತದ ವಿರುದ್ದ ಕೋಪಗೊಂಡಿದ್ದ ಮೇಲ್ವರ್ಗಗಳು ಇಂತಹದೊಂದು ಅವಕಾಶಕ್ಕಾಗಿ ಕಾಯುತ್ತಿದ್ದವು. ಆಗ ಜನತಾ ಪಕ್ಷದ ಜೊತೆಗೆ ಹೊಸದಾಗಿ ಹುಟ್ಟಿಕೊಂಡಿದ್ದ ಬಾಜಪದ ಬೆಂಬಲಕ್ಕೆ ನಿಂತ ಮೇಲ್ವರ್ಗಗಳು 1983ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬೇಕಾದ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಶುರು ಮಾಡಿದವು. ಈ ಹಂತದಲ್ಲಿ ಅದು ಹಿಂದುಳಿದ ವರ್ಗಗಳ ನಾಯಕರಾದ ಬಂಗಾರಪ್ಪನವರನ್ನು ಸಹ ತನ್ನ ಆಯುಧವನ್ನಾಗಿ ಬಳಸಿಕೊಂಡಿತು. ರಾಜ್ಯದ ಎಲ್ಲ ಪ್ರಗತಿಪರ ಚಳುವಳಿಗಳನ್ನು ತನ್ನ ಆಯುಧಗಳನ್ನಾಗಿ ಬಳಸಿಕೊಂಡ ಮೇಲ್ವರ್ಗಗಳು ಜನತಾಪಕ್ಷ ಮತ್ತು ಬಾಜಪದ ಹೆಸರಲ್ಲಿ ಒಂದಾಗ ತೊಡಗಿದವು.

ದುರಂತವೆಂದರೆ ಅಂದಿನ ಬಹುತೇಕ ಪ್ರಗತಿಪರರು, ಬರಹಗಾರರು ಸಹ ಕಾಂಗ್ರೆಸ್ಸಿನ ಭ್ರಷ್ಟತೆಯ, ಜಡತೆಯ ವಿರುದ್ದ ಹೋರಾಟದ ನೆಪದಲ್ಲಿ ಜನತಾ ಪರಿವಾರದ ಬೆಂಬಲಕ್ಕೆ ನಿಂತರು. ಇವನ್ನೆಲ್ಲ ಕ್ರೋಢೀಕರಿಸಿ ತನ್ನ ಅನುಕೂಲಕ್ಕೆ ಬಳಸಿಕೊಂಡ ಮೇಲ್ವರ್ಗ 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣವಾಯಿತು. ಬಾಜಪದ ಬಾಹ್ಯ ಬೆಂಬಲ ಪಡೆದ ಜನತಾಪಕ್ಷ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಸರಕಾರ ರಚಿಸಿತು. ಅಚ್ಚರಿಯೆಂದರೆ ಯಾವ ಅಹಿಂದ ವರ್ಗದ ಮೇಲಿನ ಅಸಹನೆಯನ್ನು ಬಳಸಿಕೊಂಡು ಅಧಿಕಾರ ಹಿಡಿದ ಜನತಾ ಪರಿವಾರವೇ ಮುಂದೆ ಹಲವು ದಲಿತ ಮತ್ತು ಹಿಂದುಳಿದ ವರ್ಗಗಳ ಹಲವು ನಾಯಕರುಗಳನ್ನು ಸೃಷ್ಠಿಸಿದ್ದು. ಇವತ್ತಿನ ಅಹಿಂದ ನಾಯಕರಾದ ಶ್ರೀ ಸಿದ್ದರಾಮಯ್ಯನವರು ಸಹ ಅದೇ ಜನತಾ ಪರಿವಾರದ ಕೂಸೆಂಬುದನ್ನು ನಾವು ಮರೆಯಬಾರದು. 

2006 ರ ನಂತರ ಅಧಿಕಾರದ ಕನಸನ್ನು ಜನತಾದಳ ಮತ್ತು ಬಾಜಪದ ರೂಪದಲ್ಲಿ ಈಡೇರಿಸಿಕೊಂಡ ಮೇಲ್ವರ್ಗಗಳು 2012ರ ನಂತರ ಮತ್ತೆ ಅತೃಪ್ತ ಆತ್ಮವಾಗಿದೆ. ತನ್ನನ್ನು ತಾನು ಅಹಿಂದ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡ ಸಿದ್ದರಾಮಯ್ಯನವರು ಸಹಜವಾಗಿಯೇ ಮೇಲ್ವರ್ಗಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಹಿಂದ ವರ್ಗಗಳ ಪರವಾಗಿ ಅವರು ಜಾರಿಗೊಳಿಸಿದ ಹಲವಾರು ಯೋಜನೆಗಳನ್ನು ಕಟುವಾಗಿ ಟೀಕಿಸುತ್ತ ಪರೋಕ್ಷವಾಗಿ ಮೇಲ್ವರ್ಗಗಳ ಅಸಹನೆಯನ್ನು ಜನತಾದಳ ಮತ್ತು ಬಾಜಪಗಳು ಹೊರಹಾಕುತ್ತಿವೆ. ಮೇಲ್ನೋಟಕ್ಕೆ ಜನತಾದಳ ಮತ್ತು ಬಾಜಪಗಳು ದೂರವಿರುವಂತೆ ಕಂಡರೂ ಆಳದಲ್ಲಿ ಅಂದರೆ ಸಿದ್ದರಾಮಯ್ಯನವರನ್ನು ಅವರು ಪ್ರತಿನಿಧಿಸುವ ಅಹಿಂದವನ್ನು ಹೀಗಳೆಯುವ ವಿಚಾರದಲ್ಲಿ ಮಾತ್ರ ಅವು ಎಂದಿಗೂ ಒಂದೇನೆ. ಅವುಗಳ ರಾಜಕೀಯ ಹೋರಾಟವೂ ಇದೇ ದಾಟಿಯಲ್ಲಿ ನಡೆಯುತ್ತಿದೆ. ಬಹುಶ: ಮುಂದಿನ ವರ್ಷದ ಚುನಾವಣೆಗಳು ಘೋಷಣೆಯಾಗುವ ಹೊತ್ತಿಗೆ ಮೇಲ್ವರ್ಗಗಳು ಇನ್ನಷ್ಟು ದೃವೀಕರಣಗೊಳ್ಳುವುದು ಖಚಿತ.

ಇದೀಗ ತಮಗೆ ಸಚಿವ ಸ್ಥಾನ ಕೈತಪ್ಪಿದ ಕಾರಣಕ್ಕೆ ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ತ್ಯಜಿಸಿರುವ ಮತ್ತು ಬಾಜಪವನ್ನು ಸೇರಿರುವ ಶ್ರೀ ಶ್ರೀನಿವಾಸ್ಪ್ರಸಾದ್ ಅವರಂತಹ ದಲಿತ ನಾಯಕರು ಮತ್ತೊಬ್ಬ ಬಂಗಾರಪ್ಪನವರಾಗುವ ಹಾದಿಯಲ್ಲಿದ್ದಾರೆ. ಪ್ರಸಾದ್ ಅವರು ಬಂಗಾರಪ್ಪನವರಷ್ಟು ಜನಸಮುದಾಯ ಬೆಂಬಲ ಪಡೆದ ನಾಯಕರಲ್ಲದಿದ್ದರೂ ಹಳೆ ಮೈಸೂರು ಭಾಗದಲ್ಲಿ ಮತ್ತು ದಲಿತ ವರ್ಗದ ಮೇಲೆ ಸಹಜವಾಗಿ ಅವರು ಪ್ರಬಾವ ಬೀರಬಹುದಾದ ನಾಯಕರಾಗಿದ್ದು. ಹಿಂದೆ ಜನತಾಪಕ್ಷ ಹೇಗೆ ಬಂಗಾರಪ್ಪನವರನ್ನು ತನ್ನ ಹಿಂದುಳಿದ ಮುಖವನ್ನಾಗಿ ಬಿಂಬಿಸಿ, ಅವರ ಕ್ರಾಂತಿರಂಗದ ಸಹಾಯದಿಂದ ಗೆದ್ದಿತ್ತೊ. ಇವತ್ತು ಬಾಜಪವು ಸಹ ಅದೇ ರೀತಿ ಪ್ರಸಾದರನ್ನು ಅವರ ಪ್ರಬಾವವನ್ನು ದಲಿತ ಮತಗಳನ್ನು ಪಡೆಯಲು ಬಳಸಿಕೊಳ್ಳುವುದು ಖಂಡಿತ.

ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಸೃಷ್ಠಿಸುವ ಬಗ್ಗೆ ಮೆಲುದನಿಯಲ್ಲಿ ಮಾತಾಡುತ್ತಿರುವ ಮೇಲ್ವರ್ಗ ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ಸಿನಲ್ಲಿರುವ ಮೇಲ್ವರ್ಗಗಳ ನಾಯಕರುಗಳನ್ನು ತನ್ನತ್ತ ಸೆಳೆಯುವ ಮತ್ತು ಅಹಿಂದ ವರ್ಗವನ್ನು ಒಡೆಯುವ ಸಂಚನ್ನು ಮಾಡುವುದು ನಿಶ್ಚಿತ. ಬಾಜಪದ ನಾಯಕರಾದ ಶ್ರೀ ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಮತ್ತು ಹಿಂದ ಸಂಘಟನೆಯನ್ನು ಹುಟ್ಟು ಹಾಕಿ ಯಡಿಯೂರಪ್ಪನವರ ಇಚ್ಚೆಗೆ ವಿರುದ್ದವಾಗಿ ನಡೆದುಕೊಳ್ಳುತ್ತಿರುವುದನ್ನು ನೋಡಿಯೂ ಸುಮ್ಮನಿರುವ ಬಾಜಪದ ಹೈಕಮ್ಯಾಂಡ್ ಮತ್ತು ಸಂಘಪರಿವಾರವನ್ನು ನೋಡಿದರೆ ಅಹಿಂದ ವರ್ಗವನ್ನು ಒಡೆಯಲು ಅದು ಈ ತಂತ್ರವನ್ನು ಹೂಡಿರಬಹುದೆಂದು ಬಾಸವಾಗುತ್ತದೆ. ಹಾಗಾಗಿ ಇನ್ನೇನು ಚುನಾವಣೆಗಳು ಘೋಷಣೆಯಾಗಿಬಿಡುತ್ತವೆ ಎನ್ನುವ ಸಮಯಕ್ಕೆ ಸರಿಯಾಗಿ ಕಾಂಗ್ರೆಸ್ಸಿನಿಂದ ಹಲವು ಮಂದಿ ನಾಯಕರುಗಳು ಬೇರೆ ಪಕ್ಷಗಳಿಗೆ ಪಕ್ಷಾಂತರ ಮಾಡುವ ಸಾದ್ಯತೆ ಇದೆ. ಕಾಂಗ್ರೆಸ್ಸಿನ ಅಹಿಂದ ರಾಜಕಾರಣವನ್ನು ಆಳದಲ್ಲಿ ಅರಗಿಸಿಕೊಳ್ಳಲಾಗದ ಕಾಂಗ್ರೆಸ್ಸಿನಲ್ಲಿಯೇ ಇರುವ ಹಲವಾರು ಮೇಲ್ವರ್ಗಗಳ ನಾಯಕರುಗಳು ಮೇಲ್ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವ ನೆಪದಲ್ಲಿ ಪಕ್ಷ ತೊರೆಯುವ ಸಂಭವವಿದೆ.

ಅಹಿಂದ ವರ್ಗಗಳ ಹಿತ ಕಾಯಬಲ್ಲಂತಹ ರಾಜಕಾರಣವನ್ನು ಸಹಿಸಿಕೊಳ್ಳದ ಮೇಲ್ವರ್ಗಗಳು ಕಾಂಗ್ರೆಸ್ಸಿಗೆ ಪರ್ಯಾಯ ರಾಜಕಾರಣ ಎಂಬಂತೆ ಮಾತಾಡುತ್ತ ಅಹಿಂದ ವಿರುದ್ದ ಮೇಲ್ವರ್ಗಗಳ ಬೆಂಬಲಕ್ಕೆ ನಿಲ್ಲಬಲ್ಲ ಬಲಪಂಥೀಯ ರಾಜಕೀಯ ಪಕ್ಷವೊಂದರ ಪರವಾಗಿ ನಿಲ್ಲತೊಡಗಿವೆ. ಇಂತಹದೊಂದು ಅಪಾಯವನ್ನು ಮನಗಂಡು ರಾಜಕೀಯವಾಗಿ ಸದೃಢವಾಗಿ ಒಗ್ಗಟ್ಟಾಗಿ ನಿಲ್ಲಬೇಕಾದ ಅನಿವಾರ್ಯತೆ ಇವತ್ತು ಅಹಿಂದ ವರ್ಗಗಳಿಗಿದೆ. 

No comments:

Post a Comment