Jun 21, 2016

ಕಾಂಗ್ರೆಸ್ ಮತ್ತು ನೆಹರು ಕುಟುಂಬ: ಯಾರು ಯಾರಿಗೆ ಅನಿವಾರ್ಯ?

ಕು.ಸ.ಮಧುಸೂದನ ನಾಯರ್
21/06/2016
ಕಳೆದ ನಾಲ್ಕೂವರೆ ದಶಕಗಳಿಂದಲೂ ಕಾಂಗ್ರೆಸ್ಸೇತರ ಪಕ್ಷಗಳು ಕಾಂಗ್ರೆಸ್ಸಿನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುತ್ತ, ಕುಟುಂಬ ರಾಜಕಾರಣವನ್ನು ಕೆಲವೊಮ್ಮೆ ತೀರಾ ಕೀಳುಬಾಷೆಯಲ್ಲಿ ಲೇವಡಿ ಮಾಡುತ್ತಲೆ ಬರುತ್ತಿವೆ. ಆದರೀಗ ನೋಡಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಎಲ್ಲ ಯೋಗ್ಯತೆಗಳನ್ನೂ ಇಂಡಿಯಾದ ಬಹಳಷ್ಟು ರಾಜಕೀಯ ಪಕ್ಷಗಳು ಕಳೆದುಕೊಂಡಿವೆಯೆನಿಸುತ್ತೆ. ಯಾಕೆಂದರೆ ನೆಹರು ಕುಟುಂಬವನ್ನು ವಿರೋದಿಸುತ್ತಲೇ ರಾಜಕೀಯ ಮಾಡಿದ ನಾಯಕರುಗಳು, ಪಕ್ಷಗಳು ಕೂಡ ಕುಟುಂಬ ರಾಜಕಾರಣದ ಬಲೆಯಲ್ಲಿ ಬಿದ್ದಿವೆ. ಹೀಗಾಗಿ ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಯಾರಾದರು ಮಾತಾಡಿದರೆ ಅದನ್ನು ಜನತೆ ಗಂಬೀರವಾಗಿ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕೆಲವರು ಕಾಂಗ್ರೆಸ್ ಮತ್ತೆ ಸುದಾರಿಸಿಕೊಳ್ಳಬೇಕಾದರೆ ಆ ಪಕ್ಷ ಸೋನಿಯಾಗಾಂದಿ ಮತ್ತು ರಾಹುಲಗಾಂದಿಯವರ ಹಿಡಿತದಿಂದ ಹೊರಬರಬೇಕೆಂದು ಕಿರುಚುತಿದ್ದಾರೆ. ನೆಹರು ಕುಟುಂಬದ ಹೊರತಾದ ಕಾಂಗ್ರೆಸ್ ಭವಿಷ್ಯ ಏನಾಗಬಹುದೆಂಬುದನ್ನು ಈಗ ಒಂದಿಷ್ಟು ನೋಡೋಣ:

ಇವತ್ತು ನೂರು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಅಸ್ತಿತ್ವ ಅಂತೇನಾದರು ಉಳಿಸಿಕೊಂಡು ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ನೆಹರು ಕುಟುಂಬದ ಆಕರ್ಷಣೆ ಕಾರಣವೇ ಹೊರತು ಬೇರೆಯೇನಲ್ಲ. ಇದು ಸತ್ಯವಾದ ಸಂಗತಿ. ನೆಹರು ಕುಟುಂಬದಾಚೆಗೆ ಪಕ್ಷ ಬಂದು ನಿಂತರೆ ಕೆಲವೆ ವರ್ಷದಲ್ಲಿ ಅದು ತನ್ನ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದು ಕೊಂಡು ಹತ್ತಾರೇನು, ನೂರಾರು ಚೂರುಗಳಾಗಿ ಒಡೆದು ಛಿದ್ರಗೊಳ್ಳುವುದು ಖಚಿತ. ಯಾಕೆಂದರೆ ಎಲ್ಲಿಯವರೆಗು ನೆಹರು ಕುಟುಂಬದ ಸದಸ್ಯರು ಅದನ್ನು ಮುನ್ನಡೆಸುತ್ತಾರೊ ಅಲ್ಲಿಯವರೆಗೂ ಅದರ ಒಗ್ಗಟ್ಟು ಬಲವಾಗಿರುತ್ತದೆ. ಆ ಕುಟಂಬವೇ ಅದಕ್ಕೆ ಶಕ್ತಿಕೇಂದ್ರವಾಗಿದೆ. ಅದು ನಾಶವಾದರೆ ಪಕ್ಷವೂ ನಾಶವಾಗುವುದರಲ್ಲಿ ಅನುಮಾನವೇನಿಲ್ಲ. ಇದಕ್ಕೆ ಬಹಳ ಜನ ರಾಜಕೀಯ ಪಂಡಿತರುಗಳು, ನಾಯಕರುಗಳು ಕಾಂಗ್ರೆಸ್ ಬೇರೆ ನಾಯಕರನ್ನು ಬೆಳೆಸಲಿಲ್ಲವೆಂದು ಆರೋಪಿಸುತ್ತಾರೆ. ಆದರೆ ಇಂಡಿಯಾದಂತಹ ವಿಶಾಲ ರಾಷ್ಟ್ರದಲ್ಲಿ ನಾಲ್ಕೂ ದಿಕ್ಕುಗಳಿಗೂ ಒಪ್ಪಿತವಾಗುವಂತ ನಾಯಕನನ್ನು ಯಾರೂ ಬೆಳೆಸಲಾಗುವುದಿಲ್ಲ. ಹಾಗೆ ಬೆಳಸುವ ನಾಯಕ ಬಹಳ ದಿನ ಬಾಳಿಕೆ ಬರಲಾರ. ನಾಯಕನಾದವನು ಸ್ವಯಂ ಸೃಷ್ಠಿಯಾಗಬೇಕು. ಬೇಕಾದರೆ ನೀವೇ ನೋಡಿ; ನರೇಂದ್ರ ಮೋದಿಯವರನ್ನು ಬಾಜಪವೇನು ಬೆಳೆಸಲಿಲ್ಲ, ಬದಲಿಗೆ ಬೆಳೆದ ಮೋದಿಯವರನ್ನು ಬಾಜಪ ಬಳಸಿಕೊಂಡಿತಷ್ಟೇ! ಪ್ರಾದೇಶಿಕ ನಾಯಕರುಗಳು ಬೆಳೆಯಬಹುದೆ ಹೊರತು ರಾಷ್ಟ್ರನಾಯಕರುಗಳನ್ನು ಯಾರೂ ಬೆಳೆಸಲಾಗುವುದಿಲ್ಲ. ಇವತ್ತು ನಿತೀಶ್ ಕುಮಾರ್ ಅವರನ್ನೇ ನೋಡಿ ಅವರೆಷ್ಟೇ ದೊಡ್ಡ ನಾಯಕರಾದರು ದಕ್ಷಿಣದಲ್ಲಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಇಂಡಿಯಾದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಒಬ್ಬ ನಾಯಕ ಬಾವನಾತ್ಮಕವಾಗಿ ಜನರನ್ನು ಒಲಿಸಿಕೊಂಡು ಬೆಳೆಯಬಹುದೇ ಹೊರತು ಬೇರ್ಯಾವ ಶಕ್ತಿಗಳು ಅಂತಹ ನಾಯಕನನ್ನು ಸೃಷ್ಟಿಸಲಾರವು. ಹೀಗಾಗಿಯೇ ನಾನು ಹೇಳುವುದು ಸೋನಿಯ ಆಗಲಿ ರಾಹುಲ್ ಆಗಲಿ ಕಾಂಗ್ರೆಸ್ಸಿನ ನಾಯಕತ್ವವನ್ನು ಬಿಟ್ಟುಕೊಟ್ಟರೆ ಅದು ಬಾಜಪದಂತಹ ಪಕ್ಷಗಳಿಗೆ ಹಾಸಿಕೊಡುವ ಕೆಂಪುಹಾಸಿನ ಸ್ವಾಗತವಾಗುತ್ತದೆ. ಜೊತೆಗೆ ಏಕ ಪಕ್ಷದ ಸರ್ವಾಧಿಕಾರಿ ಆಡಳಿತಕ್ಕೂ ಹಾದಿಯಾಗುತ್ತದೆ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಠಿಯಿಂದ ಇದು ಒಳ್ಳೆಯದಲ್ಲದಿದ್ದರೂ ಪ್ರಜಾಪ್ರಭುತ್ವ ಬದುಕಿರಲಾದರೂ ಕಾಂಗ್ರೆಸ್ ಜೀವಂತವಾಗಿರುವ ಅಗತ್ಯವಿದೆ. ಹಾಗೇನಾದರು ನಾಳೆ ಸೋನಿಯಾ ಮತ್ತು ರಾಹುಲ್ ಕಾಂಗ್ರೆಸ್ಸಿನ ಅಧಿಕಾರ ಬಿಟ್ಟುಕೊಟ್ಟು ಹೊರಬಂದರೆ ಬಹುಶ: ಕರ್ನಾಟಕದಲ್ಲಿಯೇ ಸಿದ್ದರಾಮಯ್ಯನವರ ಕಾಂಗ್ರೆಸ್, ಪರಮೇಶ್ವರ್ ಕಾಂಗ್ರೆಸ್, ವೀರಪ್ಪ ಮೊಯ್ಲಿ ಕಾಂಗ್ರೆಸ್ ಎಂಬಂತಹ ಹತ್ತಾರು ಕಾಂಗ್ರೆಸ್ಸುಗಳು ಜನಿಸುವುದು ಗ್ಯಾರಂಟಿ. ಉದಾಹರಣೆಗಾಗಿ ಇತಿಹಾಸವನ್ನೊಮ್ಮೆ ತಿರುವಿ ಹಾಕಿ ನೋಡಿ. ಎಪ್ಪತ್ತರ ದಶಕದಿಂದ ಇದುವರೆಗೂ ಯಾರ್ಯಾರು ಕಾಂಗ್ರೆಸ್ ತೊರೆದು ಮರಿ ಕಾಂಗ್ರೆಸ್ ಪಕ್ಷಗಳನ್ನು ಕಟ್ಟಿದರೋ ಅವರೆಲ್ಲ ರಾಜಕೀಯದಲ್ಲಿ ಮೇಲೆರಲು ಸಾದ್ಯವೇ ಆಗಿಲ್ಲ. ಜೊತೆಗೆ ಅವರಲ್ಲಿ ಬಹಳಷ್ಟು ಜನ ಮತ್ತೆ ಕಾಂಗ್ರೆಸ್ಸಿನ ತೆಕ್ಕೆಗೆ ಹೋಗಿದ್ದಾರೆ. 

ಇವೆಲ್ಲವನ್ನೂ ನೋಡುತ್ತಿದ್ದರೆ ಸೋನಿಯಾ ಗಾಂದಿಯೊ, ರಾಹುಲ್ ಗಾಂದಿಯೊ ಮಾತ್ರ ಕಾಂಗ್ರೆಸ್ಸನ್ನು ಕಾಪಾಡಬಲ್ಲರೆನಿಸುತ್ತೆ. ನೆಹರೂ ಕುಟುಂಬದವರ ಬಗ್ಗೆ ಪೂರ್ವಗ್ರಹವಿಲ್ಲದೆ ನೋಡಿದರೆ ಮಾತ್ರ ಈ ಸತ್ಯ ಅರ್ಥವಾಗುತ್ತದೆ. 
ಎರಡು ಕಾರಣಗಳಿಗಾಗಿ ಕಾಂಗ್ರೆಸ್ ಮುಂದೆಯೂ ಅಸ್ಥಿತ್ವವನ್ನು ಉಳಿಸಿಕೊಂಡಿರಬೇಕು:

ಮೊದಲನೆಯದು, ಕಾಂಗ್ರೆಸ್ ನಮ್ಮ ಸ್ವಾತಂತ್ರ ಹೋರಾಟದ ನೆನಪಾಗಿದ್ದು ಅದು ನಮ್ಮ ಜೊತೆ ಬಾವನಾತ್ಮಕವಾಗಿ ಥಳುಕು ಹಾಕಿಕೊಂಡಿದೆ (ಈ ಪೀಳಿಗೆಯನ್ನ ಹೊರತುಪಡಿಸಿ). 
ಎರಡನೆಯದು, ಕಾಂಗ್ರೆಸ್ ಇಲ್ಲವಾಗಿ ಬಿಟ್ಟರೆ ಬಾಜಪ ಏಕೈಕ ರಾಷ್ಟ್ರೀಯ ಪಕ್ಷವಾಗಿ ಹಿಂದೆ ಕಾಂಗ್ರೆಸ್ ಹೇಗೆ ಆರು ದಶಕಗಳವರೆಗು ನಮ್ಮನ್ನು ಆಳಿತೊ ಅದೇ ರೀತಿ ಬಾಜಪವೂ ಸಹ ಆಗಿಬಿಡುವ ಸಾದ್ಯತೆಯಿದೆ. ಬಾಜಪಕ್ಕೊಂದು ಪರ್ಯಾಯ ರಾಜಕೀಯಶಕ್ತಿಯನ್ನು ಕಂಡುಕೊಳ್ಳಲಾಗದೆ ಭಾರತೀಯ ಮತದಾರ ಅಸಹಾಯಕನಾಗಬೇಕಾಗುತ್ತದೆ.

ಆದ್ದರಿಂದಲೇ ಕಾಂಗ್ರೆಸ್ಸಿನ ಉಳಿವು ಈ ನೆಲದ ಪ್ರಜಾತಂತ್ರದ ಉಳಿವಿಗೂ ಸಂಬಂದವಿದೆಯೆಂಬುದನ್ನು ಕಾಂಗ್ರೆಸ್ಸಿಗರು ಮರೆಯಬಾರದು.

No comments:

Post a Comment