May 23, 2016

ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆಯ ಹಿಂದಿನ ಫ್ಯಾಸಿಸ್ಟ್ ಧೋರಣೆ


ಕು.ಸ.ಮಧುಸೂದನ್ ರಂಗೇನಹಳ್ಳಿ
೨೦೧೬ರ ಐದು ರಾಜ್ಯಗಳ ಉಪಚುನಾವಣೆಗಳ ಪಲಿತಾಂಶ ಬಂದಾಕ್ಷಣ ಬೇರೆಲ್ಲರಿಗಿಂತ ಮೊದಲು ಸಂಭ್ರಮಾಚಾರಣೆ ಮಾಡಿದ್ದು ಇಂಡಿಯಾದ ಬಲಪಂಥೀಯ ಒಲವಿನ, ಬಂಡವಾಳಶಾಹಿ ಮತ್ತು ಮೇಲ್ವರ್ಗಗಳ ಹಿಡಿತದಲ್ಲಿರುವ ಮಾದ್ಯಮಗಳು! ಅದರಲ್ಲೂ ಅಸ್ಸಾಮಿನ ಪಲಿತಾಂಶಗಳನ್ನೇ ಹೆಚ್ಚು ಹೈಲೈಟ್ ಮಾಡುತ್ತ, ನೇರ ಪ್ರಸಾರದ ಟಾಕ್ ಶೋಗಳಲ್ಲಿ ಕೂತ ಅವರು ಸಮಾನಮನಸ್ಕ ಅತಿಥಿಗಳ ಜೊತೆ ಚರ್ಚೆ ಮಾಡಿದ ಮುಖ್ಯ ವಿಚಾರ ಕೂಡ ಕೇರಳ ಮತ್ತು ಅಸ್ಸಾಮಿನಲ್ಲಿ ಸೋತ ಕಾಂಗ್ರೆಸ್ಸಿನ ಸೋಲಿನ ಬಗ್ಗೆಯೇ ಹೆಚ್ಚು. ಬಾಜಪದ ಮತ್ತದರ ನಾಯಕರಾದ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಮಾತಾದ ಕಾಂಗ್ರೆಸ್ ಮುಕ್ತ ಭಾರತ ಎನ್ನುವುದು ನಡೆಯುತ್ತಲಿದೆಯೆಂಬುದೇ ಅವರ ಚರ್ಚೆಯ ಮುಖ್ಯಾಂಶವಾಗಿತ್ತು! ಇರಲಿ ಎಲ್ಲ ಕಾಲಕ್ಕು ಮಾದ್ಯಮಗಳಲ್ಲಿ ಇಂತಹ ಶಕ್ತಿಗಳಿದ್ದೇ ಇರುತ್ತವೆ ಮತ್ತವುಗಳು ತಮಗೆ ಬೇಕಾದ ಹಾಗೆ ಸುದ್ದಿಗಳನ್ನು, ವಿಷಯಗಳನ್ನು ತಿರುಚಿ ಹೇಳುತ್ತಲೇ ಇರುತ್ತವೆ. ಆದರೆ ಹಾಗೆ ಸುಳ್ಳು ಹೇಳುವಾಗಲಾದರೂ ಸತ್ಯಕ್ಕೆ ಹತ್ತಿರವಾದ ಅಂಕಿಅಂಶಗಳನ್ನು ಕೊಡಬೇಕಾದುದು ಅವುಗಳ ಕರ್ತವ್ಯವಾಗಿರುತ್ತದೆ. ಸುಳ್ಳನ್ನೇ ಸತ್ಯವೆಂದು ಸಾದಿಸಲು ಹೊರಟ ಫ್ಯಾಸಿಸ್ಟ್ ಶಕ್ತಿಗಳಿಗೆ ಕೆಲವೊಮ್ಮೆ ಯಾವ ಅಂಕಿಸಂಖ್ಯೆಗಳೂ ಮುಖ್ಯವಾಗಿರುವುದಿಲ್ಲ. 

ಕೇರಳದಲ್ಲಿ ಕಾಂಗ್ರೆಸ್ ಸೋಲುವುದು ಮೊದಲೇ ನಿಶ್ಚಿತವಾಗಿತ್ತು. ಕಾರಣ ಮೊದಲಿನಿಂದಲೂ ಅಲ್ಲಿಯ ಮತದಾರರ ವರ್ತನೆಯೇ ಹಾಗಿತ್ತು. ಒಂದು ಅವಧಿಗೆ ಗೆಲ್ಲಿಸಿದವರನ್ನು ಮತ್ತೊಂದು ಅವಧಿಗೆ ಗೆಲ್ಲಿಸುವ ಯಾವ ಯೋಚನೆಯನ್ನೂ ಕೇರಳದ ಜನಸಮುದಾಯ ಮಾಡುವ ಸಂಭವವೇ ಇರಲಿಲ್ಲ. ದಶಕಗಳ ಹಿಂದಿನ ಈ ಸಂಪ್ರದಾಯವನ್ನು ಈ ಬಾರಿ ಮುರಿಯುತ್ತಾರೆಂದು ಕಾಂಗ್ರೆಸ್ಸಾಗಲೀ, ಬೇರ‍್ಯಾರೇ ಆಗಲಿ ನಂಬಿಕೊಂಡಿರಲು ಯಾವುದೇ ಕಾರಣಗಳೂ ಇರಲಿಲ್ಲ. ಹಾಗಾಗಿ ಕೇರಳದ ಕಾಂಗ್ರೆಸ್ಸಿನ ಸೋಲಿಗೆ ಬಾಜಪ ಮತ್ತದರ ಬೆಂಬಲಿಗರು ಸಂಭ್ರಮಿಸುವ ಅಗತ್ಯವಿರಲಿಲ್ಲ. ಇನ್ನು ತಮಿಳನಾಡು, ಪುದುಚೇರಿಗಳಲ್ಲಿ ಅದು ಖುಶಿಪಡಲು ಒಂದೇ ಸ್ಥಾನವನ್ನೂ ಪಡೆಯಲಿಲ್ಲ. ಪಶ್ಚಿಮ ಬಂಗಾಳಕ್ಕೆ ಬಂದರೆ ಗೂರ್ಖಾ ಜನಶಕ್ತಿ ಮೋರ್ಚಾದ ಜೊತೆ ಸೇರಿ ಬಾಜಪ ಪಡೆದ ಮತಗಳ ಪ್ರಮಾಣ ಶೇಕಡಾ ೧೦.೭ ಮಾತ್ರ. ಇನ್ನು ಸ್ಥಾನಗಳ ಸಂಖ್ಯೆ ೬ ಮಾತ್ರ!

ಕೊನೆಗೆ ಅಸ್ಸಾಮಿಗೆ ಬಂದರೆ ಅಲ್ಲಿ ಮಾತ್ರ ಬಾಜಪ ಗೆದ್ದು ಅಧಿಕಾರ ಹಿಡಿದಿದ್ದು, ಒಟ್ಟು ೧೨೬ ಸ್ಥಾನಗಳ ಪೈಕಿ ೬೦ ಸ್ಥಾನ ಗೆದ್ದಿದ್ದು. ಅದರ ಮತಗಳಿಕೆ ಸಹ ಶೇಕಡಾ ೨೯.೫. ಇಷ್ಟು ಪ್ರಮಾಣದ ಮತಗಳನ್ನು ಪಡೆಯಲದು ಅಸ್ಸಾಂ ಗಣ ಪರಿಷತ್ ಮತ್ತು ಬೋಡೋ ಪೀಪಲ್ಸ್ ಫ್ರಂಟ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣವೆಂದರೆ ತಪ್ಪಲ್ಲ.ಇದೇ ವೇಳೆಗೆ ಕಾಂಗ್ರೇಸ್ ಅಲ್ಲಿ ಶೇಕಡಾ ೩೧ ರಷ್ಟು ಪ್ರಮಾಣದಲ್ಲಿ ಮತಗಳಿಸಿ, ೨೬ ಸ್ಥಾನಗಳನ್ನು ಪಡೆಯಲು ಶಕ್ತವಾಗಿದೆ. ಬಾಜಪದ ಈ ಸಾಧನೆಯ ಹಿಂದೆ ನಮ್ಮ ಮಾಧ್ಯಮಗಳು ಸಂಭ್ರಮಿಸುವುದಕ್ಕೆ ಏನು ಕಾರಣವೊ ನನಗಂತು ಅರ್ಥವಾಗಿಲ್ಲ.

ಮೊಟ್ಟ ಮೊದಲ ಬಾರಿಗೆ ಮೋದಿಯವರು ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆ ಮೊಳಗಿಸಿದಾಗಲೇ ಬಲಪಂಥೀಯರ ಫ್ಯಾಸಿಸ್ಟ್ ಧೋರಣೆ ಜಗಜ್ಜಾಹೀರಾಗಿ ಹೋಯಿತು. ಯಾಕೆಂದರೆ ವಿರೋಧಿಗಳೇ ಇರದಂತೆ ನೋಡಿಕೊಂಡು ತಮ್ಮ ಗುಪ್ತಕಾರ್ಯಸೂಚಿಗಳನ್ನು ಜಾರಿಗೆ ತರುವುದೇ ಅವರ ಗುರಿಯಾಗಿರುತ್ತದೆ. ಈಗ ಕಾಂಗ್ರೆಸ್ ಮುಕ್ತದ ಬಗ್ಗೆ ಮಾತಾಡುವ ಇದೇ ಜನ ನಂತರದಲ್ಲಿ ವಿರೋಧಿ ಮುಕ್ತ ಭಾರತದ ಬಗ್ಗೆ ಮಾತಾಡುವುದಿಲ್ಲವೆಂದು ಯಾರು ಗ್ಯಾರಂಟಿ ನೀಡಬಲ್ಲರು? ಅಷ್ಟಕ್ಕೂ ಈ ಬಾರಿಯ ಚುನಾವಣೆಗಳಲ್ಲಿ ಬಾಜಪ ಮತ್ತು ಕಾಂಗ್ರೆಸ್ ಗಳಿಸಿರುವ ಮತಗಳಿಕೆಯ ಪ್ರಮಾಣ ಹಾಗು ಸ್ಥಾನಗಳನ್ನು ಸೂಕ್ಷ್ಮವಾಗಿ ನೋಡಿದರೆ ಕಾಂಗ್ರೆಸ್ ಮುಕ್ತ್ ಭಾರತ್ ಎಂಬ ಘೋಷಣೆಯ ಪೊಳ್ಳುತನ ಅರ್ಥವಾಗುತ್ತದೆ.

ಐದೂ ರಾಜ್ಯಗಳಿಂದ ಸೇರಿ ಕಾಂಗ್ರೆಸ್ ಒಟ್ಟು ೧೩೫ ಸ್ಥಾನಗಳನ್ನು ಗೆದ್ದಿದ್ದರೆ, ಬಾಜಪ ೬೫ ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾದ್ಯವಾಗಿದೆ. ಕಾಂಗ್ರೆಸ್ ಈ ಐದೂ ರಾಜ್ಯಗಳಲ್ಲಿ ಸ್ಥಾನಗಳನ್ನು ಗೆದ್ದಿದ್ದು ಇವತ್ತಿಗೂ ರಾಷ್ಟ್ರದಾದ್ಯಂತ ತನ್ನ ಪ್ರಸ್ತುತೆಯನ್ನು ಉಳಿಸಿಕೊಂಡಿದೆ. ಅದೇ ಬಾಜಪ ತಮಿಳುನಾಡು ಹಾಗು ಪುದುಚೇರಿಗಳಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಫಲವಾಗಿಲ್ಲ. ಇನ್ನು ಕೇರಳದಲ್ಲಿ ಏಕೈಕ ಸ್ಥಾನವನ್ನು ಮಾತ್ರ ಗೆದ್ದಿದೆ. ಇಷ್ಟೊಂದು ನಿಖರ ಅಂಕಿ ಅಂಶಗಳು ಕಣ್ಣು ಮುಂದಿದ್ದರೂ ನಮ್ಮ ಮಾದ್ಯಮಗಳು ಮಾತ್ರ ಇನ್ನೇನು ಕಾಂಗ್ರೆಸ್ ಮುಕ್ತ ಭಾರತ ಬಂದೇ ಬಿಟ್ಟಿತೆಂದು ಸಂಭ್ರಮಿಸುತ್ತಿದ್ದಾವೆ. ರಾಷ್ಟ್ರೀಯ ವಾಹಿನಿಗಳಲ್ಲಿ ಇದ್ದ ಇಂತಹ ಪೂರ್ವಾಗ್ರಹದ ವರ್ತನೆ ಇದೀಗ ನಮ್ಮ ಕನ್ನಡದ ಪ್ರಾದೇಶಿಕ ವಾಹಿನಿಗಳಿಗೂ ಅಂಟಿಕೊಂಡಿದೆ. ಇದರ ಜೊತೆಗೆ ಈ ಪಲಿತಾಂಶಗಳಿಂದ ಕರ್ನಾಟಕದ ಕಾಂಗ್ರೆಸ್ ಸರಕಾರ ಇನ್ನೇನು ಬಿದ್ದು ಹೋಗಲಿದೆಯೆಂದು ಭವಿಷ್ಯವಾಣಿ ಬೇರೆ ನುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಬಾಜಪವನ್ನು ಬೆಂಬಲಿಸಿ ಮಾತನಾಡುವ ಭರದಲ್ಲಿ ಮಾದ್ಯಮದ ಮಂದಿ ಸತ್ಯ ಸಂಗತಿಗಳನ್ನು ಜನರಿಂದ ಮರೆಮಾಚಿ ತಮ್ಮ ಬಲಪಂಥೀಯ ಧೋರಣೆಗಳನ್ನು ಪ್ರತಿಪಾದಿಸುತ್ತಿದ್ದಾರೆ

ಇಂತಹ ಸಂದರ್ಭದಲ್ಲಿ ಜನ ಇಂತಹ ಪಕ್ಷಪಾತಿ ಮಾದ್ಯಮ ಮುಕ್ತ ಕರ್ನಾಟಕ ಎಂಬ ಘೋಷಣೆಯೊಂದಿಗೆ ಬೀದಿಗಿಳಿಯುವ ಕಾಲ ಬಂದರೆ ಅಚ್ಚರಿಯೇನಿಲ್ಲ!

No comments:

Post a Comment