Apr 30, 2016

ಪಿ.ಎಫ್. ಕಾನೂನು ತಿದ್ದುಪಡಿಯ ವಿರುದ್ಧದ ಬೆಂಗಳೂರಿನ ಚಳುವಳಿ ಮತ್ತು ಕಾರ್ಮಿಕ ಸಂಘಟನೆಗಳ ಮುಂದಿನ ಹೆಜ್ಜೆ: ಒಂದು ಟಿಪ್ಪಣಿ

pf protest at bangalore
ಕು.ಸ.ಮಧುಸೂದನ ರಂಗೇನಹಳ್ಳಿ
30/04/2016

ಯಾವುದೇ ಸಮಾಜ ಜೀವಂತವಾಗಿದೆ ಎಂದು ನಂಬುವುದಕ್ಕೆ ಸಾಕ್ಷಿಯಾಗಿ ಕೆಲಸ ಮಾಡುವುದು ಆ ಸಮಾಜದಲ್ಲಿನ ಸಾಮಾಜಿಕ ಕಳಕಳಿಯ ಚಳುವಳಿಗಳು. ಒಂದು ಸಮುದಾಯದ ಸಾಕ್ಷಿ ಪ್ರಜ್ಞೆಯಾದ ಹೋರಾಟಗಳು ಇರುವಲ್ಲಿ ಮಾತ್ರ ಸದಾ ಹೊಸತನದ ತುಡಿತವೊಂದನ್ನು, ಬದಲಾವಣೆಯ ಕನಸನ್ನು ಕಾಣಬಹುದಾಗಿದೆ. ನಿಷ್ಕ್ರಿಯವಾದ ಜನಸಮುದಾಯವೊಂದು ಯಥಾ ಸ್ಥಿತಿಯನ್ನು ಒಪ್ಪಿಕೊಂಡು ಬದುಕಿದೆಯೆಂದರೆ ಅದು ಪ್ರತಿಭಟಿಸುವ ತನ್ನ ಗುಣವನ್ನು ಕಳೆದುಕೊಂಡಿದೆಯೆಂದೂ, ಬದಲಾವಣೆ ಬಯಸುವ ಆಕಾಂಕೆಯನ್ನು ಬಿಟ್ಟು ಕೊಟ್ಟಿದೆಯೆಂದು ಅರ್ಥ.

ಕಳೆದೊಂದು ದಶಕದಿಂದಲೂ ಕರ್ನಾಟಕವೂ ಸಹ ಇಂತಹ ಕ್ರಿಯಾಹೀನತೆಯ ಸ್ಥಿತಿಯನ್ನು ತಲುಪಿದೆ. ಜಾಗತೀಕರಣದ ನಂತರ ನಮ್ಮ ಸಾಮಾಜಿಕ ಬದುಕಿನಲ್ಲಿ ಉಂಟಾದ ಆರ್ಥಿಕ ಪಲ್ಲಟಗಳು ಇದಕ್ಕೆ ಬಹಳಷ್ಟು ಮಟ್ಟಿಗೆ ಕಾರಣ. ಖಾಸಗಿ ಕ್ಷೇತ್ರದಲ್ಲಿ ದೊರೆತ ಉದ್ಯೋಗಾವಕಾಶಗಳು, ಹೆಚ್ಚಾದ ಮದ್ಯಮ ವರ್ಗದ ಕೊಳ್ಳುವ ಶಕ್ತಿ, ದಿಡೀರನೆ ನಮ್ಮ ಮದ್ಯಮವರ್ಗದ ಚಿಂತನೆಯ ದಿಕ್ಕುಗಳನ್ನೇ ಬದಲಾಯಿಸಿಬಿಟ್ಟಿತು. ಯಾಕೆಂದರೆ ತೊಂಭತ್ತರ ದಶಕದವರೆಗೂ ನಮ್ಮ ಬಹುತೇಕ ಚಳುವಳಿಗಳ ಮೂಲ ಶಕ್ತಿಯೇ ಈ ಮದ್ಯಮವರ್ಗವಾಗಿತ್ತು. ಅಕ್ಷರಸ್ಥ ಮದ್ಯಮವರ್ಗ ತಾವು ಓದಿಕೊಂಡ ಎಡಪಂಥೀಯ ಮತ್ತು ಸಮಾಜವಾದಿ ಧೋರಣೆಗಳಿಂದ ಪ್ರೇರೇಪಿತರಾಗಿದ್ದು, ಸಮುದಾಯದ ಯಾವುದೇ ಚಳುವಳಿಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿತ್ತು. ಅದು ದಲಿತ ಚಳುವಳಿಯಿರಲಿ, ರೈತ ಚಳುವಳಿಯಿರಲಿ, ಕನ್ನಡಪರ ಹೋರಾಟವಿರಲಿ, ಕಾರ್ಮಿಕ ಸಂಘಟನೆಗಳ ಮುಷ್ಕರಗಳಿರಲಿ ಇಲ್ಲ ಸರಕಾರಗಳ ಜನವಿರೋಧಿ ಕ್ರಮಗಳ ವಿರುದ್ಧದ ಚಳುವಳಿಯೇ ಇರಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪಾಲ್ಗೊಂಡು ತನ್ನ ಇರುವಿಕೆಯನ್ನು ಪ್ರದರ್ಶಿಸುತ್ತಿತ್ತು. ಶಿವಮೊಗ್ಗದಂತಹ ಪುಟ್ಟ ನಗರಗಳಲ್ಲಿ ಹೋಟಲಿನವರು ಇಡ್ಲಿ ಬೆಲೆಯನ್ನು 5 ಪೈಸೆ ಹೆಚ್ಚಿಸಿದರೂ ಜನ ಬೀದಿಗೆ ಬಂದು ಹೋರಾಟ ಮಾಡುತ್ತಿದ್ದರು. ಅಂದಿನ ವಿದ್ಯಾರ್ಥಿ ಸಂಘಟನೆಗಳು ಸಹ ಸಕ್ರಿಯವಾಗಿದ್ದು ತಮಗೆ ಸಂಬಂದಿಸಿರದ ಹಲವು ಸಾಮಾಜಿಕ ಹೋರಾಟಗಳಲ್ಲಿ ಬಾಗವಹಿಸುತ್ತಿತ್ತು. ನಂತರ ಪಶ್ಚಿಮ ಮಾದರಿಯ ಅಭಿವೃದ್ದಿಯೇ ಶ್ರೇಷ್ಠವೆಂದು ಭಾವಿಸಿದ ನಮ್ಮ ಸರಕಾರಗಳು ನಿರಂತರವಾಗಿ ಜಾರಿಗೆ ತಂದ ಮುಕ್ತ ಆರ್ಥಿಕ ನೀತಿಯ ಫಲವಾಗಿ ಸಮಾಜದ ಅಕ್ಷರಸ್ಥ ಮದ್ಯಮವರ್ಗ ಉಳಿದ ವರ್ಗಗಳಿಂದ ದೂರ ಸರಿಯತೊಡಗಿತು. ಮಾರುಕಟ್ಟೆ ನೀತಿಯಿಂದಾಗಿ ಸೃಷ್ಠಿಯಾದ ಖಾಸಗಿ ಕ್ಷೇತ್ರದ ಬಹುಪಾಲು ಉದ್ಯೋಗಗಳನ್ನು ತನ್ನ ಮಡಿಲಿಗೆ ಹಾಕಿಕೊಂಡ ಅದು ತನ್ನ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಿಕೊಂಡ ಕೂಡಲೇ ತನ್ನ ಸಮಾಜವಾದಿ ಮತ್ತು ಎಡಪಂಥೀಯ ಚಿಂತನೆಗಳಿಂದ ದೂರಾಗಿ ಮಾರುಕಟ್ಟೆಯ ಗುಲಾಮಗಿರಿಯಲ್ಲಿ ತೊಡಗಿಸಿಕೊಂಡಿತು. ಹೀಗೆ ಇಂಡಿಯಾದೊಳಗೆ ಕಾಲಿಟ್ಟ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಮಿಕ ಸಂಘಟನೆಗಳ ಮಾತೇ ಇರಲಿಲ್ಲ. ನಮ್ಮ ಸರಕಾರಗಳು ಸಹ ನಿದಾನವಾಗಿ ಶಬ್ದವೇ ಆಗದಂತೆ ನಮ್ಮ ಸಾರ್ವಜನಿಕ ಉದ್ಯಮಗಳ ಕತ್ತು ಹಿಚುಕ ತೊಡಗಿತು. ಗ್ರಾಹಕ ಸಂಸ್ಕೃತಿಯಲ್ಲಿ ಮೈಮರೆತ ಇಡೀ ಸಮಾಜ ತನ್ನ ಹಕ್ಕುಗಳನ್ನು ಕೇಳುವುದಕ್ಕಿಂತ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ದುಡ್ಡು ಮಾಡುವ ಸುಲಭೋಪಾಯಕ್ಕೆ ಶರಣಾಯಿತು. ಹೀಗಾಗಿ ಕಳೆದೆರಡು ದಶಕಗಳು ಯಾವುದೇ ಚಳುವಳಿಗಳಾಗಲಿ ಹೋರಾಟಗಳಾಗಲಿ ಇರದೆ ಆಳುವ ಶೋಷಕ ಶಕ್ತಿಗಳ ಕೈ ಮೇಲಾಗ ತೊಡಗಿತು. ಹೀಗಾಗಿಯೇ ಕೇಂದ್ರ ಸರಕಾರ ಅಮೇರಿಕಾದಂತಹ ರಾಷ್ಟ್ರದ ಜೊತೆ ನಾಗರೀಕ ಅಣ್ವಸ್ತ್ರ ನೀತಿಯಂತಹ ಒಪ್ಪಂದಕ್ಕೆ ಸಹಿ ಹಾಕಿತು. ನಂತರ ಜನವಿರೋಧಿಯಾದ ಹಲವು ಒಡಂಬಡಿಕೆಗಳಿಗೆ ಸಹಿ ಹಾಕುತ್ತಾ ಇವತ್ತಿಗೆ ಇಡೀ ದೇಶವನ್ನು ಬಂಡವಾಳಶಾಹಿ ಶಕ್ತಿಗಳ ಕೈಲಿಟ್ಟು ತಾವು ನೆಪ ಮಾತ್ರಕ್ಕೆ ಅಧಿಕಾರದ ಕುರ್ಚಿಯಲ್ಲಿ ಕುಳಿತಿದ್ದಾರೆ.
 
ಹೀಗಾಗಿ ಇವತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಡಿಸುವ ಬಜೆಟ್ಟುಗಳು ಸಹ ಇವೇ ಬಂಡವಾಳಶಾಹಿ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಮಂಡಿಸಲ್ಪಡುವುದನ್ನು ನಾವು ಕಾಣಬಹುದಾಗಿದೆ. ಇದಕ್ಕೆ ನಮ್ಮ ಎಡಪಕ್ಷಗಳ ಪಾತ್ರವೂ ಕೆಲಮಟ್ಟಿಗೆ ಕಾರಣವೆನ್ನಬಹುದು. ಅವೂ ಸಹ ಸತತವಾಗಿ ನಡೆಯಲ್ಪಡುತ್ತಿರುವ ಶಕ್ತಿ ರಾಜಕಾರಣದ ಸುಳಿಯೊಳಗೆ ಸಿಲುಕಿ ಚುನಾವಣೆಗಳಲ್ಲಿಯೇ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾ ಸಂಘಟನೆಯ ಕಡೆ ಗಮನ ಕೊಡುತ್ತಿಲ್ಲ. ಹಲವಾರು ಅಸಂಘಟಿತ ಕ್ಷೇತ್ರಗಳಿದ್ದು ಅಲ್ಲಿಯಾದರು ತಮ್ಮ ಸಂಘಟನೆಗಳನ್ನು ಶುರು ಮಾಡಿ ತಮ್ಮ ಸಿದ್ದಾಂತಗಳನ್ನು ಪ್ರಚಾರ ಪಡಿಸುವಲ್ಲಿ ವಿಫಲವಾಗುತ್ತಿವೆ. ಈಗಾಗಲೇ ಅಸ್ಥಿತ್ವದಲ್ಲಿರುವ ಒಂದಷ್ಟು ಸಾರ್ವಜನಿಕ ವಲಯವನ್ನು ಬಿಟ್ಟರೆ ಉಳಿದಂತೆ ಅದು ಕೃಷಿಯಂತಹ ಅಸಂಘಟಿತ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಒಂದು ಪೀಳಿಗೆಯ ಯುವಜನತೆಗೆ ಎಡಪಂಥೀಯ ಧೋರಣೆಗಳ ಬಗ್ಗೆ ಸರಿಯಾದ ಜ್ಞಾನವಿಲ್ಲದಂತಾಗಿದೆ. ಇಂತಹ ಅವಕಾಶವನ್ನು ಬಳಸಿಕೊಂಡ ಸಂಘ ಪರಿವಾರದಂತಹ ಬಲಪಂಥೀಯ ಸಂಘಟನೆಗಳು ಧರ್ಮ, ದೇಶಭಕ್ತಿಯಂತಹ ಬಾವನಾತ್ಮಕ ವಿಷಯಗಳನ್ನು ಅವರುಗಳ ತಲೆಗೆ ತುಂಬುತ್ತಾ, ಅವರನ್ನು ದಾರಿತಪ್ಪಿಸುತ್ತಿವೆ. ಇದರಿಂದಾಗಿ ನಮ್ಮ ಯುವ ಪೀಳಿಗೆ ಮತಾಂಧತೆಯತ್ತ ವಾಲುತ್ತಿದ್ದಾರೆ.
 
ಇವೆಲ್ಲ ಕಾರಣಗಳಿಂದಾಗಿ ಇಂದಿನ ಸರಕಾರಗಳು ಕಾರ್ಮಿಕ ಸಂಘಟನೆಗಳ, ಜನಸಮುದಾಯದ ಸಂಘಟಿತ ಹೋರಾಟದ ಬಗ್ಗೆ ಯಾವುದೇ ಭಯ ಹೊಂದಿಲ್ಲ. ತಮಗಿನ್ಯಾವ ಪ್ರತಿರೋಧವೂ ಇಲ್ಲವೆಂದುಕೊಂಡ ಅವು ಕಾರ್ಪೋರೇಟ್ ವಲಯದ ಪರವಾಗಿ ತಮಗೆ ಬೇಕಾದ ಹಾಗೆ ಹಳೆಯ ಕಾನೂನುಗಳನ್ನುತಿದ್ದುಪಡಿ ಮಾಡುತ್ತಾ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಾ ನಡೆಯುತ್ತಿವೆ. ಇಂತಹದೊಂದು ಅಹಂಕಾರದ ಫಲವಾಗಿಯೇ ಈ ವರ್ಷ ಎರಡು ಕಾನೂನುಗಳಿಗೆ ತಿದ್ದುಪಡಿ ತರಲಾಯಿತು.

ಮೊದಲನೆಯದು, ಅಂಚೆಕಛೇರಿಗಳಲ್ಲಿ ಮದ್ಯಮವರ್ಗ ಮಾಡುವ ಅಲ್ಪಾವಧಿ ಮತ್ತು ದೀರ್ಘಾವಧಿ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿತು. ಬಹು ದೊಡ್ಡ ಪ್ರತಿರೋಧವನ್ನು ಒಡ್ಡ ಬೇಕಾಗಿದ್ದ ಸಮುದಾಯ ಯಾವುದೇ ಸಂಘಟನೆಯೂ ಇಲ್ಲದೆ ಸುಮ್ಮನೆ ಅದನ್ನು ಒಪ್ಪಿಕೊಳ್ಳಬೇಕಾಯಿತು.
 
ಇನು ಎರಡನೆಯದು, ನೌಕರರ ಪ್ರಾವಿಡೆಂಟ್ ಫಂಡ್ ಬಗೆಗಿನ ಕಾನೂನು ತಿದ್ದು ಪಡಿಯ ವಿಚಾರ. ಈ ತಿದ್ದುಪಡಿಗೆ ಮುನ್ನುಡಿ ಬರೆದ ವಾರಗಳ ನಂತರವೂ ನಮ್ಮ ಸಂಘಟನೆಗಳು ಹೋರಾಟದ ರೂಪು ರೇಷೆಯ ಬಗ್ಗೆ ಚರ್ಚೆಯಲ್ಲಿಯೇ ಮುಳುಗಿ ಹೋಗಿ ತಕ್ಷಣದ ಯಾವುದೇ ಪ್ರತಿರೋಧ ಒಡ್ಡಲು ವಿಫಲವಾದವು. ಆದರೆ ಬೆಂಗಳೂರಿನ ಅಸಂಖ್ಯಾತ ಗಾರ್ಮೆಂಟ್ಸ್ ಮತ್ತು ಇತರೇ ಅಸಂಘಟಿತ ಉದ್ಯಮಗಳ ನೌಕರರು ಸುಮ್ಮನೇ ಕೂರಲಿಲ್ಲ. ಅಧಿಕೃತವಾಗಿ ಅವರಿಗ ತಮ್ಮದೇ ಆದ ಯೂನಿಯನ್ ಎಂಬುದಿಲ್ಲದಿದ್ದರೂ, ಸ್ಥಳೀಯವಾಗಿಯೇ ಒಂದು ನಾಯಕತ್ವವನ್ನು ರೂಪಿಸಿಕೊಂಡು ಕಳೆದ ವಾರ ದಿಡೀರನೆ ಮುಷ್ಕರಕ್ಕೆ ಇಳಿದು ಬಿಟ್ಟರು. ಬಹಳ ವರ್ಷಗಳ ನಂತರ ಬೆಂಗಳೂರಿನ ಬೀದಿಗಳಲ್ಲಿ ಸರಕಾರದ ವಿರುದ್ದ ಘೋಣೆಗಳು ಮೊಳಗಿದವು. ಯಾವ ಒತ್ತಡಕ್ಕೂ ಮಣಿಯದೆ, ಪೋಲಿಸರ ಬಲಪ್ರಯೋಗಕ್ಕೂ ಬಾಗದೆ ಎರಡು ದಿನಗಳ ಕಾಲ ಇಡೀ ನಗರವನ್ನು ತಮ್ಮ ವಶಕ್ಕೆ ಪಡೆದು ಆಡಳಿತ ಯಂತ್ರವನ್ನೇ ಕಂಗಾಲು ಮಾಡಿಬಿಟ್ಟರು. ಈ ಹೋರಾಟ ಇತರೇ ನಗರಗಳಿಗೂ ವಿಸ್ತರಿಸುವ ಭಯದಿಂದ ಕೇಂದ್ರ ಸರಕಾರ ತನ್ನ ನಿರ್ದಾರವನ್ನು ಹಿಂಪಡೆಯಬೇಕಾಯಿತು. ಗಾರ್ಮೆಂಟ್ಸ್ ಮಹಿಳೆಯರೇ ಹೆಚ್ಚಿದ್ದ ಈ ಹೋರಾಟಕ್ಕೆ ಯಾವ ಸಂಘಟನೆಯ ಬೆಂಬಲವಿಲ್ಲದ್ಯಾಗು ಸಹ ತಮ್ಮ ಚಳುವಳಿಯನ್ನು ಯಾಶಸ್ವಿಗೊಳಿಸುವಲ್ಲಿ ಸಫಲರಾದರು. ಬಹುಶ: ಕಾರ್ಮಿಕರು ಗುಡುಗಿದರೆ ಸರಕಾರ ನಡುಗುತ್ತದೆ ಎನ್ನುವ ಹಳೆಯ ಮಾತು ಮತ್ತೊಂದು ಬಾರಿ ಸಾಭೀತಾಯಿತು. ಈ ಹೋರಾಟ ನಮ್ಮ ಎಡಪಂಥೀಯ ಸಂಘಟನೆಗಳೂ ಸೇರಿದಂತೆ ಉಳಿದೆಲ್ಲ ಅಂದರೆ ರೈತ ಸಘಟನೆಗಳಿಗೆ, ಕನ್ನಡಪರ ಸಂಘಟನೆಗಳಿಗೆ, ದಲಿತ ಸಂಘಟನೆಗಳಿಗೆ ಪಾಠವಾಗಬೇಕು. ಎಲ್ಲ ನಿಷೇಧಗಳ ನಡುವೆಯೂ ಒಂದು ಚಳುವಳಿಯನ್ನು ಹುಟ್ಟು ಹಾಕಿ ಹೋರಾಡಬಹುದೆಂಬುದನ್ನು ಅರ್ಥ ಮಾಡಿಕೊಂಡು ಮುಂದಿನ ನಡೆಗಳನ್ನು ಇಡಬೇಕಾಗಿದೆ. ಹಾಗೆ ಮಾಡಿದರೆ ಮಾತ್ರ ಜಾಗತೀಕರಣದ ಪ್ರಭಾವದಿಂದ ಜನವಿರೋಧಿಯಾಗುತ್ತಿರುವ ಸರಕಾರಗಳನ್ನು ಬಗ್ಗಿಸಬಹುದಾಗಿದೆ. ಇಲ್ಲದೇ ಹೋದಲ್ಲಿ ಬಂಡವಾಳಶಾಹಿಗಳ ಜೊತೆ ಸೇರಿಕೊಳ್ಳುವ ಮತೀಯ ಶಕ್ತಿಗಳು ಈ ನಾಡಿನ ಜಾತ್ಯಾತೀತ ಚಿತ್ರಣವನ್ನು, ದುಡಿಯುವ ವರ್ಗಗಳ ಬದುಕನ್ನು ನಾಶ ಮಾಡುವುದು ಖಂಡಿತಾ!

No comments:

Post a Comment