Apr 20, 2016

ಮಾಹಿತಿ ಹಕ್ಕು ಕಾಯಿದೆ ಮತ್ತು ರಾಜಕೀಯ ಪಕ್ಷಗಳ ಸ್ವಹಿತಾಸಕ್ತಿ!

ಕು.ಸ.ಮಧುಸೂದನ ರಂಗೇನಹಳ್ಳಿ
20/04/2016
೨೦೦೫ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾನೂನಿಗೆ ಮೊದಮೊದಲು ರಾಜಕಾರಣಿಗಳಿಂದ ಮತ್ತು ಅಧಿಕಾರಶಾಹಿಯಿಂದ ತೀವ್ರ ವಿರೋಧ ವ್ಯಕ್ತವಾದರೂ ಬಹುತೇಕ ಮಾಧ್ಯಮಗಳು ಮತ್ತು ಸಾರ್ವಜನಿಕರು ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು. ಯಾಕೆಂದರೆ ಆಡಳಿತದಲ್ಲಿ ಪಾರದರ್ಶಕತೆ ತರಲು ಮತ್ತು ಹೊಣೆಗಾರಿಕೆಯನ್ನು ಹೇರಲು ಈ ಕಾನೂನನ್ನು ರೂಪಿಸಲಾಗಿತ್ತು. ತನ್ಮೂಲಕ ಜನತೆಯ ಕೈಗೆ ಮಹತ್ತರ ಆಯುಧವೊಂದನ್ನು ನೀಡುವ ಉದ್ದೇಶ ಸರಕಾರಕ್ಕಿತ್ತು. ಸರಕಾರದ ಪ್ರತಿ ಚಟುವಟಿಕೆಗಳ ಮಾಹಿತಿಯೂ ಜನರಿಗೆ ಗೊತ್ತಿರಬೇಕೆಂಬುದೇ ಕಾಯಿದೆಯ ಮೂಲ ಮಂತ್ರವಾಗಿತ್ತು.

ಕಳೆದ ಹನ್ನೊಂದು ವರ್ಷಗಳಲ್ಲಿ ಈ ಮಾಹಿತಿಹಕ್ಕು ಕಾಯಿದೆ ಹಲವು ರೀತಿಯಲ್ಲಿ ಕ್ರಾಂತಿಯನ್ನುಂಟು ಮಾಡಿರುವುದು ನಿಜವಾದರೂ, ಸದರಿ ಕಾಯಿದೆಯ ಸದುಪಯೋಗ ಮತ್ತು ದುರುಪಯೋಗಗಳು ಸಮಾನವಾಗಿ ನಡೆದಿದ್ದು ಕಾಯಿದೆಯ ಮೂಲ ಉದ್ದೇಶವನ್ನಿನ್ನೂ ಸಾದಿಸಲಾಗಿಲ್ಲವೆಂಬುದೇ ವಿಷಾದದ ಸಂಗತಿ. ಹತ್ತು ವರ್ಷಗಳ ಹಿಂದೆ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯಿದೆ ಕೇಂದ್ರ ಮತ್ತು ಹಲವು ರಾಜ್ಯ ಸರಕಾರಗಳ ಭ್ರಷ್ಟಾಚಾರ ಪ್ರಕರಣಗಳನ್ನು ಬಹಿರಂಗಗೊಳಿಸಿದೆ. ದೇಶದಾದ್ಯಂತ ಸೃಷ್ಠಿಯಾದ ನೂರಾರು ಆರ್.ಟಿ.ಐ. ಕಾರ್ಯಕರ್ತರು ಇದನ್ನು ಬಳಸಿ ಹಲವು ರಾಜಕಾರಣಿಗಳ ಮತ್ತು ಅಧಿಕಾರಿಗಳ ನಿದ್ದೆಗೆಡಿಸುತ್ತಿದ್ದಾರೆ. ಆದರೆ ದುರಂತವೆಂದರೆ ಮಾಹಿತಿ ಹಕ್ಕು ಕಾಯಿದೆ ಹಲವು ಕ್ಷೇತ್ರಗಳಿಗೆ ಅನ್ವಯವಾಗದಿರುವುದು. ಹೀಗಾಗಿ ಈ ಕಾಯಿದೆಯ ಮೂಲಮಂತ್ರವಾದ ಸಂಪೂರ್ಣ ಮಾಹಿತಿ ಎನ್ನುವುದು ಹುಸಿಯಾಗಿದೆ.

ಸಾರ್ವಜನಿಕ ಹಣದಲ್ಲಿ ನಡೆಯುವ ಎನ್.ಜಿ.ಒ.ಗಳನ್ನು, ಖಾಸಗಿ ಟ್ಟಸ್ಟ್‌ಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಮತ್ತು ಸರಕಾರದ ಪರೋಕ್ಷ ಹಿಡಿತದಲ್ಲಿರುವ ಹಲವು ಕ್ರೀಡಾ ಪ್ರಾಧಿಕಾರಗಳನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಾಹಿತಿ ಪಡೆಯುವ ಜನತೆಯ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಶದ ಆರ್ಥಿಕ ನೀತಿಯನ್ನೇ ನಿರ್ದೇಶಿಸುವ ಮಟ್ಟಕ್ಕೆ ಬೆಳೆದು ನಿಂತಿರುವ ಕಾರ್ಪೋರೇಟ್ ಕಂಪನಿಗಳನ್ನು ಈ ಕಾಯಿದೆಯಿಂದ ಹೊರಗಿಟ್ಟು ಇದರ ಮೂಲ ಆಶಯವನ್ನೇ ಮಣ್ಣುಪಾಲು ಮಾಡಲಾಗಿದೆ.

ಇವೆಲ್ಲದರ ಹೊರತಾಗಿಯೂ ಈ ಕಾಯಿದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ನಮ್ಮ ಸರಕಾರಗಳು ಅದರ ಕಾರ್ಯಾಂಗದ ಭಾಗವಾಗಿರುವ ಅಧಿಕಾರಿಗಳು ಹೊಸ ಹೊಸ ತಂತ್ರಗಳನ್ನು ಹೆಣೆಯುತ್ತ ವಾಮಮಾರ್ಗಗಳನ್ನು ಅನುಸರಿಸುತ್ತಿವೆ. ಇದಕ್ಕಾಗಿಯೇ ಸರಕಾರ ಮತ್ತು ಖಾಸಗಿ ಸಹಬಾಗಿತ್ವ ಎನ್ನುವ ಹೆಸರಿನಡಿಯಲ್ಲಿ ಹೊಸಯೋಜನೆಗಳನ್ನು ಜಾರಿಗೆ ತರುತ್ತಾ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯದಲ್ಲಿ ತೊಡಗಿವೆ. ಹೀಗೆ ಸರಕಾರ ಸಾರ್ವಜನಿಕರ ಸಾವಿರಾರು ಕೋಟಿ ರೂಪಾಯಿಗಳನ್ನು ಮತ್ತು ರೈತರ ನೂರಾರು ಏಕರೆ ಭೂಮಿಯನ್ನು ಟೋಲ್ ರಸ್ತೆಗಳ ನಿರ್ಮಾಣಕ್ಕೆ, ರೈಲು, ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸರಕಾರಿ-ಖಾಸಗಿ ಸಹಬಾಗಿತ್ವದ ಹೆಸರಲ್ಲಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುತ್ತಿವೆ. ಇದರಲ್ಲಿ ರಾಜಕೀಯ ನಾಯಕರುಗಳು ಮತ್ತು ಸರಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಮಾಡುವ ಭ್ರಷ್ಟತೆಯ ವಿಷಯ ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ನಡೆಯುತ್ತಿದೆ. ಮಾಹಿತಿ ಹಕ್ಕು ಕಾಯಿದೆಯು ಇಂತಹ ಯೋಜನೆಗಳಿಗೆ ಅನ್ವಯವಾಗುವುದಿಲ್ಲವಾದ್ದರಿಂದ ಇದರ ಬಗ್ಗೆ ಜನತೆಗೆ ಯಾವುದೇ ಸಣ್ಣ ಮಾಹಿತಿಯೂ ಅಧಿಕೃತವಾಗಿ ದೊರೆಯುತ್ತಿಲ್ಲ.

ಇದೆಲ್ಲಕ್ಕೂ ಕಳಸವಿಟ್ಟಂತೆ ನಮ್ಮ ರಾಜಕೀಯ ಪಕ್ಷಗಳನ್ನು ಸಹ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಟ್ಟು ದೊಡ್ಡ ಪ್ರಮಾದವೊಂದನ್ನು ಎಸಗಲಾಗಿದೆ. ಹೀಗಾಗಿ ಪ್ರತಿ ರಾಜಕೀಯ ಪಕ್ಷವೂ ಖಾಸಗಿ ಕಾರ್ಪೋರೇಟ್ ಕಂಪನಿಗಳಿಂದ ಕೋಟ್ಯಾಂತರ ರೂಪಾಯಿಗಳ ದೇಣಿಗೆಯನ್ನು ಪಡೆದರೂ, ಅದು ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ. ಹೀಗೆ ಖಾಸಗಿ ಕಂಪನಿಗಳು ಕೊಡುವ ಹಣದ ಬಗ್ಗೆ ಅವರಾಗಲಿ, ಪಡೆಯುವ ರಾಜಕೀಯ ಪಕ್ಷಗಳಾಗಲಿ ಸಾರ್ವಜನಿಕರಿಗೆ ಅಧಿಕೃತ ಮಾಹಿತಿ ನೀಡಬೇಕಾದ ಕಟ್ಟುಪಾಡಿಗೆ ಒಳಪಡದೇ ಇರುವುದರಿಂದ ಅಲ್ಲಿಯೂ ಸ್ವಹಿತಾಸಕ್ತಿಗಳೇ ಕೆಲಸ ಮಾಡುತ್ತಿವೆ. ಹೀಗಾಗಿಯೇ ಎಲ್ಲ ರಾಜಕೀಯ ಪಕ್ಷಗಳೂ ಸಹ ಚುನಾವಣೆಯ ಸಂದರ್ಭದಲ್ಲಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾ ನಮ್ಮ ಚುನಾವಣಾ ವ್ಯವಸ್ಥೆಯನ್ನು ಭ್ರಷ್ಟಗೊಳಿಸಿಬಿಟ್ಟಿವೆ. ಹೀಗಾಗಿಯೇ ಅಧಿಕಾರಕ್ಕೇರಿದ ಎಲ್ಲ ರಾಜಕೀಯ ಪಕ್ಷಗಳೂ ಕಾರ್ಪೋರೇಟ್ ಕಂಪನಿಗಳ ಹಿತ ಕಾಯುವಲ್ಲಿ ಆಸಕ್ತಿ ವಹಿಸಿ ಕೆಲಸ ಮಾಡುತ್ತವೆ.

ವಿಷಾದವೆಂದರೆ ೨೦೦೫ರಲ್ಲಿ ಯು.ಇ.ಎ. ಸರಕಾರ ಈ ಕಾಯಿದೆಯನ್ನು ಸಂಸತ್ತಿನಲ್ಲಿ ಮಂಡಿಸಿದಾಗ ರಾಜಕೀಯ ಪಕ್ಷಗಳನ್ನು ಕೈಬಿಟ್ಟ ಬಗ್ಗೆ ದೊಡ್ಡ ಗಲಾಟೆ ಮಾಡಿದ ಬಾಜಪ ಇವತ್ತು ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಕಳೆದರೂ ಈ ಕಾಯಿದೆಯನ್ನು ತಿದ್ದುಪಡಿ ಮಾಡಿ ಇದರ ವ್ಯಾಪ್ತಿಗೆ ರಾಜಕೀಯ ಪಕ್ಷಗಳನ್ನೂ, ಕಾರ್ಪೋರೇಟ್ ಕಂಪನಿಗಳನ್ನೂ ತರುವ ಯಾವ ಪ್ರಯತ್ನವನ್ನೂ ಮಾಡಲು ಮನಸ್ಸು ಮಾಡುವಂತೆ ಕಾಣುತ್ತಿಲ್ಲ. ಹೀಗಾಗಿ ಇಂತಹ ವಿಷಯಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ ರೀತಿಯಲ್ಲಿ ಆಲೋಚಿಸುತ್ತವೆ ಮತ್ತುಒಂದೇ ದಿಕ್ಕಿನಲ್ಲಿ ನಡೆಯುತ್ತವೆ ಎನ್ನುವುದು ಖಾತ್ರಿಯಾಗುತ್ತದೆ.

No comments:

Post a Comment