Jan 28, 2016

ಪಿ. ಸಾಯಿನಾಥ್: ಇದು ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರು, ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ

ಸಾಂದರ್ಭಿಕ ಚಿತ್ರ
ರೋಹಿತ್ ವೇಮುಲ ಆತ್ಮಹತ್ಯೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಉದ್ದೇಶಿಸಿ ನಮ್ಮ ನಡುವಿನ ಖ್ಯಾತ ಪತ್ರಕರ್ತ ಮತ್ತು ಚಿಂತಕ ಪಿ. ಸಾಯಿನಾಥ್ ಮಾಡಿದ ಭಾಷಣದ ಕನ್ನಡ ಭಾವಾನುವಾದ. . . 
ಕನ್ನಡಕ್ಕೆ: ಡಾ. ಕಿರಣ್ ಎಂ ಗಾಜನೂರು
ಭಾರತದ ತಳವರ್ಗದ, ತುಳಿತಕ್ಕೊಳಗಾದವರ, ಅಂಚಿಗೆ ತಳ್ಳಲ್ಪಟ್ಟವರ ನೆಲೆಯಲ್ಲಿ ಯೋಚಿಸಿದರೆ ರೋಹಿತ್ ಬಹಳ ದೊಡ್ಡ ಸಾಧನೆ ಮಾಡಿದ್ದಾನೆ! ಆತ ಮಾಡಿದ ಸಾಧನೆಯನ್ನು ನೀವು ತಿಳಿದುಕೊಳ್ಳಬೇಕಾದರೆ ಈ ದೇಶದ ಜನಗಣತಿಯ ವರದಿಗಳನ್ನು, ಸಮುದಾಯಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆಗಳನ್ನು, ನ್ಯಾಷನಲ್ ಸ್ಯಾಂಪೆಲ್ ಸರ್ವೇ (National Sample Survey) ಇಲಾಖೆಯ ಅಂಕಿ-ಅಂಶಗಳನ್ನು ಗಮನಿಸಬೇಕು. ಆಗ ಆತ ಮಾಡಿರುವ ಸಾಧನೆ ಏನು ಎಂಬುದು ಅರ್ಥವಾಗುತ್ತದೆ.
1.28 ಬಿಲಿಯನ್ ಜನಸಂಖ್ಯೆಯುಳ್ಳ ಭಾರತದಲ್ಲಿ ಕೇವಲ 3 ಶೇಕಡಾ, ಕೇವಲ ಮೂರೇ ಮೂರು ಶೇಕಡಾ ಗ್ರಾಮೀಣ ಕುಟುಂಬಗಳಲ್ಲಿ ಮಾತ್ರ ಪದವೀಧರರಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ ಸರಾಸರಿ. ಇದನ್ನು ಆದಿವಾಸಿ ಮತ್ತು ದಲಿತರ ಹಿನ್ನಲೆಯಲ್ಲಿ ನೋಡಿದರೆ ಆ ಸಂಖ್ಯೆ ಇನ್ನೂ ಕೆಳಹಂತದಲ್ಲಿದೆ. ಭಾರತದ ಜನಗಣತಿಯ ವರದಿಗಳು ತೋರಿಸುವಂತೆ ಈ ದೇಶದಲ್ಲಿ ಸುಮಾರು 400 ಮಿಲಿಯನ್ ಜನರು ಇದುವರೆಗೂ ಯಾವುದೇ ಹಂತದ ಶಿಕ್ಷಣ ಸಂಸ್ಥೆಗಳ ಒಳಭಾಗವನ್ನು ನೋಡಿಯೇ ಇಲ್ಲ ! ಆ ಹಿನ್ನಲೆಯಿಂದ ಬಂದ ರೋಹಿತ್ ಮೆರಿಟ್ ಕೋಟಾದಲ್ಲಿ ಪಿ.ಹೆಚ್.ಡಿ ಹಂತಕ್ಕೆ ಬರುತ್ತಾನೆ ಎಂದರೆ ಅದಕ್ಕಿಂತ ಸಾಧನೆ ಏನಿದೆ! ಇದು ಸಾಧನೆ ಎಂದರೆ.
ಆದರೆ ದುರಂತ ಎಂದರೆ ಇಂದು ಈ ಸಮಾಜದ ನಿರಂತರ ಶೋಷಣೆಯನ್ನು, ತಾರತಮ್ಯವನ್ನು ಜಯಿಸಿ ಮೆರಿಟ್ ಆಧಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪಿ.ಹಚ್.ಡಿ ಹಂತಕ್ಕೆ ಬಂದ ರೋಹಿತನ ವಿರುದ್ಧ ನಿಂತಿರುವುದು ಕಾಲೇಜು ಡ್ರಾಪ್ ಔಟ್ ಆದ ಶಿಕ್ಷಣ ಸಚಿವರು! ನನಗೆ ತಿಳಿದಿರುವಂತೆ ಇವರು ಭಾರತದ ರಾಜಕೀಯ ಇತಿಹಾಸದಲ್ಲಿನ ಅತ್ಯಂತ ಕಳಪೆ ಶಿಕ್ಷಣ ಸಚಿವರು. ಇದರಲ್ಲಿ ನನಗೆ ಯಾವ ಸಂಶಯವೂ ಇಲ್ಲ! ನಾನು ರೋಹಿತ್ ನನ್ನು ಅವರೊಂದಿಗೆ ಹೋಲಿಸುವುದಿಲ್ಲ, ಏಕೆಂದರೆ ನಮಗೆ ಅವರ ಶೈಕ್ಷಣಿಕ ಅರ್ಹತೆಗಳೇನು ಎಂಬುದೇ ಗೊತ್ತಿಲ್ಲ! ಅವರು ಪ್ರತಿಬಾರಿ ಪ್ರಮಾಣ ಪತ್ರಗಳನ್ನು ಸಲ್ಲಿಸುವಾಗ ಅವರ ಪದವಿ ಬದಲಾಗುತ್ತಿರುತ್ತವೆ, ಕಳೆದ ಚುನಾವಣೆಯ ನಂತರ ಅವರು ಎ.ಎಲ್ ವಿಶ್ವವಿದ್ಯಾನಿಲಯದ ಪ್ರಮಾಣ ಪತ್ರ ಪ್ರದರ್ಶಿಸಿದ್ದರು. . . 
sainath speech on rohit vemula
ಆ ಹುಡುಗನನ್ನು ನೋಡಿ, ಅವನು ಶಾಲೆಗಳ ಮುಖವನ್ನೇ ನೋಡದ ಆ ೪೦೦ ಮಿಲಿಯನ್ ಜನರ ನಡುವಿನಿಂದ ಬಂದಿದ್ದಾನೆ, ಈ ದೇಶದ ಶೋಷಿತ ಇತಿಹಾಸದ ಮಧ್ಯದಿಂದ ಎದ್ದು ಬಂದಿದ್ದಾನೆ. ಈ ಸಮಾಜದ ಶೋಷಣೆಯಿಂದ ನಲುಗಿ, ಜೀತ ಕಾರ್ಮಿಕನಾಗಿ ದುಡಿದು ಪಿ.ಹೆಚ್.ಡಿ ಅಧ್ಯಯನಕ್ಕೆಂದು ಬಂದಿದ್ದಾನೆ.
ಆದರೆ ಏನಾಗುತ್ತಿದೆ ನೋಡಿ? ಕೇಂದ್ರ ಮಂತ್ರಿ ನಾನು ಎರಡು ಪತ್ರ ಬರೆದೆ ಎನ್ನುತ್ತಾರೆ! ಶಿಕ್ಷಣ ಸಚಿವರು ನಾನು ಐದು ಪತ್ರ ಬರೆದೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯದ ವಿಷಯ ಎಂದರೆ ಆ ಹುಡುಗರ ಮೇಲೆ ಏನು ಕ್ರಮ ಜರುಗಿಸಲಾಗಿದೆ ಎಂದು ಐದು ಪತ್ರ ಬರೆಯುವ ಶಿಕ್ಷಣ ಸಚಿವರು ಆ ಮಕ್ಕಳಿಗೆ ಕಳೆದ ಏಳು ತಿಂಗಳಿಂದ ಶಿಷ್ಯವೇತನ ಏಕೆ ಕೊಟ್ಟಿಲ್ಲ ಎಂದು ಒಂದೇ ಒಂದು ಸಾಲು ಬರೆಯುವುದಿಲ್ಲ. . .
ಆ ಮಕ್ಕಳ ಕುರಿತು ತೆಗೆದುಕೊಂಡ ಕ್ರಮವನ್ನು ತಿಳಿಯಲು ಐದು ಪತ್ರ ಬರೆಯುವ ನೀವು ಪತ್ರದಲ್ಲಿ ಆ ಹುಡುಗನ ಕುಟುಂಬ ಆಧರಿಸಿದ್ದ, ಆತ ಸರಳವಾಗಿ ಬದುಕು ನಡೆಸಿ ಉಳಿಸಿ ಕುಟುಂಬಕ್ಕೆ ಕಳುಹಿಸುತ್ತಿದ್ದ ಶಿಷ್ಯವೇತನವನ್ನು ತಡೆದ ವ್ಯವಸ್ಥೆಯ ಕುರಿತು ಒಂದು ಪ್ಯಾರ, ಒಂದು ಸಾಲು, ಒಂದೇ ಒಂದು ಪದವನ್ನು ಬರೆಯುವುದಿಲ್ಲ. ಆತನ ಮೇಲೆ ತೆಗೆದುಕೊಂಡ ಕ್ರಮದ ಮೇಲಿನ ನಿಮ್ಮ ಆಸಕ್ತಿ ಆತನ ಶಿಷ್ಯವೇತನ ನಿಲ್ಲಿಸಿರುವುದರ ಕುರಿತು, ಅದನ್ನೇ ನಂಬಿಕೊಂಡ ಆತನ ಕುಟುಂಬದ ಪರಿಸ್ಥಿತಿಯ ಮೇಲೆ ಇರುವುದಿಲ್ಲ!
ನಾವು ಇಂದು ರಾಜಕೀಯ, ಅಕಾಡೆಮಿಕ್ ಮತ್ತು ರಾಷ್ಟ್ರ ಎಂಬ ಮೂರು ಮುಖ್ಯ ವಿಷಯಗಳನ್ನು ಗಮನಿಸುವ ಹಂತಕ್ಕೆ ಬಂದಿದ್ದೇನೆ. ನಾನು ಈ ವಿಷಯಗಳ ಕುರಿತ ಪತ್ರಿಕಾ ವರದಿಗಳನ್ನು ಗಮನಿಸುತ್ತಿದ್ದೇನೆ, ಇಲ್ಲಿ ಆತ ಬರೆದ ಆತ್ಮಹತ್ಯಾ ಪತ್ರವನ್ನು ಆತ್ಮಹತ್ಯೆಯಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನ ನಡೆಯುತ್ತಿದೆ, ಆತ್ಮಹತ್ಯಾ ಪತ್ರವನ್ನು ಆತನ ಬದುಕಿನಿಂದ ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ನಾವು ರೋಹಿತನ ಸಾವನ್ನಷ್ಟೆ ನೋಡಿದರೆ ಸಾಲದು, ಬದಲಾಗಿ ಆತ ಬದುಕಿದ ಬದುಕಿನ ರೀತಿಯನ್ನು ಗಮನಿಸಬೇಕು. ರೋಹಿತನ ಬದುಕನ್ನು, ಸಂಘಟನೆಯನ್ನು, ಸ್ನೇಹಿತರನ್ನು ಸಂಗಾತಿಗಳನ್ನು ಆತ ಬರೆದ ಪತ್ರದಿಂದ ಪ್ರತ್ಯೇಕಿಸಿ ಓಹೋ ಇದು ಒಂದು ದುಖ: ತರುವ ಆತ್ಮಹತ್ಯೆ ಅಷ್ಟೆ, ಇದಕ್ಕೂ ಶೋಷಣೆಗೂ, ಇದಕ್ಕೂ ಈ ಸಮಾಜದಲ್ಲಿನ ರಚನಾತ್ಮಕ ತಾರಮತ್ಯಕ್ಕೂ ಸಂಬಂದವಿಲ್ಲ ಎಂದು ಮಾತನಾಡುವ ಶುಷ್ಕ ಮನಸ್ಸಿನವರು ನಮ್ಮ ನಡುವೆ ಬರೆಯುತ್ತಿದ್ದಾರೆ. . . . 
ಇನ್ನೂ ಮುಖ್ಯವಾದ ವಿಚಾರ ಇಂದು ಹಿಂದೂಸ್ಥಾನ್ ಟೈಮ್ಸ್ ನಲ್ಲಿ ಒಬ್ಬ ಪತ್ರಕರ್ತ ಇದು ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಎಂದು ಬರೆಯುತ್ತಾರೆ. ಇದೇ ವ್ಯಕ್ತಿ ಹಿಂದೆ ರೈತರ ಆತ್ಮಹತ್ಯೆಗಳು ಒತ್ತಡದಿಂದ ಸಂಬವಿಸಿರುವುದು ಇದಕ್ಕೂ ಆರ್ಥಿಕತೆಗೂ ಯಾವುದೇ ಸಂಬಂದವಿಲ್ಲ ಎಂದು ಬರೆದಿದ್ದರು. ಇಂದು ರೋಹಿತನ ಆತ್ಮಹತ್ಯೆ ಒತ್ತಡದಿಂದ ಸಂಬವಿಸಿದೆ ಇದು ಶೋಷಣೆಯ ಕಾರಣಕ್ಕೆ ನಡೆದ ಘಟನೆ ಅಲ್ಲ ಎಂದು ಬರೆಯುತ್ತಾರೆ. ನಾವು ಇವರಿಗೆ 27ರ ಆ ಹುಡುಗ ಸಾಯುವ ಒತ್ತಡ ಎಲ್ಲಿಂದ ಬಂತು? ನಿಮ್ಮ ತರ್ಕವೆ ಸರಿ ಎಂದಾದರೆ ಈ ಸಮಾಜದ ಕೆಲವೇ ವರ್ಗ ಮತ್ತು ಜಾತಿಯವರು ಯಾಕೆ ಒತ್ತಡಕ್ಕೆ ಒಳಗಾಗುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಬೇಕಿದೆ. . .
ಇಲ್ಲಿ ಇನ್ನೊಂದು ವಿಷಪೂರಿತ ತರ್ಕವೊಂದಿದೆ. ಈ ಲೇಖಕ ವಿವರಿಸುವಂತೆ ಇದು ಭಾವಾನಾತ್ಮಕ ಒತ್ತಡದಿಂದ ಸಂಬವಿಸಿದ ಆತ್ಮಹತ್ಯೆ ಅಲ್ಲ! ಬದಲಾಗಿ ಇದು ಮನೋವೈಜ್ಞಾನಿಕ , ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿ ಆತನೊಳಗೆ ಸಂಬವಿಸಿರುವ ಸಂಗತಿಯೆಂದು ಅವರು ಬರೆಯುತ್ತಾರೆ. ರೋಹಿತ್ ನ ಆತ್ಮಹತ್ಯಾ ಪತ್ರ ಎಲ್ಲಿಯೂ ನಮಗೆ ಬೇರೆ ಕಾರಣಗಳನ್ನು ತೋರಿಸುವುದಿಲ್ಲ ಅದು ಆತನೊಳಗೆ ಹುಟ್ಟಿರುವ ಜೀಗುಪ್ಸೆಯ ಕಾರಣದಿಂದ ಸಂಬವಿಸಿರುವ ಕ್ರಿಯೆ, ಇದಕ್ಕೂ ಹೊರಗಿನ ಸಂಗತಿಗಳಿಗೂ ಸಂಬಂಧವಿಲ್ಲ ಎಂದು ಬರೆಯುತ್ತಾರೆ. ಇಂತಹ ಮಂದಿ ನಮ್ಮ ನಡುವೆ ಇದ್ದಾರೆ. ಸದ್ಯಕ್ಕೆ ದೇಶದ ವಿದ್ಯಾರ್ಥಿಗಳ ಈ ಎಲ್ಲಾ ಹೋರಾಟವನ್ನು ಒಂದು ಪಿತೂರಿ ಎಂದು ಕರೆಯುತ್ತಿರುವ ಬರಹಗಾರರನ್ನು ಮರೆತು ಬಿಡೋಣ.... 
ಅದಕ್ಕೆ ಬದಲಾಗಿ ವಿಶಾಲ ದೃಷ್ಟಿಯಲ್ಲಿ ಈ ಸಮಾಜವನ್ನು ಅರ್ಥಮಾಡಿಕೊಳ್ಳಲು, ಸಮಸ್ಯೆಯನ್ನು ಗುರುತಿಸಲು ಈ ಸಮಾಜದಲ್ಲಿ ರೋಹಿತ್ ಎಲ್ಲಿದ್ದಾನೆ, ದಲಿತರು ಎಲ್ಲಿದ್ದಾರೆ, ಎಲ್ಲಿ ಶೋಷಣೆ ನಡೆಯುತ್ತಿದೆ ಎಂಬುದನ್ನು ನೋಡೋಣ. 3 ದಿನಗಳ ಹಿಂದೆ ನಾನು ರಾಜಸ್ಥಾನದಲ್ಲಿ ಇದ್ದೆ. ಅಲ್ಲಿನ ಹೈಕೋರ್ಟ್ “ರಾಜಸ್ಥಾನ್ ಪಂಚಾಯಿತಿ ಕಾಯ್ದೆಯನ್ನು” ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅನೂರ್ಜಿತಗೊಳಿಸಿದೆ. ನಿಮಗೆ ಗೊತ್ತಿರಲಿ ಪ್ರಸ್ತಾಪಿತ ರಾಜಸ್ಥಾನ್ ಪಂಚಾಯಿತಿ ಕಾಯ್ದೆ ಶೈಕ್ಷಣಿಕ ಅರ್ಹತೆಯನ್ನು ಒಂದು ಮಾನದಂಡ ಎಂದು ಪರಿಗಣಿಸಿರುವುದರಿಂದ ಇದು ಶೇ ತೊಂಭತ್ತರಷ್ಟು ಮಹಿಳೆಯರು ಗ್ರಾಮೀಣ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ನಿರಾಕರಿಸುತ್ತದೆ. ಇದು ಜಾರಿಯಾದರೆ ಶೇ75 ದಲಿತ ಮಹಿಳೆಯರು ಗ್ರಾಮೀಣ ಚುನಾವಣೆಗಳಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ.
ವಿವರವಾಗಿ ನೋಡುವುದಾದರೆ ಈ ಕಾಯ್ದೆಯ ಪ್ರಕಾರ 21 ವರ್ಷಕ್ಕೆ ಮೇಲ್ಪಟ್ಟ ಪ್ರಾಥಮಿಕ ಶಿಕ್ಷಣ ಪೂರೈಸಿದ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಬಹುದು. 21ರ ವಯಸ್ಕರ ಗುಂಪಿನಲ್ಲಿ ಕೇವಲ 11.1 ಶೇ ಜನರು ಮಾತ್ರ ಶಾಲೆಯಲ್ಲಿ ಕಲಿತಿದ್ದಾರೆ. ಆ ಕಾರಣಕ್ಕೆ ಮಿಕ್ಕ 89.9 ಶೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೆ ಕಳೆದುಕೊಳ್ಳಲಿದ್ದಾರೆ. ಇನ್ನೂ ಪಂಚಾಯಿತಿ ಅಧ್ಯಕ್ಷರಾಗಲು 8ನೇ ತರಗತಿಗಿಂತ ಮೇಲಿನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎನ್ನುತ್ತದೆ ಈ ಕಾಯ್ದೆ. ಇದರಿಂದ 90.4 ಶೇ ದಲಿತ ಮಹಿಳೆಯರು ಮತ್ತು 62 ಶೇ ಪುರುಷರು ಪಂಚಾಯಿತಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.
ನಿಮಗೆ ಒಂದು ಆಸಕ್ತಿಕರ ಅಂಶ ತಿಳಿಸಬೇಕು ದೇಶದ ಎಲ್ಲಾ ನ್ಯಾಯಾಲಯಗಳಿಗೆ ಹೋಲಿಸಿದರೆ ರಾಜಸ್ತಾನ್ ಹೈಕೊರ್ಟ್ ಗೆ ಒಂದು ವಿಷೇಷತೆ ಇದೆ. ಅಲ್ಲಿ ಸಂವಿಧಾನ ಕರ್ತೃ ಡಾ. ಅಂಬೇಡ್ಕರ್ ಪ್ರತಿಮೆ ನ್ಯಾಯಾಲಯದ ಹೊರಗೆ ಟ್ರಾಫಿಕ್ ಕಡೆ ಮುಖ ಮಾಡಿಕೊಂಡು ನಿಂತಿದ್ದರೆ ನ್ಯಾಯಾಲಯದ ಒಳಗೆ ಮನುವಿನ 20 ಅಡಿ ಪ್ರತಿಮೆ ನಿಲ್ಲಿಸಲಾಗಿದೆ. ದೇಶದ ಯಾವ ನ್ಯಾಯಾಲಯದಲ್ಲಿಯೂ ಇಂತಹ ಅಸಂಗತಿ ಕಾಣಲು ಸಿಗಲಾರದು! ಇರಲಿ, ವಿಷಯ ಅದಲ್ಲ. ಈ ರೀತಿಯ ಅನ್ಯಾಯಯುತ ಕಾಯ್ದೆಯನ್ನು ಸುಪ್ರಿಂ ಕೊರ್ಟ್‌ನ ಸಂವಿಧಾನಿಕ ಪೀಠ ಪರಿಶಿಲನೆಗೆ ಒಳಪಡಿಸುತ್ತದೆ ಎಂಬ ಭರವಸೆಯನ್ನು ನಾವು ಉಳಿಸಿಕೊಳ್ಳೊಣ. ಆದರೆ ಈ ಕಾಯ್ದೆ ನಿಜಕ್ಕೂ ಅನ್ಯಾಯ ಮತ್ತು ಶೋಷಣೆಯ ಪ್ರತೀಕವಾಗಿದೆ ಇದರ ವಿರುದ್ಧ ನಾವು ಹೋರಾಟವನ್ನು ರೂಪಿಸಬೇಕಿದೆ. . . .
ಇದೊಂದೇ ಸಮಸ್ಯೆಯಲ್ಲ. ನಾವು ಜಾತಿಗಳ ಸಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶಗಳನ್ನು ನೋಡಿದರೆ ಈ ದೇಶದಲ್ಲಿ ಬಡವರ ಬದುಕು ಏನಾಗಿದೆ ಎಂಬುದು ಅರ್ಥವಾಗುತ್ತದೆ. ಒಂದು ವಿಷಯದಲ್ಲಿ ನಾನು ಸ್ಮೃತಿ ಇರಾನಿಯವರ “ಇದು ದಲಿತ ಮತ್ತು ದಲಿತೇತರರ ನಡುವಿನ ಸಂಘರ್ಷವಲ್ಲ” ಎಂಬ ಹೇಳಿಕೆಯನ್ನು ಸಮರ್ಥಿಸುತ್ತೇನೆ. ಖಂಡಿತ ಅದು ಸತ್ಯ. ಇದು ದಲಿತ ಮತ್ತು ದಲಿತೇತರರ ನಡುವಿನ ಹೋರಾಟವಲ್ಲ ಬದಲಾಗಿ ಇದು “ಹಿಂದೂ ಮೇಲ್ಜಾತಿ ಮೂಲಭೂತವಾದಿಗಳು ಮತ್ತು ದಲಿತ, ದಲಿತೇತರರ ಹಾಗೂ ಮನುಷ್ಯತ್ವವುಳ್ಳ ಮನುಷ್ಯರ ನಡುವಿನ ಸಂಘರ್ಷ”. ನಾವು ಮೊದಲೇ ಗುರುತಿಸಿದಂತೆ ಈ ದೇಶದಲ್ಲಿ 400 ಮಿಲಿಯನ್ ಜನರು ಇದುವರೆಗೂ ಯಾವ ಮಾದರಿಯ ಶಿಕ್ಷಣ ಸಂಸ್ಥೆಗಳ ಒಳಗೂ ಕಾಲಿಡಲಾಗಿಲ್ಲ ಈ ದೇಶಧ ಒಟ್ಟು ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರಿಗೆ ಶಿಕ್ಷಣವನ್ನು ನಿರಾಕರಿಸಲಾಗಿದೆ ಇವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಂಚನೆಗೆ ಒಳಪಟ್ಟವರು ದಲಿತರು, ಆದಿವಾಸಿಗಳು, ಮಹಿಳೆಯರು ಮತ್ತು ಬಡ ಹಿಂದುಳಿದ ಸಮುದಾಯಗಳ ವಿಧ್ಯಾರ್ಥಿಗಳು 
ಇಂದು ಭಾರತ 68 ಮಿಲಿಯನ್ ಪದವೀಧರರನ್ನು ಹೊಂದಿದೆ. ಆದರೆ ಇದರ ಆರು ಪಟ್ಟು ಜನರು ಅನಕ್ಷರಸ್ತರಾಗಿದ್ದಾರೆ. ಈ ದೇಶದಲ್ಲಿ ಅಸಮಾನತೆ ಎಷ್ಟು ಹೆಚ್ಚಿದೆ ಎಂದರೆ ಎಲ್ಲಾ ಮಾದರಿಯ ತಾರತಮ್ಯಗಳನ್ನು ಮರುಹೇರಿಕೆ ಮಾಡಲಾಗುತ್ತಿದೆ. ಇಂದು ಸಮೀಕ್ಷೆಗಳನ್ನು ನೋಡಿದರೆ ಈ 1.28 ಬಿಲಿಯನ್ ಜನಸಂಖ್ಯೆಯ ದೇಶದಲ್ಲಿ 100 ಜನ ಭಾರತೀಯರು ಒಟ್ಟು ಜನಸಂಖ್ಯೆಯ ಎರಡನೇ ಒಂದು ಭಾಗದಷ್ಟು ಸಂಪತ್ತನ್ನು ಹೊಂದಿದ್ದಾರೆ. ಅದರಲ್ಲಿ 15 ಜನ ಭಾರತೀಯರು ಈ ದೇಶದ ಅರ್ಧದಷ್ಟು ಜನಸಂಖ್ಯೆಯ ಸಂಪತ್ತನ್ನು ಹೊಂದಿದ್ದಾರೆ. ಈ ಎಲ್ಲಾ ಪ್ರಕರಣಗಳ ಪರಿಣಾಮ ಅನುಭವಿಸುತ್ತಿರುವವರು ಈ ದೇಶದ ದಲಿತ, ಆದಿವಾಸಿ, ಮಹಿಳೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳು. . . 
ಇನ್ನು ಈ ದೇಶದ ಜನಸಂಖ್ಯೆಯ ಉಗ್ರಾಣವಾದ ಗ್ರಾಮೀಣ ಭಾರತವನ್ನು ನೋಡಿದರೆ ನಿಮಗೆ ಆಶ್ಚರ್ಯವಾಗಬಹದು. ಈ ದೇಶದ ಪ್ರತಿಶತಃ ಒಂದರಷ್ಟು ಜನರು ಈ ದೇಶದ ಶೇ 46 ರಷ್ಟು ಸಂಪನ್ಮೂಲಗಳ ಮೇಲಿನ ಒಡೆತನ ಹೊಂದಿದ್ದಾರೆ. ಇದು ಅಮೇರಿಕಾಕ್ಕಿಂತ ಕೆಟ್ಟ ಸ್ಥಿತಿ. ಅಲ್ಲಿ ಶೇ1 ಜನರು ಆ ದೇಶದ 39ಶೇ ಸಂಪತ್ತಿನ ಒಡೆತನ ಹೊಂದಿದ್ದಾರೆ. ಈ ಎಲ್ಲಾ ಘಟನೆಗಳು ಕಳೆದು 15-20 ವರ್ಷಗಳಿಂದ ಈಚೆಗೆ ನವ ಉದಾರಿಕರಣದ ಹೆಸರಿನಲ್ಲಿ ಘಟಿಸಲ್ಪಟ್ಟಿವೆ.
ನೀವು ಒಪ್ಪಿ ಬಿಡಿ, ನಿಜವಾದ ಅರ್ಥದಲ್ಲಿ ಇಂದು ನಿಮ್ಮ ದೇಶ ಅಳಲ್ಪಡುತ್ತಿರುವುದು “ಸಾಮಾಜಿಕ ಮತ್ತು ಆರ್ಥಿಕ ಮೂಲಭೂತವಾದಿಗಳ ಒಕ್ಕೂಟ" ಮತ್ತು ಮಾರುಕಟ್ಟೆ ಆರ್ಥಿಕತೆಯ ಮೂಲಭೂತವಾದಿಗಳಿಂದ ಇದು ಭಾರತಕ್ಕೆ ಸೀಮಿತವಾದ ಮೈತ್ರಿಕೂಟವಲ್ಲ ಬದಲಾಗಿ ಇದು ವಿಶ್ವವ್ಯಾಪಿಯಾಗಿದೆ. ನಿಮಗೆ ಆಶ್ಚರ್ಯವಾಗಬಹದು ಜಗತ್ತಿನ ಅತ್ಯಂತ ಅಪಾಯಕಾರಿ ಬಂಡವಾಳಶಾಹಿ ಆರ್ಥಿಕತೆಯ ಜನಕ ಯುನೈಟೆಡ್ ಸ್ಟೇಟ್ಸ್ ಜಗತ್ತಿನ ಅತಿ ಅಪಾಯಕಾರಿಯಾದ ಎರಡು ಧಾರ್ಮಿಕ ಮೂಲಭೂತವಾದಿಗಳಾದ ಇಸ್ರೇಲ್ ಮತ್ತು ಸೌದಿ ಅರೇಬಿಯಾಗಳನ್ನು ತನ್ನ ಯುದ್ಧಗಳಿಗಾಗಿ ಆಶ್ರಯಿಸಿದೆ. ಹಾಗೆ ನೊಡಿದರೆ ನಾವೀಗ ಅತ್ಯಂತ ಶಕ್ತಿಶಾಲಿ, ಒಗ್ಗೂಡಿದ ಶತ್ರುವಿನ ವಿರುದ್ದ ಹೋರಾಡಬೇಕಿದೆ. . . . 
ನಾವು ಇಂದು ನಮ್ಮ ನಡುವಿನ ರಚನಾತ್ಮಕ, ಸಾಮಾಜಿಕ, ಆರ್ಥಿಕ, ಕಾನೂನಾತ್ಮಕ ತಾರತಮ್ಯಗಳ ಕುರಿತು ಧ್ವನಿ ಎತ್ತಬೇಕಿದೆ ಈ ದೇಶದಲ್ಲಿನ 75ಶೇ ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಹೆಚ್ಚೆಂದರೆ ತಿಂಗಳಿಗೆ 5000 ಸಂಪಾದನೆ ಮಾಡುತ್ತಿದ್ದಾನೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ. ಇದು ದೇಶದ ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ದೊರೆಯುವ ಚಿತ್ರಣ. ಇದನ್ನು ನೀವು ಅದಿವಾಸಿ ಮತ್ತು ದಲಿತರಿಗೆ ಅನ್ವಯಿಸಿ ನೋಡಿದರೆ ಪರಿಸ್ಥಿತಿ ಇನ್ನೂ ಭೀಕರವಾಗಿದೆ, ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. . .
ಪ್ರಮುಖವಾಗಿ academic institutionಗಳಿಗೆ ಸಂಬಂಧಿಸಿದ ಇತ್ತೀಚಿನ ಈ ಹೋರಾಟಗಳನ್ನು ಕೆಲವು ಜನರು ಓಹೋ ಇದು ಹೈದರಾಬಾದ್ ಪ್ರಕರಣವಾ, ಅಯ್ಯೋ ಅಲ್ಲಿನ ಸ್ಥಿತಿಯೇ ಹಾಗಿದೆ ಬಿಡಿ ಈ ತರಹದ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ ನಮಗ್ಯಾಕೆ ಎಂಬ ಮಾತುಗಳನ್ನು ಹೇಳುತ್ತಾರೆ. ಆದರೆ ನಿಮಗೆ ನಾನು ಒಂದು ವಿಷಯ ಹೇಳಬೇಕು ನಾನು ದೇಶದ ಪ್ರತಿಷ್ಟಿತ ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಒಬ್ಬ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ ನನ್ನ ಅವಧಿಯ ಶೇ 80ರಷ್ಟು ಸಮಯ ಮಿಸಲಾತಿ ವಿರೋಧಿಸುವ ಮನಸ್ಸುಗಳನ್ನು ಎದುರಿಸುವುದರಲ್ಲಿಯೇ ಕಳೆದು ಹೋಗಿದೆ ಎಂಬ ಸತ್ಯವನ್ನು ನಿಮ್ಮೆದುರು ಇಡುತ್ತಿದ್ದೇನೆ. ಆ ಎಲ್ಲಾ ಹೋರಾಟಗಳು ಇಂದು ದಾಖಲೆಗಳಲ್ಲಿವೆ. ಆ ಸಮಯದಲ್ಲಿ ಸುಪ್ರಿಂ ಕೊರ್ಟ್ ಅದೇಶವನ್ನು ಧಿಕ್ಕರಿಸಿ ಹಿಂದುಳಿದ ವರ್ಗದ 27ಶೇ ಮಿಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನಗಳು ನಡೆದವು. ಆದ್ದರಿಂದ ದಯಮಾಡಿ ಇದು ಹೈದಾರಾಬದ್ ನಲ್ಲಿ ಮಾತ್ರ ನಡೆಯುತ್ತಿರುವ ಸಂಗತಿ ಎಂಬ ಮೂರ್ಖತನದ ಹೇಳಿಕೆಗಳನ್ನು ನಂಬಬೇಡಿ. ಇಂದು ತಾರತಮ್ಯ ಎಂಬುದು ದೇಶದ ಪ್ರತಿಷ್ಟಿತ ಸಂಸ್ಥೆಗಳಲ್ಲಿಯೇ ನಡೆಯುತ್ತಿದೆ . . .
ಈ ಹಂತದಲ್ಲಿ ನಾವು ವಿಶ್ವವಿದ್ಯಾನಿಲಯಗಳ ಉಳಿವಿಗೆ ಏನು ಮಾಡಬೇಕು? ಎಂಬುದರ ಕುರಿತು ನನ್ನ ಸ್ನೇಹಿತ ಪ್ರೊ. ಸುಖ್ದೇವ್ ಥೋರಟ್ ಒಂದು ನೀಲನಕ್ಷೆಯನ್ನು ಒದಗಿಸಿದ್ದಾರೆ. ನಾನು ಅವರು ನೀಡಿದ ಆ ವರದಿಯನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ನಾವು ಬದಲಾವಣೆ ಆರಂಭಿಸುವುದಿದ್ದರೆ ಅದು ಈ ವರದಿಯಿಂದಲೇ ಆರಂಭವಾಗಲಿ, ನಮಗಿರುವ ಉತ್ತಮ ಆರಂಭ ಅದೆ ಆಗಲಿದೆ . . .
ಇದರ ಮುಂದೆ ನಾವು ಹಲವು ರಾಜಕೀಯ ಹೋರಾಟಗಳನ್ನು ನಡೆಸಬೇಕಿದೆ. ಹೊರಗೆ ಇನ್ನೂ ಹಲವು ಹೋರಾಟಗಳು ನಮ್ಮನ್ನು ಎದಿರು ನೋಡುತ್ತಿವೆ. ದಯಮಾಡಿ ಅರ್ಥಮಾಡಿಕೊಳ್ಳಿ, ಇದು ಹೈದರಾಬಾದ್ ಗೆ ಮಾತ್ರ ಸೀಮಿತವಾಗಿಲ್ಲ. ಅಲಹಬಾದ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಸ್ನೇಹಿತ ಸಿದ್ಧಾರ್ಥ್ ವರದರಾಜ್ ಅವರನ್ನು ಇದೇ ಎಬಿವಿಪಿ ಗುಂಪು ಕುಲಪತಿಗಳ ಕಟ್ಟಡದಲ್ಲಿ ಬಂಧನಕ್ಕೆ ಒಳಪಡಿಸಿತ್ತು. ಅವರ ಭಾಷಣವನ್ನು ಕ್ಯಾಂಪಸ್ ನಲ್ಲಿ ನಿಷೇಧಿಸಲಾಯಿತು. ನೀವು ಹೊರಕ್ಕೆ ಬಂದರೆ ದಾಳಿ ನಡೆಸುತ್ತೇವೆ ಎಂದು ಬೆದರಿಕೆಯನ್ನು ಒಡ್ಡಲಾಗಿತ್ತು! ಜನ ಮರೆತಿರಬಹದು, ಮಧ್ಯಪ್ರದೇಶದ ಒಬ್ಬರು ಕುಲಪತಿಗಳನ್ನು ಮನಬಂದಂತೆ ಧಳಿಸಲಾಗಿತ್ತು, ಬಿದ್ದ ಹೊಡೆತಗಳನ್ನು ತಾಳಲಾರದೆ ಅವರು ಅಸುನೀಗಿದ್ದರು. ಇದು ಈ ವಿವಿ ಯಲ್ಲಿ ನಡೆಯುತ್ತಿರುವ ಘಟನೆ ಮಾತ್ರ ಅಲ್ಲ. ಇನ್ನೂ ನಿಮ್ಮ ಉಪಕುಲಪತಿಗಳ ವಿಷಯ ಅವರು ಧೀರ್ಘ ರಜೆಯ ಮೇಲೆ ತೆರಳಿದ್ದಾರೆ ಅವರ ರಜೆ ಹಾಗೆ ದೀರ್ಘವಾಗಲಿ ಎಂದು ಆಶಿಸುತ್ತೇನೆ . . .
ನನಗೆ ಅನ್ನಿಸುವಂತೆ ರೋಹಿತ್ ಸಾವು/ಆತ್ಮಹತ್ಯೆ ನಮ್ಮನ್ನು ಒಂದಾಗಿಸಬೇಕಿದೆಯೇ ಹೊರತು ನಮ್ಮಲ್ಲೆ ಒಡಕು ಮೂಡಿಸಬಾರದು! ಅವನು ಅವನ ಸಂಘಟನೆಯ ವಿರೋಧವನ್ನು ಮಾಡುತ್ತಿದ್ದ, ಅವನು ತನ್ನದೆ ಸ್ನೇಹಿತರನ್ನು ವಿರೋಧಿಸುತ್ತಿದ್ದ, ಎಂಬ ಹೇಳಿಕೆಗಳನ್ನು ನೀಡುವ, ಆ ಮೂಲಕ ನಮ್ಮನ್ನು ಒಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆತನ ನೆನಪನ್ನು ನಮ್ಮಿಂದ ಅಳಿಸುವ ಕ್ರೌರ್ಯಕ್ಕೆ, ಅನ್ಯಾಯಕ್ಕೆ ಜನ ಮುಂದಾಗುತ್ತಿದ್ದಾರೆ. ಆದರೆ ಒಂದು ಶ್ಲಾಘನೀಯ ಅಂಶ ಎಂದರೆ ಈ ಎಲ್ಲಾ ವಿರೋಧ, ತಂತ್ರ, ಕುತಂತ್ರಗಳನ್ನು ಎದುರಿಸಿ ಪ್ರತಿರೋಧ ಎಂಬುದು ದೇಶದ ಮೂಲೆ ಮೂಲೆಗಳಿಂದ ಹರಿದು ಬರುತ್ತಿದೆ ಮತ್ತು ಅದು ವಿಧ್ಯಾರ್ಥಿಗಳ ಕಡೆಯಿಂದ ಹರಿದು ಬರುತ್ತಿದೆ . . . . 
ನಿಮಗೆ ನೆನಪಿರಲಿ ಕಳೆದ 105 ದಿನಗಳಿಂದ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ಪುಣೆ ವಿಧ್ಯಾರ್ಥಿಗಳು ಈ ಸರ್ಕಾರದ ವಿರುದ್ಧ ವಿಶ್ವವಿದ್ಯಾನಿಲಯದ ಮೇಲೆ ಯುಧಿಷ್ಟರನ ಹೇರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದಾರೆ. ನಿಮಗೆ ಗೊತ್ತಾ ನೈಜವಾದ ಮಹಾಭಾರತದಲ್ಲಿ ಯುಧಿಷ್ಟಿರ ಎಷ್ಟು ಪರಿಶುಧ್ಧ ಆತ್ಮ ಎಂದರೆ ಅವನು ಎಂದೂ ಸುಳ್ಳನ್ನೆ ಹೇಳಿರಲಿಲ್ಲ! ಆ ಕಾರಣಕ್ಕೆ ಆತನ ರಥ ಭೂಮಿಯಿಂದ 6 ಇಂಚು ಮೇಲಕ್ಕೆ ಚಲಿಸುತ್ತಿತ್ತು. ಇದೊಂದು ಆಸಕ್ತಿಕರ ಪವಿತ್ರತೆಯ ಉದಾಹರಣೆ ಯುಧಿಷ್ಟರ ಒಬ್ಬ ಕುಡುಕ, ಜೂಜುಕೋರ, ಜೂಜಿನಲ್ಲಿ ತನ್ನ ಹೆಂಡತಿಯನ್ನೆ ಪಣವಾಗಿ ಸೋತವನು ಆದರೆ ಅವನು ಸುಳ್ಳನ್ನು ಮಾತ್ರ ಹೇಳಿರಲಿಲ್ಲ ಆ ಕಾರಣಕ್ಕೆ ಅವನು ಪವಿತ್ರ. . .! ಅವನು ದ್ರೋಣರಿಗೆ “ಅಶ್ವಥಾಮ ಸತ್ತ” ಎಂದು ಸುಳ್ಳು ಹೇಳಿದ ದಿನ ಅವನ ರಥ ನೆಲವನ್ನು ತಾಕಿತಂತೆ ಆದರೆ “ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟೀಟ್ಯೋಟ್” ನ ಯುಧಿಷ್ಟರರ ರಥ ಭೂಮಿಯಿಂದ ಮೇಲೆ ಎದ್ದೆ ಇಲ್ಲ! ಅದು ಕೆಸರಿನಲ್ಲಿ ಹೂತು ಹೋಗಿದೆ. ಆ ಕಾರಣಕ್ಕೆ ಅವರನ್ನು ಯಾರು ಗೌರವಿಸುತ್ತಿಲ್ಲ. . .. 
ಹೈದರಾಬಾದ್ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳೆ, ನೀವು ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಿದೆ. ಈ ಹೋರಾಟದ ಜೊತೆಗೆ ಇನ್ನು ಮುಖ್ಯವಾದ ಸಂಗತಿಗಳನ್ನು ನೀವು ಮುಂಚೂಣಿಗೆ ತರಬೇಕಿದೆ. ಇದನ್ನು ನಾವು ರೋಹಿತ್ ವೇಮುಲ ಎಂಬ ಚೇತನದ ಆತ್ಮಹತ್ಯೆಯ ಪರಿಣಾಮ ಎಂದು ನಾನು ಗುರುತಿಸುತ್ತೇನೆ, ಜಗತ್ತು ಓದಿಕೊಳ್ಳುತ್ತದೆ . . .
ಬಹಳ ಹಿಂದೆ ಒಬ್ಬ ಫ್ರೆಂಚ್ ಬರಹಗಾರ ವಿಕ್ಟರ್ ಹ್ಯೂಗೋ ಬರೆಯುತ್ತಾನೆ All the forces in the world are not so powerful as an idea whose time has come.. . .ನನಗೆ ಅನ್ನಿಸುವಂತೆ 2016 ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ. ಆ ಅಲೋಚನೆ ಹಿಂದಿನ ಬೇಡಿಕೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಲಿಂಗಾಧಾರಿತ ನ್ಯಾಯದ ಹಕ್ಕೊತ್ತಾಯವಾಗಿದೆ. ಜೊತೆಗೆ ರೋಹಿತ್ ಮತ್ತು ಲಕ್ಷಾಂತರ ರೋಹಿತರುಗಳ ನ್ಯಾಯಯುತ ಹಕ್ಕಾಗಿದೆ. ನಮ್ಮ ಹೋರಾಟದ ಮಾದರಿಗಳು ಭಿನ್ನ ಇರಬಹದು ಆದರೆ ಉದ್ದೇಶ ಅಂಬೇಡ್ಕರ್ ಹೇಳಿದ ಶಿಕ್ಷಣ , ಸಂಘಟನೆ, ಹೋರಾಟದ ಹಕ್ಕುಗಳಿಗಾಗಿದೆ ಎಂಬುದನ್ನು ಮರೆಯದಿರೋಣ. . . 
ಧನ್ಯವಾದಗಳು. . . .

No comments:

Post a Comment