Nov 17, 2015

ಅಸಹಿಷ್ಣುತೆಯ ವಿರುದ್ದ ಪ್ರಗತಿಪರರ ಗೆಲುವು!

ಕು.ಸ.ಮಧುಸೂದನ್
ಅಂತೂ ನರೇಂದ್ರಮೋದಿಯ ನಾಯಕತ್ವದಲ್ಲಿ ಮತಾಂಧತೆಯಿಂದ ಹೂಂಕರಿಸುತ್ತಿದ್ದ ಬಾಜಪ, ಬಿಹಾರದ ವಿದಾನಸಭಾ ಚುನಾವಣೆಯಲ್ಲಿ ಬಾರೀ ಸೋಲು ಕಂಡಿದೆ. ಬಿಹಾರದ ವಿದಾನಸಭಾ ಚುನಾವಣೆಯಲ್ಲಿನ ಬಾಜಪದ ಸೋಲು,ದೇಶದಾದ್ಯಂತ ತೀವ್ರಗೊಂಡಿದ್ದ ಅಸಹಿಷ್ಣುತೆಯ ವಿರುದದ್ದ ಚಳುವಳಿಗೆ ದೊರೆತ ದೊಡ್ಡ ಗೆಲುವು ಎಂದು ಬಣ್ಣಿಸಿದರೆ ತಪ್ಪೇನಿಲ್ಲವೆನಿಸುತ್ತೆ. ಬಿಹಾರದ ವಿದಾನಸಭೆಗೆ ಚುನಾವಣಾ ಪ್ರಕ್ರಿಯೆ ಶುರುವಾದ ಸಮಯಕ್ಕೆ ಸರಿಯಾಗಿ ಪ್ರಾರಂಭವಾದ ಅಸಹಿಷ್ಣುತೆಯ ವಿರುದ್ದದ ಚಳುವಳಿ ಚುನಾವಣಾ ಪಲಿತಾಂಶ ಬಂದ ದಿನಕ್ಕೆ ಸರಿಯಾಗಿ ಗೆಲುವಿನ ಮೊದಲ ಮೆಟ್ಟಿಲನ್ನು ಏರಿದೆ.

ಈ ಚಳುವಳಿಯ ಭಾಗವಾಗಿ ಪ್ರಾರಂಭವಾದ ಪ್ರಶಸ್ತಿ ವಾಪಾಸು ಮಾಡುವ ನಮ್ಮ ಲೇಖಕರ, ಕಲಾವಿದರ, ವಿಜ್ಞಾನಿಗಳ ಮತ್ತು ಜಾತ್ಯಾತೀತ ತತ್ವದಲ್ಲಿ ನಂಬಿಕೆಯಿಟ್ಟ ಬಹುತೇಕ ಪ್ರಗತಿಪರರ ನಿಲುವುಗಳು, ವಿಚಾರಗಳು ಬಿಹಾರದ ಜನರನ್ನು ತಲುಪಿರುವುದರಲ್ಲಿ ಅನುಮಾನವೇನಿಲ್ಲ. ಕರ್ನಾಟಕದ ಕಲಬುರ್ಗಿಯವರ ಹತ್ಯೆಯಿಂದ ಶುರುವಾದ ಅಸಹಿಷ್ಣುತೆಯ ಘಟನೆಗಳಲ್ಲಿ ಬಹಳಷ್ಟು ಬಿಹಾರಕ್ಕೆ ತುಂಬಾ ಹತ್ತಿರದಲ್ಲ್ಲಿಯೇ ನಡೆದವು. ದಾದ್ರಿಯ ಹತ್ಯೆ, ಹರಿಯಾಣದಲ್ಲಿ ದಲಿತ ಮಕ್ಕಳನ್ನು ಜೀವಂತ ಸುಟ್ಟ ಪ್ರಕರಣಗಳನ್ನು ಬಿಹಾರದ ಜನ ತುಂಬಾ ಆಸಕ್ತಿಯಿಂದ, ಆತಂಕದಿಂದ ಗಮನಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಜಪ ಅಧಿಕಾರಕ್ಕೇರಿದ ಮರುಗಳಿಗೆಯಿಂದಲೇ ಆರಂಭಗೊಂಡ ಅಸಹಿಷ್ಣುತೆಯ ಘಟನಾವಳಿಗಳು ಆರ್ಥಿಕವಾಗಿ ತೀರಾ ಹಿಂದುಳಿದ ಬಿಹಾರದ ಜನತೆಯನ್ನು ಕಂಗೆಡಿಸಿದ್ದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಈ ಪ್ರಶಸ್ತಿಯ ವಾಪಸಾತಿ ಚಳುವಳಿಯ ಜೊತೆಗೆ ಚುನಾವಣಾ ಪ್ರಚಾರದಲ್ಲಿ ಬಾಜಪದ ನಿಜವಾದ ಮುಖವಾದ ಸಂಘಪರಿವಾರವು ಮೀಸಲಾತಿಯನ್ನು ಪುನರ್ ಪರಿಶೀಲನೆಗೊಳಿಸುವ ಬಗ್ಗೆ ಮಾತಾಡಿತ್ತು. ಅತ್ಯಂತ ಹಿಂದುಳಿದ ಜಾತಿಗಳಿರುವ ಬಿಹಾರದ ಜನತೆಯ ಮಟ್ಟಿಗೆ ಮೀಸಲಾತಿಯ ಹಿಂತೆಗೆತ ಎಂದರೆ ಅದು ಅವರ ಇತಿಶ್ರೀ ಇದ್ದಂತೆ ಎನ್ನುವುದು ಬಿಹಾರದ ಜನತೆಗೆ ಮನವರಿಕೆಯಾಗಿತ್ತು. ಇದರ ಜೊತೆಗೆ ಚುನಾವಣೆಯ ಪ್ರಚಾರದಲ್ಲಿ ಬಾಜಪ ಅನವಶ್ಯಕವಾಗಿ ಹಿಂದುಳಿದ ಜಾತಿಯವರನ್ನು, ಮುಸ್ಲಿಮರನ್ನು ಓಲೈಸುವ ನಾಟಕವಾಡುತ್ತ ಮೇಲ್ಜಾತಿಯ ಮತಗಳನ್ನು ದ್ರುವೀಕರಿಸುವ ಕೆಲಸಕ್ಕೆ ಕೈ ಹಾಕಿತ್ತು. 

ಬಹುಶ: ಇಂತಹದೊಂದು ಸನ್ನಿವೇಶದಲ್ಲಿ ಬಿಹಾರದ ಮತದಾರರು ಸಂಪೂರ್ಣವಾಗಿಯಲ್ಲದಿದ್ದರೂ ಒಂದಿಷ್ಟಾದರು, ಪ್ರಶಸ್ತಿ ವಾಪಸಾತಿ ಚಳುವಳಿಯ ಹಿಂದಿನ ವಿಚಾರವಾದಿಗಳ ನೈಜ ಕಾಳಜಿಯ ಬಗ್ಗೆ ಅರ್ಥ ಮಾಡಿಕೊಂಡು ಬಾಜಪದ ವಿರುದ್ದ ತಮ್ಮ ಮತ ಚಲಾಯಿಸಿದ್ದಾರೆ ಅನಿಸುತ್ತೆ.

ಏನೇ ಆಗಲಿ ಒಂದಂತೂ ಈ ಚುನಾವಣೆಯ ಪಲಿತಾಂಶ ಸ್ಪಷ್ಟ ಪಡಿಸಿದೆ: ಅದೆಂದರೆ ಅಸಹಿಷ್ಣುತೆಯ ವಿರುದದ್ದ ಚಳುವಳಿಯ ಭಾಗವಾಗಿ, ಲೇಖಕರು ತಮ್ಮ ಪ್ರಶಸ್ತಿಯನ್ನು ವಾಪಾಸು ಮಾಡಲು ತೊಡಗಿದಾಗ ವಿರೋಧಿಸಿದ ಬಲಪಂಥೀಯ ಶಕ್ತಿಗಳಿಗೆ ಈ ಚಳುವಳಿಯ ಪರಿಣಾಮ ಎಷ್ಟು ತೀವ್ರವಾಗಿರಬಹುದೆಂಬುದು ಅರ್ಥವಾಗಿರುತ್ತದೆಯೆಂದು ನಂಬಿರುತ್ತೇನೆ. 

No comments:

Post a Comment