Aug 14, 2015

ಸುಂದರ ಮಲೆಕುಡಿಯನಿಗೆ ಆರ್ಥಿಕ ಸಹಾಯ ಬೇಕಾಗಿದೆ.

ಮುನೀರ್ ಕಾಟಿಪಳ್ಳ
ನಾಡು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ತೆರೆದು ಕೊಳ್ಳುತ್ತಿದೆ. ಆದರೆ ಮಂಗಳೂರಿನ ಆಸ್ಪತ್ರೆಯ ಜನರಲ್ ವಾರ್ಡಲ್ಲಿ ಮಲಗಿರುವ ಸುಂದರ ಮಲೆಕುಡಿಯರ ಮುಖದಲ್ಲಿ, ನೆರಿಯ ಅರಣ್ಯದ ಅವರ ಮನೆಯೆಂಬ ಮುರಕಲು ನಾಲ್ಕು ಗೋಡೆಯಲ್ಲಿ ನೋವು ಮಡುಗಟ್ಟಿದೆ. ಭೂಮಾಲಕ ಕೈ ಕತ್ತರಿಸಿ ಇಪ್ಪತ್ತು ದಿನಗಳ ನಂತರವೂ ಸುಂದರ ಮಲೆಕುಡಿಯ ಎದ್ದು ಕೂತಿಲ್ಲ. ಗೋಪಾಲ ಗೌಡನ ಹತ್ತಿರ ಪೊಲೀಸರು ಸುಳಿದಿಲ್ಲ.

ಮೊನ್ನೆ ಮತ್ತೆ ಸುಂದರ ಮಲೆಕುಡಿಯರನ್ನು ಭೇಟಿಯಾಗಿದ್ದೆವು. ಎರಡೂ ಕೈಗಳು ಅಲುಗಾಡದಂತೆ ಬ್ಯಾಂಡೇಜು ಸುತ್ತಿ ಹತ್ತಾರು ರೋಗಿಗಳ ಮದ್ಯೆ ಜನರಲ್ ವಾರ್ಡಿನಲ್ಲಿ ಮಲಗಿದ್ದ ಸುಂದರ ಮಲೆಕುಡಿಯರನ್ನು, ಹದಿನೆಂಟು ವರ್ಷಗಳ ಹಿಂದೆ ಭೂಮಾಲಕರ ಮಚ್ಚಿನೇಟಿಗೆ ಕೈಬೆರಳು ಕಳಕೊಂಡಿದ್ದ ಅವರ ಪತ್ನಿ ನೋಡಿಕೊಳ್ಳುತ್ತಿದ್ದರು.

ತನ್ನ ಸ್ಥಿತಿಗೆ ಮರುಗುತ್ತಿದ್ದ ಸುಂದರ, ಜನಪರ ಸಂಘಟನೆಗಳ ನೈತಿಕ ಬೆಂಬಲಕ್ಕೆ ಕಣ್ಣೀರಾದರು. ಪೂರ್ಣ ತುಂಡಾದ ಕೈ ಕನಿಷ್ಟ ಉಳಿಯಬೇಕಾದರೆ ನಾಲ್ಕೈದು ಪ್ಲಾಸ್ಟಿಕ್ ಸರ್ಜರಿ ನಡೆಸಬೇಕಿದ್ದು ಐದಾರು ಲಕ್ಷ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ದುಃಖತೋಡಿ ಕೊಂಡರು. ಸುಂದರ ಮಲೆಕುಡಿಯರಿಗೆ ಉದರ ಕ್ಯಾನ್ಸರ್ ನ ಚಿಕಿತ್ಸೆಯೂ ನಡೆಯುತ್ತಿದ್ದು ಇನ್ನಷ್ಟು ಖರ್ಚು ಹೆಚ್ಚಾಗಬಹುದು.

ಇನ್ನು ಸುಂದರ ಮಲೆಕುಡಿಯರ ನರಿಯ ಅರಣ್ಯದ ಮನೆ ಶಿಥಿಲಗೊಂಡಿದ್ದು, ಮಳೆಗಾಳಿಗೆ ಅದರಲ್ಲಿ ವಾಸಿಸುವುದು ದುಸ್ಸಾದ್ಯ. ಅಂತಹ ಮುರುಕಲು ಮನೆಯಲ್ಲಿ ಶಾಲೆಗೆ ಹೋಗುವ ಮೂವರು ಹೆಣ್ಣುಮಕ್ಕಳು, ಮನೆಯಲ್ಲೇ ಉಳಿದಿರುವ ಹದಿಹರೆಯದ ಮಗ ಪೂರ್ಣೇಶ ಅನಾಥರಂತೆ ಬದುಕುತ್ತಿದ್ದಾರೆ. ಒಂದೆಡೆ ಮಾರಣಾಂತಿಕ ದಾಳಿ, ಭಯದ ಬದುಕು, ಇನ್ನೊಂದೆಡೆ ಆಸ್ಪತ್ರೆ ಓಡಾಟದ ಖರ್ಚು, ದುಡಿಯುವ ಕೈಗಳಿಲ್ಲದ ಕುಟುಂಬ. ಅಕ್ಷರಷಃ ಈ ಆದಿವಾಸಿ ಕುಟುಂಬ ಬೀದಿಗೆ ಬಂದಿದೆ.

ಕೈ ಕತ್ತರಿಸಿದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಲೇ ಈ ಕುಟುಂಬಕ್ಕೆ ಆಸರೆಯಾಗೋದು ಮನುಷ್ಯಪರರ ಜವಾಬ್ದಾರಿ. ನಾವೆಲ್ಲ ಕುಟುಂಬಕ್ಕೆ ಇಪ್ಪತ್ತು ಲಕ್ಷ ಪರಿಹಾರಕ್ಕೆ ಆಗ್ರಹಿಸುತ್ತಿದ್ದರೂ, ಅಹಿಂದ ಸರಕಾರ ಕಿವಿ ತೆರೆಯುತ್ತಿಲ್ಲ, ಕನಿಷ್ಟ ಉಸ್ತುವಾರಿ ಸಚಿವರು ಸುಂದರ ಮಲೆಕುಡಿಯರ ಮುಖನೋಡಿಲ್ಲ. ಹೋರಾಟ, ಬೆಂಬಲದ ಜೊತೆಗೆ ಆರ್ಥಿಕ ಸಹಾಯವನ್ನೂ ಸಾಧ್ಯವಾದಷ್ಟು ಈ ಆದಿವಾಸಿ ಕುಟುಂಬಕ್ಕೆ ನಾವೆಲ್ಲ ಸೇರಿ ಮಾಡಬೇಕಿದೆ. ಶೋಷಿತ ಜನತೆ ಅಸಹಾಯಕರು ಅಲ್ಲ ಅನ್ನುವುದನ್ನು ಸಾರಿ ಹೇಳಬೇಕಿದೆ.

ಸಹಾಯ ಮಾಡ ಬಯಸುವವರು ನೇರವಾಗಿ, ಸುಂದರ ಮಲೆಕುಡಿಯರ ಮಗ ಪೂರ್ಣೇಶನ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದು.
Poornesh.
State Bank of india, 
Branch: ujire. 
Account no: 32479910949
IFSC code: SBIN0015317

No comments:

Post a Comment