Jul 7, 2015

ಜೈಪುರದಲ್ಲಿ ದೇಗುಲಗಳ 'ನಾಶ' ಮತ್ತು ಸಂಘಿಗಳ ಜಾಣ ಮೌನ!

ಬಹಳ ವರುಷಗಳ ಹಿಂದೆ ಪತ್ರಿಕೆಗಳಲ್ಲಿ ಓದಿದ್ದ ವರದಿ. ಬೆಂಗಳೂರಿನ ಫುಟ್ ಪಾತ್ ವೊಂದರಲ್ಲಿ ದಿಡೀರ್ ದೇವಸ್ಥಾನವೊಂದು ಉದ್ಭವವಾಗಿತ್ತು. ಆಗ ಬಿಬಿಎಂಪಿ ಇತ್ತೋ ಬರೀ ಬಿಎಂಪಿಯಿತ್ತೋ ಗೊತ್ತಿಲ್ಲ ಅದನ್ನು ತೆರವು ಮಾಡಬೇಕೆಂದುಕೊಂಡಿದ್ದರು. ಅಕಟಕಟಾ ಮಸೀದಿ ಚರ್ಚು ಮುಟ್ಟಲಾಗದ ನೀವು ದೇವಸ್ಥಾನ ತೆರವುಗೊಳಿಸುತ್ತೀರಾ ಎಂದು ಹಲ್ಲು ಮಸೆಯುತ್ತಾ ಕೆಲವು ಹಿಂದೂ ಪರ ಎನ್ನಿಸಿಕೊಂಡ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದೇವಾಲಯಗಳನ್ನು ಕಾರಣಾಂತರಗಳಿಂದ ಸರಕಾರವೊಂದು ಉರುಳಿಸುತ್ತದೆ ಎಂದಾಗಲೆಲ್ಲ ಹಿಂದೂ ಪರ ಸಂಘಟನೆಗಳು ರೊಚ್ಚಿಗೇಳುತ್ತವೆ, ಹಿಂದೂ ದೇವರ ರಕ್ಷಣೆ ಮಾಡುತ್ತವೆ ಎಂಬ ನನ್ನ ಅಭಿಪ್ರಾಯ ಜೈಪುರದ ವರದಿಗಳನ್ನು ನೋಡಿದಾಗ ಸಂಪೂರ್ಣವಾಗಿ ಬದಲಾಗಿದೆ. ಹಿಂದೂ ಪರ ಸಂಘಟನೆಗಳು ತಮಗಾಗದ ರಾಜಕೀಯ ಪಕ್ಷವೊಂದು ಅಧಿಕಾರದಲ್ಲಿದ್ದಾಗ ಮಾತ್ರ ಹಿಂದೂ ಪರವಾಗಿರುತ್ತವೆ, ಕೋಮುಗಲಭೆಗಳನ್ನು ಶುರುಮಾಡಲು ಉತ್ಸುಕವಾಗಿರುತ್ತವೆ, ಅದೇ ತನಗಾಗುವ ಬಿಜೆಪಿ ಅಧಿಕಾರದಲ್ಲಿದ್ದಾಗ ಜಾಣ ಮೌನ ವಹಿಸಿಬಿಡುತ್ತದೆ! 
ಜೈಪುರದಲ್ಲಿ ಮೆಟ್ರೋ ರೈಲು ಕಟ್ಟುವ ಸಲುವಾಗಿ ಅನೇಕ ದೇವಾಲಯಗಳನ್ನು ನಾಶ ಮಾಡಲಾಗಿದೆ. ರೈಲು ಕಟ್ಟುವ ಸಮಯದಲ್ಲಿ ಅನೇಕ ಕಟ್ಟಡಗಳು ನಾಶವಾಗಲೇಬೇಕು, ಅದರಲ್ಲಿ ದೇವಸ್ಥಾನಗಳು ಸೇರಿಕೊಂಡಿರುತ್ತವೆ; ಅದು ಸಹಜ ಕೂಡ. ಒಂದು ಅಂದಾಜಿನಂತೆ ನೂರಕ್ಕೂ ಹೆಚ್ಚು ದೇವಸ್ಥಾನಗಳನ್ನು ಧ್ವಂಸ ಮಾಡಲಾಗಿದೆ. ಕಾಂಗ್ರೆಸ್ಸೋ ಮತ್ತೊಂದೋ ಪಕ್ಷವೋ ಅಧಿಕಾರದಲ್ಲಿದ್ದಾಗ ಈ ರೀತಿ ಆಗಿದ್ದರೆ ಆರ್.ಎಸ್.ಎಸ್ ಮತ್ತದರ ಅಂಗಸಂಸ್ಥೆಗಳು ಮೌನದಿಂದಿರುತ್ತಿದ್ದರೇ? ಇದನ್ನೇ ನೆಪ ಮಾಡಿಕೊಂಡು ಹಿಂದೂಗಳ ಭಾವನೆಗಳನ್ನು ಯದ್ವಾ ತದ್ವಾ ಕೆರಳಿಸದೆ ಇರುತ್ತಿದ್ದರೇ? ಚಿಕ್ಕ ಪುಟ್ಟ ಪ್ರತಿಭಟನೆ ನಡೆಯಿತೆಂಬುದನ್ನು ಬಿಟ್ಟರೆ ಎಲ್ಲಾ ದೇವಸ್ಥಾನಗಳೂ ನೆಲಕ್ಕುರುಳಿವೆ. ದೇವಾಲಯಗಳು ಮಣ್ಣು ಸೇರಿದ ಮೇಲೆ ದೊಡ್ಡ ಪ್ರತಿಭಟನೆ ಮಾಡುವ ಮನಸ್ಸು ಮಾಡಿದೆ ಅಲ್ಲಿನ 'ಹಿಂದೂ' ಪರ ಸಂಘಟನೆಗಳು! ಇದಕ್ಕೆಲ್ಲ ಕಾರಣ ಆರ್.ಎಸ್.ಎಸ್ಸಿನ ರಾಜಕೀಯ ಅಂಗವಾದ ಬಿಜೆಪಿ ರಾಜಸ್ಥಾನದಲ್ಲಿ ಅಧಿಕಾರದಲ್ಲಿದೆ! ಹಿಂದೂ ಸಂಘಟನೆಗಳು 'ಹಿಂದೂ ಪರವಾಗಿ' ಕೆಲಸ ಮಾಡುವುದು ಯಾವಾಗ ಎಂದೀಗ ಅರಿವಾಗಿರಬೇಕಲ್ಲ. 
ನಾಟಕದ ಸಂಘಟನೆಗಳ ಮಾತು ಬಿಡಿ. ಬೇಸರದ ಸಂಗತಿಯೆಂದರೆ ಇನ್ನೂರು ವರುಷಗಳಷ್ಟು ಹಳೆಯದಾದ ದೇವಾಲಯಗಳನ್ನೂ ನಾಶಪಡಿಸಲಾಗಿದೆ. ಬ್ಯುಸಿನೆಸ್ಸನ್ನೇ ಮುಖ್ಯ ಗುರಿಯಾಗಿಸಿಕೊಂಡು ಕಟ್ಟಲ್ಪಡುವ ಹೊಸ ದೇವಸ್ಥಾನಗಳ ಕಥೆ ಬಿಡಿ, ಸಾಂಸ್ಕೃತಿಕವಾಗಿ, ಪಾರಂಪರಿಕವಾಗಿ ಮುಖ್ಯವಾದ ದೇವಸ್ಥಾನಗಳನ್ನು ಈಗಿರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ರಕ್ಷಿಸುವ ಕೆಲಸವನ್ನು 'ಹಿಂದೂ ಧರ್ಮ ರಕ್ಷಕ' ಪಕ್ಷ ಅಧಿಕಾರದಲ್ಲಿರುವ ಸರಕಾರ ಮಾಡಬೇಕಿತ್ತಲ್ಲವೇ? ಮೆಟ್ರೋದ ಸಲುವಾಗಿ ಪರಂಪರೆಯ ಸಂಕೇತವಾದ ದೇಗುಲವೊಂದನ್ನು ನಾಶಪಡಿಸಿದ್ದು ತಪ್ಪು. 

No comments:

Post a Comment