May 15, 2015

ತಲೆಮೇಲೆ ಸೂರಿಲ್ಲದ ಬಡವರ ಮನೆಮುಂದೆ ಶ್ರೀಮಂತರ ರೆಸಾರ್ಟೂ, ಮೋಜಿನಾಟದ ಗಾಲ್ಫ್ ಕೋರ್ಟೂ...

ಮಂಗಳೂರು ನಗರದ ಕೂಗಳತೆಯ ದೂರದಲ್ಲಿರುವ ಬೆಂಗರೆ ಸಮುದ್ರ ತೀರದ ಸುಂದರ ಊರು. ಹದಿನೈದು ಸಾವಿರ ಜನಸಂಖ್ಯೆ, ಎರಡೂವರೆ ಸಾವಿರ ಮನೆಗಳನ್ನು ಹೊಂದಿರುವ ಬೆಂಗರೆಯಲ್ಲಿ ಬ್ಯಾರಿ ಮುಸ್ಲಿಮರು, ಮೊಗವೀರ ಸಮುದಾಯದವರು ಸಮ ಸಂಖ್ಯೆಯಲ್ಲಿದ್ದಾರೆ. ಮೀನುಗಾರಿಕೆ ಸಂಭಂಧಿಸಿ ಸಮುದ್ರವನ್ನೇ ನೆಚ್ಚಿ ಬದುಕುವ ಈ ಕಡಲ ಮಕ್ಕಳ ಬದುಕಿನ ಮೇಲೆ ಬಂಡವಾಳಶಾಹಿ ಕರಿನೆರಳು ಬಿದ್ದಿದೆ. ಇವರ ಊರಿನ ಉದ್ದಕ್ಕೂ ಮೈಚಾಚಿ ಮಲಗಿರುವ ನೂರೈವತ್ತು ಎಕರೆ ಸಮುದ್ರ ತೀರವನ್ನು ಸರಕಾರ ಪಿ ಪಿ ಪಿ ಯೋಜನೆಯನ್ವಯ ಖಾಸಗಿ ಶ್ರೀಮಂತ ಉದ್ಯಮಿಗೆ ಬಹುತೇಕ ಉಚಿತವಾಗಿ ಧಾರೆ ಎರದಿದೆ. ಉದ್ಯಮಿ ಈ ಚಿನ್ನದಂತ ಸಮುದ್ರ ದಂಡೆಯಲ್ಲಿ ನೂರೈವತ್ತು ಗೆಸ್ಟ್ ಹೌಸ್ ವಿಲ್ಲ ರೆಸಾರ್ಟ್, ಧಣಿಗಳ ಮೋಜಿನಾಟದ ಗಾಲ್ಫ್ ಕೋರ್ಟ್ ನಿರ್ಮಿಸಲು ಹೊರಟಿದ್ದಾರೆ. ಅದಕ್ಕಾಗಿ ಊರು ಮತ್ತು ಸಮುದ್ರ ದಂಡೆಯನ್ನು ಬೇರ್ಪಡಿಸಲು ಹತ್ತಡಿ ಎತ್ತರದ ರಕ್ಷಣಾಗೋಡೆ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದ ಬೆಂಗರೆಯ ಬಡಪಾಯಿ ಜನತೆ ಭೀತಿಗೊಂಡಿದ್ದಾರೆ. ತಮ್ಮ ಮತ್ತು ಸಮುದ್ರದ ಮದ್ಯೆ ಮೇಲೇಳುತ್ತಿರುವ ಗೋಡೆ ಸಮುದ್ರದ ಜೊತೆಗಿನ ತಮ್ಮ ಶತಮಾನದ ನಂಟನ್ನು ಕೊನೆಗೊಳಿಸುವುದನ್ನು ಕಂಡು ಕಂಗಾಲಾಗಿದ್ದಾರೆ. ಈಗಲೇ crz ನೆಪಹೇಳಿ ಡೋರ್ ನಂಬ್ರ, ವಿದ್ಯುತ್, ನೀರು ಕೊಡದೆ ಅಕ್ರಮವಾಸಿಗಳು ಎಂದು ಕರೆಯುವ ಸರಕಾರ, ಸಮುದ್ರದೊಂದಿಗೆ ತಮ್ಮ ನಂಟನ್ನು ಕೊನೆಗೊಳಿಸಿ ಮೀನುಗಾರಿಕೆ ಮಾಡದಂತೆ ತಡೆಯುವುದಲ್ಲದೆ, ಮೋಜಿನಾಟಕ್ಕೆ ಬರುವ ಶ್ರೀಮಂತರ ಅನುಕೂಲಕ್ಕಾಗಿ ತಮ್ಮನ್ನು ಒಕ್ಕಲೆಬ್ಬಿಸುವುದು ನಿಶ್ಚಿತ ಎಂದು ಆತಂಕಿತರಾಗಿದ್ದಾರೆ. ಬಡವರ ಗುಡಿಸಲುಗಳ ಮುಂದೆ ತಲೆ ಎತ್ತಲಿರುವ ಶ್ರೀಮಂತರ ಮೋಜಿನಾಟದ ಯೋಜನೆಯ ವಿರುದ್ದ dyfi ಧ್ವನಿ ಎತ್ತಿದೆ, ಇಂದು ಸ್ಥಳೀಯ ಜನತೆಯ ಪಾಲ್ಗೊಳ್ಳುವಿಕೆಯೊಂದಿಗೆ ಹೋರಾಟಕ್ಕೆ ಚಾಲನೆ ದೊರಕಿದೆ. ಬಡವರ ಗುಡಿಸಲ ಮುಂದೆ ಮಹಲುಗಳ ಘರ್ಜನೆಯ ಸಹಿಸಲಾಗದು...
(ಮುನೀರ್ ಕಾಟಿಪಳ್ಳರವರ ಫೇಸ್ ಬುಕ್ ಪುಟದಿಂದ)

2 comments:

  1. ಶ್ರೀಮಂತರ ಅನುಕೂಲಕ್ಕಾಗಿ ದುನಿಯಾ! ಬಡವನ ಪಾಡು ದೇವರಿಗೇ ಪ್ರೀತಿ.
    ಸಿಕ್ಕೀತೆ ನ್ಯಾಯಕೆ ಬೆಲೆ? ಮೂಲ ನಿವಾಸಿಗಳಿಗೆ ಉಳಿದೀತೆ ನೆಲೆ?

    ReplyDelete
    Replies
    1. ನ್ಯಾಯ ಮರೀಚಿಕೆಯಾಗಿ ಉಳಿದುಹೋಗುವುದೇ ಇಂದಿನ ದಿನಗಳಲ್ಲಿ ಅಧಿಕವಾಗಿಬಿಟ್ಟಿದೆ

      Delete