Jan 7, 2014

ವಿಚಾರಣೆ

ಕು ಸ ಮಧುಸೂದನ

ನನ್ನ ಮುಂದೆ ಮೂರು ಜನ ಕೂತಿದ್ದರು. ಮದ್ಯದವನು ಕೆಂಪಗೆ ಇದ್ದು,ಸುಮ್ಮನಿದ್ದರೂ ಮುಗುಳ್ನಗುವಂತೆ ಕಾಣುತ್ತಿದ್ದ. ಆತನ ಕಣ್ಣುಗಳಲ್ಲಿ ನನ್ನ ಬಗ್ಗೆ ಅನುಕಂಪ ತುಂಬಿರುವಂತೆ ಅನಿಸಿತ್ತು. ನನ್ನ ಮುವತ್ತಮೂರು ದಿವಸಗಳ ಜೈಲಿನ ವಾಸದಲ್ಲಿ ಹಿಂದೆಂದೂ ಆತನನ್ನು ನೋಡಿದ ನೆನಪಾಗಲಿಲ್ಲ.ಅವನನ ಎಡಗಡೆಗೆ ಬೊಕ್ಕತಲೆಯವನೊಬ್ಬ ಕುಳಿತಿದ್ದ. ಆತನನ್ನು ಈ ರೂಮಿನಲ್ಲೇ ನೋಡಿದ್ದೆ. ಅಲ್ಲಿದ್ದ ಮೂರನೆಯವನು ಮಾತ್ರ ಪೋಲಿಸರ ಉಡುಪಿನಲ್ಲಿರದೆ,ಇದೆಲ್ಲ ತನಗೆ ಸಂಬಂದಿಸಿಯೇ ಇಲ್ಲವೇನೊ ಎಂಬಂತೆ ಕುಳಿತಿದ್ದ. ಬಹುಶ: ಅವನು ಬೇರೆ ಇಲಾಖೆಯವನಿರಬೇಕು.


ಜೈಲಿನ ಸಣ್ಣ ಸೆಲ್ಲಿನಲ್ಲಿ ಬೆಳಗಿನ ಊಟ ಮುಗಿಸಿ ಅಡ್ಡಾಗಿದ್ದವನನ್ನುಈ ವಿಚಾರಣೆಯ ರೂಮಿನಲ್ಲಿ ಕೂರಿಸಿಇಪ್ಪತ್ತೈದು ನಿಮಿಷಗಳಾದರೂ ಯಾರೂ ಮಾತನಾಡಿಸುವಂತೆ ಕಾಣಲಿಲ್ಲ. ನನಗೆ ಅಸಹನೆ ಶುರುವಾಯಿರು. ಬಹುಶ: ಎದುರಿಗೆ ಕುಳಿತ ವ್ಯಕ್ತಿಯ ಮನೋಬಲ ಪರೀಕ್ಷೆ ಮಾಡುವ ಪೋಲಿಸರ ತಂತ್ರದಲ್ಲಿ ಇದೂ ಸೇರಿರಬಹುದೆಂದು ಅನುಮಾನವಾಯಿತು.

ಆ ಮೂರು ಜನರಕಡೆಗಿನ ಗಮನವನ್ನು ಬಿಟ್ಟು ವಿಶಾಲವಾದ ರೂಮಿನ ಸೂರನ್ನು,ಬಣ್ಣ ಕಳೆದುಕೊಂಡ ಗೋಡೆಗಳನ್ನು, ಗವಾಕ್ಷಯಂತ ಕಿಟಕಿಗಳನ್ನು ನೋಡತೊಡಗಿದೆ. ಅವರ ತಂತ್ರವನ್ನು ವಿಫಲಗೊಳಿಸಲು ನಾನೂ ಸಮರ್ಥನಿದ್ದೇನೆ ಅನ್ನುವುದನ್ನು ಅವರಿಗೆ ತೋರಿಸಬೇಕು ಎಂದುಕೊಂಡು ಸುಮ್ಮನೆ ನಕ್ಕೆ.

ಮದ್ಯದ ವ್ಯಕ್ತಿ( ಆತನನ್ನು ಎ ಎಂದಿಟ್ಟುಕೊಳ್ಳೋಣ " ನೀವು ತುಂಬಾ ಹಟ ಮಾಡುತ್ತಿದ್ದೀರಿ. ನಿಮಗೆ ಗೊತ್ತಿರುವ ವಿಚಾರಗಳನ್ನು ಹೇಳಿಬಿಟ್ಟರೆ ಮನೆಗೆ ಹೋಗಲು ನೀವು ಸ್ವತಂತ್ರರು" ಎ ಮಾತು ಶುರು ಹಚ್ಚಿದ. ನನಗೆ ಆಶ್ಚರ್ಯವೆನಿಸಲಿಲ್ಲ: ಇಷ್ಟು ದಿನಗಳ ಕಠಿಣ ವಿಚಾರಣೆ ವಿಫಲವಾಗಿದ್ದಕ್ಕೆ ಹೀಗೆ ನಯವಾಗಿ ಮಾತಾಡಿ ನನ್ನಬಾಯಿ ಬಿಡಿಸಲು ಇವನನ್ನು ಕಳಿಸಿರಬೇಕು.
" ಆಫಿಸರ್, ತಪ್ಪು ತಿಳಿಯಬೇಡಿ.ಸುಳ್ಳನ್ನು ಸತ್ಯವೆಂದು ಸಾದಿಸಲು ಪ್ರಯತ್ನಿಸುತ್ತಿರುವ ನಿಮ್ಮ ಶ್ರಮಕ್ಕೆ ಯಾವ ಅರ್ಥವೂ ಇಲ್ಲ."

"ನಿಮ್ಮವರು ಕಳೆದ ಮುವತ್ತಮೂರು ದಿನಗಳಿಂದ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ.ನಾನೂ ಸಹ ಅದೇ ಉತ್ತರಗಳನ್ನು ಕೊಡುತ್ತಿದ್ದೇನೆ. ಯಾಕೆ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ?" ನನ್ನ ಮಾತು ಮುಗಿಯುವಷ್ಟರಲ್ಲಿ ಎ ಎಡಕಿದ್ದ ಬೊಕ್ಕತಲೆ ಮದ್ಯೆ ಬಾಯಿಹಾಕಿತು.

"ನೀವು ಬರೆದ ಪುಸ್ತಕಗಳು ಲೇಖನಗಳು ಪತ್ರಗಳೆಲ್ಲ ನಮಗೆ ಸಿಕ್ಕಿವೆ. ನೀವು ವಿದ್ರೋಹಿ ಅಂತ ತಿಳಿಯಲು ಅವು ಸಾಕು." ನನಗೆ ತಮಾಷೆಯೆನಿಸಿತು.

" ದುಡ್ಡು ಕೊಟ್ಟರೆ ಎಲ್ಲಾ ಪುಸ್ತಕದ ಅಂಗಡಿಗಳಲ್ಲಿಯೂ ನನ್ನ ಪುಸ್ತಕಗಳು ಸಿಗುತ್ತವೆ. ಅವೆಲ್ಲ ಸಾರ್ವಜನಿಕವಾಗಿ ಪ್ರಕಟಣೆಯಾದಂತವು."

" ಇರಬಹುದು! ಆದರೆ ಅವುಗಳಲ್ಲಿರುವ ವಿಷಯ ನಮಗೆ ಮುಖ್ಯವಾಗಿದೆ.ನೀವು ಕ್ರಾಂತಿಕಾರಿ ಸಂಘಟನೆಗಳ ಬಗ್ಗೆ ಸಹಾನುಬೂತಿಯಿಂದ ಬರೆಯುತ್ತೀರಿ. ಸರಕಾರದ ಅಸಮರ್ಥತೆಯ ಬಗ್ಗೆ, ರಾಜಕೀಯ ವ್ಯವಸ್ಥೆಯ ಬಗ್ಗೆ ಕಟುವಾಗಿ ಬರೆಯುತ್ತೀರಿ.ಇಷ್ಟಲ್ಲದೆ ಕೆಲವು ಗುಪ್ತ ಸಂಘಟನೆಗಳ ಸದಸ್ಯರೊಂದಿಗೆ ಫೋನಿನಲ್ಲಿ ಮಾತಾಡಿರರವುದೂ ನಮಗೆ ಗೊತ್ತು. ಇದೆಲ್ಲ ಪ್ರಭುತ್ವದ ವಿರುದ್ದ ಜನರನ್ನು ಸಂಘಟಿಸುವ ಪ್ರಯತ್ನವಲ್ಲದೆ ಮತ್ತಿನ್ನೇನು?"

ಎ ಮಾತಾಡಿದ ರೀತಿ ನೋಡಿದರೆ,ಎಲ್ಲವನ್ನು ಅವರು ತೀರ್ಮಾನ ಮಾಡಿಕೊಂಡುಬಂದಂತೆ ಅನ್ನಿಸಿತು. ಈ ಜೈಲುವಾಸದ ಕೆಲವೇ ದಿನಗಳ ಅನುಭವದಲ್ಲಿ ಒಂದು ವಿಷಯ ಮನವರಿಕೆಯಾಗಿತ್ತು. ಇವರೆಲ್ಲ ನನ್ನ ಪುಸ್ತಕಗಳನ್ನು,ಕವಿತೆಗಳನ್ನು ವಿವರವಾಗಿ ಓದಿದ್ದಾರೆ. ಇವರಿಗೆ ಸೆರೆ ಸಿಕ್ಕ ನಕ್ಸಲನೊಬ್ಬನ ಹತ್ತಿರ ಸಿಕ್ಕ ನನ್ನ ಪುಸ್ತಕಗಳನ್ನು ನನ್ನ ವಿರುದ್ದದ ಸಾಕ್ಷಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಮತ್ತು ರಾಜದ್ರೋಹದ ಆಪಾದನೆಯನ್ನು ಹುಟ್ಟು ಹಾಕಿದ್ದಾರೆ.

ಇವರಿಗೆ ಶಾಶ್ವತವಾಗಿ ನನ್ನನ್ನು ಬಂದಿಸಿಡಲು ಸಾದ್ಯವಿಲ್ಲ. ಆದರೆ ನನ್ನಬಂಧನದ ಮೂಲಕ ಸರಕಾರದ ಜನವಿರೋಧಿ ಕಾರ್ಯಕ್ರಮಗಳ ವಿರುಧ್ದ ಹೋರಾಡುವವರಿಗೆ ನೈತಿಕ ಬೆಂಬಲ ನೀಡುತ್ತಿರುವ ಸಾಹಿತಿಗಳಿಗೆ,ಪ್ರಗತಿಪರ ನಿಲುವಿನವರಿಗೆ ಒಂದು ಎಚ್ಚರಿಕೆನ್ನು ನೀಡುತ್ತಿದ್ದಾರೆ. ಇವೆಲ್ಲವೂ ನನಗೆ ಈಗ ಅರ್ಥವಾಗುತ್ತಿದೆ.

ಇದೆಲ್ಲಕ್ಕೂ ತೆರೆ ಹಾಕಬೇಕೆಂದರೆ ಈಗ ನಾನು ಮನಸು ಬಿಚ್ಚಿ ಮಾತಾಡಿ ನನ್ನನ್ನು ನಾನು ಸಮರ್ಥಿಸಿಕೊಳ್ಳುವುದರ ಮೂಲಕ ನನ್ನ ನಿರಪರಾದಿತ್ವವನ್ನು ಸಾಭೀತು ಪಡಿಸುವುದೊಂದೇ ದಾರಿ.

ನನ್ನ ದೀರ್ಘಮೌನ ಎ ಮೇಲೆ ಪರಿಣಾಮ ಬೀರಿರಬೇಕು. " ನಿದಾನವಾಗಿ ಯೋಚಿಸಿ,ನಿಮ್ಮ ಮೇಲೆ ಅಸಂಖ್ಯಾತ ಮೊಕದ್ದಮೆಗಳನ್ನು ಹೂಡಿ ನೀವು ಶಾಶ್ವತವಾಗಿ ಇಲ್ಲಿರುವಂತೆ ನಾವು ಮಾಡಬಹುದು.ಆದರೆ, ಆ ಉದ್ದೇಶ ನಮಗಿಲ್ಲ. ನೀವು ಅವಸರ ಪಡುವ ಅವಶ್ಯಕತೆಯಿಲ್ಲ. ನಾಳೆ ಮತ್ತೆ ನಿಮ್ಮನ್ನು ಬೇಟಿ ಆಗುತ್ತೇನೆ. ಆಗ ನಾವಿಬ್ಬರೂ ಮಾತಾಡೋಣ. ಆದರೆ ಹೀಗಲ್ಲ,ಹಳೆಯ ಸ್ನೇಹಿತರ ಹಾಗೆ!"

"ಆಫಿಸರ್, ಮತ್ತೆ ನಾವು ಬೇಟಿಯಾಗುವ ಅವಶ್ಯಕತೆಯಿಲ್ಲ ಅನಿಸುತ್ತೆ. ಯಾಕೆಂದರೆ: ನಾನೀಗಲೆ ನಿಮ್ಮೊಂದಿಗೆ ಸ್ವಲ್ಪ ಮಾತಾಡಬೇಕಿದೆ. ಇವು ಈ ಜೈಲಿನಲ್ಲಿ ನನ್ನ ಕಡೆಯ ಮಾತುಗಳು. ಯಾಕೆಂದರೆ ನಾಳೆಯಿಂದ ನಾನು ಮಾತಾಡುವುದಿಲ್ಲ. ಯಾರಿಗೆ ನನ್ನ ಮಾತುಗಳ ಬಮೇಲೆ ನಂಬಿಕೆ-ಗೌರವವಿರುವುದಿಲ್ಲವೊ ಅಂತವರೊಂದಿಗೆ ಸಂವಾದ ಅನಗತ್ಯವೆಂದು ನಂಬಿದವನು ನಾನು."

" ನೀವು ಬಹಳ ಒಳ್ಳೆಯವರಾಗಿ ಕಾಣುತ್ತೀರಿ ಅಥವಾ ನಿಜಕ್ಕೂ ಒಳ್ಳೆಯವರೇ ಇರಬಹುದು!.ಮನುಷ್ಯ ಸುಳ್ಳಿನ ಇಟ್ಟಿಗೆಗಳಿಂದ ಕಟ್ಟಿಕೊಂಡ ಬದುಕಿಗೆ ಸತ್ಯದ ಪರಿವೆ ಇರುವುದಿಲ್ಲ. ನಿಮ್ಮ ಬದುಕಿನ ಸುತ್ತ ಕಟ್ಟಕೊಂಡ ಸುಳ್ಳಿನ ಗೋಡೆಗಳನ್ನು ಒಡೆದು ಹಾಕಿ,ಸತ್ಯದ ವಿಶಾಲ ಬಯಲಲ್ಲಿ ನಿಲ್ಲುವ ಸಾಹಸವನ್ನು ಎಂದಾದರೂ ಮಾಡಿದ್ದೀರಾ? ಈ ಕ್ಷುಲ್ಲಕ ಬದುಕಿನ ಆಚೆಗೆ ಏನಿರಬಹುದೆಂಬ ಕನಿಷ್ಠ ಕುತೂಹಲ ನಿಮ್ಮನ್ನು ಯಾವತ್ತಾದರೂ ಕಾಡಿದೆಯೇ? ನೀವು ಉಣ್ಣುವಾಗ ನಿಮ್ಮ ತಟ್ಟೆಯೊಳಗೆ ಮತ್ತಾರದೋ ಮುಖವನ್ನು ಎಂದಾದರೂ ಕಂಡಿದ್ದೀರಾ??"

ನನ್ನ ತಪ್ಪುಗಳ ಬಗ್ಗೆ ಹೇಳಿದ್ದೀರಿ.
ನನ್ನ ಬರಹಗಳ ಬಗ್ಗೆ ಮಾತಾಡಿದಿರಿ.
"ಆಫಿಸರ್, ನಾನು ಕ್ರಾಂತಿಕಾರಿಯೂ ಅಲ್ಲ. ಪ್ರವಾದಿಯೂ ಅಲ್ಲ. ಇಡೀ ವ್ಯವಸ್ಥೆಯನ್ನು ಬದಲಿಸುವ ಶಕ್ತಿಯಿರುವ ಮನುಷ್ಯನೂ ಅಲ್ಲ. ಆದರೆ, ಈ ಎಲ್ಲವನ್ನೂ ನನ್ನ ಮೇಲೆ ಆರೋಪಿಸಿ ನಿಮ್ಮ ಪ್ರಭುತ್ವವೇ ನನಗಿಲ್ಲದ ಶಕ್ತಿಯನ್ನು ತುಂಬಲು ಹೊರಟಿದೆ. ನಾನು ಏನನ್ನು ಬರೆದಿದ್ದೀನಿ? ಯಾವ ಸತ್ಯವನ್ನು ಹೇಳಿದ್ದೀನಿ? ನನ್ನ ಬರಹಗಳಲ್ಲಿ ಪ್ರಶ್ನೆಗಳಿವೆಯಷ್ಟೆ. ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನ ಮಾಡಿದ್ದೀನಿ,ಅಷ್ಟೇ!"

"ಈ ದೇಶದ ಲಕ್ಷಾಂತರ ಕೈಗಳಿಗೆ ಕೆಲಸ ಯಾಕಿಲ್ಲ? ಅಂತ ಕೇಳಿದೆ. ಈ ಜನಸಮುದಾಯಕ್ಕೆ ಯಾಕೆ ಒಂದು ಹೊತ್ತು ಅನ್ನ ಸಿಗುತ್ತಿಲ್ಲ ಅಂತ ಪ್ರಶ್ನಿಸಿದೆ. ಯಾಕೆ ಈ ಬೂಮಿಯ ಮೇಲೆ ನಾವೆಲ್ಲ ಸಮಾನ ಅವಕಾಶ ಹೊಂದಿಲ್ಲ ಅಂತ ಕೇಳಿದೆ."

"ಕ್ಷಮಿಸಿ, ಈ ಪ್ರಶ್ನೆಗಳನ್ನೆಲ್ಲ ನಾನು ನಿಮ್ಮ ಪ್ರಭುತ್ವಕ್ಕೆ ಕೇಳಲಿಲ್ಲ. ಬದಲಿಗೆ ಈ ವ್ಯವಸ್ಥೆಯ ಅಂಗವಾಗಿ ನನ್ನನೇ ಕೇಳಿಕೊಂಡೆ. ಉತ್ತರ ನನ್ನಲ್ಲೂ ಇಲ್ಲ-ನಿಮ್ಮಲ್ಲೂ ಇಲ್ಲ.ಉತ್ತರಗಳನ್ನು ಹುಡುಕುತ್ತ ನನ್ನಕತೆಗಳು ಕವಿತೆಗಳು ಹುಟ್ಟಿದವು. ಅವನ್ನು ನೀವು ನಿಮ್ಮ ವಿರುದ್ದ ಅಂತ ಬಾವಿಸಿದಿರಿ.ನೀವು ಕಟ್ಟಿಕೊಂಡ ಅಧಿಕಾರದ ಕೋಟೆಯನ್ನು ಕೆಡವುವ ತಂತ್ರವೆಂದು ಬಾವಿಸಿದಿರಿ. ಅದಕ್ಕೆ ವಿದ್ರೋಹ ಅಂತ ಹೆಸರಿಟ್ಟಿರಿ. ನನ್ನನ್ನು ಬಂದಿಸಿದಿರಿ."

" ಸುಳ್ಳನ್ನು ಸತ್ಯವೆಂದು ಸಾದಿಸಲು ಹೊರಟು ಸತ್ಯಕ್ಕೆ ಅಪಚಾರ ಮಾಡುತ್ತಿದ್ದೀರಿ. ಇದು ಯಾವ ವ್ಯವಸ್ಥೆಗೂ ಒಳ್ಳೆಯದಲ್ಲ."

"ಕ್ಷಮಿಸಿ,ಆಫಿಸರ್ ಬಹಳ ಮಾತನಾಡಿದೆ. ನನ್ನ ನಿಲುವನ್ನು ಹೇಳಿದ್ದೇನೆ. ನನಗೆ ಗೊತ್ತು ಈ ಮಾತುಗಳು ರೆಕಾರ್ಡ್ ಆಗಿವೆ. ತೀರ್ಪು ನಿಮಗೆ,ನಿಮ್ಮಪ್ರಭುತ್ವಕ್ಕೆ ಬಿಟ್ಟಿದ್ದು."

"ಕೊನೆಯದಾಗಿ ನೆನಪಿಟ್ಟುಕೊಳ್ಳಿ: ನೇವೇ ನಿಮ್ಮ ದುಸ್ಸಾಹಸದಿಂದದ ಒಬ್ಬ ಕ್ರಾಂತಿಕಾರಿಯನ್ನು ಸೃಷ್ಠಿಸಲು ಹೊರಟಿದ್ದೀರಿ."

ಅವತ್ತು ರಾತ್ರಿ ನನಗೆ ಚೆನ್ನಾಗಿ ನಿದ್ದೆ ಬಂತು.ನಿದ್ದೆಯಲೊಂದು ಕನಸು:
ಕನಸೊಳಗೆ ಜೈಲಿನ ಗೋಡೆಗಳು ಒಡೆದು ಬಿದ್ದಿವೆ-ವಿಶಾಲವಾದ ಹಸಿರು ಬಯಲಲ್ಲಿ ಲಕ್ಷಾಂತರ ಜನ ಸೇರಿದ್ದಾರೆ. ಅವರೆಲ್ಲ ಒಂದೇ ದ್ವನಿಯಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ:

"ನಮ್ಮ ಕೈಗಳಿಗೆ ಕೆಲಸ ಯಾಕಿಲ್ಲ?
ಹಸಿದ ಹೊಟ್ಟೆಗೆ ಅನ್ನ ಯಾಕಿಲ್ಲ?
ಭೂಮಿಯೊಳಗಿನ ಮನುಷ್ಯರೆಲ್ಲ ಯಾಕೆ ಸಮಾನರಲ್ಲಾ?

ಈಗ ಪ್ರಭುತ್ವ
ಉತ್ತರಿಸಲೇಬೇಕಿದೆ!

No comments:

Post a Comment