Jan 25, 2009

ಸಮಾಧಿ ಹೋಟ್ಲು.

ಪುಟ ೧
ಕಪ್ಪು ಮೋಡಗಳನ್ನು ನೋಡಿದವನಿಗೆ ಯಾವುದೋ ಭರವಸೆ, ಇವತ್ತಾದರೂ ಮಳೆ ಸುರಿದೀತೆಂಬ ಆಶಯ. ವಾರದಿಂದ ಸೇರುತ್ತಿದ್ದವಾದರೂ ತಮ್ಮಲ್ಲೇ ಜಗಳವಾಡಿಕೊಂಡಂತೆ ದೂರಾಗಿಬಿಡುತ್ತಿದ್ದವು. ಇಂದಲ್ಲ ನಾಳೆ ಮಳೆ ಬಂದೇ ಬರುವುದೆಂಬ ನಿರೀಕ್ಷೆಯಿಂದ ಉಳುಮೆ ಮಾಡಿ ಮನೆಗೆ ಹಿಂದಿರುಗುತ್ತಿದ್ದ ರಾಮೇಗೌಡ. ಮಲೆನಾಡಿನಲ್ಲೇ ಹುಟ್ಟಿ ಬೆಳೆದವನಿಗೆ ಮಳೆಗಾಗಿ ಕಾಯುವುದು ವಿಚಿತ್ರವೆಂಬಂತೆ ತೋರುತ್ತಿತ್ತು. ನಾಲ್ಕು ವರ್ಷದ ಹಿಂದೆ ಬಯಲುಸೀಮೆಗೆ ಬಂದಿದ್ದಾನೆ. ಹಿಂದಿನ ವರ್ಷಗಳಲ್ಲಿ ಮಳೆ ಚೆನ್ನಾಗಿತ್ತು. 'ಈ ವರ್ಷ ಯಾಕೋ ಅದ್ರುಷ್ಟವಿದ್ದಂತಿಲ್ಲ ಎಂದುಕೊಂಡು ಮನೆಗೆ ಬಂದವನಿಗೆ ಹೆಂಡತಿಯ ಗೊಣಗಾಟ ಕೇಳಿತು, ಈಗದು ಅಭ್ಯಾಸವಾಗಿದ್ದರಿಂದ ಬೇಸರವೆನಿಸಲಿಲ್ಲ. ಎತ್ತುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೈಸವರಿ ಒಂದಷ್ಟು ಒಣಹುಲ್ಲು ಹಾಕಿ ಬಂದ. ಜನರಿಗೇ ಉಣ್ಣಲು ಕಷ್ಟವಾಗಿರುವಾಗ ಎತ್ತುಗಳು ಬಡಕಲಾಗಿರುವುದರಲ್ಲಿ ಯಾವುದೇ ವಿಶೇಷ ಕಾಣಲಿಲ್ಲ. ಕೈ ಕಾಲು ತೊಳೆದುಕೊಂಡು ಹೋಗಿ ತಂದೆ ತಾಯಿಯ ಫೊಟೊಗೊಮ್ಮೆ ಕೈ ಮುಗಿದು ಚಾಪೆ ಹಾಸಿಕೊಂಡು ಅಡ್ಡಾದ. ಅಡುಗೆ ಮನೆಯಿಂದ ಹೊರಬಂದ ಹೆಂಡತಿ " ಊರವರೆಲ್ಲಾ ಆಡಿಕೊಳ್ತಿದ್ದಾರೆ. ದುಡ್ಡು ಉಳಿಸೋದಿಕ್ಕೆ ಈ ಗೌಡ ಅಪ್ಪನ ಶ್ರಾದ್ಧ ಕಾರ್ಯಾನು ಮಾಡ್ತಿಲ್ಲ ಅಂತ. ದೇವರೆಡೆಗೆ ಅಸಡ್ಡೆ ತೋರೋದಿಕ್ಕೆ ಇವರಿಗೆ ಮಕ್ಕಳಾಗಿಲ್ಲ ಅಂತಾ..." ಕಣ್ಣೀರಾದಳು, ಆಕೆ ಕಣ್ಣೀರಾಕಿದ್ದು ಮಕ್ಕಳಿಲ್ಲ ಎಂಬುದಕ್ಕೋ ಅಥವಾ ಶ್ರಾದ್ಧ ಮಾಡ್ತಿಲ್ಲವೆಂಬೋದಕ್ಕೋ ಅಂದಾಜಿಸಲಾಗಲಿಲ್ಲ ಗೌಡನಿಗೆ. " ನೋಡು ಕಮಲ ಜನ ಸಾವಿರ ಹೇಳಲಿ, ನಮ್ಮ್ಹತ್ರ ಇರೋದೇ ಸ್ವಲ್ಪ ದುಡ್ಡು. ಅದನ್ನೂ ಶ್ರಾದ್ಧಕ್ಕೆಂತ ಅವರಿವರ ಬಾಯಿಗೆ ಹಾಕಿಬಿಟ್ಟರೆ ನಮ್ಮ ಬಾಯಿಗೆ ..." ಮಗ್ಗುಲು ಬದಲಿಸಿದ

ಇನ್ನು ಮಾತನಾಡಿ ಉಪಯೋಗವಿಲ್ಲವೆಂದು ಅರಿತು ಮತ್ತೆ ಗೊಣಗುತ್ತಾ ಅಡುಗೆಮನೆ ಸೇರಿದಳು.
[ಮುಂದುವರೆಯುವುದು . . . .]

1 comment:

  1. Dear, Ashok nimma blog nalli kottiruva BOGASE ya URL change agaide. " www.nitinmuttige.blogspot.com " ge change aagide. dayavittu badalayisa bekagi vinanti

    ReplyDelete