Jun 2, 2018

ಕಥೆ: ತಂದೂರಿ.

ಅಭಿಗೌಡ
ಊರಲ್ಲಿ ಯಾರದೇ ಬರ್ತ್‍ಡೇ ಆಚರಣೆಯಾದ್ರು ಶಿವನ ಅಂಗಡಿ ಕಬಾಬಿಗೆ ಭಾರಿ ಬೇಡಿಕೆ. ಏಕೆಂದರೆ ಕಬಾಬ್ ಜೊತೆ ಕಾಂಪ್ಲಿಮೆಂಟರಿ ಕಾಪಿ ಥರ ಒಂದು ತಂದೂರಿ ಚಿಕನ್ ಕೊಡುತ್ತಿದ್ದ. ಕೇಕ್ ಕತ್ತರಿಸುವುದರ ಬದಲು ಅದನ್ನೆ ಆತ ಮಾರ್ಕ್ ಮಾಡಿರುವ ಜಾಗದಲ್ಲಿ ಚಾಕುವಿನಿಂದ ಕಟ್ ಮಾಡಿದರೆ ಸರಾಗವಾಗಿ ಕೇಕ್ ಪೀಸ್‍ನಂತೆಯೇ ಎಲ್ಲರ ಬಾಯಿಗು ಹಾಕಿ ಬರ್ತ್‍ಡೇ ಸಂಭ್ರಮ ಆಚರಿಸಿಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಇರಿಸು-ಮುರಿಸು ತೋರಿದ ಜನ ದಿನೇ ದಿನೇ ಕೇಕ್ ಜೊತೆ ಇದನ್ನು ಕತ್ತರಿಸಲು ಶುರು ಮಾಡಿದ್ರು. ಈಗ ಕೇಕ್ ಬಿಟ್ಟೇ ಬಿಟ್ಟಿದ್ದಾರೆ. ಜನರೇ ಅವರಿಗೆ ಇಷ್ಟವಾದ ಮಾಂಸದ ತುಂಡು ತಂದು ಬರ್ತ್‍ಡೇ ಪಾರ್ಟಿಲಿ ಕತ್ತರಿಸಲು ರೆಡಿ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ.
ಹೆಚ್ಚು ಕೇಕ್ ಸೇಲ್ ಆಗ್ತಿದ್ದ ಬೇಕರಿಯ ರವೀಂದ್ರ ಸ್ವಲ್ಪ ದಿನ ‘ಛೇ ಕೇಕ್ ಬಿಸಿನೆಸ್‍ಗೆ ಕುತ್ ತಂದ್ ಬಿಟ್ನಲ್ಲ ಈ ಕಬಾಬ್ ಶಿವ’ ಎಂದು ಮನದೊಳಗೆ ಗೊಣಗಿಕೊಳ್ಳುತ್ತಿದ್ದರು. ಆತ ನೀಡುತ್ತಿದ್ದ ಆ ಬರ್ತ್‍ಡೇ ಸ್ಪೆಷಲ್ ತಂದೂರಿ ಚಿಕನ್ ರುಚಿ ನೆನಪಾದೊಡನೆ ಯಾರಾದ್ರು ಬರ್ತ್‍ಡೇಗೆ ಕರೆದಿದ್ದಾರ ಎಂದು ನೆನೆಪಿಸಿಕೊಳ್ಳುತ್ತಿದ್ದ.
 
ಇನ್ನಷ್ಟು ಕತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಈ ಕಬಾಬ್ ಶಿವನದು ಒಂದು ತತ್ವ-ಸಿದ್ದಾಂತ ಯಾರಾದ್ರು 'ನೂರುಪಾಯಿ ಜಾಸ್ತಿ ಕೊಡ್ತಿನಿ ಮಾಡಿಕೊಡೋ' ಅಂದ್ರುವೆ ‘ಏಯ್ ಬರ್ತ್‍ಡೇಗೆ ಅದ್ನ ಮಾಡಿಕೊಡೋದು ಸುಮ್ನೆ ಹೋಗೋ’ ಅನ್ನುತ್ತಿದ್ದ.

ಕದ್ದು ಮಾಂಸ ತಿನ್ನುತ್ತಿದ್ದ ಸತೀಶ ಯಾರಿಗೂ ಕಾಣದಂತೆ ರವೀಂದ್ರನ ಬೇಕರಿಯಲ್ಲಿ ಮೊಟ್ಟೆ ಪಪ್ಸ್ ತಿನ್ನೋವಾಗೆಲ್ಲ ‘ ಆ ಕಬಾಬ್ ಶಿವನಿಂದ ನಿಮಗೆ ಕೇಕ್ ಬಿಸಿನೆಸ್ಸೇ ಇಲ್ಲ’ ಅನ್ನುತ್ತಿದ್ದ.

ಬೇಕರಿಗೆ ಅವಾಗವಾಗ ಸತೀಶ್‍ನಿಂದ ಜನರಿಗೆ ಕಾಣುವಂತೆ ಪೂಜೆ ಮಾಡಿಸುತ್ತಿದ್ದ ರವೀಂದ್ರ ಮನದಲ್ಲೇ ‘ ಈ ಬಡ್ಡೆತ್ತವು ರಾಜರೋಷವಾಗಿ ಮಾಂಸ ತಿನ್ನೋರನ್ನ ಎತ್ತಿ ಕಟ್ಟಿ ಜಗಳ ಮಾಡ್ಸೋ ಬುದ್ದೀನ ಯಾವಾಗ ಬಿಡ್ತರೋ, ಅಲ್ಲಿಯವರೆಗೂ ಈ ದೇಶ ಉದ್ಧಾರ ಆಗಲ್ಲ’ ಅಂದುಕೊಳ್ಳುತ್ತಿದ್ದ. ಜೊತೆಗೆ ‘ಸತೀಶ್ ಅವರೇ ನೆಕ್ಸ್ಟ್ ಬೇಕರಿಗೆ ಪೂಜೆ ಮಾಡುವಾಗ ಜನರೆಲ್ಲ ಕೇಕ್ ಕೊಳ್ಳಲಿ ಎಂದು ಸ್ಟ್ರಾಂಗ್ ಆಗಿ ಪೂಜೆ ಮಾಡಿ’ ಅನ್ನುತ್ತಿದ್ದ ರವೀಂದ್ರ.

ಒಂದು ದಿನ ಕಬಾಬ್ ಶಿವ ಆರ್ಡ್‍ರ್ ಕೊಟ್ಟಿದ್ದ ಬರ್ತ್‍ಡೇ ತಂದೂರಿ ಕೊಡಲು ಬಂದು ಅಲ್ಲಿ ಬರ್ತ್‍ಡೇ ಇಲ್ಲದೆ ಸುಮ್ಮನೆ ತಿನ್ನಲು ತರಿಸಿರುವುದ ನೋಡಿ ಅದನ್ನ ಕೊಟ್ಟು ದುಡ್ಡು ಈಸಿಕೊಳ್ಳದೆ ಅವರನ್ನು ‘ಈ ರೀತಿ ಸುಳ್ಳು ಹೇಳ ಬೇಡಿ ಒಳ್ಳೆಯದಾಗಲ್ಲ’ ಅಂತ ಗೊಣಗಿಕೊಂಡು ಬರುವಾಗ ಸತೀಶ್ ಎದುರಾದ ‘ಏನಪ್ಪ ಶಿವ ಕೇಕ್ ಬಿಸಿನೆಸ್ಸೇ ಬಿದ್ದೋಗುವಾಗ ತಂದೂರಿ ಬಿಸಿನೆಸ್ಸ್ ಕಚ್ಚಿಸಿ ಬಿಟ್ಟಿದ್ದೀಯಾ ?’ ಎಂದೊಡನೆ ಶಿವ ‘ಏನೋ ಎಲ್ಲ ನಿಮ್ಮ ಧಯೆ’ ಅಂದ ‘ಏನ್ ಧಯೆನೋ ? ಏನೋ ? ಒಂದು ದಿನವು ಕರೆದು ಪೂಜೆನೆ ಮಾಡಿಸಲಿಲ್ಲವಲ್ಲ ನೀನು, ವ್ಯಾಪಾರ ಚೆನ್ನಾಗಿ ಆಗ್ಲಿ ಅಂತ’ ಅಂದೊಡನೆ ಶಿವನಿಗೆ ಕೋಪ ನೆತ್ತಿಗೇರಿ ‘ಯ್ಯೋ ನೀನು ಬಂದು ನಮ್ಮ ಅಂಗಡಿಯಲ್ಲಿ ಕಬಾಬೋ – ತಂದೂರಿನೋ ತಿಂದ್ರೆ ವ್ಯಾಪಾರ ಚೆನ್ನಾಗಿ ಆಗುತ್ತೆ. ಪೂಜೆ ಮಾಡಿದ್ರೆ ವ್ಯಾಪಾರ ಚೆನ್ನಾಗಿ ಆಗುತ್ತೆ ಅಂತ ನಂಬೋಕೆ ನಾನೇನು ಮೂಡ ನಂಬಿಕೆಯವನ ಹೋಗಯ್ಯ’ ಎಂದು ಗಾಡಿ ಸ್ಟಾರ್ಟ್ ಮಾಡಿಕೊಂಡು ಹೊರಟ ಕಬಾಬ್ ಶಿವನನ್ನು ಗಮನಿಸದೆ, ಶಿವ ಹೊರ ಬಂದ ಮನೆಯೊಳಗೆ ಓಡಿ ಹೋದ ಸತೀಶ್, ತನ್ನ ಸ್ನೇಹಿತರೊಂದಿಗೆ ತಂದೂರಿ ಚಿಕನ್ ತಿಂದು ಬಡ್ಡಿಮಗ ಏನ್ ರುಚಿಯಾಗಿ ಮಾಡವನೋ. ಸಖಾತ್ತಾಗಿದೆ. ಎಂದು ಕೈ ತೊಳೆಯುತ್ತಾ ಹೇಳಿದವನೆ, ಮನೆಯಿಂದ ಹೊರ ಹೋಗುವಾಗ ಲೋ ನಾನ್ ತಿಂದೆ ಅಂತ ಯಾರಿಗೂ ಹೇಳಬ್ಯಾಡ್ರಿ’ ಅಂದು ಹೋದ. ಸತೀಶನ್ನ ನೋಡಿಕೊಂಡು ‘ಈ ಕಳ್ಳನಿಗೆ ತಿನ್ನಿಸಲು ನಾವು ಸುಳ್ಳು ಹೇಳಿ ಪಾಪ ಕಬಾಬ್ ಶಿವನಿಗೆ ಬೇಜಾರ್ ಮಾಡಿದ್ವಲ್ಲೋ’ ಅಂದ ಒಬ್ಬ ಅದಕ್ಕೆ ಮತ್ತೊಬ್ಬ ‘ಹೇಗಾದ್ರು ಮಾಡಿ ಶಿವನಿಗೆ ಇದರ ದುಡ್ಡು ಕೊಡಲೆ ಬೇಕು’ ಅನ್ನುತ್ತಾ ಮನೆ ಬಾಗಿಲು ಮುಚ್ಚಿದ.

ಬೈಕಲ್ಲಿ ಹೋಗುತ್ತಿದ್ದ ಸತೀಶನ್ನ ಹ್ಮೆಲ್ಮೆಟ್ ಧರಿಸಿರುವ ವ್ಯಕ್ತಿಯೊಬ್ಬ ಫಾಲೋ ಮಾಡಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಮುಂದೆ ಬಂದು ಗಾಡಿ ನಿಲ್ಲಿಸಿ ಕೈ ಬೀಸಿ ಸತೀಶನ್ನ ಬೈಕ್ ನಿಲ್ಲಿಸುವಂತೆ ಕೇಳಿದ. ಸತೀಶ ಭಯದಿಂದ ಎಕ್ಸಲೇಟರ್ ಜಾಸ್ತಿ ಕೊಡುವುದಕ್ಕು ಹೆಲ್ಮೆಟ್ ತೆಗೆದು ‘ನಾನು ಕಬಾಬ್ ಶಿವ’ ಎಂದ ಜೋರಾಗಿ ಹಿಂದೆ ತಿರುಗಿ ನೋಡಿದ ಸತೀಶ ಬೈಕ್ ತಿರುಗಿಸಿಕೊಂಡು ಬಂದ ‘ನಾನ್ ಯಾರಪ್ಪ ಇದು’ ಅಂದ್ಕೊಂಡೆ ಬೈಕ್ ನಿಲ್ಲಿಸುವಾಗ ಹೇಳಿದ. ಶಿವ ಒಂದು ಕವರನ ಸತೀಶನ ಬೈಕ್ ಟ್ಯಾಂಕ್ ಮೇಲೆ ಇಡುತ್ತಾ ‘ಇಷ್ಟು ಭಯದಲ್ಲಿ ಬದುಕೋ ನಿಂಗೆ ಬಿಲ್ಡಪ್ ಬೇರೆ ಕೇಡು, ನೋಡು ಬೇಕು ಅಂದ್ರೆ ಪಾರ್ಸಲ್ ಕವರ್ ಮೇಲೆ ನನ್ನ ನಂಬರ್ ಇದೆ. ನೇರವಾಗಿ ಪೋನ್ ಮಾಡು ಯಾರಿಗೂ ಕಾಣದ್ದಂಗೆ ತಂದುಕೊಡ್ತೀನಿ. ನೀನು ಬಿಲ್ಡಪ್ ಅಲ್ಲಿ ಬದುಕೋಕೆ ಊರವರನ್ನೆಲ್ಲ ಸುಳ್ಳರನ್ನಾಗಿ - ಕಳ್ಳರನ್ನಾಗಿ ಮಾಡಬೇಡ’ ಎಂದು ಗದರಿ ಕಬಾಬ್ ಶಿವ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟು ಹೋದ.

No comments:

Post a Comment