Aug 16, 2017

ಸ್ಪಷ್ಟ ನಿಲುವೊಂದನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಜಾತ್ಯಾತೀತ ಜನತಾದಳ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಿಹಾರದಲ್ಲಿನ ಮಹಾಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಬಾಜಪ ನೇತೃತ್ವದ ಎನ್.ಡಿ.ಎ.ಜೊತೆ ಸೇರಿ ಸರಕಾರ ರಚಿಸಿದ ಮೇಲೆ ರಾಷ್ಟ್ರಮಟ್ಟದಲ್ಲಿ ವಿರೋಧಪಕ್ಷಗಳ ಮಹಾಮೈತ್ರಿಕೂಟವೊಂದರ ರಚನೆಯ ಕನಸು ಮೇಲ್ನೋಟಕ್ಕಂತು ಕರಗಿಹೋಗಿದೆ. ಇಂತಹ ಗಾಡಾಂಧಕಾರದಲ್ಲಿ ಮುಳುಗಿರುವ ಕಾಂಗ್ರೇಸ್ಸೇತರ ವಿರೋಧಪಕ್ಷಗಳ ಸ್ಥಿತಿ ಕರುಣಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕನರ್ಾಟಕದಲ್ಲಿನ ಶ್ರೀ ದೇವೇಗೌಡರ ನೇತೃತ್ವದ 'ಜಾತ್ಯಾತೀತಜನತಾದಳ' ಒಂದೇ ಕನಿಷ್ಠ ನಮ್ಮ ರಾಜ್ಯದ ಮಟ್ಟಗಾದರೂ ಬಾಜಪವನ್ನು ದೃಢವಾಗಿ ನಿಂತು ಎದುರಿಸಬಲ್ಲಂತಹ ಶಕ್ತಿಯನ್ನು ಹೊಂದಿರುವಂತೆ ಕಾಣುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ನಾವು ಉಳಿದ ವಿರೋಧಪಕ್ಷಗಳ ಪರಿಸ್ಥಿತಿಯನ್ನು ವಿಶ್ಲೇಷಿಸಿನೋಡಬೇಕಾಗಿದೆ:
ಉತ್ತರಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವರ ಸಮಾಜವಾದಿ ಪಕ್ಷ ಈಗಲೂ ಒಡೆದ ಮನೆಯಾಗಿದ್ದು ತಂದೆ ಮಕ್ಕಳ ಜಗಳದಲ್ಲಿ ಇಡೀ ಪಕ್ಷ ಅತಂತ್ರ ಸ್ಥಿತಿ ತಲುಪಿದೆ. ಅಖಿಲೆಶ್ ಯಾದವ್ ಕಾಂಗ್ರೇಸಿನ್ಸ ಜೊತೆ ಮಾಡಿಕೊಂಡ ಮೈತ್ರಿಯೂ ಫಲ ನೀಡಲಿಲ್ಲ. ಇದೀಗ ಮುಲಾಯಂ ಸಹೋದರ ಶಿವಪಾಲ್ ಸಿಂಗ್ ಸಮಾಜವಾದಿ ಪಕ್ಷದ ಒಂದು ಬಣದೊಂದಿಗೆ ಎನ್.ಡಿ.ಎ. ಸೇರುವ ಸುದ್ದಿ ಹರಿದಾಡುತ್ತಿದೆ. ತೃತೀಯ ರಂಗದ ಬಗ್ಗೆ ಕನಸು ಕಾಣುವ ಸ್ಥಿತಿಯಲ್ಲಿಯೂ ಆ ಪಕ್ಷವಿಲ್ಲದಂತಾಗಿದೆ. 2019ರ ಲೋಕಸಭಾಚುನಾವಣೆಯ ವೇಳೆಗೆ ಆಂತರೀಕ ಭಿನ್ನಮತಗಳನ್ನು ಸರಿಪಡಿಸಿಕೊಡು ತಯಾರಿ ನಡೆಸಬೇಕಾದ ಅನಿವಾರ್ಯತೆಯಲ್ಲ್ಲಿ ಮುಲಾಯಂ ಮತ್ತು ಅಖಿಲೇಶ್ ಇದ್ದಾರೆ. ಇನು ಮೊನ್ನಿನ ವಿದಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಕಂಡ ಕುಮಾರಿ ಮಾಯಾವತಿಯವರನ್ನು ಅವರ ಪಕ್ಷದಿಂದಲೇ ಹೊರಹಾಕುವ ಹುನ್ನಾರವೊಂದು ಸದ್ದಿರದೆ ನಡಯುತ್ತಿದೆ. ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೂ ರಾಜಿನಾಮೆ ನೀಡಿರುವ ಮಾಯಾವತಿಯವರ ಮುಂದೀಗ ತಮ್ಮ ಪಕ್ಷವನ್ನು ತಮ್ಮ ಹಿಡಿತದಲ್ಲಿ ಉಳಿಸಿಕೊಳ್ಳಲೇ ಬೇಕಾದಂತಹ ಸವಾಲೊಂದು ಎದುರಾಗಿದ್ದು ಅವರಿಂದ ತೃತೀಯರಂಗದ ಬಗ್ಗೆ ನಿರೀಕ್ಷೆ ಮಾಡುವುದೇಅಪರಾಧವಾದೀತು. ಸದ್ಯಕ್ಕೆ ಅವರ ಕಣ್ಣ ಮುಂದಿರುವುದು 2019ರ ಹೊತ್ತಿಗೆ ಉತ್ತರಪ್ರದೇಶದ ರಾಜಕೀಯದಲ್ಲಿ ತಮ್ಮನ್ನು ಪ್ರಸ್ತುತವಾಗಿಸಿಕೊಳ್ಳುವುದಾಗಿದೆ.

ಇನ್ನು ಬಿಹಾರದಲ್ಲಿ ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ್ ಯಾದವರನ್ನು, ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಂಟಿಕೊಡಿರುವ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ಯಾವ ವಿರೋಧ ಪಕ್ಷಗಳೂ ಒಪ್ಪಿಕೊಳ್ಳುವುದು ಸಾದ್ಯವಿಲ್ಲ.ತಮಿಳುನಾಡಿನಲ್ಲಿ ಡಿ.ಎಂ.ಕೆ.ಈಗಾಲೇ ಕಾಂಗ್ರೇಸ್ ಜೊತೆಗಿದ್ದು ತೃತೀಯ ರಂಗದ ಬಗ್ಗೆ ಯೋಚಿಸುವ ಸ್ಥಿತಿಯಲ್ಲಿಲ್ಲ. ಇನ್ನು ಎ.ಐ.ಎ.ಡಿ.ಎಂ.ಕೆ.ಗಳ ಎರಡೂ ಬಣಗಳು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದು ಇದೀಗ ಒಂದಾಗುವ ಬಗ್ಗೆ ಚಿಂತಿಸುತ್ತಿವೆ. ಆದರೆ ಅದರ ನಾಯಕರುಗಳ ನಡೆಯನ್ನು ಗಮನಿಸಿದರೆ ಬಾಜಪದ ಜೊತೆಗೆ ಅವು ಹೋಗುವ ಸೂಚನೆಗಳು ಕಾಣುತ್ತಿವೆ. ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೇಸ್ಸಿನ ನಡವಳಿಕೆಗಳನ್ನು ನೋಡಿದರೆಅಚ್ಚರಿಯಾಗುತ್ತದೆ. ಯಾಕೆಂದರೆ ಒಂದುದಿನ ವಿರೋಧಪಕ್ಷಗಳ ಮೈತ್ರಿಗೆ ತಾನು ಸಿದ್ದವೆಂದು ಘೋಷಿಸುವ ಅದು ಮರುದಿನವೇ ಬಾಜಪದ ಬಗ್ಗೆ ಮೃಧುಧೋರಣೆಯನ್ನು ಅನುಸರಿಸಿ ಮಾತಾಡುತ್ತದೆ. ಶಾರದಾ ಚಿಟ್ ಫಂಡಿನ ಹಗರಣದಲ್ಲಿ ಸಿಲುಕಿಕೊಂಡಿರುವ ಅದರ ನಡೆಯನ್ನೀಗ

ಸಿ.ಬಿ.ಐ. ಎನ್ನುವ ಭೂತವೇ ನಿರ್ದರಿಸುತ್ತಿರುವಂತೆ ಕಾಣುತ್ತಿದೆ. ಎನ್.ಸಿ.ಪಿ.ಯ ಶರದ್ ಪವಾರರ ರಾಜಕೀಯವನ್ನು ಹೀಗೆಂದು ಹೇಳಲು ಬರುವುದಿಲ್ಲ ಮಹಾರಾಷ್ಟ್ರದ ಗ್ರಾಮೀಣ ಭಾಗದ ಮೇಲೆ ಅವರಿಗಿದ್ದ ಹಿಡಿತ ದಿನೇದಿನೇ ಸಡಿಲವಾಗುತ್ತಿದ್ದು ಕಾಂಗ್ರೇಸ್ಸಿಂದ ದೂರ ಸರಿದು ತೃತೀಯ ರಂಗದ ಕನಸು ಕಾಣುವ ಧೈರ್ಯ ಅವರಲ್ಲೀಗ ಕಾಣುತ್ತಿಲ್ಲ. ಇನ್ನು ಎಡಪಕ್ಷಗಳು ಪಶ್ಚಿಮಬಂಗಾಳದ ತಮ್ಮ ಸೋಲಿನ ಆಘಾತದಿಂದ ಇನ್ನೂ ಹೊರಬಂದಂತೆ ಕಾಣುತ್ತಿಲ್ಲ. ಜ್ಯೋತಿಬಸೂ, ಸೋಮನಾಥ್ ಚಟರ್ಜಿಯವರಂತಹ ನಾಯಕರ ನಂತರ ಬಂದ ಈ ತಲೆಮಾರಿನ ನಾಯಕರುಗಳಲ್ಲಿ ತೃತೀಯ ರಂಗವೊಂದನ್ನು ಹುಟ್ಟು ಹಾಕಲು ಬೇಕಾದ ನಾಯಕತ್ವ ವಹಿಸಿಕೊಳ್ಳಬಲ್ಲಂತಹ ಗುಣ ಕಾಣುತ್ತಿಲ್ಲ. ಸದ್ಯಕ್ಕೆ ಅವರುಗಳಿಂದ ಈ ನಿಟ್ಟಿನಲ್ಲಿ ಹೆಚ್ಚೇನು ನಿರೀಕ್ಷಿಸುವಂತಿಲ್ಲ. ಇನ್ನು ಅರವಿಂದ್ ಕೇಜ್ರೀವಾಲರಿಗೆ ತಮ್ಮಪಕ್ಷದೊಳಗಿನ ಗೊಂದಲಗಳನ್ನು ಪರಿಹರಿಸಿಕೊಂಡು ಆಡಳಿತ ನಡೆಸುವುದೇ ದೊಡ್ಡಸಮಸ್ಯೆಯಾಗಿರುವಂತೆ ಕಾಣುತ್ತಿದ್ದು ತೃತೀಯರಂಗದಬಗ್ಗೆ ತಲತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದೇ ರೀತಿ ಇತರೇ ವಿರೋಧಪಕ್ಷಗಳು ಸಹ ಅವರ ಪಕ್ಷವನ್ನು ಗಂಭೀರವಾಗಿ ತೆಗೆದುಕೊಂಡಿವೆ ಎನಿಸುತ್ತಿಲ್ಲ

ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೋಡಿದರೆ ಕಾಂಗ್ರೇಸ್ ಮತ್ತು ಬಾಜಪೇತರ ವಿರೋಧ ಪಕ್ಷಗಳಲ್ಲಿ ಅತ್ಯಂತ ಹಿರಿಯ ರಾಜಕಾರಣಿಯಾಗಿ ಸಕ್ರಿಯವಾಗಿರುವವರೆಂದರೆ ಅದು ಶ್ರೀ ದೇವೇಗೌಡರು ಮಾತ್ರ. 2019ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ತೃತೀಯ ರಂಗವೊಂದನ್ನೇನಾದರು ಹುಟ್ಟು ಹಾಕಿ ಮುನ್ನಡೆಸುವ ಶಕ್ತಿ ಮತ್ತು ಚಾಣಾಕ್ಷ್ಯತನ ಇದ್ದರೆ ಅದು ದೇವೇಗೌಡರಿಗೆಮಾತ್ರ. ಆದರೆ ಅದಕ್ಕೂ ಮುಂಚೆ 2008ರಲ್ಲಿ ಎದುರಾಗಲಿರುವ ಕನರ್ಾಟಕ ರಾಜ್ಯದ ವಿದಾನಸಭಾ ಚುನಾವಣೆಗಳಲ್ಲಿ ಅವರು ಕಾಂಗ್ರೇಸ್ ಮತ್ತು ಬಾಜಪವನ್ನು ಎದುರಿಸಿ ಹೋರಾಡಿಗೆಲ್ಲಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ ಇವತ್ತು ರಾಜ್ಯದ ಜನತೆ ಮಾತ್ರವಲ್ಲ ರಾಷ್ಟ್ರದ ಜನತೆ ಸಹ ದೇವೇಗೌಡರ ಮುಂದಿನ ರಾಜಕೀಯ ಹೆಜ್ಜೆಗಳನ್ನು ಆಸಕ್ತಿ ಮತ್ತು ಆತಂಕದಿಂದ ಗಮನಿಸುತ್ತಿದ್ದಾರೆ. ಇದೀಗ ಅವರು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇದುವರೆಗೂ ಜನತಾದಳ ಕಾಂಗ್ರೇಸ್ ಮತ್ತು ಬಾಜಪವನ್ನುಸಮಾನೆ ಎದುರಾಳಿಗಳೆಂದೇ ಹೇಳುತ್ತ ಬಂದಿದ್ದು ಮುಂದಿನ ಚುನಾವಣೆಯನ್ನುಏಕಾಂಗಿಯಾಗಿ ಎದುರಿಸುವುದಾಗಿ ಹೇಳಿಕೊಂಡು ಬರುತ್ತಿದೆ. ದೇವೇಗೌಡರ ಜಾತ್ಯಾತೀತ ತತ್ವಗಳ ಬಗ್ಗೆಯಾಗಲಿ, ಅವರ ಮುತ್ಸದ್ದಿತನದ ರಾಜಕಾರಣದ ಬಗ್ಗೆ ಯಾರೂ ಶಂಕೆ ವ್ಯಕ್ತಪಡಿಸುವುದಿಲ್ಲವಾದರು, ಅದೇ ಮಾತನ್ನು ಶ್ರೀ ಕುಮಾರಸ್ವಾಮಿಯವರ ವಿಚಾರದಲ್ಲಿ ಖಾತ್ರಿಯಾಗಿ ಹೇಳಲಾಗುವುದಿಲ್ಲ. ಯಾಕೆಂದರೆ ಮತಾಂಧ ರಾಜಕಾರಣದ ವಿರುದ್ದ ಹೋರಾಟದ ಬಗ್ಗೆ ಕುಮಾರಸ್ವಾಮಿಯವರಿಗೆ ದೇವೇಗೌಡರಿಗಿರುವ ಅರಿವಾಗಲಿ,ಬದ್ದತೆಯಾಗಲಿ ಇದೆಯೆಂದು ಅನಿಸುವುದಿಲ್ಲ. ಈ ವಿಚಾರದಲ್ಲಿ ಕುಮಾರಸ್ವಾಮಿಯವರನ್ನು ಸಿದ್ದಗೊಳಿಸುವುದು ಗೌಡರ ಆಧ್ಯತೆಯಾಗಬೇಕಿದೆ. ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಜನತಾದಳವನ್ನು ಗೆಲುವಿನ ದಡ ತಲುಪಿಸಲು ದೇವೆಗೌಡರು ಮತ್ತು ಕುಮಾರಸ್ವಾಮಿಯವರು ಯಶಸ್ವಿಯಾದರೆ ಅದು ರಾಷ್ಟ್ರರಾಜಕಾರಣದ ಮೇಲೂ ಪರಿಣಾಮ ಬೀರುವುದು ಖಚಿತ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಜನತಾದಳ ತೆಗೆದುಕೊಳ್ಳುವ ಪ್ರತಿ ನಿಲುವುಗಳೂ ಮಹತ್ವವಾಗಿರುತ್ತವೆ. ಆದ್ದರಿಂದ ವರ್ತಮಾನದಲ್ಲಿ ಹೆಚ್ಚಾಗುತ್ತಿರುವ ಕೋಮು ರಾಜಕಾರಣದ ಬಗ್ಗೆ ಒಂದು ಸ್ಪಷ್ಟ ನಿಲುವನ್ನು ತೆಗೆದುಕೊಳ್ಳ ಬೇಕಾದ ಅನಿವಾರ್ಯತೆ ದೇವೇಗೌಡರಿಗೆ ಅಂದರೆ ಜಾತ್ಯಾತೀತ ಜನತಾದಳಕ್ಕೆ ಇದೆ.

No comments:

Post a Comment