Aug 27, 2017

ಕೃಷಿ-ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣಸಂಸ್ಥೆಗಳ ಪ್ರವೇಶ ಬೇಡ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕೃಷಿಕ್ಷೇತ್ರ ತೀವ್ರವಾದ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಸದರಿ ಬಿಕ್ಕಟ್ಟುಗಳಿಗೆ ಕಾರಣವಾದ ಅಂಶಗಳನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾದ ಸರಕಾರಗಳು ತಮ್ಮ ಖಾಸಗೀಕರಣದ ನೀತಿಯನ್ನುಕೃಷಿಕ್ಷೇತ್ರಕ್ಕೂ ಅನ್ವಯಿಸುವ ಭರದಲ್ಲಿ, ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಲು ಹೊರಟಿರುವಂತೆ ಕಾಣುತ್ತಿದೆ. ಇದುವರೆಗೂ ಸರಕಾರದ ಉನ್ನತ ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದ ಕೃಷಿ ಶಿಕ್ಷಣವನ್ನು ನೀಡುವ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿ ಕ್ಯಾಪಿಟೇಶನ್ ಕುಳಗಳಿಗೆ ಅನುಮತಿ ನೀಡುವಬಗ್ಗೆ ಚಿಂತನೆ ನಡೆಸುತ್ತಿದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಈಗಾಗಲೆ ಬಡವರ ಕೈಗೆಟುಕದಷ್ಟು ದುಬಾರಿಯಾಗಿರುವಾಗ ಬಹುತೇಕ ಗ್ರಾಮೀಣ ಭಾಗದ ರೈತರ ಮಕ್ಕಳು ಕಡಿಮೆವೆಚ್ಚದಲ್ಲಿ ಪಡೆಯುತ್ತಿದ್ದ ಕೃಷಿಸಂಬಂದಿತ ಶಿಕ್ಷಣವೂ ಈಗ ಅದೇ ಸಾಲಿಗೆ ಸೇರುವತ್ತ ಸಾಗಿದೆ.
ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೃಷಿ ಸಂಬಂದಿತ ಶಿಕ್ಷಣ ಕ್ಷೇತ್ರದಲ್ಲಿ ಕನರ್ಾಟಕ ಮುಂಚೂಣಿಯಲ್ಲಿದೆ.ಈಗ ನಮ್ಮಲ್ಲಿ ನಾಲ್ಕು ಕಷಿ ವಿಶ್ವವಿದ್ಯಾಲಯಗಳು, ಒಂದು ತೋಟಗಾರಿಕಾ ವಿಶ್ವವಿದ್ಯಾಲಯ,ಒಂದು ಪಶು ವಿಶ್ವವಿದ್ಯಾಲಯಗಳಿದ್ದು, ತಮ್ಮೆಲ್ಲ ಮಿತಿಗಳ ನಡುವೆಯೂ ಉತ್ತಮವಾಗಿ ತಮ್ಮ ಕಾರ್ಯವಿರ್ನಹಿಸುತ್ತಿವೆ. ಇಷ್ಟಲ್ಲದೆ ಈ ವಿಶ್ವ ವಿದ್ಯಾಲಯಗಳ ಅಡಿಯಲ್ಲಿ ಅನೇಕ ಕಾಲೇಜುಗಳು, ಕೃಷಿಸಂಶೋಧನಾ ಕೇಂದ್ರಗಳು,ಬೀಜ ಸಂಶೋಧನಾ ಮತ್ತು ಉತ್ಪತ್ತಿ ಕೇಂದ್ರಗಳು, ಕೃಷಿ ಅದ್ಯಯನ ಮತ್ತು ಅಭಿವೃದ್ದಿ ಕೇಂದ್ರಗಳು ಬರುತ್ತವೆ. ಇವೆಲ್ಲವೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ನಮ್ಮ ಸರಕಾರಗಳು ತಮ್ಮ ಅವೈಜ್ಞಾನಿಕ ತೀಮರ್ಾನಗಳಿಂದಾಗಿ ಕೃಷಿಯಿಂದ ತೋಟಗಾರಿಕೆಯನ್ನು, ಪಶುಸಂಗೋಪನೆಯನ್ನು ಬೇರ್ಪಡಿಸಿ, ಕೃಷಿಯ ಒಟ್ಟಾರೆ ಕಲ್ಪನೆಗೆ ಗ್ರಹಣ ಹಿಡಿಯುವಂತೆ ಮಾಡಿದವು. ಆಡಳಿತಾತ್ಮಕವಾಗಿ ಇದು ಸರಿಯೆನಿಸಿದರೂ ಸರಕಾರಗಳ ಈ ತೆರನಾದ ವಿಂಗಡಣೆಯಿಂದ ಕೃಷಿಗೆ ಸಂಬಂದಿಸಿದ ಎಲ್ಲ ವಿಭಾಗಗಳ ಸೇವೆ ರೈತರಿಗೆ ಒಂದೆಡೆ ದೊರಯದಂತಾಗಿ ಬಿಟ್ಟವು. ಕೃಷಿಯ ಒಟ್ಟಾರೆ ಕಲ್ಪನೆಯ ಅರಿವಿರುವವರಿಗೆ ಸಾಂಪ್ರದಾಯಿಕ ಕೃಷಿ ಬೇರೆಯಲ್ಲ, ತೋಟಗಾರಿಕೆ ಬೇರೆಯಲ್ಲ, ಅದೇ ರೀತಿ ಕೃಷಿಯಿಂದ ಪಶುಸಂಗೋಪನೆಯನ್ನು ಬೇರ್ಪಡಿಸಿ ನೋಡುವುದು ತರವಲ್ಲ. ಇದೊಂದು ರೀತಿಯಲ್ಲಿ ಸಂಪುಟದಲ್ಲಿ ಕೃಷಿ ಖಾತೆ, ತೋಟಗಾರಿಕೆ ಖಾತೆ, ಸಕ್ಕರೆ ಖಾತೆ, ರೇಶ್ಮೆ ಖಾತೆ,ಪಶು ಸಂಗೋಪನೆಖಾತೆ ಎಂದು ವಿಂಗಡಣೆ ಮಾಡಿದಂತಾಗಿದೆ.ರಾಜಕೀಯವಾಗಿ ಶಾಸಕರುಗಳಿಗೆ ಸ್ಥಾನ ಕಲ್ಪಿಸಲು ಹೀಗೆ ಒಂದು ಕ್ಷೇತ್ರವನ್ನು ಒಡೆದು ಹಲವು ಖಾತೆಗಳನ್ನಾಗಿ ಮಾಡುವ ರಾಜಕಾರಣವೇ ಕೃಷಿ ವಿಶ್ವವಿದ್ಯಾಲಯಗಳಿಗೂ ವ್ಯಾಪಿಸಿದಂತಾಗಿದೆ.

ನಾನೀಗ ಹೇಳಹೊರಟಿರುವುದು ಇದಕ್ಕಿಂತ ಗಂಬೀರವಾದ ವಿಚಾರವೊಂದರಬಗ್ಗೆ. ಅದೆಂದರೆ ಈಗಾಗಲೇ ರಾಜ್ಯದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕೃಷಿ ಶಿಕ್ಷಣ ನೀಡುವ ಪದವಿ ತರಗತಿಗಳನ್ನು ತೆರೆಯಲು ಕೃಷಿ ವಿಶ್ವವಿದ್ಯಾಲಯಗಳಿಗೆ ಮನವಿ ಸಲ್ಲಿಸಿವೆ. ಅಕಸ್ಮಾತ್ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರುಗಳು ಬಹುಮತದ ನೆಪದಲ್ಲಿ ಅನುಮತಿಯನ್ನೇನಾದರು ನೀಡಿಬಿಟ್ಟರೆ ಕ್ಯಾಪಿಟೇಶನ್ ಶುಲ್ಕದ ಹಾವಳಿಯಿರದೆ ನಡೆಯುತ್ತಿದ್ದ ಕೃಷಿ ಶಿಕ್ಷಣವೂ ಇತರೇ ಉನ್ನತ ಶಿಕ್ಷಣಗಳಂತೆ ದುಬಾರಿಯಾಗಿ ಗ್ರಾಮೀಣ ಪ್ರತಿಭೆಗಳಾಗಲಿ, ನಿಜವಾದ ರೈತರ ಮಕ್ಕಳಾಗಲಿ ಕೃಷಿ ಶಿಕ್ಷಣ ಪಡೆಯುವ ತಮ್ಮ ಹಕ್ಕಿನಿಂದ ವಂಚಿತರಾಗಿ ಬಿಡುತ್ತಾರೆ. ಕೃಷಿ ಶಿಕ್ಷಣ ನೀಡಲು ಮುಂದಾಗುವ ಯಾವ ಖಾಸಗಿ ಶಿಕ್ಷಣ ಸಂಸ್ಥೆಗಳೂ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲಾರವು. ಈಗ ಸರಕಾರಿ ಕೃಷಿ ಕಾಲೇಜುಗಳಲ್ಲಿರುವ ಹಾಗೆ ರೈತರ ಮಕ್ಕಳಿಗೆ ಶೇಕಡಾ 24ರಷ್ಟು ಸೀಟುಗಳನ್ನು ಈ ಖಾಸಗಿ ಕಾಲೇಜುಗಳು ಮೀಸಲಿಡುತ್ತವೆ ಎನ್ನುವುದು ಸಹ ಕನಸಿನ ಮಾತು. ಕೃಷಿ ಶಿಕ್ಷಣದ ಸೀಟುಗಳು ಸಹ ಉಳ್ಳವರ ಮಕ್ಕಳ ಪಾಲಾಗಲು ಪ್ರಾರಂಭವಾಗುತ್ತವೆ.

ಕೃಷಿಶಿಕ್ಷಣವನ್ನು ಖಾಸಗಿಯವರ ಕೈಗೆ ನೀಡುವುದರ ಹಿಂದೆ ಇದಕ್ಕಿಂತ ದೊಡ್ಡ ಸಮಸ್ಯೆ ಒಂದಿದೆ. ಕೃಷಿ ಶಿಕ್ಷಣ ನೀಡಲು ಈಗ ಖಾಸಗಿಯವರು ನಡೆಸುತ್ತಿರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವಷ್ಟೆ ಮೂಲಭೂತ ಸೌಕರ್ಯಯಗಳಿಂದ ಕೃಷಿ ಕಾಲೇಜುಗಳನ್ನು ನಡೆಸವುದು ಸಾದ್ಯವಿರದ ಮಾತು. ಜೊತೆಗೆ ಈಗ ಮಾನ್ಯತೆ ಕೇಳುತ್ತಿರುವ ಬಹುತೇಕ ಕಾಲೇಜುಗಳಿಗೆ ಒಂದು ಕೃಷಿ ಕಾಲೇಜನ್ನು ನಡೆಸುವಷ್ಟು ಭೂಮಿಯೇ ಇಲ್ಲ. ಕೃಷಿಶಿಕ್ಷಣದ ಕಾಲೇಜೆಂದರೆ ನೂರಾರು ಏಕರೆ ಭೂಮಿ ಬೇಕಾಗುತ್ತದೆ. ವಿದ್ಯಾಥರ್ಿಗಳಿಗೆ ಕೃಷಿಶಿಕ್ಷಣ ನೀಡುವುದೆಂದರೆ ತರಗತಿಯಲ್ಲಿ ಅಥವಾ ಪ್ರಯೋಗ ಶಾಲೆಯಲ್ಲಿ ಕಲಿಸುವುದು ಮಾತ್ರವಲ್ಲ. ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಬೇಕಾಗುತ್ತದೆ. ಇದಕ್ಕೆ ಭೂಮಿ ಮಾತ್ರವಲ್ಲದೆ ಇತರೇ ಕೃಷಿ ಉಪಕರಣಗಳೂ ಅಗತ್ಯವಾಗಿರುತ್ತವೆ. ಇಷ್ಟಲ್ಲದೆ ಖಾಸಗಿಯವರು ಕೃಷಿ ಶಿಕ್ಷಣ ನೀಡಲು ಮುಂದಾದೊಡನೆ ಕೃಷಿಗೆ ಸಂಬಂದಿಸಿದ ಬಹುರಾಷ್ಟ್ರೀಯ ಕಂಪನಿಗಳು ಆ ಕ್ಯಾಂಪಸ್ಸಿನೊಳಗೆ ಕಾಲಿಡಲು ಆರಂಭಿಸುತ್ತವೆ. ಸ್ಥಳೀಯ ಕೃಷಿ ಸಂಪ್ರದಾಯಗಳ ಬಗ್ಗೆ ಅರಿವಿರದ ಅವು ತಮ್ಮ ಬೀಜ ಗೊಬ್ಬರಗಳ ಕೃಷಿಸಲಕರಣೆಗಳನ್ನು ವಿದ್ಯಾಥರ್ಿಗಳಿಗೆ ಪರಿಚಯಿಸುವ ನೆಪದಲ್ಲಿ ನಮ್ಮ ಕೃಷಿ ಕ್ಷೇತ್ರದ ಮೇಲೆ ಪಾರಮ್ಯ ಸಾದಿಸಲು ಹೊರಡುತ್ತವೆ.

ಆದ್ದರಿಂದ ಸರಕಾರಗಳು ಯಾವುದೇ ಖಾಸಗಿ ಶಿಕಕ್ಷಣ ಸಂಸ್ಥೆಗಳಿಗೆ ಕೃಷಿ ಕಾಲೇಜುಗಳನ್ನು ತೆರೆಯಲು ಅನುಮತಿನೀಡಬಾರದು. ಜೊತೆಗೆ ಈಗಿರುವ ಕೃಷಿ ವಿಶ್ವವಿದ್ಯಾಲಯಗಳನ್ನು ವಿಭಾಗವಾರು ಪ್ರತ್ಯೇಕಿಸಿ, ಒಂದೇ ವಿಶ್ವವಿದ್ಯಾಲಯದಲ್ಲಿ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಗಳ ಶಿಕ್ಷಣ ಮತ್ತು ಸಂಶೋದನೆ, ತರಬೇತಿಗಳು ಲಭ್ಯವಾಗುವಂತೆ ಪುನರ್ರಚಿಸಬೇಕಾದ ಅಗತ್ಯವಿದೆ. ಇಲ್ಲದೇ ಹೋದಲ್ಲಿ ಈಗ ರಾಜ್ಯದಲ್ಲಿ ಹಣಬೆಗಳಂತೆ ತಲೆ ಎತ್ತಿರುವ ಖಾಸಗಿ ಪದವಿ ಕಾಲೇಜುಗಳ ಮಟ್ಟಕ್ಕೆ ನಮ್ಮ ಕೃಷಿ ಶಿಕ್ಷಣವೂ ಇಳಿದುಬಿಡುವುದು ಖಚಿತ. ಹೀಗಾದಂತೆ ನೋಡಿಕೊಳ್ಳಬೇಕಾದುದು ಜನಪರ ಸರಕಾರಗಳ ಆದ್ಯ ಕರ್ತವ್ಯವಾಗಿದೆ. 

No comments:

Post a Comment