May 5, 2017

ಕಾವೇರಿ

ಸವಿತ ಎಸ್ ಪಿ
ಭೂಮಾಲೀಕರ ನಿರ್ಲಕ್ಷ್ಯ 
ಬೇಜವಾಬ್ದಾರಿ.., ಮಿತಿ ಮೀರಿ....
ಆಡಾಡಿ ನಲಿಯುತ್ತಿದ್ದ
ಮುದ್ದು ಕಾವೇರೀ.....
ಬಿದ್ದೆಯೆಲ್ಲ ಬಾಯ್ತೆರೆದ
ಕೊಳವೆ ಬಾವಿಗೆ ಜಾರಿ....!!
ಆಹಾ ಸುದ್ಧಿಮನೆಗಳಿಗಂತೂ
ಈ ಸುದ್ಧಿಯೊಂದು ಹುಗ್ಗಿ‌...
ವಿಷಯ ಸಿಕ್ಕ ಸುಗ್ಗಿ.....
ಬಿತ್ತರಿಸಿದ್ದನ್ನೇ ಬಿತ್ತರಿಸುತಿಹರು
ಆಕ್ರಂದನಗಳ ಹಿಂಜಿ, ಹಿಗ್ಗಿಸಿ‌...!!

ಹೆತ್ತ ಒಡಲ ನೋವು.ಪ್ರಲಾಪ..
ಕರುಳು ಹಿಂಡುವ ಕಣ್ಣೀರು...
ಮತ್ತೆ ಬರುವಳೇನೋ ಕಂದಮ್ಮ... ಎಂಬ
ಚಿಕ್ಕಾಸೆಯ ಕೊನರು..
ಶತಪ್ರಯತ್ನಗಳ ಮಾಡುವ
ದಂಡು ದಂಡು ರಕ್ಷಕರು....!!

ಅದೇ ಅದೇ ಪುನರಪಿ‌...
ಮಣ್ಣಲಿ ಮಣ್ಣಾಗುವ ಬದುಕಿ ಬಾಳಿ, ಬೆಳಗಬೇಕಾದ ಪ್ರಣತಿ....!
ನಂದಿಹೋಯಿತಲ್ಲ ಪ್ರಾಣಜ್ಯೋತಿ..
ಮುನ್ನೆಚ್ಚರಿಕೆಯಾಗಬಾರದೇ ಮತ್ತೊಂದು ದುರಂತಕೆ ಈ ಸಾವುಗಳು...!
ಈ ದಾರುಣ ಸತ್ಯ..!
ಹಾಡಬಾರದೇ ಸಾವಿನ 
ಸರಮಾಲೆಗಳಿಗೆ ಅಂತ್ಯ....!!

ಯಾರದೋ ನಿರ್ಲಕ್ಷ್ಯಕೆ...
ಬಲಿಯಾಗುವುದು ಬಡ 
ಕಂದಮ್ಮಗಳ ಜೀವವದು...
ವ್ಯರ್ಥವದು‌.., ಪರಿಹಾರ ಘೋಷಣೆಯದು...
ತರುವುದೇನು ಕಂದನನು,
ತಣಿಸುವುದೇನು ಹೆತ್ತಮ್ಮನ 
ಒಡಲ ಉರಿಯದು....
ಈ ದುರಂತಗಳ ಕೊನೆ ಎಂದು...!!

No comments:

Post a Comment