May 6, 2016

ಮೇಕಿಂಗ್ ಹಿಸ್ಟರಿ: ಕೈಗಾರಿಕೆಯ ಸ್ಥಾನ ಪಲ್ಲಟ

Making history by saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
06/05/2016


ಭಾರತ ಮತ್ತು ಇಂಗ್ಲೆಂಡಿನ ನಡುವಿನ ಮುಕ್ತ ವ್ಯಾಪಾರ ಭಾರತಕ್ಕೆ ಅನುಕೂಲಕರವಾಗಿಯೇ ಇತ್ತು. ಯುರೋಪಿನ ಕೈಗಾರಿಕಾ ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆಯಿತ್ತು. ಹದಿನೇಳನೇ ಶತಮಾನದ ಮಧ್ಯಭಾಗದಲ್ಲಿ ನಡೆದುದ್ದರ ಬಗ್ಗೆ ಪಿಜೆ ಥಾಮಸ್ ತಿಳಿಸುತ್ತಾರೆ: “ದೇಶದ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದಕ್ಕೆ ಮತ್ತು ದೇಶದ ಸಂಪನ್ಮೂಲವನ್ನು ರಕ್ಷಿಸುವುದಕ್ಕೆ ಕಂಪನಿ ಇಂಗ್ಲೆಂಡಿನ ಉತ್ಪನ್ನಗಳನ್ನು ಪೂರ್ವದ ದೇಶಗಳಿಗೆ ರಫ್ತು ಮಾಡಬೇಕೆಂದು ನಿರ್ಧರಿಸಲಾಯಿತು. ಅದರ ಪ್ರಕಾರ ಉಣ್ಣೆ ಬಟ್ಟೆ, ಕಬ್ಬಿಣ, ಸೀಸ, ಸಿಲ್ವರ್, ಕತ್ತಿ ಅಲಗುಗಳನ್ನು ಭಾರತದ ಕಾರ್ಖಾನೆಗಳಿಗೆ ರವಾನಿಸಲಾಯಿತು. ಈ ವಸ್ತುಗಳಿಗೆ ಅಲ್ಲಿ ಬೇಡಿಕೆ ಕಡಿಮೆಯಿತ್ತು. ಕಂಪನಿಯ ಕಬ್ಬಿಣ ಮತ್ತು ಟಿನ್ ಭಾರತದ ಗ್ರಾಹಕನಿಗೆ ತುಂಬಾ ದುಬಾರಿಯದ್ದಾಗಿತ್ತು ಮತ್ತು ಇತರೆ ವಸ್ತುಗಳು ತುಂಬಾ ಕಡಿಮೆ ಪ್ರಮಾಣದಲ್ಲವರಿಗೆ ಬೇಕಾಗಿತ್ತು. ಇಂಗ್ಲೆಂಡಿನ ಉಣ್ಣೆ ಬಟ್ಟೆಗಳಿಗೆ ಭಾರತದಲ್ಲಿ ವ್ಯಾಪಾರ ಕುದುರಿಸಲು ಕಂಪನಿಗೆ ಆಸಕ್ತಿಯಿತ್ತಾದರೂ ಸಿಕ್ಕ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ. ಭಾರತದ ದೊಡ್ಡ ಸಂಖೈಯ ಜನರು ಹತ್ತಿ ಬಟ್ಟೆಯನ್ನಷ್ಟೇ ಉಡುತ್ತಿದ್ದರು. ಅವರಿಗೊಂದೋ ಎರಡೋ ಕಂಬಳಿ ಬೇಕಿತ್ತು, ಆದರೆ ಭಾರತದಲ್ಲೇ ಗುಣಮಟ್ಟದ ಕಡಿಮೆ ಬೆಲೆಯ ವಸ್ತು ಸಿಗುತ್ತಿತ್ತು.

ಭಾರತದಲ್ಲಿ ಉಣ್ಣೆ ಬಟ್ಟೆಗಳ ವ್ಯಾಪಾರ ಹೆಚ್ಚಿಸಬೇಕೆಂದು ಕಂಪನಿಯ ನಿರ್ದೇಶಕರು ಪದೇ ಪದೇ ಭಾರತಕ್ಕೆ ಆದೇಶ ಕಳುಹಿಸುತ್ತಿದ್ದರು. ವ್ಯಾಪಾರ ಹೆಚ್ಚಿಸಲು ಶ್ರಮ ಹಾಕಿದರಾದರೂ ಸಿಕ್ಕ ಪ್ರತಿಫಲ ಮಾತ್ರ ತುಂಬಾನೇ ಕಡಿಮೆ.” (156)

ಫೆಬ್ರವರಿ 1818ರಲ್ಲಿ ಥಾಮಸ್ ಮನ್ರೋ ತನ್ನ ಟಿಪ್ಪಣಿ On opening the trade with india to the outposts of the great britainನಲ್ಲಿ ಹೆಚ್ಚು ಕಡಿಮೆ ಎರಡು ಶತಮಾನಗಳ ಹಿಂದೆ ಪಿಜೆ ಥಾಮಸ್ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನೇ ಪ್ರತಿಧ್ವನಿಸುತ್ತಾನೆ. “ಯಾವುದೇ ದೇಶವು ತನ್ನಲ್ಲೇ ಕಡಿಮೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಉತ್ಪಾದನೆಯಾಗುತ್ತಿರುವಾಗ ಅನ್ಯದೇಶದಿಂದ ಆಮದು ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ, ಇಲ್ಲಿನವರಿಗೆ ಬೇಕಾದ ಹೆಚ್ಚು ಕಡಿಮೆ ಪ್ರತಿಯೊಂದು ವಸ್ತುವನ್ನೂ ಕಡಿಮೆ ದುಡ್ಡಿಗೆ ಮತ್ತು ಯುರೋಪಿಗಿಂತ ಉತ್ತಮ ಗುಣಮಟ್ಟದಲ್ಲಿ ತಯಾರು ಮಾಡಲಾಗುತ್ತಿದೆ. ಇದರಲ್ಲಿ ಹತ್ತಿ ಮತ್ತು ರೇಷ್ಮೆ ಉತ್ಪಾದಕರು, ಚರ್ಮೋದ್ಯಮ, ಪೇಪರ್, ಕಬ್ಬಿಣ ಮತ್ತು ತಾಮ್ರದ ಅಡುಗೆ ಸಾಮಗ್ರಿಗಳು ಮತ್ತು ಕೃಷಿ ಉಪಕರಣಗಳು ಸೇರಿದೆ. ಅವರ ಕಂಬಳಿಗಳು, ಅಷ್ಟೇನೂ ಚೆನ್ನಾಗಿಲ್ಲದಿದ್ದರೂ, ತುಂಬಾ ಕಡಿಮೆ ಬೆಲೆಯ ಕಾರಣ ಅಸ್ತಿತ್ವ ಉಳಿಸಿಕೊಳ್ಳುತ್ತವೆ; ಅವರ ಕಂಬಳಿಗಳು ನಮ್ಮದಕ್ಕಿಂತ ಹೆಚ್ಚು ಬೆಚ್ಚಗೆ ಮಾಡುತ್ತವೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುತ್ತದೆ….

ಜಾತಿ ಮತ್ತು ವಾತಾವರಣದಿಂದ ನಿರ್ದೇಶಿತವಾಗಿರುವ ಅವರ ಸರಳ ಜೀವನ ನಮ್ಮೆಲ್ಲ ಪೀಠೋಪಕರಣಗಳು ಮತ್ತು ಮನೆಯ ಅಂದ ಹೆಚ್ಚಿಸುವ ಅಲಂಕಾರಿಕ ವಸ್ತುಗಳನ್ನು ಹಿಂದೂಗಳಿಗೆ ನಿರುಪಯುಕ್ತವಾಗಿಸಿಬಿಡುತ್ತದೆ.

ಇತಿಹಾಸದಿಂದ ಭವಿಷ್ಯದ ಕಡೆಗೆ ನೋಡಿದರೆ ನಮ್ಮ ರಫ್ತು ಪ್ರಮಾಣವನ್ನು ಹೆಚ್ಚಿಸುವಂತಹ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದು ಸಾಧುವಲ್ಲ. ವಿದೇಶಿ ವಸ್ತುಗಳನ್ನು ಪರಿಚಯಿಸಬೇಕು ಎಂದು ಕೆಲವರು ಹೇಳುತ್ತಿರುವುದನ್ನು ಕೇಳಿದರೆ ಅದನ್ನು ಬಹಳಷ್ಟು ಹಿಂದೆಯೇ ಮಾಡಬಹುದಿತ್ತಲ್ಲವೇ?” (157)

ಮೇಲಿನ ಎರಡು ಹೇಳಿಕೆಗಳು ಮಿಷಿನ್ನುಗಳ ಅಭಿವೃದ್ಧಿಯಿಂದ ಹೆಚ್ಚೆಚ್ಚು ಉತ್ಪಾದನೆಯನ್ನು ಕಡಿಮೆ ವೆಚ್ಚಕ್ಕೆ ತಯಾರಿಸಲಾರಂಭಿಸಿದ ಹತ್ತೊಂಬತ್ತನೇ ಶತಮಾನದಲ್ಲಿ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಡಲಾಗಿತ್ತು, ಕರ್ನಾಟಕದ ಗುಡಿ ಕೈಗಾರಿಕೆಗಳ ಉತ್ಪನ್ನಕ್ಕಿಂತ ಮಿಷಿನ್ನಿನ ಉತ್ಪನ್ನದ ಬೆಲೆ ಜಾಸ್ತಿಯಿತ್ತು ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ, ಇಂಗ್ಲೆಂಡಿನ ವಸ್ತುಗಳನ್ನು ಭಾರತಕ್ಕೆ ಸಾಗಿಸುವುದಕ್ಕಾಗುವ ಖರ್ಚು ಉತ್ಪನ್ನದ ಬೆಲೆಯನ್ನು ಮತ್ತಷ್ಟು ಹೆಚ್ಚಿಸಿಬಿಡುತ್ತಿತ್ತು. ಬೆಲೆಗಳು ಸಮನಾಗುವುದಕ್ಕೆ ಮತ್ತು ಬ್ರಿಟೀಷ್ ವಸಾಹತುಶಾಹಿಗೆ ‘ನ್ಯಾಯ’ಬದ್ಧ ಪೈಪೋಟಿ ನೀಡಲು ಮತ್ತಷ್ಟು ವರುಷಗಳು ಬೇಕಿತ್ತು.

ಮಾರ್ಕ್ಸ್ ನೀಡುವ ಅಂಕಿಅಂಶಗಳು ನಮಗೆ ಕಲಿಸುವುದೇನೆಂದರೆ: “1818ರಿಂದ 1836ರವರೆಗೆ ಬ್ರಿಟನ್ನಿನಿಂದ ಭಾರತಕ್ಕೆ ರಫ್ತಾಗುವ ಸಾಮಗ್ರಿಗಳ ಪ್ರಮಾಣ ಒಂದರಿಂದ ಐದು ಸಾವಿರದ ಎರಡು ನೂರಕ್ಕೆ ಏರಿಕೆ ಕಂಡಿತು. 1824ರಲ್ಲಿ ಭಾರತಕ್ಕೆ ರಫ್ತಾಗುತ್ತಿದ್ದ ಮಸ್ಲಿನ್ನಿನ ಪ್ರಮಾಣ 10,00,000 ಯಾರ್ಡುಗಳಿದ್ದರೆ 1837ರಲ್ಲಿ ಅದು 6,40,00,000ಯಾರ್ಡುಗಳಿಗಿಂತಲೂ ಹೆಚ್ಚಾಗಿತ್ತು. ಅದೇ ಸಮಯದಲ್ಲಿ ಡಾಕಾದ ಜನಸಂಖೈ 1,50,000ದಿಂದ 20,000ಕ್ಕೆ ಇಳಿದುಹೋಗಿತ್ತು.” (158)

ಈ ಸಾಧನೆಯನ್ನು ವಿವರಿಸುವುದೇಗೆ?

ಈ ಪ್ರಶ್ನೆಗೆ ಉತ್ತರ ಹುಡುಕಲೊರಟಾಗ ವಸಾಹತುಶಾಹಿಯ ತತ್ವಗಳು ಮತ್ತು ಬ್ರಿಟೀಷ್ ಕೈಗಾರಿಕೆಯ ಯಶಸ್ಸಿನಲ್ಲಿ ಭಾರತದ ಪಾತ್ರದ ಪಾತ್ರದ ಬಗ್ಗೆ ಮಾಹಿತಿ ಸಿಗುತ್ತದೆ.

ಸದ್ಯದಲ್ಲೇ ನಾವು ನೋಡುವಂತೆ, ಇಂತಹ ಅತ್ಯದ್ಭುತ ಯಶಸ್ಸಿಗೆ ತಾಟಸ್ಥ್ಯ ಧೋರಣೆ ಕಾರಣವಲ್ಲ, ಬದಲಿಗೆ ವಸಾಹತುಶಾಹಿಯನ್ನು ಭದ್ರಗೊಳಿಸಲು ಬಲ ಮತ್ತು ಹಿಂಸೆಯನ್ನು ಯಥೇಚ್ಛವಾಗಿ ಉಪಯೋಗಿಸಿದ್ದು ಮತ್ತು ವಸಾಹತು ಅಧಿಕಾರವನ್ನು ನಿರ್ಬಂಧಗಳನ್ನು ಜಾರಿಗೊಳಿಸಲು ಬಳಸಿಕೊಂಡು ದೇಶೀಯ ಗುಡಿಕೈಗಾರಿಕೆಗಳನ್ನು ನಾಶಪಡಿಸಿದ್ದು ಈ ಅತ್ಯದ್ಭುತ ಯಶಸ್ಸಿಗೆ ಕಾರಣ. ಬ್ರಿಟೀಷ್ ಕೈಗಾರಿಕೆಯ ಯಶಸ್ಸು ಅದರ ಬಂಡವಾಳಶಾಹಿ ವ್ಯಕ್ತಿತ್ವದಲ್ಲಷ್ಟೇ ಇಲ್ಲ – ಬಂಡವಾಳಶಾಹಿತನದಲ್ಲಿ ಹೆಚ್ಚೆಚ್ಚು ಉತ್ಪಾದನೆ ಮಾಡುವುದಷ್ಟೇ ಆರ್ಥಿಕ ನೀತಿ; ಜೊತೆ ಜೊತೆಗೆ ರಾಜಕೀಯ ದಾರಿಗಳಿಂದ ಹಿಂಸೆಯನ್ನನುಸರಿಸಿ ದೇಶವನ್ನು ಗುಲಾಮಸ್ಥಿತಿಗೆ ದೂಡಿದ್ದು ಮತ್ತು ನಮ್ಮ ಕೈಗಾರಿಕೆಗಳನ್ನು ಉಸಿರುಗಟ್ಟಿಸಲು ಭೀತಿ ಮತ್ತು ತೆರಿಗೆಯನ್ನು ಹೇರಿದ್ದು. ಬ್ರಿಟೀಷ್ ಉತ್ಪನ್ನಗಳ ಯಶಸ್ಸು ಸಾಧಿಸಲಾಗಿದ್ದು ಕರ್ನಾಟಕ ಮತ್ತು ಭಾರತದ ಕೈಗಾರಿಕೆಗಳನ್ನು ನಾಶ ಪಡಿಸಿದ ನಂತರ. ನಮ್ಮ ಕೈಗಾರಿಕಾ ಉಪಕರಣಗಳನ್ನು ಕಸಕ್ಕೆ ಸೇರುವಂತೆ ಮಾಡಿ, ಭಾರತದ ಕೈಗಾರಿಕೆಗಳ ಐತಿಹಾಸಿಕ ಮುನ್ನಡೆಯ ಅಂತ್ಯಸಂಸ್ಕಾರ ನಡೆಸಿದ ಮೇಲಷ್ಟೇ ರಫ್ತಾದ ಬ್ರಿಟೀಷ್ ಉತ್ಪನ್ನಗಳು ಭಾರತದಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಾಯಿತು. ಇತಿಹಾಸದ ನಂತರದ ಘಟ್ಟದಲ್ಲಷ್ಟೇ ಕಾರಣಗಳು ಪರಿಣಾಮದ ಜಾಗಕ್ಕೆ ಬಂದು, ಗುಡಿ ಕೈಗಾರಿಕೆಯ ಎಲ್ಲಾ ಉತ್ಪನ್ನಗಳನ್ನು ನಾಶಪಡಿಸಲಾರಂಭಿಸಿದ್ದು. ಮಾರ್ಕ್ಸ್ ಹೇಳಿದಂತೆ “ಬ್ರಿಟೀಷ್ ಆಕ್ರಮಣಕಾರ ಭಾರತದ ನೇಕಾರಿಕೆಯನ್ನು, ಚರಕದ ತಿರುಗುವಿಕೆಯನ್ನು ನಾಶ ಪಡಿಸಿದ. ಇಂಗ್ಲೆಂಡ್ ಭಾರತದ ಹತ್ತಿಯನ್ನು ಯುರೋಪಿನ ಮಾರುಕಟ್ಟೆಗೆ ತರಲಾರಂಭಿಸಿತು; ನಂತರ ಹತ್ತಿಯ ಮಾತೃದೇಶವಾದ ಹಿಂದೂಸ್ಥಾನಕ್ಕೇ ಹತ್ತಿಯನ್ನು ರವಾನಿಸಲಾರಂಭಿಸಿದರು!” (159)

ವಸಾಹತು ರಾಜ್ಯ ಬೆಂಗಳೂರಿನ ಸಾಂಪ್ರದಾಯಿಕ ವರ್ತಕರನ್ನು ಕಂಟೋನ್ಮೆಂಟ್ ಪ್ರದೇಶಕ್ಕೆ ಬರದಂತೆ ತಡೆದದ್ದನ್ನು ನಾವೀಗಾಗಲೇ ನೋಡಿದ್ದೇವೆ. ಬೆಂಗಳೂರು ನಗರದ ಒಂದು ಭಾಗದ ಉತ್ಪಾದಕರು ಮತ್ತೊಂದು ಭಾಗದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಅವಕಾಶ ಕೊಡದೇ ಇದ್ದದ್ದು ಆ ಭಾಗವು ಬ್ರಿಟೀಷ್ ಕೈಗಾರಿಕೆಯ ಭಾಗವನ್ನಾಗಿಸಿತು, ಬೇರೊಬ್ಬ ವ್ಯಾಪಾರಿ ಬರಲಾಗದ ಭಾಗವಾಯಿತು.

ಬ್ರಿಟೀಷ್ ಕೈಗಾರಿಕೆಗೆ ಹೊಸ ಮಾರುಕಟ್ಟೆಯನ್ನು ಬಲವಂತವಾಗಿ ತೆರೆಸಿದ ಸಂದರ್ಭದಲ್ಲಿಯೇ ನಮ್ಮ ಗುಡಿ ಕೈಗಾರಿಕೆಗಳನ್ನು ಮುಟ್ಟುಗೋಲು ಹಾಕಿಕೊಂಡ ಬಗ್ಗೆ ಫಣಿ, ಆನಂದ್ ಮತ್ತು ವ್ಯಾಸುಲು ತಿಳಿಸುತ್ತಾರೆ. “ಟಿಪ್ಪು ಸುಲ್ತಾನ್ ಮಸ್ಕತ್ (musquat), ಓರ್ಮಿ (ormy) ಯಲ್ಲಿ ಸ್ಥಾಪಿಸಿದ ಕೈಗಾರಿಕೆಗಳನ್ನು 1801ರಲ್ಲಿ ಮುಚ್ಚಲಾಯಿತು ಮತ್ತು ಮೈಸೂರಿಗರು ತಮ್ಮ ತಮ್ಮ ಪಟ್ಟಣಕ್ಕೆ ವಾಪಸ್ಸು ಬಂದರು. ಇದರ ಪರಿಣಾಮವಾಗಿ ರೇಷ್ಮೆ, ಹತ್ತಿ, ಶ್ರೀಗಂಧದ ರಫ್ತು ರದ್ದಾಗಿಬಿಟ್ಟಿತು, ಇದರಲ್ಲಿ ಹೆಚ್ಚಿನ ಪಾಲು ಬೆಂಗಳೂರಿನದ್ದಾಗಿತ್ತು. ಐಷಾರಾಮಿ ಗ್ರಾಹಕರಿಗೆ ಬಟ್ಟೆ ಒದಗಿಸುತ್ತಿದ್ದ ಈ ಮಾರುಕಟ್ಟೆಯ ಬೆಲೆ ವಿಪರೀತವಾಗಿ ಕುಸಿದು ಬಿದ್ದ ಕಾರಣ ಈ ಮಾರುಕಟ್ಟೆಗೆ ಉತ್ಪನ್ನಗಳನ್ನು ಕಳುಹಿಸುತ್ತಿದ್ದವರ ಮೇಲೆ ಕೆಟ್ಟ ಪರಿಣಾಮ ಬೀರಿತು. ಬೆಂಗಳೂರಿನ ವಸ್ತ್ರೋದ್ಯಮದಲ್ಲಿದ್ದವರು ಇದರ ದುಷ್ಪರಿಣಾಮಗಳನ್ನನುಭವಿಸಿದರವರಲ್ಲಿ ಮೊದಲಿಗರು. ಈ ಲಾಭಕರ ಮಾರುಕಟ್ಟೆಗೆ ಬದಲಿ ಉದ್ಯಮ ಸೃಷ್ಟಿಸುವಲ್ಲಿ ಬ್ರಿಟೀಷರಿಗೆ ಆಸಕ್ತಿಯಿರಲಿಲ್ಲ ಎನ್ನುವುದು ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ.” (160)

ಸೈನ್ಯ ಮತ್ತು ಶ್ರೀರಂಗಪಟ್ಟಣ ಬೆಂಗಳೂರಿನ ಬಟ್ಟೆ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿತ್ತು. ಸೈನ್ಯದ ವಿಸರ್ಜನೆ ಮತ್ತು ಶ್ರೀರಂಗಪಟ್ಟಣದ ಜನಸಂಖೈಯಲ್ಲಾದ ಗಣನೀಯ ಇಳಿಕೆಗಳೆರಡೂ ಬೆಂಗಳೂರಿನ ಬಟ್ಟೆ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿತು. ಬಹುಶಃ ಟಿಪ್ಪು ಸುಲ್ತಾನನ ದೇಶಪ್ರೇಮಿ ಸರಕಾರದ ಪತನದಿಂದಾ ಆರ್ಥಿಕ ಪರಿಣಾಮ ಬಟ್ಟೆ ಉದ್ಯಮದಲ್ಲಿ ಕಂಡಂತೆ ಬೇರೆಲ್ಲೂ ಕಾಣಸಿಗುವುದಿಲ್ಲ. ಬಟ್ಟೆ ಉದ್ಯಮ ಕರ್ನಾಟಕದ ಬೆಳೆಯುತ್ತಿದ್ದ ಕೈಗಾರಿಕೆಗೆ ಜೀವಧಾರೆಯಾಗಿತ್ತು.

ಟಿಪ್ಪುವಿನ ಪತನದ ಕೆಲವೇ ತಿಂಗಳ ಬಳಿಕ ಉಂಟಾದ ಪರಿಣಾಮಗಳನ್ನು ಬುಚನನ್ ವಿವರಿಸುತ್ತಾನೆ. ಬೆಂಗಳೂರಿನ ಬಟ್ಟೆ ಉದ್ಯಮದ ಉಪನಗರವಾಗಿ ಬೆಳೆಯುತ್ತಿದ್ದ ಸರ್ಜಾಪುರದ ಬಗ್ಗೆ ಆತ ಹೇಳುತ್ತಾನೆ: “ಮೊದಲಿಲ್ಲಿ ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಲಾಗುತ್ತಿತ್ತು ಆದರೀಗ ಒರಟು ಉತ್ಪನ್ನಗಳನ್ನಷ್ಟೇ ತಯಾರಿಸಲಾಗುತ್ತಿದೆ.”(161) ನಂತರ ಬೆಂಗಳೂರಿನ ಬಗ್ಗೆ ಹೇಳುತ್ತಾನೆ: “ಬೆಂಗಳೂರಿನ ನೇಕಾರರು ನೈಪುಣ್ಯ ವರ್ಗಕ್ಕೆ ಸೇರಿದ ಜನರು. ಒಂದಷ್ಟು ಪ್ರೋತ್ಸಾಹ ಸಿಕ್ಕರೆ ಅವರು ಬೇಡಿಕೆಯಿರುವ ನಯ ನಾಜೂಕಿನ ಅತ್ಯುತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸಬಲ್ಲರು. ಅವರು ಶ್ರೀರಂಗಪಟ್ಟಣಕ್ಕೆ ಇಂತಹ ವಸ್ತುಗಳನ್ನು ತಯಾರಿಸಿಕೊಡುವುದರಲ್ಲಿ ಮುಂದಿದ್ದರು. ಆದರೀಗವರಿಗೆ ಬರೀ ಅನಾನುಕೂಲಗಳೇ ಇವೆ; ಮೈಸೂರಿನ ಬೇಡಿಕೆ ಶ್ರೀರಂಗಪಟ್ಟಣದಷ್ಟಿರುವುದು ಅನುಮಾನ, ಇಂಗ್ಲೀಷ್ ಅಧಿಕಾರಿಗಳು ಮುಸ್ಲಿಂ ಸರದಾರರಂತೆ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಹೈದರಿನ ಕಾಲದಲ್ಲಿ ಉತ್ಪಾದಿಸಿದಂತಹ ವಸ್ತುಗಳನ್ನು ತಯಾರಿಸುವುದನ್ನು ಈಗಿನ ಉತ್ಪಾದಕರು ನಿರೀಕ್ಷಿಸುವಂತಿಲ್ಲ, ತಮ್ಮ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದರ ಹೊರತಾಗಿ.” (162)

ಸೈತಾನನೊಬ್ಬ ರಾಕ್ಷಸನಿಗೆ ಅಮಾಯಕರನ್ನು ನ್ಯಾಯಕ್ಕೋಸ್ಕರ ನರಕಕ್ಕೆ ಕರೆದೊಯ್ಯಬೇಕೆಂದು ಸಲಹೆ ನೀಡುವಂತೆ ಬುಚನನ್ ಮುಂದುವರಿಸುತ್ತಾನೆ: “ಈ ನಗರವನ್ನು ಪುನರ್ ಸ್ಥಾಪಿಸಲು ಅಪಾರ ಆಸಕ್ತಿ ಹೊಂದಿರುವ ಪೂರ್ಣಯ್ಯ, ಸಂಗ್ರಹಿಸಿದ್ದ ಹತ್ತಿ ಮತ್ತು ರೇಷ್ಮೆಯ ಬಟ್ಟೆಗಳನ್ನು ನನಗೆ ಕಳುಹಿಸಿದ್ದಾರೆ; ಅವರ ಹೆಸರಿನಲ್ಲೇ ಮಾರ್ಕ್ವಿಸ್ ವೆಲ್ಲೆಸ್ಲಿಗೆ ಉಡುಗೊರೆಯಾಗಿ ಕೊಡಬೇಕೆಂಬ ವಿನಂತಿಯೊಂದಿಗೆ. ಇದರಿಂದ ವ್ಯಾಪಾರ ವ್ಯವಹಾರದ ನಿರ್ದೇಶಕರ ಗಮನ ಇತ್ತ ಸರಿದು, ಸಂಕಟವನ್ನುಭವಿಸಿದ ದೇಶವೊಂದನ್ನು ಪುನಃ ಕಟ್ಟಲು ವ್ಯಾಪಾರದ ಸಹಕಾರ ಸಿಗಬಹುದೆಂಬ ಕಾರಣದಿಂದ ಈ ಬೇಡಿಕೆ.” (163)

ಫಣಿ ಮತ್ತು ಸಹವರ್ತಿ ಲೇಖಕರು ಹೇಳುತ್ತಾರೆ: “….ಬಟ್ಟೆ ಉದ್ಯಮದ ಮಾರುಕಟ್ಟೆಯಲ್ಲಾದ ಈ ಏರುಪೇರುಗಳು ವರ್ತಕರು ವ್ಯಾಪಾರದ ಅಪಾಯಗಳಿಗೆ ಎದುರಾಗಲು ಹಿಂಜರಿಯುವಂತೆ ಮಾಡಿತು, ಬಂಡವಾಳ ಸುಭದ್ರವಾಗಿರುತ್ತದೆ ಎಂಬ ಭಾವನೆ ಮೂಡಿಸಿದ ಕಡೆ ಮಾತ್ರ ಅವರು ಹಿಂಜರಿಯುತ್ತಿರಲಿಲ್ಲ. ವರ್ತಕರ ಬಂಡವಾಳದ ಹರಿಯುವಿಕೆಯಲ್ಲಾದ ಈ ಅಡೆತಡೆಗಳು ಸಮೃದ್ಧ ಬಟ್ಟೆ ಉದ್ಯಮ ಬಟ್ಟೆ ತಯಾರಿಸುವುದರ ಮೇಲೆ ದುಷ್ಪರಿಣಾಮ ಬೀರಿತು. ಲೇವಾದೇವಿ ವ್ಯವಹಾರ ನಡೆಸುವವರ ಮೇಲಿನ ಅವಲಂಬನೆ ಹೆಚ್ಚಾಯಿತು.” (164)

ಇದೇ ಲೇಖಕರು ಈ ಕುಸಿತದ ರೀತಿಯನ್ನು ಮತ್ತಷ್ಟು ವಿಸ್ತಾರವಾಗಿ ವಿವರಿಸುತ್ತಾರೆ: “ಆರ್ಥಿಕತೆಯನ್ನು ಮುಕ್ತವಾಗಿಸುವ ಬ್ರಿಟೀಷರ ನೀತಿ ವ್ಯಾಪಾರವನ್ನು ವೃದ್ಧಸಿತು…. ಬ್ರಿಟೀಷರ ವ್ಯಾಪಾರವನ್ನು. ವರ್ತಕ ಬಂಡವಾಳ ಒಂದು ನಿರ್ದಿಷ್ಟ ಮಿತಿಯ ನಂತರ ಬೆಳೆಯಲಿಲ್ಲ. ಮತ್ತು ಈ ನಿಯಮಿತ ವರ್ತಕ ಬಂಡವಾಳ ಕೂಡ ಸ್ಥಳೀಯ ಬಟ್ಟೆ ಉದ್ಯಮವದ ಉತ್ಪನ್ನದ ಹೆಚ್ಚಳಕ್ಕೆ ಉಪಯೋಗವಾಗಲಿಲ್ಲ, ಅಷ್ಟೊತ್ತಿಗಾಗಲೇ ಬಟ್ಟೆ ಉದ್ಯಮಕ್ಕೆ ಹಣ ತೊಡಗಿಸುವುದು ಅನುಪಯುಕ್ತವಾಗಿತ್ತು. ಬ್ರಿಟೀಷರ ಮೊದಲ ಆರ್ಥಿಕ ನೀತಿಗಳಿಂದಾಗಿಯೇ ತೊಂದರೆ ಅನುಭವಿಸಿದ್ದ ಬೆಂಗಳೂರಿನ ಬಟ್ಟೆ ಉದ್ಯಮ ಈಗ ಮತ್ತಷ್ಟು ಕುಸಿಯಿತು. ತೊಂದರೆಗೊಳಗಾಗಿದ್ದ ಬೆಂಗಳೂರಿನ ರೇಷ್ಮೆ ಉದ್ಯಮ ವಿದೇಶಿ ರೇಷ್ಮೆ – ಕಡಿಮೆ ಹಣ ಮತ್ತು ಉತ್ತಮ ಗುಣಮಟ್ಟದ, ಹೆಚ್ಚು ಜನಪ್ರಿಯವಾಗಿದ್ದ ‘ನೂಲ್ ರೇಷ್ಮೆ’(Nool rashom) - ಯ ಆಮದಿನಿಂದ ಮತ್ತಷ್ಟು ಸಂಕಟಕ್ಕೀಡಾಯಿತು. ಅದಾಗಲೇ ಕುಸಿತದ ಹಾದಿಯಲ್ಲಿದ್ದ ರೇಷ್ಮೆ ಉದ್ಯಮಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದ್ದು ವಸಾಹತು ತೆರಿಗೆ ಪದ್ಧತಿಯಿಂದ. ಮೈಸೂರಿಗೆ ಆಮದಾಗುವ ವಿದೇಶಿ ರೇಷ್ಮೆಯ ಮೇಲೆ ಯಾವುದೇ ಆಮದು ತೆರಿಗೆಯನ್ನು ವಿಧಿಸದೆ ಮೈಸೂರಿನಿಂದ ಇಂಗ್ಲೆಂಡಿಗೆ ರಫ್ತಾಗುವ ಎಲ್ಲಾ ರೀತಿಯ ರೇಷ್ಮೆ ಉತ್ಪನ್ನದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ರೇಷ್ಮೆಯ ಮೇಲಿನ ಸೇಯರ್ ತೆರಿಗೆ (sayer duty)ಯನ್ನು ರದ್ದುಪಡಿಸಿದರಾದರೂ ರೇಷ್ಮೆ ಉದ್ಯಮ ಮತ್ತೆ ಚೇತರಿಸಿಕೊಳ್ಳಲಿಲ್ಲ.

ಸ್ಥಳೀಯ ಹತ್ತಿ ಉದ್ಯಮ ಕೂಡ ಬೆಂಗಳೂರಿಗೆ ಆಮದಾಗುವ ಯುರೋಪಿನ ಹತ್ತಿ ದಾರದ ಮೇಲಿನ ಸೇಯರ್ ತೆರಿಗೆ ರದ್ದು ಮಾಡಿದ್ದರಿಂದ ಹೊಡೆತ ಅನುಭವಿಸಿತು. ಬೂರ್ಬೋನ್ (Bourbon) ಹತ್ತಿಯನ್ನು ಪರಿಚಯಿಸಿದ್ದು ಕೂಡ ಆ ಹತ್ತಿಯನ್ನು ಉಪಯೋಗಿಸಿ ನೇಯ್ಗೆ ಮಾಡುವುದು ನೇಕಾರರಿಗೆ ಹೊಸದಾಗಿದ್ದ ಕಾರಣದಿಂದ ಹತ್ತಿ ಉದ್ಯಮಕ್ಕೆ ಪೆಟ್ಟು ಕೊಟ್ಟಿತು.” (165)

ಈ ವಿನಾಶದ ಪರಿಣಾಮ 1849 – 50ರಲ್ಲಿ ನಡೆದ ಮಗ್ಗದ ಸೆನ್ಸಸ್ಸಿನಲ್ಲಿ ಪ್ರತಿಬಿಂಬಿತವಾಗಿದೆ. ಬೆಂಗಳೂರಿನಲ್ಲಿ ನಡೆದ ಗಣತಿಯಲ್ಲಿ ಇಡೀ ನಗರದಲ್ಲಿ 2,921 ಮಗ್ಗಗಳಿರುವ ಅಂಶ ತಿಳಿಯಿತು. ಇದರಲ್ಲೂ ಹಲವನ್ನು ಭಾಗಶಃ ಉಪಯೋಗಿಸಲಾಗುತ್ತಿತ್ತಷ್ಟೇ. 1800ಕ್ಕೆ ಹೋಲಿಸಿದರೆ ಮಗ್ಗಗಳ ಸಂಖೈಯಲ್ಲಿ ಅರ್ಧದಷ್ಟು ಕಡಿಮೆಯಾಗಿಬಿಟ್ಟಿತ್ತ. (166)

ಕೊಂಚ ನಂತರ ಕಾಲಘಟ್ಟದಲ್ಲಿ ಬಟ್ಟೆ ಉದ್ಯಮ ಅನುಭವಿಸಿದ ಕಷ್ಟಗಳ ಬಗ್ಗೆ ಥರ್ಸ್ಟನ್ ತಿಳಿಸುತ್ತಾರೆ, ಬಳ್ಳಾರಿಯ ದೇವಾಂಗರು ಮಾಡಿದ ಅಪಹಾಸ್ಯದ ಕುರಿತು ಹೇಳುತ್ತಾರೆ: “ಬಳ್ಳಾರಿ ಜಿಲ್ಲೆಯಲ್ಲಿ ನಾನು ಅಧ್ಯಯನ ಮಾಡಿದವರು……ನಾವು ವೃತ್ತಿಪರ ನೇಕಾರರು, ಆದರೆ ಯುರೋಪಿನ ಬಟ್ಟೆಗಳನ್ನು ಧರಿಸುವುದೇ ನಮಗೆ ಕಡಿಮೆ ಖರ್ಚಿನ ಬಾಬ್ತು ಎಂದು ನಗುತ್ತಾ ಹೇಳಿದರು.” (167)

ಬಾಂಬೆ ಪ್ರಾಂತ್ಯದ ದಕ್ಷಿಣ ಭಾಗದ ಸ್ಥಿತಿಯನ್ನು ವಿವರಿಸುತ್ತ ಆರನೇ ಪಾವ್ಲಾವ್ ಹೇಳುತ್ತಾರೆ: “ದೀರ್ಘ ಕಾಲೀನ ಯುದ್ಧಗಳಿಂದ ಮಹಾರಾಷ್ಟ್ರ ಹಾಳಾಗಿದ್ದು ಇಲ್ಲಿನ ಆರ್ಥಿಕತೆಯಲ್ಲಾದ ಕುಸಿತಕ್ಕೊಂದು ಕಾರಣ. ಸಾಮಾಜಿಕ – ಆರ್ಥಿಕ ಸಂಬಂಧಗಳು, ಮರಾಠ ರಾಜ್ಯ ವ್ಯವಸ್ಥೆಯ ರದ್ದತಿಯೊಂದಿಗೆ ಮತ್ತು ಬ್ರಿಟೀಷರ ಹೊಸ ತೆರಿಗೆ ಪದ್ಧತಿಯ ಜಾರಿಯೊಂದಿಗೆ ತನ್ನ ಅಸ್ತಿತ್ವ ಕಳೆದುಕೊಂಡಿತು. ಅರಮನೆಗೆ ಮತ್ತು ಸೈನ್ಯಕ್ಕೆ ವಸ್ತುಗಳನ್ನು ಪೂರೈಸುತ್ತಿದ್ದ ನಗರ ಕೈಗಾರಿಕೆಗಳಿಗೆ ಗ್ರಾಹಕರೇ ಇಲ್ಲದಂತಾಯಿತು. ಹಳ್ಳಿಗಳೊಂದಿಗಿದ್ದ ಸಶಕ್ತ ಮಾರುಕಟ್ಟೆ ಬಂಧವನ್ನು ಆಮದಾದ ಬ್ರಿಟೀಷ್ ವಸ್ತುಗಳು ನೀಡಿದ ಪೈಪೋಟಿ ಸಡಿಲಗೊಳಿಸಿತು. ಬ್ರಿಟೀಷ್ ವಸ್ತುಗಳಿಗೆ ಆಮದು ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು ಮತ್ತವು ಹಳ್ಳಿಯ ಮಾರುಕಟ್ಟೆಯನ್ನು ಪ್ರವೇಶಿಸಲಾರಂಭಿಸಿತ್ತು. ಬಟ್ಟೆಗಳುತ್ಪಾದನೆ ಹಳ್ಳಿಗಳಲ್ಲಿ ಚೆನ್ನಾಗಿತ್ತು ಮತ್ತಲ್ಲಿನ ನೇಕಾರರು ಬ್ರಿಟೀಷ್ ನೂಲನ್ನು ಉಪಯೋಗಿಸಲಾರಂಭಿಸಿದ್ದರು…..

ತಮ್ಮ ಪೂರ್ವಜರ ಉದ್ಯಮವನ್ನೇ ಮುಂದುವರಿಸಿದವರು ಅರೆ ಹೊಟ್ಟೆಯಿಂದ ಬಳಲುವಂತಾಯಿತು. ಬ್ರಿಟೀಷ್ ಆಡಳಿತದ ಅಂದಾಜಿನಂತೆ 1830ರ ಮೊದಲ ಭಾಗದಲ್ಲಿ ನೇಕಾರರ ಕುಟುಂಬವೊಂದು ವರುಷಕ್ಕೆ 84 ರುಪಾಯಿಗಳನ್ನು ಬೇಳೆ ಕಾಳುಗಳ ಮೇಲೆ ವ್ಯಯಿಸಬೇಕಾಗಿತ್ತು; ಅವರ ವಾರ್ಷಿಕ ಆದಾಯ 108 ರುಪಾಯಿಗಳಷ್ಟಿತ್ತು.

ಮನುಷ್ಯರಿಗೆ ಬದುಕಲು ಇನ್ನಿತರೆ ಆಹಾರ ಪದಾರ್ಥಗಳು, ಬಟ್ಟೆ, ಉರುವಲು, ಪಾತ್ರೆ ಪಗಡೆಗಳೆಲ್ಲ ಬೇಕೆನ್ನುವುದನ್ನು ಗಣನೆಗೆ ತೆಗೆದುಕೊಂಡಾಗ ನೇಕಾರರ ಸಂಕಷ್ಟಗಳೆಂತದ್ದಿರಬಹುದೆನ್ನುವುದನ್ನು ಕಲ್ಪಿಸಿಕೊಳ್ಳಬಹುದು. ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದೇನೆಂದರೆ ಇದು ವಿದೇಶಿ ಆಳ್ವಿಕೆಯ ಪ್ರಾರಂಭದ ವರುಷಗಳು ಮತ್ತು ಮುಂದಿನ ದಿನಗಳಲ್ಲಿ ನೇಕಾರರ ಪರಿಸ್ಥಿತಿ ಮತ್ತಷ್ಟು ಹದ ತಪ್ಪುತ್ತಿತ್ತು. ಬೆಳಗಾವಿ ಜಿಲ್ಲೆಯ ನೇಕಾರರನ್ನು 1849ರಲ್ಲಿ ಸರ್ವೇ ಮಾಡಿದ ಬ್ರಿಟೀಷ್ ಅಧಿಕಾರಿ ನೇಕಾರರ ಆದಾಯ ಇಪ್ಪತ್ತು ವರ್ಷದ ಹಿಂದಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗಕ್ಕೆ ಇಳಿದುಬಿಟ್ಟಿತ್ತು ಎಂದು ಒಪ್ಪಿಕೊಳ್ಳುತ್ತಾನೆ. (1849ರಲ್ಲಿ ಬೆಳಗಾವಿ ಜಿಲ್ಲೆಯ ನೇಕಾರರು ದಿನಕ್ಕೆ ಎರಡು ಅನ್ನಾಗಳನ್ನಷ್ಟೇ ಗಳಿಸುತ್ತಿದ್ದರು, ವಾರ್ಷಿಕ 36 ರುಪಾಯಿಗಳಾಗುತ್ತಿತ್ತಷ್ಟೇ)

ಬಾಗಲಕೋಟೆಯ ಪರಿಸ್ಥಿತಿ ಆರ್ಥಿಕತೆಯನ್ನು ಆಕ್ರಮಿಸುವಾಸೆಯ ವಿಧ್ವಂಸಕ ಪರಿಣಾಮಗಳನ್ನು ತೋರಿಸುತ್ತದೆ…..

ಟಿ.ಮಾರ್ಷಲ್ ಪ್ರಕಾರ ಬಾಗಲಕೋಟೆಯ ಸಮೃದ್ಧಿಗೆ ಅಲ್ಲಿನ ಸ್ಥಳೀಯ ಆಡಳಿತಗಾರರ ಆಳ್ವಿಕೆಯ ಪದ್ಧತಿ ಮತ್ತು ಜನರ ಸಾಮಾನ್ಯ ಪರಿಸ್ಥಿತಿ ಕಾರಣವಾಗಿತ್ತು. ಅಲ್ಲಿನ ಜನರ ಆರ್ಥಿಕತೆ ಉತ್ತಮವಾಗಿದ್ದ ಕಾರಣ ಗುಡಿ ಕೈಗಾರಿಕೆಯ ವಸ್ತುಗಳಿಗೆ ಬೇಡಿಕೆಯಿತ್ತು. ಅಲ್ಲಿನ ಬಜಾರಿನಲ್ಲಿ ಬಿಕರಿಗಿದ್ದ ವಸ್ತುಗಳಲ್ಲಿ ದುಬಾರಿ ಬಟ್ಟೆಗಳೂ ಇದ್ದವು, 50,000 ರುಪಾಯಿ ಬೆಲೆಬಾಳುವ ವಸ್ತುವನ್ನು ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಅಂದಾಜು 1822ರಷ್ಟರಲ್ಲಿ ಉನ್ನತ ಹುದ್ದೆಯ ಜನರೂ ಕೂಡ ಎಲ್ಲಾ ರೀತಿಯ ಖರೀದಿಯನ್ನು ನಿಲ್ಲಿಸಿಬಿಟ್ಟಿದ್ದರು ಎನ್ನುತ್ತಾರೆ ಮಾರ್ಷಲ್. ದುಬಾರಿ ವಸ್ತುಗಳನ್ನು ಖರೀದಿಸುವ ಚೈತನ್ಯವಿದ್ದವರೂ ಕೂಡ ಕಡಿಮೆ ಬೆಲೆಯ ವಸ್ತುಗಳಿಗೆ ತೃಪ್ತಿ ಪಟ್ಟುಕೊಂಡರು, ಯಾಕೆಂದರೆ ಉತ್ತಮವಾಗಿ ಬಟ್ಟೆ ಧರಿಸುವುದಕ್ಕೆ ಅವರಿಗೀಗ ಯಾವುದೇ ಪ್ರೋತ್ಸಾಹ ಧನ ದಕ್ಕುತ್ತಿರಲಿಲ್ಲ, ಅವರ ಹುದ್ದೆಗಳನ್ನು ಕಿತ್ತುಕೊಳ್ಳಲಾಗಿತ್ತು ಮತ್ತಾ ದುಬಾರಿ ಧಿರಿಸುಗಳನ್ನು ಧರಿಸುವ ಸಂದರ್ಭಗಳೂ ಈಗ ಇರಲಿಲ್ಲ. ಇನ್ನೂ ಹೆಚ್ಚಿನ ಸಂಖೈಯ ಜನರ ಎಲ್ಲಾ ರೀತಿಯ ಪೋಷಣ ಶಕ್ತಿಯನ್ನು ಕಸಿಯಲಾಗಿತ್ತು. ಬ್ರಿಟೀಷರು ತೆರಿಗೆಗಳು ಬಾಗಲಕೋಟೆಯ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಮತ್ತೊಂದು ಪೆಟ್ಟು ನೀಡಿತು. ಭಾರತೀಯರ ಆಳ್ವಿಕೆಯಲ್ಲಿ ಹದಿನೆಂಟು ಉತ್ಪಾದಕ ಘಟಕಗಳು 400ರುಪಾಯಿ ತೆರಿಗೆ ಕಟ್ಟುತ್ತಿದ್ದವು, ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದ ಘಟಕ ವಾರ್ಷಿಕ 88 ರುಪಾಯಿ ಕಟ್ಟುತ್ತಿತ್ತು. ಬ್ರಿಟೀಷರ ತೆರಿಗೆ ಪದ್ಧತಿಯಡಿಯಲ್ಲಿ ಇವರು 1900 ರುಪಾಯಿ ಮತ್ತು 3000 ರುಪಾಯಿಯವರೆಗೆ ತೆರಿಗೆ ಏರಿಕೆಯಾಯಿತು. ಪರಿಣಾಮವಾಗಿ ನಗರದ ವ್ಯಾಪಾರ ಮತ್ತು ಕೈಗಾರಿಕೆಗಳು ಕುಸಿತ ಕಂಡವು.” (168)

ಸಕ್ಕರೆ ಉದ್ಯಮ ಆ ಸಮಯದ ಉತ್ಪಾದನೆ ಮತ್ತು ಸಂಘಟನೆಯಲ್ಲಿ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದ್ದುದನ್ನು ನಾವು ನೋಡಿದ್ದೇವೆ. ಬ್ರಿಟೀಷ್ ಕಾನೂನುಗಳು ಸಕ್ಕರೆ ಉದ್ಯಮವನ್ನು ಕಬ್ಬನ್ನಿಂಡುವಂತೆ ಹಿಂಡಿಬಿಟ್ಟಿತು. ಶಾಮ ರಾವ್ ಹೇಳುತ್ತಾರೆ: “1843ರಲ್ಲಿ, 1839ರ ಹದಿನೈದನೇ ಕಾಯಿದೆ ಮತ್ತು 1842ರ ಹನ್ನೊಂದನೇ ಕಾಯಿದೆಗಳು ಮೈಸೂರಿನ ಆದಾಯಕ್ಕೆ ದೊಡ್ಡ ಪೆಟ್ಟು ನೀಡಿದವು. ಈ ಕಾಯಿದೆಗಳ ಪ್ರಕಾರ ಮದ್ರಾಸ್ ಪ್ರಾಂತ್ಯ ವಿದೇಶಿ ಸಕ್ಕರೆಯನ್ನು ಆಮದು ಮಾಡಿಕೊಳ್ಳುವಂತಿರಲಿಲ್ಲ, ಮೈಸೂರು ಕೂಡ ವಿದೇಶಿ ಪ್ರಾಂತ್ಯವಾದ ಕಾರಣ ಸಕ್ಕರೆ ಆಮದನ್ನು ನಿಷೇಧಿಸಲಾಯಿತು. ಮೈಸೂರಿನಲ್ಲಿ ಉತ್ಪಾದಿಸಲಾಗುವ ಯಾವುದೇ ಸಕ್ಕರೆಯನ್ನು ಪಕ್ಕದ ಕೆನರಾ ಜಿಲ್ಲೆಯವರ ಸ್ಥಳೀಯರ ಉಪಯೋಗಕ್ಕೂ ರವಾನಿಸುವಂತಿಲ್ಲ ಎಂದು ಕಾನೂನು ರೂಪಿಸಲಾಯಿತು.” (169) ಈ ನಿಯಮಗಳನ್ನು ಹೇರಿದ್ದಕ್ಕೆ ಕಾರಣ ಆಯಾ ಪ್ರಾಂತ್ಯಗಳಲ್ಲಿ ಬ್ರಿಟೀಷ್ ಉತ್ಪಾದಿಸಿದ ಸಕ್ಕರೆಗೆ ಮಾರುಕಟ್ಟೆ ಸೃಷ್ಟಿಯಾಗಲಿ ಎಂಬ ಕಾರಣದಿಂದ.

ಇದೇ ರೀತಿ ತಂಬಾಕು ಉದ್ಯಮ ಕೂಡ ಹೊಗೆ ಹಾಕಿಸಿಕೊಂಡಿದ್ದನ್ನು ನೋಡಬಹುದು. “ಇದೇ ಮಾದರಿಯಲ್ಲಿ ಮೈಸೂರಿನಿಂದ ಮಲಬಾರಿಗೆ ತಂಬಾಕನ್ನು ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಮತ್ತು ಕಾಫಿಯನ್ನು ರಫ್ತು ಮಾಡಲು ಹೆಚ್ಚಿನ ತೆರಿಗೆಯನ್ನು ಕಟ್ಟಬೇಕಿತ್ತು. ಇದೆಲ್ಲವೂ ನಡೆಯುತ್ತಿರುವಾಗಲೂ ಮೈಸೂರು ಬ್ರಿಟೀಷರ ಎಲ್ಲಾ ಉತ್ಪನ್ನಗಳನ್ನೂ ಮುಕ್ತವಾಗಿ ಆಮದು ಮಾಡಿಕೊಂಡಿತು ಮತ್ತು ಕಂಪನಿಯ ಉತ್ಪನ್ನಗಳಿಗೂ ತನ್ನ ಪ್ರಾಂತ್ಯದೊಳಗಿನ ಉತ್ಪನ್ನಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನೇ ಹಾಕುತ್ತಿತ್ತು.” (170)

ಇದು ವಸಾಹತಿನ ಆರ್ಥಿಕತೆಯ ಸಾರ ಮತ್ತು ಕೆ.ಆರ್.ಒಡೆಯರ್ ಎಂಬ ಕೈಗೊಂಬೆ ರಾಜನನ್ನು ಮೈಸೂರು ಪೀಠದಲ್ಲಿ ಕೂರಿಸಿದ ಹಿಂದಿರುವ ರಾಜಕೀಯ ಉದ್ದೇಶ.

1805ರಲ್ಲಿ ರಾಜ ಉಪ್ಪಿನ ಮೇಲಿನ ಎಲ್ಲಾ ತೆರಿಗೆಯನ್ನು ರದ್ದು ಪಡಿಸಿ ಬ್ರಿಟೀಷರ ಉಪ್ಪು ಮೈಸೂರಿಗೆ ರಫ್ತಾಗುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರ ಕುರಿತು ಕೆ.ಎನ್.ವಿ ಶಾಸ್ತ್ರಿ ತಿಳಿಸುತ್ತಾರೆ. ಈ ನಿರ್ಣಯ ಮೈಸೂರು ಸಾಮ್ರಾಜ್ಯದ ಒಳನಾಡಿನಲ್ಲಿ ಉಪ್ಪು ತಯಾರಿಸುತ್ತಿದ್ದ ಹಲವು ಸಾವಿರ ಜನರ ಬದುಕನ್ನು ಹಾಳುಗೆಡವಿತು. ಇದು “ಸಮುದ್ರದ ಉಪ್ಪನ್ನು ಮೈಸೂರಿಗೆ ಬರುವುದನ್ನು ನಿಷೇಧಿಸಿ ಸ್ಥಳೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಿದ” ಟಿಪ್ಪುವಿನ ನೀತಿಗೆ ಸಂಪೂರ್ಣ ತದ್ವಿರುದ್ದವಾಗಿತ್ತು. (171)

ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಅವಸ್ಥೆ ಬಟ್ಟೆ ಉದ್ಯಮಕ್ಕಿಂತ ಭಿನ್ನವಾಗಿರಲಿಲ್ಲ. ಮಳವಳ್ಳಿಯ ಕುಲುಮೆಗಳ ಬಗ್ಗೆ ಬೆಂಜಮಿನ್ ಹೇಯ್ನ್ ಅದಾಗಲೇ ವರದಿಕೊಟ್ಟಿದ್ದರು. ಹಿಂದಿನ ದೇಶಪ್ರೇಮಿ ಮೈಸೂರು ಸರಕಾರ ಕಬ್ಬಿಣವನ್ನು ಹೆಚ್ಚೆಚ್ಚು ಖರೀದಿಸುತ್ತಿತ್ತು ಮತ್ತು ಮೈಸೂರಿನ ಅಭಿವೃದ್ಧಿಗೆ ಇದು ಅತ್ಯಂತ ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎನ್ನುವಂಶ ಬ್ರಿಟೀಷರಿಗೆ ದಿಗ್ಬ್ರಮೆ ಮೂಡಿಸಿರಲೇಬೇಕು.

ಹಾಗಾಗಿ ಮುನ್ನಡೆಯಲ್ಲಿದ್ದ ಬಟ್ಟೆ ಉದ್ಯಮ, ಎಣ್ಣೆ, ಕಬ್ಬಿಣ, ಸಕ್ಕರೆ ಮತ್ತು ಉಣ್ಣೆ ಉದ್ಯಮದಲ್ಲಿ ಬಿಕ್ಕಟ್ಟನ್ನು ಸೃಷ್ಟಿಸಲಾಯಿತು ಮತ್ತು ಇದರಿಂದಾದ ನಾಶದ ತೀವ್ರವಾಗಿತ್ತು, ಸಂಪೂರ್ಣವಾಗಿತ್ತು. 
ಮುಂದಿನ ವಾರ:
ಸ್ಥಳೀಯ ಮಾರುಕಟ್ಟೆಯ ನಾಶ: ಎಚ್ಚರಗೊಂಡ ಕನ್ನಡ ದೇಶದ ಸಂಕಟ

No comments:

Post a Comment