Dec 25, 2015

ಧರ್ಮ ರಕ್ಷಕರ ಅಮೋಘ 'ಸಂಸ್ಕ್ರತಿ'!

ಈ ಯಮ್ಮನ ಫೋಟೋ ಎರಡು ಮೂರು ದಿನದಿಂದ ಫೇಸ್ ಬುಕ್ಕಿನ ಸ್ನೇಹಿತರ ಗೋಡೆಯಲ್ಲೆಲ್ಲಾ ಕಾಣಿಸಿಕೊಂಡಾಗ ಎಲ್ಲೋ ನೋಡಿದ ನೆನಪು ಕಾಡುತ್ತಿತ್ತು. ಕೊನೆಗೆ ಹೊಳೆಯಿತು. ಪತ್ರಕರ್ತ ನವೀನ್ ಸೂರಿಂಜೆ ಬಂಧನವಾಗಿದ್ದಾಗ ಮಂಗಳೂರು ನ್ಯಾಯಾಲಯದ ಬಳಿ ವಕೀಲರೊಂದಿಗೆ ಕೇಸಿನ ಬಗ್ಗೆ ಚರ್ಚಿಸುತ್ತ ಲವಲವಿಕೆಯಿಂದ ಓಡಾಡುತ್ತಿದ್ದರು ವಿದ್ಯಾ ದಿನಕರ್. ಫೇಸ್ ಬುಕ್ಕಿನಲ್ಲಿ ಹಲವು ಜನರ ಅವಹೇಳನಕಾರಿ ಹೇಳಿಕೆಗಳಿಗೆ, ಅತ್ಯಾಚಾರ ಮತ್ತು ಕೊಲೆ ಬೆದರಿಕೆಗೆ ಒಳಗಾಗಿದ್ದಾರೆ ವಿದ್ಯಾ ದಿನಕರ್. ಕಾರಣ? ದಿಲ್ವಾಲೆ ಸಿನಿಮಾದ ಪ್ರದರ್ಶನಕ್ಕೆ ಮಂಗಳೂರಿನ 'ದೇಶಪ್ರೇಮಿ'ಗಳು ಅಡ್ಡಿಪಡಿಸಿದ್ದರ ಬಗ್ಗೆ ದೂರು ದಾಖಲಿಸಿದ್ದು. ವಿದ್ಯಾ ದಿನಕರ್ ಹಿನ್ನೆಲೆಯೇನು, ಅವರ ಹೋರಾಟದ ಹಾದಿಯೇನು ಎನ್ನುವುದರ ಬಗ್ಗೆ ಕಿಂಚಿತ್ತೂ ಗೊತ್ತಿರದ (ಅಥವಾ ಗೊತ್ತಿದ್ದರೂ ಮಾಡುತ್ತಾರೋ?) ವೀರ ಕೇಸರಿ ಎಂಬ ಫೇಸ್ ಬುಕ್ ಗೋಡೆಯಲ್ಲಿ ವಿದ್ಯಾ ದಿನಕರ್ ರನ್ನು ಟೀಕಿಸಿ ಒಂದು ಪೋಸ್ಟ್ ಹಾಕಲಾಗುತ್ತದೆ. (ಚಿತ್ರ ನೋಡಿ) ಆ ಪೋಸ್ಟಿನಲ್ಲಿ ಟೀಕೆಯಿತ್ತು, ಅದು ಸತ್ಯವೋ ಅಸತ್ಯವೋ ಬಿಟ್ಟು ಬಿಡಿ ಟೀಕಿಸುವ ಹಕ್ಕು ಎಲ್ಲರಿಗೂ ಇರುತ್ತದೆ. 'ದೇಶಪ್ರೇಮಿ' ಭಜರಂಗದಳದವರ ಘನಂದಾರಿ ಕೆಲಸದ ಬಗ್ಗೆ ದೂರು ನೀಡಿದ ಕಾರಣಕ್ಕೆ ಪಾಕಿಸ್ತಾನದವಳು ಎಂದೆಲ್ಲ ಟೀಕಿಸುವುದು ಯಾವ ಕಾರಣಕ್ಕೋ? ಅದಕ್ಕೆ ಬಂದ ಕಮೆಂಟುಗಳು ನಾಗರೀಕವೆನ್ನಿಸಿಕೊಳ್ಳುವ ಸಮಾಜ ಬೆಚ್ಚಿ ಬೀಳುವಂತಿತ್ತು. ಕಮೆಂಟುಗಳನ್ನು ನೋಡಿದ ಮೇಲೆ ಹೋಗ್ಲಿ ಬಿಡಿ ಪೋಸ್ಟೇ ವಾಸಿ ಎನ್ನಿಸಿದರೆ ಸುಳ್ಳಲ್ಲ!
ಬೇವರ್ಸಿ, ನಾಯಿ, ಪಾಕಿಸ್ತಾನದವರಿಗೆ ಹುಟ್ಟಿದೋಳು, ಬಿಚ್ ತರಹದ ಸಾಮನ್ಯ ಪದಪುಂಜಗಳು 'ದೇಶಪ್ರೇಮಿ'ಗಳ ಕಮೆಂಟುಗಳಲ್ಲಿ ಎದ್ದು ಕಾಣಿಸುವುದು ಅಚ್ಚರಿಯ ವಿಷಯವೇನಲ್ಲ. ಈ ಕಮೆಂಟುಗಳ ನಡುವೆ ಮಧುಪ್ರಸಾದ್ ಎಂಬ ವ್ಯಕ್ತಿ 'ಇಂತವಳನ್ನು ರೇಪ್ ಮಾಡಿ ಕೊಲೆ ಮಾಡಬೇಕು' ಎಂದು ಉದ್ಗರಿಸಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟಿಸುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಏನೋ ಹುಡುಗ ಬಾಯಿಗೆ ಬಂದಂತೆ ಬೊಗಳುತ್ತಿದ್ದಾನೆ ಎಂದು ಸುಮ್ಮನಿದ್ದುಬಿಡಬಹುದಿತ್ತೋ ಏನೋ. ಆದರೆ ಇತ್ತೀಚಿನ ವಿದ್ಯಮಾನಗಳು ಸುಮ್ಮನಿರುವುದು ಎಷ್ಟರಮಟ್ಟಿಗೆ ಅಪಾಯಕಾರಿ ಎಂದು ತಿಳಿಸಿ ಹೇಳುತ್ತಿವೆ. ಕಲಬುರ್ಗಿಯವರ ಹತ್ಯೆಯಾದಾಗ ಭುವಿತ್ ಶೆಟ್ಟಿ ಎಂಬ ಯುವಕ ಹತ್ಯೆಯನ್ನು ಸಂಭ್ರಮಿಸುವ ಪೋಸ್ಟ್ ಹಾಕಿ ಮುಂದಿನ ಸರದಿ ನಿನ್ನದೇ ಕಣೋ ಭಗವಾನ್ ಎಂದು ಬರೆದುಕೊಂಡಿದ್ದ. ದೂರು ದಾಖಲಾಗಿ ಅವನನ್ನು ಬಂಧಿಸಲಾಯಿತು. ಏನೋ ಬಾಯಿಗೆ ಬಂದಿದ್ದು ಬರ್ಕೊಂಡಿದ್ದಾನೆ ಎಂದು ಪೋಲೀಸರು ಅವನ ಬಗ್ಗೆ ತುಂಬ ತಲೆಕೆಡಿಸಿಕೊಳ್ಳಲಿಲ್ಲವಾ? ಬಂಧನವಾದಷ್ಟೇ ವೇಗದಲ್ಲಿ ಬಿಡುಗಡೆಯೂ ಆಯಿತು. ಕೆಲವು ದಿನಗಳ ನಂತರ ಟಿಪ್ಪು ಜಯಂತಿಯ ಸಂದರ್ಭದಲ್ಲಿ ಸೃಷ್ಟಿಸಲಾದ ಕೋಮು ಗಲಭೆಯ ಸಂದರ್ಭದಲ್ಲಿ ಹರೀಶ್ ಎಂಬ ಯುವಕನ ಹತ್ಯೆಗೆ ಸಂಬಂಧಪಟ್ಟಂತೆ ಭುವಿತ್ ಶೆಟ್ಟಿ ಬಂಧಿತನಾದ. ಮುಸ್ಲಿಮನನ್ನು ಕೊಲ್ಲಲು ಹೋಗಿ 'ಮಿಸ್ಟೇಕಿ'ನಿಂದ ಹರೀಶನನ್ನು ಕೊಂದುಹಾಕಿದ್ದರು ಭುವಿತ್ ಮತ್ತು ಗೆಳೆಯರು. ಸಾಮಾಜಿಕ ಜಾಲತಾಣದ ಬೆದರಿಕೆಗಳು ನಿಜವಾಗುತ್ತಿರುವ ಸಂದರ್ಭದಲ್ಲಿ ವಿದ್ಯಾ ದಿನಕರ್ ರವರನ್ನು ರೇಪ್ ಮಾಡಿ ಕೊಲೆ ಮಾಡಬೇಕು ಎಂಬ ಕಮೆಂಟಿನ ಬಗ್ಗೆ ನಕ್ಕು ಸುಮ್ಮನಾಗುವುದು ಸಾಧ್ಯವೇ? 
ಇಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲಿನ ಎದುರು ವಿದ್ಯಾ ದಿನಕರ್ ರವರಿಗೆ ಬೆಂಬಲ ಸೂಚಿಸುತ್ತ ಬೆದರಿಕೆ ಹಾಕಿದವರನ್ನು ಬಂಧಿಸಲು ಒತ್ತಾಯಿಸಿ ಪ್ರತಿಭಟನೆಯಿದೆ.

No comments:

Post a Comment