Aug 26, 2015

ಹಲ್ಲೆಗೊಳಗಾದ ಶಾಕೀರನ ವಿರುದ್ಧ ಯುವತಿಯ ದೂರು.

mangalore-fanaticism
ಎರಡು ದಿನದ ಹಿಂದೆ ಮಂಗಳೂರಿನಲ್ಲಿ ನಡೆದ ‘ಅನೈತಿಕ ಪೋಲೀಸ್ ಗಿರಿ’ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮುಸ್ಲಿಂ ಯುವಕ ಜೊತೆಗಿದ್ದ ಹುಡುಗಿ ಆ ಯುವಕನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಶಾಕೀರನ (ಈಗವನು ಆರೋಪಿಯ ಸ್ಥಾನದಲ್ಲಿರುವುದರಿಂದ ಹೆಸರು ಬರೆಯಲಾಗಿದೆ) ಮೇಲೆ ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ. ಕಲಂ 354 ಐಪಿಸಿಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಸ್ಕೃತಿ ಭಕ್ಷಕರು ಪ್ರಕರಣ ನಡೆದ ದಿನ ಯುವಕನ ಜೊತೆಗೆ ಯುವತಿಗೂ ಎರಡೇಟು ಬಿಗಿದಿದ್ದರು. ಅದು ಎರಡು ಸೆಕೆಂಡಿನ ವೀಡಿಯೋದಲ್ಲೂ ಸೆರೆಯಾಗಿದೆ. ಹಿಂದೂ ಸಂಘಟನೆಗಳ ಹುಡುಗರನ್ನು ಪೋಲೀಸರು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು ಯುವತಿಯ ಮೇಲೆ, ಅವರ ಮನೆಯವರ ಮೇಲೆ ಒತ್ತಡ ಹಾಕಿಸಿ ಈ ರೀತಿಯ ದೂರನ್ನು ನೀಡಿಸಿರಬಹುದು ಎಂದು ಶಂಕಿಸಬಹುದಾದರೂ ದೂರಿನಲ್ಲಿರುವ ದೌರ್ಜನ್ಯದ ಆರೋಪಗಳನ್ನು ಗಮನಿಸಿದಾಗ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆದು ತೊಂದರೆಗೀಡಾದ ಯುವತಿಗೆ ನ್ಯಾಯ ದೊರಕಲಿ ಎಂದು ಆಶಿಸಬೇಕು. ಮೊಬೈಲು ಮೆಸೇಜುಗಳ ಬಗ್ಗೆ, ವೀಡಿಯೋಗಳ ಬಗ್ಗೆ ಯುವತಿ ತಿಳಿಸಿರುವುದರಿಂದ ಸತ್ಯಾಂಶ ಹೊರಬರಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಯಾರ ಕಡೆಯ ಒತ್ತಡಗಳಿಗೂ ತಲೆಬಾಗದೆ ಮಂಗಳೂರಿನ ಪೋಲೀಸರು ಕಾರ್ಯನಿರ್ವಹಿಸದರದೇ ಪುಣ್ಯ. 

Also Read: ಮಂಗಳೂರಿನ ಮತಿಗೆಟ್ಟ ಹುಡುಗರು

ದೂರಿನ ಪ್ರತಿ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಪೋಲೀಸರೇ ದೂರಿನ ಪ್ರತಿಯ ಫೋಟೋ ತೆಗೆದು ವಾಟ್ಸಪ್ಪಿಗೆ ಬಿಟ್ಟರೋ ಅಥವಾ ಪತ್ರಕರ್ತರು ತಮ್ಮ informerಗಳ ಮೂಲಕ ಈ ಕೆಲಸ ಮಾಡಿಸಿದರೋ ಗೊತ್ತಿಲ್ಲ. ಆ ಹೆಣ್ಣುಮಗಳ ಹೆಸರು, ವಿಳಾಸ, ಫೋನ್ ನಂಬರುಗಳೆಲ್ಲವೂ ನಮೂದಾಗಿರುವ ಪತ್ರ ಸಾವಿರಾರು ಜನರನ್ನು ತಲುಪುತ್ತಿದೆ. ಆ ಫೋಟೋ ತೆಗೆದ ಅನಾಮಧೇಯರಿಗೆ ಕೊಂಚ ವಿವೇಕ ಬೇಡವೇ?

ಗೆ,
ಪೋಲೀಸ್ ಇನ್ಸ್ ಪೆಕ್ಟರ್,
ಮಹಿಳಾ ಪೋಲೀಸ್ ಠಾಣೆ,
ಮಂಗಳೂರು.

ಇಂದ, 
ಕಲ್ಪನ (ಹೆಸರು ಬದಲಿಸಲಾಗಿದೆ),
ಮಂಗಳೂರು.

ವಿಷಯ:- ಶಾಕೀರ್ ಎಂಬುವವನು ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ.

ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಲ್ಪನ ಆದ ನಾನು ನನ್ನ ವಿದ್ಯಾಭ್ಯಾಸವನ್ನು ನನ್ನ ಹುಟ್ಟೂರಾದ ಬೇಲೂರಿನಲ್ಲಿ ಮುಗಿಸಿ ಕೆಲಸಕ್ಕಾಗಿ ಮಂಗಳೂರಿಗೆ 2 ವರ್ಷದ ಹಿಂದೆ ಬಂದು ನನ್ನ ತಾಯಿಯ ಅಕ್ಕ ಲತಾ ಅವರ ಮನೆಯಲ್ಲಿ _ _ ನಗರದಲ್ಲಿ ವಾಸವಾಗಿದ್ದೇನೆ. ಈಗ ಸುಮಾರು 3 ತಿಂಗಳ ಹಿಂದೆ ಅತ್ತಾವರದ _ _ _ಯಲ್ಲಿ ಆಪೋರೇಷನ್ ಡಿಪಾರ್ಟ್ಮೆಂಟ್ (Recieving Grossary Products)ನಲ್ಲಿ ಕೆಲಸಕ್ಕೆ ಸೇರಿರುತ್ತೇನೆ. ಇಲ್ಲಿಯೇ ಕೆಲಸ ಮಾಡುತ್ತಿದ್ದ ಶಾಕೀರ್ ನನಗೆ ಪರಿಚಯನಾಗಿದ್ದ. ಕೆಲಸದ ವಿಚಾರದಲ್ಲಿ ನಾವು ಮಾತನಾಡುತ್ತಿದ್ದೆವು, ಆ ಸಂದರ್ಭದಲ್ಲಿ ನನ್ನ ಮೊಬೈಲ್ ನಂಬರನ್ನು ಅವನು ಕೇಳಿ ತೆಗೆದುಕೊಂಡಿದ್ದ. ನಂತರ ನನಗೆ ಸಂದೇಶಗಳನ್ನು ಕಳಿಸುತ್ತಿದ್ದ. ಅವಕ್ಕೆ ನಾನು ಸಹ Reply ಮಾಡಿರುತ್ತೇನೆ. ಯಾಕೆಂದರೆ ಅವನು ನನಗಿಂತಲೂ ಮೇಲಿನ ಹುದ್ದೆಯಲ್ಲಿದ್ದಾನೆ. ನಾನು ಬಡತನದ ಕುಟುಂಬದಿಂದ ಬಂದವಳಾಗಿದ್ದು ಕಷ್ಟಪಟ್ಟು ಕೆಲಸ ಹುಡುಕಿದ್ದೇನೆ. ಇವನಿಗೆ ಉತ್ತರ ಕೊಡದಿದ್ದರೆ ಅವನು ನನ್ನ ಕೆಲಸಕ್ಕೇನಾದರೂ ತೊಂದರೆ ಕೊಡುತ್ತಾನೆಂದು ಅವನ ಮೆಸೇಜ್ ಗಳಿಗೆ ಉತ್ತರ ನೀಡಿರುತ್ತೇನೆ. ಒಂದು ದಿನ ನಾನು ಆಫೀಸಿನಿಂದ ಮನೆಗೆ ಹೋಗುವಾಗ ನಂದಿಗುಳಿ ಬಸ್ ಸ್ಟ್ಯಾಂಡಿನವರೆಗೆ ಡ್ರಾಪ್ ಮಾಡುವುದಾಗಿ ಕರೆದ. ನಾನು ಅವನ ಕಾರಿನಲ್ಲಿ ಆಫೀಸಿನ ಸ್ವಲ್ಪ ಮುಂದೆ ಹತ್ತಿದೆ. ಹೋಗುವಾಗ ದಾರಿಯಲ್ಲಿ ಅವನ ವರ್ತನೆ ಅಸಹ್ಯಕರವಾಗಿದ್ದು ನಾನು ಹಾಗೆ ಮಾಡಬೇಡ ಎಂದು ಹೇಳಿದರೂ ಕೂಡ ಮೈಕೈಗೆ ಕೈ ಹಾಕುತ್ತಲೇ ಇದ್ದ. ಆಗ ನಾನು ಬಿಕರ್ನಕಟ್ಟೆಯಲ್ಲಿ ಇಳಿಸಲು ಹೇಳಿದೆ. ಇದಾದ ನಂತರ ಅವನು ನನಗೆ ಪದೇ ಪದೇ ಎದುರು ಸಿಕ್ಕಾಗಲೆಲ್ಲ ನನ್ನೊಟ್ಟಿಗೆ ಬಾ ಹಣ ಕೊಡುತ್ತೇನೆ ಎಂದು ಹೇಳುತ್ತಿದ್ದ. ಅದೇ ಪ್ರಕಾರ ಈ ದಿನ 24/08/2015ರಂದು ಸಂಜೆ 5 ಗಂಟೆಗೆ ನಾನು ಆಫೀಸಿನಲ್ಲಿರುವಾಗ ನನಗೆ ಡ್ರಾಪ್ ಕೊಡುವುದಾಗಿ ಮೆಸೇಜ್ ಮಾಡಿದ. ಕೆಲಸದ ಒತ್ತಡದಲ್ಲಿದ್ದ ನಾನು ಆಯ್ತು ಎಂದು Reply ಮಾಡಿದೆ. ನಾನು ಆಫೀಸಿನಿಂದ ಹೊರಗೆ ಬರುವಾಗ ಅವನು ಕೆ.ಎಂ.ಸಿಯ ಮುಂದೆ ಕಾರಿನಲ್ಲಿ ಕಾಯುತ್ತಿದ್ದ ನನ್ನನ್ನು ನೋಡಿ ಬಾ ಎಂದು ಬಲವಂತವಾಗಿ ಕೈಹಿಡಿದು ಎಳೆದ. ಆಗ ನಾನು ಕೂಗಿದೆ. ಆಗ ಅಲ್ಲಿ ಇದ್ದ ಕೆಲವರು ಬಂದು ಅವನಿಂದ ನನ್ನನ್ನು ಬಿಡಿಸಿದರು. ನಾನು ಆ ವಿಚಾರವನ್ನು ನನ್ನ ಅಣ್ಣನಿಗೆ ಕರೆ ಮಾಡಿ ತಿಳಿಸಿದೆ.

ಈ ಮೂಲಕ ನಾನು ನಿಮ್ಮಲ್ಲಿ ಮನವಿ ಮಾಡುವುದೇನೆಂದರೆ ಮುಂದೆ ನನಗೆ ಶಾಕೀರನಿಂದ ಯಾವುದೇ ರೀತಿಯ ತೊಂದರೆ ಬರದ ಹಾಗೆ ಹಾಗೂ ನನ್ನ ಜೊತೆ ಅಶ್ಲೀಲವಾಗಿ ವರ್ತಿಸಿದ ಶಾಕೀರನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂದು ನನಗೆ ನ್ಯಾಯ ಒದಗಿಸಿ ಜೀವ ರಕ್ಷಣೆ ಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಹಾಗೂ ನಾನು ಅವನ ಕಾರಿನಲ್ಲಿ ಕುಳಿತ ವೀಡಿಯೋ ಇದೆ ಎಂದು ಹೆದರಿಸುತ್ತಾನೆ. ಅದನ್ನು ತಾವು ನಾಶ ಮಾಡಬೇಕಾಗಿ ವಿನಂತಿ.

ಇಂತಿ ನಿಮ್ಮ ವಿಧೇಯ,
ಕಲ್ಪನ.

No comments:

Post a Comment