Apr 1, 2014

ನಮೋನೂ ಅಲ್ಲ ರಾಗಾನೂ ಅಲ್ಲ ಆಡಳಿತ ನಡೆಸುವುದು ಕಾಂಚಾಣ.....

ಪ್ರಜಾವಾಣಿ ಪತ್ರಿಕೆಯಿಂದ
ಡಾ ಅಶೋಕ್ ಕೆ ಆರ್

ನಮ್ಮ ದೇಶದ ಆಡಳಿತ ನಡೆಸುವುದ್ಯಾರು? ಬಿಜೆಪಿ ಕಾಂಗ್ರೆಸ್ ತೃತೀಯ ರಂಗ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮೋದಿ, ಅಡ್ವಾಣಿ? ತತ್ವ ಸಿದ್ಧಾಂತಗಳ ಪಕ್ಷವೋ ಆದರ್ಶ ನೀತಿ ನಿಯಮಗಳ ವ್ಯಕ್ತಿಯೋ ದೇಶವನ್ನು ಮುನ್ನಡೆಸುತ್ತಾರೆಂಬುದು ನಮ್ಮ ಕನಸಷ್ಟೇ. ಪಾಶ್ಚಿಮಾತ್ಯ ದೇಶಗಳಲ್ಲಿ ಎಂದೋ ಘಟಸಿ ಅಲ್ಲಿನವರಲ್ಲಿ ಹೆಚ್ಚಿನವರು ಅದನ್ನೂ ಒಪ್ಪಿಯೂ ಮುಗಿದು ಹೋದ ಸಂಗತಿಗಳು ಭಾರತದಲ್ಲಿ ಈಗ ಬೆಳಕಿಗೆ ಬರುತ್ತಿವೆ. ಆಡಳಿತವಿರುವ ಪಕ್ಷ ಯಾವುದೇ ಇರಲಿ, ವ್ಯಕ್ತಿ ಯಾರೇ ಇರಲಿ ಸರಕಾರದ ನೀತಿ ನಿಯಮಗಳ ದಿಕ್ಕುದೆಸೆಗಳನ್ನು ನಿರ್ಧರಿಸುವವರು ಕೆಲವೇ ಕೆಲವು ಉದ್ಯಮಪತಿಗಳು.
ಅಮೆರಿಕಾ ದೇಶಕ್ಕೆ ಸಂಬಂಧಪಟ್ಟಂತೆ ಉದ್ಯಮಪತಿಗಳು ಅಲ್ಲಿನ ಸರಕಾರದ ನೀತಿ ನಿಯಮಗಳನ್ನು ನಿರ್ಧರಿಸುವ ಬಗೆಯನ್ನು ವಿವರಿಸುವ ಅನೇಕ ಸಾಕ್ಷ್ಯಚಿತ್ರಗಳು ಬಂದಿವೆ, ಒಂದಷ್ಟು ಸಿನಿಮಾ ಧಾರವಾಹಿಗಳಲ್ಲೂ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ. ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಉದ್ಯಮಪತಿಗಳು ಸರಕಾರದ ನಿಯಮಗಳನ್ನು ನಿರ್ದೇಶಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ ಎಂದರೆ ತಪ್ಪಲ್ಲ.

ಇವತ್ತಿನ ಪ್ರಜಾವಾಣಿ ಪತ್ರಿಕೆಯಲ್ಲಿ ವೇದಾಂತ ಗಣಿ ಕಂಪನಿ ಪಕ್ಷಗಳಿಗೆ ನೀಡಿದ ಹಣದ ಬಗೆಗೊಂದು ವರದಿ ಮಾಡಿದೆ. ತನ್ನ ಅಂಗಸಂಸ್ಥೆಯಾದ ‘ಸ್ಟೆರಿಲೈಟ್ ಇಂಡಸ್ಟ್ರೀಸ್ ಇಂಡಿಯಾ’ ಮತ್ತು ‘ಸೇಸಾ ಗೋವಾ’ ಮೂಲಕ ಅನೇಕ ಪಕ್ಷಗಳಿಗೆ ದೇಣಿಗೆ ನೀಡಿದೆ(ಚಿತ್ರ ನೋಡಿ). ವೇದಾಂತ ಗಣಿಗಾರಿಕಾ ಕಂಪನಿ ವಿದೇಶಿ ಕಂಪನಿಯಾದ್ದರಿಂದ ಕಾನೂನು ಪ್ರಕಾರವಾಗಿ ಈ ಕಂಪನಿಗಳಿಂದ ಹಣ ಪಡೆಯುವುದು ಅಪರಾಧ. ದೆಹಲಿ ಹೈಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ನಡೆದು ಗೃಹ ಇಲಾಖೆ ಮತ್ತು ಚುನಾವಣಾ ಆಯೋಗಕ್ಕೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. Association for democratic reforms(ADR) ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಅನೇಕ ಕಂಪನಿಗಳು ಕೆಲವೊಮ್ಮೆ ನೇರವಾಗಿ ಮತ್ತು ಕೆಲವೊಮ್ಮೆ ರಾಜಕೀಯ ಪಕ್ಷಗಳಿಗೆ ಹಣ ತಲುಪಿಸುವುದಕ್ಕಾಗಿಯೇ ಇರುವ electoral trust ಮುಖಾಂತರ ದೇಣಿಗೆ ನೀಡುತ್ತಾರೆ. ಈ ದೇಣಿಗೆ ಕಾನೂನಾತ್ಮಕವಾಗಿಯೂ ಅಂಗೀಕೃತವೇನೋ ಹೌದು. ಆದರೆ ಕೋಟ್ಯಾಂತರ ರುಪಾಯಿಯನ್ನು ಕಂಪನಿಯೊಂದರಿಂದ ಪಡೆದುಕೊಂಡ ನಂತರ ಪಕ್ಷದ ಸರಕಾರದ ನಿಷ್ಟೆ ಯಾರೆಡೆಗೆ ಇರುತ್ತದೆ?

ಲಂಡನ್ನಿನಲ್ಲಿ ವೇದಾಂತ ವಿರುದ್ಧ ಪ್ರತಿಭಟನೆ
ಪ್ರಜಾವಾಣಿಯ ವರದಿಯಲ್ಲಿ ವೇದಾಂತ ಸಂಸ್ಥೆ ದೇಣಿಗೆ ನೀಡುವುದನ್ನು ಕಡಿಮೆ ಮಾಡಿದೆ ಎಂದು ತಿಳಿಸಲಾಗಿದೆ. ಯಾಕಾಗಿ ಕಡಿಮೆಯಾಗಿರಬಹುದು? ವೇದಾಂತ ಸಂಸ್ಥೆ ಒಡಿಸ್ಸಾದ ನಿಯಾಮಗಿರಿ ಬೆಟ್ಟದಲ್ಲಿ ಮಾಡಬೇಕಿದ್ದ ಗಣಿಗಾರಿಕೆಗೆ ಪ್ರಬಲ ಪ್ರತಿರೋಧ ಅಲ್ಲಿನ ಆದಿವಾಸಿಗಳಿಂದ ಬಂತು. ಕೊನೆಗೆ ಆದಿವಾಸಿಗಳ ದೈವಕ್ಕೆ ಸಮನಾಗಿದ್ದ ನಿಯಾಮಗಿರಿ ಬೆಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ಸಿಗಲಿಲ್ಲ. ಆಂಗ್ಲ ಚಿತ್ರ ‘ಅವತಾರ್’ ಕಥಾವಸ್ತುವೂ ಇದೆ! ಆ ಕಾರಣಕ್ಕಾಗಿಯೋ ಏನೋ ‘ಅವತಾರ್’ ವೇಷ ಧರಿಸಿ ವೇದಾಂತ ಕಂಪನಿಯ ಲಂಡನ್ ಕಛೇರಿಯೆದುರು ಪ್ರತಿಭಟನೆಯೂ ನಡೆಯಿತು. ಅನುಮತಿ ಸಿಗದ ಕಾರಣಕ್ಕಾಗಿ ದೇಣಿಗೆ ಹಣದಲ್ಲೂ ಕಡಿತವಾಯಿತಾ? 

ADR ಸಂಸ್ಥೆ ಪ್ರಕಟಿಸಿರುವ ವರದಿಯಲ್ಲಿ ಅನೇಕ ಕಂಪನಿಗಳ ಹೆಸರಿದೆ. ಆದಿತ್ಯ ಬಿರ್ಲಾರವರ GeneralElectoral trust, ಟಾಟಾ, ಭಾರ್ತಿ ಕಂಪನಿಯ electoral trust ಮುಖಾಂತರ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ. ಬೃಹತ್ ನಿರ್ಮಾಣ ಕಂಪನಿಗಳು, ಹೈಬ್ರಿಡ್ ಹತ್ತಿ ಉತ್ಪಾದಿಸುವ ಕಂಪನಿಗಳು, ಔಷಧಿ ತಯ್ಯಾರಿಸುವ ಕಂಪನಿಗಳೆಲ್ಲ ಈ ಪಟ್ಟಿಯಲ್ಲಿದೆ. ‘ಬೃಹತ್ ನಿರ್ಮಾಣ’ಗಳಿಗೆ, ಮತ್ತಷ್ಟು ಮಗದಷ್ಟು ಹೈಬ್ರಿಡ್ ತಳಿಯ ಬೀಜಗಳಿಗೆ, ಜೀವಕ್ಕೆ ಅಪಾಯಕಾರಿಯಾಗಬಲ್ಲ ಔಷಧಿಗಳಿಗೆ ಅನುಮತಿ ಸರಾಗವಾಗಿ ದೊರೆಯುವುದಕ್ಕೆ ಈ ದೇಣಿಗೆ ಸಹಾಯ ಮಾಡುತ್ತಿದೆಯಾ?

ಅಮೆರಿಕದಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಲಾಬಿ ಮಾಡುವುದಕ್ಕೆ ಸಂವಿಧಾನಾತ್ಮಕ ಒಪ್ಪಿಗೆಯಿದೆ. ಭಾರತದಲ್ಲಿ ಆ ವ್ಯವಸ್ಥೆಯಿಲ್ಲ (ಬರಲೂಕೂಡದು). ಲಾಬಿ ಇಲ್ಲದ ಕಾರಣಕ್ಕಾಗಿ ಈ ರೀತಿಯ ದೇಣಿಗೆ (ಇದು ಅಧಿಕೃತ ಮೊತ್ತ; ಅನಧಿಕೃತವಾಗಿ ಮತ್ತೆಷ್ಟಿರುತ್ತದೆಯೋ) ಚಾಲ್ತಿಗೆ ಬರುತ್ತಿದೆಯಾ? ಭಾರತದ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹರಿಸುವುದಕ್ಕೆ ಪೂರಕವಾಗಿ ಅಮೆರಿಕದ ದೈತ್ಯ ಸಂಸ್ಥೆ ವಾಲ್ ಮಾರ್ಟ್ ನಡೆಸಿದ ‘ಲಾಬಿ’ ವಿವಾದಕ್ಕೊಳಪಟ್ಟಿತ್ತು. ಇತ್ತೀಚೆಗೆ ಸ್ಟ್ರೈಟ್ ಎಂಬ ಪತ್ರಿಕೆಗೆನೀಡಿರುವ ಸಂದರ್ಶನದಲ್ಲಿ ಅರುಂಧತಿ ರಾಯ್ ಉದ್ಯಮಪತಿಗಳು ನಡೆಸುವ ಈ ರೀತಿಯ ಲಾಬಿಗಳ ಬಗೆಗೆ ವಿವರಿಸುತ್ತ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಸೃಷ್ಟಿಸಲು ಈ ಉದ್ಯಮಪತಿಗಳ ನೆರವು ಅಪಾರವಾಗಿದೆ ಎಂದು ಹೇಳಿದ್ದಾರೆ. ಮಧ್ಯ ಭಾರತದಲ್ಲಿ ಪ್ರಬಲವಾಗಿರುವ ನಕ್ಸಲ್ ಚಳುವಳಿಯಲ್ಲಿ ಭೂಮಿ ಕಳೆದುಕೊಳ್ಳುವ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಆದಿವಾಸಿಗಳು ಹೆಚ್ಚೆಚ್ಚು ಪ್ರತಿರೋಧ ತೋರುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಸೈನ್ಯ ಕಾರ್ಯಾಚರಣೆ ಮಾಡಲು ಮನಸ್ಸು ಮಾಡಿತ್ತಾದರೂ ಅರೆ ಸೈನಿಕ ಪಡೆಗಳಿಗಷ್ಟೇ ಸೀಮಿತಗೊಳಿಸಿತು. ಮೋದಿ ಸರಕಾರ ಬರುತ್ತಿದ್ದಂತೆಯೇ ನಕ್ಸಲ್ ಚಳುವಳಿಯಲ್ಲಿರುವವರು ಮತ್ತವರನ್ನು ಬೆಂಬಲಿಸುತ್ತಿರುವ ಆದಿವಾಸಿಗಳನ್ನೆಲ್ಲಾ ಪೂರ್ಣ ಸೈನಿಕ ದಾಳಿಗೆ ಆಹುತಿ ಮಾಡಬೇಕೆಂಬುದೇ ಉದ್ಯಮಪತಿಗಳ ಉದ್ದಿಶ್ಯ ಎಂದು ಹೇಳಿದ್ದಾರೆ ಅರುಂಧತಿ ರಾಯ್. ಕಾರಣ ನಕ್ಸಲರ ಪ್ರಾಬಲ್ಯವಿರುವ ಪ್ರದೇಶ ಅನೇಕ ಅಮೂಲ್ಯ ಖನಿಜಗಳನ್ನು ತನ್ನೊಡಲಿನಲ್ಲಿಟ್ಟುಕೊಂಡಿದೆ. ನಕ್ಸಲ್ ಚಳುವಳಿಯ ಬಗೆಗೆ ಒಲವು ಹೊಂದಿರುವ ಅರುಂಧತಿ ರಾಯ್ ರವರ ಹೇಳಿಕೆ ಕೊಂಚ ಉತ್ಪ್ರೇಕ್ಷೆಯಿಂದ ಕೂಡಿರುವಂಥದು ಎನ್ನಿಸಿದರೂ ನೇರವಾಗಿ ಸೈನಿಕ ದಾಳಿ ನಡೆಯದಿದ್ದರೂ ಉದ್ಯಮಪತಿಗಳಿಗೆ ಅನುಕೂಲವಾಗುವಂತೆ ಮೂಲನಿವಾಸಿ ಜನರಿಗೆ ಅನಾನುಕೂಲವಾಗುವಂತೆ ಅನೇಕ ನಿರ್ಧಾರಗಳು ರೂಪುಗೊಳ್ಳುವುದನ್ನು ಅಲ್ಲಗಳೆಯಲಾಗದು. ಕಾಂಗ್ರೆಸ್ ಬಿಜೆಪಿ ಯಾರೇ ಬಂದರೂ ಉದ್ಯಮಪತಿಗಳ ಇಶಾರೆಯಂತೆ ನಿರ್ಧಾರಗಳು ರೂಪುಗೊಳ್ಳುತ್ತವೆ ಯಾವ ಕಂಪನಿ ಯಾವ ಪಕ್ಷಕ್ಕೆ ಹತ್ತಿರವಾದುದು ಎಂಬುದು ನಿರ್ಧಾರಗಳಿಂದ ಅರಿವಾಗುತ್ತದೆ.

ರಾಜಕೀಯ ಪಕ್ಷ ಕಟ್ಟುವುದಕ್ಕೆ ಬೆಳೆಸುವುದಕ್ಕೆ ಹಣದ ಅವಶ್ಯಕತೆ ಇದ್ದೇ ಇದೆ. ಜನರಿಂದ ಸದಸ್ಯತ್ವದ ರೂಪದಲ್ಲಿ ಹಣ ಸಂಗ್ರಹಿಸಲಾಗುತ್ತದೆ. ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಬದಲಾದ ಕಾಲಮಾನದಲ್ಲಿ ಆದರ್ಶ ತತ್ವ ಸಿದ್ಧಾಂತಗಳಿಗಿಂತ ಹಣದ ಕಾರುಬಾರೇ ಹೆಚ್ಚಾಗಿರುವಾಗ, ಅನೇಕ ಕಡೆ ಚುನಾವಣೆಯ ಸಂದರ್ಭದಲ್ಲಿ ಜನರೇ ಹಣಕ್ಕಾಗಿ ಬೇಡಿಕೆಯನ್ನಿಡುವಾಗ ಹಣವಿಲ್ಲದೆ ರಾಜಕೀಯ ಪಕ್ಷವನ್ನು ಮುನ್ನಡೆಸುವುದು ಅಸಾಧ್ಯದ ಮಾತೇ ಸರಿ. ಆದರೆ ಇದಕ್ಕಾಗಿ ಪ್ರಜಾಪ್ರಭುತ್ವ ತೆರುತ್ತಿರುವ ಬೆಲೆಯೆಷ್ಟು?

No comments:

Post a Comment