Feb 8, 2014

ಸಮಗ್ರ ಅಭಿವೃದ್ಧಿ ಎಂಬ ಆಳುವವರ ದಾಳ

 ನೀಲಾ ಕೆ ಗುಲ್ಬರ್ಗ

ಭಾರತ ನಮ್ಮದು ಮಹಾನ್ ಭೂಮಿ
ಇದರ ಕತೆಯನು ಕೇಳಿರಿ ಅಣ್ಣಾ
ಇಲ್ಲಿ ಹರಿವುದು ಗಂಗೆ-ತುಂಗೆ ಕಾವೇರಿ-ಭೀಮೆ
ಸಾಗರದಲ್ಲಿ ಮುತ್ತುಗಳು ಪರ್ವತವೆಲ್ಲ ವಜ್ರಗಳು
ಆದರೂ ಹಸಿವಿನ ಸಾವು ಏಕಣ್ಣ? ರೊಟ್ಟಿಯು ತುಟ್ಟಿ ಏಕಣ್ಣ?


ಇಪ್ಪತ್ತೈದು ವರ್ಷದ ಹಿಂದೆ ಹಾಡುತ್ತ ಹಳ್ಳಿಗಳನ್ನು ಸುತ್ತುತ್ತಿದ್ದೇವು. ಬೀದರಿನ ಪ್ರಕೃತಿ ಸಂಪತ್ತು, ಸತ್ವಯುತ ಮಣ್ಣು, ಉಳುಮೆಯೋಗ್ಯ ಭೂಮಿ, ಬಿದ್ರಿ ಕಲೆಗೆ ಧಾತುವಾಗುವ ವಿಶಿಷ್ಟವಾದ ಹಾಳುಮಣ್ಣು, ಅರಣ್ಯ ಉತ್ಪನ್ನಗಳಾದ ಜೇನು, ಕಾರಿ, ಬಾರಿ, ಔಷಧಿಯುಕ್ತ ಬೇರು-ಸಸ್ಯ, ಮಳೆನೀರು ಹಿಡಿದಿಟ್ಟುಕೊಳ್ಳಲು ಯೋಗ್ಯವಾದ ಬೃಹತ್ ಗುಡ್ಡಗಳು ಜೊತೆಗೆ ಇಲ್ಲಿನ ಪ್ರಮುಖ ಬೆಳೆಗಳಾದ ಸಿರಿಧಾನ್ಯಗಳೊಂದಿಗೆ ಕಬ್ಬು ಇವೆಲ್ಲವೂ ನಮ್ಮ ನಾಡನ್ನು ಸಮೃದ್ಧಗೊಳಿಸುವ ಮುಖ್ಯ ಸಂಪನ್ಮೂಲ. ಎಲ್ಲಕ್ಕೂ ಮಿಗಿಲಾಗಿ ದುಡಿದು ಬದುಕುತ್ತಿರುವ ಅಗಾಧ ಮಾನವಸಂಪನ್ಮೂಲ. ಆದರೆ ಚುನಾವಣೆಯಲ್ಲಿ ಆಯ್ಕೆಯಾದವರು ಮಾತ್ರ ಈ ಸಂಪತ್ತನ್ನು ಬಳಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಯೋಜನೆ-ಯೋಚನೆ ಮಾಡಲೇಯಿಲ್ಲ. ನೀರಾವರಿ ಯೋಜನೆ ಪೂರ್ಣಗೊಳಿಸಿದ್ದಲ್ಲಿ ಮತ್ತು ಒಣಬೇಸಾಯಕ್ಕೆ ಉತ್ತೇಜನ ಕಲ್ಪಿಸಿದಲ್ಲಿ ಕೃಷಿಯಿಂದ ಜಿಲ್ಲೆಗೆ ಮುಖ್ಯ ಆರ್ಥಿಕ ಆದಾಯವಾಗುತ್ತಿತ್ತು. ಆದರೆ ಗೆದ್ದವರಿಗೆ ಇಂಥ ಯಾವ ಕನಸು-ಕಣ್ಣೋಟವಿಲ್ಲದಿರುವುದಕ್ಕೆ ಬಡತನ-ಅನಕ್ಷರತೆ ತಾಂಡವವಾಡುತ್ತಿದೆ. ಸಕ್ಕರೆ ಕಾಖರ್ಾನೆಗಳು ಮತ್ತು ಸಹಕಾರ ಬ್ಯಾಂಕುಗಳ ಮೇಲೆ ಹಿಡಿತವಿಟ್ಟುಕೊಂಡ ಇವರು ಜಿಲ್ಲೆಯ ಸಂಪತ್ತನ್ನು ಲೂಟಿ ಮಾಡಿ ರೈತರ ಸಾವಿಗೆ ಕಾರಣರಾದರು. ಅರಣ್ಯ ಉತ್ಪನ್ನಗಳದ್ದೇ ಮಾರುಕಟ್ಟೆ ಕಲ್ಪಿಸಿ ಅರಣ್ಯವಾಸಿಗಳಿಗೆ ಉದ್ಯೋಗ ದೊರಕುವಂತಾಗಿಸಬಹುದಿತ್ತು.

ಹಾಗೆ ನೋಡಿದರೆ ಹೈದರಾಬಾದ ಕರ್ನಾಟಕದ ಜಿಲ್ಲೆಗಳು ಅಭಿವೃದ್ಧಿಗೆ ಪೂರಕವಾದ ನಿಸರ್ಗ ಸಂಪತ್ತು ಹೊಂದಿವೆ. ಗುಲ್ಬರ್ಗವು ತೊಗರಿಕಣಜದೊಂದಿಗೆ ಸಿಮೆಂಟು ಉತ್ಪಾದನೆಗೆ ಬೇಕಾದ ಕಲ್ಲುಚಪ್ಪಡಿ ನೆಲದೊಡಲಲ್ಲಿ ಹುದುಗಿಸಿಕೊಂಡಿದೆ. ರಾಯಚೂರು ಹತ್ತಿ-ಬತ್ತ-ಜೋಳದೊಂದಿಗೆ ಬಂಗಾರ ಹೊಂದಿದೆ. ಬಳ್ಳಾರಿಯಲ್ಲಿ ಬತ್ತ-ಜೋಳ ಕಬ್ಬಿನೊಂದಿಗೆ ನೆಲದೊಳಗೆ ಅಮೂಲ್ಯವಾದ ಮ್ಯಾಂಗನೀಜ್ ಹೊಂದಿದೆ. ಕೊಪ್ಪಳದಲ್ಲಿ ಬತ್ತ-ಜೋಳದೊಂದಿಗೆ ಗ್ರಾನೈಟು. ಹೈಕ ಪ್ರದೇಶವು 65% ಕೃಷಿ ಅವಲಂಬಿತ. ಇದಕ್ಕೆ ಜೊತೆಯಾಗಿಯೇ 42% ಕೃಷಿಕೂಲಿಕಾರ್ಮಿಕರು. (ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕೂಲಿಕಾರ್ಮಿಕರು 20% ಮಾತ್ರ.) ರಾಜ್ಯದಲ್ಲಿಯೇ ಅಧಿಕ ಹೆಚ್ಚುವರಿ ಭೂಮಿಯಿರುವುದು ಉತ್ತರ ಕರ್ನಾಟಕದಲ್ಲಿ. ಭೂಸುಧಾರಣೆ ಕಾಯ್ದೆಗಳು ಬಂದವು. ಆದರೆ ಹೈಕದಲ್ಲಿ ಭೂಮಿ ಹಂಚಿಕೆಯಾಗಲಿಲ್ಲ. ಗಣಿಸಂಪತ್ತನ್ನು ಲೂಟಿ ಹೊಡೆದದ್ದು ದ್ರೋಹದ ಕತೆಯೇ ಸರಿ. ಹೈಕ ಮಹಿಳೆಯರ ದುಡಿಮೆಯ ಪ್ರಮಾಣ 35%. (ಇತರೆಡೆ 32%). ಬಿಟ್ಟಿ ದುಡಿಮೆಗೆ ಮಹಿಳೆಯ ಶ್ರಮ ಬಳಸಲಾಗುತ್ತಿದೆ.

ಇಷ್ಟೆಲ್ಲ ಸಂಪತ್ತಿಟ್ಟುಕೊಂಡು ಸಹ ನಮ್ಮ ಪ್ರದೇಶವು ಅತಿ ಹಿಂದುಳಿದದ್ದಾಗಿದೆ. ಬಡತನ, ಅಪೌಷ್ಠಿಕತೆ, ವಲಸೆ, ನಿರುದ್ಯೋಗ, ವರದಕ್ಷಿಣೆ ಸಾವು, ರೈತರ ಆತ್ಮಹತ್ಯೆಗಳು, ಅನಕ್ಷರತೆ, ಲಿಂಗಾನುಪಾತದಲ್ಲಿ ಇಳಿಕೆ, ಮೌಢ್ಯ ಇತ್ಯಾದಿ ಅನಿಷ್ಠಗಳೆಲ್ಲ ಇಲ್ಲಿಯೇ ಕಾಲೂರಿವೆ. ಮಹಿಳೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಹೆಚ್ಚಳವಾಗುತ್ತಿದೆ. ಯಾಕೆ ಹೀಗಾಗಿದೆ? ನಂಜುಂಡಪ್ಪ ವರದಿಯು ಸರಕಾರದ ಕಡತ ಸೇರಿದೆ. ಅಭಿವೃದ್ಧಿಗಾಗಿ ಮೀಸಲಿಟ್ಟ ರೂ.16000 ಕೋಟಿ ಪ್ಯಾಕೇಜ್ ಹಣ ಏನಾಯಿತು? ಸಿಫಾರಸು ಜಾರಿಗಾಗಿ ರಚಿಸಲಾದ ಕಮಿಟಿಗೆ ಗುಲ್ಬರ್ಗಾದ ಅಂದಿನ ಎಂಎಲ್ಸಿಯಾಗಿದ್ದವರೇ ಅಧ್ಯಕ್ಷರಾಗಿದ್ದರು. ಒಂದೇ ಒಂದು ಸಭೆ ನಡೆಸಿ ಯೋಜನೆ ರೂಪಿಸಲಾರದ ತಪ್ಪು ಯಾರದು? ಹನ್ನೊಂದು ವರ್ಷದ ನಂತರವಾದರೂ ಹಿಂದಣ ಹೆಜ್ಜೆಯನ್ನು ಪರಾಮರ್ಶೆ ಮಾಡಲು ಸರಕಾರ ಸಿದ್ದವಿಲ್ಲ. ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿನ ದೊಡ್ಡ ಮೊತ್ತವು ರಾಜಕೀಯ ಹಿತಾಸಕ್ತಿಗಾಗಿ ಗುಡಿಗುಂಡಾರ ಮಸಿದಿ-ದರ್ಗಾ ಕಟ್ಟಲು ಬಳಕೆಯಾಗಿರುವುದು ಮರೆಮಾಚಲಾಗುವುದಿಲ್ಲ. ಇಷ್ಟಕ್ಕೂ ನಂಜುಂಡಪ್ಪ ವರದಿ ಸಹ ಭೂಮಿಯ ಬಗ್ಗೆ ಮಾತಾಡುವುದಿಲ್ಲ. ಶೇ.24% ಭೂಮಿಯು 75% ಜನರ ಕೈಯಲ್ಲಿದೆ. ಶೇ25% ಭೂ ಹಿಡುವಳಿದಾರರ ಕೈಯಲ್ಲಿ 45%ಕ್ಕೂ ಹೆಚ್ಚು ಭೂಮಿ ಇದೆ. ಚಿಕ್ಕ ಹಿಡುವಳಿದಾರರು ಹೆಚ್ಚು ಆಹಾರಧಾನ್ಯ ಉತ್ಪಾದನೆ ಮಾಡುತ್ತಿರುವರು. ಆದರೆ ಸಾವಿರಾರು ಏಕರೆ ಭೂಮಾಲಿಕರು ಕಪ್ಪುಹಣ ಹೂಡಲು ಭೂಮಿ ಖರಿದಿ ಮಾಡಿರುವುದರಿಂದ ಆಹಾರ ಉತ್ಪಾದನೆ ಮಾಡುತ್ತಿಲ್ಲ.

ಈಗ 371ಜೆ ಬಂದಿದೆ. ಇಂಥೊಂದು ಕಾಯ್ದೆ ಬೇಕೆಂದಾಗ ನಿರ್ಲಕ್ಷ್ಯ ತೋರಿದ್ದ ಕಾಂಗ್ರೆಸ್ ಈಗ ಸ್ವರ್ಗವೇ ತಂದುಕೊಟ್ಟಂತೆ ಲಾಭ ಮಾಡಿಕೊಳ್ಳಲು ಹೊರಟಿದೆ. ಇದರಿಂದ ಪ್ರಯೋಜನವಿಲ್ಲವೆಂದು ಬಿಜೆಪಿಯು ಹಳಿಯುತ್ತಿದೆ. ಎರಡೂ ಅತಿರೇಕದ ವಾದಗಳು ಹರಿದಾಡುತ್ತಿವೆ. ಹಾಗಾದರೆ 371ಜೆ ಕುರಿತ ಮಿತಿ ಮತ್ತು ಸಾಧ್ಯತೆ ಅರಿಯಲೇಬೇಕಾಗುತ್ತದೆ. ಸಂವಿಧಾನದ 371ಜೆ ಅಡಿಯಲ್ಲಿ ಅಭಿವೃದ್ದಿಗಾಗಿ ರಾಜ್ಯ ಸರಕಾರವು ಬಜೆಟ್ಟಿನಲ್ಲಿ ಹಣ ಮೀಸಲಿಡಬೇಕೆಂಬ ಆದೇಶವೊಂದು ಕೇಂದ್ರ ಸರಕಾರದಿಂದ ಬಂದಿದೆ. ಇಷ್ಟಲ್ಲದೆ ಕೇಂದ್ರದ ಹೊಣೆ ಮತ್ತೇನಿಲ್ಲ.

ಏನಿದು 371ಜೆ? ಈ ಸಂವಿಧಾನ ತಿದ್ದುಪಡಿಯು ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಮತ್ತು ಅಭಿವೃದ್ಧಿಗಾಗಿ ಮಂಡಳಿ ರಚನೆಯ ವ್ಯಾಪ್ತಿ ಹೊಂದಿದೆ. ಈಗಾಗಲೇ ಅಭಿವೃದ್ಧಿ ಮಂಡಳಿ ರಚನೆಯಾಗಿದೆ. ಇದು ಯಾರನ್ನು ಒಳಗೊಂಡಿದೆ? ಮೇಲ್ಸಮಿತಿ ಹೇರಿದ ಯೋಜನೆಗಳು ಒಪ್ಪಬೇಕೆ? ಪರಿಷತ್ತಿನಲ್ಲಿ ಎಲ್ಲ ಚುನಾಯಿತ ಪ್ರತಿನಿಧಿಗಳು ರೊಟೆಷನ್ ಪ್ರಕಾರ ಇರುವರಂತೆ. ಇವರ ಕಾರ್ಯಯೋಜನೆಗಳೇನು? ಹೆಚ್ಕೆಡಿಬಿಯಲ್ಲಿನ ಹಣದ ದುರ್ಬಳಕೆಯ ಇತಿಹಾಸ ನಮ್ಮ ಮುಂದಿದೆ. ಇನ್ನು ಕಾಯ್ದೆ ಪ್ರಕಾರ ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ಮತ್ತು ಹೊರಜಿಲ್ಲೆಗಳಲ್ಲಿ ಶೇ.8 ಮೀಸಲಾತಿ ದೊರಕಲಿದೆ. ಉದ್ಯೋಗದಲ್ಲಿ ಗ್ರೂಪ್ ಎ,ಬಿ,ಸಿ,ಡಿಯಲ್ಲಿ ಅನುಕ್ರಮವಾಗಿ ಶೇ.70,75,80,80 ಉದ್ಯೋಗ ಮೀಸಲಾತಿ ಇರುತ್ತದೆ. ಸಮಗ್ರ ಅಭಿವೃದ್ಧಿಯ ಭ್ರಮೆ ಸೃಷ್ಟಿಸಿ ಆಳುವವರು ಸೌಲಭ್ಯವಂಚಿತರನ್ನು ಹೊರಗಿಟ್ಟು ಉರುಳಿಸಿದ ದಾಳವಿದು. ಮದ್ಯಮ-ಮೇಲ್ಮದ್ಯಮ ವರ್ಗದವರಿಗೆ ಸಿಗುವ ಕ್ವಚಿತ್ ಅವಕಾಶವಷ್ಟೆ.
ಇದು ಸಾಕೇ? ಈ ನಾಡಿನ ಸಂಕಟಗಳನ್ನು ದೂರಮಾಡಿ ನೈಜ ಅಭಿವೃದ್ಧಿ ಸಾಧ್ಯವೆ? 371ಜೆ ಈಗಾಗಲೇ ಆಂಧ್ರಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮುಂತಾದ ರಾಜ್ಯಗಳಲ್ಲಿ ಇದು ಜಾರಿಯಲ್ಲಿದೆ. ಹಾಗೆ ನೋಡಿದರೆ ತೆಲಂಗಾಣದ ಹೊರಜಿಲ್ಲೆಗಳಲ್ಲಿ ಶೈಕ್ಷಣಿಕ ಮೀಸಲಾತಿಯು 25% ಇದೆ. ಹೈಕದ ಹೊರಜಿಲ್ಲೆಗಳಲ್ಲಿ ಕೇವಲ 8%. ಇಷ್ಟಾದರೂ ಸಿಕ್ಕಿದೆಯಲ್ಲ ಎಂಬಂತೆ ಸಚಿವರುಗಳು ಬೀಗುವರು. ಇದೇನು ಭಿಕ್ಷೆಯೇ? ನಮ್ಮ ಹಕ್ಕಲ್ಲವೇನು?
ಇಷ್ಟಕ್ಕೂ 371ಜೆ ಸಂವಿಧಾನ ತಿದ್ದುಪಡಿಯ ಅವಕಾಶವು ರೈತರ ಸಾವುಗಳನ್ನು ನಿಲ್ಲಿಸಲಿಲ್ಲ. ಬಹುದೊಡ್ಡ ಸಂಖ್ಯೆಯ ಮತ್ತು ಅಭಿವೃದ್ಧಿಯ ಮೂಲ ಆಧಾರವಾದ ದುಡಿಯುವ ವರ್ಗವನ್ನು ಆಥರ್ಿಕ-ಸಾಮಾಜಿಕವಾಗಿ ಮೇಲೆತ್ತಲು ಇದರಲ್ಲಿ ಅವಕಾಶವಿದೆಯೇ? 371ಜೆ ಅವಕಾಶದ ತರುವಾಯವೂ ತೆಲಂಗಾಣದ ಪ್ರತ್ಯೇಕ ರಾಜ್ಯದ ರಕ್ತಗಾಲಿನ ಚರಿತ್ರೆ ನಮ್ಮ ಮುಂದಿದೆ. ವಿಧರ್ಭದ ರೈತರ ಸಾವುಗಳ ಸರಣಿ ಮುಂದುವರೆದಿದೆ. ಕೃಷಿವಿರೋಧಿ ನೀತಿಯಿಂದಾಗಿ ನಗರೀಕರಣವಾಗುತ್ತಿದೆ. ಕೃಷಿಯೇತರ ದುಡಿಮೆಯಲ್ಲಿ ಅವಲಂಬಿತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿಯೂ ರಕ್ಷಣೆಯಿಲ್ಲವಾಗಿದೆ. 45% ಇರುವ ದಿನಗೂಲಿ ದುಡಿಮೆಗಾರರ ಕುರಿತು ಈ ಕಾಯ್ದೆ ಮಾತಾಡುವುದೆ? ನಿರುದ್ಯೋಗದಿಂದ ಖಿನ್ನರಾಗುತ್ತಿರುವ ಯುವಶಕ್ತಿಯ ಕೈಗೆ ಕೆಲಸ ಕೊಡಲು ಅವಕಾಶವಿದೆಯೇ? ಶಿಕ್ಷಣ, ಉದ್ಯೋಗದ ಅವಕಾಶವೂ ಸಹ ಸರಕಾರಿ ವಲಯದ ವ್ಯಾಪ್ತಿ ದಾಟುವುದಿಲ್ಲ. ಸರಕಾರವೇ ಸ್ವತಃ ಶಿಕ್ಷಣ, ಉದ್ಯೋಗ ಖಾಸಗೀಕರಣಗೊಳಿಸುತ್ತಿರುವಾಗ ಈ ಕಾಯ್ದೆಯು ಮೂಗಿಗೆ ತುಪ್ಪ ಸವರಿದಂತೆ. ಸರಕಾರಿ ವ್ಯಾಪ್ತಿಯಲ್ಲಿ ಶಿಕ್ಷಣ-ಉದ್ಯೋಗ ಉಳಿದಿದ್ದು ಕೇವಲ 20% ಮಾತ್ರ. 90% ವೃತ್ತಿಪರ ಶಿಕ್ಷಣ ಸಂಸ್ಥೆಗಳು ಖಾಸಗಿ ಒಡೆತನದಲ್ಲಿವೆ. ಇದರಲ್ಲಿಯೂ ಅವಕಾಶ ಸಿಗುವುದು ಮದ್ಯಮವರ್ಗಕ್ಕೆ ಮಾತ್ರ. ವೃತ್ತಿಪರ ಕೋರ್ಸುಗಳಲ್ಲಿ ಕಡುಬಡವರಿಗೆ ಪ್ರವೇಶ ಪಡೆಯಲಾಗುತ್ತಿಲ್ಲ. ದುಬಾರಿ ವೆಚ್ಚದಿಂದ ಓದುವುದು ಬಡಮಕ್ಕಳಿಗೆ ಹೇಗೆ ಸಾಧ್ಯ? ಹೈಕದ ಶ್ರಮಿಕರ ದಿನದ ತಲಾ ಆದಾಯವು ಇಪ್ಪತ್ತು ರೂಪಾಯಿಯೂ ಇರುವುದಿಲ್ಲ. ಇವರೆಲ್ಲ ಎಲ್ಲಿಗೆ ಹೋಗಬೇಕು? ಸಿಗುವ ಅಲ್ಪ-ಸ್ವಲ್ಪ ಮೀಸಲಾತಿಯಲ್ಲಿಯೇ ತೃಪ್ತಿ ಪಡಬೇಕು ಎಂದಲ್ಲವೇ? ಈ ಚೂರು ಅವಕಾಶವಾದರೂ ದೊರೆಯಬೇಕೆಂದಲ್ಲಿ ರಾಜಕೀಯ ಇಚ್ಛೆಯಿಲ್ಲದಿದ್ದರೆ ಹಿಂದಿನ ನಂಜುಂಡಪ್ಪ ವರದಿಗಾದ ಗತಿಯೇ ಒದಗಬಹುದು. ಆದರೆ ಸೋನಿಯಾ ಬರುವರೆಂದು ರಾತೋರಾತ್ರಿ ರಸ್ತೆ ನಿಮರ್ಿಸಿದ ಪ್ರಭುತ್ವವು ರಸ್ತೆಗಳೇ ಇಲ್ಲದ ಹಳ್ಳಿಗಳ ಬಗ್ಗೆ ಮಾತಾಡುವುದಿಲ್ಲ. ನಾಲ್ಕು ವರ್ಷಗಳಿಂದ ಬಾಯ್ತೆರೆದ ರಸ್ತೆಗಳು ನಗರದಲ್ಲಿಯೇ ನರಳುತ್ತಿವೆ. ಈಗಲೂ ಪಾಳೇಗಾರಿಕೆಯಲ್ಲಿ ನರಳುತ್ತಿರುವ ಹೈಕ ಪ್ರದೇಶಕ್ಕೆ ಬೇಕಾಗಿರುವುದು ಸಮಗ್ರ ಅಭಿವೃದ್ಧಿಗಾಗಿ ಬಲವಾದ ರಾಜಕೀಯ ಇಚ್ಛೆ ಮತ್ತು ಎಚ್ಚೆತ್ತ ಜನತೆಯ ಚಳುವಳಿ. ಏಕೆಂದರೆ ನೈಜ ಕಾಳಜಿಯಿಲ್ಲದ್ದಕ್ಕಾಗಿಯೇ ಉದ್ಯೋಗ ಖಾತ್ರಿ ಕಾಯ್ದೆಯನ್ನು ನಿಷ್ಫಲಗೊಳಿಸಿ ಲೂಟಿ ಹೊಡೆಯಲು ಬಳಸುತ್ತಿರುವಲ್ಲಿ ಪ್ರಭುತ್ವದ ದೋಷ ಪ್ರಮುಖ ಕಾರಣವಾಗಿದೆ. ಇದನ್ನು ತಪ್ಪಿಸಲು ಮಂಡಳಿ ಏನು ಮಾಡುವುದು? ಪ್ರತ್ಯೇಕ ಸಿಬ್ಬಂದಿ, ಖಾತ್ರಿಯಾಗಿ ಕೂಲಿಸಂದಾಯಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಮತ್ತು ಭ್ರಷ್ಟಾಚಾರ ತಪ್ಪಿಸಲೇಬೇಕಾಗುತ್ತದೆ. ತಳಹಂತದ ಜನತೆಯನ್ನು ಒಳಗೊಳ್ಳುವ ದಿಸೆಯಲ್ಲಿ ಯೋಜನೆ ರೂಪಿಸಬೇಕಾಗುತ್ತದೆ. ವಲಸೆ ತಪ್ಪಿಸಲು, ಕೃಷಿ ಸುಧಾರಿಸಲು ಧನಸಹಾಯ, ವೃತ್ತಿಪರ ತರಬೇತಿ, ಉದ್ಯೋಗಸೃಷ್ಟಿ, ಆರೋಗ್ಯರಕ್ಷಣೆ, ಜನತೆಯ ಉತ್ಪಾದನಾ ಶಕ್ತಿ ವೃದ್ಧಿಸುವತ್ತ ಕ್ರಮ ಕೈಗೊಳ್ಳುವುದು ಹೀಗೆ ತನ್ನ ವ್ಯಾಪ್ತಿಯು ಸಮಗ್ರತೆಯತ್ತ ವಿಸ್ತರಿಸಿಕೊಳ್ಳಬೇಕಾಗುತ್ತದೆ. ಸಕ್ಕರೆ ಕಾರ್ಖಾನೆಗಳನ್ನು ಸರಕಾರವೇ ವಹಿಸಿಕೊಳ್ಳಬೇಕು. ಪ್ರಭುತ್ವವು 371ಜೆ ಮಿತಿಯಲ್ಲಿಯೇ ಅಭಿವೃದ್ಧಿ ಕಲ್ಪಿಸಬೇಕೆಂದಲ್ಲಿ ಖಾಸಗಿಯವರ ಕಪಿಮುಷ್ಟಿಯಿಂದ ಶಿಕ್ಷಣ ಸಂಸ್ಥೆಗಳನ್ನು ಸರಕಾರಿ ಸುಪದರ್ಿಗೆ ಪಡೆಯಬೇಕು. ಹೈಕ ಭಾಗದ ಖಾಲಿಯಿರುವ ಹುದ್ದೆಗಳನ್ನು ತಕ್ಷಣ ತುಂಬಬೇಕು. ಮತ್ತು ಹೊರಗುತ್ತಿಗೆ-ಗುತ್ತಿಗೆಯಾಧಾರಿತ ನೌಕರಿ ನೇಮಕವನ್ನು ಕೈಬಿಟ್ಟು ಖಾಯಂ ನೇಮಕಾತಿ ಮಾಡಿಕೊಳ್ಳಬೇಕು. ಜಾಗತೀಕರಣ-ಖಾಸಗೀಕರಣ-ಉದಾರೀಕರಣವೆಂಬ ಹುಲಿಯ ಬೆನ್ನೇರಿದ ಪ್ರಭುತ್ವವು ಕೆಳಗಿಳಿದು ಹುಲಿಯ ಹಲ್ಲು ಮುರಿಯುವ ಸಾಹಸ ತೋರುವುದೇ? ಸರಕಾರದಲ್ಲಿದ್ದವರದ್ದೇ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಹೀಗಿದ್ದಾಗ 371ಜೆ ಜಾರಿ ಮಾಡುವ ನೈತಿಕತೆ ತೋರುವರೇ?

No comments:

Post a Comment