Jan 23, 2012

ಒಂದಷ್ಟು ಆಚರಣೆಗಳ ಪೋಸ್ಟ್ ಮಾರ್ಟಮ್!


ಕೆಲವು ದಿನಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನೊಂದು ಲೇಖನ
ನೆಂಟರೊಬ್ಬರ ಮದುವೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಬಾಳೆಎಲೆ ಬಡಿಸುತ್ತಿದ್ದವನಿಗೆ ನನ್ನ ಪಕ್ಕ ಕುಳಿತಿದ್ದ ಚಿಕ್ಕಪ್ಪ ‘ಎಲೆಯ ತುದಿ ಎಡಕ್ಕೆ ಬರುವಂತೆ ಹಾಕಪ್ಪ’ ಎಂದು ಸೂಚಿಸಿದರು. ಅವನು ಅದನ್ನೇ ಪಾಲಿಸಿದ. ‘ಯಾಕೆ?’ ಪ್ರಶ್ನೆಯೆಸೆದು ಚಿಕ್ಕಪ್ಪನೆಡೆಗೆ ನೋಡಿದೆ. ‘ಎಲ್ಲಾದಕ್ಕೂ ಯಾಕೆ ಅಂತ ಕೇಳ್ತಾರಾ? ನಡೆದುಕೊಂಡು ಬಂದಿದೆ. ಸಂಪ್ರದಾಯ’ ಅವರ ಉತ್ತರ ಸಿದ್ಧವಾಗಿತ್ತು. ಉಪ್ಪು, ಕೋಸಂಬರಿ, ಬೀನಿಸ್ಸು ಪಲ್ಯ, ಮೊಸರು ಬಜ್ಜಿ ಎಲ್ಲ ಬಡಿಸಿದರು. ಎಲೆ ನೋಡಿದೆ. ಸಂಪ್ರದಾಯವೂ ಅಲ್ಲ, ಮಣ್ಣೂ ಅಲ್ಲ ಎಂದು ಎಲೆ ನೋಡುತ್ತಿದ್ದಂತೆ ತಿಳಿಯಿತು! ಹೆಚ್ಚಾಗಿ ನಾವೆಲ್ಲ ಬಲಗೈ ಉಪಯೋಗಿಸುವವರು. ಎಲೆಯ ಬಲಭಾಗ ತುದಿಯ ಭಾಗಕ್ಕಿಂತ ಅಗಲವಾಗಿರುತ್ತೆ, ತಿನ್ನಲು ಅನುಕೂಲವಾಗಲಿಕ್ಕಾಗಿ ತುದಿ ಎಡಭಾಗಕ್ಕಿರಬೇಕು ಎಂಬುದು ಸರಿಯಾದ ವಿವರಣೆ, ಮತ್ತೇನಿಲ್ಲ. ಬಹಳಷ್ಟು ಆಚರಣೆಗಳ ಹಿಂದೆ ವೈಚಾರಿಕ ಕಾರಣವಿರುತ್ತದೆಯಾದರೂ ಆ ಆಚರಣೆಗಳು ಇವತ್ತಿನ ಮಟ್ಟಿಗೆ ಎಷ್ಟು ಪ್ರಸ್ತುತ ಎಂಬುದರ ಬಗ್ಗೆ ನಾವು ಸ್ವಲ್ಪ ಯೋಚಿಸಬೇಕಷ್ಟೇ.
ಬಹಳಷ್ಟು ಮದುವೆಗಳಲ್ಲಿ ಗಂಡನ್ನು ದೇವಸ್ಥಾನದ ಬಳಿ ತಯ್ಯಾರು ಮಾಡಿ ಮುಹೂರ್ತದ ಸಮಯಕ್ಕೆ ಕರೆದುಕೊಂಡು ಬರುತ್ತಾರೆ. ಹಿಂದಿನ ಕಾಲದಲ್ಲಿ ಮದುವೆಗಳು ನಡೆಯುತ್ತಿದುದೇ ಹಳ್ಳಿಗಳಲ್ಲಿ. ಆಗೇನು ವರ ಉಳಿದುಕೊಳ್ಳುವುದಕ್ಕೆ ಲಾಡ್ಜು ಮತ್ತೊಂದು ಇರಲಿಲ್ಲ. ಗೊತ್ತಿರದ ಅಪರಿಚಿತರ ಮನೆಯಲ್ಲಿ ಉಳಿಯುವ ಕಷ್ಟ ಗಂಡಿಗೆ ಬೇಡ ಎಂದು ಎಲ್ಲರೂ ಬಹುತೇಕ ನಂಬುವ ದೇವಸ್ಥಾನಕ್ಕೆ ಮೊದಲು ಬಂದು ತಯಾರು ಮಾಡಿಸಿ ಮಂಟಪಕ್ಕೆ ಕರೆದೊಯ್ಯುತ್ತಿದ್ದರು. ದೇವಸ್ಥಾನ ಊರಿನ ಹೊರಗಿರುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಗಂಡಿನ ತಲೆ ಮೇಲೊಂದು ಕೊಡೆಯಿಡಿಯುತ್ತಿದ್ದರು, ಗಂಡಿನ ಮುಖ ಬಾಡದಿರಲಿ ಎಂದು. ಕಲ್ಲು ಮುಳ್ಳಿನ ಹಾದಿಯಲ್ಲಿ ಗಂಡಿನ ಪಾದಕ್ಕೆ ಪೆಟ್ಟಾಗದಿರಲೆಂಬ ಕಾರಣದಿಂದ ಕೆಲವೆಡೆ ಊರ ಅಗಸನ ನೆರವಿನಿಂದ ಹಾದಿಯುದ್ದಕ್ಕೂ ಸೀರಯೋ ಮತ್ತೊಂದು ಬಟ್ಟೆಯನ್ನೋ ಹಾಸಿಸುತ್ತಿದ್ದರು. ಈಗ ಇವೆಲ್ಲ ಪ್ರಸ್ತುತವಾ? ರಾತ್ರಿ ರಿಸೆಪ್ಷನ್ನಿನಲ್ಲಿ ಫೋಟೋ ಮೇಲೆ ಫೋಟೋ ಹೊಡೆಸಿಕೊಂಡು ಛತ್ರದಲ್ಲೇ ಮಲಗಿದ್ದ ಗಂಡನ್ನು ಮಾರನೇ ಬೆಳಿಗ್ಗೆ ಮುಹೂರ್ತಕ್ಕೆ ಮೊದಲು ಛತ್ರದಾವರಣದಲ್ಲೇ ಇರುವ ಪುಟ್ಟ ಮಾರ್ಬಲ್ ದೇವಸ್ಥಾನಕ್ಕೆ ಒಯ್ದು ಕರೆತರುತ್ತಾರೆ. ಮೊಸಾಯಿಕ್ ನೆಲದ ಮೇಲೂ ಬಟ್ಟೆ ಹಾಸುತ್ತಾ ಸಾಗುತ್ತಾರೆ!!
ದಕ್ಷಿಣ ಕನ್ನಡದಲ್ಲಿ ನಾಗಪೂಜೆಗೆ ವಿಶೇಷ ಸ್ಥಾನ. ಸುಬ್ರಹ್ಮಣ್ಯದಲ್ಲಂತೂ ನಾಗದೋಷ ನಿವಾರಣೆಯ ಪೂಜೆ ಒಳ್ಳೆ ಬ್ಯುಸಿನೆಸ್ಸು. ದಟ್ಟ ಕಾಡುಗಳ ಮಧ್ಯೆಯೇ ಬದುಕಿದ್ದ ಜನರಿಗೆ ಹಾವಿನ ಬಗ್ಗೆ ಭಯ ಭಕ್ತಿ ಮೂಡಿದ್ದು ಸಹಜ. ಆದರೆ ಹಾವಿರಲಿ ಹೂವು ಬದುಕಲೂ ಏದುಸಿರು ಪಡುವ ಮುಂಬಯಿಯಂಥ ಶಹರುಗಳಿಂದಲೂ ನಮ್ಮ ಕ್ರಿಕೆಟ್, ಸಿನಿಮಾ, ರಾಜಕಾರಣಿಗಳು, ವಿದ್ಯಾವಂತರೂ ಬಂದು ಸರ್ಪ ಸಂಸ್ಕಾರ ಮಾಡಿಸುವುದು ಮೂಢನಂಬಿಕೆಯಲ್ಲದೆ ಮತ್ತೇನು?
ಏಪ್ರಿಲ್ ಮೇ ತಿಂಗಳುಗಳಲ್ಲಿ ಸೂರ್ಯನ ತೆಕ್ಕೆಯಲ್ಲೇ ವಿರಮಿಸುವ ಗುಲ್ಬರ್ಗ ರಾಯಚೂರಿನಂಥ ಊರುಗಳಲ್ಲಿ ಮಹಿಳೆಯರನೇಕರು ಅಡಿಯಿಂದ ಮುಡಿಯವರೆಗೆ ಬಟ್ಟೆ ಸುತ್ತಿಕೊಂಡಿರುತ್ತಾರೆ; ಗಂಡಸರೂ ಇದಕ್ಕೆ ಹೊರತಲ್ಲ. ಬಿಸಿಗಾಳಿಯಿಂದ ರಕ್ಷಣೆ ಪಡೆಯುವದಷ್ಟೇ ಇದರ ಹಿಂದಿನ ಉದ್ದೇಶ. ಬಿಸಿಲು ಹೆಚ್ಚಿರುವ ಅರಬ್ ರಾಷ್ಟ್ರಗಳಲ್ಲಿ ಇಸ್ಲಾಂ ಬೆಳೆದು ಪ್ರಜ್ವಲಿಸಿದ ಕಾರಣ ಆರೋಗ್ಯ ರಕ್ಷಣೆಗಾಗಿ ಧರಿಸುತ್ತಿದ್ದ ಬುರ್ಖಾ ಕ್ರಮೇಣ ಧರ್ಮದ ಅಂಗವಾಗಿಬಿಟ್ಟಿರಬೇಕು. ‘ಮುಸ್ಲಿಂ ಮಹಿಳೆಯರು ಎ ಸಿ ಯೊಳಗೆ ಕುಂತರೂ ಬುರ್ಖಾ ಧರಿಸಲೇಬೇಕು’ ಎಂದಬ್ಬರಿಸುವ ಜನರ ಮನಸ್ಸು ವೈಚಾರಿಕತೆಗೆ ತೆರೆದುಕೊಳ್ಳದೆ ಮೂಢವಾಗಿದೆಯಷ್ಟೇ?
ಎಲ್ಲ ಆಚರಣೆಗಳಿಗೂ ಒಂದು ಹಿನ್ನೆಲೆ ಕಾರಣ ಇದ್ದೇ ಇರುತ್ತದೆ. ಅವುಗಳಲ್ಲಿ ಬಹಳಷ್ಟು ಹಿಂದಿನ ಕಾಲದ ಜನರ ತಿಳುವಳಿಕೆಯ ಮಟ್ಟಕ್ಕೆ ಅಂದಿನ ಅವಶ್ಯಕತೆಗಳಿಗೆ, ದಬ್ಬಾಳಿಕೆ, ಶೋಷಣೆಗೆ ಸರಿಯಾಗಿದ್ದವೇನೋ. ವೈಚಾರಿಕ ತರ್ಕಕ್ಕೆ ಒಳಪಡಿಸಿದ ನಂತರವೂ ಒಂದು ಆಚರಣೆ ಇಂದಿಗೂ ಪ್ರಸ್ತುತ ಉಪಯೋಗಕರ ಎಂದು ಖಚಿತವಾದರೆ ಖಂಡಿತ ಪಾಲಿಸೋಣ. ಆದರೆ ಸಂಪ್ರದಾಯದ ಹೆಸರಿನಲ್ಲಿ ಎಲ್ಲವನ್ನೂ ಪಾಲಿಸಿ ಮೂಢರಾಗುವುದು ಬೇಡ.
“ಅಲ್ಲ ಕಣ್ಲಾ. ನಾವೇನೋ ನಮ್ಮ ತಲೆ ಉಪಯೋಗಿಸಿ ಅವತ್ತಿಗೆ ನಮಗೆ ಸರಿ ತೋಚಿದಂಗೆ ಮಾಡ್ತಿದ್ದೋ. ಇವರಿಗೇನ್ಲಾ ಬಂದಿರೋದು ದೊಡ್ ರೋಗ. ನಮ್ ಹಿರೀಕರ ತಲೇನೇ ನಾವು ಉಪಯೋಗಿಸ್ತೀವಿ, ನಮ್ ತಲೇನ ಸೈಡಿಗಿಡ್ತೀವಿ ಅಂತಾವಲ್ಲ ಮುಂಡೇವು!” ಎಂದು ನಮ್ಮ ಹಿರೀಕರು ಇಷ್ಟಗಲ ಬಾಯಿ ತೆರೆದು ನಮ್ಮನ್ನು ನೋಡಿ ನಗಬಾರದಲ್ಲವೇ?
-      ಡಾ ಅಶೋಕ್. ಕೆ. ಆರ್

2 comments:

  1. gurugalige namaskaara... neevu heliddu aksharasaha nija.. adare namma hiriyarige idara arivu moodisuvudu hege.. ee sampradayagalella namma janagalalli oggibittide...satya enu antha thorsidru jana adanna namballa! neev maadodu sri alla.. heeg madri andre.. devranne prashne maado ashtu dhairyana ninge anthare!!
    shanivaara shukravaara haircut maadisbeda.. kathladmele nail cut maadbeda!! ivella eegina kaalakke aprasthutha!!
    onthara helbeku andre ee acharanegalella namma gene galalli serkondidhe alva??

    ReplyDelete
    Replies
    1. ಪ್ರಜು ದ ಡಾನ್ ಅವರೇ, ಕತ್ತಲಾದ್ಮೇಲೆ ಉಗುರು ಕತ್ತರಿಸಬಾರದು ಎನ್ನುವುದು ಅದು ಆಹಾರದಲ್ಲಿ ಸೇರದಿರಲಿ ಎನ್ನುವ ಕಾರಣಕ್ಕೆ. ಆದ್ದರಿಂದ ಅದು ಅಪ್ರಸ್ತುತ ಅಲ್ಲ. ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುತ್ತದೆ.

      Delete