Dec 1, 2011

ಶುಚಿಗೊಳ್ಳದ ಮನಗಳು ಮತ್ತು ಮಡೆ ಮಡೆ ಸ್ನಾನ


 
ಜನರ ನಂಬಿಕೆಗಳೇ ಮೌಡ್ಯದಿಂದ ಕೂಡಿರುವಾಗ ಆಳುವ ‘ಜವಾಬ್ದಾರಿಯುತ’ ಸರಕಾರಗಳು ಆ ಮೌಡ್ಯವನ್ನು ಮತ್ತಷ್ಟು ಉತ್ತೇಜಿಸಬೇಕೋ ಅಥವಾ ಇಂದಿನವರ ಭಾವನೆಗಳಿಗೆ ಕೊಂಚ ಧಕ್ಕೆಯಾದರೂ ಚಿಂತಿಲ್ಲ ಎಂಬ ಧೃಡಮನಸ್ಸಿನಿಂದ ಆ ಮೌಡ್ಯಗಳನ್ನು ತೊಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೋ?

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ವಾರ್ಷಿಕ ಮಡೆಸ್ನಾನ ಅಥವಾ ಉರುಳುಸೇವೆ ಆಚರಣೆ ಈ ವರ್ಷವೂ ಅವ್ಯಾಹತವಾಗಿ ಮುಂದುವರೆದಿದೆ. ಕಳೆದ ವರ್ಷ ಬಹಳಷ್ಟು ಸಂಘಟನೆಗಳ ವಿರೋಧದ ನಡುವೆಯೂ ‘ಜನರ ಭಕ್ತ ಮನಸ್ಸನ್ನು’ ಘಾಸಿಗೊಳಿಸಲಿಚ್ಛಿಸದ ಸರಕಾರದ ರಕ್ಷಣೆಯಲ್ಲಿ ಮಡೆಸ್ನಾನ ನೆರವೇರಿತು. ಬ್ರಾಹ್ಮಣರು ಉಂಡೆದ್ದ ಎಲೆಯ ಮೇಲೆ ಉರುಳಾಡಿ ಭಕ್ತ ವರ್ಗ ಆನಂದತುಂದಲಿತಗೊಂಡಿತು. ಸುಬ್ರಹ್ಮಣ್ಯ ಕಣ್ಣು ಮುಚ್ಚಿಕುಳಿತಿದ್ದನೇನೋ?! ಈ ವರ್ಷವೂ ಮತ್ತದೇ ಮುಂದುವರಿಕೆ. ಈ ಬಾರಿ ಮಡೆಸ್ನಾನಕ್ಕೆ ಅವಕಾಶವಿಲ್ಲ ಎಂದು ಮೊದಲು ಉಚ್ಛರಿಸಿದ್ದ ದೇವಸ್ಥಾನದ ಆಡಳಿತಾಧಿಕಾರಿ ಸುಂದರಭಟ್ ‘ಆಚರಣೆಗೆ ಭಕ್ತಾಧಿಗಳಿಂದ ಭಾರಿ ಬೇಡಿಕೆ ಬಂದ’ ಕಾರಣವೊಡ್ಡಿ ನಿಷೇಧವನ್ನು ಹಿಂಪಡೆದಿದ್ದಾರೆ. ಎಂಜಲೆಲೆಯ ಮೇಲೆ ಉರುಳುವ ಸುಖದಲ್ಲಿ ಭಕ್ತಾದಿಗಳು, ಉಂಡೆದ್ದ ಬ್ರಾಹ್ಮಣರ ಮನಸ್ಸುಗಳ ವಿವೇಕದ ಬೆಳಕು ನಂದಿಹೋಗಿದೆ.

ಜನರ ನಂಬಿಕೆಗಳು ಅದು ಮೌಡ್ಯವಾಗಿದ್ದರೂ, ಅದರ ಸಮರ್ಥಿಸಿಕೊಳ್ಳುವಿಕೆ, ಭಕ್ತರ ಒತ್ತಾಯದ ಮೇರೆಗೆ ಸರ್ವವನ್ನೂ ಅಧಿಕೃತವಾಗಿ ಮಾನ್ಯ ಮಾಡುವುದು ಎಷ್ಟರ ಮಟ್ಟಿಗೆ ಸರಿ? ‘ಬಹುಜನರ, ಭಕ್ತರ ಮನಸ್ಸನ್ನು ನೋಯಿಸಲಿಚ್ಛಿಸದೆ’ ಎಂಬ ವಾಕ್ಯವನ್ನೇ ಹಿಂದೆ ಆಳಿದವರೆಲ್ಲ ಬಳಸಿಕೊಂಡಿದ್ದರೆ ಸತಿ ಪದ್ಧತಿ, ಬಾಲ್ಯ ವಿವಾಹ, ಸಕೇಶಿ ಪದ್ಧತಿ, ದೇವದಾಸಿ ಪದ್ದತಿ, ಅಸ್ಪೃಶ್ಯತೆಗಳೆಲ್ಲ ಇಂದೂ ಕೂಡ ಬಹಿರಂಗವಾಗೇ ಆಚರಣೆಯಲ್ಲಿರಬೇಕಿತ್ತಲ್ಲವೇ? ಅವುಗಳನ್ನೆಲ್ಲ ಆಚರಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಕಾನೂನುಗಳನ್ನು ಮಾಡಿದ್ದೂ ಕೂಡ ಮಡೆಸ್ನಾನದ ಸಮರ್ಥಕರ ದೃಷ್ಟಿಯಲ್ಲಿ ತಪ್ಪೇ ಇರಬೇಕು.

ಹಿಂಗ್ಯಾಕೋ ?! - ಇಲ್ಲಿ ಬ್ರಾಹ್ಮಣರು ಕೂಡ ಉರುಳುತ್ತಾರೆ ಎಂಬ ಸಮರ್ಥನೆ ಕೊಡುವವರು ಹೆಚ್ಚುತ್ತಿದ್ದಾರೆ. ಯಾರೇ ಉರುಳಿದರು ಅದು ಮೂಡನಂಬಿಕೆಯೇ ಅಲ್ಲವೇ? ಹೋಗಲಿ ಅವರ ಮಾತಿನಂತೆ ಹೋಗುವುದಾದರೆ ಇತರೆ ಜಾತಿ ವರ್ಗದವರು ಉಂಡ ಎಲೆಗಳ ಮೇಲೆ ಉರುಳಲು ಬ್ರಾಹ್ಮಣರು ತಯಾರಿದ್ದಾರ?..

No comments:

Post a Comment