Nov 26, 2018

ಡ್ರಾಫ್ಟ್ ಮೇಲ್: ಭಾಗ 4 - ಬಟವಾಡೆಯಾಗದ ಪತ್ರ ಮತ್ತು ಗೌತಮ # 2

ಚೇತನ ತೀರ್ಥಹಳ್ಳಿ. 
To: editor@kt.com

ವಿಷಯ: ನಿಮ್ಮ ಪತ್ರಿಕೆಯ ಪಕ್ಷಪಾತ ಧೋರಣೆ ಕುರಿತು

ನಮಸ್ತೇ

ಗೋಧ್ರಾ ಹಿಂಸಾಚಾರ ಕುರಿತು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿದೆ. ನೀವು ಗೋಧ್ರಾದಲ್ಲಿ ಹಿಂದುತ್ವವಾದಿಗಳು ನಡೆಸಿದ ವಿಧ್ವಂಸದ ಬಗ್ಗೆ ಬರೆದುದೆಲ್ಲವೂ ಸರಿಯಾಗಿದೆ. ಆದರೆ, ಅದೇ ವೇಳೆ ನೀವು ಮುಸಲ್ಮಾನರು ನಡೆಸಿದ ದುಷ್ಕøತ್ಯಗಳನ್ನು ಸಂಪೂರ್ಣ ಮರೆಮಾಚಿದ್ದೀರಿ.

ಮುಗ್ಧ ಕೌಸರಳ ಭ್ರೂಣ ಬಗೆದು ಎಂದೆಲ್ಲ ಅತಿರಂಜಿತವಾಗಿ ಬರೆದಿರುವ ಲೇಖಕರು (ಆ ಹೆಣ್ಣುಮಗಳ ಅವಸ್ಥೆಗೆ ಪ್ರಾಮಾಣಿಕ ಸಂತಾಪವಿದೆ. ಆ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇನೆ) ಕಾಶ್ಮೀರಿ ಪಂಡಿತಾಯಿನರನ್ನು ಜೀವಂತ ಗರಗಸದಲ್ಲಿ ಕೊಯ್ದಿದ್ದು ಮರೆತೇಬಿಟ್ಟಿದ್ದಾರೆ.

ಇಷ್ಟಕ್ಕೂ ಕರಸೇವಕರನ್ನು ರೈಲಿನ ಬೋಗಿಯಲ್ಲಿ ಕೂಡಿ ಹಾಕಿ ಜೀವಂತ ಸುಡದೆ ಹೋಗಿದ್ದರೆ, ಈ ಪ್ರತೀಕಾರಕ್ಕೆ ಅವರು ಇಳಿಯುತ್ತಿದ್ದರೆ?

ದಯವಿಟ್ಟು ನಿಷ್ಪಕ್ಷಪಾತವಾದ ಲೇಖನಗಳನ್ನು ಪ್ರಕಟಿಸಲು ವಿನಂತಿ.

ವಂದೇ,

ಚಿನ್ಮಯಿ ಕೆಸ್ತೂರ್
ಗೌತಮ #2

ಗೌತಮನಿಗೆ ಮಾಡಲು ಸಾಕಷ್ಟು ಕೆಲಸವಿತ್ತು. ಆಯುರ್ವೇದ ವೈದ್ಯನಾಗಿದ್ದರೂ ಅದೊಂದು ಕೆಲಸ ಬಿಟ್ಟು ಮಿಕ್ಕೆಲ್ಲದರಲ್ಲೂ ವಿಪರೀತ ಆಸಕ್ತಿ. ಆಯುರ್ವೇದ ಹೇಗೆ ಈ ದೇಶದ ಹೆಮ್ಮೆಯ ಕೊಡುಗೆ ಅನ್ನೋದನ್ನು ಬಗೆಬಗೆಯಾಗಿ ವಿವರಿಸುತ್ತಾ, ಜಗತ್ತಿನ ಸಮಸ್ತವನ್ನೂ ಆಯುರ್ವೇದದ ಪಾದದಡಿ ತಂದು ಕೆಡವುದರಲ್ಲಿ ನಿಪುಣನಾಗಿದ್ದ.

“ಹಾಗೇ ಬಿಟ್ಟರೆ, ನೀನು ಅಲೋಪತಿಗೂ ಆಯುರ್ವೇದವೇ ಮೂಲ ಅಂತ ಪ್ರೂವ್ ಮಾಡಿಬಿಡ್ತೀಯ” ಅಂತ ರೇಗಿಸ್ತಿದ್ದಳು ಚಿನ್ಮಯಿ. ಅವನು ಅದಾಗಲೇ ಆಯುರ್ವೇದ ಕಲಿತ ಅರಬರು ಯುನಾನಿ ವೈದ್ಯಕೀಯ ಪದ್ಧತಿಯನ್ನು ರೂಪಿಸಿದರು ಎಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದ.

ಅವನ ಈ ಆಯುರ್ವೇದದ ವ್ಯಾಮೋಹ ಚಿನ್ಮಯಿಗೊಂದು ತಲೆನೋವಾಗಿಬಿಟ್ಟಿತ್ತು. ಮಣ್ಣಿನ ಸೋಪು, ಟೂತ್ ಪೇಸ್ಟು, ಗೋಮೂತ್ರದ ಫೇಸ್ ವಾಶ್ ಎಂದೆಲ್ಲ ಪ್ರಯೋಗಗಳನ್ನು ಮಾಡಲುಹೋಗಿ ಅವಳ ಮುಖ ಜಬರೆದ್ದ ಅಂಗಳವಾಗಿಬಿಟ್ಟಿತ್ತು.

ಆಯುರ್ವೇದ ಅವನ ಪಾಲಿಗೆ ಎಲ್ಲವನ್ನೂ ಭಾರತಕ್ಕೆ ತಂದು ಜೋಡಿಸುವ ಕಾಲುವೆಯಾಗಿತ್ತು. ಅಮೆರಿಕಾ ಅರಿಷಿಣದ ವೈದ್ಯಕೀಯ ಉತ್ಪನ್ನಗಳ ಪೆಟೆಂಟ್ ಪಡೆಯಿತು ಎಂದು ಊರು ಕೇರಿ ಒಂದು ಮಾಡಿ ಭಾಷಣ ಬಿಗಿದಿದ್ದ. ಇನ್ನೇನು ನಮ್ಮ ಮನೆಯ ತಾಯಂದಿರು ಕೆನ್ನೆಗಳಿಗೆ ಅರಿಷಿಣ ತೊಡೆಯುವಂತೆಯೇ ಇಲ್ಲ ಎಂದು ಕೂಗಾಡಿದ್ದ.

ಚಿನ್ಮಯಿಗೆ ಇದೆಲ್ಲ ಒಂದು ಮೋಜಿನಂತೆ ಕಾಣುತ್ತಿತ್ತು. ಚಿತ್ರಾನ್ನಕ್ಕೂ ಅರಿಷಿಣ ಹಾಕದ ಚಿನ್ಮಯಿ, ಅರಿಷಿಣ ಮೂಲ ಭಾರತವೇನಾ ಅಂತ ಕೆಳಲುಹೋಗಿ ಸಮಾ ಬೈಸಿಕೊಂಡಿದ್ದಳು.

ಅವಳು ಚಿತ್ರಾನ್ನಕ್ಕೂ ಅರಿಷಿಣ ಹಾಕದ ವಿಷಯ ತೆಗೆದಿದ್ದು ಗೌತಮನೇ.

“ನೀವು ನಕ್ಸಲೈಟರು ಭಾರತೀಯವಾದ ಎಲ್ಲವನ್ನೂ ದ್ವೇಷಿಸ್ತೀರಿ. ನಿನಗೆ ಅರಿಷಿಣ ಕಂಡರೆ ಆಗೋದೇ ಇಲ್ಲ. ಅದಕ್ಕೇ ನೀನು ಚಿತ್ರಾನ್ನಕ್ಕೂ ಬಳಸೋದಿಲ್ಲ” ಅಂತ ಅವಳ ಮೇಲೆ ಹಾರಾಡಿದ್ದ.

ಚಿನ್ಮಯಿ ಈಗಲೂ ಅರಿಷಿಣ ಹಾಕೋದಿಲ್ಲ. ಅದಕ್ಕೆ ಕಾರಣ, ಡಬ್ಬಿ ಹುಡುಕುವ ಸೋಮಾರಿತನವಷ್ಟೆ!

ಅಂದಹಾಗೆ, ಚಿನ್ಮಯಿ ಮಾತೆತ್ತಿದರೆ ಗಂಡಸರನ್ನು ಬೈಯುತ್ತಿದ್ದಳು. ಅವಳಪ್ಪನ ಕರ್ಮಠತನ ಸಾಕಾಗಿ ಬ್ರಾಹ್ಮಣ್ಯವನ್ನೂ ಬೈಯುತ್ತಿದ್ದಳು. ಅತ್ತೆ ಮನೆಯ ಆಸ್ತಿ ರಗಳೆ ಶ್ರೀಮಂತಿಕೆಯ ಬಗ್ಗೆ ರೇಜಿಗೆ ಹುಟ್ಟಿಸಿತ್ತು. ಈ ಎಲ್ಲ ಅನುಭವಗಳು ಅವಳ ವ್ಯಕ್ತಿತ್ವವನ್ನು ರೂಪಿಸಿದ್ದವು. ಗೌತಮನ ಪ್ರಕಾರ ಗಂಡಸರನ್ನು, ಬ್ರಾಹ್ಮಣರನ್ನು, ಸಂಪ್ರದಾಯಗಳನ್ನು ಬೈಯುವವರು ನಕ್ಸಲೈಟರು! ಆದ್ದರಿಂದಲೇ ಅವನು ಚಿನ್ಮಯಿಯನ್ನು ಪದೇಪದೇ ನಕ್ಸಲೈಟ್ ಅಂತ ರೇಗಿಸ್ತಿದ್ದುದು.

ಅದೆಲ್ಲ ಏನೇ ಇದ್ದರೂ ಗೌತಮನಿಗೆ ಚಿನ್ಮಯಿಯ ಮೇಲಿದ್ದ ಮಮತೆ ದೊಡ್ಡದು. ತವರು ಹಸಿರಾಗಿದ್ದೂ ಅನಾಥಳಾಗಿದ್ದ ಚಿನ್ಮಯಿ, ಕ್ಷಣಮಾತ್ರವೂ ಅದನ್ನು ನೆನೆಯದಂತೆ ಕಾಳಜಿ ವಹಿಸಿದ್ದ. ಎಷ್ಟೆಂದರೆ, ಅವಳಿಗೆ ತಾನೊಬ್ಬ ವಿಧವೆ ಅನ್ನೋದು ಮಾತ್ರವಲ್ಲ, ತನಗೂ ಒಂದು ಕಾಲದಲ್ಲಿ ಮದುವೆಯಾಗಿತ್ತು ಅನ್ನೋದೇ ಮರೆತುಹೋಗಿತ್ತು.

ಆದರೂ ಗೌತಮನ ಕುರಿತು ಚಿನ್ಮಯಿಯ ಒಳಗೊಂದು ನಿರಾಕರಣೆ ಹುಟ್ಟಿಕೊಂಡಿತ್ತು. ಅವನು ಕೆಲವೊಮ್ಮೆ ಅವಳ ವಿಚಾರಗಳೇ ಬದಲಾಗುವಂತೆ ಪ್ರಭಾವ ಬೀರಿಬಿಡುತ್ತಿದ್ದ. ಅಂಥದೊಂದು ಪ್ರಭಾವಿ ಘಳಿಗೆಯಲ್ಲೇ ಅವಳು ಪತ್ರಿಕೆಯೊಂದರ ಸಂಪಾದಕರಿಗೆ ಗೋಧ್ರಾ ಲೇಖನ ಕುರಿತು ಪ್ರತಿಕ್ರಿಯೆ ಬರೆದಿದ್ದು.

ಚಿನ್ಮಯಿ ಎಷ್ಟೇ ಪ್ರಭಾವಿತಳಾದರೂ ಜಗ್ಗುವ ಜಾಯಮಾನದವಳಲ್ಲ. ಗೋಧ್ರಾ ಕಾಂಡದ ಹಿನ್ನೆಲೆ, ಬಾಬ್ರಿ ಮಸೀದಿ ಧ್ವಂಸದಿಂದ ಹುಟ್ಟಿಕೊಂಡ ಪರಸ್ಪರ ಪ್ರತಿಕ್ರಿಯಾತ್ಮಕ ಹಿಂಸೆಗಳೆಲ್ಲವನ್ನೂ ತನಗೆ ಸಿಕ್ಕ ಸೀಮಿತ ಅವಕಾಶದಲ್ಲೆ ಜಾಲಾಡಿದಳು.

ಹಾಗೆಂದೇ, ಗೌತಮನ ವೀರಾವೇಶದ ಪ್ರೇರಣೆಯಿಂದ ಮೇಲ್ ಬರೆದವಳು, ಅದನ್ನು ಕಳಿಸದೆ ಉಳಿದಿದ್ದಳು.

ಅವಳಲ್ಲಿ ಸಾಕಷ್ಟು ಪ್ರಶ್ನೆಗಳಿದ್ದವು. ಒಂದು ಘಟನೆ ನಡೆದಾಗ ಮತ್ತೊಂದನ್ನು ತಂದು ಅದರ ಎದುರಿಡುವುದನ್ನು ಅವಳು ಒಪ್ಪುತ್ತಿರಲಿಲ್ಲ. ಕಾಶ್ಮೀರಿ ಪಂಡಿತರ ಹೋರಾಟ ಪ್ರತ್ಯೇಕವಾಗಿ ಮಾಡಲಿ; ಅದಕ್ಕೆ ದಿನದ ಬಾಕಿ ಮುನ್ನೂರಾ ಅರವತ್ನಾಲ್ಕು ದಿನಗಳಿವೆ. ಗೋಧ್ರಾ ವಿಷಯ ಎತ್ತಿದ ದಿನವೇ ಅದರ ಚರ್ಚೆ ಯಾಕಾಗಬೇಕು ಅನ್ನೋದು ಅವಳ ಪ್ರಶ್ನೆಯಾಗಿತ್ತು.

ಗೌತಮ ಅದಕ್ಕೂ ಉತ್ತರ ಕೊಡುತ್ತಿದ್ದ. ಘಜ್ನಿ ಘೋರಿ ಇಂದ ಶುರು ಮಾಡುತ್ತಿದ್ದ. ಹೇಗೆ ಭಾರತೀಯ ಸಂಸ್ಕೃತಿ ನಾಶವಾಯಿತೆಂದು ಹೇಳುತ್ತಿದ್ದ. ಚಿನ್ಮಯಿ ಕಾಂಬೋಡಿಯಾದಿಂದ ಹಿಡಿದು ಇಂಡೋನೇಶಿಯಾವರೆಗೆ ಮೂಲ ಧರ್ಮ ಮಂಗಮಾಯವಾಗಿ ಭಾರತೀಯ – ಬೌದ್ಧೀಯತೆಗಳು ಬೇರೂರಿದ ಬಗ್ಗೆ ಹೇಳುತ್ತಿದ್ದಳು.

ಅವಳ ಪ್ರಕಾರ “ಖಡ್ಗದ ತುದಿಯಿಂದ ಹೆದರಿಸಿದರೂ, ಮಾತಲ್ಲಿ ಮರುಳು ಮಾಡಿದರೂ ಎರಡರ ಪರಿಣಾಮ ಒಂದೇ. ಮೂಲನಿವಾಸಿಗಳ ನಾಶ. ಅಲ್ಲದೆ, ಭಾರತದ ರಾಜರು ಪೂರ್ವ ದೇಶಗಳಿಗೆ ಹೋಗಿ ಎಲ್ಲೆಲ್ಲಿ ಏನು ಮಾಡಿದ್ದರೋ ಯಾರಿಗೆ ಗೊತ್ತು!?

ಚಿನ್ಮಯಿಯ ಪ್ರಶ್ನೆಗಳು ಗೌತಮನಿಗೆ ಕಿರಿಕಿರಿ ಮಾಡುತ್ತಿದ್ದವು. ಇದರಿಂದಾಗಿ ಅವರ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು. ಆಗ ತಾನೆ ಚೂರು ಪಾರು ಬರೆಯಲು ಶುರು ಮಾಡಿದ್ದ ಚಿನ್ಮಯಿ, ಅವಕಾಶ ಕಳೆದುಕೊಳ್ಳುವ ಭಯಕ್ಕೆ ಹೀಗೆಲ್ಲ ಮಾತಾಡುತ್ತಾಳೆಂದು ಅವನು ಕೆಣಕುತ್ತಿದ್ದ.

ಅವಳು ಜಗಳ ಬೆಳೆಸುವ ಆಸಕ್ತಿ ಇಲ್ಲದೆ, “ಎಷ್ಟಾದರೂ ನಾಳೆ ನಾನು – ನೀನು ನಾಳೆ ಗೋಪಿಕಾದಲ್ಲಿ ಒಟ್ಟಿಗೆ ಊಟ ಮಾಡಲೇಬೇಕು”ಅನ್ನುತ್ತಾ ನಕ್ಕು ಸುಮ್ಮನಾಗುತ್ತಿದ್ದಳು.

ಪಿಜಿಯಲ್ಲಿ ಇರುತ್ತಿದ್ದ ಚಿನ್ಮಯಿಗೆ ಸಿಗುತ್ತಿದ್ದ ವಾರಾಂತ್ಯಗಳು ಗೌತಮನೊಡನೆ ಇಂಥಾ ಜಗಳ ಮತ್ತು ರಾಜಿಗಳಲ್ಲಿ ಕಳೆದುಹೋಗುತ್ತಿದ್ದವು; ಮತ್ತು, ಬಟ್ಟೆ ಒಗೆಯುವುದರಲ್ಲಿ!

ಆಮೇಲೆ ಗೌತಮ ಆಯುರ್ವೇದದಿಂದ ದೇಶಭಕ್ತಿ ಜಾಗೃತಗೊಳಿಸುವ ಪ್ರಾಜೆಕ್ಟಿನಲ್ಲಿ ಬ್ಯುಸಿಯಾಗಿಹೋದ.

ಚಿನ್ಮಯಿ ತನ್ನ ಮೊದಲ ಕೆಲಸ ಬಿಟ್ಟು ಮತ್ತೊಂದರ ಹುಡುಕಾಟಕ್ಕೆ ತೊಡಗಿದಳು.



ಸೇರಿಕೊಂಡ ವರ್ಷದೊಳಗೇ ಅವಳು ಕೆಲಸ ಬಿಡಲು ಕಾರಣವೇನೆಂದರೆ…

No comments:

Post a Comment