May 8, 2018

ಬಾಜಪದೊಂದಿಗೆ ಮೈತ್ರಿ! ಸ್ಪಷ್ಟನಿಲುವೊಂದನ್ನು ತೆಗೆದುಕೊಳ್ಳಬೇಕಿರುವ ಜನತಾದಳದ ಅನಿವಾರ್ಯತೆ

ಸಾಂದರ್ಭಿಕ ಚಿತ್ರ 
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸದ್ಯದ ಮಟ್ಟಿಗೆ ಕರ್ನಾಟಕದ ಜಾತ್ಯಾತೀತ ಜನತಾದಳದಷ್ಟು ಗೊಂದಲದಲ್ಲಿರುವ ಪಕ್ಷ ಇನ್ನೊಂದಿರುವಂತೆ ಕಾಣುತ್ತಿಲ್ಲ. ತನ್ನೆಲ್ಲ ರಾಜಕೀಯ ಮೇಲಾಟಗಳ ಹೊರತಾಗಿಯೂ ಕರ್ನಾಟಕದ ಜನತೆಗೆ ಕಾಂಗ್ರೆಸ್ ಮತ್ತು ಬಾಜಪದ ಹೊರತಾದ ಮೂರನೇ ಆಯ್ಕೆಯೊಂದನ್ನು ತನ್ನ ಮೂಲಕ ನೀಡಿದ್ದ ಜನತಾದಳದ ವರ್ತಮಾನದ ರಾಜಕೀಯ ನಡವಳಿಕೆಗಳಿಂದ ಕರ್ನಾಟಕದ ಜನತೆಗೆ ಭ್ರಮನಿರಸನವಾಗಿದೆ. ದಿನದಿಂದ ದಿನಕ್ಕೆ ತಾನು ತೆಗೆದುಕೊಳ್ಳುತ್ತಿರುವ ನಿರ್ಣಯಗಳಿಂದ ಮತ್ತು ಗೊಂದಲಪೂರ್ಣ ನಡವಳಿಕೆಯಿಂದಾಗಿ ಅದು ಒಟ್ಟು ಜನತೆಯಲ್ಲಿ ಮಾತ್ರವಲ್ಲದೆ, ತನ್ನದೇ ಕಾರ್ಯಕರ್ತರ ಪಡೆಯಲ್ಲಿಯೂ ನಿರಾಸೆಯನ್ನುಂಟು ಮಾಡಿದೆ. ಜನತಾದಳದ ಈ ಗೊಂದಲಗಳು ಇವತ್ತಿನದೇನಲ್ಲ. 2006ರಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾತ್ರೋರಾತ್ರಿ ಬಾಜಪದ ಜೊತೆ ಸೇರಿ ಸರಕಾರ ರಚಿಸಿದ ದಿನ ಶುರುವಾದ ಅದರ ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ವರ್ಷಗಳಲ್ಲಿ ಅದು ಪ್ರಯತ್ನವನ್ನೇನೂ ಮಾಡಿದಂತಿಲ್ಲ.
ಇದೀಗ ಹಲವು ಚುನಾವಣಾ ಪೂರ್ವ ಸಮೀಕ್ಷೆಗಳ ವರದಿಗಳು ಹೊರಬಿದ್ದಿದ್ದು ಕರ್ನಾಟಕದಲ್ಲಿ ಅತಂತ್ರ ವಿದಾನಸಭೆಯೊಂದು ನಿರ್ಮಾಣವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಸುಮಾರು ಇಪ್ಪತ್ತರಿಂದ ನಲವತ್ತರಷ್ಟು ಸ್ಥಾನಗಳನ್ನು ಪಡೆಯಲಿರುವ ಜನತಾದಳ ಕಿಂಗ್ ಮೇಕರ್ ಆಗುವುದು ಬಹುತೇಕ ಖಚಿತವಾದಂತಿದೆ. ಇಂತಹ ಸಂದರ್ಭದಲ್ಲಿ ಜನತಾದಳ ಯಾವ ರಾಷ್ಟ್ರೀಯ ಪಕ್ಷದೊಂದಿಗೆ ಮೈತ್ರಿಗೆ ಮನಸ್ಸು ಮಾಡಬಹುದೆಂಬುದೇ ಇವತ್ತಿನ ಅತ್ಯಂತ ತುರ್ತಾದ ಪ್ರಶ್ನೆಯಾಗಿದೆ. ಮೊನ್ನೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದೇವೇಗೌಡರು ತಾವು ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಾಜಪದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ತಮ್ಮ ಪುತ್ರ ಕುಮಾರಸ್ವಾಮಿಯವರೇನಾದರು ಹಾಗೆಮಾಡಿದರೆ ಅವರ ಜೊತೆ ಸಂಬಂದ ಮುರಿದುಕೊಳ್ಳುವುದಾಗಿ ಕಡ್ಡಿತುಂಡು ಮಾಡಿದಂತೆ ಹೇಳಿದ್ದಾರೆ. ನಂತರ ಕುಮಾರಸ್ವಾಮಿಯವರೂ ಇದನ್ನು ಅನುಮೋದಿಸಿದ್ದಾರೆ. ಈ ವಿಚಾರದಲ್ಲಿ ನಾವು ದೇವೇಗೌಡರ ಮಾತುಗಳನ್ನು ನಂಬಬಹುದಾದರೂ ಕುಮಾರಸ್ವಾಮಿಯವರು ಬಾಜಪದ ಜೊತೆ ಮೈತ್ರಿಮಾಡಿಕೊಳ್ಳುವುದಿಲ್ಲವೆಂಬ ಮಾತನ್ನು ನಂಬಲು ಯಾವುದೇ ಕಾರಣಗಳಿಲ್ಲ. ಯಾಕೆಂದರೆ ಕಳೆದ ಐದು ವರ್ಷಗಳಿಂದ ಕುಮಾರಸ್ವಾಮಿಯವರು ರಾಜ್ಯದಲ್ಲಿ ತಮ್ಮ ಪಕ್ಷವನ್ನು ಮುನ್ನಡೆಸುತ್ತಿರುವ ರೀತಿಯನ್ನು ಅವರ ಆದ್ಯತೆಗಳನ್ನು ನೋಡುತ್ತಾ ಹೋದರೆ ಈ ಮಾತು ಅರ್ಥವಾಗುತ್ತದೆ. ಇದಕ್ಕೆ ಕಾರಣ ಪಕ್ಷದ ರಾಷ್ಟ್ರಾದ್ಯಕ್ಷರಾದ ಮಾಜಿ ಪ್ರದಾನಿಗಳಾದ ಸನ್ಮಾನ್ಯಶ್ರೀ ದೇವೇಗೌಡರು ಅಪ್ಪಟ ಜಾತ್ಯಾತೀತವಾದಿಯಾಗಿ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದರ ರಾಜ್ಯಾದ್ಯಕ್ಷರಾದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿಯವರು ಜಾತ್ಯಾತೀತೆಯ ಯಾವುದೇ ತತ್ವಗಳನ್ನು ಗಂಬೀರವಾಗಿ ತೆಗೆದುಕೊಳ್ಳದೆ ಆಯಾ ಸಂದರ್ಭಕ್ಕನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತಿರುವುದು ಜನತಾದಳದ ಮೂಲ ಆಶಯಗಳ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ನಾವು ಈ ಜನತಾ ಪರಿವಾರದ ಹಿನ್ನೆಲೆಯನ್ನು ಒಂದಿಷ್ಟು ನೋಡಬೇಕಾಗಿದೆ.

ಕರ್ನಾಟಕದ ಮತದಾರರ ಮಟ್ಟಿಗೆ ಕಾಂಗ್ರೆಸ್ ಮತ್ತು ಬಾಜಪ ತೀರಾ ಅನಿವಾರ್ಯ ಆಯ್ಕೆಯೇನು ಆಗಿಲ್ಲ. ಯಾಕೆಂದರೆ ಎಂಭತ್ತರ ದಶಕದಿಂದಲೂ ಜನತಾ ಪರಿವಾರ ಒಂದಲ್ಲಾ ಒಂದು ರೂಪದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಅಧಿಕಾರ ಹಿಡಿಯುತ್ತ, ಮುಖ್ಯ ವಿರೋಧಪಕ್ಷವಾಗಿಯೂ ಕಾರ್ಯ ನಿರ್ವಹಿಸುತ್ತಲೇ ಬಂದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ರಾಷ್ಟ್ರ ಮಟ್ಟದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲವಾದ ಪೈಪೋಟಿಯಿದ್ದು ನೇರಾನೇರ ಹಣಾಹಣಿ ನಡೆಸಿದರೂ ಕರ್ನಾಟಕಕ್ಕೆ ಬಂದರೆ ತ್ರಿಕೋನ ಸ್ಪರ್ದೆ ಎದುರಿಸುವ ಅನಿವಾರ್ಯತೆಯಿತ್ತು. ಇದಕ್ಕೆ ತಕ್ಕ ಹಾಗೆ ರಾಜ್ಯದ ಹಿತಾಸಕ್ತಿಗನುಗುಣವಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂಬ ಆರೋಪವನ್ನು ರಾಷ್ಟ್ರೀಯ ಪಕ್ಷಗಳ ಮೇಲೆ ಮಾಡುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದ ಜನತಾಪರಿವಾರದ ದಿಗ್ಗಜರುಗಳು ರಾಜ್ಯದ ಜನತೆಯ ಮಟ್ಟಿಗೆ ಆಯ್ಕೆಯ ಮೂರನೆ ಸಾದ್ಯತೆಯನ್ನು ನೀಡಿದ್ದರು. ಎಂಭತ್ತರ ದಶಕದಲ್ಲಿ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ರಾಷ್ಟ್ರಮಟ್ಟದಲ್ಲಿ ಅಸ್ಥಿತ್ವಕ್ಕೆ ಬಂದ ಜನತಾಪಕ್ಷ ಕರ್ನಾಟಕದಲ್ಲಿಯೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಆ ದಿನಗಳಲ್ಲಿ ಅದು ಆಗತಾನೆ ಹುಟ್ಟಿದ್ದ ಭಾರತೀಯ ಜನತಾಪಕ್ಷದ ಬೆಂಬಲವನ್ನು ಸಹ ಪಡೆದಿತ್ತು. ಆದರೆ ತೊಂಭತ್ತರ ದಶಕದಲ್ಲಾದ ಕೆಲ ಘಟನೆಗಳು ಜನತಾ ಪರಿವಾರದ ಆದ್ಯತೆಗಳನ್ನು ಬದಲಾಯಿಸಿದವು. ಮಾಜಿ ಉಪಪ್ರದಾನಮಂತ್ರಿ ಶ್ರೀ ಲಾಲ್ ಕೃಷ್ಣ ಅದ್ವಾನಿಯವರ ರಥಯಾತ್ರೆ, ಮಂಡಲ್ ವಿರೋಧಿ ಚಳುವಳಿ, ನಂತರ ನಡೆದ ಬಾಬರಿಮಸೀದಿ ದ್ವಂಸ ಪ್ರಕರಣಗಳು ಬಾಜಪ ಕೋಮುವಾದಿ ಪಕ್ಷವೆನ್ನುವುದನ್ನು ಸಾಬೀತು ಪಡಿಸಿತು. ಎಡಪಕ್ಷಗಳೊಂದಿಗೆ ಉತ್ತಮ ಬಾಂದವ್ಯ ಹೊಂದಿದ್ದರಿಂದ ಮತ್ತು ಜನತಾಪರಿವಾರದ ಬಹುತೇಕ ನಾಯಕರು ಸಮಾಜವಾದಿ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣಕ್ಕಿಂತ ಬಾಜಪದ ಮತಾಂಧ ರಾಜಕಾರಣ ಹೆಚ್ಚು ಅಪಾಯಕಾರಿಯೆಂಬುದನ್ನು ಅರ್ಥ ಮಾಡಿಕೊಂಡ ಜನತಾ ಪರಿವಾರ ಬಾಜಪ ಮತ್ತು ಕಾಂಗ್ರೆಸ್ಸನ್ನು ಏಕಕಾಲಕ್ಕೆ ವಿರೋಧಿಸುತ್ತ ರಾಜಕಾರಣ ಮಾಡತೊಡಗಿತು. ಕಾಂಗ್ರೆಸ್ ಮತ್ತು ಬಾಜಪಗಳೆರಡಕ್ಕೂ ಪರ್ಯಾಯವಾಗಿ ಎದ್ದು ನಿಂತ ಜನತಾಪರಿವಾರದ ತೃತೀಯ ರಂಗ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಶಕ್ತವಾದರೂ, ಅದು ಹೊರಗಿನಿಂದ ಕಾಂಗ್ರೆಸ್ ಬೆಂಬಲ ಪಡೆಯಲೇ ಬೇಕಾಗಿ ಬಂತು. ತದನಂತರದ ದಿನಗಳಲ್ಲಿ ನಡೆದ ಚುನಾವಣೆಗಳು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಮೈತ್ರಿರಾಜಕಾರಣದ ಅನಿವಾರ್ಯತೆಗೆ ಸಿಕ್ಕಿಸಿದವು. ಅದುವರೆಗೂ ತೃತೀಯ ರಂಗದಲ್ಲಿದ್ದ ಬಹುತೇಕ ಪಕ್ಷಗಳು ಪ್ರಾದೇಶಿಕವಾಗಿ ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಬಾಜಪ ಮತ್ತು ಕಾಂಗ್ರೆಸ್ಸಿನ ಜೊತೆ ಮೈತ್ರಿಗೆ ಮುಂದಾದವು. ಹೀಗಾಗಿ 1999ರ ಹೊತ್ತಿಗೆ ತೃತೀಯ ರಂಗದ ಬಹುತೇಕ ಪಕ್ಷಗಳು ಬಾಜಪ ನೇತೃತ್ವದ ಎನ್.ಡಿ.ಎ. ಮತ್ತು ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸೇರಿಕೊಂಡವು. ಆದರೆ ಕರ್ನಾಟಕದ ಮಟ್ಟಿಗೆ 2004ರ ತನಕ ದೇವೇಗೌಡರ ನೇತೃತ್ವದ ಜಾತ್ಯಾತೀತ ಜನತಾದಳ ತನ್ನ ಸ್ವತಂತ್ರ ಅಸ್ಥಿತ್ವವನ್ನು ಕಾಪಾಡಿಕೊಂಡು ಬಂದಿದ್ದು, ನಂತರ ನಡೆದ ಚುನಾವಣೆಯಲ್ಲಿ ಅತಂತ್ರ ವಿದಾನಸಭೆ ರಚನೆಯಾದ ಹಿನ್ನೆಲೆಯಲ್ಲಿ, ಕೋಮುವಾದಿ ಬಾಜಪವನ್ನು ಅಧಿಕಾದಿಂದ ದೂರವಿಡುವ ನೆಪದಲ್ಲಿ ಕಾಂಗ್ರೆಸ್ಸಿನ ಜೊತೆಗೂಡಿ ಮೈತ್ರಿಸರಕಾರ ರಚಿಸಿತು. ಅದಾದ ಇಪ್ಪತ್ತೆ ತಿಂಗಳಲ್ಲಿ ಶ್ರೀ ಹೆಚ್.ಡಿ.ಕುಮಸ್ವಾಮಿಯವರು ಗುಪ್ತವಾಗಿ ಬಾಜಪದೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿ ತಾವು ಮುಖ್ಯಮಂತ್ರಿಯಾದರು. ತನ್ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಾಜಪಕ್ಕೆ ಅಧಿಕಾರದ ರುಚಿ ತೋರಿಸಿದರು. ನಂತರ ನಡೆದ ವಚನ ಭ್ರಷ್ಟತೆಯ ನಾಟಕೀಯ ಬೆಳವಣಿಗೆಗಳಿಂದ ಬಾಜಪ ಸ್ವತಂತ್ರವಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯತು. 2013ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಅವತ್ತಿನಿಂದ ಪ್ರಾರಂಭವಾದ ಜನತಾದಳದ ರಾಜಕೀಯ ಗೊಂದಲಗಳು ಇನ್ನೂ ನಿಂತಂತೆ ಕಾಣುತ್ತಿಲ್ಲ. ಒಂದೆಡೆ ದೇವೇಗೌಡರು ಕೋಮುವಾದವನ್ನು ವಿರೋಧಿಸುವ ಮಾತಾಡುತ್ತಿದ್ದರೆ, 2014ರಲ್ಲಿ ರಾಮನಗರದಿಂದ ಲೋಕಸಭೆಗೆ ಸ್ಪರ್ದಿಸಿದ ಶ್ರೀಮತಿ ಅನಿತಾ ಕುಮಾರಸ್ವಾಮಿಯವರನ್ನು ಬೆಂಬಲಿಸಿದ ಬಾಜಪದೊಂದಿಗೆ ಇವತ್ತಿಗೂ ಕುಮಾರಸ್ವಾಮಿಯವರು ಗೆಳೆತನ ಹೊಂದಿರುವದು ಅವರದೆ ಶಾಸಕರ ಪಾಲಿಗೆ ಅರ್ಥವಾಗದ ವಿಚಾರವಾಗಿದೆ.

ಕಳೆದ ವರ್ಷ ನಡೆದ ಬಿ.ಬಿ.ಎಂ.ಪಿ. ಚುನಾವಣೆಯ ನಂತರ ಮೇಯರ್ ಹುದ್ದೆಯ ವಿಚಾರದಲ್ಲಿ ಜನತಾದಳದ ಶಾಸಕರು ಪಕ್ಷದ ವರಿಷ್ಠರನ್ನು ಒಪ್ಪಿಸಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೈತ್ರಿಗೆ ದೇವೇಗೌಡರ ಒಪ್ಪಿಗೆಯಿದ್ದಂತೆ ಕಂಡು ಬಂದರೂ ಕುಮಾರಸ್ವಾಮಿಯವರಿಗಂತು ಇಷ್ಟವಿರಲಿಲ್ಲವೆಂಬುದು ಅವರ ಮಾತು ನಡವಳಿಕೆಯಿಂದ ತಿಳಿಯಬಹುದಾಗಿದೆ. ನಂತರ ನಡೆದ ವಿದಾನಪರಿಷತ್ತಿನ ಚುನಾವಣೆಯಲ್ಲಯೂ ಜನತಾದಳ ನಿಖರವಾದ ನಿಲುವನ್ನು ತಳೆಯದೆ ಕೆಲವು ಕಡೆ ಕಾಂಗ್ರೆಸ್ಸಿಗೆ  ಇನ್ನು ಕೆಲವೆಡೆ ಬಾಜಪಕ್ಕೆ ಅನುಕುಲವಾಗುವಂತೆ ನಡೆದುಕೊಂಡಿತು. ಅದರ ಇಂತಹ ದ್ವಂದ್ವ ನೀತಿ ಮೂರು ವರ್ಷಗಳ ಹಿಂದೆ ನಡೆದ ಜಿಲ್ಲಾ ಪಂಚಾಯಿತಿಗಳ ಚುನಾವಣೆಗಳಲ್ಲೂ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ರಾಜ್ಯದ ಸುಮಾರು ಹತ್ತು ಜಿಲ್ಲೆಗಳ ಜಿಲ್ಲಾ ಪಂಚಾಯಿತಿಯ ಪಲಿತಾಂಶಗಳು ಅತಂತ್ರವಾಗಿದ್ದು ಅಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಾಜಪಗಳು ಹೋರಾಟ ನಡೆಸಲಿದ್ದು ಬಹುತೇಕ ಕಡೆ ಜನತಾದಳದ ಪಾತ್ರ ಪ್ರಮುಖವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನತಾದಳ ರಾಜ್ಯ ಮಟ್ಟದಲ್ಲಿ ಒಂದು ಬಲವಾದ ನಿಲುವನ್ನು ತಳೆದು ಯಾವುದಾದರೊಂದು ಪಕ್ಷಕ್ಕೆ ಬೆಂಬಲ ನೀಡುತ್ತದೆಯೋ ಇಲ್ಲ ಆಯಾ ಜಿಲ್ಲೆಗಳ ಮಟ್ಟದಲ್ಲಿ ತಮಗೆ ಪೂರಕವಾಗುವಂತಹ ಅನುಕೂಲಸಿಂದು ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೊ ಎಂದು ನೋಡಿದರೆ ಅದು ಕೆಲವು ಜಿಲ್ಲೆಗಳಲ್ಲಿ ಬಾಜಪದ ಜೊತೆ ಸೇರಿ ಅಧಿಕಾರದ ಗದ್ದುಗೆ ಏರಿದರೆ ಇನ್ನು ಕೆಲವು ಕಡೆ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಪಡೆದುಕೊಂಡಿತು. ಹೀಗೆ ತನ್ನ ಸ್ಥಳೀಯ ಕಾರ್ಯಕರ್ತರುಗಳ ಹಿತಾಸಕ್ತಿಯನ್ನು ಕಾಪಾಡುವ ಹೆಳಿಕೆ ನೀಡುತ್ತ ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಸರಸವಾಡುತ್ತಲೇ ಬಂರುತ್ತಿದೆ. ಈ ಹಿನ್ನಲೆಯಲ್ಲಿ ನೋಡಿದರೆ ಜನತಾದಳದ ಮುಂದಿನ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆಯಲ್ಲಿ ಅದು ತೆಗೆದುಕೊಳ್ಳುವ ನಿಲುವು ಬಹಳ ಮಹತ್ವಪೂರ್ಣವಾದದ್ದು.

ಇದೀಗ ವಿಶೇಷವಾದ ಬೆಳವಣಿಗೆಯೊಂದು ನಡೆದಿದ್ದು ಮೊನ್ನೆ ರಾಜ್ಯಕ್ಕೆ ಬೇಟಿ ನೀಡಿದ ನರೇಂದ್ರ ಮೋದಿಯವರು ಮಾಜಿ ಪ್ರದಾನಿಗಳಾದ ದೇವೇಗೌಡರನ್ನು ಹಿಗ್ಗಾಮುಗ್ಗಾ ಹೊಗಳಿ ಪಲಿತಾಂಶಗಳ ನಂತರ ದಳ ಮತ್ತು ಬಾಜಪ ಮೈತ್ರಿಮಾಡಿಕೊಳ್ಳುವ ಬಗ್ಗೆ ಸೂಚನೆಗಳನ್ನು ನೀಡಿ ಹೋಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಗೌಡರು ಮೋದಿಯವರ ಹೊಗಳಿಕೆಯಲ್ಲಿ ಅಸಹಜವಾದ್ದೇನು ಇಲ್ಲ ಎಂದೂ ಹೇಳಿದ್ದಾರೆ. ಇದಾದ ಎರಡೇ ದಿನಕ್ಕೆ ಮತ್ತೆ ಮೋದಿಯವರು ಯಾವ ದೇವೇಗೌಡರನ್ನು ತಾವು ಹೊಗಳಿದ್ದರೊ ಅದೇ ಗೌಡರ ಪಕ್ಷ ಜನತಾದಳವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ.

ಬಹುಶ: ಇಲ್ಲಿ ಬಾಜಪ ಮತ್ತು ಜನತಾದಳಗಳ ನಡುವೆ ಕಣ್ಣಾಮುಚ್ಚಾಲೆಯ ಆಟವೊಂದು ನಡೆಯುತ್ತಿದ್ದು, ತಾವುಗಳ ಮೈತ್ರಿಮಾಡಿಕೊಳ್ಳುವ ಸೂಚನೆ ನೀಡುತ್ತ ಎರಡೂ ಪಕ್ಷಗಳಿಗೆ ಅನುಕೂಲವಾಶಗುವ ರೀತಿಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತ ಕಾಂಗ್ರೆಸ್ ಅನ್ನು ಸೋಲಿಸುವ ಪ್ರಯತ್ನ ಮಾಡುತ್ತಿವೆ. ಇನ್ನು ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ದಳದ ನಾಯಕರುಗಳು ಆಗಾಗ ಬಾಜಪದ ಜೊತೆಗಿನ ಮೈತ್ರಿಯನ್ನು ನಿರಾಕರಿಸುತ್ತ ಆ ಸಮುದಾಯವನ್ನು ಕಾಂಗ್ರೆಸ್ಸಿನಿಂದ ದೂರವಿಡಲು ಯತ್ನಿಸುವುದು ಸಹ ನಡೆಯುತ್ತಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ತಾವು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವ ಮಾತನಾಡುವ ಕುಮಾರಸ್ವಾಮಿಯವರು, ಅತಂತ್ರ ವಿದಾನಸಭೆ ರಚನೆಯಾದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ ನಾವೇ ಬಹುಮತ ಪಡೆದು ಸರಕಾರ ರಚಿಸುತ್ತೇವೆಂಬ ಹಾರಿಕೆಯ ಉತ್ತರ ನೀಡುತ್ತಾರೆ

ರಾಷ್ಟ್ರ ರಾಜಕಾರಣದಲ್ಲಿ ಬಾಜಪ ಮತ್ತು ಕಾಂಗ್ರೆಸ್ಸೇತರ ವೇದಿಕೆಯೊಂದರ ಬಗ್ಗೆ ಗಟ್ಟಿಯಾಗಿ ಮಾತನಾಡುವ ಗೌಡರು ರಾಜ್ಯದ ವಿಷಯಕ್ಕೆ ಬಂದರೆ ಮಾತ್ರ ಮೆಲುದನಿಯಲ್ಲಿ ಮಾತನಾಡುವುದರ ಹಿಂದಿರುವ ಕಾರಣಗಳನ್ನು ಸ್ವತ: ಅವರೇ ಹೇಳಬೇಕಾಗುತ್ತದೆ. ಕಾಂಗ್ರೆಸ್ ಈ ಹಿಂದಿನಿಂದಲೂ ಜನತಾದಳವನ್ನು ಮುಗಿಸಲು ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸುವ ಜನತಾದಳದ ನಾಯಕರುಗಳ ಮಾತಿನಲ್ಲಿ ಒಂದಿಷ್ಟು ಸತ್ಯವಿರುವುದು ನಿಜವಾದರೂ, ತಮ್ಮನ್ನು ಆಕರ್ಷಿಸುತ್ತಿರುವ ಬಾಜಪದ ಬಗ್ಗೆಯೂ ಅವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಕಾಂಗ್ರೆಸ್ಸಾದರೂ ಒಂದಿಷ್ಟು ಶಾಸಕರುಗಳನ್ನು ತನ್ನತ್ತ ಸೆಳೆದು ದಳವನ್ನು ದುರ್ಬಲಗೊಳಿಸಿರಬಹುದು. ಆದರೆ ಜನತಾದಳದೊಂದಿಗೆ ಮೈತ್ರಿ ಸಾದ್ಯವಾದಲ್ಲಿ ಬಾಜಪ ನಿದಾನವಾಗಿ ಇಡೀ ಜನತಾದಳವನ್ನೇ ದುರ್ಬಲಗೊಳಿಸುವ ಸಾಧ್ಯತೆ ಇದೆ. ರಾಷ್ಟ್ರದ ಇತರೇ ರಾಜ್ಯಗಳಲ್ಲಿ ಆಗಿರುವ ಇಂತಹ ಹಲವು ವಿದ್ಯಾಮಾನಗಳನ್ನು ದಳದ ನಾಯಕರುಗಳು ಗಂಬೀರವಾಗಿ ನೋಡಬೇಕಿದೆ. ಮಹಾರಾಷ್ಟ್ರದಲ್ಲಿ ತನಗೆ ಅವಕಾಶ ನೀಡಿ ಬೆಳೆಸಿದ ಶಿವಸೇನೆಯನ್ನೇ ಇವತ್ತು ಬಾಜಪ ನಗಣ್ಯವಾಗಿಸಿದೆ. ಇನ್ನು ಆಂದ್ರಪದೇಶದಲ್ಲಿ ದಶಕಗಳಿಂದ ತನಗೆ ಬೆಂಬಲ ನೀಡುತ್ತಾ ಬಂದಿದ್ದ ತೆಲುಗುದೇಶಂ ಅನ್ನು ಇವತ್ತು ಹತಾಶೆಯ ಸ್ಥಿತಿಗೆ ತಂದು ನಿಲ್ಲಿಸಿದೆ. ಅದೇ ರೀತಿ ಒಡಿಸ್ಸಾದಲ್ಲಿ ಬಿಜುಜನತಾದಳವನ್ನು ಮುಗಿಸಲು ಹೋಗಿ ಅದರಲ್ಲಿ ಸೋತು ನವೀನ್ ಪಟ್ನಾಯಕ್ ಅವರಿಂದ ದೂರಬಂದು ನಿಂತಿದೆ. ಹೀಗಾಗಿ ಬಾಜಪದೊಂದಿಗೆ ಮೈತ್ರಿಮಾಡಿಕೊಳ್ಳುವ ಮುನ್ನ ದಳದ ನಾಯಕರುಗಳು ಸಾವಿರ ಸಾರಿ ಯೋಚಿಸಬೇಕಾದ ಅಗತ್ಯವಿದೆ.

ಚುನಾವಣೆಗಳಿಗಿನ್ನು ಕೇವಲ ಎಂಟುದಿನಗಳು ಮಾತ್ರ ಬಾಕಿ ಉಳಿದಿದ್ದು ಅಷ್ಟರೊಳಗೆ ಜಾತ್ಯಾತೀತ ಜನತಾದಳ ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕಿದೆ. ಜನತೆಯನ್ನು ಹೀಗೆ ಗೊಂದಲದಲ್ಲಿ ಇಡುವುದರಿಂದ ತನಗೆ ಲಾಭವಾಗುತ್ತದೆಯೆಂಬ ನಿರೀಕ್ಷೆಯನ್ನು ಅದು ಬಿಡಬೇಕಿದೆ. ದಳದ ಈ ಗೊಂದಲಗಳು ಅದನ್ನು ಜನರಿಂದ ದೂರ ಮಾಡಿ ನಕಾರಾತ್ಮಕ ಪರಿಣಾಮ ಬೀರುವ ಸಾದ್ಯತೆ ಇದೆ. ಅದು ತೆಗೆದುಕೊಳ್ಳಬಹುದಾದ ಸ್ಪಷ್ಟ ನಿಲುವು ಮಾತ್ರ ಅದಕ್ಕೆ ಧನಾತ್ಮಕ ಪರಿಣಾಮಗಳನ್ನು ನೀಡುತ್ತದೆ ಎನ್ನುವುದು ನಿಶ್ಚಿತ.

ಜನತಾದಳದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ನಾಯಕರುಗಳು ಸಮಾದಾನವಾಗಿ ಕೂತು ಈ ಬಗ್ಗೆ ಚರ್ಚಿಸಿ ಒಂದು ಸ್ಪಷ್ಟ ಸಂದೇಶವನ್ನು ಜನರಿಗೆ ತಲುಪಿಸಬೇಕಿದೆ

ಇದು ಜನತಾದಳದ ಭವಿಷ್ಯದ ದೃಷ್ಠಿಯಿಂದ ಮಾತ್ರವಲ್ಲದೆ ಕರ್ನಾಟಕದ ಭವಿಷ್ಯದ ದೃಷ್ಠಿಯಿಂದಲೂ ಅತ್ಯಂತ ಮಹತ್ವಪೂರ್ಣವಾದ ವಿಷಯವೆಂಬುದನ್ನು ಜನತಾದಳದ ನಾಯಕರುಗಳು ಮನಗಾಣಬೇಕಾಗಿದೆ.

No comments:

Post a Comment