Oct 11, 2017

ಈ ಸರ್ಕಾರಿ ಹತ್ಯೆಗಳಿಗೆ ಕೊನೆ ಎಂದು?

ಬೆಂಗಳೂರಿನ ಗುಂಡಿಗಳು.
ಚಿತ್ರ: ರವಿಸೂರ್ಯ ಈಶ್ವರ 
ಡಾ. ಅಶೋಕ್. ಕೆ. ಆರ್.
ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತಷ್ಟು ಬಲಿ ಪಡೆದುಕೊಂಡಿವೆ. ಹುಷಾರು ತಪ್ಪಿದ್ದ ಮೊಮ್ಮಗಳನ್ನು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸಾಗುತ್ತಿದ್ದ ದಂಪತಿಗಳು ರಸ್ತೆ ಗುಂಡಿಯ ಸಮೀಪ ವಾಹನದ ವೇಗವನ್ನು ಕಡಿಮೆ ಮಾಡಿದ್ದಷ್ಟೇ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ಸೊಂದು ಅವರ ವಾಹನದ ಮೇಲರಿದು ಇಬ್ಬರೂ ದಂಪತಿಗಳನ್ನು ಬಲಿ ತೆಗೆದುಕೊಂಡಿದೆ. ಅದೃಷ್ಟವಶಾತ್ ಮೊಮ್ಮಗಳು ಬದುಕುಳಿದಿದ್ದಾಳೆ. ಈ ಸಾವಿಗೆ ಹೊಣೆ ಯಾರು? ಪೋಲೀಸರ ಡೈರಿಗಳಲ್ಲಿ, ನ್ಯಾಷನಲ್ ಕ್ರೈಮ್ ಬ್ಯೂರೋದ ದಾಖಲೆಗಳಲ್ಲಿ ಬಸ್ಸು ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಶರಾ ಬರೆಯಲಾಗುತ್ತದೆ. ಬಸ್ಸು ಚಾಲಕನ ಕೆಲಸ ಹೋಗುತ್ತದೆ, ವಿಚಾರಣೆಯ ನಂತರ ಆತನಿಗೊಂದಷ್ಟು ಶಿಕ್ಷೆಯೂ ಆಗಬಹುದು. ಅಥವಾ ಸ್ಕೂಟರಿನವರ ಅಜಾಗರೂಕ ಚಾಲನೆಯಿಂದ ಇದಾಯಿತೇ ಹೊರತು ಬಸ್ಸು ಚಾಲಕನ ತಪ್ಪೇನಿರಲಿಲ್ಲ ಎಂದು ಆತನಿಗೆ ಬಿಡುಗಡೆಯೂ ಸಿಕ್ಕಬಹುದು. ಒಟ್ಟಿನಲ್ಲಿ ಇಬ್ಬರಲ್ಲಿ ಒಬ್ಬ ಚಾಲಕನ ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎಂಬ ಅಭಿಪ್ರಾಯದೊಂದಿಗೆ ವಿಚಾರಣೆ ಮುಗಿಯುತ್ತದೆ. ಆದರದು ಪೂರ್ಣ ಸತ್ಯವೇ?



ರಸ್ತೆ ಅಪಘಾತಗಳಿಂದ ಅತಿ ಹೆಚ್ಚು ಜನರು ಮೃತರಾಗುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಕಳೆದೊಂದು ದಶಕದಲ್ಲಿ ನಮ್ಮಲ್ಲಿ ರಸ್ತೆ ಅಪಘಾತಗಳಿಂದ ಸತ್ತವರ ಸಂಖ್ಯೆ ಹದಿಮೂರು ಲಕ್ಷಕ್ಕಿಂತಲೂ ಹೆಚ್ಚಿದೆ. 2014ರಲ್ಲಿ 1,39,671 ಜನರು ರಸ್ತೆ ಅಪಘಾತದಲ್ಲಿ ಸತ್ತರೆ, 2015ರಲ್ಲಿ 1,46,000 ಜನರು ಹಾಗೂ 2016ರಲ್ಲಿ 1,50,785 ಜನರು ರಸ್ತೆ ಅವಘಡಗಳಲ್ಲಿ ಮೃತಪಟ್ಟಿದ್ದಾರೆ. ನಮ್ಮಲ್ಲಿ ಭಯೋತ್ಪಾದನೆಯಿಂದ, ನಕ್ಸಲೀಯವಾದದಿಂದ ಸತ್ತವರ ಸಂಖ್ಯೆಯನ್ನು ಇದರೊಂದಿಗೆ ಹೋಲಿಸಿ ನೋಡಿದಾಗ ನಮ್ಮಲ್ಲಿರುವ ನೈಜ ಸಮಸ್ಯೆಗಳೇನು ಎನ್ನುವುದರ ಅರಿವಾಗುತ್ತದೆ. 2014ರಲ್ಲಿ 976 ಜನರು, 2015ರಲ್ಲಿ 722, 2016ರಲ್ಲಿ 896 ಜನರು ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ನಾಗರೀಕರು, ಸೈನಿಕರು - ಪೋಲೀಸ್ ಸಿಬ್ಬಂದಿ, ಭಯೋತ್ಪಾದಕರೆಲ್ಲರೂ ಸೇರಿದ್ದಾರೆ. 1994ರಿಂದ 2017ರ ಅಕ್ಟೋಬರ್ ವರೆಗೆ ಭಯೋತ್ಪಾದನೆಯಿಂದ ಸತ್ತವರ ಸಂಖ್ಯೆ 66,189. ರಸ್ತೆ ಅಪಘಾತಗಳಲ್ಲಿ ಆರು ತಿಂಗಳಲ್ಲಿ ಸಾಯುವಷ್ಟು ಜನರ ಸಂಖ್ಯೆಯಿದು. 2016ರ ದಾಖಲೆಗಳ ಪ್ರಕಾರ ಘಂಟೆಗೆ ಐವತ್ತೈದು ಅಪಘಾತಗಳು ಸಂಭವಿಸುತ್ತವೆ, ಪ್ರತಿ ಘಂಟೆ ಹದಿನೇಳು ಮಂದಿ ಸಾಯುತ್ತಾರೆ. ಅಂದರೆ ದಿನಕ್ಕೆ ನಾಲ್ಕು ನೂರರಷ್ಟು ಜನರು ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ಇದರ ಎಷ್ಟೋ ಪಟ್ಟು ಹೆಚ್ಚಿನ ಜನರು ರಸ್ತೆ ಅಪಘಾತಗಳಿಂದ ಅಂಗವಿಕಲತೆಗೆ ಗುರಿಯಾಗುತ್ತಾರೆ, ಮಾನಸಿಕ ಕ್ಷೋಭೆಗೆ ಈಡಾಗುತ್ತಾರೆ. ಭಯೋತ್ಪಾದನೆಯಿಂದ ಇಡೀ ವರುಷದಲ್ಲಿ ಸಾಯುವಷ್ಟು ಜನರು ನಮ್ಮ ದೇಶದ ರಸ್ತೆಗಳಲ್ಲಿ ಎರಡು ಮೂರು ದಿನದಲ್ಲಿ ಸತ್ತುಹೋಗುತ್ತಾರೆ. ಭಯೋತ್ಪಾದನೆಗೆ ತೋರಿಸುವಷ್ಟು ಕಾಳಜಿಯನ್ನು ರಸ್ತೆ ಅಪಘಾತಗಳೆಡೆಗೆ ನಮ್ಮ ಸರ್ಕಾರಗಳು ಯಾಕೆ ತೋರುವುದಿಲ್ಲ? ಎಲ್ಲಾ ಪಕ್ಷದ ರಾಜಕಾರಣಿಗಳೂ ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ, ಭಯೋತ್ಪಾದನೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರ ಪ್ರಾಣ ಬಲಿ ತೆಗೆದುಕೊಳ್ಳುತ್ತಿರುವ, ಜನರನ್ನು ದೈಹಿಕ ಹಾಗೂ ಮಾನಸಿಕ ಆಘಾತಕ್ಕೆ ದೂಡುತ್ತಿರುವ ಅಪಘಾತಗಳ ಬಗ್ಗೆ ಎಲ್ಲರಿಗೂ ದಿವ್ಯ ನಿರ್ಲಕ್ಷ್ಯ.

ಅರವತ್ತಾರು ಪ್ರತಿಶತಃ ಅಪಘಾತಗಳು ಅತಿ ವೇಗದಿಂದ ಸಂಭವಿಸುತ್ತವೆಂದು ದಾಖಲೆಯಾಗಿದೆ. ಈ ಅತಿ ವೇಗವು ಮೇಲ್ನೋಟಕ್ಕೆ ವಾಹನ ಚಾಲಕರ ನಿರ್ಲಕ್ಷ್ಯದಿಂದ ಆಗುವಂತದ್ದು ಎಂದು ತೋರುತ್ತದಾದರೂ ಬಹಳಷ್ಟು ಸಂದರ್ಭದಲ್ಲಿದು ಅವೈಜ್ನಾನಿಕ ರಸ್ತೆ ನಿರ್ಮಾಣ ಪದ್ಧತಿ, ಗುಂಡಿ ಬಿದ್ದ ರಸ್ತೆಗಳು, ವಿಪರೀತ ಎತ್ತರದ ಬಿಳಿ ಬಣ್ಣ ಬಳಿಯದ ರಸ್ತೆ ಉಬ್ಬುಗಳಿಂದಲೇ ಸಂಭವಿಸುವ ಸಾಧ್ಯತೆ ಅಧಿಕ. ಬೆಂಗಳೂರಿನಲ್ಲಿ ಕಳೆದೊಂದು ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಸಾಧಾರಣ ಮಳೆಯನ್ನೇ ತಡೆಯದ ನಮ್ಮ ರಸ್ತೆಗಳು ಇನ್ನು ಅಧಿಕ ಮಳೆಯನ್ನು ತಡೆದು ಕೊಳ್ಳುವುದು ಸಾಧ್ಯವೇ? ರಸ್ತೆಗಳು ಗುಂಡಿಗಳಾಗಿವೆ. ವಿಪರೀತದ ಮಳೆಗೆ ಟಾರು ರಸ್ತೆಗಳು ಹಾಳಾಗುವುದು ಸತ್ಯವಾದರೂ ತೀರ ಹೊಸದಾಗಿ ಹಾಕಿದ ರಸ್ತೆಗಳೂ ಹಾಳಾಗುವುದೇಕೆ ಎನ್ನುವ ಪ್ರಶ್ನೆಗೆ ಉತ್ತರ ಅರಸಿದರೆ ಗುತ್ತಿಗೆದಾರರು, ರಾಜಕಾರಣಿಗಳು, ಅಧಿಕಾರಿಗಳ ಭ್ರಷ್ಟಾಚಾರ ಕಣ್ಣಿಗೆ ರಾಚುತ್ತದೆ. ರಸ್ತೆ ನಿರ್ಮಾಣ ಮತ್ತು ಅದಕ್ಕಿಂತ ಹೆಚ್ಚಾಗಿ ರಸ್ತೆಗಳ ರಿಪೇರಿ ನಿರಂತರ ಹಣದ ಮೂಲವಾಗಿಬಿಟ್ಟಿದೆ. ಕೆಲವೊಂದು ಮುಖ್ಯ ರಸ್ತೆಗಳನ್ನು ಹೊರತು ಪಡಿಸಿದರೆ ಉಳಿದ ರಸ್ತೆಗಳ ಗುಣಮಟ್ಟ ಕಳಪೆಯಾಗಿರುತ್ತದೆ. ಸರಿಯಾಗಿ ಮಳೆಗಾಲಕ್ಕೆ ಮುಂಚೆ ರಸ್ತೆಯನ್ನು ನಿರ್ಮಿಸಲಾಗುತ್ತದೆ, ಬಹಳಷ್ಟು ಕಡೆ ನಿರ್ಮಾಣ ಮಾಡುವುದಕ್ಕೆ ಬದಲು ಟಾರನ್ನು ಬಣ್ಣದ ರೀತಿಯಲ್ಲಿ ಬಳಿಯಲಾಗುತ್ತದೆ. ಮೊದಲ ಮಳೆಗೆ ಟಾರು ರಸ್ತೆಯಲ್ಲಿ ಚಿಕ್ಕ ಚಿಕ್ಕ ಚೆಕ್ಕೆಗಳೆದ್ದರೆ ಸಾಕು, ಮುಂದಿನ ಮಳೆಯಲ್ಲಿ ಆ ಚೆಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ದೊಡ್ಡ ಗುಂಡಿಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಮುಂದಿನ ವರುಷದ ಮಳೆಗಾಲದವರೆಗೂ ಅವುಗಳು ರಿಪೇರಿಯಾಗುವ ಸಾಧ್ಯತೆ ಕಡಿಮೆ, ರಿಪೇರಿಯಾದರೂ ಅದು ತೇಪೆಯಂತಿರುತ್ತದೆಯೇ ಹೊರತು ದೀರ್ಘ ಕಾಲದವರೆಗೆ ಬಾಳಿಕೆ ಬರುವಂತಿರುವುದಿಲ್ಲ. ಮುಂದಿನ ವರುಷ ಮತ್ತಿದೇ ಕತೆಯ ಪುನರಾವರ್ತನೆ. ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೂ ರಸ್ತೆಗಳ ದುಸ್ಥಿತಿಗೆ ಮತ್ತೊಂದು ಕಾರಣ. ರಸ್ತೆ ಮಾಡಿದ ಕೆಲವೇ ದಿನಗಳಲ್ಲಿ ದೂರವಾಣಿ ಇಲಾಖೆಯೋ, ವಾಟರ್ ಬೋರ್ಡೋ ರಸ್ತೆ ಅಗೆಯಲು ಪ್ರಾರಂಭಿಸಿಬಿಡುತ್ತದೆ. ಈ ಸಮನ್ವಯದ ಕೊರತೆ ಆಕಸ್ಮಿಕವೋ ಅಥವಾ ಹಣ ಮಾಡುವ ದುರುದ್ದೇಶದಿಂದಲೇ ಈ ರೀತಿ ಮಾಡುತ್ತಾರೋ?

ಅಜಾಗರೂಕ ಚಾಲನೆಯೂ ರಸ್ತೆ ಅಪಘಾತಗಳಿಗೆ ಕಾರಣ, ಅದನ್ನು ಅಲ್ಲಗೆಳೆಯಲಾಗುವುದಿಲ್ಲ. ಈ ಅಜಾಗರೂಕತೆಗೆ ಬರೀ ಚಾಲಕರಷ್ಟೇ ಅಲ್ಲ, ಆ ಚಾಲಕರಿಗೆ ಪರವಾನಗಿ ನೀಡುವ ಆರ್.ಟಿ.ಓ ಕೂಡ ಕಾರಣ ಎನ್ನುವುದು ನಮ್ಮ ನೆನಪಿನಲ್ಲಿರಬೇಕು. ಸ್ಕೂಟರ್ ಲೈಸೆನ್ಸ್ ಗಿಂತ ನಾಲ್ಕು ಚಕ್ರದ ವಾಹನಗಳ ಚಾಲಕರಿಗೆ ಲೈಸೆನ್ಸ್ ಸಿಗುವುದು ನಮ್ಮಲ್ಲಿ ಸುಲಭ. ನನ್ನದೇ ಉದಾಹರಣೆಯನ್ನು ಹೇಳುವುದಾದರೆ ಒಂದು ತಿಂಗಳು ಡ್ರೈವಿಂಗ್ ಶಾಲೆಯಲ್ಲಿ ಕಾರು ಕಲಿತ ನಂತರ ಡ್ರೈವಿಂಗ್ ಶಾಲೆಗೆ ಸೇರಿದ ವಾಹನದಲ್ಲಿ ಪರೀಕ್ಷೆಗೆ ಹೋಗಿದ್ದೆ. ಕಾರಿನಲ್ಲೊಬ್ಬನೇ ಕುಳಿತಿದ್ದೆ, ಇನ್ಸ್ ಪೆಕ್ಟರ್ ಹೊರಗೆ ಬಂದರು. ದೂರದಿಂದಲೇ ಓಡಿಸಿ ಎಂದರು. ಗಾಡಿ ಸ್ಟಾರ್ಟ್ ಮಾಡಿದೆ. ಇಳಿಜಾರಿನ ರಸ್ತೆಯಿತ್ತು, ಬ್ರೇಕ್ ಮೇಲಿಂದ ಕಾಲು ತೆಗೆಯುತ್ತಿದ್ದಂತೆ ಗಾಡಿ ಚಲಿಸಿತು, ಗೇರ್ರು ಬದಲಿಸಿರಲಿಲ್ಲ, ಕ್ಲಚ್ಚು ಬಿಟ್ಟಿರಲಿಲ್ಲ. ಐವತ್ತು ಮೀಟರ್ ಕೂಡ ಗಾಡಿ ಚಲಿಸಿರಲಿಲ್ಲ. ಪರೀಕ್ಷೆಯಲ್ಲಿ ಪಾಸಾಗಿಬಿಟ್ಟಿದ್ದೆ! ಇನ್ನು ಬಹುತೇಕ ಕಡೆ ಡ್ರೈವಿಂಗ್ ಶಾಲೆಯ ಸಿಬ್ಬಂದಿಯೇ ಪಕ್ಕದಲ್ಲಿ ಕುಳಿತು ಗಾಡಿಯನ್ನು ನಿಯಂತ್ರಿಸಿಬಿಡುತ್ತಾರೆ. ಪಕ್ಕದಲ್ಲಿ ಕುಳಿತುಕೊಂಡು ಚಾಲನಾ ವಿಧಾನವನ್ನು ಪರೀಕ್ಷಿಸಬೇಕಾದ ಇನ್ಸ್ ಪೆಕ್ಟರ್ ಒಂದೋ ಹಿಂದೆ ಕುಳಿತಿರುತ್ತಾರೆ ಅಥವಾ ಕಟ್ಟಡದ ನೆರಳಿನಲ್ಲಿ ನಿಂತಿರುತ್ತಾರೆ! ಎಷ್ಟೋ ಕಡೆಗಳಲ್ಲಿ ಆರ್.ಟಿ.ಓ ಕಛೇರಿಯ ಮುಖ ನೋಡದೆಯೇ ಲೈಸೆನ್ಸ್ ಪಡೆಯುವ ಸೌಭಾಗ್ಯವೂ ಉಂಟು. ಡ್ರೈವಿಂಗ್ ಶಾಲೆಯ ಮುಖಾಂತರ ನಾವು ಲೈಸೆನ್ಸ್ ಪಡೆಯಲು ಹೋಗಿದ್ದೇವೆಂದರೆ ಪರೋಕ್ಷವಾಗಿ ಲಂಚವನ್ನು ನೀಡಿಯೇ ಹೋಗಿರುತ್ತೇವೆ ಎನ್ನುವುದು ಬಹಿರಂಗ ಸತ್ಯ. ಲೈಸೆನ್ಸ್ ನೀಡುವಾಗ ನಡೆಯುವ ಭ್ರಷ್ಟಾಚಾರ ಅಪರಿಪೂರ್ಣ ಚಾಲಕರ ತಯಾರಿಗೆ ಕಾರಣವಾಗುತ್ತಿದೆ, ಈ ಚಾಲಕರು ರಸ್ತೆ ಅಪಘಾತಗಳಿಗೆ, ದುರಂತಗಳಿಗೆ ಕಾರಣವಾದಾಗ ಅದರ ಹೊಣೆಯನ್ನೂ ಆರ್.ಟಿ.ಓ ಕೂಡ ಹೊರಬೇಕಲ್ಲವೇ?

ಅಪಘಾತವೆಂದರೆ ಆಕಸ್ಮಿಕ ಘಟನೆ, ಚಾಲಕರು ಜಾಗರೂಕರಾಗಿದ್ದಾಗಲೂ ಆಕಸ್ಮಿಕವಾಗಿ ಸಂಭವಿಸುವಂತಹ ಘಟನೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲವಾದರೂ ಕೆಟ್ಟ ರಸ್ತೆಗಳ ನಿರ್ಮಾಣ, ಬೇಕಾಬಿಟ್ಟಿ ಲೈಸೆನ್ಸ್ ನೀಡುವುದು ಆಕಸ್ಮಿಕ ಸಂಗತಿಗಳಲ್ಲ. ವರುಷಕ್ಕೆ ಲಕ್ಷಾಂತರ ಜನರು ರಸ್ತೆಯ ಮೇಲಿನ ಅವಘಡಗಳಲ್ಲಿ ಸಾಯುತ್ತಿದ್ದಾರೆ. ಅದರಲ್ಲಿ ಕೆಲವೊಂದಷ್ಟು ಅಪಘಾತದಿಂದ ಸಂಭವಿಸಿದರೆ ಮಿಕ್ಕೆಲ್ಲವೂ ಸರ್ಕಾರದ, ಅದರಲ್ಲಿನ ರಾಜಕಾರಣಿಗಳ, ಅಧಿಕಾರಗಳ, ಗುತ್ತಿಗೆದಾರರ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದ, ಹಣದ ದಾಹದಿಂದ ಸಂಭವಿಸುತ್ತಿದೆ. ಇದು ಸರಕಾರೀ ಹತ್ಯೆಯಲ್ಲದೆ ಮತ್ತೇನು? ಈ ಹಂತಕರನ್ನು ಆಂತರಿಕ ಭಯೋತ್ಪಾದಕರು ಎಂದು ಕರೆಯಬೇಕಲ್ಲವೇ? ಭಯೋತ್ಪಾದನೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೀವವನ್ನು ಬಲಿಪಡಿಯುತ್ತಿರುವ ಈ ಸರ್ಕಾರಿ ಕೊಲೆಗಡುಕರಿಗೆ ಸದ್ಯಕ್ಕೆ ನಮ್ಮಲ್ಯಾವ ಶಿಕ್ಷೆಯೂ ಇಲ್ಲ; ಶಿಕ್ಷೆ ಇರಲಿ ಅವರನ್ನು ಅಪರಾಧಿಗಳನ್ನಾಗಿಯೂ ಪರಿಗಣಿಸುವುದಿಲ್ಲ. ಗುಂಡಿ ತಪ್ಪಿಸಲು ಗಾಡಿ ನಿಧಾನಗೊಳಿಸಿದ, ಇದ್ದಕ್ಕಿದ್ದಂತೆ ಗಾಡಿಯನ್ನು ಎಡಕ್ಕೋ ಬಲಕ್ಕೋ ತಿರುಗಿಸಿದ ಚಾಲಕನನ್ನೇ ಅಪರಾಧಿಯನ್ನಾಗಿ ಮಾಡಲಾಗುತ್ತದೆಯೇ ಹೊರತು ಯಾವೊಬ್ಬ ರಾಜಕಾರಣಿಯೂ ಗುತ್ತಿಗೆದಾರನೂ, ಅಧಿಕಾರಿಯೂ ಇಲ್ಲಿ ಅಪರಾಧಿಯಾಗುವುದಿಲ್ಲ. ಭಯೋತ್ಪಾದನೆಯ ತಡೆಗೆ ಕೊಟ್ಟಷ್ಟು ಗಮನದಲ್ಲಿ ಅರ್ಧದಷ್ಟನ್ನು ರಸ್ತೆ ಸುರಕ್ಷತೆಗೆ ನೀಡಿದ್ದರೆ ಈ ಸರ್ಕಾರೀ ಹತ್ಯೆಗಳಲ್ಲಿ ಹಲವಷ್ಟನ್ನು ತಪ್ಪಿಸಬಹುದಿತ್ತು. ಸತ್ತವರ ಕುಟುಂಬದವರಿಗಲ್ಲದೆ ಬೇರೆಯವರಿಗಿದು ಭಾವನಾತ್ಮಕ ವಿಷಯವೇನಲ್ಲವಲ್ಲ, ಹಾಗಾಗಿ ನಮ್ಮ ಸರಕಾರಗಳಿಗೂ ಇದರ ಬಗ್ಗೆ ಅಸಡ್ಡೆ, ನಮಗೂ ನಿರ್ಲಕ್ಷ್ಯ. ಗುಂಡಿ ತಪ್ಪಿಸಿಕೊಂಡು ಗಮ್ಯ ತಲುಪಿಬಿಟ್ಟರೆ ಸಾಕು ನಮಗೆ.

ಮೊನ್ನೆಯಷ್ಟೇ ಮತ್ತೊಬ್ಬ ಮಹಿಳೆ ಗುಂಡಿಯ ದೆಸೆಯಿಂದಾಗಿ ಮೃತಪಟ್ಟಿದ್ದಾರೆ. ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಜಾರ್ಜ್ ಜೊತೆಗೂಡಿ ಗುಂಡಿ ದರ್ಶನ ಮಾಡಿದ್ದಾರೆ. ಬಿ.ಬಿ.ಎಂ.ಪಿ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು ಹದಿನಾರು ಸಾವಿರ ಗುಂಡಿಗಳಿದ್ದಾವಂತೆ. ಅವುಗಳನ್ನು ಹದಿನೈದು ದಿನಗಳಲ್ಲಿ ಮುಚ್ಚುವಂತೆ ಮಾನ್ಯ ಸಿದ್ಧರಾಮಯ್ಯ ಆದೇಶಿಸಿದ್ದಾರೆ. ದಿನಕ್ಕೆ ಸಾವಿರ ಗುಂಡಿಗಳನ್ನು ನಮ್ಮ ಗುತ್ತಿಗೆದಾರರು ಮುಚ್ಚುತ್ತಾರಾ? ಗುತ್ತಿಗೆದಾರರು ಅಷ್ಟು ವೇಗವಾಗಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಅಧಿಕಾರಿಗಳು ಮಾಡುತ್ತಾರಾ? ಹದಿನೈದು ದಿನಗಳಲ್ಲಿ ಕೆಲಸ ಮುಗಿಯಿತಾ ಇಲ್ಲವಾ ಎಂದು ಮುಖ್ಯಮಂತ್ರಿಗಳು, ಸಚಿವರು ಪರಿಶೀಲಿಸುತ್ತಾರಾ? ಕಾದು ನೋಡಬೇಕಷ್ಟೇ. 

No comments:

Post a Comment