May 13, 2016

ಮೇಕಿಂಗ್ ಹಿಸ್ಟರಿ: ಸ್ಥಳೀಯ ಮಾರುಕಟ್ಟೆಯ ನಾಶ: ಎಚ್ಚರಗೊಂಡ ಕನ್ನಡ ದೇಶದ ಸಂಕಟ

saketh rajan kannada making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
13/05/2016


ಸ್ಥಳೀಯ ಮಾರುಕಟ್ಟೆಯನ್ನು ಸಬಲಗೊಳಿಸುವುದು ಮುಖ್ಯವಾಗಿತ್ತು, ಊಳಿಗಮಾನ್ಯತೆಯ ವಿರುದ್ಧ ಹೋರಾಡಲು ಮತ್ತು ಕನ್ನಡ ನಾಡಿನ ಏಳಿಗೆಗಾಗಿ ಹಾಗೂ ದೇಶ ಭಾವನೆಯನ್ನು ಅರಿತುಕೊಳ್ಳುವುದಕ್ಕಾಗಿ. ಸ್ಥಳೀಯ ಮಾರುಕಟ್ಟೆಯನ್ನು ವಸಾಹತುಶಾಹಿ ತನ್ನ ಪ್ರಾರಂಭದ ದಿನಗಳಲ್ಲಿ ತುಳಿದು ಹಾಕಿದ್ದು ಮೇಲಿನ ಪ್ರಜ್ಞೆಗಳು ಮರೆಯಾಗಿಹೋಗಲಿ ಎಂಬ ಕಾರಣದಿಂದ. (172) ಸ್ಥಳೀಯ ಮಾರುಕಟ್ಟೆಯನ್ನು ನಾಶಪಡಿಸುವುದು ಕರ್ನಾಟಕವನ್ನು ಆಕ್ರಮಿಸಿದ ಬ್ರಿಟೀಷರ ಗುರಿಗಳಲ್ಲೊಂದಾಗಿತ್ತು. ಸ್ಥಳೀಯ ಮಾರುಕಟ್ಟೆಯ ನಾಶವಾಗದೆ ಕರ್ನಾಟಕದ ಪ್ರಾಂತ್ಯದಾದ್ಯಂತ ವಸಾಹತು ಮಾರುಕಟ್ಟೆಯನ್ನು ವಿಸ್ತರಿಸುವುದನ್ನು ಸಾಧಿಸಲಾಗುತ್ತಿರಲಿಲ್ಲ.

ಕರ್ನಾಟಕದ ಸ್ಥಳೀಯ ಮಾರುಕಟ್ಟೆಯ ಅಸ್ತಿತ್ವವನ್ನು ನಾಶಪಡಿಸುವ ಸಲುವಾಗಿ ರಾಜಕೀಯ ಮುಖಂಡರನ್ನು ಮೊದಲು ಗುರಿಯಾಗಿಸಲಾಯಿತು. ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ನಾವು ನೋಡಿದಂತೆ ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯನ್ನು ಗುರಿಯಾಗಿಸಲಾಯಿತು. ಕರ್ನಾಟಕವನ್ನು ರಾಜಕೀಯವಾಗಿ ಛಿದ್ರಗೊಳಿಸಿದ್ದು ಸ್ಥಳೀಯ ಮಾರುಕಟ್ಟೆಯ ವಿಸ್ತರಣೆಯ ಮೇಲೆ ನಕರಾತ್ಮಕ ಪರಿಣಾಮ ಉಂಟುಮಾಡಿತು. ಉತ್ಪನ್ನವೊಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶ ತಲುಪಲು ಅನೇಕ ಕಡೆ ತೆರಿಗೆ ಮತ್ತು ಟೋಲ್ ಕಟ್ಟಬೇಕಾಯಿತು. ಇಷ್ಟೆಲ್ಲ ತೆರಿಗೆ ಕಟ್ಟಿದ ನಂತರ ಗ್ರಾಹಕನ ಕೈಸೇರುವಷ್ಟರಲ್ಲಿ ಉತ್ಪನ್ನದ ಬೆಲೆ ಹೆಚ್ಚಾಗಿಬಿಡುತ್ತಿತ್ತು ಮತ್ತು ಬ್ರಿಟೀಷ್ ಉತ್ಪನ್ನಗಳ ವಿರುದ್ಧದ ಬೆಲೆ ಸಮರದಲ್ಲಿ ಸೋತು ಮರೆಯಾಗಿಹೋದವು.

ಬ್ರಿಟೀಷ್ ವಸಾಹತುಶಾಹಿಯ ಆರ್ಥಿಕ ಗುರಿಯಾಗಿದ್ದಿದ್ದು ದೇಶೀಯ ವರ್ತಕರು, ಬಂಡವಾಳಶಾಹಿ ಉತ್ಪಾದನೆಯ ವರ್ಗ ಮಾಲೀಕರು ಮತ್ತು ವಿವಿಧತೆಯ ಉತ್ಪನ್ನಗಳನ್ನು ತಯಾರಿಸುತ್ತಿದ್ದ ಕಸುಬುದಾರರು. ದೇಶೀಯ ವರ್ತಕರ ಮತ್ತು ವರ್ಗ ಮಾಲೀಕರ ಪತನ ಅವರನ್ನು ಪೋಷಿಸುತ್ತಿದ್ದ ರಾಜಕಾರಣಿಗಳ ಅಂತ್ಯದೊಂದಿಗೆ ಅತಿ ಶೀಘ್ರವಾಗಿ ನಡೆದುಹೋಯಿತು. ಬ್ರಿಟೀಷ್ ಆಕ್ರಮಣದ ಕೆಲವೇ ವರುಷಗಳಲ್ಲಿ ಬಣಜಿಗ ಶೆಟ್ಟರು ಕಳಂಕದೊಂದಿಗೆ ಕುಸಿತ ಕಂಡರು. ಅವರು ಬಂಡವಾಳಶಾಹಿತನಕ್ಕೆ ಕೊಡುತ್ತಿದ್ದ ಬೆಂಬಲವೆಲ್ಲವೂ ಮರೆಯಾಗಿಹೋಯಿತು. ಎಷ್ಟರಮಟ್ಟಿಗೆ ಇದು ನಡೆಯಿತೆಂದರೆ ಜಾಗರೂಕ ಇತಿಹಾಸಕಾರರಾದ ಇರ್ಫಾನ್ ಹಬೀಬ್ ರಂತವರಿಗೂ ಕೂಡ ಇವರ ಇತಿಹಾಸದ ಬಗ್ಗೆ ಅನುಮಾನಗಳುಂಟಾಯಿತು. ಆರನೇ ಪಾವ್ಲೋವ್ ಈ ಪತನದ ಬಗ್ಗೆ ಸರಿಯಾಗಿ ತಿಳಿಸುತ್ತಾರೆ. ಅವರು ಹೇಳುತ್ತಾರೆ: “ಪ್ರತಿಯೊಬ್ಬರಿಗೂ ನಿರ್ದಿಷ್ಟ ಕೆಲಸ ಹಂಚಿದ ಕೈಗಾರಿಕೆಯ ಪತನ ಅಥವಾ ನಾಶವನ್ನು ಲೆಕ್ಕಕ್ಕೆ ತೆಗೆದುಕೊಂಡರೆ……..ಚಿಕ್ಕ ಪುಟ್ಟ ಬಂಡವಾಳಶಾಹಿಗೆ ಅಥವಾ ಉತ್ಪಾದನಾ ವಲಯಕ್ಕೆ ಭಾರತದ ಆ ಸಂದರ್ಭದಲ್ಲಿ ನೆಲೆ ಕಂಡುಕೊಳ್ಳುವ ಯಾವ ಅವಕಾಶಗಳೂ ಇರಲಿಲ್ಲ ಎನ್ನುವುದರ ಅರಿವಾಗುತ್ತದೆ.” (173)

ಬಂಡವಾಳಶಾಹಿತನದ ಬರುವಿಕೆಯಯನ್ನು ಸೂಚಿಸುವಂತಹ, ಉತ್ಪಾದನೆ ಸಂಘಟನೆಯಲ್ಲಿನ ಮುಂದುವರೆದ ರೂಪಗಳನ್ನು ತೊಡೆದು ಹಾಕಲಾಯಿತು. ಇದರೊಂದಿಗೆ, ಸ್ಥಳೀಯ ಮಾರುಕಟ್ಟೆಯನ್ನು ಒಟ್ಟಾಗಿಸಿ ಕೇಂದ್ರೀಕೃತಗೊಳಿಸಿದ ರಾಜಕೀಯ ಶಕ್ತಿಗಳನ್ನು ಸೋಲಿಸುವುದರ ಜೊತೆಗೆ, ಈ ಒಗ್ಗಟ್ಟಿಗೊಂದು ಸುಭದ್ರ ಆರ್ಥಿಕ ಬುನಾದಿಯನ್ನಾಕಿದ್ದ ಸಾಮಾಜಿಕ ವರ್ಗಗಳನ್ನು ಒಡೆಯಲಾಯಿತು. ಈ ವರ್ಗಗಳ ನಾಶದೊಂದಿಗೆ, ಬ್ರಿಟೀಷ್ ವಸಾಹತುಶಾಹಿಯ ಆರ್ಥಿಕ ಗುರಿಗಳು ಹೆಚ್ಚು ಕಡಿಮೆ ಗೆದ್ದಂತಾಗಿತ್ತು. ಸಶಕ್ತ ವರ್ತಕ ವರ್ಗದ ಸೋಲು ಮತ್ತು ನಂತರ ಬಂಡವಾಳಶಾಹಿ ಉತ್ಪಾದನೆಯ ನಾಶದ ನಂತರ ಸ್ಥಳೀಯ ಮಾರುಕಟ್ಟೆಯನ್ನು ಒಟ್ಟಾಗಿಟ್ಟ ಪ್ರಮುಖ ವರ್ಗವೇ ಇಲ್ಲವಾಗಿತ್ತು. ನಂತರದ ದಿನಗಳಲ್ಲಿ ಕಸುಬುದಾರರ ಮೇಲೆ ನಡೆಸಿದ ದಾಳಿ ಅದಾಗಲೇ ಪಾರ್ಶ್ವವಾಯು ಪೀಡಿತವಾಗಿದ್ದ ಕರ್ನಾಟಕದ ಸ್ಥಳೀಯ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಲು ನಡೆಸಿದ ಕಾರ್ಯವಾಗಿತ್ತಷ್ಟೇ. ಇದು ಬ್ರಿಟೀಷ್ ಬಂಡವಾಳಶಾಹಿತನದ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸುವುದಕ್ಕಾಗಿ ಮಾಡಿದ ಕೆಲಸವಷ್ಟೇ. ಏನಾಯಿತೆಂಬುದನ್ನು ಮಾರ್ಟಿನ್ ಕಾರ್ನಾಯ್ ಈ ರೀತಿ ವಿವರಿಸುತ್ತಾರೆ: “ಇದು ವಸಾಹತುಶಾಹಿ ಬೆಳೆಸಿದ ಮೂಲಭೂತ ಸಂಬಂಧ. ರಫ್ತು ಮಾಡುವ ದೇಶವಾಗಿದ್ದ ಭಾರತ ಆಮದು ಮಾಡಿಕೊಳ್ಳುವ ದೇಶವಾಯಿತು; ಉತ್ಪಾದಕ ರಾಷ್ಟ್ರವಾಗಿ ಚಿಗುರುತ್ತಿದ್ದ ಭಾರತ ಮತ್ತೆ ಪೂರ್ಣ ಕೃಷಿ ದೇಶವಾಗುವೆಡೆಗೆ ಮರಳಿತು, ನಗರಗಳ ಜನಸಂಖೈ ಕಡಿಮೆಯಾಗಿಬಿಟ್ಟಿತು, ರೈತರು ಚಿಕ್ಕ ಚಿಕ್ಕ ಜಮೀನುಗಳ ಮೇಲೆ ಅವಲಂಬಿತರಾದರು ಮತ್ತವರು ಉತ್ಪಾದನೆ ಹಸಿವನ್ನು ಕೊಂಚ ನೀಗಿಸುತ್ತಿತ್ತು. ಇದೆಲ್ಲವನ್ನೂ ಉಪಯೋಗಿಸಿಕೊಂಡು “ಪ್ರಗತಿಪರ” ಬ್ರಿಟನ್ನನ್ನು ಕಟ್ಟಲಾಯಿತು. 1850ರಷ್ಟರಲ್ಲಿ ಬ್ರಿಟನ್ನಿನ ಹತ್ತಿ ರಫ್ತಿನ ನಾಲ್ಕನೇ ಒಂದಂಶದಷ್ಟು ಭಾರತದ ಮಾರುಕಟ್ಟೆಗೇ ಹೋಗುತ್ತಿತ್ತು. ಇಂಗ್ಲೆಂಡಿನ ಜನಸಂಖೈಯ ಎಂಟನೇ ಒಂದಂಶದಷ್ಟು ಜನರಿಗೆ ಉದ್ಯೋಗ ನೀಡಿದ್ದ ಹತ್ತಿ ಉದ್ಯಮ ರಾಷ್ಟ್ರದ ಆದಾಯಕ್ಕೆ ಹನ್ನೆರಡನೇ ಒಂದಂಶದಷ್ಟು ಕಾಣ್ಕೆ ನೀಡುತ್ತಿತ್ತು.” (174)

ದೇಶೀಯ ವರ್ತಕರ ನಾಶ ಮತ್ತು ಬಂಡವಾಳಶಾಹಿ ಉತ್ಪಾದನೆಯ ಪ್ರಾರಂಭದಿಂದಾದ ತಕ್ಷಣದ ಪರಿಣಾಮವೆಂದರೆ ಕರ್ನಾಟಕದೊಳಗಿದ್ದ ವಿವಿಧ ಬಂಧಗಳನ್ನು ಕಡಿದುಹಾಕಿದ್ದು. ಕರ್ನಾಟಕದಲ್ಲಿ ಪ್ರದೇಶದ ಆಧಾರದಲ್ಲಿ ವಿಭಿನ್ನವಾಗಿದ್ದ ಮಾರುಕಟ್ಟೆಯನ್ನು ಕೃಷಿ ಮತ್ತು ಕೈಗಾರಿಕೆ ಒಂದುಗೂಡಿಸಿತ್ತು, ಈ ಒಗ್ಗಟ್ಟಿನ ಬಂಧವನ್ನು ಮೊದಲು ಕಡಿಯಲಾಯಿತು. ಉತ್ತರವನ್ನು ದಕ್ಷಿಣದಿಂದ ಬೇರ್ಪಡಿಸಲಾಯಿತು, ಪೂರ್ವವನ್ನು ಪಶ್ಚಿಮದಿಂದ. ಸ್ಥಳೀಯ ಮಾರುಕಟ್ಟೆಯನ್ನು ಹೀಗೆ ಛಿದ್ರಪಡಿಸಿದ್ದು ಕರ್ನಾಟಕವನ್ನು ರಾಜಕೀಯವಾಗಿ ವಿಭಾಗಿಸಿಬಿಟ್ಟ ಪ್ರತಿಧ್ವನಿಯಾಗಿತ್ತು. ಹತ್ತಿ ಬೆಳೆಗಾರರ ಮತ್ತು ನೇಕಾರರ ನಡುವಿನ ಬಂಧ, ಬೀಜೋತ್ಪಾದಕರ ಮತ್ತು ಎಣ್ಣೆ ತೆಗೆಯುವವರ ನಡುವಿನ ಬಂಧ, ಕುರಿ ಸಾಕುವವರು ಮತ್ತು ಕಂಬಳಿ ನೇಯುವವರ ನಡುವಿನ ಬಂಧವನ್ನು ಕೊನೆಗಾಣಿಸಲಾಯಿತು. ಕೆಲಸವನ್ನು ಪ್ರದೇಶದ ಆಧಾರದಲ್ಲಿ ಹಂಚಿಕೊಂಡಿದ್ದನ್ನು ಮತ್ತು ಅದರೊಂದಿಗೆ ಉತ್ಪಾನೆಯಲ್ಲಿ ಮೂಡುತ್ತಿದ್ದ ತಜ್ಞತೆಯನ್ನು ನಾಶಪಡಿಸಲಾಯಿತು; ಒಂದು ಕಾಲದಲ್ಲಿ ಆರ್ಥಿಕ ಮುನ್ನಡೆಗೆ ಕಾರಣವಾಗಿದ್ದ ಅಂಶಗಳೆಲ್ಲವೂ ಈಗಿನ ಉತ್ಪಾದಕರಿಗೆ ಶಾಪದಂತೆ ಮಾಡಲಾಯಿತು. ಉತ್ಪಾದಕತೆಗೆ ಬೇಕಿದ್ದ ಬಂಧದ ನೇಯಿಗೆ ಈಗ ನೇಣಿನ ಕುಣಿಕೆಯಂತಾಗಿ ಕತ್ತಿಗೆ ಸುತ್ತಿಕೊಂಡಿತ್ತು. ರೈತರು ಮತ್ತು ಕಸುಬುದಾರರು ಈ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಪ್ರಯತ್ನಪಟ್ಟು ಕೊನೆಗೆ ಊಳಿಗಮಾನ್ಯತೆಯನ್ನಪ್ಪಿಕೊಂಡಿದ್ದ ಹಳ್ಳಿಗಳಿಗೆ ಮರಳಿದರು.

ಸ್ಥಳೀಯ ಮಾರುಕಟ್ಟೆಯಲ್ಲಿದ್ದ ಕೃಷಿ – ಕೈಗಾರಿಕೆ – ಕೃಷಿ ಚಕ್ರದ ನಿರಂತರತೆಯನ್ನು ಮುರಿದು ಹಾಕಿದ್ದು ವಸಾಹತುಶಾಹಿಯ ಮಧ್ಯಪ್ರವೇಶದಿಂದಾದ ಮತ್ತೊಂದು ಪ್ರಮುಖ ವಿರೂಪ. ಈ ನೈಸರ್ಗಿಕ ನಿರಂತರತೆಯು ಒಂದು ವಲಯದ ಅಭಿವೃದ್ಧಿ ಮತ್ತೊಂದರ ಅಭಿವೃದ್ಧಿಯನ್ನು ಪೋಷಿಸುತ್ತಿತ್ತು. ಕೃಷಿಯಲ್ಲಿನ ಈ ಪ್ರವೃತ್ತಿ ನಿಧಾನವಾಗಿ ರೈತರ ತರ್ಕಬದ್ಧ ಎಚ್ಚರಿಕೆಗೆ ಕಾರಣವಾಗಿತ್ತು ಮತ್ತು ಕನ್ನಡ ದೇಶದ ಏಳ್ಗೆಗೆ ಕಾಣ್ಕೆ ನೀಡಿತು. ವ್ಯಾಪಾರ ಮತ್ತು ಉತ್ಪಾದನೆಯ ಮೇಲೆ ದಾಳಿ ನಡೆಸಿದ ವಸಾಹತುಶಾಹಿ ಕೃಷಿ ಮತ್ತು ಕೈಗಾರಿಕೆ ನಡುವಿನ ಈ ಸಂಬಂಧವನ್ನು ಮುರಿದು ಹಾಕಿತು. ಒಂದೆಡೆ ಪರಸ್ಪರರ ಮೇಲೆ ಅವಲಂಬಿತವಾಗಿದ್ದ ಕೃಷಿ ಮತ್ತು ಕೈಗಾರಿಕೆಯನ್ನು ಬಿಕ್ಕಟ್ಟಿಗೆ ದೂಡಿದ ವಸಾಹತುಶಾಹಿ ಮತ್ತೊಂದೆಡೆ ಈ ಮುರಿದುಹಾಕುವಿಕೆಯ ಕಾರಣದಿಂದಲೇ ವಸಾಹತುಶಾಹಿ ಕರ್ನಾಟಕದ ಮಾರುಕಟ್ಟೆಯನ್ನು ತನ್ನ ವ್ಯಾಪಾರಕ್ಕಾಗಿ ಪ್ರವೇಶಿಸುವುದು ಸಾಧ್ಯವಾಯಿತು. ನಮ್ಮ ಕೃಷಿಯನ್ನು ತಮ್ಮ ಉತ್ಪಾದನೆಯ ಆಸಕ್ತಿಗಳಿಗನುಗುಣವಾಗಿ ಗುಲಾಮನನ್ನಾಗಿಸಿಕೊಂಡಿತು.

ಸ್ಥಳೀಯ ಮಾರುಕಟ್ಟೆಯ ಮೇಲಾದ ಮತ್ತೊಂದು ಪರಿಣಾಮವೆಂದರೆ ನಗರ ಪ್ರದೇಶಗಳ ಕೊಳೆಯುವಿಕೆ. ಈ ಪರಿಣಾಮ ಎಷ್ಟು ಮಾರಣಾಂತಿಕವಾಗಿತ್ತೆಂದರೆ ನಗರೀಕರಣದ ಪ್ರಕ್ರಿಯೆ ಮತ್ತೆ ಕರ್ನಾಟಕದಲ್ಲಿ ಕಾಣಿಸಿಕೊಳ್ಳುವುದಕ್ಕೆ ಕನಿಷ್ಟ ಒಂದು ಶತಮಾನವಾದರೂ ಬೇಕಿತ್ತು. ಆದರೀ ಸಲ ಇದು ವಸಾಹತುಶಾಹಿ ಶೋಷಣೆ ಮತ್ತು ವಿರೂಪಗೊಂಡ ಬಂಡವಾಳಶಾಹೀ ಅಭಿವೃದ್ಧಿಯ ಶರತ್ತಿನ ಮೇಲೆ ನಡೆಯಬೇಕಿತ್ತು. ನಗರಗಳ ಕುಸಿತದ ರೀತಿಯನ್ನು ವಿವರಿಸಲು ನಮ್ಮಲ್ಲಿ ಅಂಕಿಸಂಖೈಗಳು ಇಲ್ಲವಾದರೂ ನಗರ ಕೇಂದ್ರಗಳು ಅತೀ ಶೀಘ್ರವಾಗಿ ವಿಸರ್ಜಿಸಿದ್ದರ ಬಗ್ಗೆ ಅನುಮಾನಗಳು ಬೇಡ.

ಟಿಪ್ಪು ಸುಲ್ತಾನನ ಸೋಲಿನ ನಂತರದ ಕೆಲವೇ ತಿಂಗಳುಗಳಲ್ಲಿ ಶ್ರೀರಂಗಪಟ್ಟಣ ಚಿತ್ರವಿಚಿತ್ರವಾಗಿ, ಅದರ ಜನಸಂಖೈ ಒಂದೂವರೆ ಲಕ್ಷದಿಂದ ಮೂವತ್ತು ಸಾವಿರಕ್ಕೂ ಕಡಿಮೆಯಾಗಿಬಿಟ್ಟಿತು ಎಂದು ಬುಚನನ್ ತಿಳಿಸುತ್ತಾನೆ. ರಾಜಕೀಯ ಮತ್ತು ಆಡಳಿತದ ಕೇಂದ್ರವಾಗಿದ್ದ ಶ್ರೀರಂಗಪಟ್ಟಣ ಇದೊಂದೇ ಉದ್ದೇಶಕ್ಕೆ ತೊಂದರೆ ಅನುಭವಿಸಲಿಲ್ಲ, ಸೈನ್ಯವನ್ನು ವಿಸರ್ಜಿಸಿದ್ದು ಸೈನಿಕರೇ ಹೆಚ್ಚಿದ್ದ ಶ್ರೀರಂಗಪಟ್ಟಣದ ಜನಸಂಖೈಯನ್ನು ಕಡಿಮೆಯಾಗಿಸಿಬಿಟ್ಟಿತು. ಗಂಜಾಂ ಶಹರ ನಗರ ಮಾರುಕಟ್ಟೆಯಾಗಿ ಬೆಳೆಯುತ್ತಿದ್ದುದಕ್ಕೆ ಸಿಗುತ್ತಿದ್ದ ಎಲ್ಲಾ ಉಲ್ಲೇಖಗಳು ಆಕ್ರಮಣದ ನಂತರದ ಕೆಲವೇ ವರುಷಗಳಲ್ಲಿ ಸಿಗದಂತಾಗಿಬಿಟ್ಟಿತು. 1852ರಲ್ಲಿ ಶ್ರೀರಂಗಪಟ್ಟಣದ ಜನಸಂಖೈ ಕೇವಲ 12,744. (175)

1834ರಲ್ಲಿ ಮೆಕಲಾಯ್ ನ ಶ್ರೀರಂಗಪಟ್ಟಣದ ಭೇಟಿಯ ಬಗ್ಗೆ ಶಾಮ ರಾವ್ ಬರೆಯುತ್ತಾರೆ: “ಇಲ್ಲಿ (ಶ್ರೀರಂಗಪಟ್ಟಣದಲ್ಲಿ) ಮೆಕಲಾಯ್ ರೆಸಿಡೆನ್ಸಿಯ ಅಧಿಕಾರಿಯನ್ನು ಭೇಟಿಯಾದ, ಈ ಅಧಿಕಾರಿ ಮೆಕಲಾಯ್ ಗೆ ನೋಡಬೇಕಾದಂತಹ ಎಲ್ಲವನ್ನೂ ತೋರಿಸಲು ನೇಮಕಗೊಂಡಿದ್ದ. ಕೋಟೆ ಸಂಪೂರ್ಣವಾಗಿದ್ದರೂ ನಗರ ಜನರಹಿತವಾಗಿತ್ತು ಎಂಬುದನ್ನಾತ ನೋಡಿದ. ನಗರವು ಮೌನವಾಗಿತ್ತು, ಪಾಳುಬಿದ್ದಿತ್ತು. ಟಿಪ್ಪುವಿನ ಅರಮನೆ ನೆಲಸಮವಾಗುವಂತಿತ್ತು. ಆವರಣಗಳನ್ನು ಕಳೆ ಮತ್ತು ಹೂವುಗಳು ಆವರಿಸಿಕೊಂಡುಬಿಟ್ಟಿದ್ದವು…..” (176)

1855ರಲ್ಲಿ ಪ್ರಕಟವಾದ ದಕ್ಷಿಣ ಭಾರತದ ಗೆಝೆಟೀರ್ ನಗರ ಸಂಪೂರ್ಣ ನಾಶವಾಗಿದ್ದರ ಬಗ್ಗೆ ಮಾತನಾಡುತ್ತದೆ. “ಒಂದು ಕಾಲದಲ್ಲಿ ಮೈಸೂರಿನ ಪಶ್ಚಿಮಘಟ್ಟದಲ್ಲಿದ್ದ ಹೆಚ್ಚು ಜನಸಂಖೈಯ ನಗರವಾಗಿತ್ತದು…….. ಆ ಜಾಗ ಶಕ್ತಿಯ ಸಂಕೇತವಾಗಿತ್ತು, ಜನಸಾಂದ್ರತೆಯ ಪ್ರದೇಶವಾಗಿತ್ತು, ಅದರ ಪಳೆಯುಳಿಕೆಗಳು ಸೂಚಿಸುವಂತೆ……ಈಗದು ಒಂದು ಸಾಧಾರಣ ಹಳ್ಳಿ.” (177)

ಈ ಚಿತ್ರಣ ಆತ್ಮಕಲಕುವಂತದ್ದು.

ಈ ಸಮಯದ ಬೆಂಗಳೂರಿಗೆ ಸಂಬಂಧಪಟ್ಟ ಅಂಕಿಸಂಖೈಗಳು ದಾರಿತಪ್ಪಿಸುವುದು ಹೆಚ್ಚು. 1849 – 50ರಲ್ಲಿ ನಡೆದ ಒಟ್ಟಾರೆ ಗಣತಿ ನಗರ ಅರ್ಧಕರ್ಧ ಕಡಿಮೆಯಾಗುವುದನ್ನು ಸೂಚಿಸಿದರೆ, ಬೆಂಗಳೂರಿಗೆ ಸಂಬಂಧಪಟ್ಟ ದಾಖಲೆಗಳು ಬ್ರಿಟೀಷ್ ಸೈನ್ಯ ಮತ್ತು ಹಳೆಯ ಪೇಟೆಯನ್ನು ಸೇರಿಸಿದರೆ ನಗರ ಮತ್ತಷ್ಟು ಹೆಚ್ಚಾಗಿರುವುದನ್ನು ಸೂಚಿಸುತ್ತಿತ್ತು. ಗಣತಿಯ ಅಂಶಗಳು ತಪ್ಪೆಂದು ತೋರಿಸುತ್ತಿತ್ತು.

ಈ ಸಮಯದಲ್ಲಿ ಜನಸಂಖೈ ಹೆಚ್ಚಾದ ಒಂದೇ ಪ್ರದೇಶವೆಂದರೆ ಅದು ಮೈಸೂರು. ಕೈಗೊಂಬೆ ರಾಜನ ಮತ್ತವನ ಆಪ್ತರ ಪೀಠವಾಗಿದ್ದ ಮೈಸೂರು ಕೀವುಗಟ್ಟಿದ ಗಾಯದಂತೆ ಬೆಳೆಯುತ್ತಿತ್ತು. 
ಮುಂದಿನ ವಾರ:
ಸಂಸ್ಕೃತಿ: ಅವನತಿಯತ್ತ…

No comments:

Post a Comment