May 20, 2016

ಮೇಕಿಂಗ್ ಹಿಸ್ಟರಿ: ಸಂಸ್ಕೃತಿ: ಅವನತಿಯತ್ತ…

ashok k r making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
20/05/2016


ವಸಾಹತು ಆಕ್ರಮಣ ಮತ್ತು ಊಳಿಗಮಾನ್ಯ ಆಳ್ವಿಕೆಯ ಮರುಸ್ಥಾಪನೆಯೊಂದಿಗೆ ಆಳುವ ತ್ರಿಮೂರ್ತಿಗಳ ಅನುಕೂಲಕ್ಕನುಗುಣವಾಗಿ ಸಾಂಸ್ಕೃತಿಕ ಮೇಲ್ ರಚನೆಯನ್ನು ಪ್ರಜ್ಞಾಪೂರ್ವಕವಾಗಿ ಬದಲಿಸಲಾಯಿತು. ಸಿದ್ಧಾಂತಗಳ ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತ, ಪ್ರಜ್ಞಾಪೂರ್ವಕ ವರ್ಗೋದ್ದೇಶಗಳು ಹೇಗದನ್ನು ಪ್ರೇರೇಪಿಸುತ್ತದೆ ಎಂಬುದರ ಬಗ್ಗೆ ಮಶೂದ್ ದನ್ಮೋಲೆ ಗಮನ ಸೆಳೆಯುತ್ತಾರೆ. ಅವರು ಹೇಳುತ್ತಾರೆ: “ಸಿದ್ಧಾಂತಗಳು ಬಹುತೇಕ ಸಮುದಾಯಗಳ ಜೀವನ ಶೈಲಿಯ ಆತ್ಮೀಯ ಭಾಗವಾಗಿಬಿಟ್ಟಿರುತ್ತದೆ, ಅದನ್ನೊಂದು ನಿರ್ದಿಷ್ಟ ಗುರಿಯಿರುವ ಪ್ರತ್ಯೇಕ ವಿಚಾರದಂತೆ ಗುರುತಿಸಲಾಗುವುದಿಲ್ಲ.” (178) ಇಲ್ಲಿ ಗುರುತಿಸಬೇಕಾದ ಪ್ರಮುಖ ಅಂಶವೆಂದರೆ, ವಸಾಹತುಶಾಹಿಯ ಆಕ್ರಮಣದ ನಂತರ ಸಂಸ್ಕೃತಿಯನ್ನು ಪುನರ್ ನಿರ್ಮಿಸುವ ಪ್ರಯತ್ನ ನಡೆದಾಗ ಕರ್ನಾಟಕದ ಮುನ್ನಡೆಯೊಂದಿಗೆ ಕೊಳೆಯಲಾರಂಭಿಸಿದ್ದ ಊಳಿಗಮಾನ್ಯತೆಯ ಲಕ್ಷಣಗಳನ್ನು, ಹಳೆಯ ಸಂಸ್ಥೆಗಳನ್ನು ಮತ್ತೆ ಪರಿಚಯಿಸಿ ಶಕ್ತಗೊಳಿಸಲಾಯಿತು. ಆರ್ಥಿಕತೆಯಲ್ಲಿ ಊಳಿಗಮಾನ್ಯತೆಯು ಪುನರ್ ಸ್ಥಾಪಿತಗೊಂಡಂತೆಯೇ, ರಾಜಕೀಯ ಮತ್ತು ಸಂಸ್ಕೃತಿಯಲ್ಲೂ ಆಯಿತು; ಕೊಳೆಯಲಾರಂಭಿಸಿದ್ದ ಊಳಿಗಮಾನ್ಯತೆಯ ಆಳ್ವಿಕೆ ಮತ್ತೆ ಬಲಗೊಂಡಿತು. ಊಳಿಗಮಾನ್ಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಮೂಲಕ ವಸಾಹತುಶಾಹಿ ಜನಸಮೂಹವನ್ನು ಗುಲಾಮರನ್ನಾಗಿಸಿತು ಮತ್ತು ಕರ್ನಾಟಕವನ್ನು ವಸಾಹತು ಬಂಡವಾಳದಡಿ ತಂದಿತು. ಹಲವು ದಶಕಗಳ ನಂತರವಷ್ಟೇ ವಸಾಹತುಶಾಹಿ ತನ್ನ ಸಂಸ್ಕೃತಿಯನ್ನು ಜನಸಮೂಹದಲ್ಲಿ ಪಸರಿಸಲಾರಂಭಿಸಿದ್ದು.
ಅ. ಕೈಗೊಂಬೆ ರಾಜನ ಸಾಂಸ್ಕೃತಿಕ ಲಕ್ಷಣ

ಮೈಸೂರು ಆಸ್ಥಾನ ಪ್ರತಿಗಾಮಿ ಸಂಸ್ಕೃತಿಯ ಪ್ರಮುಖ ಕೇಂದ್ರವಾಗಿತ್ತು. ರೆಸಿಡೆಂಟ್ ಮತ್ತು ದಿವಾನರು ನೋಡಿಕೊಳ್ಳುತ್ತಿದ್ದ ಸಾಮ್ರಾಜ್ಯದ ಆಡಳಿತದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲದೆ, ‘ದತ್ತು ಪಡೆದ’ ಬ್ರಿಟೀಷರ ರಕ್ಷಣೆಯಲ್ಲಿದ್ದ ಕಾರಣ ಹೊರಗಿನವರ ಆಕ್ರಮಣದ ಭಯವೂ ಇಲ್ಲದ ಕಾರಣ ಕೆ.ಆರ್. ಒಡೆಯರ್ ಸಾಂಸ್ಕೃತಿಕ ಗುರುತಾಗಿ ಪೋಷಿಸಲ್ಪಟ್ಟರು. ವಸಾಹತಿನ ನಿರೀಕ್ಷೆಯಂತೆ, ರಾಜ ತನ್ನನ್ನು ಅಚ್ಚರಿಗೊಳಿಸುವ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಮುಂದೆ, ಇದು ರಾಜನ ದೊಡ್ಡ ಮತ್ತು ಬಹುಶಃ ಏಕೈಕ ಖರ್ಚಾಯಿತು; ಅದರ ಭಾರವನ್ನು ರಾಜ್ಯದ ಆದಾಯದ ಮೇಲೆ ಹೊರಿಸಿದ. ರಾಜನ ಈ ಖರ್ಚುಗಳು 1831ರಲ್ಲಿ ಕರ್ನಾಟಕವನ್ನು ಅಲುಗಿಸಿದ ಆರ್ಥಿಕ ಬಿಕ್ಕಟ್ಟಿಗೆ ನೀಡಿದ ಕೊಡುಗೆ ಸಣ್ಣದೇನಲ್ಲ. ಈ ದುಂದುವೆಚ್ಚಗಳು ಆದಾಯದ ಎರಡು ಕೋಟಿಗೂ ಅಧಿಕ ಮೊತ್ತವನ್ನು ತಿಂದುಹಾಕಿದ್ದರ ಬಗ್ಗೆ ವಿವರಣೆ ಕೇಳಿದಾಗ, ಕೈಗೊಂಬೆ ರಾಜ 1831ರಲ್ಲಿ ವಿಲಿಯಂ ಬೆಂಟಿಕ್ ಗೆ ಬರೆದ ಪತ್ರದಲ್ಲಿ ತನ್ನ ಖರ್ಚನ್ನು ಸಮರ್ಥಿಸಿಕೊಳ್ಳುತ್ತ ಪೀಠಕ್ಕೆ ಏರಿದಾಗಿಲಿಂದಲೂ ಅವನತಿ ಹೊಂದುತ್ತಿದ್ದ ಸಂಸ್ಕೃತಿಯ ಭಾಗಗಳಲ್ಲಿ ಭಾಗವಹಿಸಲೇಬೇಕಾಗಿತ್ತು ಎಂದು ತಿಳಿಸುತ್ತಾನೆ. ರಾಜ ಬರೆಯುತ್ತಾನೆ: “ಈ ದೇಶಗಳಲ್ಲಿನ ರಾಜರು ರಾಜ್ಯದ ವೈಭವವನ್ನು ಉಳಿಸಲು ನಡೆಸಲೇಬೇಕಾದ ಸಂಗತಿಗಳನ್ನು ನನ್ನ ಜೀವನದ ಮೊದಲ ದಿನಗಳಲ್ಲಿ ಮಾಡಲಾಗಿರಲಿಲ್ಲ, ಆಗದರ ಅವಶ್ಯಕತೆಯೂ ಇರಲಿಲ್ಲ. ಮೇಲೆ ತಿಳಿಸಿದ ಮೊತ್ತ (ಎರಡು ಕೋಟಿ ರುಪಾಯಿ) ಸಂಗ್ರಹವಾಗಿತ್ತು. ನಂತರದಲ್ಲಿ ನಿಮ್ಮ ನೆರಳಿನ ಕೃಪೆಯಿಂದ ನಾನು ವಯಸ್ಕನಾದೆ, ಆ ಸಂಗತಿಗಳೀಗ ಅವಶ್ಯವಾಗಿದೆ ಮತ್ತು ಇತರೆ ಖರ್ಚುಗಳಿಗೂ ಸಂದರ್ಭ ಒದಗಿ ಬಂತು….

ಸಂಕ್ಷಿಪ್ತವಾಗಿ ಹೇಳುವುದಾದರೆ, ಅರಮನೆ, ಕಛೇರಿಗಳ ನಿರ್ಮಾಣ; ಮಠ ಮತ್ತು ದೇವಸ್ಥಾನಗಳ ರಿಪೇರಿ; ಸಾರ್ವಜನಿಕ ಉಪಯೋಗಕ್ಕಾಗಿ ದಾನ ಧರ್ಮ; ಮಕ್ಕಳ ವಿವಾಹ ಮಹೋತ್ಸವ, ಸ್ನೇಹಿತರ ಮತ್ತು ಸಂಬಂಧಿಕರ ಮಕ್ಕಳ ಮದುವೆ, ನೆಂಟರಿಗೆ ಬೆಂಬಲ ಕೊಡುತ್ತ ಅವರಿಗೆ ಭತ್ಯೆ ನೀಡುವುದು ಈ ಖರ್ಚುಗಳಲ್ಲಿ ಸೇರಿದೆ.” (179)

ಶ್ರೀವೈಷ್ಣವ ಬ್ರಾಹ್ಮಣರು ಮೈಸೂರು ಒಡೆಯರರೊಂದಿಗೆ ಯಾವಾಗಲೂ ಹಿತಕರ ಸಂಬಂಧವನ್ನು ಹೊಂದಿದ್ದರು. ಟಿಪ್ಪು ಸುಲ್ತಾನನ ಕಾಲದಲ್ಲಿ ಶ್ರೀ ವೈಷ್ಣವ ಸಲಹೆಗಾರರು ಹೋರಾಟಕ್ಕೆ ಮುನ್ನುಡಿ ಬರೆಯುವ ಪ್ರಯತ್ನ ನಡೆಸಿದ್ದರು, ಆ ಪ್ರತಿಭಟನೆಯನ್ನು ಹತ್ತಿಕ್ಕಲಾಗಿತ್ತು. ಅದಾದ ತಕ್ಷಣವೇ, ಶ್ರೀವೈಷ್ಣವರ ಪರ್ಕಳ ಮಠದ ಇಪ್ಪತ್ತೈದನೇ ಶ್ರೀಗಳಾದ ರಾಮಾನುಜರವರು ಶ್ರೀರಂಗಪಟ್ಟಣದ ಪೀಠವನ್ನು ತ್ಯಜಿಸಿ ತಿರುಪತಿಗೆ ಹೋಗಿ ನೆಲೆಸಿದರು, ತಿರುಪತಿ ಆಗ ಬ್ರಿಟೀಷರ ಆಳ್ವಿಕೆಯಲ್ಲಿತ್ತು. ರಾಮಾನುಜರ ವೆಬ್ ಪುಟ ಹೇಳುತ್ತದೆ: “ಮೈಸೂರಿನ ಮಹಾರಾಣಿ ಮತ್ತಲವು ಶುಭ ಕೋರುವವರ ಒತ್ತಾಯದ ಮೇರೆಗೆ, ಶ್ರೀಗಳು ತಿರುಪತಿಗೆ ತೆರಳಿದರು; ಮಠದ ದೈವಿಕ ಪರಂಪರೆಯನ್ನು ಉಳಿಸುವ ಸಲುವಾಗಿ.”(179A) ರಾಮಾನುಜರ ತಿರುಪತಿಗೆ ಓಡಿ ಹೋದ ಸಂದರ್ಭದಲ್ಲೇ ರಾಣಿ ಲಕ್ಷ್ಮಿ ಅಮ್ಮಣ್ಣಿ ಕೂಡ ಮೈಸೂರಿನಿಂದ ಓಡಿಹೋಗಿದ್ದರು, ಬ್ರಿಟೀಷರು ಅವರಿಗೆ ತಿರುಚ್ಚಿಯಲ್ಲಿ ಆಶ್ರಯ ನೀಡಿದ್ದರು. ಟಿಪ್ಪು ಸುಲ್ತಾನನ ಪತನದ ನಂತರ ರಾಣಿ ರಾಮಾನುಜರನ್ನು ಮರಳಿ ಶ್ರೀರಂಗಪಟ್ಟಣಕ್ಕೆ ಬರುವಂತೆ ಮನವಿ ಮಾಡಿಕೊಂಡರು. ಶ್ರೀಗಳು ಇದಕ್ಕೆ ನಮ್ರವಾಗಿ ಒಪ್ಪಿ, ಮೂರನೇ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕವನ್ನೂ ನಡೆಸಿಕೊಟ್ಟರು ರಾಣಿಯವರ ಮಾತಿನಂತೆ. ನಂತರದಲ್ಲಿ ಒಡೆಯರ್ ಕುಟುಂಬ ಪರ್ಕಳ ಮಠಕ್ಕೆ ಅನೇಕಾನೇಕ ಉಡುಗೊರೆಗಳನ್ನು ಕೊಟ್ಟಿತು. ಅದರಲ್ಲಿ “ಶ್ರೀ ಶ್ವೇತ – ವರಾಹ ಸ್ವಾಮಿಯ ಸುಂದರ ದೇವಸ್ಥಾನವನ್ನು ಮಠದ ಚಟುವಟಿಕಗೆಳ ಸಲುವಾಗಿ ಶ್ರೀಗಳಿಗೆ ಉಡುಗೊರೆಯಾಗಿ…..” (179B) ಕೊಟ್ಟಿದ್ದು ಪ್ರಮುಖವಾದುದು.

ಮೈಸೂರು ಆಸ್ಥಾನದ ಆಪ್ತರಾಗಿದ್ದ, ಕೈಗೊಂಬೆ ರಾಜರ ಆಶ್ರಯದ ಸದುಪಯೋಗ ಪಡೆದುಕೊಂಡ ಲಕ್ಷ್ಮಿನರಸಿಂಹಯ್ಯ ಮತ್ತು ಅದೇ ತರಹದ ಇತರೆ ಬ್ರಾಹ್ಮಣರು ಪುಸ್ತಕವೊಂದರಲ್ಲಿ ಒಡೆಯರ್ ಬಗ್ಗೆ ಈ ರೀತಿಯಾಗಿ ಹೇಳುತ್ತಾರೆ: “ಶೇಷ ಕುಟುಂಬದ (ಕಾಶಿ ಶೇಷ ಶಾಸ್ತ್ರಿ, ಅರಮನೆಯ ಮೇಲೆ ಅವಲಂಬಿತನಾಗಿದ್ದ ಬ್ರಾಹ್ಮಣ) ಪದ್ಧತಿಯ ಪ್ರಕಾರ ಮಹಾರಾಜ ಖುದ್ದಾಗಿ ವಧು ಮತ್ತು ವರರನ್ನು ಜಾತಕದ ಆಧಾರದ ಮೇಲೆ ಆಯ್ಕೆ ಮಾಡುತ್ತಿದ್ದ. ದಿನಾಂಕ ಗೊತ್ತು ಪಡಿಸುತ್ತಿದ್ದ ಮತ್ತು ಮದುವೆಯ ಸಮಯದಲ್ಲಿ ಶುಭಗಳಿಗೆಯಲ್ಲಿ ಬರುತ್ತಿದ್ದ, ದಕ್ಷಿಣೆಗಳನ್ನು ಮತ್ತು ಉಡುಗೊರೆಗಳನ್ನು ಬ್ರಾಹ್ಮಣರಿಗೆ ತನ್ನ ಜೇಬಿನಿಂದ ತೆಗೆದು ಕೈಯಾರೆ ಕೊಟ್ಟು, ನವ ದಂಪತಿಗಳಿಗೆ ಆಕರ್ಷಕ ಉಡುಗೊರೆಗಳನ್ನು ಕೊಡುತ್ತಿದ್ದ. ಇವೆಲ್ಲಕ್ಕಿಂತ ಹೆಚ್ಚಾಗಿ, ಮಹಾರಾಜ ಮದುವೆಯ ಕೊನೆಯ ದಿನ ಶೇಷ ಕುಟುಂಬದ ಯುವದಂಪತಿಗಳನ್ನು ಅರಮನೆಯ ಸಕಲ ಗೌರವಗಳೊಂದಿಗೆ ಸಾರ್ವಜನಿಕ ಮೆರವಣಿಗೆಯಲ್ಲಿ ಕರೆದೋಗಬೇಕೆಂದು ಆದೇಶಿಸಿದ್ದ. ಈ ನಿಯಮ ರಾಜನ ಸಾವಿನವರೆಗೂ ಮುಂದುವರೆಯಿತು….” (180)

ಇದೇ ಲೇಖಕರು ಹೇಗೆ ರಾಜ ಸಂಸ್ಕೃತವನ್ನು, ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತವನ್ನು ಉತ್ತೇಜಿಸಿದ ಎಂದು ನಮಗೆ ತಿಳಿಸುತ್ತಾರೆ. ಹೈದರ್ ಮತ್ತು ಟಿಪ್ಪುವಿನ ಕಾಲದಲ್ಲಿ ಸಂಸ್ಕೃತ ಒಳ್ಳೆಯ ಕಾರಣಗಳಿಗಾಗಿ ಊಳಲಾಗಿತ್ತು. ಕೆ.ಆರ್.ಒಡೆಯರ್ ದೇಶದ ವಿವಿಧ ಭಾಗಗಳಲ್ಲಿರುವ ಬ್ರಾಹ್ಮಣ್ಯದ ಕೇಂದ್ರಗಳಿಗೆ ತೀರ್ಥಯಾತ್ರೆಗೆ ಹೋಗುತ್ತಿದ್ದ, ಅದನ್ನು ಸರಿಯಾದ ರೀತಿಯಲ್ಲಿ ಪ್ರಚುರ ಪಡಿಸುತ್ತಿದ್ದ. ತನ್ನನ್ನು ತಾನೇ ಸರಳ, ವಿನಯಶೀಲ, ಧರ್ಮಶ್ರದ್ಧೆಯ, ದೈವಕ್ಕೆ ತಲೆಬಾಗುವ ರಾಜನಾಗಿ ಬಿಂಬಿಸಿಕೊಳ್ಳುತ್ತಿದ್ದ. ವಿವಿಧ ದಾನಧರ್ಮದ ಕೆಲಸಗಳು ವಾರ್ಷಿಕ ನಾಲ್ಕೂ ಲಕ್ಷಕ್ಕೂ ಹೆಚ್ಚು ಹಣವನ್ನು ತಿಂದು ಹಾಕಿತು. ಮೈಸೂರಿನ ಊಳಿಗಮಾನ್ಯತೆಯಲ್ಲಿ ನರಳುತ್ತಿರುವ ಜನಸಮೂಹದಿಂದ ವಸೂಲು ಮಾಡಿದ ಹಣದ ಹೆಚ್ಚಿನ ಭಾಗವನ್ನು ರಾಜ ಹಾಳು ಮಾಡಿದ. ಅವನತಿಯಾಗುತ್ತಿದ್ದ ಹಿಮಾಲಯದ ಕೊಳಚೆ ಬೆಟ್ಟವನ್ನತ್ತುವಾಗ ರಾಜ ಪರೋಪಕಾರಿಯಂತೆ ಕಾಣಿಸಿಕೊಂಡ! 

ಮುಂದಿನ ವಾರ:
ಧರ್ಮದ ಪುನರುಜ್ಜೀವನ

No comments:

Post a Comment