Apr 29, 2016

ಮೇಕಿಂಗ್ ಹಿಸ್ಟರಿ: ಕೃಷಿಗೆ ಲಕ್ವ ಹೊಡೆದದ್ದು ಭಾಗ 3

Making history
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
29/04/2016

ಈ. ಕೆರೆಗಳ ನಾಶ

ಕೃಷಿಯ ಬೆಳವಣಿಗೆಯಲ್ಲಿ ಕೆರೆಗಳು ಮತ್ತು ನದಿ ನೀರಾವರಿ ಪಾತ್ರದ ಪ್ರಾಮುಖ್ಯತೆಯನ್ನು ನಾವೀಗಾಗಲೇ ಮೇಕಿಂಗ್ ಹಿಸ್ಟರಿಯ ಒಂದನೇ ಸಂಪುಟದಲ್ಲಿ ನೋಡಿದ್ದೇವೆ. ಹದಿನೆಂಟನೇ ಶತಮಾನದ ಕೊನೆಯ ಭಾಗದಲ್ಲಿ ಈ ಕೆರೆಗಳು ವ್ಯಾಪಾರ ವಹಿವಾಟಿಗೆ ಸಹಕಾರಿಯಾಗಿದ್ದನ್ನು, ಪಟ್ಟಣ ಮತ್ತು ನಗರಗಳು ಈ ನೀರ ನಾಗರೀಕತೆಯ ಮೇಲೆ ಅವಲಂಬಿತವಾಗಿದ್ದನ್ನು ಕಂಡಿದ್ದೇವೆ. ಆದರೆ ಕೊಳ್ಳೆ ಹೊಡೆಯುವುದೇ ಉದ್ದಿಶ್ಯವಾಗಿದ್ದ ವಸಾಹತುಶಾಹಿ, ಇಡೀ ವ್ಯವಸ್ಥೆಯನ್ನೇ ಹಾಳುಗೆಡವಿತು; ಪರಿಣಾಮವಾಗಿ ನೀರಾವರಿ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿಬಿಟ್ಟಿತು.

ಶ್ವಾರ್ಟ್ರ್ಝ್ (Schwartz) ಎಂಬ ಪಾದ್ರಿ ಹೈದರನ ಮೈಸೂರು ಬ್ರಿಟೀಷ್ ಆಳ್ವಿಕೆಯ ಮದ್ರಾಸಿನಲ್ಲಿದ್ದ ವ್ಯತ್ಯಾಸಗಳ ಬಗ್ಗೆ ಬರೆಯುತ್ತಾನೆ: “ಪ್ರತಿ ಮಳೆಯ ನಂತರವೂ, ಆ ಭಾಗದ ಅಮಲ್ದಾರ ತನ್ನ ಜನರನ್ನು ಕಳುಹಿಸಿ ಕೊಚ್ಚಿಹೋದ ಮಣ್ಣಿನ ಜಾಗಕ್ಕೆ ಮತ್ತೆ ಮಣ್ಣು ತುಂಬಿಸಬೇಕಿತ್ತು. ಹೈದರನ ಆರ್ಥಿಕ ನೀತಿಯಲ್ಲಿ, ಎಲ್ಲಾ ತರಹದ ಹಾನಿಗಳನ್ನು ಅತಿ ಶೀಘ್ರವಾಗಿ ಸಮಯ ಕಳೆಯದೆ ಸರಿಮಾಡಿಬಿಡಬೇಕಿತ್ತು, ಕಡಿಮೆ ಖರ್ಚಿನಲ್ಲಿ ಉತ್ತಮ ಸ್ಥಿತಿಗೆ ತರಬೇಕಿತ್ತು. ಆದರೆ ಯುರೋಪಿಯನ್ನರು ಕರ್ನಾಟಿಕ್ ನಲ್ಲಿ ಎಲ್ಲವನ್ನೂ ಪಾಳು ಬೀಳಲು ಬಿಟ್ಟುಬಿಟ್ಟರು.” (145)

ಹಳೇ ಮೈಸೂರಿನ ನೀರಾವರಿಯ ಬಗ್ಗೆ ಅಧ್ಯಯನ ನಡೆಸಿದ ಶಾಮ ರಾವ್, ವಿಲ್ಕ್ಸ್ 1804ರಲ್ಲಿದ್ದ ನೀರಾವರಿ ಜಮೀನು 1789ರಲ್ಲಿ ಇದ್ದಿದ್ದಕ್ಕಿಂತ ಕಡಿಮೆ ಎಂಬ ತೀರ್ಮಾನಕ್ಕೆ ಬಂದಿದ್ದರ ಬಗ್ಗೆ ತಿಳಿಸುತ್ತಾರೆ.(146)

ಒಂದೆಡೆ ವಸಾಹತು ಆಳ್ವಿಕೆ ಜಾರಿಗೆ ಬಂದ ಐದು ವರುಷದೊಳಗೆ ನೀರಾವರಿ ಭೂಮಿಯ ವ್ಯಾಪ್ತಿಯಲ್ಲಿ ಅಗಾಧ ಕಡಿತವಾಗಿದ್ದರೆ (ಇದು ಕೈಗೊಂಬೆ ರಾಜರು ಈ ವಿಷಯಕ್ಕೆ ಕೊಟ್ಟ ಆಸಕ್ತಿಯ ಉದಾಹರಣೆಯೂ ಹೌದು); ಮತ್ತೊಂದೆಡೆ ಅರಮನೆಗೆ ಮತ್ತರಮನೆಗೆ ಜೋತು ಬಿದ್ದವರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಸಾಗರಕಟ್ಟೆಯಿಂದ ಮೈಸೂರಿಗೆ ಒಂದು ಚಾನೆಲ್ಲು ಕೊರೆಯುವ ಪ್ರಯತ್ನ (ಅದು ವಿಫಲವಾಯಿತು) ಬಿಟ್ಟರೆ ಮತ್ತಿನ್ಯಾವ ನೀರಾವರಿ ಯೋಜನೆಗಳ ರೂಪುಗೊಳ್ಳುವಿಕೆಯೂ ನಡೆಯಲಿಲ್ಲ.

ಕಡೆಗಣನೆ ಸ್ಪಷ್ಟವಾಗಿತ್ತು, ಪೂರ್ಣವಾಗಿತ್ತು. ಕೆಳಗಿನ ಅಂಕಿಅಂಶಗಳು ಹನ್ನೊಂದು ಹನ್ನೆರಡನೇ ಶತಮಾನದಿಂದಲೂ ಸ್ಥಳೀಯವಾಗಿ ಅಭಿವೃದ್ಧಿ ಕಂಡಿದ್ದ ನೀರಾವರಿಯ ವ್ಯವಸ್ಥೆಯೆಡೆಗೆ ತೋರಿದ ನಿರ್ಲಕ್ಷ್ಯದಿಂದ ಹೇಗದು ಪತನ ಕಂಡಿತು ಎಂಬುದನ್ನು ಸೂಚಿಸುತ್ತದೆ. ಆಂತರಿಕ ಆಡಳಿತದ ಬಗ್ಗೆ ವಿಲ್ಕ್ಸ್ ನ ವರದಿಯಲ್ಲಿ ಈ ಕೆಳಗಿನ ಅಂಕಿಅಂಶಗಳು ಲಭಿಸುತ್ತವೆ. 


ನಂತರ ಆತ ವಸಾಹತುಶಾಹಿ ಸಾಮಾನ್ಯವಾಗಿ ಉಪಯೋಗಿಸುವ ಎಲ್ಲಾ ನೆಪಗಳ ಬಗ್ಗೆಯೂ ಹೇಳುತ್ತಾನೆ. “ಮೈಸೂರು ದೇಶ ಉಬ್ಬುತಗ್ಗಿನ ಪ್ರದೇಶವಾಗಿದೆ. ಇದರ ಪರಿಣಾಮವಾಗಿ ಕೆರೆಕಟ್ಟೆಗಳಲ್ಲಿ ನೀರಿನ ಜೊತೆಗೆ ಹೂಳೂ ಸೇರಿಬಿಡುತ್ತದೆ. ಹೂಳನ್ನು ಮತ್ತೆ ಮತ್ತೆ ತೆಗೆಯಬೇಕಾಗಿರುವುದು, ಸಮತಟ್ಟು ಪ್ರದೇಶಗಳಲ್ಲಿನ ಕೆರೆಕಟ್ಟೆಗಳಿಗೆ ಹೋಲಿಸಿದರೆ ಇಲ್ಲಿನವನ್ನು ನಿರ್ವಹಣೆ ಮಾಡುವುದು ಕಷ್ಟವಾಗಿಬಿಡುತ್ತದೆ.

ಅಪರೂಪಕ್ಕೆ ನಡೆಯುವ ದುರ್ಘಟನೆಗಳು ಈ ಖರ್ಚನ್ನು ಹೆಚ್ಚು ಮಾಡುತ್ತದೆ. ಈ ವರ್ಷ (1804) ಅಕ್ಟೋಬರಿನ ಮೊದಲ ಭಾಗದಲ್ಲಿ ಬಂದ ಅನಿರೀಕ್ಷಿತ ಪ್ರಮಾಣದ ಮಳೆಯಿಂದಾಗಿ ಹೆಚ್ಚು ಕಡಿಮೆ ನಾಲ್ಕು ನೂರು ಕೆರೆಗಳ ಕಟ್ಟೆ ಒಡೆದು ಹೋಯಿತು. ಅದರ ರಿಪೇರಿಗೆ ಒಂದು ಲಕ್ಷ ಪಗೋಡಾವಾದರೂ (ಮೂರು ಲಕ್ಷ ರುಪಾಯಿ) ಬೇಕೇ ಬೇಕು. ಮತ್ತಿದು ನಿಗದಿತ ಮೊತ್ತದ ಮೇಲಿನ ಖರ್ಚು.”(148)

ವಾಸ್ತವವೆಂದರೆ ಮೈಸೂರು ದೇಶದ ಉಬ್ಬುತಗ್ಗುಗಳೇ ಕೆರೆಕಟ್ಟೆಗಳನ್ನು ಕಟ್ಟುವುದಕ್ಕೆ ಕಾರಣವಾಗಿದ್ದು!

ವಿಲ್ಕ್ಸ್ ನ ಅಂಕಿಅಂಶಗಳನ್ನು ಮತ್ತಷ್ಟು ವಿಸ್ತರಿಸುವ ಎಂ.ಹೆಚ್.ಗೋಪಾಲ್ 1829ರಷ್ಟರಲ್ಲಿ ಕೆರೆಗಳ ನಿರ್ವಹಣೆಗೆ ಮಾಡುವ ಖರ್ಚು 1,28,115 ರುಪಾಯಿಗಳಿಗೆ ಇಳಿದುಬಿಟ್ಟಿತ್ತು ಎಂದು ತಿಳಿಸುತ್ತಾರೆ. (149) ಸ್ವತಃ ಸಾಕ್ಷೀಕರಿಸುವ ಇಂತಹ ಅಂಶಗಳು ಇರುವಾಗಲೂ, ಸಿದ್ಧಲಿಂಗ ಸ್ವಾಮಿ ಹೇಳುತ್ತಾರೆ: “ಕೆರೆಗಳ ನಿರ್ಮಾಣಕ್ಕೆ ಮತ್ತು ರಿಪೇರಿಗೆ, ಚಾನೆಲ್ಲುಗಳಿಗೆ, ರಸ್ತೆ – ಸೇತುವೆಗಳಿಗೆ ಮತ್ತು ಕೃಷಿಯ ಅಭಿವೃದ್ಧಿ ಮತ್ತು ಉನ್ನತಿಗೆ ಬೇಕಾದ ಇತರೆ ಕೆಲಸಗಳಿಗೆ ದಿವಾನರು ಹಣ ಲಭ್ಯವಾಗುವಂತೆ ಮಾಡುತ್ತಿದ್ದರು.” (150) ಈ ರೀತಿಯ ಪೂರ್ವಾಗ್ರಹ ಪೀಡಿತ ಬರವಣಿಗೆಗಳು ಬ್ರಿಟೀಷ್ ವಸಾಹತುಶಾಹಿ ಮತ್ತವರ ಸ್ಥಳೀಯ ಪ್ರತಿಗಾಮಿಗಳ ಮುಖಕ್ಕಂಟಿದ ಕಳಂಕವನ್ನು ಮರೆಯಾಗಿಸುವ ಪ್ರಯತ್ನವಷ್ಟೇ.

ದೂರದ ಲಂಡನ್ನಿನಲ್ಲಿ, ಈ ಬೆಳವಣಿಗೆಗಳನ್ನು ಗಮನಿಸಿದ ಕಾರ್ಲ್ ಮಾರ್ಕ್ಸ್, 1853ರಲ್ಲಿ ಬರೆದ The British Rule in India ಲೇಖನದಲ್ಲಿ ಏಷ್ಯಾದ ಸರಕಾರಗಳ ಸಾರ್ವಜನಿಕ ಕೆಲಸಗಳು ಹೇಗೆ ಹಳ್ಳ ಹಿಡಿದವು ಎಂದು ಬರೆಯುತ್ತಾನೆ. “ಇಲ್ಲಿನ ವಾತಾವರಣ ಮತ್ತು ಭೌಗೋಳಿಕ ಪರಿಸ್ಥಿತಿ, ಅದರಲ್ಲೂ ಸಹಾರ, ಅರೇಬಿಯಾ, ಪರ್ಷಿಯಾ, ಭಾರತ ಮತ್ತು ಟರ್ತಾರಿಯ ಉದ್ದಕ್ಕೂ ಹರಡಿರುವ ಮರುಭೂಮಿಯಿಂದ ಹಿಡಿದು ಏಷಿಯಾದ ಎತ್ತರೆತ್ತರದ ಪ್ರದೇಶದವರೆಗೂ ನೀರಾವರಿ ಕಾಲುವೆಗಳು ಮತ್ತು ನೀರಿನ ಕೆಲಸಗಳೇ ಪೂರ್ವದ ಕೃಷಿಗೆ ಪೂರಕವಾಗಿದ್ದಂತವು. ಭಾರತ ಮತ್ತು ಇಜಿಪ್ಟಿನಂತೆಯೇ, ಮಿಸೊಪೊಟೋಮಿಯಾ, ಪರ್ಷಿಯಾ ಇತರೆಡೆಗಳಲ್ಲಿ ನೀರು ಹರಿಸಿ ಭೂಮಿಯನ್ನು ಫಲವತ್ತಾಗಿ ಉಳಿಸಿಕೊಳ್ಳಲಾಗುತ್ತಿತ್ತು. ನೀರಾವರಿ ಕಾಲುವೆಗಳಿಗೆ ನೀರು ಹರಿಸಲು ಎತ್ತರದ ಪ್ರದೇಶಗಳಿದ್ದದ್ದು ಅನುಕೂಲಕರವಾಗಿತ್ತು. ಈ ಕೃತಕ ಫಲವತ್ತತೆಯ ಸೃಷ್ಟಿ ಕೇಂದ್ರ ಸರಕಾರದ ಮೇಲೆ ಅವಲಂಬಿತವಾಗಿತ್ತು. ನೀರಾವರಿಯೆಡೆಗಿನ ನಿರ್ಲಕ್ಷ್ಯದಿಂದಾಗಿ ಒಂದು ಕಾಲದಲ್ಲಿ ಫಲವತ್ತತೆಯಿಂದ ತುಂಬಿತುಳುಕುತ್ತಿದ್ದ ಪಾಲ್ಮೈರಾ, ಪೆಟ್ರಾ, ಯೆಮೆನ್ ಮತ್ತು ಇಜಿಪ್ಟ್, ಪರ್ಷಿಯಾ ಹಾಗೂ ಹಿಂದುಸ್ಥಾನದ ಬಹುಭಾಗಗಳು ಇಂದು ಬಂಜರಾಗಿ ಮರುಭೂಮಿಯಾಗಿದೆ. ವಿನಾಶದ ಒಂದು ಯುದ್ಧ ಹೇಗೆ ಒಂದಿಡೀ ದೇಶದ ಜನರು ಶತಮಾನಗಳ ಕಾಲ ತೊರೆದುಬಿಡುವಂತೆ ಮಾಡುತ್ತದೆ ಎನ್ನುವುದನ್ನೂ ಇದು ವಿವರಿಸುತ್ತದೆ; ಆ ದೇಶದ ಎಲ್ಲಾ ನಾಗರೀಕತೆಯನ್ನು ನಾಶ ಪಡಿಸುತ್ತದೆ.

ಈಗ ಭಾರತದಲ್ಲಿರುವ ಬ್ರಿಟೀಷರು ಸಾರ್ವಜನಿಕ ಕೆಲಸಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬ್ರಿಟೀಷರ ತಾಟಸ್ಥ್ಯ ಧೋರಣೆಯ ಆಧಾರದಲ್ಲಿ ನಡೆಯಲಾಗದ ಕೃಷಿ ಪತನ ಕಂಡಿತು…..”(151)

ಈ. ಟಕವಿ ಕೊನೆ ಕಂಡಿತು
 
ಹೆಚ್ಚಿನ ಬಡ್ಡಿಗೆ ಸಾಲ ಕೊಡುವುದು ಹೆಚ್ಚುತ್ತಿದ್ದಂತೆ ಟಕವಿ ಅನುಪಯುಕ್ತವಾಯಿತು. 1810ರ ನಂತರ ತುಳು ನಾಡಿನ ಕಡತಗಳಲ್ಲಿ ಸರಕಾರ ನೀಡುವ ಟಕವಿ ಸಾಲದ ಬಗ್ಗೆ ಪ್ರಸ್ತಾಪಗಳೇ ಇಲ್ಲ ಎಂದು ತಿಳಿಸುತ್ತಾರೆ ಶ್ಯಾಮ್ ಭಟ್. (152)

ಆದಾಗ್ಯೂ, ಹಳೆ ಮೈಸೂರಿನಲ್ಲಿ ಈ ಪದ್ಧತಿ ಮತ್ತಷ್ಟು ವರುಷಗಳ ಕಾಲ ಮುಂದುವರಿಯಿತು. ಅಪಾರ ಹಸಿವಿನ ಬಡ್ಡಿದಾರ ‘ಕ್ಷೇಮ ವಿಚಾರಿಸಿದಾಗೆಲ್ಲ’ ಶೋಷಿತ ರೈತ ಕಾರ್ಮಿಕರಿಗೆ ಟಕವಿಯ ಕನಸು ಬೀಳುತ್ತಿತ್ತು!

ಮೇಲಿನ ಪಟ್ಟಿಯಿಂದ ಸ್ಪಷ್ಟವಾಗುವ ಅಂಶವೆಂದರೆ 1836-37 ರಿಂದ 1860-61ರವರೆಗೆ ರೈತರಿಗೆ ಕೊಟ್ಟ ಒಟ್ಟು ಸಾಲದ ಮೊತ್ತ 8,76,100 ರುಪಾಯಿಗಳಾದರೆ ಅದೇ ಸಮಯದಲ್ಲಿ ವಸೂಲಾದ ಮೊತ್ತ 9,49,250. ವಸಾಹತು ಸರಕಾರದ ಕಮಿಷನರ್ರುಗಳು, ರಕ್ತ ಹೀರುವ ಲೇವಾದೇವಿಯವರಂತೆಯೇ ರೈತರಿಂದ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಮೊತ್ತವನ್ನು ವಸೂಲು ಮಾಡಿದರು. ಟಕವಿ ಪದ್ಧತಿಯ ಪತನದ ಪರಿಣಾಮವಾಗಿ ಹಳ್ಳಿಗಳ ಕಡೆ ಕೃಷಿ ಉತ್ಪಾದನೆಯೂ ಕುಂಠಿತಗೊಂಡಿತು.
 
ಉ. ವಾಣಿಜ್ಯ ಕೃಷಿಯ ವಿನಾಶ

ಕೃಷಿಯನ್ನು ಊಳಿಗಮಾನ್ಯತೆಯ ಕೈಗೆ ಕೊಟ್ಟಿದ್ದು ಮತ್ತು ನೀರಾವರಿಯನ್ನು ಹಾಳುಗೆಡವಿದ್ದು ಹಾಗೂ ನಗರದಲ್ಲಿ ಉತ್ಪಾದನೆಯ ಕುಸಿತ ಮತ್ತು ನಗರದ ಜನರು ಹಳ್ಳಿಗಳೆಡೆಗೆ ಗುಳೇ ಹೋದದ್ದು ವಾಣಿಜ್ಯ ಕೃಷಿಯನ್ನು ನಾಶಪಡಿಸಿತು. ಹತ್ತಿ, ಭತ್ತ, ಕಬ್ಬು, ಎಣ್ಣೆ ಬೀಜಗಳು ಮತ್ತು ಅಡಿಕೆಯ ಕೃಷಿಯನ್ನು ಹಾಳುಗೆಡವುವಲ್ಲಿ ಮೇಲಿನ ಎಲ್ಲಾ ಅಂಶಗಳೂ ಕಾರಣ, ಇದರಿಂದುಟಾದ ನಾಶದ ಪರಿಣಾಮ ಎಷ್ಟಿತ್ತಿಂದರೆ ಮತ್ತೆ ಈ ಕೃಷಿ ಚಿಗುರಲು ಕಷ್ಟವಾಗುವಷ್ಟು. ವಾಣಿಜ್ಯ ಬೆಳೆಗಳಿಂದ ಬೇಳೆ ಕಾಳುಗಳನ್ನು ಬೆಳೆಯುವುದರ ಕಡೆಗೆ ಕೃಷಿ ಕ್ಷೇತ್ರ ಹೊರಳಿದ್ದು ಮತ್ತೆ ಹಳ್ಳಿಗಳು ಊಳಿಗಮಾನ್ಯತೆಯ ಕಡೆಗೆ ಸಾಗುವಂತೆ ಮಾಡಿದವು.

ಈ ಕಾರಣಗಳಿಂದಾಗಿ, ಬ್ರಿಟೀಷ್ ಆಕ್ರಮಣ ನಡೆಸಿದ ಕೆಲವೇ ವರುಷಗಳಲ್ಲಿ ಮತ್ತು ಪೀಠದಲ್ಲಿ ಪ್ರತಿಗಾಮಿ ಕೈಗೊಂಬೆ ರಾಜನೊಬ್ಬ ಕೂತ ನಂತರ ಕೃಷಿ ಕ್ಷೇತ್ರಕ್ಕೆ ಪಾರ್ಶ್ವವಾಯು ಹೊಡೆಯಿತು.

ಸುಮಿತ್ ಗುಹಾ, ತಮ್ಮ The Agrarian economy of the Bombay deccan, 1818-1941 ಪುಸ್ತಕದಲ್ಲಿ ಬಾಂಬೆ ಕರ್ನಾಟಕ ಭಾಗದಲ್ಲಿ ಕೃಷಿ ಕೆಲಸಗಳು ಸ್ಥಗಿತವಾಗಿದ್ದರ ಬಗ್ಗೆ ಬರೆಯುತ್ತಾನೆ. “ಸಿಕ್ಕಿರುವ ಮಾಹಿತಿ ಇಡೀ ಕೃಷಿ ವಲಯವೇ 1840ರ ಮುಂಚೆ ಸ್ಥಗಿವಾಗಿದ್ದನ್ನು ತೋರಿಸುತ್ತದೆ. ಈ ಅಂಕಿ ಅಂಶಗಳು ಹೆಚ್ಚು ಕಡಿಮೆ ಇಡೀ ಡೆಕ್ಕನ್ನಿನಿಂದ ತೆಗೆದುಕೊಂಡದ್ದು. ಧಾರವಾಡದ ಫಲವತ್ತ ಮತ್ತು ಸುಭದ್ರ ತಾಲ್ಲೂಕುಗಳ ಅಂಕಿಅಂಶಗಳು ಬರಪೀಡಿತ ಸೊಲ್ಲಾಪುರ ತಾಲ್ಲೂಕಿನ ಅಂಕಿಅಂಶಗಳಿಗಿಂತ ಉತ್ತಮವಾಗೇನಿಲ್ಲ. ಇದು ಕೃಷಿ ಯೋಗ್ಯ ಭೂಮಿಯ ಕೊರತೆಯಿಂದಾದದ್ದಲ್ಲ. ವಿಸ್ತಾರದ ಕೃಷಿ ಭೂಮಿ ಅನುಪಯುಕ್ತವಾಗಿ ಬಿದ್ದಿತ್ತು ಎಂದು ವರದಿಗಳು ತಿಳಿಸುತ್ತದೆ.” (155)

ಮುಂದಿನ ವಾರ
ಕೈಗಾರಿಕೆಯ ಸ್ಥಾನ ಪಲ್ಲಟ

No comments:

Post a Comment