Mar 18, 2016

ಮೇಕಿಂಗ್ ಹಿಸ್ಟರಿ: ಮಧ್ಯವರ್ತಿ – ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ:- 1

saketh rajan
ಸಾಕೇತ್ ರಾಜನ್
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
18/03/2016
ಕರ್ನಾಟಕವನ್ನು ಕೊಳ್ಳೆ ಹೊಡೆಯಲು ವಸಾಹತುಶಾಹಿ ಮತ್ತು ಊಳಿಗಮಾನ್ಯ ಪದ್ಧತಿಯ ಒಗ್ಗಟ್ಟೇ ಆಧಾರವಾಗಿತ್ತು. ಬೇರೊಂದು ಪ್ರಮುಖ ವ್ಯವಸ್ಥೆಯ ಸಹಕಾರವಿಲ್ಲದೆ ಭವಿಷ್ಯದ ದಿನಗಳಲ್ಲಿ ರಾಜಕೀಯ ಮತ್ತು ಆರ್ಥಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದು ವಸಾಹತುಶಾಹಿಗೆ ಸಾಧ್ಯವಿರಲಿಲ್ಲ. ಸಾಮಾಜಿಕ ರಚನೆಯ ಮಧ್ಯವರ್ತಿ ವರ್ಗವೇ ಈ ಪ್ರಮುಖ ವ್ಯವಸ್ಥೆಯಾಗಿತ್ತು. ಮೇಲ್ನೋಟಕ್ಕೆ ಊಳಿಗಮಾನ್ಯತೆ ಮತ್ತು ವಸಾಹತುಶಾಹಿ ಸಹಬಾಳ್ವೆಯಿಂದ ಜೊತೆಯಾಗಿ ನಡೆಯುವಂತೆ ತೋರಿದರೂ ಅಂತಿಮವಾಗಿ ವಸಾಹತುಶಾಹಿಯ ಹಸ್ತಕ್ಷೇಪದಿಂದ ಅದರ ನಿಜ ವಕ್ತಾರನಂತೆ ಹೊರಹೊಮ್ಮಿದ್ದು ಮಧ್ಯವರ್ತಿ ವರ್ಗ. ಪಾಳೇಗಾರರು, ದೇಸಾಯಿ, ಜಾಗೀರುದಾರರು ಮತ್ತು ದೇಶಮುಖರು ನೆಲೆ ನಿಂತ ನಂತರ ವಸಾಹತುಶಾಹಿ ತನ್ನ ನೆಲೆ ಸುಭದ್ರಗೊಳಿಸಲು ಮಾಡಬೇಕಿದ್ದ ಬಹುಮುಖ್ಯ ಕಾರ್ಯವೆಂದರೆ ಮಧ್ಯವರ್ತಿ ವರ್ಗವನ್ನು ಸೃಷ್ಟಿಸುವುದು. ಭೂಮಾಲೀಕರು ವಸಾಹತುಶಾಹಿಯ ಮೈತ್ರಿಕೂಟದ ಭಾಗವಾಗಿದ್ದರು; ಮಧ್ಯವರ್ತಿಗಳು ವಸಾಹತುಶಾಹಿ ಬಂಡವಾಳದ ಏಜೆಂಟುಗಳಾಗಿದ್ದರು. 

ಕರ್ನಾಟಕದಲ್ಲಿ ಮಧ್ಯಮವರ್ಗದ ಮಧ್ಯವರ್ತಿ ಅಧಿಕಾರಿಗಳ (Comprador bureaucrat bourgeoise) ಜನನವಾಗಲು ಒಂದು ಶತಮಾನಕ್ಕೂ ಅಧಿಕ ಸಮಯವಿಡಿಯಿತು. ಈ ಸೃಷ್ಟಿ ಸಾಧ್ಯವಾಗಲು ಬೇಕಾಗಿದ್ದ ಸಾಮಾಜಿಕ ಆಧಾರಗಳನ್ನು ಇತಿಹಾಸದ ಈ ಘಟ್ಟದಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಮಧ್ಯವರ್ತಿ ವರ್ತಕರು ಮತ್ತು ಮಧ್ಯವರ್ತಿ ಅಧಿಕಾರಿಗಳು ಶತಮಾನದ ನಂತರ ಮಧ್ಯಮವರ್ಗದ ಮಧ್ಯವರ್ತಿ ಅಧಿಕಾರಿಗಳ ಸೃಷ್ಟಿಗೆ ಚಿಮ್ಮುಹಲಗೆಯಾದರು. ಕರ್ನಾಟಕದಲ್ಲಿನ ವಸಾಹತುಶಾಹಿ ಆಡಳಿತದ ಮೊದಲ ದಶಕಗಳಲ್ಲಿ ಮಧ್ಯವರ್ತಿ ವರ್ತಕರು ಮತ್ತು ಅಧಿಕಾರಿಗಳನ್ನು ಸೃಷ್ಟಿಸಲಿಡಿದ ದಾರಿಯನ್ನು ಈ ಭಾಗದಲ್ಲಿ ನೋಡೋಣ. ಪೋರ್ಚುಗೀಸರ ವಸಾಹತಿನಿಂದ ಕರ್ನಾಟಕದ ಕರಾವಳಿ ಭಾಗಗಳಲ್ಲಿ ಮಧ್ಯಮವರ್ಗದ ಮಧ್ಯವರ್ತಿ ವರ್ತಕರು ಹೊರಹೊಮ್ಮಿದ್ದನ್ನು ಈಗಾಗಲೇ ಒಂದನೇ ಸಂಪುಟದಲ್ಲಿ ನೋಡಿದ್ದೇವೆ. (72) ಈಗ ರಾಜ್ಯದ ಇತರೆ ಭಾಗಗಳಲ್ಲಿ ಮಧ್ಯವರ್ತಿ ವರ್ಗದ ಸೃಷ್ಟಿಯಾದ ಬಗೆಯನ್ನು ನೋಡೋಣ. 

ವಸಾಹತುಶಾಹಿಯ ಬಹುಮುಖ್ಯ ಮೈತ್ರಿಯಾಗಿದ್ದ ಊಳಿಗಮಾನ್ಯತೆ, ಅದೇ ಸಮಯದಲ್ಲಿ ಮಧ್ಯವರ್ತಿ ವರ್ಗದ ಜನನಕ್ಕೆ ಬೇಕಾದ ಪ್ರಮುಖ ಸಾಮಾಜಿಕ ತಳಹದಿಯಾಗಿತ್ತು. ಭಾರತದ ಮಧ್ಯಮವರ್ಗದ ಮಧ್ಯವರ್ತಿಗಳ ಬಗ್ಗೆ ಮೆಚ್ಚುವಂತಹ ಅಧ್ಯಯನ ಮಾಡಿರುವ ಸುನಿತಿ ಕುಮಾರ್ ಘೋಷ್ ತಮ್ಮ ಪುಸ್ತಕ The Indian Big Bourgeoisieನಲ್ಲಿ ಹತ್ತಲವು ಬಾರಿ ಊಳಿಗಮಾನ್ಯ ಪದ್ಧತಿ ಮಧ್ಯವರ್ತಿಗಳ ಉಗಮಕ್ಕೆ ಸಹಕರಿಸಿದ್ದನ್ನು ನೆನೆಯುತ್ತಾರೆ. ಬ್ರಿಟೀಷರು ಒಂದುಗೂಡಿಸಿದ್ದ ಊಳಿಗಮಾನ್ಯತೆಯ ಕಸದಿಂದ ಮಧ್ಯವರ್ತಿ ವರ್ಗ ಉದ್ಭವಿಸಿತು. ನಿವೃತ್ತಿ ವೇತನ ಪಡೆದ ಅಥವಾ ‘ನೆಲೆ ಕಂಡ’ ಈ ಊಳಿಗಮಾನ್ಯ ಶಕ್ತಿಗಳು ಅಥವಾ ಬ್ರಿಟೀಷರಿಂದ ನೇರವಾಗಿ ಸನ್ನದು ಪಡೆದ ಅವರ ವಂಶಸ್ಥರು ಅಧಿಕಾರದ ದಾರಿ ಅಥವಾ ವಸಾಹತಿನ ವ್ಯಾಪಾರದ ಹಾದಿ ಹಿಡಿದರು; ವ್ಯಾಪಾರ ವಹಿವಾಟಿನ ಮೊದಲ ರೂಪ ಹಣವನ್ನು ಸಾಲದ ರೂಪದಲ್ಲಿ ನೀಡುವುದು. ಭೂಮಾಲೀಕ ಸಮುದಾಯದಲ್ಲಾದ ಈ ವ್ಯತ್ಯಾಸ ಹಲವು ವರುಷಗಳ ಬ್ರಿಟೀಷ್ ಆಡಳಿತ ಮತ್ತು ವ್ಯಾಪಾರದಲ್ಲಿ ವ್ಯಾಪಾರದಲ್ಲಿ ಮುಂದುವರೆದ ಪರಿಣಾಮವಾಗಿ ಮಧ್ಯವರ್ತಿ ವರ್ತಕರು ಮತ್ತು ಅಧಿಕಾರಿಗಳ ಮೊದಲ ಸಾಲು ರೂಪುಗೊಂಡಿತು. ರೂಪುಗೊಳ್ಳುತ್ತಿದ್ದ ಈ ಮಧ್ಯವರ್ತಿ ವರ್ಗದ ಮೂಲಕ್ಕೆ ಕೈಗೊಂಬೆ ರಾಜರನ್ನೂ ಸೇರಿಸಬೇಕು. ಊಳಿಗಮಾನ್ಯತೆಯ ಕೈಗೊಂಬೆಯಾಗಿದ್ದ ಒಡೆಯರ್ ಸಾಮ್ರಾಜ್ಯ ಬ್ರಿಟೀಷ್ ಬಂಡವಾಳದ ಬೆಳವಣಿಗೆಯೊಂದಿಗೆ ನಿಧಾನವಾಗಿ ಮಧ್ಯವರ್ತಿಯಾಗಿ ಭ್ರಷ್ಟಗೊಂಡಿತು. 

ಸಂಡೂರಿನ ‘ಸಂತೃಪ್ತ’ ಘೋರ್ಪಡೆಗಳನ್ನೂ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು. ಮರಾಠರೆಡೆಗಿದ್ದ ತಮ್ಮ ನಿಷ್ಠೆಯನ್ನು ಘೋರ್ಪಡೆಗಳು ಬದಲಿಸಿದರು. ಮನ್ರೋನನ್ನು ಬೆಂಬಲಿಸುತ್ತ ತಮ್ಮ ಬಂದೂಕುಗಳನ್ನು ಮಾಜಿ ಗುರುಗಳಾದ ಪೇಶ್ವೆಯರೆಡೆಗೆ ತಿರುಗಿಸಿ, ಗೆದ್ದು ಬಳ್ಳಾರಿ ಜಿಲ್ಲೆಯ ಸಂಡೂರು ಸಾಮ್ರಾಜ್ಯವನ್ನು ತಮ್ಮದಾಗಿಸಿಕೊಂಡರು. ಹತ್ತೊಂಬತ್ತನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಪ್ರಮುಖ ವರ್ತಕರಾಗಿ ಮತ್ತು ಆಯಕಟ್ಟಿನ ಜಾಗಗಳಲ್ಲಿನ ಅಧಿಕಾರಿಗಳಾಗಿ ಅವರು ಹೊರಹೊಮ್ಮಿದರು. ಅವರು ಒರಗಿ ಕುಳಿತ ಆರಾಮು ಖುರ್ಚಿ ಮೂರು ಕಾಲಿನ ಮೇಲೆ ಸಮತೋಲನ ಸಾಧಿಸಿತ್ತು – ಒಂದು ಕಾಲು ಊಳಿಗಮಾನ್ಯತೆ, ಒಂದು ವ್ಯಾಪಾರ ಮತ್ತೊಂದು ಅಧಿಕಾರಶಾಹಿತನ. 

ಮಸೂದ್ ದನ್ಮೋಲೆ ಸರಿಯಾಗಿ ಹೇಳುತ್ತಾನೆ: “…ಬಹಳ ಸ್ಪಷ್ಟವಾಗಿ ತಿಳಿಯುವ ಅಂಶವೆಂದರೆ ಈ ಸಾಂಪ್ರದಾಯಿಕ ಆಳ್ವಿಕೆದಾರರು ಅಥವಾ ಅವರ ವಂಶಸ್ಥರು ಅಥವಾ ಅವರಂತೆಯೇ ಯೋಚಿಸುವವರು, ಸ್ಥಳೀಯ ಸಮುದಾಯ ಮತ್ತು ವಿದೇಶಿ ಬಂಡವಾಳಗಾರರ ಮಧ್ಯೆ ಇದ್ದ ಮಧ್ಯಮವರ್ಗದ ಮಧ್ಯವರ್ತಿಗಳ ಬೆಳವಣಿಗೆಗೆ ಮೊಲೆಯುಣಿಸುವವರಾಗಿದ್ದರು. ಈ ಹೊಸ ಸ್ಥಳೀಯ ಮಧ್ಯವರ್ತಿಗಳ ವರ್ಗ, ಹೆಚ್ಚೂ ಇಲ್ಲ ಕಡಿಮೆಯೂ ಅಲ್ಲ, ಸಾಮ್ರಾಜ್ಯಶಾಹಿಯ ಕೈಕೆಲಸದವರಾಗಿದ್ದರು.” (73) 

ಹಾಗಾಗಿ ಮಧ್ಯವರ್ತಿಗಳ ಸೃಷ್ಟಿಗೆ ಅತ್ಯಗತ್ಯವಾಗಿ ಬೇಕಿದ್ದ ಮೂಲವಾಗಿತ್ತು ಊಳಿಗಮಾನ್ಯತೆ. ಊಳಿಗಮಾನ್ಯತೆಯ ಹಲಗೆಯಿಂದ ಮಧ್ಯವರ್ತಿ ಅಧಿಕಾರಶಾಹಿ ಮತ್ತು ವರ್ತಕರು ಚಿಮ್ಮಿದರು. ಮೊದಲಿಗೆ ಮಧ್ಯವರ್ತಿ ವರ್ತಕರ ಮೂಲವನ್ನು ನೋಡೋಣ. ಈ ವರ್ಗ ಹಲವು ವಿಧದಲ್ಲಿ ಹೊರಹೊಮ್ಮಿತು. 

ಮೊದಲಿಗೆ, ನಮ್ಮ ಬಳಿ ಮಾವೋ ತ್ಸೇ ತುಂಗ್ ತನ್ನ Analysis of the classes in chinaದಲ್ಲಿ ವಿವರಿಸಿದ ಮಾದರಿಯಿದೆ; ಮದ್ಯವರ್ತಿಗಳು ವಸಾಹತುಶಾಹಿ ಕಾರ್ಖಾನೆಗಳ ವ್ಯಾಪಾರದ ಸ್ಥಳಗಳಲ್ಲಿ ಅಧಿಕಾರಿಗಳ ರೂಪದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಯಿತು. (74) ಕರ್ನಾಟಕದ ಬಂದರುಗಳು ಬ್ರಿಟೀಷರ ವ್ಯಾಪಾರದ ಪ್ರವೇಶದ್ವಾರವಾಗಿರಲಿಲ್ಲ; ಕಲ್ಕತ್ತಾ, ಬಾಂಬೆ, ಮದ್ರಾಸ್ ಮತ್ತು ಸೂರತ್ ಈ ಪಾತ್ರವನ್ನು ನಿರ್ವಹಿಸುತ್ತಿದ್ದವು, ಮಾವೋ ವಿವರಿಸಿದ ಮಧ್ಯಮವರ್ತಿಗಳ ಉಗಮದ ಮಾದರಿಯನ್ನು ಈ ನಗರಗಳಲ್ಲಿ ಕಾಣಬಹುದು. ಕರ್ನಾಟಕದ ಕಾಫೀ ವ್ಯಾಪಾರವನ್ನು ಉದಾಹರಣೆಯಾಗಿಸಿಕೊಂಡು ಮಧ್ಯವರ್ತಿತನದ ನೇರ ಹೇರಿಕೆಯನ್ನು ಕರ್ನಾಟಕದಲ್ಲಿ ಕಾಣಬಹುದು, ಸಣ್ಣ ಪ್ರಮಾಣದಲ್ಲಿ. (75) 

ಈ ವಿದ್ಯಮಾನಗಳನ್ನು ಧೃಡೀಕರಿಸುತ್ತ ಮಾಲತಿ. ಕೆ. ಮೂರ್ತಿ ಬರೆಯುತ್ತಾರೆ: “….ದಕ್ಷಿಣ ಕೆನರಾ ಮತ್ತು ವಿದೇಶಗಳ ನಡುವೆ ನೇರ ವ್ಯಾಪಾರ ಕಡಿಮೆಯಿತ್ತು.” (76) ಈ ಸಮಯದ ಬ್ರಿಟೀಷ್ ವರದಿಗಳು: “ಯಾವ ದೇಶದ ಹಡಗುಗಳೂ ಈ ಜಿಲ್ಲೆಯ ಬಂದರುಗಳಿಗೆ ಯಾವತ್ತೂ ಬಂದಿರಲಿಲ್ಲ” ಎಂದು ಹೇಳುತ್ತವೆ. (77) ಮತ್ತಷ್ಟು ಸೇರಿಸುತ್ತ ಮಾಲತಿ: “ಈ ಪ್ರದೇಶದಲ್ಲಿ ಯುರೋಪಿಯನ್ ವರ್ತಕರ ಹೆಚ್ಚು ಕಮ್ಮಿ ಎಲ್ಲಾ ವ್ಯಾಪಾರವನ್ನೂ ದಲ್ಲಾಳಿಗಳ ಮೂಲಕ, ಸಹಾಯಕರ ನೆರವಿನೊಂದಿಗೆ ನಡೆಸಲಾಗುತ್ತಿತ್ತು.” (78) 

1818ರಲ್ಲಿ ಬಾಂಬೆಯೊಂದರ ವ್ಯಾಪಾರವೇ ಇಡೀ ಕೆನರಾದ ವಹಿವಾಟಿಗಿಂತ ನಲವತ್ತು ಪ್ರತಿಶತಃ ಅಧಿಕವಿತ್ತು. (79) ಕರ್ನಾಟಕದ ಕರಾವಳಿಯುದ್ದಕ್ಕಿದ್ದ ಬಂದರುಗಳು ಒಳನಾಡು ಮತ್ತು ಬಾಂಬೆಯ ನಡುವಿನ ಸಾಗಾಣಿಕೆಯ ಸ್ಥಳವಾಗಿತ್ತು. 

ಬ್ರಿಟೀಷರು ಕನ್ನಡ, ತುಳು ಮತ್ತು ಕೊಡವ ನಾಡಿನಲ್ಲಿ ನೇರವಾಗಿ ವ್ಯಾಪಾರ ಮಾಡದ ಕಾರಣ ಕರ್ನಾಟಕದ ಮಧ್ಯವರ್ತಿ ವರ್ತಕರು ದಲ್ಲಾಳಿಗಳಾಗಿ ಬಾಂಬೆ ಮತ್ತು ಮದ್ರಾಸಿನ ಮಧ್ಯವರ್ತಿಗಳಾದರು. ಹಾಗಾಗಿ ಗಮನಿಸಿದಾಗ – ಯಾವಾಗಲೂ ಅಲ್ಲದಿದ್ದರೂ – ಹತ್ತೊಂಬತ್ತನೇ ಶತಮಾನದಲ್ಲಿ ಆಕ್ರಮಣಕ್ಕೊಳಗಾದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮಧ್ಯವರ್ತಿ ವರ್ತಕರ ಬೆಳವಣಿಗೆ ಕುಂಠಿತವಾಗಿತ್ತು. ಹತ್ತೊಂಬತ್ತನೇ ಶತಮಾನ ಬ್ರಿಟೀಷರಿಗೆ ಹದಿನೆಂಟನೇ ಶತಮಾನಕ್ಕಿಂತ ಹೆಚ್ಚಿನ ಪ್ರದೇಶಗಳನ್ನು ನೀಡಿತು. ಇದು ಏನನ್ನು ಸೂಚಿಸುತ್ತಿತ್ತೆಂದರೆ ಈಗಾಗಲೇ ಬಾಂಬೆ, ಮದ್ರಾಸ್, ಕಲ್ಕತ್ತಾ ಮತ್ತು ಸೂರತ್ತಿನಲ್ಲಿ ವಸಾಹತುಶಾಹಿಯ ವ್ಯಾಪಾರ ವಹಿವಾಟಿನಲ್ಲಿ ಗೂಡು ಕಟ್ಟಿಕೊಂಡಿದ್ದ ಮಧ್ಯವರ್ತಿಗಳಿಗೆ ಬ್ರಿಟೀಷ್ ಸಾಮ್ರಾಜ್ಯ ಇಂಚಿನಷ್ಟು ವಿಸ್ತಾರಗೊಂಡರೂ ಅಪಾರ ಅನುಕೂಲವಾಗುತ್ತಿತ್ತು. ಬ್ರಿಟೀಷರ ಸೇವೆಗೈದ ಕರ್ನಾಟಕದ ವರ್ತಕರು ನೇರ ಮಧ್ಯವರ್ತಿಗಳಾಗದಿದ್ದರೂ ತಮ್ಮ ಮಧ್ಯವರ್ತಿ ವ್ಯಕ್ತಿತ್ವಕ್ಕೆ ‘ಚ್ಯುತಿ’ ಬರುವಂತೆ ನಡೆದುಕೊಳ್ಳಲಿಲ್ಲ ಮತ್ತು ಮಧ್ಯವರ್ತಿಗಳ ಆರ್ಥಿಕ ಮತ್ತು ರಾಜಕೀಯ ಪಾತ್ರ ವಸಾಹತುಶಾಹಿಯ ಸೇವೆಯಲ್ಲಿರುವಂತೆ ನೋಡಿಕೊಂಡರು. ದಲ್ಲಾಳಿಗಳ ದಲ್ಲಾಳಿಗಳಾಗಿದ್ದ ಒಂದಷ್ಟು ಕುಳ್ಳಗೆ, ದಪ್ಪಕ್ಕಿದ್ದ ಇವರು ರುಪಾಯಿಗಳಲ್ಲಿ ವ್ಯವಹರಿಸುತ್ತಿದ್ದರೆ ಇವರ ಬಲಾಢ್ಯ ದಾಯಾದಿಗಳು ಪೌಂಡ್ ಮತ್ತು ಬಾಂಬೆಯಲ್ಲಿ ಸ್ಟರ್ಲಿಂಗಿನಲ್ಲಿ ವ್ಯವಹಾರ ಮಾಡುತ್ತಿದ್ದರು. 

ಬ್ರಿಟೀಷರು ಪರಿಚಯಿಸಿದ ಆರ್ಥಿಕತೆಯ ಗುರಿ ಸ್ಥಳೀಯ ವರ್ತಕರ ಬಹುದೊಡ್ಡ ಗುಂಪನ್ನು ಹೇಳಹೆಸರಿಲ್ಲದಂತೆ ಮಾಡುವುದಾಗಿತ್ತು ಮತ್ತು ಆ ಗುಂಪಿನ ಕೆಲವೇ ಕೆಲವರನ್ನು ಮಧ್ಯವರ್ತಿಗಳನ್ನಾಗಿ ಪರಿವರ್ತಿಸುವುದಾಗಿತ್ತು; ಆಧಾರಗಳ ಕೊರತೆಯಿಂದ ಈ ಮೇಲ್ಪದರದ ಜನರ್ಯಾರು ಎಂದು ಗುರುತಿಸುವುದು ನಮಗೆ ಸಾಧ್ಯವಾಗುತ್ತಿಲ್ಲ. 

ಇವೆಲ್ಲವೂ ಕರ್ನಾಟಕದಲ್ಲಿ ಮಧ್ಯವರ್ತಿ ವರ್ತಕರ ರೂಪುಗೊಳ್ಳುವಿಕೆಗೆ ನಡೆಯುತ್ತಿದ್ದ ಚಟುವಟಿಕೆಗಳಾದರೆ, ಒಳಗೊಳಗೇ ಮತ್ತೊಂದು ಬೆಳವಣಿಗೆ ನಡೆಯುತ್ತಿತ್ತು. ಕೆಲವು ನೇರ ಮಧ್ಯವರ್ತಿಗಳು ಬ್ರಿಟೀಷ್ ಸಾಮ್ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದರು. ಕರ್ನಾಟಕ ಇತಿಹಾಸದ ಈ ಭಾಗ ರಾಜಕೀಯವಾಗಿ ಬಹಳ ಪ್ರಮುಖವಾದ ಸಂಕೇತವಾಗಿದೆ. ಆರನೇ ಪಾವ್ ಲಾವ್ (Pavlov) ಇದರ ಬಗ್ಗೆ ಬರೆಯುತ್ತ: “ಜಗತ್ ಸೇಠರು 1782ರವರೆಗೆ ಕಂಪನಿಯ ಬ್ಯಾಂಕರುಗಳಾಗಿದ್ದರು. ಅವರ ಜಾಗಕ್ಕೆ ಅಗರ್ ವಾಲ್ ಸಮುದಾಯದ ದೊಡ್ಡ ಮಾರ್ವಾಡಿ ಬ್ಯಾಂಕರುಗಳ ಸದಸ್ಯರಲ್ಲೊಬ್ಬರಾದ ಗೋಪಾಲ್ ದಾಸರ ಮಾರ್ವಾಡಿ ಬ್ಯಾಂಕ್ ಬಂತು. ಅವನು ಮತ್ತವನ ತಮ್ಮ 1770ರಲ್ಲಿ ಕಲ್ಕತ್ತಾಗೆ ಹೋದರು. ಮತ್ತಲ್ಲವರ ಅದೃಷ್ಟ ಖುಲಾಯಿಸಿತು. ಅವನ ಮಗ ಭವಾನಿದಾಸ್ ಬ್ರಿಟೀಷರ ಸೈನ್ಯ 1799ರಲ್ಲಿ ಮೈಸೂರನ್ನಾಕ್ರಮಿಸುವಾಗ ಶಸ್ತ್ರಾಸ್ತ್ರಗಳನ್ನು ಪೂರೈಸಿದರು. ಭವಾನಿದಾಸರ ಸೇವೆ ಎಷ್ಟು ಮಹತ್ವದ್ದಾಗಿತ್ತೆಂಬುದಕ್ಕೆ ಆಕ್ರಮಣಕಾರರಾದ ಬ್ರಿಟೀಷರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡ ನಂತರ ಟಿಪ್ಪು ಸುಲ್ತಾನನ ಖಡ್ಗವನ್ನು ಅವರಿಗೆ ನೀಡಿದ್ದೇ ಸಾಕ್ಷಿ.”(80) 

ವಸಾಹತುಶಾಹಿಯ ವಿರುದ್ಧ ಕಾದಾಡಿದ, ಬ್ರಿಟೀಷರ ವಿರುದ್ಧದ ಹೋರಾಟದ ಸಂಕೇತವಾಗಿದ್ದ ಖಡ್ಗ ಮಾರ್ವಾಡಿ ಮಧ್ಯವರ್ತಿಗಳಿಗೆ ಬಹುಮಾನವಾಗಿ ದಕ್ಕಿದ್ದು ಇತಿಹಾಸದ ವ್ಯಂಗ್ಯವೇ ಸರಿ. ಈ ಬಹುಮಾನ ಕರ್ನಾಟಕದ ಮಾರುಕಟ್ಟೆಯನ್ನು ಕರ್ನಾಟಕದ ಶತ್ರುಗಳಿಗೆ ಉಡುಗೊರೆಯಾಗಿ ಒಪ್ಪಿಸುವುದರ ಭವಿಷ್ಯವಾಣಿಯಾಗಿತ್ತು ಮತ್ತು ಕರ್ನಾಟಕದಲ್ಲಿ ಬ್ರಿಟೀಷ್ ವಸಾಹತಿನ ಸೇವೆಗೆ ಮತ್ತು ಅವರ ಲೂಟಿಯ ರಕ್ಷಣೆಯ ಹೊಣೆಯನ್ನು ಈ ಗುಲಾಮರಿಗೆ ಒಪ್ಪಿಸಿತ್ತು. ಮೇಕಿಂಗ್ ಹಿಸ್ಟರಿಯ ಮೊದಲ ಸಂಪುಟದಲ್ಲಿ ಬನಿಯಾಗಳು ಬಿಜಾಪುರ ಭಾಗದಲ್ಲಿ ಮಧ್ಯವರ್ತಿ ಬಲೆ ಹರಡಿದ್ದನ್ನು ಈಗಾಗಲೇ ನೋಡಿದ್ದೇವೆ. (81) 

ಮೈಸೂರಿನ ಹೃದಯ ಭಾಗಕ್ಕೆ ಪಶ್ಚಿಮ ಮತ್ತು ವಾಯುವ್ಯ ಭಾರತದಿಂದ ಬಂದ ವಸಾಹತಿನ ಮಧ್ಯವರ್ತಿಗಳ ಬಗ್ಗೆ ತಿಳಿಯುವುದು ಆನಂದ ರಂಗ ಪಿಳ್ಳೈರ (ಎ.ಆರ್. ಪಿಳ್ಳೈ) ಡೈರಿಯಲ್ಲಿನ ಬರಹಗಳನ್ನು ಭೇಟಿಯಾದಾಗ. ಪಿಳ್ಳೈ ಫ್ರೆಂಚ್ ವಸಾಹತಿನ ಪ್ರಮುಖ ಮಧ್ಯವರ್ತಿಗಳಾಗಿದ್ದರು, ಫ್ರೆಂಚರ ವಹಿವಾಟಿನಲ್ಲಿ ಅವರ ಪಾತ್ರ ಗಮನಾರ್ಹವಾಗಿತ್ತು. 1709ರಲ್ಲಿ ಹುಟ್ಟಿದ್ದ ಎ.ಆರ್. ಪಿಳ್ಳೈ 1716ರಲ್ಲಿ ಮದ್ರಾಸಿನಿಂದ ಪಾಂಡಿಚೇರಿಗೆ ವಲಸೆ ಹೋದರು. ತಮ್ಮ ಭಾಮೈದ, ಫ್ರೆಂಚಿನ ಪ್ರಮುಖ ಸ್ಥಳೀಯ ಏಜೆಂಟಾಗಿದ್ದ ನನಿಯಾ ಪಿಳ್ಳೈರವರ ಸೂಚನೆಯ ಮೇರೆಗೆ.” (82) 

ತಮಿಳುನಾಡಿನಲ್ಲಿ ಅನೇಕ ವ್ಯಾಪಾರಗಳನ್ನು ಸ್ಥಾಪಿಸಿ “ಯುರೋಪಿನ ವಸ್ತುಗಳಿಗೆ ದೇಶದೊಳಗಡೆ ಮಾರುಕಟ್ಟೆ ಸ್ಥಾಪಿಸುವ ಕೆಲಸವನ್ನು ಚುರುಕುಗೊಳಿಸಿದರು” (83) 

ಆದಾಗ್ಯೂ, ಮುಖ್ಯವಾದ ಅಂಶವೆಂದರೆ “ಚಿಕ್ಕದೇವರಾಜರ ನಂತರ ಬಂದ ಒಡೆಯರ್ ಗಳು ಫ್ರೆಂಚಿನ ಮಧ್ಯವರ್ತಿಗಳಾದ ಆನಂದ ರಂಗ ಪಿಳ್ಳೈರಂತವರ ಚಟುವಟಿಕೆಗಳು ವ್ಯಾಪಿಸುವುದಕ್ಕೆ ಅವಕಾಶಗಳನ್ನೊದಗಿಸಿದರು; ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವವರ ಸಹಾಯಕ್ಕೆ ಕರ್ನಾಟಕದ ವರ್ತಕರನ್ನು ನಂಬದೆ ಕರ್ನಾಟಕದ ಒಳನಾಡಿನಲ್ಲಿ ವಸಾಹತುಶಾಹಿಯ ಆರ್ಥಿಕ ದಲ್ಲಾಳಿಗಳಾಗಿದ್ದ ಮಾರವಾಡಿ ಮತ್ತು ಗುಜರಾತಿಗಳನ್ನು ನಂಬಿದರು. ಆನಂದ ರಂಗ ಪಿಳ್ಳೈರವರ ಡೈರಿಯಲ್ಲಿ ಅವರ ಜೊತೆ ವ್ಯವಹರಿಸಿದ ಸಂಬು ದಾಸ್ ಗೆ ಪುರಸ್ಕಾರ ಕೊಟ್ಟ ಬಗ್ಗೆ ಹೇಳಲಾಗಿದೆ. ಅದು ಮೈಸೂರಿನ ಶ್ರೀರಂಗಪಟ್ಟಣದ ಗುಜರಾತಿ ಲಾಲ್ ದಾಸ್ ಗೆ ಸಿಗಬೇಕಿತ್ತು.” (84) 

ಮೈಸೂರಿನ ವಸಾಹತು ವಿರೋಧಿ ಸರಕಾರದ ಪತನದ ನಂತರ ಹೊಸ ಮಾರುಕಟ್ಟೆಗೆ ವಸಾಹತುಶಾಹಿಯ ಪ್ರವೇಶದ ದಲ್ಲಾಳಿಗಳಾಗಿ ಪಶ್ಚಿಮ ಭಾರತದ ಸ್ಥಾಪಿತ ಮಧ್ಯವರ್ತಿ ಕುಟುಂಬಗಳು ದಕ್ಷಿಣದ ಕಡೆಗೆ ಹೆಜ್ಜೆ ಹಾಕಿದರು. ಇದು ಎಷ್ಟು ವೇಗವಾಗಿ ನಡೆಯುತ್ತಿತ್ತೆಂದರೆ ಮಂಗಳೂರು ಬ್ರಿಟೀಷರ ಕೈವಶವಾದ ತಿಂಗಳ ನಂತರ ಅಲ್ಲಿಗೆ ಭೇಟಿ ಕೊಟ್ಟ ಬುಚನನ್ನಿಗೆ ಬದಲಾವಣೆಗಳು ಗೋಚರಿಸಲಾರಂಭಿಸುತ್ತು. ಬುಚನನ್ ಬರೆಯುತ್ತಾನೆ: “ಹೈದರಾಲಿಯ ಕಾಲದ ಪ್ರಮುಖ ವರ್ತಕರು ಮಾಪಿಳ್ಳೈ ಮತ್ತು ಕೊಂಕಣಿಗಳು (ಗೌಡ ಸಾರಸ್ವತ ಬ್ರಾಹ್ಮಣರು); ಕಂಪನಿ ಈ ಸರಕಾರವನ್ನು ವಶಪಡಿಸಿಕೊಂಡ ನಂತರ ಕೆಲವರು ಗುಜರಾತಿನಿಂದ ಬಂದಿದ್ದಾರೆ, ಹಲವರು ಸೂರತ್, ಖಚ್, ಬಾಂಬೆ ಮತ್ತು ಉತ್ತರದ ಇತರೆ ಜಾಗಗಳಿಂದ ಬಂದಿದ್ದಾರೆ. ಇವರು ಮುಖ್ಯವಾಗಿ ವೈಶ್ಯ ಜಾತಿಗೆ ಸೇರಿದವರು, ಪಾರ್ಸಿ ಜನಾಂಗದವರೂ ಹಲವರಿದ್ದಾರೆ….. ವಹಿವಾಟಿಗೆ ಉಪಯೋಗಿಸಲಾಗುವ ಹಡಗುಗಳು ಇತರೆ ಬಂದರುಗಳಿಗೆ ಸೇರಿರುವುದೇ ಜಾಸ್ತಿ.” (85) 

ಈ ಅಂಶವನ್ನು ಆರ್. ಡಿ. ಚೋಕ್ಸಿ (Choksey) ದೃಡೀಕರಿಸುತ್ತ: “ಬ್ರಿಟೀಷ್ ಆಕ್ರಮಣದ ತರುವಾಯ ಮಾರವಾಡಿಗಳು ಹೆಚ್ಚಿನ ಸಂಖೈಯಲ್ಲಿ ನೆಲೆ ಕಂಡಿದ್ದಾರೆ. ಅವರಲ್ಲಿನ ಬಹುತೇಕರು ಬಾಂಬೆಯಿಂದ ಬಂದಿದ್ದಾರೆ, ಬನಿಯಾಗಳಂತಲ್ಲದೆ, ಇವರು ದೂರದೂರದ ಹಳ್ಳಿಗಳಿಗೆ ಹೋಗಿ ನೆಲೆ ನಿಂತು ನಿಧಾನಕ್ಕೆ ಆ ಹಳ್ಳಿಗಳಲ್ಲಿ ಬಡ್ಡಿ ಕೊಡುತ್ತಿದ್ದ ಸ್ಥಳೀಯರನ್ನು ಇಲ್ಲವಾಗಿಸಿದರು.” (86) 

ಈ ವಿದ್ಯಮಾನವನ್ನು ಸುನಿತಿ ಘೋಷ್ ವಿವರಿಸುತ್ತಾ: “ಕಡಲಾಚೆ ಮತ್ತು ಸ್ಥಳೀಯ ವ್ಯವಹಾರದ ಪರಿಸ್ಥಿತಿಯಲ್ಲಿ ವಿದೇಶಿ ವರ್ತಕರ ದಲ್ಲಾಳಿಗಳಾಗದ ಭಾರತೀಯ ವರ್ತಕರು ಪತನ ಕಂಡು ಮಧ್ಯವರ್ತಿ ವರ್ತಕರು ಶಕ್ತರಾಗಿದ್ದನ್ನು ವಿಧಿ ಕೂಡ ತಡೆಯಲು ಸಾಧ್ಯವಿರಲಿಲ್ಲ.” (87) 

ವಸಾಹತು ಸರಕಾರದ ಮಧ್ಯಸ್ಥಿಕೆ, ಬ್ರಿಟೀಷರ ನೇರ ಆಡಳಿತವಿದ್ದ ಬೆಂಗಳೂರಿನ ಕಂಟೋನ್ಮೆಂಟಿನಲ್ಲಿ ಸ್ಥಳೀಯ ವರ್ತಕರ ವಿರುದ್ಧ ಮದ್ರಾಸಿನ ಮಧ್ಯವರ್ತಿಗಳನ್ನು ರಕ್ಷಿಸಿ ಪ್ರೋತ್ಸಾಹಿಸಿದ್ದನ್ನು ನರೇಂದ್ರ ಫಣಿ ಧೃಡೀಕರಿಸುತ್ತಾರೆ. ಅವರು ಬರೆಯುತ್ತಾರೆ: “ಬ್ರಿಟೀಷರ ಸಂಪೂರ್ಣ ನಿಯಂತ್ರಣದಲ್ಲಿದ್ದ ಆಡಳಿತ ಮತ್ತು ಸೈನ್ಯವನ್ನು ಮತ್ತಷ್ಟು ಬಲಪಡಿಸಿದ್ದು ಬಹುತೇಕ ನಿವಾಸಿಗಳು ಮೈಸೂರೇತರರಾಗಿರುವಂತೆ ನೋಡಿಕೊಂಡದ್ದು. ಈ ಕ್ರಮ ಮೈಸೂರು ರಾಜ್ಯದ ಮೇಲಿನ ನಿಯಂತ್ರಣವನ್ನು ಪ್ರಭಾವಿಯಾಗಿಸಲು ಬಹುಶಃ ಅವಶ್ಯಕವಾಗಿತ್ತು, ಬ್ರಿಟೀಷರ ಸಂಪೂರ್ಣ ನಿಯಂತ್ರಣವಿಲ್ಲದ ಸಾಮ್ರಾಜ್ಯದ ‘ಬ್ರಿಟೀಷ್ ದ್ವೀಪವಾಗಿತ್ತು’ ಕಂಟೋನ್ಮೆಂಟ್; ಮೈಸೂರಿನಿಂದ ಹೊರತಾಗಿ ಅದರಲ್ಲೂ ಬೆಂಗಳೂರಿನ ಪೇಟೆಯಿಂದ ಹೊರತಾಗಿ ಉಳಿಸಿಕೊಳ್ಳುವ ಜರೂರಿತ್ತು. ಇಲ್ಲಿನ ಅಧಿಕಾರಿಗಳಿಗೆ ‘ಸಾಧ್ಯವಾದಷ್ಟು ಖಾಸಗಿ ಕಟ್ಟಡಗಳು ಬೆಂಗಳೂರಿನ ಪೇಟೆಯ ಕಡೆಗೆ ಬೆಳೆಯದಂತೆ’ ನೋಡಿಕೊಳ್ಳಬೇಕೆಂದು ಸೂಚಿಸಲಾಗಿತ್ತು. ಈ ಸೂಚನೆ ಕೇವಲ ಭೌಗೋಳಿಕ ಉದ್ದೇಶದ್ದಾಗಿದ್ದರೆ ಅದನ್ನು ಮೀರುವುದು ಅಷ್ಟೇನೂ ಮಹತ್ವದ್ದಾಗಿರುತ್ತಿರಲಿಲ್ಲ. ಹಾಗಾಗಿ ಬ್ರಿಟೀಷರು ಕಂಟೋನ್ಮೆಂಟ್ ಮತ್ತು ಬೆಂಗಳೂರು ನಗರದ ನಡುವಿನ ವ್ಯಾವಹಾರಿಕ ಸಂಬಂಧಗಳು ಒಂದು ಮಿತಿಯಲ್ಲಿರುವಂತೆ ನೋಡಿಕೊಂಡರು. ಪೇಟೆಯಲ್ಲಿ ಇದೇ ಸಮಯದಲ್ಲಿ ಸುರಕ್ಷಿತವಾಗಿದ್ದ ವರ್ತಕರು ಕಂಟೋನ್ಮೆಂಟಿನಲ್ಲಿ ಉನ್ನತಿ ಪಡೆಯದಂತೆ ‘ನ್ಯಾಯಬದ್ಧ’ವಾಗಿಯೇ ಹೊರಗಿಡಲಾಯಿತು. ಪೇಟೆಯ ವರ್ತಕರಿಗೆ ಕಂಟೋನ್ಮೆಂಟಿನಲ್ಲಿ ಅಂಗಡಿ ತೆರೆಯುವ ಅವಕಾಶವಿರಲಿಲ್ಲ. ಆದರೆ ತಮ್ಮ ವಸ್ತುಗಳನ್ನು ಕಂಟೋನ್ಮೆಂಟಿನ ಸಾಮಾನ್ಯ ಮತ್ತು ರೆಜಿಮೆಂಟಿನ ಬಜಾರುಗಳಿಗೆ ವೋಲ್ ಸೇಲ್ ದರದಲ್ಲಿ ಮಾರಾಟಮಾಡಬಹುದಾಗಿತ್ತು.” (88)

ಮುಂದಿನ ವಾರ: 
ಮಧ್ಯವರ್ತಿ - ಖರೀದಿದಾರ ವರ್ಗದ ಉಗಮಕ್ಕಿದ್ದ ಸಾಮಾಜಿಕ ಸ್ಥಿತಿಗತಿ ಭಾಗ 2

Disclaimer: ಮೇಕಿಂಗ್ ಹಿಸ್ಟರಿ ಆಂಗ್ಲ ಪುಸ್ತಕದ ಅನುವಾದಿಸಲು ಬೇಕಾದ ಅಧಿಕೃತ ಹಕ್ಕುಗಳು ನನ್ನಲ್ಲಿಲ್ಲ. ಅನುವಾದದ ಹಕ್ಕನ್ನು ಕೊಡುವವರಲ್ಲನೇಕರು ಜೈಲಿನಲ್ಲಿದ್ದಾರಂತೆ. ಯಾರಲ್ಲಾದರೂ ಅಧಿಕೃತ ಅನುವಾದದ ಹಕ್ಕುಗಳು ಇದ್ದು ಆಕ್ಷೇಪಣೆ ಎತ್ತಿದರೆ ಕ್ಷಮಾಪಣೆಯೊಂದಿಗೆ ಅನುವಾದದ ಕಾರ್ಯವನ್ನು ನಿಲ್ಲಿಸಲಾಗುವುದು. ಸಾಕೇತ್ ರಾಜನ್ ದೃಷ್ಟಿಯ ಕರ್ನಾಟಕದ ಇತಿಹಾಸ ಕನ್ನಡ ಬಲ್ಲವರಿಗೂ ತಲುಪಲಿ ಎಂಬ ಉದ್ದೇಶದಿಂದ ಇದನ್ನು ಪ್ರಕಟಿಸಲಾಗುತ್ತಿದೆಯೇ ಹೊರತು ಯಾವುದೇ ವಾಣಿಜ್ಯ ಉದ್ದೇಶದಿಂದಲ್ಲ - ಡಾ. ಅಶೋಕ್. ಕೆ. ಆರ್.

No comments:

Post a Comment