ಡಿಸೆಂ 17, 2015

ಈಗ ಗಾಳಿಗೂ ಭರ್ಜರಿ ಬೆಲೆ!

vitality air
ಚೀನಾದ ಬೀಜಿಂಗಿನಲ್ಲಿ ಈ ಬಾರಿಯೂ 'ರೆಡ್ ಅಲರ್ಟ್' ಘೋಷಿಸಲಾಗಿತ್ತು. ಕಾರಣ ಹೊಗೆ ಮತ್ತು ಮಂಜು (ಹೊಂಜು) ವಿಪರೀತವೆನ್ನಿಸುವಷ್ಟು ಜಾಸ್ತಿಯಾಗಿ ಜನರ ಉಸಿರಾಟಕ್ಕೆ ಓಡಾಟಕ್ಕೆ ತೊಂದರೆಯುಂಟುಮಾಡಿತ್ತು. ಮಂಜು ಪ್ರಾಕೃತಿಕವಾದರೆ ಹೊಂಜು ಮನುಷ್ಯ ನಿರ್ಮಿತ. ಇಡೀ ಪರಿಸರದ ಉಸಿರುಗಟ್ಟಿಸುವಲ್ಲಿ ಮನುಷ್ಯ ಹೆಸರುವಾಸಿಯಲ್ಲವೇ. ಬರ ಇರಲಿ ನೆರೆ ಬರಲಿ ಹೊಂಜು ಮುಸುಕಲಿ ಹಣ ಮಾಡುವ ನವನವೀನ ವಿಧಾನಗಳ ಆವಿಷ್ಕಾರ ಮಾಡುವುದು ವ್ಯಾಪಾರಿಗಳು. ಕೆನಡಾದ ವ್ಯಾಪಾರಿಗಳು ಮತ್ತು ಚೀನಾದ ವ್ಯಾಪಾರಿಗಳು ಈ ಹೊಂಜಿನ ನಡುವೆ ಯಾವ ವ್ಯಾಪಾರ ಮಾಡುವುದೆಂದು ತಲೆಕೆರೆದುಕೊಂಡಾಗ ಹೊಳೆದಿದ್ದು ಶುದ್ಧ ಗಾಳಿ! ಹೌದು ಹೊಂಜಿನ ವಾತಾವರಣದಲ್ಲಿ ಉಸಿರಾಡುವುದೇ ಕಷ್ಟಕರವಾದಾಗ ಒಂದಷ್ಟು ಶುದ್ಧ ಗಾಳಿ ನೀಡುವ ಕಂಪನಿಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಇದೆ.

ಗಾಳಿ ಮಾರುವ ಕಂಪನಿಗಳು ಹೇಳಿಕೊಳ್ಳುವ ಪ್ರಕಾರ ಶಿಖರ ಪರ್ವತಗಳನ್ನು ಏರಿ ಶುದ್ಧ ಗಾಳಿಯನ್ನು ತುಂಬಿಸಿಕೊಂಡು ಬಂದು ಚಿಕ್ಕ ಚಿಕ್ಕ ಕ್ಯಾನುಗಳೊಳಗೆ ತುಂಬಿ ಮಾರಲಾಗುತ್ತಿದೆ. ಗಾಳಿಯ ಪರಿಶುದ್ಧತೆಯ ಲೆಕ್ಕಾಚಾರದಲ್ಲಿ ಒಂದು ಕ್ಯಾನಿಗೆ 19ರಿಂದ 32 ಕೆನಡಾ ಡಾಲರ್ರುಗಳವರೆಗೆ ಬೆಲೆಯಿದೆ (ಅಂದಾಜು 750 ರಿಂದ 1500 ರುಪಾಯಿ!). ಎರಡೆರಡು ಬಾಟಲುಗಳನ್ನು ಜೊತೆಗೆ ಖರೀದಿಸಿದರೆ ಡಿಸ್ಕೌಂಟ್ ಕೂಡ ಸಿಗುತ್ತೆ! ಚೀನಾದಲ್ಲೀಗ ಇಂತಹ ಕ್ಯಾನುಗಳಿಗೆ ವಿಪರೀತವೆನ್ನಿಸುವಷ್ಟು ಬೇಡಿಕೆ ಸೃಷ್ಟಿಯಾಗಿದೆ. ಇದರ ಜೊತೆಗೆ ಕೆಲವು ಹೋಟೆಲ್ಲುಗಳಲ್ಲಿ 'ಗಾಳಿ ಶುದ್ಧಗೊಳಿಸಲು' ತೆರಿಗೆ ವಿಧಿಸಲು ಪ್ರಾರಂಭಿಸಿದ್ದಾರಂತೆ! ಒಟ್ಟಿನಲ್ಲಿ ಮನುಷ್ಯನ 'ಅಭಿವೃದ್ಧಿ' ಮಾದರಿಯಿಂದ ಶೇಖರಣೆಗೊಂಡ ಹಣವನ್ನು ವ್ಯಯಿಸಲು ನಾನಾ ರೀತಿಯ ದಾರಿಗಳು ಸೃಷ್ಟಿಯಾಗುತ್ತಿವೆ. ಭಾರತ 'ಅಭಿವೃದ್ಧಿ'ಯ ಪಥದಲ್ಲಿ ಮುನ್ನುಗ್ಗಿ ನುಗ್ಗುವ ಬಗ್ಗೆಯೇ ನಮ್ಮ ನಾಯಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿರುವ ಈ ದಿನಗಳಲ್ಲಿ ಚೀನಾದ 'ಅಭಿವೃದ್ಧಿ' ಮಾದರಿ ನಮಗೆ ಪಾಠವಾಗಬೇಕಲ್ಲವೇ? ಅಯ್ಯೋ ಚೀನಾದಲ್ಲಾಗಿದೆ ಅಷ್ಟೇ, ನಾವು ಇನ್ನೂ ಸೇಫು ಬುಡ್ರಿ ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆಯೇ?

ದೆಹಲಿಯಲ್ಲಾಗಲೇ ಹೊಂಜಿನ ಅಟ್ಟಹಾಸ ಶುರುವಾಗಿದೆ. ದೆಹಲಿ ಸರಕಾರ ಜನವರಿ ಒಂದರಿಂದ ಸಮ - ಬೆಸ ಸಂಖೈಯ ವಾಹನಗಳು ದಿನ ಬಿಟ್ಟು ದಿನ ರೋಡಿಗಿಳಿಯುವಂತೆ ಮಾಡುವಲ್ಲಿ ಉತ್ಸುಕವಾಗಿದೆ. ಟೀಕೆಗಳೇನೇ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಇದು ಒಂದು ಉತ್ತಮ ನಡೆಯೇ ಹೌದು. ಅನುಷ್ಟಾನ ಕಷ್ಟವೆಂಬುದೂ ಸತ್ಯ. ನ್ಯಾಯಾಲಯ ಇನ್ನೂ ಮೂರು ತಿಂಗಳವರೆಗೆ 2000 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಡೀಸೆಲ್ ವಾಹನಗಳನ್ನು ದೆಹಲಿಯಲ್ಲಿ ನೋಂದಾಯಿಸುವಂತಿಲ್ಲ ಎಂದು ಆದೇಶಿಸಿದೆ. ಈ ನಿರ್ಧಾರಗಳೆಲ್ಲವೂ ಭಾರತದ ದೆಹಲಿ ಕೂಡ ಬೀಜಿಂಗ್ ಆಗುವತ್ತ ಸಾಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಎರಡು ಮೂರು ಕಿಲೋಮೀಟರ್ ಮೈಲೇಜು ಕೊಡುವ ಕಾರಿನಲ್ಲಿ ದಿನವಿಡೀ ತಿರುಗಿ ಹೊಗೆಯುಗುಳುವವರೇನೋ ಮನೆಯಲ್ಲಿ 'ಗಾಳಿ ಶುದ್ಧ'ಗೊಳಿಸುವ ಮಿಷೀನನ್ನು ಖರೀದಿಸಿಬಿಡಬಹುದು ಕಾರೂ ಇಡದೆ ಬೈಕೂ ತೆಗೆದುಕೊಳ್ಳದೆ ಸಾರ್ವಜನಿಕ ಸಾರಿಗೆಯನ್ನಷ್ಟೇ ಉಪಯೋಗಿಸುವವರ್ಯಾಕೆ ವಿಷಗಾಳಿಯನ್ನು ಸೇವಿಸಬೇಕು? ಹತ್ತಕ್ಕಿಂತ, ಹದಿನೈದಕ್ಕಿಂತ ಕಡಿಮೆ ಮೈಲೇಜ್ ಕೊಡುವ ಕಾರುಗಳನ್ನು, ನಲವತ್ತಕ್ಕಿಂತ ಕಡಿಮೆ ಮೈಲೇಜು ಕೊಡುವ ಬೈಕು - ಸ್ಕೂಟರುಗಳನ್ನು ಭಾರತದಲ್ಲಿ ಉತ್ಪಾದಿಸಬಾರದು, ಮಾರಬಾರದು ಎಂದೊಂದು ನಿರ್ಣಯ ತೆಗೆದುಕೊಳ್ಳುವುದು ಅಷ್ಟೊಂದು ಕಷ್ಟವೇ? ಅಭಿವೃದ್ಧಿಯ ವೇಗದ ಭರದಲ್ಲಿ ಪರಿಸರಕ್ಕೇನಾದರೇನು ಬಿಡಿ.

ಹೆಚ್ಚೇನಲ್ಲ ಹತ್ತು ವರುಷದ ಹಿಂದೆ ಹೋಟೆಲ್ಲಿಗೋ ಡಾಬಾಗೋ ಹೋದಾಗ ಗೆಳೆಯರ್ಯಾರಾದೂ ಬಾಟಲ್ ನೀರು ಕೇಳಿದರೆ ಆಡಿಕೊಳ್ಳುತ್ತಿದ್ದೋ. 'ನೋಡ್ದಾ ಇವನ ಕೊಬ್ಬಾ. ಮಿನರಲ್ ವಾಟರ್ ಬೇಕಂತೆ' ಎಂದು ರೇಗಿಸುತ್ತಿದ್ದೊ. ನೀರಿಗೆ ದುಡ್ಡು ಕೊಟ್ಟು ಖರೀದಿಸಿ ಕುಡಿಯುವುದು ನಗೆಪಾಟಲಿನ ಸಂಗತಿಯಾಗಿತ್ತು. ಈಗ? ಬಾಟಲ್ ನೀರು ಖರೀದಿಸುವುದು ಸಹಜವಾಗಿಬಿಟ್ಟಿದೆ. ಭಾರತದ ಅತ್ಯುತ್ತಮ ಬ್ಯುಸಿನೆಸ್ಸುಗಳಲ್ಲಿ ಅದೂ ಒಂದು. ಇನ್ನತ್ತು ವರುಷದಲ್ಲಿ ಭಾರತದ ಮುಖ್ಯ ನಗರಗಳಲ್ಲಿ ಚೀನಾದ ಬೀಜಿಂಗಿನಲ್ಲಾದಂತೆಯೇ ಗಾಳಿಯ ಬ್ಯುಸಿನೆಸ್ಸು ಪ್ರಾರಂಭವಾದರೆ ಅಚ್ಚರಿಯಿಲ್ಲ. ನಮ್ಮ ಅಭಿವೃದ್ಧಿಯ ಮಾದರಿಗಳು ಹೇಗಿರುತ್ತವೋ ನೋಡಿ. ಶುದ್ಧ ನೀರನ್ನು ಪ್ಲಾಸ್ಟಿಕ್ ಬಾಟಲುಗಳಲ್ಲಿ, ಶುದ್ಧ ಗಾಳಿಯನ್ನು ಮೆಟಲ್ ಕ್ಯಾನುಗಳಲ್ಲಿ ತುಂಬಿಸುತ್ತೇವೆ. ಪ್ಲಾಸ್ಟಿಕ್ ಬಾಟಲುಗಳನ್ನು ಮೆಟಲ್ ಕ್ಯಾನುಗಳನ್ನು ತಯಾರಿಸಲು ಮತ್ತಷ್ಟು ಪರಿಸರ ನಾಶವಾಗುತ್ತದೆ, ಆ ನಾಶದ ಪರಿಣಾಮಗಳಿಂದ ಜನರನ್ನು - ಹಣವಂತ ಜನರನ್ನು 'ರಕ್ಷಿಸಲು' ಮತ್ತೊಂದು ಹೊಸ ವ್ಯಾಪಾರ ಶುರುವಾಗುತ್ತದೆ, ಆ ವ್ಯಾಪಾರದಿಂದ ಉಂಟಾಗುವ ಪರಿಸರ ನಾಶದಿಂದ........ ಅಭಿವೃದ್ಧಿಯ ಸಮಯದಲ್ಲಿ ಪರಿಸರದ ಬಗ್ಗೆ ಮಾತನಾಡುವುದೇ ಪಾಪ.

ಜೂನ್ 23, 2015

ಕಣ್ವ ಜಲಾಶಯವನ್ನು ತುಂಬಿಸುವ ಸಂಭ್ರಮ!

ರಾಮನಗರ ಜಿಲ್ಲೆಯ ಕೆಂಗಲ್ ಬಳಿಯ ಕಣ್ವ ಜಲಾಶಯ ಸಂಪೂರ್ಣ ಬರಿದಾಗಿತ್ತು. ದೊಡ್ಡ ಗಾತ್ರದ ಪೈಪುಗಳಿಂದ ಕಣ್ವಕ್ಕೆ ನೀರನ್ನು ಹರಿಸಲಾಗುತ್ತಿದೆ. ಅದರ ವೀಡಿಯೋ ನಿಮ್ಮ ಹಿಂಗ್ಯಾಕೆಯಲ್ಲಿ. ಮೋಡ ಕವಿದ ವಾತಾವರಣದ ಕಾರಣ ವೀಡಿಯೋ ಗುಣಮಟ್ಟ ಕಡಿಮೆಯಾಗಿದೆ, ಕ್ಷಮೆಯಿರಲಿ.
ಇದನ್ನೂ ಓದಿ: ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

ಜೂನ್ 19, 2015

ಸರ್ಕಾರಕ್ಕೆ ರೈತನೊಬ್ಬನ ಡೆತ್ ನೋಟ್.

ಸರ್ಕಾರಕ್ಕೆ,
ಶ್ರೀರಂಗಪಟ್ಟಣ ತಾಲ್ಲೂಕ್ ಚೆನ್ನೇನಹಳ್ಳಿ ಗ್ರಾಮದ ಸಿ.ರಾಜೇಂದ್ರನಾದ ನಾನು ವ್ಯವಸಾಯಗಾರನಾಗಿ ಅನೇಕ ಬೆಳೆಗಳನ್ನು ಮಾಡಿದ್ದೇನೆ. ಈಗ ಹಾಲಿ ಕಬ್ಬು, ಬಾಳೆ ಮತ್ತು ತರಕಾರಿ ಬೆಳೆಗಳನ್ನು ಮಾಡಿರುತ್ತೇನೆ. ಯಾವ ಬೆಳೆಗೂ ಬೆಲೆ ಇಲ್ಲದೆ ವಿಪರೀತ ನಷ್ಟ ಹೊಂದಿರುತ್ತೇನೆ. ಆದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.
ಸಿ.ರಾಜೇಂದ್ರ
ಚೆನ್ನೇನಹಳ್ಳಿ
18/06/2015

ಜೂನ್ 18, 2015

ಅನ್ನವೆಂಬ "ಭಾಗ್ಯ"ವೂ ಮನುಜನೆಂಬ "ಆಲಸಿ"ಯೂ

annabhagya
Dr Ashok K R
ಸಿದ್ಧರಾಮಯ್ಯ ಸರಕಾರದ ಅನ್ನಭಾಗ್ಯ ಯೋಜನೆ ಮತ್ತೆ ಚರ್ಚೆಯ ವಿಷಯವಾಗಿದೆ. ಕಾರಣ ಎಸ್.ಎಲ್.ಭೈರಪ್ಪ, ಕುಂ.ವೀರಭದ್ರಪ್ಪ ಮತ್ತು ದೇಜಗೌ ಅದನ್ನು ವಿರೋಧಿಸುವ ಮಾತುಗಳನ್ನಾಡಿದ್ದಾರೆ. ಭೈರಪ್ಪನವರು ಅನ್ನಭಾಗ್ಯ ಸೋಮಾರಿಗಳನ್ನು ಹುಟ್ಟುಹಾಕುತ್ತಿದೆ, ಇದು ದೇಶ ನಾಶದ ಕೆಲಸ ಎಂದು ಗುಡುಗಿರುವ ಬಗ್ಗೆ ವರದಿಗಳು ಬಂದಿವೆ. ಇಲ್ಲಿ ಮೇಲೆ ಹೆಸರಿಸಿರುವ ಲೇಖಕರು ನಿಮಿತ್ತ ಮಾತ್ರ. ಅನ್ನಭಾಗ್ಯವೆಂಬುದು ಸೋಮಾರಿಗಳನ್ನು ತಯಾರಿಸುವ ಯೋಜನೆ ಎಂಬ ಭಾವನೆ ಅನೇಕರಲ್ಲಿದೆ. ಜನರ ದಿನವಹೀ ಮಾತುಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಸಿದ್ಧು ಸರಕಾರದ ಈ ಯೋಜನೆ ಟೀಕೆಗೆ ಗ್ರಾಸವಾಗಿದೆ. ಮತ್ತೀ ಟೀಕೆಯನ್ನು ಮಾಡುತ್ತಿರುವವರ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ ಹೆಚ್ಚಿನಂಶ ಅವರು ಮಧ್ಯಮವರ್ಗದವರೇ ಆಗಿರುತ್ತಾರೆ. ಕೆಳ ಮಧ್ಯಮವರ್ಗದಿಂದ ಉಚ್ಛ ಮಧ್ಯಮವರ್ಗದೆಡೆಗೆ ಸಾಗುತ್ತಿರುವವರು, ಮಧ್ಯಮವರ್ಗದಿಂದ ಶ್ರೀಮಂತ ವರ್ಗಕ್ಕೆ ಸಾಗುತ್ತಿರುವವರ ಸಂಖೈ ಈ ಟೀಕಾಕಾರರಲ್ಲಿ ಹೆಚ್ಚಿದೆ.. ಈ ಅನ್ನಭಾಗ್ಯ ಯೋಜನೆ ನಿಜಕ್ಕೂ ಇಷ್ಟೊಂದು ಟೀಕೆಗೆ ಅರ್ಹವೇ?

ಮೊದಲಿಗೆ ಈ ಯೋಜನೆಗೆ ಇಟ್ಟ ಹೆಸರು ಟೀಕೆಗೆ ಅರ್ಹ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಆಹಾರವಿಲ್ಲದೆ ಕಂಗೆಟ್ಟು ಪ್ರಾಣಿ / ಮನುಷ್ಯ ಹಸಿವಿನಿಂದ ಸಾಯುವುದು ಪ್ರಕೃತಿ ರೂಪಿಸಿದ ಜನಸಂಖ್ಯಾ ನಿಯಂತ್ರಣ ನಿಯಮ. ಮಾನವ ಪ್ರಕೃತಿಯಿಂದ ದೂರ ಸರಿದು, ಪ್ರಕೃತಿಯೊಡ್ಡಿದ ಸವಾಲುಗಳನ್ನು ಎದುರಿಸಲಾರಂಭಿಸಿದ. ಬಹಳಷ್ಟು ಬಾರಿ ಸೋತ, ಕೆಲವೊಮ್ಮೆ ಗೆದ್ದ. ಇದಕ್ಕಿಂತಲೂ ಹೆಚ್ಚಾಗಿ Survival of the fittest ಎಂಬ ಪ್ರಕೃತಿಯ ನಿಯಮವನ್ನು ಮೀರುವುದಕ್ಕಾಗಿ ಮಾನವೀಯತೆಯ ಮೊರೆಹೊಕ್ಕ. ಈ ಮಾನವೀಯತೆಯ ಕಾರಣದಿಂದಲೇ ಅಲ್ಲವೇ ಅನ್ಯ ಮನುಷ್ಯನೊಬ್ಬ ಹಸಿವಿನಿಂದ ಸತ್ತರೆ, ಆಹಾರ ಸಿಗದೆ ಸತ್ತರೆ ‘ಕರುಳು ಚುರುಕ್’ ಎನ್ನುವುದು? ಮನುಷ್ಯ ನಿರ್ಮಿತ ಗಡಿಗಳು ದೇಶವನ್ನು ರಚಿಸಿ, ದೇಶದೊಳಗೊಂದಷ್ಟು ರಾಜ್ಯಗಳನ್ನು ಸೃಷ್ಟಿಸಿ ಮನುಷ್ಯನ ಸ್ವೇಚ್ಛೆಗಳಿಗೆ ಕಡಿವಾಣ ವಿಧಿಸಲು ಸಮಾಜ – ಸರಕಾರಗಳೆಲ್ಲ ರಚಿತವಾದ ನಂತರ ಸರಕಾರದ ಭಾಗವಾಗಿರುವ ಮನುಷ್ಯರಿಗೂ ಒಂದಷ್ಟು ಮಾನವೀಯತೆ ಇರಬೇಕೆಂದು ನಿರೀಕ್ಷಿಸಬಹುದು. ನೆರೆಯವನೊಬ್ಬ ಹಸಿವಿನಿಂದ ಸತ್ತಂತಾದರೆ ಅದರ ಹೊಣೆ ಸರಕಾರದ್ದಾಗುತ್ತದೆ. ಪ್ರಜೆಗಳ ಅಪೌಷ್ಟಿಕತೆಯನ್ನು, ಹಸಿವನ್ನು ಹೋಗಲಾಡಿಸುವುದು ಸರಕಾರದ ಆದ್ಯ ಕರ್ತವ್ಯವಾಗುತ್ತದೆ. ಇಷ್ಟೆಲ್ಲ ಯೋಚಿಸಿ ಯೋಜನೆಗಳನ್ನು ಸರಕಾರಗಳು ರೂಪಿಸುವುದು ಅಪರೂಪ, ರಾಜಕಾರಣಿಗಳ ಮುಖ್ಯ ದೃಷ್ಟಿ ಮುಂದಿನ ಚುನಾವಣೆಯಲ್ಲಿ ಒಂದಷ್ಟು ಹೆಚ್ಚಿನ ಮತಗಳು ಬೀಳಲು ಈ ಯೋಜನೆಯಿಂದ ಸಹಾಯವಾಗುತ್ತದಾ ಎನ್ನುವುದೇ ಆಗಿದೆ. ಓಟಿಗಾಗಿ ರಾಜಕೀಯ ಮಾಡುವುದು ತಪ್ಪೆಂದು ತೋರುತ್ತದಾದರೂ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಯ ಗುರಿಯೇ ಚುನಾವಣೆಯಲ್ಲಿ ಗೆಲ್ಲುವುದಾಗಿರುವಾಗ ಅವರು ಮಾಡುವ ಪ್ರತೀ ಕೆಲಸವೂ ಮತಬ್ಯಾಂಕಿಗಾಗಿ ಅಲ್ಲವೇ? ಕೆಟ್ಟದು ಮಾಡಿಯೂ ಓಟುಗಳನ್ನು ಹೆಚ್ಚಿಸಿಕೊಳ್ಳಬಹುದು, ಒಳ್ಳೆಯದನ್ನು ಮಾಡಿಯೂ ಹೆಚ್ಚಿಸಿಕೊಳ್ಳಬಹುದು, ಆಯ್ಕೆ ಅವರವರಿಗೆ ಬಿಟ್ಟಿದ್ದು. ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ / ಅತಿ ಕಡಿಮೆ ದರಕ್ಕೆ ಅಕ್ಕಿ, ಬೇಳೆ, ಜೋಳ, ರಾಗಿ ನೀಡುವುದು ಒಪ್ಪತಕ್ಕ ವಿಚಾರವಾದರೂ ಅದಕ್ಕೆ ‘ಭಾಗ್ಯ’ ಎಂದು ಹೆಸರಿಸುವ ಅನಿವಾರ್ಯತೆ ಏನಿದೆ? ಅಪೌಷ್ಟಿಕತೆ ಹೋಗಲಾಡಿಸುವುದು ಸರಕಾರದ ಕರ್ತವ್ಯ ಮತ್ತು ಪೌಷ್ಟಿಕ ಆಹಾರವನ್ನು ಬಯಸುವುದು ಪ್ರತಿಯೊಬ್ಬ ನಾಗರೀಕನ ಹಕ್ಕು. ‘ಭಾಗ್ಯ’ ಎಂದು ಹೆಸರಿಡುವಲ್ಲಿ ವರ್ಗ ತಾರತಮ್ಯದ ದರುಶನವಾಗುತ್ತದೆ. ಸಬ್ಸಿಡಿ ಇರುವ ಗ್ಯಾಸ್ ಸಿಲಿಂಡರಿಗೆ ಅನಿಲ ಭಾಗ್ಯ ಎಂಬ ಹೆಸರಿದೆಯೇ? ಮಧ್ಯಮವರ್ಗದವರು ಪಡೆದುಕೊಳ್ಳುವ ಸೌಲತ್ತುಗಳಿಗೆ ಇಲ್ಲದ ‘ಭಾಗ್ಯ’ವೆಂಬ ನಾಮಧೇಯ ಬಡವರ ಯೋಜನೆಗಳಿಗೆ ಮಾತ್ರ ಇರುವುದ್ಯಾಕೆ? ನಮ್ಮ ಕೃಪೆಯಿಂದ ನೀವು ಬದುಕಿದ್ದೀರಿ ಎಂಬ ದಾರ್ಷ್ಟ್ಯವಿಲ್ಲದೆ ಹೋದರೆ ಈ ರೀತಿಯ ಹೆಸರಿಡಲು ಸಾಧ್ಯವೇ?

ಹೆಸರಿನಲ್ಲೇನಿದೆ ಬಿಡಿ ಎನ್ನುತ್ತೀರೇನೋ! ಸರಕಾರದ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಆ ವಿರೋಧಕ್ಕೆ ಸಮರ್ಥನೆಯಾಗಿ ಈ ಅಂಶಗಳನ್ನು ಪಟ್ಟಿ ಮಾಡುತ್ತಾರೆ.

1. ಉಚಿತವಾಗಿ ಅಕ್ಕಿ ನೀಡುವುದರಿಂದ ಜನರ (ಅರ್ಥಾತ್ ಬಡಜನರ) ಹೊಟ್ಟೆ ತುಂಬಿ ಅವರು ಕೆಲಸ ಕಾರ್ಯ ಮಾಡದೇ ಸೋಮಾರಿಗಳಾಗಿಬಿಡುತ್ತಾರೆ. 

2. ಉಚಿತ ಅಕ್ಕಿ ಪಡೆದುಕೊಂಡ ಜನರು ಅದನ್ನು ಕಾಳಸಂತೆಯಲ್ಲಿ ಕೆಜಿಗೆ ಹತ್ತು ರುಪಾಯಿಯಂತೆಯೋ ಹದಿನೈದು ರುಪಾಯಿಯಂತೆಯೋ ಮಾರಾಟ ಮಾಡಿಬಿಡುತ್ತಾರೆ. ತೆರಿಗೆ ಕಟ್ಟುವ ನಮ್ಮ ಹಣದಿಂದ ಸರಕಾರ ನೀಡುವ ಅಕ್ಕಿಯನ್ನು ಮಾರಿ ‘ಶೋಕಿ’ ಮಾಡುತ್ತಾರೆ. 

3. ಬಿಪಿಎಲ್ ಕಾರ್ಡುದಾರರೆಲ್ಲರೂ ಬಡವರಲ್ಲ, ನಕಲಿ ಕಾರ್ಡುದಾರರಿಗೂ ಉಚಿತವಾಗಿ ಅಕ್ಕಿ ತಲುಪಿ ಸರಕಾರದ ಅಂದರೆ ನಮ್ಮ (ಮಧ್ಯಮ ಮತ್ತು ಶ್ರೀಮಂತ ವರ್ಗದ) ಹಣ ಪೋಲಾಗುತ್ತಿದೆ.

4. ಸರಕಾರದ ಈ ಯೋಜನೆಗಳಿಂದ ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರೇ ಸಿಗುತ್ತಿಲ್ಲ.

5. ಸರಕಾರ ಜನರಿಗೆ ಕೆಲಸ ಕೊಡುವ ಕಾರ್ಯನೀತಿ ರೂಪಿಸಬೇಕೆ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡಬಾರದು.

ಈ ಮಧ್ಯಮವರ್ಗದವರ ಮನಸ್ಥಿತಿ ಮತ್ತವರನ್ನು ಪ್ರೇರೇಪಿಸುವವರ ಮಾತುಗಳು ಕರ್ಣಾನಂದಕರವಾಗಿರುತ್ತವೆ. ಮೇಲ್ನೋಟಕ್ಕೆ ಹೌದಲ್ಲವೇ? ಇದೇ ಸತ್ಯವಲ್ಲವೇ ಎಂಬ ಭಾವನೆ ಮೂಡಿಸುವಂತಿರುತ್ತವೆ. ಮೇಲಿನ ಐದಂಶಗಳನ್ನು ಗಮನಿಸಿದರೆ ಸತ್ಯವೆಂದೇ ತೋರುತ್ತದೆಯಲ್ಲವೇ? ಕಾಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗುತ್ತಿರುವುದು, ನಕಲಿ ಬಿಪಿಎಲ್ ಕಾರ್ಡುದಾರರ ಸಂಖೈ ಅಧಿಕವಾಗಿರುವುದು, ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಜನರು ಸಿಗದಿರುವುದು, ಸರಕಾರ ಜನರ ಕೈಗಳಿಗೆ ಕೆಲಸ ಕೊಡುವ ನೀತಿ ರೂಪಿಸಬೇಕೆನ್ನುವುದು ಸತ್ಯವೇ ಅಲ್ಲವೇ? ಆದರದು ಸಂಪೂರ್ಣ ಸತ್ಯವೇ ಎನ್ನುವುದನ್ನು ಪರಿಶೀಲಿಸುವವರ ಸಂಖೈ ತುಂಬಾನೇ ಕಡಿಮೆ.

ಅಪೌಷ್ಟಿಕತೆಯ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮತ್ತೇನೂ ಬೇಡ, ಆಸ್ಪತ್ರೆಗಳಲ್ಲಿ ಗರ್ಭಿಣಿ ಹೆಂಗಸರ ಮತ್ತು ಚಿಕ್ಕಮಕ್ಕಳ ರಕ್ತದ ಅಂಶ ಎಷ್ಟಿದೆ ಎಂದು ಗಮನಿಸಿದರೆ ಸಾಕು ಭಾರತದ ಅಪೌಷ್ಟಿಕತೆಯ ದರುಶನವಾಗುತ್ತದೆ. ಅಪೌಷ್ಟಿಕತೆಯಿಂದ ಜನರ ದುಡಿಯುವ ಶಕ್ತಿಯೂ ಕುಂದುತ್ತದೆ, ದುಡಿಮೆ ಕಡಿಮೆಯಾದಾಗ ಆದಾಯದಲ್ಲಿ ಕಡಿತವಾಗುತ್ತದೆ, ಆದಾಯ ಕಡಿಮೆಯಾದಾಗ ಸಹಜವಾಗಿ ಆಹಾರಧಾನ್ಯ ಖರೀದಿಸುವಿಕೆ ಕಡಿಮೆಯಾಗಿ ಅಪೌಷ್ಟಿಕತೆ ಹೆಚ್ಚುತ್ತದೆ. ವಿಷವರ್ತುಲವಿದು. ಮರಣ ಹೊಂದಿದ ನಿರ್ಗತಿಕರ ಶವವನ್ನು ಪೋಸ್ಟ್ ಮಾರ್ಟಮ್ಮಿಗೋ, ಕಾಲೇಜಿನ ಅನಾಟಮಿ ವಿಭಾಗಕ್ಕೋ ತಂದಾಗ ದೇಹದ ಹೊಟ್ಟೆಯ ಭಾಗವನ್ನು ಗಮನಿಸಿಯೇ ಅವರ ಹಸಿವನ್ನು ಅಂದಾಜಿಸಬಹುದು. ಹೊಟ್ಟೆ ಬೆನ್ನಿಗೆ ಅಂಟಿಕೊಂಡಿರುವುದನ್ನಲ್ಲಿ ಗಮನಿಸಬಹುದು. ತಾಂತ್ರಿಕ ಕಾರಣಗಳಿಂದ ಹಸಿವಿನಿಂದ ಮರಣ ಎಂದು ಬರೆಯಲಾಗುವುದಿಲ್ಲ ಅಷ್ಟೇ. ಇಂಥ ಅಪೌಷ್ಟಿಕತೆಯನ್ನು ನೀಗಿಸಲು ಒಂದಷ್ಟು ಅಕ್ಕಿಯಿಂದ ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಪೌಷ್ಟಿಕತೆಯನ್ನು ಕಾಪಾಡಲು ಅಕ್ಕಿಯ ಜೊತೆಜೊತೆಗೆ ಇನ್ನೂ ಅನೇಕ ದವಸಧಾನ್ಯಗಳು ಬೇಕು. ಒಂದಷ್ಟು ಅಕ್ಕಿ/ರಾಗಿ/ಗೋಧಿಯನ್ನು ಉಚಿತವಾಗಿ ನೀಡಿದಾಗ ಅಕ್ಕಿಗೆಂದು ವೆಚ್ಚ ಮಾಡುತ್ತಿದ್ದ ದುಡ್ಡಿನಲ್ಲಿ ಮತ್ತೇನಾದರೂ ಕೊಳ್ಳಬಹುದಲ್ಲವೇ? ಅಲ್ಲಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉಚಿತ ಅಕ್ಕಿಯಿಂದ ಅಪೌಷ್ಟಿಕತೆ ದೂರಾಗುತ್ತದೆ. ಅಪೌಷ್ಟಿಕತೆ ದೂರಾದಾಗ ಮಾಡುವ ಕೆಲಸಕ್ಕೂ ವೇಗ ಮತ್ತು ಶಕ್ತಿ ದೊರೆಯುತ್ತದೆ. ಅಲ್ಲಿಗೆ ಅಕ್ಕಿಯನ್ನು ಉಚಿತವಾಗೋ ಅತಿ ಕಡಿಮೆ ಬೆಲೆಗೋ ನೀಡುವುದು ಕೊನೇ ಪಕ್ಷ ಜನರ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಲ್ಲ.

ಉಚಿತ ಅಕ್ಕಿಯಿಂದ ಜನರ ಹೊಟ್ಟೆ ತುಂಬಿ ಅವರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಆರೋಪ ನಗು ಬರಿಸುತ್ತದೆ. ಯಾವಾಗ ಮನುಷ್ಯ ಗುಡ್ಡಗಾಡು ಅಲೆಯುವುದನ್ನು ಬಿಟ್ಟು ಒಂದು ಕಡೆ ನೆಲೆನಿಂತನೋ ಅವತ್ತಿನಿಂದಲೇ ಮನುಷ್ಯ ಆಲಸಿ. ಮನುಷ್ಯನನ್ನು ಸೋಮಾರಿಗಳನ್ನಾಗಿ ಮಾಡುತ್ತದೆಂದು ನಮ್ಮ ಕಾರು, ಬೈಕು, ಸೈಕಲ್ಲು, ವಾಷಿಂಗ್ ಮಿಷಿನ್ನುಗಳನ್ನು ಮನೆಯಿಂದ ಎಸೆದು ಬಿಡುತ್ತೀವಾ? ಇಲ್ಲವಲ್ಲ. ಹೊಟ್ಟೆ ತುಂಬಿದ ಮನುಷ್ಯ ಸೋಮಾರಿಯಾಗುತ್ತಾನೆ ಎಂದರೆ ಉತ್ತಮ ಸಂಬಳ ಪಡೆಯುವ ಮಧ್ಯಮವರ್ಗದವರು ವರುಷಕ್ಕೆ ಒಂದೋ ಎರಡೋ ತಿಂಗಳು ಕೆಲಸ ಮಾಡಿ ಉಳಿದ ತಿಂಗಳುಗಳೆಲ್ಲ ಸೋಮಾರಿಗಳಾಗಿ ಬಿದ್ದಿರಬೇಕಿತ್ತಲ್ಲ? ಯಾಕೆ ನಾಲ್ಕಂಕಿಯಿಂದ ಐದಂಕಿಗೆ, ಐದಂಕಿಯಿಂದ ಆರಂಕಿಯ ಸಂಬಳಕ್ಕೆ ಜಿಗಿಯಲು ಹಾತೊರೆಯುತ್ತಲೇ ಇರುತ್ತಾರೆ? ಮನುಷ್ಯನ ಹಸಿವು ಹೊಟ್ಟೆಗೆ ಮಾತ್ರ ಸಂಬಂಧಿಸಿದ್ದಲ್ಲ. ಹೊಟ್ಟೆ ತುಂಬಿದ ಮನುಷ್ಯನಿಗೆ ಮತ್ತ್ಯಾವುದರಲ್ಲೋ ಆಸಕ್ತಿ ಕೆರಳಿ ಹಸಿವುಂಟಾಗುತ್ತದೆ. ಆ ಹಸಿವು ತೀರಿಸಿಕೊಳ್ಳಲು ಕೆಲಸ ಮಾಡುತ್ತಲೇ ಇರುತ್ತಾನೆ. ಜನರ ಸೋಮಾರಿತನಕ್ಕೆ ಉದಾಹರಣೆಯಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂಬ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತಿದೆ. ಸ್ವಾಮಿ, ಈ ಅನ್ನಭಾಗ್ಯವೆಂಬ ಹಕ್ಕಿನ ಯೋಜನೆ ಜಾರಿಯಾಗುವುದಕ್ಕೆ ಮುಂಚಿನಿಂದಲೇ ಕೃಷಿ ಕೆಲಸಕ್ಕೆ ಕಾರ್ಮಿಕರ ಅಭಾವವಿದೆ. ಅದಕ್ಕೆ ಕೃಷಿಯೆಂಬುದು ಆಕರ್ಷಕ, ಲಾಭ ತರುವ ವೃತ್ತಿಯಾಗಿ ಉಳಿದಿಲ್ಲ ಎಂಬುದು ಎಷ್ಟು ಸತ್ಯವೋ ಬಿಸಿಲು ಮಳೆ ಚಳಿ ಗಾಳಿಯಲ್ಲಿ ದುಡಿಯುವುದಕ್ಕಿಂತ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲೋ ಮತ್ತೊಂದು ಕಾರ್ಖಾನೆಯಲ್ಲೋ ಸೂರಿನಡಿಯಲ್ಲಿ ದುಡಿಯುವುದು ಉತ್ತಮವೆಂಬ ಭಾವನೆಯೂ ಕಾರಣ. ಓದಿ ಕೆಲಸ ಗಿಟ್ಟಿಸಿಕೊಂಡು ತಣ್ಣಗೆ ಫ್ಯಾನಿನಡಿಯಲ್ಲೋ ಎಸಿಯ ಕೆಳಗೋ ದುಡಿಯುವುದು ನಮ್ಮಲ್ಲನೇಕರ ಆಯ್ಕೆಯೂ ಆಗಿತ್ತಲ್ಲವೇ? ಕೂಲಿ ನಾಲಿ ಮಾಡಿಕೊಂಡವರಿಗೂ ಅದೇ ಭಾವನೆ ಬಂದರದು ತಪ್ಪೇ? ಯೋಗ, ಜಿಮ್ಮು, ಸೈಕ್ಲಿಂಗೂ, ವಾಕಿಂಗೂ, ರನ್ನಿಂಗೂ ಅಂಥ ಮಾಡ್ಕೊಂಡು ಬೊಜ್ಜು ಇಳಿಸಲು ಬಡಿದಾಡುತ್ತಿರುವ ನಮಗೆ ಸೋಮಾರಿತನದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ?

ಉಚಿತ ಅಕ್ಕಿ ಪಡೆದುಕೊಳ್ಳುತ್ತಿರುವವರು ಅದನ್ನು ಮಾರಿಕೊಳ್ಳುತ್ತಿರುವುದು ಮತ್ತು ನಕಲಿ ಬಿ.ಪಿ.ಎಲ್ ಕಾರ್ಡುದಾರರ ಸಂಖೈ ಹೆಚ್ಚಿರುವುದು ಖಂಡಿತವಾಗಿಯೂ ಸತ್ಯ. ಸರಕಾರದ ಯಾವುದೇ ಜನಪರ ಯೋಜನೆ ಕಡೇಪಕ್ಷ ಐವತ್ತರಷ್ಟು ನಿಜವಾದ ಫಲಾನುಭವಿಗಳಿಗೆ ದಕ್ಕಿದರೆ ಯಶಸ್ಸು ಕಂಡಂತೆ. ಅಕ್ಕಿ ಮಾರಿಕೊಳ್ಳುತ್ತಿರುವವರ ಸಂಖೈ ಇರುವಂತೆ ಅದನ್ನು ಉಪಯೋಗಿಸುವವರ ಸಂಖೈಯೂ ಇದೆಯಲ್ಲವೇ? ಈ ರೀತಿ ಮಾರಾಟಗೊಂಡ ಅಕ್ಕಿ ಕೊನೆಗೆ ಸೇರುವುದು ಕೂಡ ಅದೇ ಮಧ್ಯಮವರ್ಗದವರ ಮನೆಗೆ! ಅಕ್ಕಿ ಮಾರುವವರನ್ನು ಮತ್ತದನ್ನು ಕೊಳ್ಳುವವರಿಗೆ ದಂಡ ವಿಧಿಸುವ ಹಾಗಾದರೆ? ಇನ್ನು ಬಿ.ಪಿ.ಎಲ್ ಕಾರ್ಡುದಾರರ ಪಟ್ಟಿಯಲ್ಲಿ ಮಧ್ಯಮವರ್ಗದವರು, ಸಣ್ಣ ರೈತರು, ದೊಡ್ಡ ರೈತರು ಎಲ್ಲರ ಹೆಸರೂ ಸೇರಿಕೊಂಡಿದೆ. ನಕಲಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಿರಂತರವಾಗಿರಬೇಕು. ಆಗ ಯೋಜನೆ ಮತ್ತಷ್ಟು ಫಲಕಾರಿಯಾಗಿ ಅರ್ಹ ಫಲಾನುಭಾವಿಗಳಿಗೆ ಉಪಯೋಗವಾಗುತ್ತದೆ.

ಜನರ ಪೌಷ್ಟಿಕತೆಯನ್ನು ದೂರ ಮಾಡುವಲ್ಲಿ ಇಂಥಹ ಕೆಲಸಗಳನ್ನು ರೂಪಿಸುವ ಸರಕಾರಗಳು ಜೊತೆಜೊತೆಗೇ ದುಡಿವ ಕೈಗಳಿಗೆ ಕೆಲಸವನ್ನೆಚ್ಚಿಸುವ ಹಾದಿಯನ್ನೂ ಹುಡುಕಬೇಕು. ಇಂತಹ ಯೋಜನೆಗಳು ಎಷ್ಟು ದಿನ – ತಿಂಗಳು – ವರುಷಗಳವರೆಗೆ ಮುಂದುವರೆಯಬೇಕು ಎಂಬ ಪ್ರಶ್ನೆಗೆ ಉತ್ತರ ದೊರಕುವುದು ಕಷ್ಟ. ಜನಸಂಖ್ಯೆ ಹೆಚ್ಚಿದೆ ನಮ್ಮಲ್ಲಿ, ಇರುವ ಜಾಗ ಕಡಿಮೆ; ಇಷ್ಟೊಂದು ದೊಡ್ಡ ಜನಸಂಖೈಯ ದೇಶದಲ್ಲಿ ಯಾರೊಬ್ಬರಲ್ಲೂ ಅಪೌಷ್ಟಿಕತೆ ಇರದ ದಿನ ಬರುವುದು ಅನೇಕನೇಕ ದಶಕಗಳ ನಂತರವೇ. ಅಲ್ಲಿಯವರೆಗೂ ಇಂತಹ ಯೋಜನೆಗಳಿರಲೇಬೇಕು – ಜನರ ಆರೋಗ್ಯಕ್ಕೆ, ಗರ್ಭಿಣಿಯ ಆರೋಗ್ಯಕ್ಕೆ, ಹುಟ್ಟುವ ಕೂಸುಗಳ ಆರೋಗ್ಯಕ್ಕೆ. ಸಮಾಜ ನಮಗೊಂದು ಬದುಕು ರೂಪಿಸಿಕೊಟ್ಟ ಕಾರಣಕ್ಕಾಗಿಯೇ ಅಲ್ಲವೇ ನಾವು ತೆರಿಗೆ ಕಟ್ಟುತ್ತಿರುವುದು? ಆ ತೆರಿಗೆ ಹಣದಲ್ಲಿ ದೊಡ್ಡ ಪಾಲು ಪರೋಕ್ಷವಾಗಿ ನಮ್ಮ ಅನುಕೂಲಕ್ಕೇ ಖರ್ಚಾಗುತ್ತದೆ. ಆ ತೆರಿಗೆ ಹಣದ ಒಂದು ಚಿಕ್ಕ ಪಾಲಿನಿಂದ ಮತ್ತೊಂದಷ್ಟು ಮಗದೊಂದಷ್ಟು ಜನರ ಏಳ್ಗೆಯಾಗಿ ಅವರೂ ತೆರಿಗೆ ಕಟ್ಟುವಂತಾಗಲೀ ಎಂದು ಆಶಿಸಬೇಕು. 

‘ಭಾಗ್ಯ’ವೆಂಬ ಹಣೆಪಟ್ಟಿಯಿಲ್ಲದೆ ಅನೇಕ ಸೌಲತ್ತುಗಳನ್ನನುಭವಿಸಿ ಸುಖಿಸುತ್ತಾ ಉದ್ದಿಮೆದಾರರಿಗೆ ನೀಡುವ ಭಾರೀ ಭಾರೀ ರಿಯಾಯಿತಿಗಳನ್ನು ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಾ ಅಕ್ಕಿ ನೀಡುವ ಕ್ರಿಯೆಯನ್ನು ವಿರೋಧಿಸುವುದನ್ನು ಮಾನವತಾ ವಿರೋಧಿ ನಿಲುವೆಂದೇ ಪರಿಗಣಿಸಬೇಕಾಗುತ್ತದೆ.

ಜೂನ್ 6, 2015

‘ಮ್ಯಾಗಿ’ ಮೂಡಿಸಿದ ಎಚ್ಚರ ‘ಗಣೇಶ’ನಿಂದ ಮರೆಯಾಗಿಬಿಡುವುದೇ?

ಮೂರು ದಿನಗಳಿಂದ ಮಾಧ್ಯಮಗಳಲ್ಲೆಲ್ಲಾ ಮ್ಯಾಗಿಯದ್ದೇ ಸುದ್ದಿ. ಎರಡಲ್ಲದಿದ್ದರೂ ಐದು ನಿಮಿಷಕ್ಕೆ ಪಟಾಫಟ್ ಎಂದು ತಯಾರಾಗಿ ಅಡುಗೆ ಮಾಡಿಕೊಳ್ಳಬಯಸುವ ಹಾಸ್ಟೆಲ್ ವಾಸಿಗಳಿಗೆ, ಮಕ್ಕಳಿಗೆ, ದೊಡ್ಡೋರಿಗೆಲ್ಲ ಸಾಥ್ ಕೊಟ್ಟ, ರುಚಿ ಕೊಟ್ಟ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಇರುವುದು ಬೆಳಕಿಗೆ ಬರುತ್ತಿದ್ದಂತೆ ಎಲ್ಲರೂ ಅಂಡು ಸುಟ್ಟ ಬೆಕ್ಕಿನ ಥರ ವಿಲವಿಲ ಒದ್ದಾಡುತ್ತಿದ್ದಾರೆ. ನೂಡಲ್ಸ್ ಎಂದರೆ ಮ್ಯಾಗಿ ಎಂಬಷ್ಟರ ಮಟ್ಟಿಗೆ ಬೆಳೆದ, ಬಹುತೇಕರ ಮೆಚ್ಚುಗೆಗೆ ಪಾತ್ರವಾದ ಮ್ಯಾಗಿ ಹೀಗೆ ನಮಗೆ ವಿಷವುಣ್ಣಿಸಿದೆ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಮ್ಯಾಗಿಯಲ್ಲಿ ವಿಷವಿದೆ ಎಂಬ ಅಂಶ ನಮ್ಮನ್ನು ಇಷ್ಟೊಂದು ವಿಹ್ವಲಗೊಳಿಸಬೇಕೆ? 

ಮ್ಯಾಗಿಯಲ್ಲಿ ಪತ್ತೆಯಾದದ್ದೇನು?
ಮ್ಯಾಗಿಯಲ್ಲಿ ದೇಹಕ್ಕೆ ಹಾನಿಯುಂಟುಮಾಡಬಲ್ಲಂಥಹ ಎರಡು ಪ್ರಮುಖ ಅಂಶಗಳು ಪತ್ತೆಯಾಗಿವೆ. ಒಂದು ಸೀಸ(lead), ಮತ್ತೊಂದು ಮೊನೋಸೋಡಿಯಮ್ ಗ್ಲುಟಾಮೇಟ್. ಸೀಸ ವಿಷಕಾರಿಯೆಂಬುದು ಸಾಬೀತಾಗಿರುವಂತದ್ದು. ದೇಹದೊಳಗೆ ಸೀಸ ಸಣ್ಣ ಪ್ರಮಾಣದಲ್ಲಿ ಸೇರುತ್ತಿದ್ದರೂ ಸಾಕು, ದೀರ್ಘಾವಧಿಯಲ್ಲಿ ತನ್ನ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಕಾರಣ ಸೀಸ ಒಮ್ಮೆ ದೇಹದೊಳಗೆ ಸೇರಿಬಿಟ್ಟರೆ ನೈಸರ್ಗಿಕವಾಗಿ ಹೊರಹಾಕುವ ಕೌಶಲ್ಯ ನಮ್ಮ ದೇಹಕ್ಕಿಲ್ಲ. ದೇಹದ ಬೆಳವಣಿಗೆಗೆ ಕ್ಯಾಲ್ಶಿಯಂ ಅತ್ಯಗತ್ಯ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ದೇಹಕ್ಕೆ ಸೀಸ ಸೇರಿದಾಗ, ನಮ್ಮಲ್ಲಿರುವ ಜೀವಕೋಶಗಳು ಕ್ಯಾಲ್ಶಿಯಂ ಬದಲಿಗೆ ಸೀಸವನ್ನು ಉಪಯೋಗಿಸಿಕೊಳ್ಳಲಾರಂಭಿಸುತ್ತದೆ. ಇದು ಅಸಹಜ ಪ್ರಕ್ರಿಯೆ, ಉಪಯೋಗಿಸಿಕೊಂಡ ಸೀಸದಿಂದ ನನಗೇ ತೊಂದರೆ ಎಂದು ಜೀವಕೋಶಕ್ಕೆ ಅರಿವಾಗುವ ವೇಳೆಗೆ ಅಪಾಯ ಸಂಭವಿಸಿಬಿಟ್ಟಿರುತ್ತದೆ. ಬೆಳೆಯುತ್ತಿರುವ ಜೀವಕೋಶಗಳ ಮೇಲೆ ಪರಿಣಾಮ ಹೆಚ್ಚಾಗಿರುವ ಕಾರಣ ಆರು ವರುಷದ ಒಳಗಿನ ಮಕ್ಕಳು ಸೀಸದ ದುಷ್ಪರಿಣಾಮಗಳಿಂದ ಪೀಡಿತರಾಗುತ್ತಾರೆ. ಮಾಂಸಖಂಡ, ಮೂಳೆ, ಮಿದುಳು, ಮೂತ್ರಪಿಂಡ, ಜಠರ – ಹೀಗೆ ಬೆಳೆಯುತ್ತಿರುವ ಎಲ್ಲಾ ಅಂಗಾಂಗಗಳೂ ಸೀಸದಿಂದ ಹಾನಿಗೊಳಗಾಗುತ್ತವೆ. ಇನ್ನು ಜೀವಕೋಶಗಳ ಬೆಳವಣಿಗೆ ಬಹುತೇಕ ನಿಂತುಹೋಗಿರುವ ದೊಡ್ಡವರಲ್ಲೂ ಸೀಸದಿಂದ ದುಷ್ಪರಿಣಾಮಗಳಿವೆ. ಮುಖ್ಯವಾಗಿ ಸಂತಾನಹೀನತೆ, ಮರೆಗುಳಿತನ, ಅಧಿಕ ರಕ್ತದೊತ್ತಡ, ಮಾಂಸಖಂಡ ಮತ್ತು ಕೀಲುಗಳ ನೋವು. 

ಇನ್ನು ಮ್ಯಾಗಿಯವರು ಲೇಬಲ್ಲಿನ ಮೇಲೆ No MSG ಎಂದು ಬರೆದುಕೊಂಡಿದ್ದರು. ಆದರೆ ನೂಡಲ್ಸಿನಲ್ಲಿ MSG ಅಂದರೆ ಮೊನೋಸೋಡಿಯಮ್ ಗ್ಲುಟಾಮೇಟ್ ಪತ್ತೆಯಾಗಿತ್ತು. ಇದೊಂದೇ ಕಾರಣ ಸಾಕು ಮ್ಯಾಗಿಯನ್ನು ಸಂಪೂರ್ಣವಾಗಿ ನಿಷೇಧಿಸಿಬಿಡಲು. ಅಂದಹಾಗೆ ಈ ಮೊನೋಸೋಡಿಯಮ್ ಗ್ಲುಟಾಮೇಟ್ ಹಾನಿಕಾರಕವಾ ಅಲ್ಲವಾ ಎಂಬುದರ ಬಗ್ಗೆಯೇ ಗೊಂದಲವಿದೆ. ಆಹಾರಕ್ಕೆ ಇದನ್ನು ಹಾಕುವುದಕ್ಕೆ ಪ್ರಮುಖ ಕಾರಣ, ರುಚಿ ಗ್ರಹಿಸುವ ನಾಲಗೆಯಲ್ಲಿರುವ ಜೀವಕೋಶಗಳನ್ನು ಉದ್ರೇಕಿಸುವ ಶಕ್ತಿ ಈ ಎಂ.ಎಸ್.ಜಿಗೆ ಇದೆ. ರುಚಿ ಉದ್ರೇಕಗೊಳ್ಳುವ ಕಾರಣ ಆ ಆಹಾರವನ್ನು ಪದೇ ಪದೇ ತಿನ್ನುವಂತಾಗುತ್ತದೆ. ಕಂಪನಿಗಳ ವ್ಯಾಪಾರ ವೃದ್ಧಿಯಾಗುತ್ತದೆ! ಇಂಥದ್ದೇ ದುಷ್ಪರಿಣಾಮಗಳನ್ನು ಎಂ.ಎಸ್.ಜಿ ಉಂಟುಮಾಡುತ್ತದೆ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲದ ಕಾರಣ ಎಂ.ಎಸ್.ಜಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ. ತಲೆನೋವು, ಎದೆಬಡಿತದ ಹೆಚ್ಚಳ, ಪಾರ್ಕಿನ್ಸನ್ ಖಾಯಿಲೆ, ಮರೆವಿನ ಆಲ್ಜೀಮರ್ಸ್ ಖಾಯಿಲೆಗಳಿಗೆಲ್ಲ ಈ ಎಂ.ಎಸ್.ಜಿ ಕಾರಣವಾಗುತ್ತದೆ ಎಂದನೇಕ ಅಧ್ಯಯನಗಳು ಹೇಳುತ್ತವಾದರೂ ಇದರಿಂದಲೇ ಆ ಖಾಯಿಲೆ ಬಂತು ಎಂದು ಹೇಳುವಷ್ಟು ನಿಖರ ದಾಖಲೆಗಳಿಲ್ಲ. 

ಭಾರತದಲ್ಲಿ ಸೀಸ ಮತ್ತು ಮೊನೋಸೋಡಿಯಮ್ ಗ್ಲುಟಾಮೇಟ್ ಮ್ಯಾಗಿಯಲ್ಲಷ್ಟೇ ಇದೆ ಎಂದುಕೊಳ್ಳುವುದು ಮೂರ್ಖತನ. ಸೀಸದ ಅಂಶ ಆಹಾರದಿಂದ ಹಿಡಿದು ಗೊಂಬೆಗಳವರೆಗೆ, ಮನೆಗೆ ಬಳಿಯುವ ಬಣ್ಣದವರೆಗೆ ಇದೆ. ಸಿದ್ಧ ಆಹಾರದಲ್ಲಷ್ಟೇ ಸೀಸವಿರಬಹುದು, ತರಕಾರಿ ತಿನ್ಕೊಂಡು ಖುಷಿಯಾಗಿರ್ತೀನಿ ಎಂದು ಬೆನ್ನುತಟ್ಟಿಕೊಳ್ಳಬೇಡಿ. ಮನೆ ಹತ್ತಿರದ ತರಕಾರಿ ಅಂಗಡಿಯಿಂದಲೇ (ಅದರಲ್ಲೂ ನಗರಗಳಲ್ಲಿ) ಒಂದಷ್ಟು ಹಸಿ ಬಟಾಣಿ ತಂದು ನೀರಿನಲ್ಲಿ ನೆನೆಸಿಡಿ. ನಿಧಾನಕ್ಕೆ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಮತ್ತಾ ಬಣ್ಣದಲ್ಲಿ ಸೀಸದ ಅಂಶವಿರುತ್ತದೆ! ಹಸಿ ಬಟಾಣಿ ಒಂದು ಉದಾಹರಣೆಯಷ್ಟೇ, ಮಾರುಕಟ್ಟೆಯಲ್ಲಿ ಫಳಫಳ ಹೊಳೆಯುವ ಎಲ್ಲವೂ ವಿಷಕಾರಿಯಾಗಿರುತ್ತದೆ. ಸೀಸವಲ್ಲದಿದ್ದರೆ ಮತ್ತೊಂದು ವಿಷದಿಂದ. ಹೊಳೆಯುವ ವಸ್ತುಗಳೆಡೆಗೇ ಆಕರ್ಷಿತರಾಗೋ ಗ್ರಾಹಕರ ತಪ್ಪಾ? ಗ್ರಾಹಕರ ದೌರ್ಬಲ್ಯವನ್ನು ತನ್ನ ಲಾಭವನ್ನಾಗಿ ಪರಿವರ್ತಿಸಿಕೊಂಡ ವ್ಯಾಪಾರಿಯ ತಪ್ಪಾ? ಇನ್ನು ಮೊನೋಸೋಡಿಯಮ್ ಗ್ಲುಟಾಮೇಟ್ ಬಗ್ಗೆ ಚರ್ಚೆಯೇ ಬೇಡ; ಮನೆಯ ಹೊರಗೆ ಬಾಯಿ ಚಪ್ಪರಿಸಿಕೊಂಡು ತಿನ್ನುವ ಬಹುತೇಕ ಎಲ್ಲಾ ತಿಂಡಿಗಳಲ್ಲೂ ಅದು ಇದ್ದೇ ಇರುತ್ತದೆ!
ಭಾರತಕ್ಕೆ ಕೆ.ಎಫ್.ಸಿ, ಮೆಕ್ ಡೊನಾಲ್ಡ್ ನಂತಹ ಬಹುರಾಷ್ಟ್ರೀಯ ಕಂಪನಿಗಳ ಆಗಮನ ಶುರುವಾದಾಗ ಅದನ್ನು ವಿರೋಧಿಸಿದ ರೈತ ಸಂಘದವರು, ಎಡಪಂಥೀಯ ವಿಚಾರಧಾರೆಯವರೆಲ್ಲ ಅಪಹಾಸ್ಯಕ್ಕೀಡಾಗಿದ್ದರು. ‘ಅಭಿವೃದ್ಧಿ’ ಬೇಡ್ವಲ್ರೀ ಇವರಿಗೆ ಎಂದು ಗೇಲಿ ಮಾಡಿದ್ದರು. ಜಾಗತೀಕರಣದ ಪರಿಣಾಮವನ್ನು ತಡೆಯಲು ಯಾರಿಗೂ ಸಾಧ್ಯವಾಗದ ಕಾರಣ ಕೆ.ಎಫ್.ಸಿಯ ಜೊತೆಜೊತೆಗೆ ಹತ್ತಲವು ದಿಡೀರ್ ಆಹಾರ ತಯಾರಕರು ದಾಳಿ ಮಾಡಿದರು. ಅವುಗಳ ಜೊತೆಗೆ ಓಡೋಡಿ ಬಂದದ್ದು ಮ್ಯಾಗಿಯಂಥ ಬಾಯಿ ಚಪ್ಪರಿಸಿಯೇ ತಿನ್ನಬೇಕಾದಂತಹ ಸಿದ್ಧಾಹಾರ ಕಂಪನಿಗಳು. ಸಿದ್ಧ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬರಿವು ಇದ್ದರೂ ನಾವೆಲ್ಲ ಅದನ್ನು ತಿನ್ನುತ್ತಲೇ ಇದ್ದೆವು. ಈಗ ಇದ್ದಕ್ಕಿದ್ದಂತೆ ಜ್ಞಾನೋದಯವಾದಂತೆ ಮ್ಯಾಗಿಯನ್ನು ಮಾಡುವುದನ್ನೇ ಬಿಟ್ಟುಬಿಡುತ್ತೇವೆ ಎಂದು ಬಡಬಡಿಸುತ್ತಿದ್ದೇವೆ. ಕೋಕೋ ಕೋಲಾ, ಪೆಪ್ಸಿಯಂತಹ ಪಾನೀಯಗಳು ವಿಷಕ್ಕೆ ಸಮ ಎಂದು ಅಧ್ಯಯನಗಳು ಸಾರಿ ಹೇಳಿದ ಮೇಲೆ ಅದನ್ನು ಕುಡಿಯುವುದನ್ನು ಬಿಟ್ಟುಬಿಟ್ಟರಾ? ಕೆಟ್ಟ ವಸ್ತುಗಳು ಬಹುಬೇಗ ಪ್ರಿಯವಾಗಿಬಿಡುವುದು ಸುಳ್ಳಲ್ಲ. ವೃತ್ತಿಯೊಂದು ಉದ್ಯಮವಾಗಿ ಲಾಭ ನಷ್ಟವೇ ಪ್ರಮುಖವಾಗಿಬಿಟ್ಟಾಗ ಲಾಬಿ ಪ್ರಾರಂಭವಾಗುತ್ತದೆ, ಲಾಭಕ್ಕಾಗಿ ತಟ್ಟೆಗೂ ವಿಷವಿಕ್ಕುವ ಪ್ರಕ್ರಿಯೆ ವೇಗ ಪಡೆದುಕೊಳ್ಳುತ್ತದೆ. ಭೂಮಿಯಲ್ಲಿ ಬೀಜವಾಕುವ ಸಮಯದಿಂದಲೇ ವಿಷದ ತಯಾರಿ ನಡೆಯುತ್ತಿದೆ ಎಂಬುದು ವಿಪರ್ಯಾಸ. ಮ್ಯಾಗಿಯನ್ನು ವಿರೋಧಿಸುವ ಸಮೂಹ ಸನ್ನಿ ಈಗ ಕಾಣುತ್ತಿದೆ. ಇದು ಎಷ್ಟು ದಿನಗಳವರೆಗೆ ಇರಬಹುದು? ಒಂದು ತಿಂಗಳು, ಎರಡು ತಿಂಗಳು? ಕೊನೇಪಕ್ಷ ಗಣೇಶನ ಹಬ್ಬದವರೆಗೆ? ಗಣೇಶನ ಹಬ್ಬ ಬಂತೆಂದರೆ ವಿಷವನ್ನೆಲ್ಲ ಮರೆತು ಸೀಸ ತುಂಬಿದ ಬಣ್ಣದಿಂದ ಅಲಂಕೃತನಾದ ಗಣಪತಿಯನ್ನು ಕಣ್ಣಲ್ಲಿ ತುಂಬಿಕೊಂಡು ಕೊನೆಗದನ್ನು ಕೆರೆಗೆ, ನಾಲೆಗೆ ಬಿಟ್ಟು ಕೃತಾರ್ಥವಾಗುವ ಕೆಲಸವನ್ನು ಮ್ಯಾಗಿ ಮೂಡಿಸಿದ ಎಚ್ಚರಿಕೆ ತಡೆಯಬಲ್ಲದೇ? ನಿಮಗಿರುವ ಅನುಮಾನೇ ನನಗೂ ಇದೆ.
ವಿಷಯ ಸಹಾಯ: WHO, Kingcounty, Mercola, Eatingwell

ಜೂನ್ 2, 2015

ಯೋಗೇಶ್ವರನೆಂಬ ಭಗೀರಥನೂ ಚನ್ನಪಟ್ಟಣದ ಕೆರೆಗಳು!

malur lake, channapatna
ಮಳೂರು ಕೆರೆಗೆ ನೀರು ಹರಿಸುತ್ತಿರುವ ದೃಶ್ಯ
ಸಿ.ಪಿ. ಯೋಗೇಶ್ವರ್ ಮೊದಲು ಖ್ಯಾತಿಗೆ ಬಂದಿದ್ದು ಸಿನಿಮಾ ತಾರೆಯಾಗಿ. ಉತ್ತರ ಧ್ರುವದಿಂ ದಕ್ಷಿಣ ದ್ರುವಕೂ, ಸೈನಿಕ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಅದ್ಭುತ ನಟರೇನಲ್ಲ! ನಂತರ ರಾಜಕಾರಣಿಯಾಗಿ ಶಾಸಕರಾಗಿ ಚನ್ನಪಟ್ಟಣದಿಂದ ಆಯ್ಕೆಯಾಗುತ್ತಲೇ ಇದ್ದಾರೆ. ಬಹುತೇಕ ಕರ್ನಾಟಕದ ಎಲ್ಲಾ ಪಕ್ಷಗಳಿಂದಲೂ ಸ್ಪರ್ಧಿಸಿಬಿಟ್ಟಿದ್ದಾರೆ! ಕರ್ನಾಟಕದಲ್ಲಿ ಅಸ್ತಿತ್ವದಲ್ಲೇ ಇಲ್ಲದಿದ್ದ ಸಮಾಜವಾದಿ ಪಕ್ಷದ ಸೈಕಲ್ಲನ್ನೂ ಒಮ್ಮೆ ಏರಿ ಇಳಿದಿದ್ದಾರೆ! ಮತ್ತು ಯಾವ ಪಕ್ಷದಲ್ಲಿ ನಿಂತರೂ ಗೆಲುವು ಸಾಧಿಸಿದ್ದಾರೆ, ಸಮಾಜವಾದಿ ಪಕ್ಷದಿಂದ ನಿಂತಾಗಲೂ ಗೆಲುವು ಅವರದ್ದೇ! ಭ್ರಷ್ಟಾತೀತ ವ್ಯಕ್ತಿಯಾ ಎಂದು ನೋಡಿದರೆ ಅದೂ ಇಲ್ಲ. ಸಿನಿಮಾಗಳಿಗಿಂತ ಹೆಚ್ಚು 'ಖ್ಯಾತಿ'ಯನ್ನು ಯೋಗೇಶ್ವರ್ ಪಡೆದದ್ದು ಮೆಗಾ ಸಿಟಿಯೆಂಬ ರಿಯಲ್ ಎಸ್ಟೇಟ್ ವಂಚನೆಯ ಮುಖಾಂತರ. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ ಮೆಗಾಸಿಟಿಯ ದಗಾಕೋರ ಎಂದೇ ಯೋಗೇಶ್ವರ್ ಖ್ಯಾತ! ವರುಷವಿಡೀ ಪತ್ರಿಕೆ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳದೆಯೇ, ಇಷ್ಟೆಲ್ಲ ಭ್ರಷ್ಟಾಚಾರದ ಆರೋಪ ಹೊತ್ತ ಯೋಗೇಶ್ವರ್, ಪಕ್ಷದಿಂದ ಪಕ್ಷಕ್ಕೆ ಚಂಗನೆ ಹಾರುತ್ತಿದ್ದರೂ ಗೆಲುವು ಕಾಣುವುದು ಹಿಂದಿನ ಕಾರಣವೇನು? 'ನಮ್ ಜನ ಸರೀ ಇಲ್ಲ ಕಣ್ರೀ. ಇಂಥೋರ್ನೆಲ್ಲ ಗೆಲ್ಲುಸ್ತಾರೆ ನೋಡಿ' ಎಂದು ತೀರ್ಪು ಕೊಡುವ ಮೊದಲು ಚನ್ನಪಟ್ಟಣವನ್ನು ಬೇಸಿಗೆಯಲ್ಲೊಮ್ಮೆ ಸುತ್ತಬೇಕು. ಯೋಗೇಶ್ವರ್ ಗೆಲುವಿನ ರಹಸ್ಯ ತಿಳಿಯುತ್ತದೆ.
cp yogeshwar
ಸಿ.ಪಿ.ಯೋಗೇಶ್ವರ್
ಉತ್ತಮ ರಸ್ತೆ, ಅತ್ಯುತ್ತಮ ಯೋಜನೆ, ಅದೂ ಇದೂ ಎಲ್ಲವೂ ಸರಿಯೇ, ಆದರೆ ಇವೆಲ್ಲಕ್ಕಿಂತ ಮುಖ್ಯವಾದದ್ದು ಮೂಲಭೂತವಾದ ಅಂಶಗೊಳಲ್ಲೊಂದಾದ ನೀರು. ಕೈಗಾರಿಕೆಗಳ ಹೆಚ್ಚಳದ ಮಧ್ಯೆಯೂ ಕೃಷಿ ಮುಖ್ಯವಾಗಿರುವ ದೇಶವಾದ್ದರಿಂದ ನೀರಿನ ಮಹತ್ವ ಮತ್ತಷ್ಟು ಹೆಚ್ಚು. ಕಡು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾದಾಗ ಕೆರೆಗಳೆಲ್ಲ ಬತ್ತಿ ಹೋದಾಗ ಅದನ್ನು ತುಂಬಿಸುವ ವ್ಯಕ್ತಿಯನ್ನು ಭಗೀರಥನೆಂದು ತಿಳಿಯುವುದು ತಪ್ಪಲ್ಲ. ಯೋಗೇಶ್ವರ್ ಗೆಲುವಿನ ರಹಸ್ಯವೇ ಇದು. ಬೇಸಿಗೆಯ ಪ್ರಾರಂಭವಾಗುತ್ತಿದ್ದಂತೆ ಹತ್ತಿರದ ನದಿಗಳಿಂದ ಕೆರೆಗಳಿಗೆ ನೂರಿಪ್ಪತ್ತು ಹೆಚ್.ಪಿಯ ಮೋಟಾರಿನ ಸಹಾಯದೊಂದಿಗೆ ನೀರು ತುಂಬಿಸಲಾಗುತ್ತದೆ. ಊರಿನವರಿಗೆ ಕುಡಿಯುವ ನೀರು ದೊರೆಯುತ್ತದೆ, ಬೇಸಿಗೆ ಕೃಷಿಗೂ ಸಹಾಯವಾಗುತ್ತದೆ ಮತ್ತು ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗುತ್ತದೆ. 
kanva reservoir
ಕಣ್ವಾ ಜಲಾಶಯಕ್ಕೆ ನೀರು ಹರಿದಾಗ
ಕೆರೆಗಳನ್ನೇ ತುಂಬಿಸುತ್ತಿದ್ದವರು ಈ ಸಲ ಮತ್ತಷ್ಟು ಆಸಕ್ತಿ ತೋರಿ ಬಳಲಿ ಬರಡಾಗಿ ಬೆಂಡಾಗಿ ಹೋಗಿದ್ದ ಕಣ್ವ ಜಲಾಶಯವನ್ನೂ ತುಂಬಿಸಲು ಶ್ರಮಿಸಿದ್ದಾರೆ! ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಕಣ್ವಾ ಜಲಾಶಯವನ್ನು ತುಂಬಿಸಿದ್ದಾರೆ. ನೈಸರ್ಗಿಕವಾಗಿ ಬರಡಾಗುವ ನೀರಿನ ಮೂಲವನ್ನು ಕೃತಕವಾಗಿ ತುಂಬಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಮನುಷ್ಯ ಮಾಡುವ ಬಹುತೇಕ ಯಾವ ಕೆಲಸವೂ ಪರಿಸರಕ್ಕೆ ಪ್ರಕೃತಿಗೆ ಪೂರಕವಾಗಿರುವುದಿಲ್ಲ. ಕೃತಕವಾಗಿ ನೀರು ತುಂಬಿಸುವ ಪ್ರಕ್ರಿಯೆ ಕೂಡ ಪ್ರಕೃತಿಗೆ ತನ್ನದೇ ರೀತಿಯಲ್ಲಿ ಹಾನಿಯುಂಟುಮಾಡುತ್ತದೆ. ಇತರೆ ಹಾನಿಕಾರಕ ಕೆಲಸಗಳಿಗೆ ಹೋಲಿಸಿದರೆ ಇದು ಇದ್ದುದರಲ್ಲಿ ವಾಸಿ! ನೀರು ತುಂಬಿಸುವುದಕ್ಕೆ ತೋರುವ ಆಸಕ್ತಿಯನ್ನು ವರುಷದ ಇನ್ನಿತರೆ ತಿಂಗಳುಗಳಲ್ಲಿ ಅನ್ಯ ಕೆಲಸಗಳಿಗೂ ಯೋಗೇಶ್ವರ್ ತೋರಿಸಲಿ ಎನ್ನುವುದು ಜನರ ಆಶಯ.
kanva reservoir
ನೀರ್ದುಂಬಿದ ಕಣ್ವ

ಏಪ್ರಿ 11, 2015

ಬಿ.ಬಿ.ಎಂ.ಪಿ ವಿಭಜನೆಗೆ ಸುಗ್ರೀವಾಜ್ಞೆ ಪ್ರಹಸನ!

bbmp division
ಹೂವಿನಹಿಪ್ಪರಗಿಯ ಕಾಂಗ್ರೆಸ್ ಶಾಸಕ ಎ.ಎಸ್.ನಡಹಳ್ಳಿ ತಮ್ಮದೇ ಕಾಂಗ್ರೆಸ್ ಸರಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಉತ್ತರ ಕರ್ನಾಟಕಕ್ಕೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಪದೇ ಪದೇ ಮಾಡುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಿರುವ ನಡಹಳ್ಳಿಯವರು ಪೂರ್ಣ ಕರ್ನಾಟಕವನ್ನು ಅಭಿವೃದ್ಧಪಡಿಸುವುದು ನಿಮಗೆ ಸಾಧ್ಯವಾಗದೇ ಇದ್ದರೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಯಾದರೂ ಮಾಡಿಬಿಡಿ ಎಂದಿದ್ದಾರೆ. ಅದನ್ನೇನು ಅವರು ಸಿಟ್ಟಿನಿಂದ, ಬೇಸರದಿಂದ ಹೇಳಿದರೋ ಅಥವಾ ಪ್ರತ್ಯೇಕ ರಾಜ್ಯವಾದರೆ ತಪ್ಪೇನು ಎಂಬರ್ಥದಲ್ಲಿ ಹೇಳಿದರೋ ಗೊತ್ತಿಲ್ಲ. ಎಂಟು ವರುಷಗಳ ಹಿಂದೆ ‘ಬೃಹತ್ತಾಗಿಸಿದ್ದ’ ಬೆಂಗಳೂರು ಮಹಾನಗರ ಪಾಲಿಕೆಯನ್ನು ಬಲವಂತದಿಂದ ಮತ್ತೆ ಚಿಕ್ಕದು ಮಾಡಲು ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಹೊರಟಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರ ಪ್ರತ್ಯೇಕ ರಾಜ್ಯ ಬೇಡಿಕೆಯೂ ಸರಿಯೇ ಅಲ್ಲವೇ?!

ಒಂದು ವರದಿಯ ಪ್ರಕಾರ 1949ರಲ್ಲಿ ಬೆಂಗಳೂರು ನಗರ ಪಾಲಿಕೆ ಅರವತ್ತೊಂಭತ್ತು ಚದರ ಕಿ.ಮಿಗಳಷ್ಟು ಮಾತ್ರವಿತ್ತು. ರಾಜಧಾನಿಯೆಂಬ ಕಾರಣ, ಆರ್ಥಿಕತೆ ಇಲ್ಲೇ ಕೇಂದ್ರೀಕೃತವಾದಂತೆ ಉದ್ಯೋಗಗಳನ್ನರಸಿ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೆ ದೇಶದ ವಿವಿದೆಡೆಯಿಂದಲೂ ಬೆಂಗಳೂರಿಗೆ ವಲಸೆ ಬರುವವರ ಸಂಖೈ ಹೆಚ್ಚುತ್ತಲೇ ಸಾಗಿತು. 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದಿದ್ದು ನೂರು ವಾರ್ಡುಗಳು. ‘ಅಭಿವೃದ್ಧಿ’ಗೆ ಪೂರಕವಾಗಲಿ ಎಂಬ ಕಾರಣದಿಂದ ಈ ನೂರು ವಾರ್ಡುಗಳ ಜೊತೆಗೆ ಬೊಮ್ಮನಹಳ್ಳಿ, ಬ್ಯಾಟರಾಯನಪುರ, ದಾಸರಹಳ್ಳಿ, ಎಲೆಕ್ಟ್ರಾನಿಕ್ಸ್ ಸಿಟಿ, ಕೃಷ್ಣರಾಜಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಯಲಹಂಕ ಮತ್ತು ಕೆಂಗೇರಿ ನಗರ/ಪಟ್ಟಣ ಪಂಚಾಯತ್ ಗಳನ್ನು ಬೆಂಗಳೂರು ಪಾಲಿಕೆಯ ವ್ಯಾಪ್ತಿಗೆ ತರಲಾಯಿತು. ಇದರ ಜೊತೆಜೊತೆಗೆ ನಗರಕ್ಕೆ ಹೊಂದಿಕೊಂಡ ನೂರಹನ್ನೊಂದು ಹಳ್ಳಿಗಳನ್ನೂ ಸೇರಿಸಿಕೊಂಡು ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ’ ಅಸ್ತಿತ್ವಕ್ಕೆ ಬಂತು. ಅರವತ್ತೊಂಭತ್ತು ಚದರ ಕಿ.ಮಿ ಇದ್ದ ಬೆಂಗಳೂರು ಈಗ 716 ಚದರ ಕಿ.ಮಿಗಳವರೆಗೆ ಬೆಳೆದು ನಿಂತಿತು! ಮಾಗಡಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ಮಾಗಡಿಯವರೆಗೂ ಚಾಚಿಕೊಳ್ಳುತ್ತಿದೆ ಎಂದರೆ ತಪ್ಪಲ್ಲ.

ಈಗ ಬೃಹತ್ ಬೆಂಗಳೂರಿಗೆ ಹೊಂದಿಕೊಂಡಂತಿರುವ ಹಳ್ಳಿಗಳು ತಾವ್ಯಾವಾಗ ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುತ್ತೇವೆ ಎಂದು ಕಾಯುತ್ತಿವೆ! ‘ಮಹಾನಗರ ಪಾಲಿಕೆ’ ಎಂಬ ಬೋರ್ಡು ಬಿದ್ದಾಗ ನಡೆಯುವ ರಸ್ತೆ, ಕುಡಿಯುವ ನೀರಿನ ಅಭಿವೃದ್ಧಿ ಕೆಲಸಗಳು ನಗರ/ಪಟ್ಟಣ/ಗ್ರಾಮ ಪಂಚಾಯ್ತಿ ಎಂಬ ಬೋರ್ಡು ಬಿದ್ದಾಗ ನಡೆಯುವುದಿಲ್ಲ ಎಂಬುದು ಇದಕ್ಕೆ ಒಂದು ಕಾರಣವಾದರೆ ‘ಬಿ.ಬಿ.ಎಂ.ಪಿ’ ವ್ಯಾಪ್ತಿಕೆ ಒಳಪಟ್ಟ ಕ್ಷಣದಿಂದಲೇ ಭೂಮಿಯ ಬೆಲೆ ಆಕಾಶಕ್ಕೇರುವುದು ಮತ್ತೊಂದು ಕಾರಣ. ‘ಮಹಾನಗರ ಪಾಲಿಕೆ’ಯ ವ್ಯಾಪ್ತಿಯಲ್ಲಿ ನಡೆಯುವ ‘ಅಭಿವೃದ್ಧಿ’ ಕೆಲಸಗಳನ್ನು ಇತರ ಬೋರ್ಡುಗಳಡಿಯಲ್ಲೂ ಮಾಡಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅವಶ್ಯಕತೆಯೇ ಇರಲಿಲ್ಲವಲ್ಲವೇ? ಇಷ್ಟಗಲವಿದ್ದ ಊರನ್ನು ಊರಗಲ ಮಾಡಿ ಒಂದು ಸರಕಾರ ತಪ್ಪು ಮಾಡಿದರೆ ‘ಇಲ್ಲಾರೀ ಇದ್ಯಾಕೋ ಸರಿ ಕಾಣ್ತಿಲ್ಲ’ ಎಂದು ಬಿ.ಬಿ.ಎಂ.ಪಿಯನ್ನೇ ಮೂರು ಭಾಗ ಮಾಡಲೊರಟು ಈಗಿನ ಸರಕಾರ ಮತ್ತೊಂದು ತಪ್ಪು ಮಾಡುತ್ತಿದೆ. ಆಗಿನ ಮತ್ತು ಈಗಿನ ಸರಕಾರ ಮತ್ತು ಮುಖ್ಯಮಂತ್ರಿಗಳು ಬೇರೆ ಬೇರೆಯಾದರೂ ಒಟ್ಟಿನಲ್ಲಿ ಇವರೆಲ್ಲರ ಆಡಳಿತ ನೀತಿ ತುಘಲಕ್ಕನ ತಿಕ್ಕಲುತನವನ್ನು ತೋರುತ್ತಿದೆಯಲ್ಲವೇ?

ಎಲ್ಲವೂ ಅಂತರ್ಜಾಲಮಯವಾಗಿರುವಾಗ ಬಿ.ಬಿ.ಎಂ.ಪಿಯನ್ನು ಒಂದಾಗಿಯೇ ಇಟ್ಟು ಅಧಿಕಾರವನ್ನು ವಿಕೇಂದ್ರೀಕರಣಗೊಳಿಸುವುದು ಕಷ್ಟದ ಮಾತೇನಲ್ಲ. ವಿಭಜನೆಗೆ ಸರಕಾರ ಅಭಿವೃದ್ಧಿಗೆ ಪೂರಕವಾದ ನಿರ್ಧಾರವಿದು ಎಂಬ ಸಮರ್ಥನೆ ಕೊಟ್ಟುಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ ಈ ವಿಭಜನೆಯನ್ನು ಜಾರಿಗೆ ತರಲು ಸುಗ್ರೀವಾಜ್ಞೆಯ ಮೊರೆ ಹೊಕ್ಕಿರುವುದು ಇದು ರಾಜಕೀಯ ಕಾರಣದ ವಿಭಜನೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತದೆ. ವಿಭಜನೆಯ ನೆಪದಲ್ಲಿ ಬಿ.ಬಿ.ಎಂ.ಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಲು ಸಾಧ್ಯವೇ ಎಂಬ ಯೋಚನೆ ಕೂಡ ಸರಕಾರಕ್ಕಿರುವಂತಿದೆ. ಮೂರು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮೂವರು ಮೇಯರ್ರುಗಳು, ಮತ್ತಷ್ಟು ಹುದ್ದೆಗಳು, ಮತ್ತಷ್ಟು ಹೊರೆ, ಆ ಮೂರು ಭಾಗಗಳಿಗೆ ಮತ್ತಷ್ಟು ಹಳ್ಳಿಗಳ ಸೇರ್ಪಡೆ, ನಂತರ ಮತ್ತೆ ಆ ಮೂರು ಭಾಗಗಳನ್ನು ಆರು ಭಾಗಗಳನ್ನಾಗಿ………. ಇವೆಲ್ಲ ಕೊನೆಗಾಣುವುದಾದರೂ ಯಾವಾಗ? ಬೆಂಗಳೂರಿನಲ್ಲೇ ಠಿಕಾಣಿ ಹಾಕಬಯಸುವ ಉದ್ದಿಮೆಗಳನ್ನು ಮತ್ತೊಂದು ನಗರದತ್ತ ಹೋಗುವಂತೆ ಮಾಡುವವರೆಗೂ ಈ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ.

ಸತ್ಯಕ್ಕೆ ಹತ್ತಿರವಾದ ಮತ್ತೊಂದು ಭಯವೆಂದರೆ ಈಗಾಗಲೇ ಸೊರಗಿರುವ ಬೆಂಗಳೂರಿನ ಕನ್ನಡ ಮತ್ತಷ್ಟು ನಿಶ್ಯಕ್ತವಾಗಿಬಿಡಬಹುದು. ಪರಭಾಷಿಕರನ್ನು ಬಿಡಿ ಕನ್ನಡಿಗ ಉದ್ಯಮಿಗಳನೇಕರು ಬೆಂಗಳೂರನ್ನು ಕೇಂದ್ರಾಡಳಿತ ಮಾಡಬೇಕೆಂದು ಆಗೀಗ ಮಾತನಾಡಿದ್ದಿದೆ. ಕರ್ನಾಟಕಕ್ಕೇ ಸೇರಿದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಅಲ್ಲಿನ ಸ್ಥಳೀಯ ಆಡಳಿತದಲ್ಲಿ ಬಹುಮತ ಸಿಕ್ಕಿದಾಗಲೆಲ್ಲ ಕನ್ನಡ, ಕರ್ನಾಟಕದ ವಿರುದ್ಧ ನಿರ್ಣಯ ಜಾರಿಗೊಳಿಸುತ್ತಾರೆ. ಜನರ ಭಾವನೆಗಳನ್ನು ಕೆರಳಿಸಿ ಮುಂದಿನ ಸಲದ ಮತ ಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಶಾಸಕರು, ಸಂಸದರು ಪಕ್ಷಾತೀತವಾಗಿ ಸುಮ್ಮಗಿದ್ದುಬಿಡುತ್ತಾರೆ! ಕಾರಣ ಮರಾಠಿ ಭಾಷಿಕರ ಮತಗಳು ತಮ್ಮ ಕೈತಪ್ಪಿ ಹೋದರೆ ಎಂಬ ಭಯ!. ಅನ್ಯಭಾಷಿಕರ ಸಂಖೈ ಹೆಚ್ಚುತ್ತಿರುವ ಬೆಂಗಳೂರನ್ನು ಈಗ ವಿಭಜಿಸಿದರೆ ಬೆಳಗಾವಿಯಲ್ಲಿ ನಡೆದದ್ದು ಬೆಂಗಳೂರಿನಲ್ಲಿ ನಡೆಯದೇ ಇದ್ದೀತೆ? ತಮಿಳು, ತೆಲುಗು, ಹಿಂದಿ ಭಾಷಿಕರ ಮತಗಳನ್ನು ಕಳೆದುಕೊಳ್ಳಲಿಚ್ಛಿಸದ ಬೆಂಗಳೂರಿನ ಶಾಸಕ – ಸಂಸದರು ಮೌನವಾಗಿದ್ದುಬಿಟ್ಟರೆ ಕನ್ನಡದ ಗತಿಯೇನಾಗಬೇಕು? ಇವ್ಯಾವುದನ್ನೂ ಯೋಚಿಸದೆ ತತ್ ಕ್ಷಣದ ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ವಿಭಜಿಸುವ ನಿರ್ಧಾರವನ್ನು ಅತ್ಯಾತುರದಿಂದ ತೆಗೆದುಕೊಳ್ಳುತ್ತಿರುವ ಸಿದ್ಧರಾಮಯ್ಯ ಬೆಂಗಳೂರಿನ ಭವಿಷ್ಯದ ಭಾಷಾ ಕಲಹಕ್ಕೆ ಮುನ್ನುಡಿ ಬರೆಯುತ್ತಿದ್ದಾರಾ?

ಜನ 6, 2015

ಆರ್ಡಿನೆನ್ಸ್ ರಾಜ್ ವಿರುದ್ಧ ಆಮ್ ಆದ್ಮಿ ಪಕ್ಷದ ಪ್ರತಿಭಟನೆ

aap karnataka protest
ಪತ್ರಿಕಾ ಪ್ರಕಟಣೆ
ಅಧಿವೇಶನವಿರದ ಸಂದರ್ಭವನ್ನು ಬಳಸಿಕೊಂಡು, ಲೋಕಸಭೆಯಲ್ಲಿ ಚರ್ಚಿಸದೇ ಕೇಂದ್ರದ ಬಿ.ಜೆ.ಪಿ. ಸರ್ಕಾರವು ವಾಮಮಾರ್ಗದಿಂದ ಭೂಸ್ವಾಧೀನ ಕಾಯಿದೆಗೆ ತಿದ್ದುಪಡಿ ತರಲು ಹೊರಟಿದೆ. ಈಗಾಗಲೇ ರಾಷ್ಟ್ರಪತಿಯವರ ಅಂಗೀಕಾರವನ್ನು ಪಡೆಯಲಾಗಿರುವ ಈ ತಿದ್ದುಪಡಿಗಳು ಸಂಪೂರ್ಣವಾಗಿ ಜನವಿರೋಧಿ ಮತ್ತು ರೈತವಿರೋಧಿಯಾಗಿವೆ. ಸಹಿ ಹಾಕುವ ಸಂದರ್ಭದಲ್ಲಿ ರಾಷ್ತ್ರಪತಿಗಳು ಸಹ, ತುರ್ತಾಗಿ ಈ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದ್ದಾರೆನ್ನಲಾಗಿದೆ.

ಜನ 4, 2015

ಆರ್ಡಿನೆನ್ಸುಗಳಿಗಿದು ಅಚ್ಛೇ ದಿನ್!

Dr Ashok K R
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರವಿಡಿದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಹತ್ತು ವರ್ಷದ, ಅದರಲ್ಲೂ ಎರಡನೇ ಯುಪಿಎ ಸರಕಾರದ ದುರಾಡಳಿತವನ್ನು ಹೀಗಳೆಯುತ್ತ. ಜೊತೆಜೊತೆಗೆ ಕಾಂಗ್ರೆಸ್ ಸರಕಾರ ಸಾಧಿಸಲಾಗದ ಅನೇಕ ಸಂಗತಿಗಳನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಾಡುವುದಾಗಿ ಹೇಳುತ್ತಿದ್ದ ನರೇಂದ್ರ ಮೋದಿ ‘ಅಚ್ಛೇ ದಿನ್’ ಅಭಿಯಾನವನ್ನು ಪ್ರಾರಂಭಿಸಿದ್ದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಬಹುತೇಕ ಸರಕಾರಗಳಂತೆ ಕೆಲವಷ್ಟು ಒಳ್ಳೆಯ ಕೆಲಸ, ಬಹಳಷ್ಟು ಅನಗತ್ಯ ಕೆಲಸಗಳು ಸರಕಾರದ ವತಿಯಿಂದ ನಡೆಯುತ್ತಿವೆ. ಜೊತೆಜೊತೆಗೆ ಅಪಾಯಕಾರಿ ರೀತಿಯ ಕೆಟ್ಟ ಕಾರ್ಯಗಳು ನರೇಂದ್ರ ಮೋದಿಯವರ ಸರಕಾರದಿಂದ ನಿಧನಿಧಾನಕ್ಕೆ ಜಾರಿಯಾಗುತ್ತಿವೆ. ಮತ್ತೀ ಅಪಾಯಗಳು ಪ್ರಸ್ತುತಕ್ಕೆ ಅನಿವಾರ್ಯವೆಂಬ ಭಾವನೆ ಜನಮಾನಸದಲ್ಲಿ ಮೂಡಿಸುವಲ್ಲಿ ಸರಕಾರದ ವಿವಿಧ ಮಂತ್ರಿಗಳ ಮಾತಿನ ಕಸರತ್ತು ಸಹಕರಿಸುತ್ತಿದೆ. ಆರ್ಡಿನೆನ್ಸುಗಳ ಬೆನ್ನು ಹತ್ತಿರುವ ಕೇಂದ್ರ ಸರಕಾರದ ಹೆಜ್ಜೆಗಳು ಕೊನೆಗೆ ಪ್ರಜಾಪ್ರಭುತ್ವದ ಮೂಲಭೂತ ಆಶಯಗಳಿಗೆ ಧಕ್ಕೆಯುಂಟುಮಾಡುತ್ತಿವೆ.

ಡಿಸೆಂ 13, 2014

ಪಿರಿಯಾಪಟ್ಟಣ ಎಂಬ ಅಭಿವೃಧ್ದಿ ವಂಚಿತ ತಾಲೂಕು

ಪಿರಿಯಾಪಟ್ಟಣ
Vasanth Raju N
ಪಿರಿಯಾಪಟ್ಟಣ ಮೈಸೂರಿನ ಪ್ರಮುಖ ತಾಲ್ಲೊಕು ಕೇಂದ್ರ. ಕೊಡಗಿನ ಅಂಚಿನಲ್ಲಿರುವ ಈ ತಾಲ್ಲೊಕು ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಕೃಷಿಗೆ ಪ್ರಸಿದ್ದಿ. ಬೈಲ್‍ಕುಪ್ಪೆ (ಟಿಬೆಟ್ ನಿರಾಶ್ರಿತ ಪ್ರದೇಶ) ಕರ್ನಾಟಕದ ಬೌದ್ದ ಧರ್ಮದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಇದಲ್ಲದೇ ಇತಿಹಾಸ ಪ್ರಸಿದ್ದಿ ಕನ್ನಂಬಾಡಿ ಮತ್ತು ಮಸಣಿಕಮ್ಮ ದೇವಸ್ಥಾನಗಳು ಕೂಡ ಪ್ರಮುಖ ಭಕ್ತಿ ಕೇಂದ್ರಗಳು. ಅದರೆ ಈ ತಾಲೂಕು ಯಾವುದೇ ರಚನಾತ್ಮಕ ಅಭಿವೃದ್ದಿ ಕಾಣದೇ ಹಿಂದುಳಿದಿದೆ. ಇದಕ್ಕೆ ಕಾರಣವಾಗಿರುವ ಕೆಲ ಅಂಶಗಳನ್ನು ಕುರಿತು ಚರ್ಚೆಯ ಉದ್ದೇಶ ಈ ಲೇಖನದ್ದು.

ಅಕ್ಟೋ 29, 2014

P. Sainath: 100 days of Namo and Sycophant media.



Sainath P
ಪಿ. ಸಾಯಿನಾಥ್

P.Sainath
Its barely a couple of weeks ago since the media and the elite celebrated hundred days of the Modi government in power. I want to speak about the media, because at this point the media are an embarrassment not only to themselves but to Mr Modi’s public relation officers who must be feeling insecure about their jobs! You know, so since the media are doing so much better, the sycophantic projection, that PR firm which he had hired, I don’t think there contract need be renewed. The first hundred days, you know we had that tamasha over the first hundred days, I ask myself this question whether its Mr Modi or whether it is Mr Dr Manmohan singh or whoever, what about, what happens in those hundred days typically in rural area. 

ಜುಲೈ 17, 2014

ಜನಪ್ರಿಯವೂ ಅಲ್ಲ ಜನಪರವೂ ಅಲ್ಲ

ಹಿಂದಿನ ಸರಕಾರಕ್ಕಿಂತ ಹೊಸತನ್ನೇನಾದರೂ ನೀಡಿದ್ದೇವೆಯೇ?
ಡಾ.ಅಶೋಕ್.ಕೆ.ಆರ್.
ಅಭಿವೃದ್ಧಿಯ ಮಾನದಂಡಗಳು ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವಂತೆ ಸರಕಾರಗಳು ಘೋಷಣೆಯ ರೂಪದಲ್ಲಿ ಪ್ರಸ್ತುತಪಡಿಸುವ ಆಯವ್ಯಯಗಳೂ ಕೂಡ ಬದಲಾಗುತ್ತಿವೆ. ಆದರೀ ಬದಲಾವಣೆಗಳಲ್ಲಿ ಎಷ್ಟು ನಿಜಕ್ಕೂ ಜನಪರ – ಪರಿಸರಪರ ಎಂಬುದು ಪ್ರಶ್ನಾರ್ಹ. ಲೋಕಸಭಾ ಚುನಾವಣೆಗೂ ಮುನ್ನ ಕೆಲವೇ ತಿಂಗಳುಗಳಿಗಾಗಿ ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.ಎ ಸರಕಾರ ಆಯವ್ಯಯ ಮಂಡಿಸಿತ್ತು. ತರುವಾಯ ನಡೆದ ಚುನಾವಣೆಯಲ್ಲಿ ಮೂವತ್ತು ವರುಷಗಳ ನಂತರ ಏಕಪಕ್ಷ ಬಹುಮತ ಪಡೆದು ಮೋದಿ ನೇತೃತ್ವದ ಸರಕಾರ ರಚನೆಯಾಯಿತು. ಕಳೆದು ಹಲವು ವರುಷಗಳಿಂದ ಹಳಿತಪ್ಪಿದ್ದ ಆರ್ಥಿಕತೆ, ಜಾಗತಿಕ ಮತ್ತು ರಾಜಕೀಯ ನಿರ್ಧಾರಗಳಿಂದಾಗಿ ಹೆಚ್ಚುತ್ತಲೇ ಸಾಗಿದ ಮತ್ತು ಸಾಗುತ್ತಿರುವ ಅವಶ್ಯ ವಸ್ತುಗಳ ಬೆಲೆ ಏರಿಕೆ, ಮುಕ್ತ ಮಾರುಕಟ್ಟೆ ನೀತಿಗಳನ್ನು ಒಪ್ಪಿಕೊಂಡ ಮೇಲೆ ದೂರದ ದೇಶವೊಂದರಲ್ಲಿ ನಡೆಯುವ ಸಣ್ಣ – ದೊಡ್ಡ ಘಟನೆಗಳೂ ಕೂಡ ದೇಶದ ಅರ್ಥ ವ್ಯವಸ್ಥೆಯನ್ನು ಅಲುಗಾಡಿಸುವ ಪರಿಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಹೊಸದಾಗಿ ಆಯ್ಕೆಯಾದ ಸರಕಾರಕ್ಕೆ. ಇನ್ನು ಕೆಲವು ತಿಂಗಳುಗಳಿಗಾಗಿ ಆಯವ್ಯಯವನ್ನು ರೂಪಿಸಬೇಕಾದ ಜವಾಬುದಾರಿಯನ್ನು ಮೋದಿ ನೇತೃತ್ವದ ಎನ್.ಡಿ.ಎ ಸರಕಾರ ಯಶಸ್ವಿಯಾಗಿ ನಿಭಾಯಿಸಿತೇ? ಉತ್ತರ ಸುಲಭವಲ್ಲ.

ಜುಲೈ 16, 2014

Governance from every home!


Anand Yadwad
In this grama panchayat, the entire village can watch GP (grama panchayat) meeting live through cable TV. Any villager can call the GP and ask questions during the meeting. The questions will be discussed and answered back.

ಜೂನ್ 16, 2014

ಬಣ್ಣ ಬಯಲಾಗತೊಡಗಿದೆ.

Muneer Katipalla

ಇಂಡಿಯಾ ದೇಶದ ಜನಸಾಮಾನ್ಯರ, ಬಡವರ ನಾಯಕ, ಬಡತನ, ಅಸಮಾನತೆಯ ನಿವಾರಕ ಎಂಬ ವರ್ಚಸ್ಸಿನೊಂದಿಗೆ, ದೇಶದ ಎಲ್ಲಾ ವಿಭಾಗದ ಜನತೆಯ ಬೆಂಬಲ ಪಡೆದು ಗೆದ್ದುಬಂದು ದೆಹಲಿ ಸಿಂಹಾಸನ ಏರಿದ ನರೇಂದ್ರ ಮೋದಿ ಬಣ್ಣ ಬಹಳ ವೇಗವಾಗಿ ಬಯಲಾಗತೊಡಗಿದೆ. ಪ್ರಮಾಣವಚನ ಸ್ವೀಕರಿಸಿ ವಾರದೊಳಗಡೆ ಆಯಕಟ್ಟಿನ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಮುಂದಾದ ಇಂಡಿಯಾದ ನೂತನ ಚಕ್ರಾಧಿಪತಿ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ದೇಶದ ಆರ್ಥಿಕತೆ ಗಟ್ಟಿಗೊಳಿಸಲು ಕೆಲವು ಕಠಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ, ಇದು ನನ್ನನ್ನು ಬೆಂಬಲಿಸಿದ ಜನಸಾಮಾನ್ಯರಿಗೆ ಅಪ್ರಿಯ ಆಗಬಹುದು. ದೇಶದ ಭವಿಷ್ಯದ ಧೃಷ್ಟಿಯಿಂದ ಎಲ್ಲರೂ ತನ್ನೊಂದಿಗೆ ಕೈಜೋಡಿಸಬೇಕು ಅಂದಿದ್ದಾರೆ.

ಜೂನ್ 13, 2014

ಮೇ 22, 2014

ಕೆ.ಪಿ.ಎಸ್.ಸಿ ಕರ್ಮಕಾಂಡ - ಆಮ್ ಆದ್ಮಿ ಪಕ್ಷದ ಪತ್ರಿಕಾ ಟಿಪ್ಪಣಿ

ಸಿದ್ಧಾರ್ಥ್ ಶರ್ಮ - ರಾಜ್ಯ ಸಂಚಾಲಕರು
ರವಿ ಕೃಷ್ಣಾರೆಡ್ಡಿ - ಕಾರ್ಯಕಾರಿ ಸಮಿತಿ ಸದಸ್ಯರು


ಪತ್ರಿಕಾ ಟಿಪ್ಪಣಿ 22/05/2014
ಕೆಪಿಎಸ್‌ಸಿ ಕರ್ಮಕಾಂಡ : 1998, 1999, 2004 ರ ಪತ್ರಾಂಕಿತ ಅಧಿಕಾರಿಗಳ ನೇಮಕಾತಿಗಳಲ್ಲಿ ಅಪಾರ ಅಕ್ರಮ, ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಆಗಿದೆ ಅಂದ ಮೇಲೆ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಹೈಕೋರ್ಟ್ ಒತ್ತಾಯಿಸುತ್ತಿದ್ದರೂ ಸಹ ಸರ್ಕಾರ ಸುಮ್ಮನಿರುವುದೇಕೆ?

ಮೇ 20, 2014

ನಿರೀಕ್ಷೆಗಳನ್ನು ಮೀರಿಸಿದ ಮತದಾರ “ಪ್ರಭು”



ಡಾ ಅಶೋಕ್ ಕೆ ಆರ್
ಭಾರತದ ಬಹುದೊಡ್ಡ ಐಂದ್ರಜಾಲ ಮತದಾನ ಮತ್ತು ಬಹುದೊಡ್ಡ ಐಂದ್ರಜಾಲಿಕ ಮತದಾರ! 2004ರ ಲೋಕಸಭಾ ಚುನಾವಣೆಗಳಿಂದಲೂ ಇದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಭಾರತೀಯ ಲೋಕಸಭಾ ಚುನಾವಣೆ ಬಲವಂತವಾಗಿ ಅಮೆರಿಕಾದ ಅಧ್ಯಕ್ಷೀಯ ಮಾದರಿಯ ಚುನಾವಣೆಯ ರೂಪದಲ್ಲಿ ನಡೆದು ಬಿಜೆಪಿ ಮತ್ತು ನರೇಂದ್ರ ಮೋದಿಯ ವಿರೋಧಿಗಳಿಗಿರಲಿ ಸ್ವತಃ ಬಿಜೆಪಿ ಮತ್ತು ನರೇಂದ್ರ ಮೋದಿಗೇ ಅಚ್ಚರಿಯೆನ್ನಿಸುವ ಫಲಿತಾಂಶ ನೀಡಿದ್ದಾನೆ ಭಾರತದ ಮತದಾರ. ಕಳೆದ ಇಪ್ಪತ್ತೈದು ಮೂವತ್ತು ವರುಷಗಳಿಂದ ಸಾಧ್ಯವಾಗದಿದ್ದ ಇನ್ನು ಮುಂದೆಯೂ ಅಸಾಧ್ಯವೆಂದೇ ತೋರಿದ್ದ ಏಕಪಕ್ಷದ ಬಹುಮತದ ಸಾಧನೆ 2014ರ ಚುನಾವಣೆಯಲ್ಲಿ ಸಾಧ್ಯವಾಗಿದೆ. ಮೊಟ್ಟ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರವೊಂದು ಸರಳ ಬಹುಮತದೊಂದಿಗೆ ಸರಕಾರ ರಚಿಸುವಂತಾಗಿದೆ, ಎಲ್ಲರ ನಿರೀಕ್ಷೆಗಳನ್ನೂ ಮೀರಿ. ಚುನಾವಣ ಪೂರ್ವ ಹೊಂದಾಣಿಕೆಗಳನ್ನು ಮಾಡಿಕೊಂಡು ಎನ್.ಡಿ.ಎ ಹೆಸರಿನಡಿಯಲ್ಲಿ ಚುನಾವಣಾ ಆಖಾಡಕ್ಕೆ ಇಳಿದಿದ್ದ ಬಿಜೆಪಿ ತಂಡ ಮುನ್ನೂರಕ್ಕೂ ಅಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ ಸ್ವಾತಂತ್ರೋತ್ತರ ಭಾರತದಲ್ಲಿ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಹಿಂದೆಂದೂ ಕಾಣದ ಸೋಲನ್ನನುಭವಿಸಿದೆ. ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅರವತ್ತು ಚಿಲ್ಲರೆ ಸ್ಥಾನಗಳಿಗೆ ಸೀಮಿತಗೊಂಡಿದ್ದರೆ ಕಾಂಗ್ರೆಸ್ ಐವತ್ತರ ಗಡಿಯನ್ನೂ ದಾಟಲಾಗಲಿಲ್ಲ. ನರೇಂದ್ರ ಮೋದಿ ಮತ್ತಾತನ ಥಿಂಕ್ ಟ್ಯಾಂಕಿನ ಚಾಣಾಕ್ಷತನ, ಜಾಗರೂಕ ರಾಜಕೀಯ ನಡೆಗಳು ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ನೀಡಿದೆ ಎಂಬುದರಲ್ಲಿ ಸಂದೇಹವಿಲ್ಲ.

ಮೇ 14, 2014

ಹೋಗಿ ಸಿಂಗ್ ಜಿ.... ಮತ್ತೆ ಮರಳದಿರಿ...

ಮುನೀರ್ ಕಾಟಿಪಳ್ಳ
 ಹತ್ತು ವರ್ಷಗಳ ಕಾಲ ಇಂಡಿಯಾ ದೇಶವನ್ನು ಆಳಿದ ಮೌನಿ ಬಾಬ ಸಿಂಗ್ ಜಿ ನಿರ್ಗಮಿಸುತ್ತಿದ್ದಾರೆ. ಪಲಿತಾಂಶ ಏನೇ ಇದ್ದರು ಅವರ ನಿರ್ಗಮನ ಖಚಿತ ಮತ್ತು ಶಾಶ್ವತ.

ಬೆಳ್ಳಂದೂರು ಕೆರೆಯ ಸ್ವಗತ

ರಮ್ಯ ವರ್ಷಿಣಿ
ನಾನು ಒಂದು ಕಾಲದಲ್ಲಿ ಹಸುರಿನಿಂದ ಕಂಗೊಳಿಸ್ತಿದ್ದೆ. ಒಂದು ಸಾರಿ ನನ್ನ ಕಡೆ ಕಣ್ಣು ಹಾಯಿಸಿ ನೋಡಿದ್ರೆ ಎಂಥವರನ್ನು ಆಕರ್ಷಣೆ ಮಾಡಿ ನನ್ನ ಕಡೆ ಸೆಳೆದುಕೊಳ್ತಿದ್ದೆ. ನನ್ನ ಸುತ್ತಾಮುತ್ತಲ ಹಸಿರು ಎಲ್ಲರ ಬಾಯಲ್ಲೂ ಅಬ್ಬಾಬ್ಬಾ ಅನ್ನಿಸೊ ಹಾಗೆ ಮನಸೂರೆ ಮಾಡಿತ್ತು. ನೀವ್ ನೋಡ್ತಿರೋ ನಾನು ಬೆಂಗಳೂರಿನ ಅತಿ ದೊಡ್ಡ ಕೆರೆ ಬೆಳ್ಳೆಂದೂರು ಕೆರೆ.