May 20, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 3: ಆಗರ ಕೆರೆಯಲ್ಲಿನ್ನೊಂದು ದಿನ - 31/12/2024

Egret
ಸಾಮಾನ್ಯ ಪಕ್ಷಿಯ ವಿಶೇಷ ನೋಟ - ಬೆಳ್ಳಕ್ಕಿ
ಡಾ. ಅಶೋಕ್.‌ ಕೆ. ಆರ್
ವರುಷದ ಕೊನೆಯ ದಿನ ಆಗರ ಕೆರೆಗೆ ಮತ್ತೊಂದು ಸುತ್ತು ಹೋಗುವ ಮನಸ್ಸಾಯಿತು. ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗಲೂ‌  ಹೆಚ್ಚೇನು ಪಕ್ಷಿಗಳು ಅಲ್ಲಿ ಸಿಕ್ಕಿರಲಿಲ್ಲವಾದರೂ ಅಲ್ಲಿನ ಪರಿಸರ ಚೆಂದಿತ್ತು.
ಹಿಂದಿನ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ಜೊತೆಗೆ ಮೀನು ಹಿಡಿದು ದಡದಲ್ಲಿ ಅದನ್ನು ಸ್ವಚ್ಛಗೊಳಿಸಿದರೆ ಅಂದಿನಂತೆ ಒಂದಷ್ಟು ಗರುಡಗಳ (ಬ್ರಾಮಿಣಿ ಕೈಟ್) ಫೋಟೋ ತೆಗೆಯಲಂತೂ ಮೋಸವಿರಲಿಲ್ಲ. ಉಳಿದಿದ್ದ ಕೊನೆಯೆರಡು ರಜೆಗಳ ಸದುಪಯೋಗ ಈ ರೀತಿಯೇ ಆಗಬೇಕಲ್ಲವೇ?!

ನಿರೀಕ್ಷಿಸಿದಂತೆ ಹೆಚ್ಚಿನ ಪಕ್ಷಿಗಳಿರಲಿಲ್ಲ. ಮೀನು ಹಿಡಿಯುವವರಿದ್ದರು. ಕಳೆದ ಬಾರಿ ಹಳದಿ ಹೂವುಗಳ ಪ್ರತಿಬಿಂಬ ತೆಗೆದ ಸ್ಥಳಕ್ಕೆ ಹೋದೆ. ದೂರದಲ್ಲೊಂದು ಬೂದು ಬಕ (ಗ್ರೆ ಹೆರಾನ್) ಕುಳಿತಿತ್ತು. ಪ್ರತಿಬಿಂಬ ಪೂರ್ತಿ ಕಾಣಿಸುತ್ತಿರಲಿಲ್ಲವಾದರೂ ಮುಂಜಾನೆಯ ಬೆಳಕಿಗೆ ಚೆಂದವಾಗೇನೋ ಕಾಣುತ್ತಿತ್ತು. ಅದರ ಫೋಟೋ ತೆಗೆಯಲು ಪ್ರಯತ್ನಿಸುವಾಗ ಒಂದು ಜೋಡಿ ಗುಳುಮುಳುಕಗಳು ಕೂಡ ಆಟವಾಡುತ್ತಾ, ತಿಂಡಿ ತಿನ್ನುತ್ತಾ ಬೂದು ಬಕದ ಬಳಿಯೇ ಬಂದವು. ಹೇಳಿಕೊಳ್ಳುವಂತಹ ಫೋಟೋ ಸಿಗಲಿಲ್ಲವಾದರೂ ಮನಸಿಗೆ ಮುದ ನೀಡುವ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗಿದೆ.

May 2, 2025

ಪಕ್ಷಿ ವೀಕ್ಷಣೆಯ ಫೀಲ್ಡ್‌ ಡೈರಿ ಭಾಗ 2: ಆಗರ ಕೆರೆಯಲ್ಲೊಂದು ದಿನ…

ಮಂಜಾವರಿಸಿದ ಕೆರೆಯಲ್ಲಿ ಗುಳುಮುಳುಕ
ಡಾ. ಅಶೋಕ್. ಕೆ. ಆರ್.  
ಕನಕಪುರದ ಬಳಿ ಒಂದು ಕಾರ್ಯಕ್ರಮಕ್ಕೆ ಹೋಗುವುದಿತ್ತು. ನೈಸ್‌ ರಸ್ತೆಯ ಕನಕಪುರ ಜಂಕ್ಷನ್ನಿನ ಹತ್ತಿರದಲ್ಲೇ ಇರುವ ಆಗರ ಕೆರೆಗೆ ಬಹಳ ವರುಷಗಳ ಹಿಂದೆ ಒಂದು ಬಾರಿ ಹೋಗಿದ್ದೆ. ಆ ಕೆರೆ ಈಗ ಹೇಗಿದೆ, ಪಕ್ಷಿಗಳಿದ್ದಾವೋ ಇಲ್ಲವೋ ನೋಡೋಣವೆಂದುಕೊಂಡು ಬೆಳಗಿನ ಆರರ ಸಮಯದಷ್ಟೊತ್ತಿಗೆ ಆಗರ ಕೆರೆಯನ್ನು ತಲುಪಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದ ಕಾರಣ ಆಗರ ಕೆರೆ ತುಂಬಿ ನಿಂತಿತ್ತು. ಕೆರೆಯ ಒಂದು ಬದಿಯಲ್ಲಿ ನಮ್ಮ ಅಭಿವೃದ್ಧಿಯ ಕುರುಹಾಗಿ ಕೆಲವು ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿದ್ದವು. ಮತ್ತೊಂದು ತುದಿಯಲ್ಲಿ ಕಿರು ಅರಣ್ಯ ಹರಡಿಕೊಂಡಿತ್ತು. ಭಾನುವಾರವಾಗಿದ್ದರಿಂದ ಜನರ ಸಂಖ್ಯೆ ಹೆಚ್ಚಾಗಿಯೇ ಇತ್ತು.

ಬೆಳಗಿನ ಕಾಯಕ

ಕೆರೆಗಳು ನೀರು ತುಂಬಿಕೊಂಡಿರುವಾಗ ಪಕ್ಷಿಗಳ ಸಂಖೈ ಒಂದಷ್ಟು ಕಡಿಮೆಯೆಂದೇ ಹೇಳಬೇಕು. ಒಂದಷ್ಟು ಗುಳುಕಮುಳುಕ, ಬೆಳ್ಳಕ್ಕಿ, ಬೂದು ಕೊಕ್ಕರೆ, ನೀರುಕಾಗೆ ಬಿಟ್ಟರೆ ಹೆಚ್ಚಿನ ಪಕ್ಷಿಗಳು ಕಾಣಿಸಲಿಲ್ಲ. ಮಂಜು ಕೆರೆಯ ಮೇಲ್ಮೈಯನ್ನು ಆವರಿಸಿತ್ತು. ಮಂಜಿನ ಹಿನ್ನಲೆಯಲ್ಲಿ ಗುಳುಕಮುಳುಕದ ಫೋಟೋ ತೆಗೆಯುವಷ್ಟರಲ್ಲಿ ಮಂಜಿನ ಹೊದಿಕೆ ಮತ್ತಷ್ಟು ದಟ್ಟವಾಯಿತು. ಎದುರಿನ ಅರಣ್ಯದ ಭಾಗ ಕಾಣಿಸದಂತಾಯಿತು. ಬೆಳಕರಿಯುವ ಮುನ್ನವೇ ತೆಪ್ಪದಲ್ಲಿ ಮೀನಿಡಿಯಲು ಅತ್ತ ಕಡೆಗೆ ಸಾಗಿದ್ದವರು ಮಂಜಿನ ಹೊದಿಕೆಯಲ್ಲಿ ಇತ್ತ ಕಡೆಯ ತೀರಕ್ಕೆ ಸಾಗಿ ಬರುತ್ತಿದ್ದ ದೃಶ್ಯ ವೈಭವಯುತವಾಗಿತ್ತು. ಗಿಡಮರಗಳ ಪ್ರತಿಬಿಂಬದ ಚಿತ್ರಗಳನ್ನು ಕ್ಯಾಮೆರಾಗೆ ತುಂಬಿಕೊಂಡೆ. ಕೊಂಚ ಸಮಯದ ಕಳೆದ ನಂತರ ಮಂಜಿನ ಹೊದಿಕೆ ನಿಧಾನವಾಗಿ ಸರಿದುಕೊಳ್ಳಲಾರಂಭಿಸಿತಾದರೂ ರವಿಯು ಮೋಡದ ನಡುವಿನಿಂದ ಹೊರಬರಲು ಉತ್ಸಾಹ ತೋರಲಿಲ್ಲ.