ಆಗ 15, 2020

ಒಂದು ಬೊಗಸೆ ಪ್ರೀತಿ - 75

"ನೀವ್‌ ಹೋಗಿ ಅಕ್ಕ. ಇವರಿರ್ತಾರೆ ರಾತ್ರಿಗೆ" ಸೋನಿಯಾಳ ದನಿ ಎಂದಿನಂತಿರಲಿಲ್ಲ ಎನ್ನುವುದೇನೋ ಅರಿವಿಗೆ ಬಂತು. ಆಸ್ಪತ್ರೆ ವಾಸ, ಅದರಲ್ಲೂ ಗರ್ಭ ನಿಲ್ಲದೇ ಹೋದರೆ ಅನ್ನೋ ಟೆನ್ಶನ್ನು ಎಲ್ಲಾ ಸೇರಿದಾಗ ದನಿ ಮಾಮೂಲಿನಂತಿರಲು ಸಾಧ್ಯವಿಲ್ಲವಲ್ಲ. ಗಂಡ ಇದ್ರೆ ಧೈರ್ಯ ಜಾಸ್ತಿಯಿರ್ತದೋ ಏನೋ. 

ʻಪರವಾಗಿಲ್ಲ ಬಿಡು ಸೋನಿಯಾ. ನಾನೇ ಇರ್ತೀನಿʼ 

"ಹೇಳಿದ್ನಲ್ಲಕ್ಕ. ಇವರಿರ್ತಾರೆ ಅಂತ. ನೀವಿದ್ದು ನನ್ನ ನೋಡೋದೇನು ಬೇಡ. ನೀವ್‌ ದಯವಿಟ್ಟು ಹೋಗಿ" ಎಂದವಳು ಖಂಡತುಂಡವಾಗಿ ಹೇಳಿದಾಗ ಎಲ್ಲೋ ಏನೋ ತಪ್ಪಾಗಿದೆ, ಏನಂತ ಗೊತ್ತಾಗದ ಪರಿಸ್ಥಿತಿಯಲ್ಲಿ ನಾನಿದ್ದೀನಿ ಅನ್ನುವುದರ ಅರಿವಾಯಿತು. ಅವಳಿಷ್ಟು ಕಟುವಾಗಿ ಹೇಳಿದ ಮೇಲೆ ಮತ್ತೆ ಅಲ್ಲಿ ನಿಲ್ಲುವ ಮನಸ್ಸಾಗಲಿಲ್ಲ ನನಗೆ. ʻಟೇಕ್‌ ಕೇರ್‌ʼ ಎಂದ್ಹೇಳಿದಾಗಲೂ ಅವಳ ಮುಖದಲ್ಲೊಂದು ನಗು ಮೂಡಲಿಲ್ಲ. ಹೊರಬಿದ್ದೆ. ನಿನ್ನೆ ರಾತ್ರಿಯೆಲ್ಲ ಚೆಂದವಾಗಿ ಮಾತನಾಡುತ್ತಾ ಗರ್ಭದ ದಿನಗಳ ಭಯ ಸಂತಸ ಖುಷಿ ಆತಂಕದ ಬಗ್ಗೆಯೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದವಳಿಗೆ ಒಂದೇ ದಿನದಲ್ಲಿ ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವಂತದ್ದೇನಾಯಿತು? ತಿಳಿಯಲಿಲ್ಲ. ನನ್ನಿಂದೇನಾದರೂ ತಪ್ಪಾಯಿತಾ? ನನ್ನ ಪ್ರಜ್ಞೆಗೆ ಬಂದಂತೆ ಯಾವ ತಪ್ಪೂ ಆಗಿಲ್ಲ. ರಾತ್ರಿ ಮಾತನಾಡುತ್ತಾ ಮಲಗಿದ್ದು ಹನ್ನೊಂದೂವರೆಯ ಮೇಲಾಗಿತ್ತು. ಬೆಳಿಗ್ಗೆ ಎದ್ದಾಗ ಮತ್ತೊಂದಷ್ಟು ರಕ್ತಸ್ರಾವವಾಗಿತ್ತು. ಜಯಂತಿ ಮೇಡಮ್ಮಿಗೆ ಫೋನ್‌ ಮಾಡಿದ್ದೆ. "ತೊಂದರೆಯೇನಿರಲ್ಲಮ್ಮ. ಕೆಲವರಿಗೆ ವಾರದವರೆಗೆ ರಕ್ತ ಹೋಗ್ತದೆ. ಬಂದು ನೋಡ್ತೀನಿ. ನೋಡುವ. ಬೇಕಿದ್ರೆ ನಿಮ್ಮ ಸಮಾಧಾನಕ್ಕೆ ಮತ್ತೊಂದು ಸ್ಕ್ಯಾನ್‌ ಮಾಡಿಸುವ" ಎಂದರು. 

ಆಗ 8, 2020

ಒಂದು ಬೊಗಸೆ ಪ್ರೀತಿ - 74

“ಹೇಳಿದ್ನಪ್ಪ. ಬರಲಿಲ್ಲ ನಿಮ್ಮಮ್ಮ” ಮೂರು ಪದ ಜೊತೆಗೂಡಿಸಲು ಮೂರು ನಿಮಿಷದಷ್ಟು ಸಮಯ ತೆಗೆದುಕೊಂಡು ರಾಮೇಗೌಡ ಅಂಕಲ್‌ ಹೇಳುವಾಗ ಆಸ್ಪತ್ರೆಯ ರೂಮಿನೊಳಗಿದ್ದವರೆಲ್ಲರ ಕಣ್ಣಲ್ಲಿ ನೀರಾಡಿತ್ತು. ಸೋನಿಯಾಳನ್ನೊಬ್ಬಳನ್ನ ಹೊರತುಪಡಿಸಿ. 

"ಆ ಪಾಪಿ ಪಿಂಡ ಹೋದ್ರೆ ಹೋಗ್ಲಿ ಬಿಡಿ" ಅಂದಿರಬೇಕಲ್ಲ ಎಂದು ವ್ಯಂಗ್ಯದಿಂದ ಕೇಳಿದ್ದಕ್ಕೆ ಅಂಕಲ್‌ ಪ್ರತಿಯಾಡಲಿಲ್ಲ. ಸೋನಿಯಾಳ ವ್ಯಂಗ್ಯದಲ್ಲಿ ಸತ್ಯವಿದ್ದಿರಲೇಬೇಕು. ಅಲ್ಲ, ತೀರ ತಾಯಿ ಆದವಳಿಗೆ ಇಷ್ಟರಮಟ್ಟಿಗೆ ದ್ವೇಷ ಇರೋದಕ್ಕಾದರೂ ಹೇಗೆ ಸಾಧ್ಯ? ಮಗಳೂ ತಾಯಿಯಾಗುವುದರಲ್ಲಿದ್ದಾಳೆ. ಅದೇನೋ ರಕ್ತ ಹೋಗ್ತಿದ್ಯಂತೆ. ಅಬಾರ್ಷನ್‌ ಆದರೂ ಆಗಿಬಿಡಬಹುದು. ಮಗಳೂ ಅಂತ ಬೇಡ, ಗೊತ್ತಿರೋ ಒಬ್ಬ ಹೆಣ್ಣುಮಗಳು ಅಂತಾದರೂ ಮನ ಕರಗಲಾರದಾ? ಕರಗಬಾರದಾ? ಸೋನಿಯಾಳ ಕಣ್ಣಲ್ಲಿ ಮೂಡದ ಕಣ್ಣೀರು ಮುಂದಿನ ದಿನಗಳಲ್ಲಿ ಅವಳು ಅವರಮ್ಮನ ಜೊತೆ ನಡೆದುಕೊಳ್ಳುವ ರೀತಿಯನ್ನು ವಿವರಿಸುತ್ತಿತ್ತು. 

ಅಂಕಲ್‌ ಮತ್ತು ಸೋನಿಯಾಳನ್ನು ಮಾತನಾಡಿಕೊಳ್ಳಲು ಬಿಟ್ಟು ನಾನೂ, ಶಶಿ, ಅಪ್ಪ, ಅಮ್ಮ ಹೊರಬಂದೆವು. ಮೌನ ಅಸಹನೀಯವಾಗಿತ್ತು. ಮೌನ ಮುರಿಯುತ್ತ ಅಮ್ಮ "ರಾತ್ರಿ ನಾನೇ ಉಳಿದುಕೊಳ್ಳಲಾ ಇಲ್ಲಿ?" ಎಂದು ಕೇಳಿದರು. 

"ಏನ್‌ ಬೇಡ. ನಾನೇ ಇರ್ತೀನಿ ಬಿಡಿ" ಎಂದ ಶಶಿ. 

"ಹಂಗಲ್ವೋ.... ನಾವ್ಯಾರಾದ್ರೂ ಹೆಂಗಸ್ರು ಇದ್ರೆ ಉತ್ತಮ ಅಲ್ವ" 

"ಯಾಕ್‌ ಗಂಡಸ್ರು ಇಂಥ ವಿಷಯ ಎಲ್ಲಾ ನೋಡ್ಕೋಬಾರ್ದು ಅಂತಾನಾ?" 

ಆಗ 1, 2020

ಒಂದು ಬೊಗಸೆ ಪ್ರೀತಿ - 73

ಮೆಸೇಜ್ ಮಾಡ್ಲೋ ಬೇಡ್ವೋ ಮಾಡ್ಲೋ ಬೇಡ್ವೋ ಅನ್ನೋ ಆಲೋಚನೆಗಳಲ್ಲೇ ಅರ್ಧ ದಿನ ಕಳೆದು ಹೋಯಿತು. ಎಫ್.ಬೀಲಿ ಅನ್ ಫ್ರೆಂಡ್ ಮಾಡಿದ್ದ, ಬ್ಲಾಕ್ ಮಾಡಿರಲಿಲ್ಲ. ವಾಟ್ಸಪ್ ಅಲ್ಲೇನೂ ಬ್ಲಾಕ್ ಮಾಡಿರಲಿಲ್ಲ. ಮೆಸೇಜ್ ಗಿಸೇಜ್ ಬೇಡ ಒಟ್ಗೇ ಫೋನೇ ಮಾಡಿಬಿಟ್ಟರೆ? ಧೈರ್ಯ ಸಾಲಲಿಲ್ಲ. ಪೂರ್ತಿ ದಿನ ಹೀಗೇ ಕಳೆದುಹೋದರೆ ಎಂದು ದಿಗಿಲಾಯಿತು. ಏನಾಗಿಬಿಡ್ತದೆ? ಎಂತದೂ ಆಗೋದಿಲ್ಲ. ಸುಮ್ಮನೆ ನಾ ಅನಾವಶ್ಯಕ ಗಾಬರಿ ಬಿಳ್ತಿದೀನಿ ಅಷ್ಟೇ ಎಂದುಕೊಂಡು ಮೊಬೈಲ್ ಕೈಗೆತ್ತಿಕೊಂಡು ವಾಟ್ಸಪ್ ತೆರೆದೆ. ಉಹ್ಞೂ... ವಾಟ್ಸಪ್ ಅಲ್ ಬೇಡ. ಅವ ಯಾವಾಗಲೋ ನೋಡಿ ಏನೇನೋ ರಿಪ್ಲೈ ಮಾಡಿಬಿಟ್ಟರೆ? ಮನೆಗೋದ ಮೇಲೆ ಮಗಳ ದೇಖರೇಖಿಯಲ್ಲಿ ಮೊಬೈಲು ನೋಡುವುದ್ಯಾವಾಗಲೋ. ರಾಜೀವನೋ ನಮ್ಮಮ್ಮನಿಗೋ ಮೆಸೇಜು ಕಂಡು ಗಬ್ಬೆಬ್ಬಿಬಿಟ್ಟರೆ? ಎಫ್.ಬಿ ಮೆಸೆಂಜರ್ ಆದ್ರೆ ಪರವಾಗಿಲ್ಲ.‌ ಹೆಂಗಿದ್ರೂ ನೋಟಿಫಿಕೇಶನ್ ಆಫ್ ಮಾಡಿಟ್ಟಿದ್ದೀನಿ. ಪಟ್ಟಂತ ಮೆಸೇಜು ಯಾರ ಕಣ್ಣಿಗೂ ಕಾಣೋದಿಲ್ಲ. ಥೂ! ಇದೇನಾಗಿದೆ ನಂಗೆ. ಸಾಗರನ ಹುಟ್ಟುಹಬ್ಬಕ್ಕೊಂದು ವಿಶಸ್ ಕಳಿಸೋದಿಕ್ಕೆ ಇಷ್ಟೆಲ್ಲ ಅತಿರೇಕದಿಂದ ಯೋಚಿಸೋ ಅಗತ್ಯವಾದರೂ ಏನಿದೆ? ಯಾಕೀ ರೇ ಪ್ರಪಂಚದಲ್ಲಿ ಇಲ್ಲದಿರುವುದನ್ನೆಲ್ಲ ಯೋಚಿಸುತ್ತಾ ಕುಳಿತಿದ್ದೀನಿ. ಎಫ್.ಬಿ ತೆರೆದು ಸಾಗರನ ಪ್ರೊಫೈಲ್ ತೆರೆದು ʻಹ್ಯಾಪಿ ಬರ್ತ್ ಡೇ ಕಣೋ' ಎಂದು ಮೆಸೇಜು ಕಳುಹಿಸಿದೆ. ಅವನ ಮೆಸೆಂಜರ್ನಲ್ಲಿ ಅದರ್ಸ್ ಫೋಲ್ಡರಿಗೆ ಹೋಗಿರ್ತದೆ ಮೆಸೇಜು. ಇನ್ಯಾವಾಗ ನೋಡ್ತಾನೋ ಏನೋ ಎಂದುಕೊಂಡವಳಿಗೆ ಸಾಗರ್ ಇಸ್ ಟೈಪಿಂಗ್ ಅನ್ನೋದು ಕಾಣಿಸಿ ಖುಷಿಯಾಯಿತು. ಏನ್ ಟೈಪಿಸುತ್ತಿರಬಹುದು? ಸದ್ಯ, ಇನ್ನೂ ಮರೆತಿಲ್ಲವಲ್ಲ ನನ್ನ ಅಂತ ಕಾಲೆಳಿಯಬಹುದು.... ಯಾರಿದು ಅಂತ ರೇಗಿಸಬಹುದು ಅಥವಾ ಎಂತದೂ ಬೇಡ ಅಂತ ಸುಮ್ಮನೊಂದು ಥ್ಯಾಂಕ್ಯು ಹೇಳಿ ಮಾತುಕತೆ ಮುಗಿಸಬಹುದು ಎಂಬ ನಿರೀಕ್ಷೆಯಲ್ಲೇ ಕಣ್ಣನ್ನು ಮೊಬೈಲಿನ ಸ್ಕ್ರೀನಿಗೆ ನೆಟ್ಟು ಕುಳಿತಿದ್ದೆ. ಒಂದಷ್ಟೇನೋ ಟೈಪ್ ಮಾಡಿದವನು ಮತ್ತೆ ಡಿಲೀಟು ಮಾಡಿದನೇನೋ.... ಕ್ಷಣ ಕಾಲ ಸುಮ್ಮನಿದ್ದ ಆ್ಯಪು ಮತ್ತೊಮ್ಮೆ ಸಾಗರ್ ಇಸ್ ಟೈಪಿಂಗ್ ಅಂತ ತೋರಿಸಿತು. ಒಂದು ನಿಮಿಷದ ಟೈಪಿಂಗಿನ ನಂತರ ಮೆಸೇಜು ಕಾಣಿಸಿತು "ನನ್ನ ಹುಟ್ಟುಹಬ್ಬಕ್ಕಲ್ಲ, ನಾ ಸತ್ರೂ ಮೆಸೇಜು ಮಾಡಬೇಡ. ಅಪ್ಪಿತಪ್ಪಿ ನಾ ಸತ್ತ ವಿಷ್ಯ ಗೊತ್ತಾದ್ರೂ ನೋಡೋಕ್ ಬರಬೇಡ. ಅಷ್ಟು ನಡೆಸಿಕೊಡು ಸಾಕು". 

ನಿಟ್ಟುಸಿರುಬಿಡುವುದನ್ನೊರತುಪಡಿಸಿದರೆ ಮತ್ತೇನು ತಾನೇ ಮಾಡಲು ಸಾಧ್ಯವಿತ್ತು ನನಗೆ. ಸಾಮಾನ್ಯವಾಗಿ ಈ ರೀತಿ ಮೆಸೇಜು ಮಾಡಿದ ತಕ್ಷಣವೇ ಸಾರಿ ಯಾವ್ದೋ ಮೂಡಲ್ಲಿದ್ದೆ, ಎಷ್ಟೆಲ್ಲ ಕಾಟ ಕೊಡ್ತಿ ನನಗೆ ಅಂತಂದು ಒಂದಷ್ಟಾದರೂ ಮಾತನಾಡುತ್ತಿದ್ದ. ಕೊನೇಪಕ್ಷ ವ್ಯಂಗ್ಯವನ್ನಾಡುತ್ತ ಚುಚ್ಚು ಮಾತುಗಳನ್ನಾದರೂ ಆಡುತ್ತಿದ್ದ. ಇವತ್ತೂ ಹಂಗೇ ಆಗಬಹುದೇನೋ ಅಂದುಕೊಂಡು ಕಾದೆ. ಉಹ್ಞೂ. ಯಾವ ಮೆಸೇಜೂ ಬರಲಿಲ್ಲ. ನಾನೇ ಮೆಸೇಜು ಮಾಡಲಾ? ಸತ್ರೂ ಮೆಸೇಜು ಮಾಡಬೇಡ ಅಂದುಬಿಟ್ಟಿದ್ದಾನಲ್ಲ. ಆದರೇನಂತೆ? ಮುಂಚೆ ಎಷ್ಟು ಸಲ ಈ ರೀತಿಯಾಗಿ ಮೆಸೇಜು ಮಾಡಿದ ಮೇಲೆ ನಾನೇ ದುಃಖ ತೋಡಿಕೊಂಡಿಲ್ಲ. ಮತ್ತೇನಿಲ್ಲದಿದ್ದರೂ ನನ್ನ ದುಃಖಕ್ಕಂತೂ ಹುಡುಗ ಕರಗಿಬಿಡ್ತಾನೆ. ನಿನ್ನ ದುಃಖದ ಕತೆಗಳನ್ನು ಕೇಳೋಕೊಂದು ಕಿವಿ ಬೇಕಷ್ಟೇ ನಿನಗೆ ಅಂತ ಎಷ್ಟು ಸಲ ಆಡಿಕೊಂಡಿದ್ದಾನೆ.‌ ಕೇಳುವದಕ್ಕೊಂದಷ್ಟು ಕಿವಿಗಳು ಎಲ್ಲರಿಗೂ ಬೇಕೇ ಬೇಕಲ್ಲ. ಮತ್ತೊಂದು ರೌಂಡು ಬಯ್ದರೂ ಪರವಾಗಿಲ್ಲ ಮೆಸೇಜು ಮಾಡೇಬಿಡುವ ಎಂದು ಧೃಡ ನಿರ್ಧಾರ ಮಾಡಿ ಫೋನ್ ಕೈಗೆತ್ತಿಕೊಂಡರೆ ಅಮ್ಮನ ಫೋನು ಬಂತು.‌ ನಂತರ ಮೆಸೇಜಿಸುವ ಅಂದುಕೊಂಡು ಫೋನೆತ್ತಿಕೊಂಡೆ. 

ಜುಲೈ 25, 2020

ಒಂದು ಬೊಗಸೆ ಪ್ರೀತಿ - 72

ಭಾನುವಾರ ಹತ್ತೂವರೆಗೆಲ್ಲ ರೆಡಿಯಾಗಿರಲು ಹೇಳಿದ್ದರು ರಾಮ್.‌ ಅವರ ಕಾರಿನಲ್ಲೇ ಹುಡುಗಿ ಮನೆಗೆ ಹೊರಟೆವು. ನಮ್ಮ ಮನೆಯಿಂದ ಒಂದಿಪ್ಪತ್ತು ನಿಮಿಷದ ಹಾದಿ ಹುಡುಗಿಯ ಮನೆ. ಟೆರಿಶಿಯನ್‌ ಕಾಲೇಜಿನ ಬಳಿಯಿತ್ತು ಅವರ ಮನೆ. ಸ್ವಂತ ಮನೆ; ಮೊದಲ ಫ್ಲೋರಿನಲ್ಲಿ ಅವರಿದ್ದರು, ಕೆಳಗೊಂದು ಮನೆ ಬಾಡಿಗೆಗೆ ಕೊಟ್ಟಿದ್ದರು. 

ʻಇನ್ನೇನು ಮದುವೆಯಾದ ಮೇಲೆ ಕೆಳ್ಗಡೆ ಮನೇಲೇ ಇರ್ಬೋದು ಬಿಡ್ರಿʼ ಅಂತ ರೇಗಿಸಿದೆ ಮನೆಯೊಳಗೋಗುವಾಗ. 

"ಸುಮ್ನಿರಿ. ಮೊದಲು ಹುಡುಗಿ ನೋಡೋ ಶಾಸ್ತ್ರ ಮುಗಿಸಿ ಪಟ್ಟಂತ ಹೊರಟುಬಿಡುವ. ಫುಲ್‌ ಟೆನ್ಶನ್‌ ಆಗ್ತಿದೆ. ಯಾರಿಗ್‌ ಬೇಕ್‌ ಈ ಕರ್ಮವೆಲ್ಲ" ಎಂದೇಳುತ್ತಾ ಪ್ಯಾಂಟಿನ ಎಡಜೇಬಿನಲ್ಲಿದ್ದ ಕರ್ಚೀಫು ಹೊರತೆಗೆದು ಹಣೆ ಒರೆಸಿಕೊಂಡು ಬೆವೆತುಹೋಗಿದ್ದ ಹಸ್ತ ಒರೆಸಿಕೊಂಡರು. ನಮ್ಮಿಂದೆಯೇ ರಾಜೀವ್‌ ರಾಧಳನ್ನು ಎತ್ತಿಕೊಂಡು ಒಳಬಂದರು. ಬನ್ನಿ ಬನ್ನಿ ಕೂತ್ಕೊಳ್ಳಿ ಕೂತ್ಕೊಳ್ಳಿ ಅನ್ನೋ ಶಾಸ್ತ್ರವೆಲ್ಲ ಮುಗಿದು ನಾವು ಕುಳಿತುಕೊಂಡ ನಂತರ ಇವರ್ಯಾರು ಅನ್ನುವಂತ ಪ್ರಶ್ನೆಯನ್ನು ರಾಮ್‌ ಕಡೆಗೆಸೆದರು. ನನ್ನೆಡೆಗೆ ಕೈತೋರುತ್ತಾ "ಇವರು ನನ್‌ ಫ್ರೆಂಡ್ಸು. ಇವ್ರು ಧರಣಿ ಅಂತ, ನಮ್‌ ಆಸ್ಪತ್ರೆಯಲ್ಲೇ ಮಕ್ಕಳ ಡಾಕ್ಟರ್ರು. ಇವರವರ ಹಸ್ಬೆಂಡು, ರಾಜೀವ್‌ ಅಂತ. ಅವರ ಮಗಳು ರಾಧ ಪುಟ್ಟಿ". ಸರಿ ಸರಿಯೆಂಬಂತೆ ತಲೆಯಾಡಿಸಿದರು ಎಲ್ಲರೂ. 

"ನೀವೆಲ್ಲಿ ಕೆಲಸ ಮಾಡೋದು" ಎಂದವರು ಹುಡುಗಿಯ ಚಿಕ್ಕಪ್ಪನೋ ಮಾವನೋ ಇರಬೇಕು. 

ʻನಾನು ಇಲ್ಲೇ ಫಸ್ಟ್‌ ಹೆಲ್ತ್‌ನಲ್ಲಿದ್ದೀನಿʼ ಮಕ್ಕಳ ಡಾಕ್ಟರ್‌ ಆಗಿಲ್ಲ ಇನ್ನೂ ಓದ್ತಿದ್ದೀನಿ ಅಂತೆಲ್ಲ ಹೇಳಬೇಕೆಂದುಕೊಂಡವಳು ಅಷ್ಟೆಲ್ಲ ಪುರಾಣ ಇಲ್ಯಾಕೆ ಎಂದು ಸುಮ್ಮನಾದೆ. 

ಜುಲೈ 15, 2020

ಒಂದು ಬೊಗಸೆ ಪ್ರೀತಿ - 71

ಸುಮ ಮೂಡಿಸಿದ ಬೇಸರವನ್ನು ಮರೆಯಲನುವು ಮಾಡಿಕೊಟ್ಟದ್ದು ಮಗಳೊಂದಿಗಿನ ಒಡನಾಟ. ಮಗಳೊಂದಿಗೆ ನೆಟ್ಟಗೆ ಮಾತನಾಡಿ, ಆಟವಾಡಿ ತಿಂಗಳ ಮೇಲಾಗಿತ್ತು. ತಿಂಗಳ್ಯಾಕೆ, ಎರಡು ತಿಂಗಳೇ ಆಗಿಹೋಯಿತು. ಮಾತನಾಡಿ ಆಟವಾಡಿದರೂ ಅದೆಲ್ಲಾ ಯಾಂತ್ರಿಕತೆಯಿಂದ ಕೂಡಿತ್ತಷ್ಟೆ. ಎರಡ್ ತಿಂಗಳಲ್ಲಿ ಮಗಳು ಎಷ್ಟೊಂದೆಲ್ಲ ಹೊಸ ಹೊಸ ಪದ ಕಲಿತುಬಿಟ್ಟಿದ್ದಾಳೆ ಅಂತ ಅಚ್ಚರಿ. ಅಮ್ಮ, ಅಪ್ಪ, ಪಪ್ಪ, ಮಮ್ಮ, ತಾತ, ಅಜ್ಜಿ, ಮಾಮ, ಅತ್ತೆ ಎಲ್ಲಾ ಸಲೀಸು ಪದಗಳೀಗ. ಇಷ್ಟು ದಿನ ಅವಳನ್ನು ನೋಡಿಕೊಂಡಿದ್ದೇ ಒಂದು ತೂಕವಾದರೆ ಈಗ ಪುಟಪುಟನೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಚಿಮ್ಮುವ ಅವಳ ಉತ್ಸಾಹದ ಸರಿಸಮಕ್ಕೆ ನಾವು ದೊಡ್ಡವರು ನಿಲ್ಲುವುದಕ್ಕೆಲ್ಲಿ ಸಾಧ್ಯ! ಮಗಳ ಆಟೋಟಗಳನ್ನು ನೋಡುತ್ತಾ ಒಂದು ಒಂದೂವರೆ ಘಂಟೆ ಕಳೆದಿದ್ದೇ ತಿಳಿಯಲಿಲ್ಲ. ಫೋನು ರಿಂಗಣಿಸಿತು. ರಾಮ್ ಫೋನ್ ಮಾಡಿದ್ರು. ಮಗಳನ್ನು ಅವರಪ್ಪನ ಕೈಗೊಪ್ಪಿಸಿ ಫೋನ್ ಎತ್ತಿಕೊಂಡು ಹೊರಬಂದೆ. 

ʻಹೇಳಿ ರಾಮ್' 

"ಏನ್ರೀ ಹೇಗಾಯ್ತು ಎಕ್ಸಾಮ್ಸ್ ಎಲ್ಲ?" 

ʻಏನೋ ತಕ್ಕಮಟ್ಟಿಗೆ ಆಗಿದೆ. ನೋಡ್ಬೇಕು ರಿಸಲ್ಟ್ಸ್ ಏನಾಗುತ್ತೋ' 

"ನಿಮ್ಮಂತೋರೇ ಪಾಸಾಗದಿದ್ದರೆ ಇನ್ಯಾರು ಪಾಸಾಗ್ತಾರೆ ಹೇಳಿ...." 

ʻಬೇರೆ ಡೈಲಾಗ್ ಹೇಳೀಪ. ಈ ಡೈಲಾಗ್ ಕೇಳಿ ಕೇಳಿ ಸಾಕಾಗಿದೆ' 

"ಹ ಹ.... ಹೊಸ ಕಾರ್ ತಗಂಡೆ ರೀ" 

ʻಓ ಸೂಪರ್ ಅಲ್ಲ…. ಕಂಗ್ರಾಟ್ಸ್' 

"ಥ್ಯಾಂಕ್ಯು ಥ್ಯಾಂಕ್ಯು" 

ʻಬರೀ ಥ್ಯಾಂಕ್ಸ್ ಹೇಳಿಬಿಟ್ರೆ! ಪಾರ್ಟಿ ಗೀರ್ಟಿ ಕೊಡ್ಸಿ' 

"ನಿಜ ಹೇಳ್ಬೇಕು ಅಂದ್ರೆ ಅದಿಕ್ಕೇ ಫೋನ್ ಮಾಡಿದ್ದು" 

ʻಆಹಾ! ಪಟ್ಟಂತ ಚೆನ್ನಾಗಿ ಸುಳ್ಳೇಳ್ತೀರ' 

"ಇಲ್ಲ ರೀ ನಿಜವಾಗ್ಲೂ. ರಾಜೀವ್ ಹೇಳಲಿಲ್ವ?" 

ʻಇಲ್ವಲ್ಲ' 

ಜುಲೈ 8, 2020

ಒಂದು ಬೊಗಸೆ ಪ್ರೀತಿ - 70

ಕೊನೆಯ ಪರೀಕ್ಷೆ ಮುಗಿಸಿ ಹೊರಬರುವ ಸಂತಸ ವರ್ಣಿಸುವುದು ಕಡು ಕಷ್ಟದ ಕೆಲಸ. ಥಿಯರಿ ಪಾಸಾಗೋದು ಗ್ಯಾರಂಟಿ ಅನ್ನೋ ಖುಷಿಯಲ್ಲಿ ಹೊರಬಂದವಳಿಗೆ ಕಿವಿಯಿಂದ ಕಿವಿಯವರೆಗೆ ನಗು ಹರಡಿಕೊಂಡು ಬಂದ ಸುಮಾ ಜೊತೆಯಾದಳು. 

ಹತ್ತಿರ ಬಂದು ಕೈ ಹಿಡಿದುಕೊಂಡವಳು "ಹೆಂಗಾಯ್ತೆ" ಎಂದು ಕೇಳಿದವಳು ನಾ ಉತ್ತರಿಸುವ ಮೊದಲೇ "ನೀ ಬಿಡು ಚೆನ್ನಾಗೇ ಮಾಡಿರ್ತಿ" ಎಂದು ಅವಳೇ ಉತ್ತರಿಸಿಕೊಂಡಳು. 

ʻಹು. ಕಣವ್ವ. ಪೇಪರ್ ಸೆಟ್ ಮಾಡಿದ್ದು ನಮ್ ಸಂಬಂಧಿಕರೇ ನೋಡು. ಎಲ್ಲಾ ಗೊತ್ತಿರೋದೇ ಕೊಟ್ಬಿಟ್ಟಿದ್ರು' 

"ಹ ಹ. ನಿಂಗ್ ಗೊತ್ತಿಲ್ಲದಿರೋದು ಏನಾದ್ರೂ ಇತ್ತಾ" 

ʻಹೆ ಹೆ. ಇಲ್ಲ. ಎಲ್ಲಾ ಗೊತ್ತಿತ್ತು!' 

"ಹಂಗಾದ್ರೆ ನಿನ್ ಸಂಬಂಧಿಕರೇ ಸೆಟ್ ಮಾಡಿರ್ಬೇಕು ಬಿಡು" 

ʻಸರಿ ಕಣವ್ವ. ನಾನೇ ಸೋತೆ. ಥಿಯರಿ ಪಾಸಾಗೋದ್ರಲ್ಲಿ ಅನುಮಾನ ಇಲ್ಲ ಬಿಡೆ. ಇನ್ ಕ್ಲಿನಿಕ್ಸ್ ಹೆಂಗ್ ಆಗ್ತದೋ ನೋಡ್ಬೇಕು' 

"ನೀ ಓದಿರೋದಿಕ್ಕೆ ಫೇಲಾಗೋದಿಕ್ಕೆ ಸಾಧ್ಯವೇ ಇಲ್ಲ ಬಿಡು" 

ʻಡಿ.ಎನ್.ಬಿ ಕ್ಲಿನಿಕ್ಸಿನಲ್ಲಿ ಪಾಸಾಗೋದಿಕ್ಕೆ ಓದಿರೋದ್ರ ಜೊತೆಗೆ ಅದೃಷ್ಟ ಕೂಡ ಇರ್ಬೇಕಲ್ಲ' 

"ನಿನಗಿಂತ ಅದೃಷ್ಟವಂತೆ ಯಾರಿದ್ದಾರೆ ಬಿಡವ್ವ. ಪ್ರತೀ ಸಲ ಥಿಯರಿ ಎಕ್ಸಾಮು ಬೆಂಗಳೂರಲ್ಲೋ ಚೆನ್ನೈಯಲ್ಲೋ ಮುಂಬೈಯಲ್ಲೋ ಇರೋದಪ್ಪ. ಇದೇ ಮೊದಲ ಸಲ ಮೈಸೂರಲ್ಲಿ ಆಗಿರೋದು. ಅದೃಷ್ಟ ಅಲ್ಲದೇ ಮತ್ತೇನಿದು?" 

ಜುಲೈ 1, 2020

ಒಂದು ಬೊಗಸೆ ಪ್ರೀತಿ - 69

"ಇಲ್ಲೇ ಇದ್ದು ಓದ್ಕೋಬಾರ್ದಾ? ಪಾಪು ನನ್ಜೊತೆ ಮಲಗಿರುತ್ತಪ್ಪ, ನಿನ್ನ ಪಾಡಿಗೆ ನೀನು ಓದ್ಕೊಂಡ್ರಾಗದಾ?" ಅಮ್ಮ ಹೇಳುವಾಗ ಬಾಯಲ್ಲಿದ್ದದ್ದನ್ನು ಗಬಗಬನೆ ತಿನ್ನುತ್ತಾ ತೊಡೆಯಮೇಲಿಟ್ಟುಕೊಂಡಿದ್ದ ಪುಸ್ತಕವನ್ನು ತಿರುವಿಹಾಕುತ್ತಿದ್ದೆ. ಅಮ್ಮನ ಮಾತು ಕೇಳಿಸಿದ್ದೌದು. ಉತ್ತರಿಸಿದರೆಲ್ಲಿ ಎರಡು ಸಾಲು ಓದುವುದು ತಪ್ಪಿಹೋಗ್ತದೋ ಅಂತ ಸುಮ್ಮನಿದ್ದೆ. 

"ನಾನೇಳಿದ್ದು ಕೇಳಿಸ್ತಾ ಇಲ್ವಾ?" ನನ್ನ ಮೌನಕ್ಕೆ ಅಮ್ಮನ ಜೋರಿನ ಮಾತುಗಳು. 

"ಶ್.‌ ಮೆಲ್ಲಗೆ. ಪಾಪು ನಿದ್ರೆ ಮಾಡ್ತಿದೆ" ಅಪ್ಪನ ಗದರಿಕೆ. 

"ನನಗೆ ಮಾತ್ರ ರೇಗಿ. ಅವಳು ನಾ ಕೇಳಿದ್ರೆ ಬದಲೂ ಹೇಳ್ತಿಲ್ಲ. ಕಾಣಲ್ವ ನಿಮಗೆ" ಅಮ್ಮನ ಗೋಳಾಟ. 

ʻಅಯ್ಯೋ ಅಮ್ಮ. ಸುಮ್ನಿರಿ. ಇಲ್ಲೇನೋ ಓದ್ತಿಲ್ವ! ಇಷ್ಟು ದಿನ ಮಗಳನ್ನೂ ಜೊತೆಗೇ ಕರೆದುಕೊಂಡು ಹೋಗ್ತಿರಲಿಲ್ವ? ಇನ್ನೊಂದೇ ವಾರ ಇರೋದು. ಈಗಷ್ಟೇ ರಿವಿಷನ್‌ ಶುರು ಹಚ್ಕೊಂಡಿದ್ದೀನಿ. ಓದೋಕೆ ಇನ್ನೂ ಬೆಟ್ಟದಷ್ಟಿದೆ. ಎರಡ್‌ ತಿಂಗಳಿಂದ ಓದಿರೋದು ಅದೆಷ್ಟು ನೆನಪಿದೆಯೋ ಏನೋ ಅನ್ನೋದು ಗೊತ್ತಿಲ್ಲ. ಸುಮ್ನೆ ಟೆನ್ಶನ್‌ ಕೊಡ್ಬೇಡಿ ಈಗ. ನಾ ಪಾಸಾಗ್ಬೇಕೋ ಬೇಡ್ವೋ?ʼ 

"ಪಾಸಾಗ್ದೇ ಫೇಲ್‌ ಆಗ್ಲಿ ಅಂತ ಬಯಸ್ತೀನಾ? ಇಲ್ಲೆ ಇನ್ನೊಂದ್‌ ರೂಮಲ್‌ ಓದ್ಕೋ. ನಿನ್ನತ್ರ ಮಗಳನ್ನ ಮಲಗಿಸಿಕೋ ಅಂತೇನೂ ಹೇಳ್ತಿಲ್ಲವಲ್ಲ ನಾನು" ಅಮ್ಮನದೂ ಮತ್ತದೇ ಸಾಲುಗಳು. ಏನಾದ್ರೂ ಮಾತಾಡ್ಕೊಳ್ಳಲಿ, ನನ್ನ ಪಾಡಿಗೆ ನಾ ತಿಂದು ಮುಗಿಸಿ ಎದ್ದು ಹೋಗ್ತೀನಿ ಅಂತ ಸುಮ್ಮನಾದೆ. 

ಜೂನ್ 23, 2020

ಒಂದು ಬೊಗಸೆ ಪ್ರೀತಿ - 68

ಬೆಳಿಗ್ಗೆಯಿಂದ ಓದು ಚೆಂದ ಸಾಗ್ತಿತ್ತು. ಮಧ್ಯಾಹ್ನ ರಾಮ್ ಜೊತೆ ಊಟ ಮುಗಿಸಿ ಮತ್ತೆ ಓದಲು ಕುಳಿತವಳಿಗೆ ಹಿಂದಿನ ವಾರವಷ್ಟೇ ಓದಿದ್ದ ಪಾಠ ಮನಸ್ಸಲ್ಲಿ ಮೂಡಿತು. ಕಳೆದ ವಾರವಷ್ಟೇ ಓದಿದ್ದ ಸಂಗತಿಗಳು ಹೆಚ್ಚು ಕಡಿಮೆ ಮರೆತೇ ಹೋದಂತಾಗಿಬಿಟ್ಟಿತ್ತು! ಇಲ್ಲ ಇಲ್ಲ ನೆನಪಿರ್ತದೆ, ಸುಮ್ನೆ ಹಂಗೆ ಮರೆತಂಗಾಗಿದೆ ಅಷ್ಟೇ ಅಂದಕೊಂಡು ಪುಸ್ತಕ ಮುಚ್ಚಿ ಕಣ್ಣು ಮುಚ್ಚಿ ಓದಿದ್ದ ಪಾಠವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದೆ. ಉಹ್ಞೂ... ನೆನಪಾಗಲೊಲ್ಲದು! ನೂರರಷ್ಟು ಬೇಡ, ಐವತ್ತು ಪರ್ಸೆಂಟ್ ಹೋಕ್ಕೊಳ್ಳಿ ಹತ್ತು ಪರ್ಸೆಂಟ್, ಬೇಡ ಐದು ಪರ್ಸೆಂಟ್... ಉಹ್ಞೂ... ಪಾಠದ ಹೆಸರು ಬಿಟ್ಟು ಮತ್ತೇನೂ ನೆನಪಾಗುತ್ತಿಲ್ಲ. ಸಬ್ ಹೆಡ್ಡಿಂಗ್ಸ್ ನೋಡ್ಕಂಡರೆ ಎಲ್ಲಾ ಪಟ್ಟಂತ ನೆನಪಾಗಿಬಿಡ್ತದೆ ಅಂತ ಧೈರ್ಯ ತಂದುಕೊಂಡು ನಿಧಾನಕ್ಕೆ ಭಯದಿಂದಲೇ ಪಾಠದ ಪುಟ ತಿರುವಿ ಬೇರ್ಯಾವುದರ ಮೇಲೂ ಕಣ್ಣಾಡಿಸದೆ ಇದ್ದ ಆರು ಸಬ್ ಹೆಡ್ಡಿಂಗಿನ ಮೇಲೆ ಕಣ್ಣಾಡಿಸಿದೆ. ಉಹ್ಞೂ.... ಸಬ್ ಹೆಡ್ಡಿಂಗುಗಳಿಗೆ ಕೂಡ ತಲೆಯಲ್ಲಿನ ಬಲ್ಬು ಉರಿಸುವ ಶಕ್ತಿ ಇರಲಿಲ್ಲ. ಅಳುವೇ ಬಂದಂತಾಯಿತು. ಇದು ಹೊಸ ಟಾಪಿಕ್, ಪರೀಕ್ಷೆಗಷ್ಟೇ ಮುಖ್ಯವಾದ ಟಾಪಿಕ್ಕೇನೋ ಹೌದು. ಆದರೆ ಕಳೆದ ವಾರವಷ್ಟೇ ಓದಿದ್ದ ಪಾಠದ ಗತಿಯೇ ಈ ರೀತಿಯಾದರೆ ಇನ್ನೊಂದದಿನೈದು ದಿನದಲ್ಲಿರುವ ಪರೀಕ್ಷೆಯಲ್ಲಿ ಏನು ಬರೆಯುವುದು? ಕಳೆದ ತಿಂಗಳು ಓದಿದ ಪಾಠಗಳ ಗತಿಯೇನು? ಕಳೆದ ತಿಂಗಳು ಓದಿದ ಪಾಠಗಳೆಲ್ಲವೂ ಸ್ಮೃತಿ ಪಟಲದಲ್ಲಿ ಮಿಂಚಿತು, ಪಾಠದೊಳಗಿನ ವಿಷಯಗಳೆಲ್ಲ ಮರೆಯಾಗಿತ್ತು. ಅಳು ಬಂದಂತಾಗುವುದೇನು, ಬಂದೇಬಿಟ್ಟಿತು. ಪುಸ್ತಕವನ್ನು ಬದಿಗೆ ಸರಿಸಿ ಮೇಜಿಗೆ ಹಣೆಕೊಟ್ಟು ಮೇಜನ್ನೊಂದಷ್ಟು ತೇವವಾಗಿಸಿದೆ. ʻಪರವಾಗಿಲ್ಲ ಧರಣಿ, ಇದು ಪರೀಕ್ಷೆ ಸಮಯದಲ್ಲಿ ಮಾಮೂಲಿ. ಎಂಬಿಬಿಎಸ್‌ನಲ್ಲೂ ಇಂತದ್ದು ಎಷ್ಟು ಸಲ ಆಗಿಲ್ಲ. ಕೊನೆಗೆ ಪರೀಕ್ಷೆಯ ದಿನ ಎಲ್ಲವೂ ನೆನಪಾಗೇ ಆಗ್ತದೆ ಅನ್ನೋದನ್ನ ಮರೀಬೇಡ. ಇಲ್ಲೂ ಅಷ್ಟೇ ಆಗಿರೋದು. ಮತ್ತೇನೂ ಅಲ್ಲ. ಗಾಬರಿ ಆಗೋದೇನೂ ಇಲ್ಲ. ಗಾಬರಿ ಆದರೆ ಮುಂದಕ್ಕೆ ಓದಲಾಗುವುದಿಲ್ಲ. ಓದದೇ ಹೋದರೆ ಮತ್ತಷ್ಟು ಗಾಬರಿ ಆಗ್ತದೆ. ಮತ್ತೆ ಓದೋದಿಕ್ಕಾಗುವುದಿಲ್ಲ. ಮತ್ತಷ್ಟು ಗಾಬರಿ. ಅಂತ್ಯವಾಗದ ವೃತ್ತದ ಸುಳಿಗೆ ಸಿಲುಕಬೇಡ. ಒಂದಷ್ಟು ಪಾಠಗಳು ಮರೆತರೇನು, ಇನ್ನೊಂದಷ್ಟು ಪಾಠ ಓದಿ ನಾಳೆ ಹಳೇ ಪಾಠಗಳ ಮೇಲೊಮ್ಮೆ ಕಣ್ಣಾಡಿಸಿದರಾಯಿತು. ಹಳೇದೇ ನೆನಪಿಲ್ಲ, ಹೊಸತು ಮತ್ತೆಲ್ಲಿ ನೆನಪಾಗ್ತದೆ? ಇಲ್ಲಿಲ್ಲ ಇಂತ ಆಲೋಚನೆಗಳನ್ನು ದೂರಕ್ಕೆ ತಳ್ಳುವುದೇ ಸರಿ. ಇಲ್ಲಾಂದ್ರೆ ಮುಗೀತು ಕತೆ. ಫೇಲಾಗ್ತೀನಿ. ಫೇಲಾದ್ರೆ ಮನೇಲಿ ರಾಜೀವನ ಕಿರಿಕಿರಿ! ಹಣದ ಸಮಸ್ಯೆ! ಅಯ್ಯಪ್ಪ... ಅದನ್ನೆಲ್ಲಾ ನೆನೆಸಿಕೊಂಡರೇನೇ ಭಯವಾಗ್ತದೆ. ಸಮಸ್ಯೆಗಳಿಗೊಂದಷ್ಟು ಪರಿಹಾರ ಸಿಗಬೇಕೆಂದರೆ ನಾ ಪಾಸಾಗಲೇಬೇಕು. ಅದಕ್ಕೋಸ್ಕರನಾದರೂ ಓದು ಮುಂದುವರಿಸಲೇಬೇಕು. ಇನ್ನದಿನೈದು ದಿನವಿರುವಾಗ ಅರ್ಧ ದಿನವನ್ನು ಕಳೆದುಕೊಳ್ಳುವುದು ಯುಕ್ತಿಯ ಕೆಲಸವಲ್ಲ. ಕಮಾನ್ ಧರಣಿ ಯು ಕ್ಯಾನ್ ಡು ಇಟ್. ಕಮಾನ್' ಅಂತ ನನಗೆ ನಾನೇ ಹುರಿದುಂಬಿಸಿಕೊಂಡು ತಲೆ ಮೇಲೆತ್ತುವಷ್ಟರಲ್ಲಿ ಅಳು ನಿಂತಿತ್ತು. ಬಿಡದಂತೆ ಒಂದು ಪುಟ ಓದಿ ಮುಗಿಸಿದೆ, ಅದಕ್ಕಿಂತ ಮುಂದಕ್ಕೋಗಲಾಗಲಿಲ್ಲ. ಮನದಲ್ಲಿ ವಿವರಿಸಲಾಗದ ಭೀತಿ. ʻಏನ್ ಅಬ್ಬಬ್ಬಾ ಅಂದ್ರೆ ಆರು ತಿಂಗಳು ಹೋಗ್ತದೆ ಅಷ್ಟೇ. ಅದಕ್ಯಾಕೆ ಇಷ್ಟೊಂದು ಚಿಂತೆ' ಸುಳ್ಳು ಸುಳ್ಳೇ ವೈರಾಗ್ಯದ ಮೊರೆ ಹೊಕ್ಕು ನೋಡಿದೆ. ಉಪಯೋಗವಾಗಲಿಲ್ಲ. ಒಂದ್ ಕಾಫಿ ಕುಡಿದ್ರೆ ಎಲ್ಲಾ ಸರಿ ಹೋಗಿಬಿಡ್ತದೆ ಅನ್ನೋ ಸಂಗತಿ ಹೊಳೆದು ಲವಲವಿಕೆಯಿಂದ ಎದ್ದು ಟಾಯ್ಲೆಟ್ಟಿಗೆ ಹೋಗಿ ಹೊಟ್ಟೆ ಹಗುರಾಗಿಸಿಕೊಂಡು ಕ್ಯಾಂಟೀನಿನಲ್ಲಿ ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿ ಮಾಡಿಸಿಕೊಂಡು ಕುಡಿದೆ. ಓದುವ ಉತ್ಸಾಹ ಮೂಡಿತು. ಲೈಬ್ರರಿಗೆ ಹಿಂದಿರುಗಿದೆ. ಮತ್ತರ್ಧ ಘಂಟೆ ಹಂಗೂ ಹಿಂಗೂ ಕಷ್ಟ ಪಟ್ಟು ಓದಿದೆ. ಮತ್ತದೇ ಹೇಳತೀರದ ಗೋಳು. 

ಜೂನ್ 11, 2020

ಒಂದು ಬೊಗಸೆ ಪ್ರೀತಿ - 67

ಮೊದಲಿಂದಾನೂ ಚೆನ್ನಾಗಿ ಕೆಲ್ಸ ಮಾಡಿದ್ದಾಳೆ ಅನ್ನೋ ಕಾರಣಕ್ಕೋ, ನಮ್ ಆಸ್ಪತ್ರೆಯಲ್ಲೇ ಇದ್ದೋಳಲ್ವ ಅನ್ನೋ ಕಾರಣಕ್ಕೋ ಅಥವಾ ಪಾಪ ಚಿಕ್ ಮಗು ಇಟ್ಕಂಡು ಇಷ್ಟೊಂದ್ ದುಡ್ದಿದ್ದಾಳೆ, ಓದೋಕ್ ಟೈಮ್ ಕೊಡೋದ್ ಬೇಡ್ವೇ ಅನ್ನೋ ಅನುಕಂಪದಿಂದಲೋ ಒಟ್ನಲ್ಲಿ ಥಿಯರಿ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ಡ್ಯೂಟಿಯಿಂದ ರಿಲೀವ್ ಮಾಡಿದ್ರು. "ಅಯ್ಯೋ ಹೆಣ್ಮಕ್ಳಿಗೆ ಬಿಡಪ್ಪ ಸಲೀಸು' ಅಂತ ಜೂನಿಯರ್ ಹುಡುಗ್ರು ಪಿಜಿಗಳು, ʻಅವಳೇನ್ ಕಿಸ್ಕಂಡ್ ಮಾತಾಡ್ತಾಳಲ್ಲ ಅದ್ಕೆ ' ಅಂತ ಜೂನಿಯರ್ ಹುಡ್ಗೀರ್ ಪೀಜಿಗಳು ನಾನಿಲ್ಲದಾಗ ಮಾತಾಡಿಕೊಂಡಿದ್ದು ಸುಮಾಳ ಮೂಲಕ ಕಿವಿಗೆ ಬಿತ್ತು. ಯಾರ್ ಏನ್ ಮಾತಾಡ್ಕಂಡ್ರೇನು, ನನಗೆ ಓದೋಕೆ ಸಮಯ ಸಿಕ್ತಲ್ಲ ಅಷ್ಟು ಸಾಕಿತ್ತು ನನಗೆ. ಡಿ.ಎನ್.ಬಿಯಲ್ಲಿ ಥಿಯರಿ ಪಾಸೋಗೋದ್ ಸಲೀಸು, ಪ್ರ್ಯಾಕ್ಟಿಕಲ್ಸೇ ತಲೆನೋವು ಅಂತ ಎಲ್ರೂ ಹೇಳ್ತಾರೆ. ನಾನೀಗ ಓದಿರೋ ಮಟ್ಟಕ್ಕೆ ಪ್ರ್ಯಾಕ್ಟಿಕಲ್ಸ್ ಇರಲಿ ಥಿಯರಿ ಪಾಸಾಗೋದು ಕೂಡ ಅನುಮಾನವೇ ಸರಿ. ಇನ್ನೆರಡು ತಿಂಗಳು ಬಿಡದೆ ಓದಿದರೆ ತೊಂದರೆಯಿಲ್ಲ ಅನ್ಕೋತೀನಿ. ಆದರೆ ಓದೋದೆಲ್ಲಿ? ಮನೇಲಿ ಕುಳಿತು ಓದಲು ಕಷ್ಟ ಕಷ್ಟ. ಮನೇಲೇ ಇದ್ದೀಯಲ್ಲ, ಮಗಳನ್ನು ಸ್ವಲ್ಪ ಹೊತ್ತು ನೋಡ್ಕೋ ಅಂತ ಅಮ್ಮ ಹೇಳದೆ ಇರಲಾರರು. ಇನ್ನು ರಾಜೀವನಿಗೆ ತಿಂಡಿ ಊಟ ಕಾಫಿ ಟೀ ಅಂತ ಒಂದಷ್ಟು ಸಮಯ ಹಾಳಾಗೋದು ಖಂಡಿತ. ಇಲ್ಲಿ ಆಸ್ಪತ್ರೆಯಲ್ಲಿರೋ ಲೈಬ್ರರಿಗೇ ಬಂದು ಓದಬೇಕು. ಇನ್ನೆಲ್ಲಿ ಕುಳಿತರೂ ಕೆಲಸ ಕೆಡ್ತದೆ ಅಂದುಕೊಂಡೆ. ರಾಜೀವನಿಗೂ ಅದನ್ನೇ ಹೇಳಿದೆ. "ಅದೇ ಸರಿ. ಇಲ್ಲಾಂದ್ರೆ ಎಲ್ಲಿ ಓದೋಕಾಗುತ್ತೆ ಬಿಡು" ಅಂದರು. ಇತ್ತೀಚಿನ ದಿನಗಳಲ್ಲಿ ನಾನು ಅವರು ಯಾವ ಕಿತ್ತಾಟವೂ ಇಲ್ಲದೆ ಒಪ್ಪಿಕೊಂಡ ಸಂಗತಿಯಿದು! "ಸದ್ಯಕ್ಕೆ ನಿಮ್ಮ ಅಮ್ಮನಿಗೆ ಡ್ಯೂಟಿ ರಿಲೀವ್ ಮಾಡಿದ ಬಗ್ಗೆ ಹೇಳಬೇಡ. ಬಿಡುವಾಗಿದ್ರೂ ಬಂದು ಮಗಳನ್ನ ನೋಡದೆ ಓದ್ತಾ ಕೂತಿದ್ದಾಳೆ ಅಂತಂದ್ರೂ ಅಂದ್ರೆ" ಎಂದು ನಕ್ಕರು. ಪರವಾಗಿಲ್ಲ ಚೆನ್ನಾಗೇ ಅರ್ಥ ಮಾಡಿಕೊಂಡಿದ್ದಾರೆ ಅತ್ತೇನ! 

ರಾಜೀವ ಹೇಳಿದಂತೆಯೇ ಅಮ್ಮನಿಗೆ ಹೇಳಲೋಗಲಿಲ್ಲ. ʻಇನ್ನು ಮೇಲೆ ನೈಟ್ ಡ್ಯೂಟಿ ಇರಲ್ಲ. ಸಂಜೆ ಕೆಲಸ ಮುಗಿದ ಮೇಲೆ ಒಂದಷ್ಟು ಸಮಯ ಓದಿಕೊಂಡು ರಾತ್ರಿ ಎಂಟರಷ್ಟೊತ್ತಿಗೆ ಬರ್ತೀನಿ' ಎಂದಿದ್ದಕ್ಕೇ ಅಮ್ಮ ಉರ ಉರ ಅಂದು ಸುಮ್ಮನಾದರು. ಅಮ್ಮ ಏನಂದ್ರೂ ಏನ್ ಬಿಟ್ರು ಸುಮ್ಮನಿರಲೇಬೇಕಾಗಿತ್ತು, ನನ್ನ ಅನಿವಾರ್ಯತೆ. ಲೈಬ್ರರಿಯಲ್ಲಿ ಕುಳಿತು ಓದಿ ಅಭ್ಯಾಸವೇ ಇರಲಿಲ್ಲ ನನಗೆ. ಮುಂಚೆಯಿಂದ ಓದಿದ್ದೆಲ್ಲ ಮನೆಯಲ್ಲೇ. ಈಗ ವಿಧಿಯಿಲ್ಲ, ಹೊಸ ಜಾಗದಲ್ಲಿನ ಓದಿಗೆ ಹೊಂದಿಕೊಳ್ಳಲೇಬೇಕು. ಬೆಳಿಗ್ಗೆ ಐದಕ್ಕೆಲ್ಲ ಎದ್ದು ಒಂದು ಘಂಟೆ ಕಾಲ ಓದಿ, ಕಸ ಗುಡಿಸಿ, ಮನೆ ಒರಸಿ, ಬೆಳಗಿನ ತಿಂಡಿ ಮಾಡಿ ತಿಂದು ನನಗೂ ರಾಜೀವನಿಗೂ ಬಾಕ್ಸಿಗೆ ಹಾಕುವಷ್ಟರಲ್ಲಿ ಎದ್ದಿರುತ್ತಿದ್ದ ಮಗಳಿಗೆ ಸ್ನಾನ ಮಾಡಿಸಿ ಅವಳು ತಿಂದರೊಂದಷ್ಟು ತಿನ್ನಿಸಿ ಅಮ್ಮನ ಮನೆಗೋಗಿ ಮಗಳನ್ನು ಬಿಟ್ಟು ಆಸ್ಪತ್ರೆಯ ಲೈಬ್ರರಿಯನ್ನು ಒಂಭತ್ತಕ್ಕೆ ಮುಂಚೆ ಸೇರಿದರೆ ಮತ್ತೆ ಮೇಲೇಳುತ್ತಿದ್ದದ್ದು ಹನ್ನೊಂದೂವರೆಗೆ ಒಂದು ಕಾಫಿ ಕುಡಿಯುವ ನೆಪದಿಂದ. ಅಪರೂಪಕ್ಕೆ ಸುಮಾ ಜೊತೆಯಗುತ್ತಿದ್ದಳು. ಹೆಚ್ಚಿನ ದಿನ ಅವಳು ಮನೆಯಲ್ಲೇ ಓದಿಕೊಳ್ಳುತ್ತಿದ್ದಳು. ಕೆಲವೊಮ್ಮೆ ರಾಮ್ ಪ್ರಸಾದ್ ದಾರಿಯಲ್ಲಿ ಸಿಕ್ಕರೆ ಜೊತೆಗೆ ಬರುತ್ತಿದ್ದರು. ಲೋಕಾಭಿರಾಮ ಒಂದಷ್ಟು ಮಾತಾಡಿ ಕಾಫಿ ಕುಡಿದು ಮತ್ತೆ ಲೈಬ್ರರಿ ಸೇರಿ ಪುಸ್ತಕದೊಳಗೆ ತಲೆ ತೂರಿಸಿದರೆ ಮತ್ತೆ ತಲೆಯೆತ್ತುತ್ತಿದ್ದದ್ದು ಮಧ್ಯಾಹ್ನ ಒಂದೂವರೆಗೆ ಊಟಕ್ಕೆಂದು ಎದ್ದಾಗ. ತಂದಿದ್ದ ಒಂದು ಪುಟ್ಟ ಬಾಕ್ಸಿನ ತಿಂಡಿ ಸಾಲುತ್ತಿರಲಿಲ್ಲ, ಜೊತೆಗೊಂದು ಬೋಂಡಾನೋ ಮಂಗಳೂರು ಗೋಳಿಬಜ್ಜೀನೊ ತೆಗೆದುಕೊಳ್ಳಲೇಬೇಕು. ಹೆಚ್ಚು ಕಮ್ಮಿ ಪ್ರತಿ ಮಧ್ಯಾಹ್ನ ರಾಮ್ ಪ್ರಸಾದ್ ಅದೇ ಸಮಯಕ್ಕೆ ಕ್ಯಾಂಟೀನಿಗೆ ಬರೋರು, ಜೊತೆಯಾಗೋರು. ಲೈಬ್ರರಿಗೆ ಬಂದರೂ ಹೆಚ್ಚಿನ ಸಮಯ ಮನೆಗೆ ಊಟಕ್ಕೆ ಹೋಗಿಬಿಡುತ್ತಿದ್ದ ಸುಮಾ ಅಪರೂಪಕ್ಕೆ ನನ್ನ ಜೊತೆ ಕ್ಯಾಂಟೀನಿಗೆ ಬಂದಾಗೆಲ್ಲ ರಾಮ್ ಪ್ರಸಾದ್ ಇರೋದನ್ನ ನೋಡಿ "ಅದೇನ್ ನೀ ಊಟಕ್ ಬರೋ ಟೈಮಿಗೇ ಬರ್ತಾರಲ್ಲ ಅವರೂನು" ಅಂತ ಕಾಲೆಳೆಯೋಳು. ʻಅಯ್ಯೋ ಗೂಬೆ. ಕೊ ಇನ್ಸಿಡೆನ್ಸ್ ಅಷ್ಟೆ' ಅಂದರೆ "ಬರೀ ಕೋ ಇನ್ಸಿಡೆನ್ಸಾ...." ಅಂತ ರೇಗಿಸದೆ ಸುಮ್ಮನಿರುತ್ತಿರಲಿಲ್ಲ. 

ಜೂನ್ 4, 2020

ಬೇಸಿಕಲಿ ವಿ ಆರ್‌ ಬ್ಲಡಿ ಹಿಪೋಕ್ರೈಟ್ಸ್‌…



ಡಾ. ಅಶೋಕ್.‌ ಕೆ. ಆರ್ 
ಇತ್ತೀಚೆಗೆ ಚನ್ನಪಟ್ಟಣದಲ್ಲಿ ಕರಡಿಯೊಂದು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿತು… ತುಮಕೂರು ಸಮೀಪದ ಊರಿನಲ್ಲಿ ಮೂರು ವರ್ಷದ ಮಗುವನ್ನು ಚಿರತೆ ಹೊತ್ತೊಯ್ದಿತು…. ಕುಣಿಗಲ್‌ ಸುತ್ತಮುತ್ತ ಹಸು, ಸಾಕಿದ ನಾಯಿಯನ್ನೊತ್ತಯ್ಯಲು ಬರುವ ಚಿರತೆಗಳ ಸಂಖೈ ಹೆಚ್ಚುತ್ತಿದೆ…. ಮೊನ್ನೆ ಕೇರಳದಲ್ಲಿ ಆನೆಯೊಂದು ಸತ್ತಿದೆ…. 

ಕೆಂಗೇರಿ ಹತ್ತಿರ ಕೊಮ್ಮಘಟ್ಟ ಅನ್ನೋ ಊರಿದೆ. ಆ ಊರಿಂದ ಹಿಡಿದು ಒಂದ್ಕಡೆ ಮೈಸೂರು ರಸ್ತೆಯವರೆಗೆ ಇನ್ನೊಂದ್ಕಡೆ ತಾವರೆಕೆರೆಯ ಗಡಿಯವರೆಗೆ ಬೃಹತ್ತಾದ (ಏಷಿಯಾಗೆ ದೊಡ್ಡದು ಅಂತಾರೆ, ಸರಿ ತಿಳಿದಿಲ್ಲ) ಕೆಂಪೇಗೌಡ ಲೇಔಟ್‌ ಆಗಿ ಪರಿವರ್ತನೆ ಆಗಿದೆ. ಗೆಳೆಯ ಅಭಿ ಆ ಕಡೆಯಲ್ಲೊಂದಷ್ಟು ದಿನ ತೋಟವೊಂದನ್ನು ಬಾಡಿಗೆ ಹಿಡಿದಿದ್ದ. ತೆಂಗು, ಮಾವು, ಹಲಸು, ಸಪೋಟಾ ಮರಗಳಿದ್ದ ತೋಟಗಳಲ್ಲೀಗ ಜೆಸಿಬಿಗಳದೇ ಕಲರವ. ತೋಟಗಳ ನಡುವೆ ಅಲ್ಲಲ್ಲಿ ಅನೇಕಾನೇಕ ಕುರುಚಲು ಕಾಡುಗಳೂ ಇದ್ದವು. ʻಇಲ್‌ ಸೈಟ್‌ ಮಾಡಿ, ಜನಕ್‌ ಅವಶ್ಯಕತೆ ಇದೆʼ ಅಂತ ಯಾರಾದ್ರೂ ಅರ್ಜಿ ಹಾಕಿದ್ರಾ? ಖಂಡಿತ ಇಲ್ಲ. ಬಿಡಿಎ ಸೈಟ್‌ ಮಾಡ್ತು, ಆ ಸೈಟುಗಳನ್ನ ಜನ ಕೊಂಡ್ಕೊಂಡೂ ಆಗಿದೆ. ಇನ್ನೇನೀಗ ವಿಶಾಲ ವೆಲ್‌ ಪ್ಲ್ಯಾನ್ಡ್‌ ರಸ್ತೆಗಳೂ, ದೊಡ್ಡ ಮನೆಗಳು, ಶಾಪಿಂಗ್‌ ಕಾಂಪ್ಲೆಕ್ಸುಗಳು ಬರೋ ಸಮಯ. ಅಷ್ಟೊಂದ್‌ ಒಳ್ಳೆ ಫಲವತ್ತಾದ ಭೂಮೀನ ಯಾಕ್ರೀ ಹಾಳುಗೆಡವ್ತೀರ ಅಂತ ಯಾರೂ ಮಾತಾಡಲಿಲ್ಲ. ಆ ಹಳ್ಳಿಗಳಲ್ಲಿನ ಜನ ಕೂಡ ಅದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಕಾರಣ ಎಕರೆಗೆ ತೊಂಭತ್ತು ಲಕ್ಷದವರೆಗೂ ಹಣ ನೀಡುತ್ತಿದ್ದರು. ಹೆಚ್ಚು ಎಕರೆ ಇರುವ ವ್ಯಕ್ತಿ ಒಂದಷ್ಟು ಗುಂಟೆ ಭೂಮಿಯನ್ನು ತನ್ನಲ್ಲೇ ಇಟ್ಟುಕೊಳ್ಳಬಹುದಿತ್ತು. ಅರ್ಧ ಮುಕ್ಕಾಲು ಎಕರೆ ಇದ್ದವರೂ ಕೂಡ ಲಕ್ಷಾಧೀಶರಾದರು. ಎಕರೆಗಿಂತ ಹೆಚ್ಚಿದ್ದವರೆಲ್ಲ ಕೋಟ್ಯಾಧೀಶರಾದರು. ಒಳ್ಳೇ ಅಮೌಂಟು ಸಿಗುವಾಗ ಮಾರುವುದು ಬುದ್ಧಿವಂತಿಕೆಯ ಲಕ್ಷಣ ಎನ್ನುವುದೇ ನಮ್ಮ ಆರ್ಥಿಕತೆಯ ಬುನಾದಿಯಲ್ಲವೇ? 

ಕುಣಿಗಲ್‌ ಮಾಗಡಿ ತುಮಕೂರಿನ ಕಡೆಯ ಎಷ್ಟೋ ಬೆಟ್ಟಗುಡ್ಡಗಳಲ್ಲಿ ಜಲ್ಲಿ ಕಲ್ಲು ಕ್ವಾರಿಗಳಿವೆ. ರಸ್ತೆಗಾಗಿ ಬೇಕಾದ ಜಲ್ಲಿ ಉತ್ಪಾದಿಸಲು ಸ್ಥಳೀಯವಾಗಿ ಶುರುವಾದ ಘಟಕಗಳು ರಸ್ತೆ ಮುಗಿದು ಎಷ್ಟೋ ವರ್ಷ ಕಳೆದ ನಂತರವೂ ಪರವಾನಗಿ ಪಡೆದುಕೊಂಡೋ ಲಂಚ ಕೊಟ್ಟುಕೊಂಡೋ ಕಲ್ಲು ಒಡೆಯುತ್ತಿವೆ. ರಾತ್ರೋ ರಾತ್ರಿ ಸಿಡಿವ ಡೈನಮೈಟು ಶಬ್ದಕ್ಕೆ ಎಲ್ಲರೂ ಬೆಚ್ಚಲೇಬೇಕು. ಇವರ್ಯಾಕೆ ಜಲ್ಲಿ ಹೊಡೀತಿದ್ದಾರೆ? ಇಲ್ಲಿ ಕಟ್ಟಿಸೋ ಹೊಸ ಹೊಸ ಸೈಟು ಅಪಾರ್ಟುಮೆಂಟುಗಳಿಗೆ ಜಲ್ಲಿ ಬೇಕೇ ಬೇಕಲ್ಲ. ಇಷ್ಟೊಂದ್ಯಾಕೆ ಅಪಾರ್ಟ್‌ಮೆಂಟು ಸೈಟು? ಒಂದಾದ ಮೇಲೆ ಒಂದನ್ನು ನಾವು ಕೊಂಡುಕೊಳ್ಳುತ್ತಾ ನಾವು ಸ್ಥಿತಿವಂತರಾಗಬೇಕಲ್ಲ? ಆಗಲೇ ತಾನೇ ಸಮಾಜದಲ್ಲಿ ನಮಗೂ ಒಂದು ʻಸ್ಥಾನಮಾನʼ ಅಂತ ಸಿಗೋದು…. 

ಒಂದು ಬೊಗಸೆ ಪ್ರೀತಿ - 66

ಡಾ. ಅಶೋಕ್.‌ ಕೆ. ಆರ್.‌
ಸದ್ಯ ರಾಧ ಯಾವುದೇ ಹೆಚ್ಚು ತೊಂದರೆಗಳಿಲ್ಲದೆ ಎರಡು ದಿನದಲ್ಲಿ ಗೆಲುವಾಗಿಬಿಟ್ಟಳು. ಅಷ್ಟರಮಟ್ಟಿಗೆ ನನಗೂ ನಿರಾಳ. ಇಲ್ಲವಾದರೆ ಆಸ್ಪತ್ರೆಗೆ ರಜೆ ಹಾಕಿ ಮಗಳನ್ನು ನೋಡಿಕೊಳ್ಳುವುದು ಕಷ್ಟವಾಗಿಬಿಡುತ್ತಿತ್ತು. ರಾಜೀವ ನೆಪಕ್ಕೆ ನಿನ್ನೆ ಬಂದು ಹೋಗಿದ್ದ. ನನ್ನೊಡನೆ ಮಾತುಕತೆಯಿರಲಿಲ್ಲ. ಅಮ್ಮನೊಡನೆ ಹು ಉಹ್ಞೂ ಎಂದಷ್ಟೇ ಮಾತನಾಡಿ ಹೊರಟುಬಿಟ್ಟ. ಏನಕ್ಕೆ ಈ ರೀತಿಯಾಗ್ತಿದೆಯೋ ಗೊತ್ತಿಲ್ಲ. ತೀರ ಜಗಳವಾಗುವಂತದ್ದೇನೂ ಇತ್ತೀಚೆಗೆ ನಡೆದೂ ಇಲ್ಲ. ಆದರೂ ಯಾಕೋ ನನ್ನ ಕಂಡರೆ ಅವರಿಗೆ ಮುನಿಸು, ಮಗಳನ್ನು ಕಂಡರಂತೂ ಬೇಡದ ಸಿಟ್ಟು. ಅವರಿಗೆ ಓದಿಗೆ ತಕ್ಕ ಕೆಲಸ ಸಿಗದಿದ್ದರೆ ನಾ ಹೇಗೆ ಹೊಣೆಯಾಗ್ತೀನಿ? ಅನ್ನೋ ಪ್ರಶ್ನೆಗೆ ಮದುವೆಯಾದಂದಿನಿಂದ ಉತ್ತರ ಹುಡುಕಲೆತ್ನಿಸುತ್ತಿದ್ದೀನಿ, ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಅವರ ಓದಿಗೆ ತಕ್ಕ ಕೆಲಸ ಸಿಕ್ಕಿ, ನನ್ನ ಓದಿಗೆ ತಕ್ಕ ಕೆಲಸ ಸಿಗದೇ ʻನಡೀರಿ ಈ ಊರು ಬೇಡ. ಬೇರೆ ಊರಿಗೆ, ನನಗೆ ಸರಿಯಾದ ಕೆಲಸ ಸಿಗುವ ಊರಿಗೆ ಹೋಗುವʼ ಎಂದೇನಾದರೂ ನಾ ಹೇಳಿದ್ದರೆ ಅವರು ಒಪ್ಪಿ ಬಿಡುತ್ತಿದ್ದರಾ? ಖಂಡಿತ ಇಲ್ಲ. "ನಾ ದುಡೀತಿಲ್ವ. ಮುಚ್ಕಂಡ್‌ ಮನೇಲ್‌ ಬಿದ್ದಿರು, ಮಗು ನೋಡ್ಕಂಡು" ಅಂತಾನೋ ಅಥವಾ ಮೂಡು ಚೆನ್ನಾಗಿದ್ದಾಗ "ನಾ ದುಡೀತಿದ್ದೀನಲ್ಲ ಡಾರ್ಲಿಂಗ್.‌ ನೀ ಆರಾಮಿರು ಮನೇಲಿ" ಅಂತಾನೋ ಹೇಳಿ ಪುಸಲಾಯಿಸುತ್ತಿದ್ದರು. 

ಹೊಕ್ಕೊಳ್ಲಿ ನನಗೇನೂ ತೀರ ಮೈಸೂರಲ್ಲೇ ಇರಬೇಕು, ಬೆಂಗಳೂರಿಗೆ ಯಾವುದೇ ಕಾರಣಕ್ಕೂ ಹೋಗಲೇಬಾರದು ಅಂತೇನೂ ಇಲ್ಲ. ಒಳ್ಳೆ ಕೆಲಸ ಸಿಕ್ಕಿದರೆ ಮೈಸೂರಾದರೇನು, ಬೆಂಗಳೂರಾದರೇನು? ಎರಡೂ ಕಡೆ ನಡೀತದೆ. ಬರೀ ಎಂ.ಬಿ.ಬಿ.ಎಸ್‌ ಇಟ್ಕಂಡು ಬೆಂಗಳೂರಿಗೆ ಹೋಗೋ ಯೋಚನೆ ನನ್ನಲಿರಲಿಲ್ಲ. ಈ ಡಿ.ಎನ್.ಬಿಗೆ ಸೇರುವಾಗಲಾದರೂ ಪೂರ್ತಿ ಫೀಸು ಕಟ್ಟಿಬಿಟ್ಟಿದ್ದರೆ ಮುಗಿಸಿದ ತಕ್ಷಣ ಹೊರಡಬಹುದಿತ್ತೇನೋ, ಪೂರ್ತಿ ಫೀಸು ಕಟ್ಟಲು ಹಣವಿರಲಿಲ್ಲ, ಅವರಪ್ಪನ ಮನೇಲಿ ಹಣ ತರುವ ಮನಸ್ಸು ಇವರಿಗೂ ಇರಲಿಲ್ಲ. ಈಗ ವಿಧಿಯಿಲ್ಲ, ಇದೇ ಆಸ್ಪತ್ರೆಯಲ್ಲಿ ಬಾಂಡ್‌ ಪೂರೈಸಲೇಬೇಕು. ಒಂದ್‌ ವೇಳೆ ಪೂರ್ತಿ ಫೀಸು ಕಟ್ಟಿದ್ರೆ ತಾನೇ ಮೈಸೂರು ಬಿಟ್ಟೋಗಲು ಸಾಧ್ಯವಾಗ್ತಿತ್ತಾ? ಚಿಕ್ಕ ಮಗಳನ್ನು ಕಟ್ಟಿಕೊಂಡು. ಹೆಂಗೋ ಅಮ್ಮನ ಮನೆ ಹತ್ತಿರವಿದೆ, ಮಗಳನ್ನು ನೋಡಿಕೊಳ್ತಾರೆ. ಈ ಕಾರಣದಿಂದಲೇ ಅಲ್ಲವೇ ನಾನು ಓದಿಕೊಂಡು ಆಸ್ಪತ್ರೆಗೆ ಹೋಕ್ಕೊಂಡು ಇರೋಕೆ ಆಗಿರೋದು. ಅಮ್ಮನ ಮನೆ ಬೇರೆ ಕಡೆಯಿದ್ದಿದ್ದರೆ ಇದು ತಾನೇ ಎಲ್ಲಿ ಸಾಧ್ಯವಾಗುತ್ತಿತ್ತು. ರಾಜೀವನ ಮನೆಯವರಂತೂ ಮೊಮ್ಮಗಳನ್ನು ನೋಡಲು ಬರುವುದು ಅಪರೂಪದಲ್ಲಿ ಅಪರೂಪ. ಮಗಳಿಗಿಂಗೆ ಹುಷಾರಿಲ್ಲ ಅಂತ ರಾಜೀವ ಅವರ ಮನೆಯವರಿಗೆ ಹೇಳದೇ ಇರ್ತಾರಾ? ಹೇಳೇ ಇರ್ತಾರೆ. ಆದರೂ ನೋಡಲೊಬ್ಬರೂ ಬಂದಿಲ್ಲ. ಅಥವಾ ಇವರೇ ಹೇಳಿಲ್ಲವೋ? ತಿಳಿದುಕೊಳ್ಳುವುದೇಗೆ? ತಿಳಿದು ಆಗಬೇಕಾಗಿರುವುದಾದರೂ ಏನು. 

ಮೇ 24, 2020

ಒಂದು ಬೊಗಸೆ ಪ್ರೀತಿ - 65

ರಾಜೀವ ಅವತ್ತು ರಾತ್ರಿಯಾದರೂ ಬರಲಿಲ್ಲ. ಫೋನೂ ಮಾಡಲಿಲ್ಲ. ಮನೆಯಲ್ಲಿ ಅಮ್ಮ ಎಲ್ಲಿ ಅವರು ಎಲ್ಲಿ ಅವರು? ಎಂದು ಕೇಳಿದ್ದೇ ಕೇಳಿದ್ದು. ʻಅವರ ನಂಬರ್‌ ನಿಮ್ಮತ್ರವೇ ಇದ್ಯಲ್ಲ. ನೀವೇ ಫೋನ್‌ ಮಾಡಿ ವಿಚಾರಿಸಿಕೊಳ್ಳಿʼ ಎಂದು ರೇಗಿದ ಮೇಲೆಯೇ ಅಮ್ಮ ಸುಮ್ಮನಾಗಿದ್ದು. ಸುಮ್ಮನಾಗುವ ಮುಂಚೆ "ಗಂಡ ಹೆಂಡತಿ ಗಲಾಟೆ ಏನಾದ್ರೂ ಇರಲಿ. ಮಗಳು ಹುಷಾರಿಲ್ಲಾಂತನಾದ್ರೂ ಬರಬಾರದಾ?" ಎಂದು ಗೊಣಗಿಕೊಂಡರು. 

ಬೆಳಿಗ್ಗೆ ಎದ್ದವಳೇ ಮೊಬೈಲ್‌ ಕೈಗೆತ್ತಿಕೊಂಡು ʻಮಗಳನ್ನು ನೋಡೋಕಂತೂ ಬರಲಿಲ್ಲ. ಕೊನೇ ಪಕ್ಷ ಬಂದು ಕೈಗೊಂದಷ್ಟು ದುಡ್ಡಾದರೂ ಕೊಟ್ಟು ಹೋಗಿ. ರಾಮ್‌ಪ್ರಸಾದ್‌ಗೆ ಹಣ ವಾಪಸ್ಸು ಮಾಡಬೇಕು. ಅಪ್ಪನಿಗೂ ದುಡ್ಡು ಕೊಡೋದಿದೆʼ ಎಂದು ಮೆಸೇಜು ಮಾಡಿದೆ. ಪ್ರತಿಕ್ರಿಯೆ ಬರಲಿಲ್ಲ. ಬರುವ ನಿರೀಕ್ಷೆಯೂ ಇರಲಿಲ್ಲ. ಹಣ ತೆಗೆದುಕೊಂಡೂ ಇವರು ಬರದೇ ಹೋದಲ್ಲಿ ಶಶಿ ಹತ್ರ ದುಡ್ಡು ತೆಗೆದುಕೊಂಡು ರಾಮ್‌ಪ್ರಸಾದ್‌ಗೆ ಕೊಟ್ಟುಬಿಡಬೇಕು ಎಂದುಕೊಂಡೆ. ಮಗಳು ಲವಲವಿಕೆಯಿಂದಿದ್ದಳು. ʻಡ್ಯೂಟಿಗೆ ಹೋಗ್ಲಾ ಪುಟ್ಟʼ ಎಂದಿದ್ದಕ್ಕೆ ಹು ಎಂಬಂತೆ ತಲೆಯಾಡಿಸಿದ್ದಳು. "ಇವತ್ತೊಂದಿನ ರಜಾ ಹಾಕಂಡಿದ್ರಾಗ್ತಿರಲಿಲ್ಲವಾ" ಎಂಬ ಅಮ್ಮನ ಸಲಹೆಗೆ ಅಪ್ಪ "ಅವಳಿಗೆಂಗಿದ್ರೂ ಮಗು ನೋಡ್ಕೊಳ್ಳೋಕ್‌ ಬರಲ್ವಲ್ಲೇ. ಅವಳಿದ್ದು ಏನಾಗಬೇಕಿದೆ. ನೀನಿದೀಯಲ್ಲ ಎಕ್ಸ್ಪರ್ಟು" ಎಂದು ನಗಾಡಿದ್ದರು. "ನಾನು ಅಂದ್ರೆ ನಿಮ್ಮಲ್ರಿಗೂ ಸಸಾರ" ಅಮ್ಮ ನಕ್ಕು ನುಡಿದಿದ್ದಳು. ತಿಂಡಿ ತಿನ್ನುವ ಹೊತ್ತಿಗೆ ರಾಜೀವ ಮನೆಗೆ ಬಂದು ಮಗಳ ಬಳಿ ಹೋಗಿ ಹೆಸರಿಗೊಮ್ಮೆ ಮಾತನಾಡಿಸಿ ಅಲ್ಲೇ ಟೀಪಾಯಿಯ ಮೇಲೆ ದುಡ್ಡಿಟ್ಟು ಹೊರಟುಹೋದರು. ನನ್ನ ಜೊತೆ ಒಂದು ಮಾತಿಲ್ಲದೆ, ತಿಂಡಿ ತಿನ್ನಿ ಅಂದ ಅಮ್ಮನ ಮಾತಿಗೂ ಉತ್ತರ ನೀಡದೆ ಹೊರಟು ಹೋದರು. ಕೋಪದಲ್ಲಿ ನನ್ನ ಡೆಬಿಟ್‌ ಕಾರ್ಡನ್ನೂ ಇಟ್ಟುಬಿಟ್ಟಿದ್ದಾರೋ ಏನೋ ಎಂದುಕೊಂಡು ಟೀಪಾಯಿಯ ಕಡೆಗೆ ಕಣ್ಣಾಡಿಸಿದೆ. ಇರಲಿಲ್ಲ. ಹಣ ಮಾತ್ರವಿತ್ತು. 

ಮೇ 10, 2020

ಒಂದು ಬೊಗಸೆ ಪ್ರೀತಿ - 64

ರಾಧ ಬೇಗ ಚೇತರಿಸಿಕೊಂಡಳು. ವಾಂತಿ ಪೂರ್ತಿ ನಿಂತು ಹೋಗಿತ್ತು. ಚೂರ್‌ ಚೂರ್‌ ಭೇದಿಯಾಗುತ್ತಿತ್ತು. ಅಮ್ಮ ತಂದ ಅಷ್ಟೂ ಗಂಜಿಯನ್ನು ತಿಂದು ಮುಗಿಸಿದ್ದಳು. ಜೊತೆಗೊಂದು ಸೇಬಿನಹಣ್ಣು ತಿಂದಳು. ಸಾಕಷ್ಟು ನೀರು ಕುಡಿದಳು. ಪ್ರಶಾಂತ್‌ ಡಾಕ್ಟರ್‌ ಹನ್ನೊಂದರಷ್ಟೊತ್ತಿಗೆ ರೌಂಡ್ಸಿಗೆ ಬಂದವರು. "ಆರಾಮಿದ್ದಾಳಲ್ಲ ಮಗಳು. ಸಾಕಿನ್ನು ಆಸ್ಪತ್ರೆ. ನಿಮಗೇ ಗೊತ್ತಿರುತ್ತಲ್ಲ. ಆಸ್ಪತ್ರೆಯಲ್ಲೇ ಅರ್ಧ ಹೊಸ ಹೊಸ ಖಾಯಿಲೆ ಶುರುವಾಗಿಬಿಡ್ತವೆ ಈಗೆಲ್ಲ. ಡಿಸ್ಚಾರ್ಜ್‌ ಮಾಡಿಸಿಕೊಂಡು ಹೋಗಿ. ಬೇಕಿದ್ರೆ ಇವತ್ತೊಂದಿನ ವ್ಯಾಸೋಫಿಕ್ಸ್‌ ಇರಲಿ. ಜಾಸ್ತಿ ಏನೂ ತಿನ್ನಲಿಲ್ಲ ಕುಡಿಯಲಿಲ್ಲ ಅಂದ್ರೆ ಮನೆಯಲ್ಲೇ ಒಂದು ಐ.ವಿ ಹಾಕೊಳ್ಳಿ. ಬೇಕಾಗಲ್ಲ. ಇರಲಿ ಒಂದು ದಿನದ ಮಟ್ಟಿಗೆ" ಎಂದೇಳಿ ಹೋದರು. 

ಅಪ್ಪ ಹೋಗಿ ಉಳಿಕೆ ಬಿಲ್ಲು, ಫಾರ್ಮಸಿಯ ಬಿಲ್ಲನ್ನು ಕಟ್ಟಿ ಬರುವಷ್ಟರಲ್ಲಿ ಡಿಸ್ಚಾರ್ಜ್‌ ಸಮ್ಮರಿ ತಯಾರಾಗಿತ್ತು. ಹನ್ನೆರಡರಷ್ಟೊತ್ತಿಗೆ ಆಸ್ಪತ್ರೆಯಿಂದ ಹೊರಟೆವು. 

"ನಿಮ್ಮ ಮನೆಗ್ಯಾಕೆ ನಮ್ಮಲ್ಲೇ ಇರಲಿ. ನಿನಗೆಲ್ಲಿ ಗಂಜಿ ಅಂಬಲಿ ಎಲ್ಲಾ ನೆಟ್ಟಗೆ ಮಾಡೋಕೆ ಬರ್ತದೆ" ಅಮ್ಮನ ಮಾತಿಗೆ ನಾನು ಅಪ್ಪ ನಕ್ಕೆವು. ಅಮ್ಮನ ಮನೆಗೇ ಮಗಳನ್ನು ಕರೆದುಕೊಂಡು ಹೋದೆ. ಮಗಳ ಬಟ್ಟೆ ಬರೆ ವಗೈರೆಗಳೆಲ್ಲವೂ ನಮ್ಮ ಮನೆಯಲ್ಲೇ ಇದ್ದುವಲ್ಲ. ಮಗಳು ಇನ್ನೊಂದು ಸ್ವಲ್ಪ ಗಂಜಿ ಕುಡಿದು ಮಲಗಿದ ಮೇಲೆ ಮನೆ ಕಡೆ ಹೋಗಿ ಬರ್ತೇನೆ ಎಂದ್ಹೇಳಿ ಹೊರಟೆ. ಮನೆ ತಲುಪಿ ನಿನ್ನೆ ಮಾಡಿದ್ದ ಅಡುಗೆಯ ಪಾತ್ರೆಗಳನ್ನೆಲ್ಲ ತೊಳೆದಿಡುವಾಗ ರಾಜೀವನ ಫೋನು ಬಂತು "ಎಲ್ಲಿದ್ದೀಯಾ? ಯಾವ ರೂಮು?" 

ʻರೂಮಾ?! ನಾವಾಗಲೇ ಡಿಸ್ಚಾರ್ಜ್‌ ಮಾಡಿಸಿಕೊಂಡು ಮನೆಗೆ ಬಂದೊ!ʼ 

"ಡಿಸ್ಚಾರ್ಜ್‌ ಮಾಡಿಸಿಕೊಂಡೋದ್ರ..... ಎಲ್ಲಿದ್ದೀರಾ ಈಗ?" 

ʻಅಮ್ಮನ ಮನೆಗೆ ಹೋದೆವು. ರಾಧ ಅಲ್ಲೇ ಮಲಗಿದ್ದಾಳೆ. ನಾ ಮನೆಗೆ ಬಂದೆ, ಒಂದಷ್ಟು ಬಟ್ಟೆ ಬರೆ ಮಾತ್ರೆಗಳನ್ನೆಲ್ಲ ತೆಗೆದುಕೊಂಡು ಹೋಗಬೇಕಿತ್ತುʼ 

"ಸರಿ ಬರ್ತೀನಿರು ಅಲ್ಲಿಗೇ" 

ಪಾತ್ರೆ ತೊಳೆದಿಟ್ಟು ಸ್ಟೌವ್‌ ಒರೆಸಿ ಮಗಳ ಬಟ್ಟೆ, ನನ್ನವೊಂದೆರಡು ಜೊತೆ ಬಟ್ಟೆ ಜೋಡಿಸಿಕೊಳ್ಳುವಾಗ ರಾಜೀವ ಮನೆಗೆ ಬಂದರು. ಬಾಗಿಲು ತೆಗೆದು ಒಂದೂ ಮಾತನಾಡದೆ ರೂಮಿನೊಳಗೋದೆ. 

ಮೇ 4, 2020

ಒಂದು ಬೊಗಸೆ ಪ್ರೀತಿ - 63

ಸಿಸ್ಟರ್‌ ಹೋದ ಮೇಲೆ ಹೊರಗೆ ಬಂದು ನೋಡಿದೆ. ರಾಮ್ ಪ್ರಸಾದ್‌ ಅಲ್ಲೇ ಹೊರಗಿದ್ದ ಬೆಂಚಿನಂತ ಕುರ್ಚಿಯ ಮೇಲೆ ಕುಳಿತು ನಿದ್ರೆ ಹೋಗಿದ್ದರು. ಅಯ್ಯೋ ಪಾಪ, ಇವರ ಬಗ್ಗೆ ಸುಖಾಸುಮ್ಮನೆ ಮುನಿಸು ಬೆಳೆಸಿಕೊಂಡಿದ್ನಲ್ಲ. ರಾಜೀವನ ಜೊತೆ ಒಂದಷ್ಟು ಕುಡಿದಿರುವುದು ಬಿಟ್ಟರೆ ನಮಗಿರುವ ಪರಿಚಯ ಅಷ್ಟಕಷ್ಟೇ. ಆಸ್ಪತ್ರೆಯಲ್ಲಿ ಅಪರೂಪಕ್ಕೆ ಸಿಕ್ಕಾಗ ಒಂದು ನಗು, ಒಂದು ಹಾಯ್‌ ಹೊರತುಪಡಿಸಿದರೆ ಮಾತನಾಡಿದ್ದೂ ಇಲ್ಲ. ತೀರ ಇತ್ತೀಚೆಗೆ ನಮ್ಮ ಮನೆಯಲ್ಲೇ ಕುಳಿತು ಕುಡಿಯುತ್ತಿದ್ದುದನ್ನು ನೋಡಿ ಸಿಟ್ಟು ಬಂದ ಮೇಲೆ ಎದುರಿಗೆ ಸಿಕ್ಕಾಗ ಪರಿಚಯದ ನಗು ನಗುವುದನ್ನೂ ಕಡಿಮೆ ಮಾಡಿಬಿಟ್ಟಿದ್ದೆ. ಹತ್ತಿರ ಹೋಗಿ ʼರಾಮ್‌ಪ್ರಸಾದ್‌ʼ ಎಂದು ಕೂಗಿದೆ. ಅರೆನಿದ್ರೆಯಲ್ಲಿದ್ದರೆನ್ನಿಸುತ್ತೆ ಪಟ್ಟಂತ ಎದ್ದು ಬಿಟ್ಟರು. 

"ಈಸ್‌ ಎವೆರಿತಿಂಗ್‌ ಓಕೆ" ಎಂದವರ ದನಿಯಲ್ಲಿ ರಾಧಳ ಕುರಿತು ಕಾಳಜಿಯಿತ್ತು. 

ʼಹು. ಮಗಳು ಮಲಗಿದ್ದಾಳೆ. ಸಿಸ್ಟರ್‌ ಈಗಷ್ಟೇ ಮತ್ತೊಂದು ಡ್ರಿಪ್‌ ಬದಲಿಸಿ ಹೋದರು. ಪುಣ್ಯಕ್ಕೆ ಆಗಿಂದ ವಾಂತಿ ಭೇದಿಯಾಗಿಲ್ಲ. ಅಷ್ಟರಮಟ್ಟಿಗೆ ಹುಷಾರಾದಂತಿದ್ದಾಳೆʼ 

"ಗುಡ್‌ ಗುಡ್.‌ ಹೆಂಗೋ ಸರಿ ಹೋದರೆ ಸಾಕು. ಚಿಕ್ಕ ಮಕ್ಕಳು ಹುಷಾರು ತಪ್ಪಿದರೆ ವಿಪರೀತ ಗಾಬರಿಯಾಗ್ತದೆ" 

ʼಅದ್‌ ಹೌದು. ನೀವ್ಯಾಕೆ ಮನೆಗೆ ಹೋಗದೆ ಇಲ್ಲೇ ಕುಳಿತುಬಿಟ್ರಿʼ 

"ಅಯ್ಯೋ. ನೀವೂ ಒಬ್ಬರೇ ಇದ್ರಲ್ಲ. ಏನಾದ್ರೂ ಬೇಕಾದರೆ ಅಂತ ಇಲ್ಲೇ ಉಳಿದೆ" 

ʼಒಳಗೇ ಇನ್ನೊಂದು ಮಂಚವಿತ್ತಲ್ಲ. ಅಲ್ಲೇ ಮಲಗೋದಲ್ವʼ 

"ಹೇ ಇರಲಿ. ಪರವಾಗಿಲ್ಲ" 

ʼಈಗೇನು ಹುಷಾರಾಗಿದ್ದಾಳಲ್ವ. ನೀವ್‌ ಹೋಗಿ ಮನೆಗೆ. ವೃಥಾ ತೊಂದರೆಯಾಯಿತು ನಮ್ಮಿಂದ ನಿಮಗೆʼ 

"ಅಯ್ಯೋ. ತೊಂದರೆ ಏನಿದೆ. ಮನೆ ಎಲ್ಲಿದೆ. ನಾ ರೂಂ ಮಾಡಿಕೊಂಡಿರೋದು ಇಲ್ಲಿ" 

ʼಓʼ 

ಸಮಯ ನೋಡಿದರು. ಒಂದೂವರೆಯಾಗಿತ್ತು. "ಸರಿ ಆಗಿದ್ರೆ. ನಾ ರೂಮಿಗೆ ಹೋಗಿ ಬರ್ತೀನಿ. ಹೇಗೂ ಹುಷಾರಾಗಿದ್ದಾಳಲ್ಲ. ಏನಾದ್ರೂ ಇದ್ರೆ ಫೋನ್‌ ಮಾಡಿ. ಇಲ್ಲೇ ಕಾಲು ಘಂಟೆ ನನ್ನ ರೂಮಿರೋದು. ಪಟ್ಟಂತ ಬಂದುಬಿಡ್ತೀನಿ" 

ಏಪ್ರಿ 26, 2020

ಒಂದು ಬೊಗಸೆ ಪ್ರೀತಿ - 62

ಪ್ರಶಾಂತ್‌ ನರ್ಸಿಂಗ್‌ ಹೋಮ್‌ ತಲುಪುವಷ್ಟರಲ್ಲಿ ರಾಜೀವ ಆಸ್ಪತ್ರೆಯ ಫಾರ್ಮಸಿಯಲ್ಲಿದ್ದ ತನ್ನ ಗೆಳೆಯನಿಗೆ ನಾ ಬರುವ ವಿಷಯ ತಿಳಿಸಿದ್ದರು. ನಾ ಅಡ್ಮಿಶನ್‌ ಮಾಡಿಸುವಾಗ ಆದರ್ಶ್‌ ಹೆಸರಿನ ಆ ವ್ಯಕ್ತಿ ಬಂದು "ಔಷಧಿ ದುಡ್ಡೆಲ್ಲ ಆಮೇಲ್‌ ಕೊಡೂರಿ ಮೇಡಂ. ಸದ್ಯ ಅಡ್ಮಿಷನ್‌ ದುಡ್ಡು ಕೊಟ್ಟುಬಿಡಿ. ಇಲ್ಲಾಂದ್ರೆ ಸುಮ್ನೆ ತರ್ಲೆ ಮಾಡ್ತಾರೆ ಇಲ್ಲಿ" ಎಂದು ಬಿಟ್ಟಿ ಸಲಹೆ ನೀಡಿದರು. ಅಡ್ಮಿಷನ್ನಿಗೆ ಐದು ಸಾವಿರ ಕಟ್ಟಬೇಕೆಂದರು. ನನ್ನ ಪರ್ಸಿನಲ್ಲಿದ್ದಿದ್ದು ಒಂದೂವರೆ ಸಾವಿರ ರುಪಾಯಿ ಮಾತ್ರ. ಹಿಂಗಿಂಗೆ, ನಾನೂ ಡಾಕ್ಟರ್ರೇ. ಅರ್ಜೆಂಟಲ್ಲಿ ಕಾರ್ಡೆಲ್ಲ ತರೋದು ಮರೆತೆ. ನನ್ನ ಹಸ್ಬೆಂಡು ಬಂದು ಕಟ್ತಾರೆ ಅಂದೆ. ಡಾಕ್ಟರ್‌ ಅಂತ ತಿಳಿದ ಮೇಲೆ ಮುಖದ ಮೇಲೆ ನಗು ತಂದುಕೊಂಡು "ಓಕೆ ಮೇಡಂ. ಟ್ರೀಟ್ಮೆಂಟ್‌ ಹೇಗಿದ್ರೂ ಶುರುವಾಗಿದ್ಯಲ್ಲ. ಆಮೇಲ್‌ ಬಂದ್‌ ಕಟ್ಟಿ. ಸದ್ಯ ಇರೋದನ್ನ ಕಟ್ಟಿರಿ ಸಾಕು ಎಂದರು" 

ರಾಧಳ ಕೈಯಿಗೆ ವ್ಯಾಸೋಫಿಕ್ಸ್‌ ಹಾಕಿ ಐ.ವಿ ಫ್ಲೂಯಿಡ್ಸ್‌ ಶುರು ಮಾಡಿದರು. ಇನ್ನೇನು ವಾಂತಿ ಭೇದಿಗೆ ಹೆಚ್ಚು ಔಷಧಿಯಿಲ್ಲವಲ್ಲ. ದೇಹದ ನೀರಿನಂಶ ಅಪಾಯ ಮಟ್ಟಕ್ಕೆ ಕುಸಿಯದಂತೆ ನೋಡಿಕೊಂಡರೆ ಸಾಕು. ಜ್ವರ ಇದ್ದಿದ್ದರಿಂದ ಒಂದು ಯಾಂಟಿಬಯಾಟಿಕ್‌, ವಾಂತಿಗೊಂದು ಇಂಜೆಕ್ಷನ್‌ ನೀಡಿದರು. ಸುಸ್ತಿನಿಂದ ನಿದ್ರೆ ಹೋಗಿದ್ದಳು ರಾಧ. ಅಲ್ಲಿಂದಲೇ ರಾಜೀವನಿಗೊಂದು ಫೋನು ಮಾಡಿದೆ ಸುಮಾರೊತ್ತು ರಿಂಗಾದ ಬಳಿಕ ಫೋನೆತ್ತಿಕೊಂಡರು. 

ʼಎಲ್ಲಿದ್ದೀರಾ?ʼ 

"ಇಲ್ಲೇ" 

ʼಬಂದ್ರಾʼ 

"ಇಲ್ಲ" 

ʼಯಾಕೆ?ʼ 

"ಯಾಕೋ ಕುಡಿದಿದ್ದು ಜಾಸ್ತಿ ಆದಂಗಿದೆ. ಬರೋಕಾಗಲ್ಲ" 

ಏಪ್ರಿ 19, 2020

ಒಂದು ಬೊಗಸೆ ಪ್ರೀತಿ - 61

ಊಟಿ, ಕೊಡೈ, ಮುನ್ನಾರ್‌, ಕೊಡಗು ನೋಡಿದ್ದ ನನಗಾಗಲೀ ರಾಜೀವನಿಗಾಗಲೀ ಯರ್ಕಾಡು ಅಷ್ಟೇನೂ ಆಕರ್ಷಣೀಯವೆನ್ನಿಸಲಿಲ್ಲ. ಇಲ್ಲೆಲ್ಲ ಇರುವಷ್ಟು ದಟ್ಟ ಕಾಡುಗಳಾಗಲೀ ಕಣ್ಣು ಚಾಚುವವರೆಗೂ ಹರಡಿಕೊಂಡಿರುವ ಟೀ ಕಾಫಿ ಎಸ್ಟೇಟುಗಳಾಗಲೀ ಯರ್ಕಾಡಿನಲ್ಲಿರಲಿಲ್ಲ. ನಮಗೆ ರುಚಿಸದ ಯರ್ಕಾಡು ಮಗಳಿಗೆ ವಿಪರೀತ ಇಷ್ಟವಾಯಿತು. ಕಿರಿಯೂರು ಜಲಪಾತವನ್ನು ಅಚ್ಚರಿಯ ಕಂಗಳಿಂದ ನೋಡಿದಳು, ಅದಕ್ಕಿಂತ ಹೆಚ್ಚು ಇಷ್ಟವಾಗಿದ್ದು ಎಮೆರಾಲ್ಡ್‌ ಕೆರೆಯಲ್ಲಿ ಬೋಟಿಂಗ್‌ ಹೋಗಿದ್ದು. ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು. ಸಾಗರನ ಮದುವೆ ಮೂಡಿಸಿದ ಮಿಶ್ರಭಾವಗಳನ್ನು ರಾಧಳ ಖುಷಿ ದೂರಾಗಿಸಿತು. ಅದಕ್ಕಿಂತ ಖುಷಿ ರಾಜೀವ ರಾಧಳೊಡನೆ ಖುಷಿಖುಷಿಯಾಗಿ ಆಟವಾಡಿದ್ದು. ಅಪ್ಪ ಮಗಳು ಹಿಂಗೇ ಇರಬಾರದಾ? 

ಯರ್ಕಾಡಿನಿಂದ ಹೊರಟಾಗ ಮಧ್ಯಾಹ್ನ ಮೂರರ ಮೇಲಾಗಿತ್ತು. 'ಬೆಂಗಳೂರು ತಲುಪೋದೆ ಸುಮಾರೊತ್ತಾಗ್ತದೆ ನಡೀರಿ ನನ್ನ ಕಸಿನ್ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಹೋಗುವ' ಅಂದಿದ್ದೇ ತಡ ರಾಜೀವನ ಗೊಣಗಾಟ ಸಣ್ಣದಾಗಿ ಶುರುವಾಯಿತು. ತೀರ ಅನಿರೀಕ್ಷಿತವೇನಲ್ಲ! ನಮ್ಮ ಕಡೆಯವರ ಮನೆಗೆ ಹೋಗುವ ಸಂದರ್ಭ ಬಂದಾಗೆಲ್ಲ ರಾಜೀವ ಹಿಂಗಾಡೋದು ಸಾಮಾನ್ಯ! ನಾ ಅವರ ಮನೆಯವರ ಕಡೆಗೆ ಹೋಗುವಾಗ ಆಡ್ತೀನಲ್ಲ ಥೇಟ್ ಹಂಗೆ! ನನ್ನ ಕಸಿನ್ ಮನೆಯಿದ್ದಿದ್ದು ಮಲ್ಲೇಶ್ವರದಲ್ಲಿ. ಹೊಸೂರುವರೆಗೇನೋ ಆರಾಮಾಗಿ ತಲುಪಿಬಿಟ್ಟೊ. ಅಲ್ಲಿಂದ ವಿಪರೀತ ಟ್ರಾಫಿಕ್ಕು. ಎಲೆಕ್ಟ್ರಾನಿಕ್ ಸಿಟಿಗೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ಮಲ್ಲೇಶ್ವರಕ್ಕೆ ಹೋಗುವಷ್ಟರಲ್ಲಿ ಮತ್ತಷ್ಟು ಸುಸ್ತಾಗ್ತದೆ. ನೈಸ್ ರೋಡಲ್ ಮೈಸೂರ್ ರಸ್ತೆ ತಲುಪಿ ಮನೆಗೆ ಹೋಗುವ ಅಂತ ರಾಜೀವ ಹೇಳಿದಾಗ ನನಗೂ ಹೌದೆನ್ನಿಸಿತು. ಕಸಿನ್ನಿಗೆ ಫೋನ್ ಮಾಡಿ 'ಸಡನ್ನಾಗಿ ಯಾವ್ದೋ ಅರ್ಜೆಂಟ್ ಕೆಲಸ ಬಂದಿದೆ. ಊರಿಗೆ ಹೊರಟುಬಿಟ್ಟೊ. ಇನ್ನೊಂದ್ಸಲ ಬರ್ತೀವಿ' ಅಂತೊಂದು ನೆಪ ಹೇಳಿ ಅವಳಿಂದ ಒಂದೈದು ನಿಮಿಷ ಬಯ್ಯಿಸಿಕೊಂಡಿದ್ದಾಯಿತು. 

'ಖುಷಿಯೇನಪ್ಪ ಈಗ' ಅಂತ ಕಿಚಾಯಿಸಿದೆ. 

"ಹು. ಡಾರ್ಲಿಂಗ್" ಅಂತ ಕೆನ್ನೆ ಗಿಲ್ಲಿದರು. 

ಏಪ್ರಿ 12, 2020

ಒಂದು ಬೊಗಸೆ ಪ್ರೀತಿ - 60

ಡಾ. ಅಶೋಕ್.‌ ಕೆ. ಆರ್.‌
ರಾಜೀವ ಮೊದಲು ನಾನ್ಯಾಕೆ ಮದುವೆಗೆ? ನೀ ಬೆಳಿಗ್ಗೆ ಹೋಗಿ ಬಂದುಬಿಡು ಸಂಜೆಯಷ್ಟೊತ್ತಿಗೆ ಎಂದು ರಾಗ ಎಳೆದನಾದರೂ ʼನಡೀರಿ. ಹಂಗೆ ಒಂದೆರಡ್‌ ದಿನ ಸುತ್ತಾಡ್ಕಂಡ್‌ ಬರೋಣ. ಅದೇ ಕೆಲಸ ಅದೇ ಮನೆ ಅದದೇ ಜಗಳಗಳು ಬೋರಾಗೋಗಿದೆʼ ಅಂದಿದ್ದಕ್ಕೆ ನಕ್ಕು "ಬೆಂಗಳೂರಿನವರೇ ಇತ್ಲಾಕಡೆಗೆ ಬರ್ತಾರೆ ಸುತ್ತೋಕೆ. ನಾವಿನ್ನೆಲ್ಲಿ ಅಲ್ಲಿ ಸುತ್ತೋದು?" ಎಂದರು. 

ʼಬೆಂಗಳೂರಿಂದ ಇನ್ನೂರ್‌ ಇನ್ನೂರೈವತ್ ಕಿಲೋಮೀಟ್ರು ದೂರದಲ್ಲಿ ಯರ್ಕಾಡ್‌ ಅಂತ ಯಾವ್ದೋ ಜಾಗ ಇದ್ಯಂತೆ. ಚೆನ್ನಾಗಿದೆ ಅಂತಿದ್ರು. ಮದುವೆ ಮುಗ್ಸಿ ಮಧ್ಯಾಹ್ನ ಹೊರಟರೆ ರಾತ್ರಿ ತಲುಪಬಹುದು. ರಾತ್ರಿ ಇದ್ದು ಮಾರನೇ ದಿನ ಅಲ್ಲೇನೇನಿದ್ಯೋ ನೋಡಿಕೊಂಡು ಸಂಜೆಯಂಗೊರಡೋಣ. ಆದ್ರೆ ಅವತ್ತೇ ಮೈಸೂರು ತಲುಪೋಣ. ಇಲ್ಲ ಬೆಂಗಳೂರಲ್ಲಿ ನನ್‌ ಕಸಿನ್‌ ಮನೇಲಿದ್ದು ಮಾರನೇ ದಿನ ಹೊರಟರಾಯಿತುʼ 

"ಅಷ್ಟೆಲ್ಲ ರಜ ಸಿಗುತ್ತಾ ನಿನಗೆ" 

ʼಎಲ್ರೀ! ರಜಾನೇ ಹಾಕಿಲ್ಲ ನಾನು. ಅಕಸ್ಮಾತ್‌ ರಾಧ ಹುಷಾರು ತಪ್ಪಿದರೆ ಅಂತ ಇರೋ ಚೂರುಪಾರು ರಜೆಗಳನ್ನೆಲ್ಲ ಹಂಗೇ ಇಟ್ಟುಕೊಂಡಿದ್ದೀನಿ. ನಿಮಗೆ ಸಿಗುತ್ತಾ?ʼ 

"ನಂದೇನ್‌ ಲಾರ್ಡ್‌ ಲಬಕ್‌ ದಾಸ್‌ ಕೆಲಸ ನೋಡು. ರಜ ಸಿಗದೇ ಹೋದ್ರೆ ರಾಜೀನಾಮೆ ಬಿಸಾಕ್‌ ಬರೋದಪ್ಪ" 

ʼಈ ಅದದೇ ಮಾತುಗಳು ಮರೆಯಾಗ್ಲಿ ಅಂತಲೇ ಈ ಚಿಕ್ಕ ಟ್ರಿಪ್ಪು. ಅಪ್ಪಿ ತಪ್ಪಿ ರಾಜೀನಾಮೆ ಕೊಟ್ಬಿಟ್ಟೀರಾ ಮತ್ತೆ ಈಗ. ನನ್‌ ಪಿಜಿ ಮುಗಿಯೋವರ್ಗಾದ್ರೂ ಕಾಯಿರಿʼ 

"ಅದಕ್ಕೇ ಕಾಯ್ತಿರೋದು ನಾನು" ಅಂತ ಕಣ್ಣು ಹೊಡೆದರು. 

ಏಪ್ರಿ 5, 2020

ಒಂದು ಬೊಗಸೆ ಪ್ರೀತಿ - 59

ʼಏನ್‌ ನಡೀತಿದೆ ಅಂತಲೇ ಗೊತ್ತಾಗ್ತಿಲ್ಲ ಕಣೋʼ ಸಾಗರನಿಗೆ ಬಹಳ ದಿನಗಳ ನಂತರ ನಾನೇ ಮೊದಲಾಗಿ ಮೆಸೇಜು ಮಾಡಿದೆ. ಬ್ಯುಸಿ ಇದ್ನೋ ಏನೋ ಸುಮಾರೊತ್ತು ಮೆಸೇಜಿಗೆ ಪ್ರತಿಕ್ರಿಯೆ ಬರಲಿಲ್ಲ. ಎರಡು ಮೂರು ಘಂಟೆಯೇ ಆಗಿಹೋಯಿತೇನೋ. ನಾ ಕೂಡ ಆಸ್ಪತ್ರೆಯ ಕೆಲಸದಲ್ಲಿ ತೊಡಗಿಕೊಂಡುಬಿಟ್ಟಿದ್ದೆ. ಊಟದ ಸಮಯದಲ್ಲಿ ಮೊಬೈಲು ಆಚೆ ತೆಗೆದಾಗ "ಏನಾಯ್ತೇ?" ಎಂದವನ ಮೆಸೇಜು ಬಂದಿತ್ತು. ಆನ್‌ ಲೈನ್‌ ಇದ್ದ. 

ರಾಜೀವ ಮಗಳ ಜೊತೆ ನಡೆದುಕೊಳ್ಳುವ ರೀತಿಯನ್ನೆಲ್ಲ ಹೇಳಿಕೊಂಡೆ. ಅವನಿಗೋ ಅಚ್ಚರಿ. "ಅಲ್ವೇ ಇಬ್ರೂ ಮಗು ಬೇಕು ಅಂತಂದುಕೊಂಡು ತಾನೇ ಮಕ್ಕಳು ಮಾಡಿಕೊಂಡಿದ್ದು, ಮಕ್ಕಳು ಮಾಡಿಕೊಳ್ಳಲು ಟ್ರೀಟ್ಮೆಂಟ್‌ ತೆಗೆದುಕೊಂಡಿದ್ದು. ಈಗೇನಂತೆ?" 

ʼಮ್.‌ ಏನಂತ ಹೇಳಲಿ. ಅವರಿಗೆ ಮೈಸೂರಲ್ಲಿರೋದೇ ಇಷ್ಟವಿಲ್ಲ. ಬೆಂಗಳೂರಿಗೆ ಹೋಗುವ ಬೆಂಗಳೂರಿಗೆ ಹೋಗುವ ಅಂತ ಒಂದೇ ಸಮನೆ ಗೋಳು ಮದುವೆಯಾದಾಗಿಂದʼ 

"ಅಲ್ಲಾ ಅವರಿಗೆ ಅಷ್ಟೊಂದು ಇಷ್ಟ ಇದ್ರೆ, ಬೆಂಗಳೂರಿಗೆ ಬರದೇ ಇರುವುದರಿಂದಲೇ ಈ ತೊಂದರೆ ಎಲ್ಲಾ ಅಂದರೆ ಬಂದೇ ಬಿಡಿ ಬೆಂಗಳೂರಿಗೆ" 

ʼಬರಬಾರದು ಅಂತ ನನಗೂ ಇಲ್ಲ ಕಣೋ. ಬರೀ ಎಂಬಿಬಿಎಸ್‌ ಡಿಗ್ರಿ ಇಟ್ಕಂಡು ಬರೋ ಮನಸ್ಸು ನನಗಿರಲಿಲ್ಲ. ಈಗ ಡಿ.ಎನ್.ಬಿ ಸೇರಾಗಿದೆ. ಇನ್ನೇನು ಮುಗಿದೇ ಹೋಗುತ್ತೆ. ಅದಾದ ಮೇಲೆ ಹೋಗುವ ಅಂತ ಹೇಳಿದ್ದೆ. ಸರಿ ಅಂತಲೂ ಅಂದಿದ್ದರು. ಈಗ ನೋಡಿದ್ರೆ ಹಿಂಗೆ. ಮೂರೊತ್ತೂ ಕುಡಿತ, ತುಂಬಾನೇ ಜಾಸ್ತಿ ಮಾಡ್ಕೊಂಡಿದ್ದಾರೆ ಕುಡಿಯೋದನ್ನ. ಅದೆಂಗಾದ್ರೂ ಹಾಳಾಗೋಗ್ಲಿ ಅಂದರೆ ಬಾಯಿಗೆ ಬಂದಂಗೆ ಮಾತುʼ 

ಮಾರ್ಚ್ 29, 2020

ಒಂದು ಬೊಗಸೆ ಪ್ರೀತಿ - 58

ಬಹಳ ದಿನಗಳ ನಂತರ ಆಸ್ಪತ್ರೆಯಲ್ಲಿ "ಭಾನುವಾರ ರಜೆ ತಕೋ ಹೋಗಮ್ಮ" ಅಂದಿದ್ರು. ಅಮ್ಮನ ಮನೆಯಲ್ಲಿದ್ದು ಕೂಡ ತುಂಬಾ ದಿನವಾಗಿತ್ತಲ್ಲ ಎಂದು ಶನಿವಾರವೇ ಅಮ್ಮನ ಮನೆಗೆ ಹಾಜರಾಗಿಬಿಟ್ಟೆ. ಏನೇ ಅಮ್ಮನ ಮನೆ ಅಂದ್ರೂ ಅಪರೂಪಕ್ಕೆ ಹೋದಾಗ ಸಿಗೋ ಮರ್ಯಾದೆಯೇ ಬೇರೆ! ರಾಜೀವನಿಗೂ ʼಬನ್ರೀ ಹೋಗುವʼ ಎಂದಿದ್ದೆ. "ಇಲ್ಲ, ನನಗೆ ಕೆಲಸವಿದೆ. ನೀ ಹೋಗಿರು" ಎಂದು ಸಾಗ ಹಾಕಿದ್ದರು. ಇನ್ನೇನು ಕೆಲಸ? ಗೆಳೆಯರೊಟ್ಟಿಗೆ ಸೇರಿ ಕುಡಿಯೋದು ಅಷ್ಟೇ! ಬಹಳ ದಿನಗಳ ನಂತರ ಮಗಳು ಮನೆಯಲ್ಲುಳಿಯುತ್ತಿದ್ದಾಳೆಂದು ಅಪ್ಪ ಒಂದೆರಡು ಕೆಜಿ ಚಿಕನ್‌ ತಂದಿದ್ದರು. ಹೆಚ್ಚು ಕಡಿಮೆ ನಾ ಹೋಗುವಷ್ಟೊತ್ತಿಗೆ ಸೋನಿಯಾ ಅಮ್ಮ ಸೇರಿಕೊಂಡು ಒಂದು ಕೆಜಿಯಷ್ಟು ಚಿಕನ್ನನ್ನು ಚಾಪ್ಸ್‌ ಮಾಡಿದ್ದರು. ಇನ್ನುಳಿದ ಒಂದು ಕೆಜಿ ಚಿಕನ್‌ ನನ್ನ ಬರುವಿಕೆಗಾಗಿ ಕಾಯುತ್ತಿತ್ತು. ಬಿರಿಯಾನಿಯಾಗಲು ಬಿರಿಯಾನಿ ಸ್ಪೆಷಲಿಸ್ಟ್‌ಗೆ ಕಾಯುತ್ತಿತ್ತು. "ಫ್ರೈ ಏನಾದ್ರೂ ಮಾಡಿ. ಬಿರಿಯಾನಿ ಮಾತ್ರ ನನ್ನ ಮಗಳೇ ಬಂದು ಮಾಡಬೇಕು" ಎಂದು ತಾಕೀತು ಮಾಡಿದ್ದರಂತೆ. ʼಏನೋ ಅಪ್ರೂಪಕ್ಕೆ ಅಮ್ಮನ ಮನೆಗೆ ಬಂದರೆ ನನ್ನ ಬಿರಿಯಾನಿ ಮಾಡೋಳನ್ನಾಗಿ ಮಾಡ್ಬಿಟ್ರಲ್ಲʼ ಎಂದು ನಗಾಡುತ್ತಾ ಮಗಳನ್ನೆತ್ತಿ ಮುತ್ತಿಟ್ಟು ಅಪ್ಪನ ಬಳಿ ಬಿಟ್ಟು ಅಡುಗೆ ಮನೆಗೆ ಹೋದೆ. ಅಮ್ಮ ಅವರ ದೂರದ ನೆಂಟರ ವಿಷಯಗಳೇನನ್ನೋ ಹೇಳುತ್ತಿದ್ದರು. ಅವರಲ್ಲರ್ಧ ಜನ ಯಾರ್ಯಾರು ಅಂತ ನನಗೆ ಗೊತ್ತೇ ಇರಲಿಲ್ಲ. ಆದರೂ ಎಲ್ಲಾ ಗೊತ್ತಾದವಳಂತೆ ಹೂ ಹೂ ಎಂದು ತಲೆದೂಗುತ್ತಿದ್ದೆ. ನನಗೇ ಅರ್ಥವಾಗದ ಮೇಲೆ ಇನ್ನು ಸೋನಿಯಾಗೇನು ಅರ್ಥವಾಗಬೇಕು! ಸುಮ್ನೆ ತಲೆತಗ್ಗಿಸಿಕೊಂಡು ಮೊಸರುಬಜ್ಜಿಗೆ ಈರುಳ್ಳಿ ಟೊಮೋಟೊ ಕತ್ತರಿಸುತ್ತಿದ್ದಳು. "ಈ ಅತ್ತೆ ಏನ್‌ ಹಿಂಗ್‌ ತಲೆ ತಿಂತಾರೆ" ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದಳೋ ಏನೋ. ಅತ್ತೆಯಷ್ಟೇ ಯಾಕೆ? ನಮ್ಮ ಮನೆಯಲ್ಲಿ ನಾನು, ಅಮ್ಮ, ಅಪ್ಪ ಎಲ್ಲಾ ಮಾತೋ ಮಾತು. ಶಶೀನೇ ಮುಂಚಿಂದಾನೂ ಗೂಬೆ ತರ, ಮಾತಿರಲ್ಲ, ಕತೆ ಇರಲ್ಲ ಅವನದು. ಹೂ, ಸರಿ, ಇಲ್ಲ, ಆಯ್ತುಗಳಲ್ಲೇ ದಿನ ದೂಡಿಬಿಡ್ತಾನೆ! ಕುಕ್ಕರ್‌ ಮುಚ್ಚಳ ಮುಚ್ಚಿ ವಿಷಲ್‌ ಮೇಲಿಟ್ಟು ʼಏನ್‌ ಇವತ್ತು ಇಷ್ಟೊತ್ತಾದರೂ ಆಸ್ಪತ್ರೆಯಿಂದ ಯಾರೂ ಯಾವುದಕ್ಕೂ ಫೋನೇ ಮಾಡಲಿಲ್ಲವಲ್ಲʼ ಎಂದುಕೊಳ್ಳುತ್ತಾ ವ್ಯಾನಿಟಿ ಬ್ಯಾಗ್‌ ತೆರೆದು ನೋಡಿದರೆ ಎಲ್ಲಿದೆ ಫೋನು? ಎಲ್ಲೋ ಬಿಟ್ಟು ಬಂದುಬಿಟ್ಟಿದ್ದೀನಿ. ಎಲ್ಲಿ? ಆಸ್ಪತ್ರೆಯಿಂದ ಬರುವಾಗ ತಂದಿದ್ದೆ. ಮನೆಗೆ ತಲುಪಿ ಹತ್ತು ನಿಮಿಷದಲ್ಲಿ ಆಸ್ಪತ್ರೆಯಿಂದ ಫೋನು ಬಂದಿತ್ತು. ಫೋನು ರಿಸೀವ್‌ ಮಾಡಿದ ಮೇಲೆ ಬ್ಯಾಟರಿ ಕಡಿಮೆಯಾಗಿದೆ ಎನ್ನುವುದರಿವಾಗಿ ಚಾರ್ಜಿಗೆ ಇಟ್ಟೆ. ಚಾರ್ಜಿಗೆ ಇಟ್ಟವಳು ಅಲ್ಲೇ ಬಿಟ್ಟು ಬಂದೆ! ಶಶಿ ಫೋನ್‌ ತೆಗೆದುಕೊಂಡು ರಾಜೀವನಿಗೆ ಫೋನ್‌ ಮಾಡಿದೆ, ಒಂದು ಸಲ, ಎರಡು ಸಲ, ಮೂರು ಸಲ. ಫೋನ್‌ ರಿಸೀವೇ ಮಾಡಲಿಲ್ಲ. ಎಲ್ಲೋ ಹೊರಗೆ ಗಾಡಿ ಓಡಿಸ್ತಿದ್ದಾರೋ ಏನೋ. 

ಮಾರ್ಚ್ 25, 2020

ದಿ ಕ್ಯೂರಿಯಸ್‌ ಕೇಸ್‌ 1: ಟ್ಯಾಕ್ಸೋಪ್ಲಾಸ್ಮ ಮತ್ತು ಇಲಿ.

ಡಾ. ಅಶೋಕ್.‌ ಕೆ. ಆರ್ 
ಸದ್ಯಕ್ಕೆ ಎಲ್ಲಿ ನೋಡಿದರೂ ಕೊರೋನಾದೇ ಸುದ್ದಿ. ಹಂಗಾಗಿ ಕೊರೋನಾ ಮೂಲಕವೇ ಈ ಕೇಸನ್ನು ಪ್ರಾರಂಭಿಸೋಣ. ಈ ಕೊರೋನಾ ಎಂಬ ವೈರಸ್ಸು ನಮ್ಮ ದೇಹ ಪ್ರವೇಶಿಸಿದಾಗ ಏನಾಗ್ತದೆ? ಕೊರೋನಾ ಇನ್‌ಫೆಕ್ಷನ್ನಿನಿಂದ ಸದ್ಯಕ್ಕೆ ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳೆಂದರೆ ಜ್ವರ, ನೆಗಡಿ, ಕೆಮ್ಮು, ಭೇದಿ. ನಮ್ಮ ಸದ್ಯದ ತಿಳುವಳಿಕೆಯ ಪ್ರಕಾರ ಈ ರೀತಿಯ ರೋಗಲಕ್ಷಣಗಳಿಗೆ ಕಾರಣ ವೈರಸ್ಸಿಗೆ ಪ್ರತಿರೋಧ ತೋರುವ ನಮ್ಮ ದೇಹದ ರಕ್ಷಣಾ ವ್ಯವಸ್ಥೆ, ಅಂದರೆ ಇಮ್ಯುನಿಟಿ ಸಿಸ್ಟಮ್ಮು. ವೈರಸ್ಸನ್ನು ದೇಹದಿಂದ ಹೊರಗೋಡಿಸುವ ನಿಟ್ಟಿನಲ್ಲಿ ದೇಹ ತನ್ನೆಲ್ಲಾ ಪ್ರಯತ್ನವನ್ನೂ ಈ ಇಮ್ಯುನಿಟಿ ವ್ಯವಸ್ಥೆಯ ಮೂಲಕ ಮಾಡಲೆತ್ನಿಸುತ್ತದೆ. ಈ ಪ್ರತಿರೋಧ ಕಡಿಮೆ ಇದ್ದರೆ ‍ಶ್ವಾಸಕೋಶದೊಳಗೆ ನುಗ್ಗುವ ವೈರಸ್ಸುಗಳು ನಿಧಾನಕ್ಕೆ ಮನುಷ್ಯನನ್ನು ಸಾವಿನಂಚಿಗೆ ದೂಡುತ್ತದೆ. 

ಇದಿಷ್ಟೂ ಮನುಷ್ಯನ ದೃಷ್ಟಿಯಿಂದ ವೈರಸ್ಸಿನ ದಾಳಿಯನ್ನು ಕಂಡಾಗ ಅರ್ಥವಾಗುವ ಸಂಗತಿಗಳು. ಅದೇ ಕಣ್ಣಿಲ್ಲದ ವೈರಸ್ಸಿನ ದೃಷ್ಟಿಯಿಂದ ನೋಡಿದರೆ? ವೈರಸ್ಸಿಗೆ ನಮ್ಮಗಳ ಹಾಗೆ ಮನೆ ಕಟ್ಟು, ಬೈಕ್‌ ತಗೋ, ಕಾರ್‌ ತಗೋ, ಮೊಬೈಲ್‌ ತಗೋ, ಇಪ್ಪತ್ತೈದು ದಾಟಿದ ಮೇಲೆ ಮದುವೆಯಾಗು, ಮನಸ್ಸಾದರೆ ಒಂದೋ ಎರಡೋ ಮಕ್ಕಳು ಮಾಡಿಕೋ, ಸೆಟಲ್‌ ಆಗು ಅನ್ನೋ ಯೋಚನೆಗಳೆಲ್ಲ ಇರೋದಿಲ್ಲ. ಪ್ರಕೃತಿಯ ಲೆಕ್ಕದಲ್ಲಿ ವೈರಸ್ಸಿಗಿರುವ ಒಂದೇ ಒಂದು ಗುರಿ ಸಾಧ್ಯವಾದಷ್ಟು ತನ್ನ ಬಳಗವನ್ನು ಹೆಚ್ಚಿಸಿಕೊಳ್ಳುತ್ತ ಪರಿಸರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮಾತ್ರ! ಮನುಷ್ಯನ ದೇಹದೊಳಗೆ ಪ್ರವೇಶಿಸುತ್ತಿದ್ದಂತೆ ವೈರಸ್ಸು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಒಬ್ಬ ಮನುಷ್ಯನಲ್ಲಿ ತನ್ನ ಸಂಖೈಯನ್ನು ಹೆಚ್ಚಿಸಿಕೊಂಡರೆ ಸಾಕಾಗುವುದಿಲ್ಲವಲ್ಲ? ಮತ್ತಷ್ಟು ಅಭಿವೃದ್ಧಿಯಾಗಲು ಆ ಮನುಷ್ಯನಿಂದ ಬಿಡುಗಡೆಯಾಗಿ ಮತ್ತೊಬ್ಬ ಮನುಷ್ಯನನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ವೈರಸ್ಸಿಗೆ. ಆಗ ವೈರಸ್ಸು ಮನುಷ್ಯನ ದೇಹದ ರಕ್ಷಣಾ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ʻನೋಡಪ್ಪಾ ಇಮ್ಯುನಿಟಿ. ಈಗ ನೀನೇನು ಮಾಡಬೇಕಂದ್ರೆ ವಿಪರೀತ ಯಾಕ್ಟೀವ್‌ ಆಗು. ಆಗ್ಬಿಟ್ಟು ನಿನ್ನ ಹಳೆ ಯಜಮಾನ ಮನುಷ್ಯ ಕೆಮ್ಮುವಂತೆ ಮಾಡು, ಸಿಂಬಳ ಸುರಿಯುವಷ್ಟು ನೆಗಡಿ ಬರಿಸು, ಸೀನುವಂಗೆ ಮಾಡು, ವಾಂತಿ ಭೇದಿಯಾಗುವಂತೆ ನೋಡಿಕೊ. ನಾ ಆರಾಮ್ವಾಗಿ ನನ್ನ ಸಂಖೈ ಹೆಚ್ಚಿಸಿಕೊಳ್ತೀನಿʼ ಅಂತ ತಾಕೀತು ಮಾಡುತ್ತದೆ. ವೈರಸ್ಸಿಗೆ ಸಂಪೂರ್ಣ ಶರಣಾಗತವಾದ ನಮ್ಮ ದೇಹದ ಇಮ್ಯುನಿಟಿ ವ್ಯವಸ್ಥೆ ವೈರಸ್ಸಿನ ಆಜ್ಞೆಗೆ ತಲೆಬಾಗುತ್ತಾ ಅದೇಳಿದ್ದನ್ನೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತದೆ. ವೈರಸ್ಸಿಗೂ ಪಾಪ ಮನುಷ್ಯನನ್ನು ಸಾಯಿಸುವ ಉದ್ದೇಶವಿರುವುದಿಲ್ಲ. ಸತ್ತ ಮನುಷ್ಯನಿಗಿಂತ ನಿರಂತರವಾಗಿ ಕೆಮ್ಮುತ್ತಾ ಸೀನುತ್ತಾ ಸಿಂಬಳ ಸುರಿಸುತ್ತಿರುವ ಮನುಷ್ಯನೇ ವೈರಸ್ಸಿಗೆ ಹೆಚ್ಚು ಪ್ರಿಯ. ವೈರಸ್ಸಿನ ದೃಷ್ಟಿಯಲ್ಲಿ ಮನುಷ್ಯನ ಸಾವಿಲ್ಲಿ ಕೊಲ್ಯಾಟರಲ್‌ ಡ್ಯಾಮೇಜ್‌ ಅಷ್ಟೇ!